( ಸಾಂದರ್ಭಿಕ ಚಿತ್ರ )
ಚುನಾವಣಾ ಕಣದಲ್ಲಿ ʼಲಿಂಗಾಯತ ಸಮುದಾಯ ನಾಯಕʼನ ಪ್ರಭಾವ .!
ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಸಮುದಾಯದ್ದು ದೊಡ್ಡ ಪಾತ್ರ. ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿ ರಾಜಕೀಯದಲ್ಲಿ ಮುಂದುವರಿದರೇ, ಫಲಿತಾಂಶವೇ ಅದಲು ಬದಲಾಗುತ್ತದೆ ಎಂಬಷ್ಟರ ಮಟ್ಟಿಗಿನ ವಾತಾವರಣ ಸೃಷ್ಟಿಯಾಗಿದೆ. ಒಟ್ಟು ಸುಮಾರು ೧೭ ಪ್ರತಿಶತದಷ್ಟು ಜನಸಂಖ್ಯೆಯನ್ನು ಹೊಂದಿರುವ ಈ ಸಮುದಾಯ ರಾಜ್ಯದ ಎಲ್ಲಾ ಚುನಾವಣೆಗಳಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ಪ್ರಾಬಲ್ಯ ಹೊಂದಿರುವ ಈ ಸಮುದಾಯ ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಪ್ರಭಾವ ಬೀರುತ್ತದೆ. ಒಂದು ಪಕ್ಷ ಅಧಿಕಾರಕ್ಕೆ ಬರುವಲ್ಲಿ ರಾಜ್ಯದ ಲಿಂಗಾಯತ ಸಮುದಾಯಗಳ ಪಾತ್ರ ಮಹತ್ವದ್ದು. ಬಹಳ ಪ್ರಮುಖವಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಈ ಸಮುದಾಯದ ಕೊಡುಗೆ ದೊಡ್ಡದಿದೆ. ಈ ಭಾರಿ ಚುನಾವಣೆಗೆ ಬರೋಬ್ಬರಿ ೬೮ ಮಂದಿ ಲಿಂಗಾಯತ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದ್ದರೇ, ಇತ್ತ ಕಾಂಗ್ರೆಸ್ ೫೧ ಲಿಂಗಾಯತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು ಲಿಂಗಾಯತ ಸಮುದಾಯ ರಾಜಕೀಯದಲ್ಲಿ ಉಳಿಸಿಕೊಂಡಿರುವ ಪ್ರಭಾವಕ್ಕೆ ಸಾಕ್ಷಿ.
ಆದರೇ, ಈ ಬಾರಿಯ ರಾಜಕೀಯದ ವಾತಾವರಣ ತುಸು ಬದಲಾದ ಹಾಗೆ ಕಾಣಿಸುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಯಲ್ಲಿ ಹೊಸ ಪ್ರಯೋಗ ಮಾಡಿದ್ದು, ಹಿರಿಯ ಕೆಲವು ಪ್ರಮುಖ ನಾಯಕರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡದಿರುವ ಕಾರಣದಿಂದಾಗಿ ಬಂಡಾಯವನ್ನು ಎದುರಿಸುತ್ತಿದೆ. ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಮೀಸಲಾತಿ ಸೇರಿ ಹಲವು ತಂತ್ರಗಳನ್ನು ಹೂಡಿದ್ದರು ಕೂಡ ಅದು ಸಮಧಾನದ ಪರಿಹಾರ ಎಂಬುವುದು ಆ ಸಮುದಾಯಕ್ಕೆ ಮನದಟ್ಟಾದಂತಿದೆ. ಲಿಂಗಾಯತ ಸಮುದಾಯಕಕ್ಕೆ ಸೇರಿದ ಹಿರಿಯ ಪ್ರ,ಮುಖ ನಾಯಕರುಗಳ ರಾಜೀನಾಮೆ ಹಾಗೂ ಪಕ್ಷಾಂತರ ಪರ್ವ ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ್ದಕ್ಕೆ ಬಿಜೆಪಿ ಎದುರಿಸಿದ ವಿರೋಧದ ಅಲೆಯನ್ನು ಈ ರಾಜ್ಯ ಕಂಡಿದೆ. ಈಗ ಅದರ ಮತ್ತೊಂದು ಹಂತ. ಉತ್ತರ ಕರ್ನಾಟಕ ಪ್ರಭಾವಿ ಲಿಂಗಾಯತ ಮುಖಂಡರಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿಯ ಟಿಕೇಟ್ ಸಿಗದೇ ಇರುವ ಕಾರಣದಿಂದಾಗಿ ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರಿಕೊಂಡು ಟಿಕೇಟ್ ಗಿಟ್ಟಿಸಿಕೊಂಡಿದ್ದಾರೆ. ಆಡಳಿತ ಪಕ್ಷದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ ಉಭಯ ಲಿಂಗಾಯತ ನಾಯಕರ ಈ ನಿರ್ಧಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿಯಲ್ಲಿದ್ದಾಗ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಈ ನಾಯಕರು ಈಗ ನೆಲೆ ಬದಲಾಯಿಸಿಕೊಂಡಿದ್ದು, ಚುನಾವಣಾ ಕಣದ ಕುತೂಹಲವನ್ನು ಹೆಚ್ಚಿಸಿದೆ.
ಆರ್ ಎಸ್ ಎಸ್ ನೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದ ಈ ಉಭಯ ಹಿರಿಯ ನಾಯಕರು ಪಕ್ಷ ತೊರೆದು, ಕಾಂಗ್ರೆಸ್ ಸಿದ್ಧಾಂತಕ್ಕೆ ಒಪ್ಪಿ ಬಿಜೆಪಿ ತೊರೆದಿದ್ದು ಇದು ಬಿಜೆಪಿಗೆ ಒಂದು ರೀತಿಯಲ್ಲಿ ಮುಜುಗರ ಉಂಟುಮಾಡಿದೆ. ಆಡಳಿತ ವಿರೋಧಿ, ಭ್ರಷ್ಟಾಚಾರ ಆರೋಪಗಳ ಜೊತೆಜೊತೆಗೆ ಈ ಸಲ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಉತ್ಸಾಹದಿಂದ ಇರುವ ಕಾಂಗ್ರೆಸ್ ಪಕ್ಷವನ್ನು ಎದುರಿಸುತ್ತಿರುವ ಬಿಜೆಪಿಗೆ ಈ ವಿಚಾರ ಮತ್ತೊಂದು ಸವಾಲಾಗಿದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಪಕ್ಷ ತೊರೆದು ಕಾಂಗ್ರೆಸ್ ಗೆ ಬಂದಿದ್ದಾರೆ ಎಂದ ಮಾತ್ರಕ್ಕೆ ಅವರ ಬೆಂಬಲಿಗರೆಲ್ಲಾ ಈ ಕಡೆ ಸಂಪೂರ್ಣವಾಗಿ ಮುಖ ಮಾಡುತ್ತಾರೆ ಎಂಬುವುದಕ್ಕೆ ಸಾಧ್ಯವಿಲ್ಲ. ವ್ಯತ್ಯಾಸ ತರುವುದಂತೂ ನಿಶ್ಚಿತವಾಗಿದೆ. ಇನ್ನು, “ಇಬ್ಬರೂ ಬಿಜೆಪಿಯ ಪ್ರಭಾವಿ ನಾಯಕರುಗಳ ಸಾಲಿನಲ್ಲಿದ್ದಿದ್ರು, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ಹಾಗೆ ಒಬ್ಬ ಸಮುದಾಯದ ನಾಯಕರಾಗಿ ಬೆಳೆಯದಿದ್ದರೂ ಇಬ್ಬರೂ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಸೇರಿದವರು” ಎನ್ನುವುದು ಇಲ್ಲಿ ಮುಖ್ಯ.
ಈ ಸಮುದಾಯ ಬಿಜೆಪಿಯನ್ನು ಚುನಾವಣೆಯಲ್ಲಿ ಹೆಚ್ಚು ಪೊರೆಯುತ್ತಾ ಬಂದಿದೆ. ಲಿಂಗಾಯತ ಸಮುದಾಯ ಕರ್ನಾಟಕಕ್ಕೆ ಎಂಟು ಮುಖ್ಯಮಂತ್ರಿಗಳನ್ನು ಕೊಟ್ಟಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ೨೦೧೮ ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ೫೨ ವಿಜೇತ ಅಭ್ಯರ್ಥಿಗಳು ಈ ಸಮುದಾಯಕ್ಕೆ ಸೇರಿದವರು. ಬಿಜೆಪಿ ಸಾಮಾನ್ಯವಾಗಿ ತನ್ನ ಚುನಾವಣಾ ಟಿಕೆಟ್ ಗಳಲ್ಲಿ ನಾಲ್ಕನೇ ಒಂದು ಭಾಗವನ್ನು ಲಿಂಗಾಯತರಿಗೆ ಮೀಸಲಿಡುತ್ತದೆ.
ರಾಜ್ಯದ ೨೨೪ ಸ್ಥಾನಗಳಲ್ಲಿ ಮುಖ್ಯವಾಗಿ ಉತ್ತರ ಮತ್ತು ಮಧ್ಯ ಕರ್ನಾಟಕದಲ್ಲಿ ಸುಮಾರು ೭೦ ಕ್ಷೇತ್ರಗಳಲ್ಲಿ ಈ ಸಮುದಾಯವು ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ೨೦೦೮ ಮತ್ತು ೨೦೧೮ ರಲ್ಲಿ ಬಿಜೆಪಿ ಈ ಭಾಗಗಳಲ್ಲಿ ಶೇಕಡಾ ೪೦ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ೨೦೧೩ರಲ್ಲಿ ಬಿ. ಎಸ್. ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿಯಿಂದ ಸ್ಪರ್ಧಿಸಿದ ಪರಿಣಾಮವಾಗಿ ಲಿಂಗಾಯತ ಮತಗಳನ್ನು ಕಾಂಗ್ರೆಸ್ ಗೆ ಹಂಚಿ ಹೋಯಿತು ಎನ್ನುವುದು ಇಲ್ಲಿ ಪ್ರಮುಖಾಂಶ. ಇನ್ನು, ಪಕ್ಷ ತೊರೆದ ನಾಯಕರು ಸಮುದಾಯದ ನಾಯಕರಲ್ಲ ಎಂದು ಬಿಜೆಪಿ ಹೇಳುತ್ತಿದ್ದರೆ, ಕಾಂಗ್ರೆಸ್ ಲಿಂಗಾಯತ ಸಮುದಾಯಕ್ಕೆ "ಅವಮಾನ" ಎಂದು ಬಿಂಬಿಸಿ ಲಾಭ ಬಾಚುವುದಕ್ಕೆ ಪ್ರಯತ್ನಿಸುತ್ತಿದೆ. ಇದು ಬಿಜೆಪಿಯ ಭವಿಷ್ಯಕ್ಕೆ ಎಷ್ಟು ಪರಿಣಾಮ ಬೀರಲಿದೆ ಎಂಬುವುದು ಕುತೂಹಲ. ಇನ್ನು, ಕಾಂಗ್ರೆಸ್ ಗೆ ಇದೇ ಅಸ್ತ್ರ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಉಲ್ಟಾ ಹೊಡೆಯಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಬಿಜೆಪಿಯ ಪ್ರಭಾವಿ ಲಿಂಗಾಯತ ನಾಯಕ ಯಡಿಯೂರಪ್ಪ. ಜುಲೈ ೨೦೨೧ ರಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಆದರೆ ಅವರಿಗೆ ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸದೀಯ ಮಂಡಳಿಯಲ್ಲಿ ಅವಕಾಶ ನೀಡಲಾಯಿತು. ಬಸವರಾಜ ಬೊಮ್ಮಾಯಿ ಅವರನ್ನು ಲಿಂಗಾಯತ ಸಮುದಾಯದ ಅವರ ಉತ್ತರಾಧಿಕಾರಿ ಎಂಬಂತೆ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆದರೇ, ಬೊಮ್ಮಾಯಿಯವರನ್ನು ಸಿಎಂ ಮಾಡಿದ್ದು ಬಿಜೆಪಿಯರಿಗೇ ಅಸಮಾಧಾನವಿದೆ.
ಯಡಿಯೂರಪ್ಪ ಮತ್ತು ಬಿಜೆಪಿ ಬಹಳ ವಿಚಿತ್ರವಾದ ಮತ್ತು ದುರ್ಬಲವಾದ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಯಡಿಯೂರಪ್ಪ ಅವರು ತಮ್ಮ ಮಗನನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಅಥವಾ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಮಾಡಲು ಪ್ರಯತ್ನಿಸುತ್ತಿರುವಾಗ, ವಂಶ ರಾಜಕೀಯವನ್ನು ಧಿಕ್ಕರಿಸುವ ಪಕ್ಷದಲ್ಲಿ ಅವರ ವಿನಂತಿಗಳನ್ನು ನಿರ್ಲಕ್ಷಿಸಲಾಯಿತು. ಪುತ್ರ ವಿಜಯೇಂದ್ರಗೆ ಅವರು ಶಿಕಾರಿಪುರವನ್ನು ಬಿಟ್ಟುಕೊಟ್ಟರು. ಇನ್ನು, ಈ ವಿಷಯದಲ್ಲಿ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜತೆ ಮಾಜಿ ಮುಖ್ಯಮಂತ್ರಿಗಳ ಒಳಜಗಳ ಗುಟ್ಟಾಗಿ ಉಳಿದಿಲ್ಲ ಎನ್ನುವುದಿಲ್ಲಿ ಮುಖ್ಯ.
೧೯೯೦ರಲ್ಲಿ ಲಿಂಗಾಯತ ಸಮುದಾಯದ ನಾಯಕರಾಗಿದ್ದ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ರಾಜೀವ್ ಗಾಂಧಿ ಅವರು ಅಮಾನುಷವಾಗಿ ವಜಾ ಮಾಡಿದ್ದರು ಎಂಬ ವಿಚಾರ ಕಾಂಗ್ರೆಸ್ ಮೇಲೆ ಲಿಂಗಾಯತರ ವಿಶ್ವಾಸ ಕಡಿಮೆಯಾಯಿತು. ಈಗ ಲಿಂಗಾಯತರ ವಿಶ್ವಾಸವನ್ನು ಮರಳಿ ಪಡೆಯಲು ಕಾಂಗ್ರೆಸ್ ಶ್ರಮಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೨೦೧೮ರ ಚುನಾವಣೆಗೆ ಮುನ್ನ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನವನ್ನು ಘೋಷಿಸಿದ್ದರು, ಆದರೆ ಅದು ಹಿನ್ನಡೆಯಾಯಿತು. ಈ ಬಾರಿ ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್ ಅವರನ್ನು ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ಕಾಂಗ್ರೆಸ್ ನೇಮಕ ಮಾಡಿದೆ, ಈಗ ಇಬ್ಬರು ಬಿಜೆಪಿ ಮಾಜಿ ಲಿಂಗಾಯತ ನಾಯಕರ ಕಾಂಗ್ರೆಸ್ ಪ್ರವೇಶದಿಂದಾಗಿ ಲಿಂಗಾಯತರ ವಿಚಾರದಲ್ಲಿ ಕಾಂಗ್ರೆಸ್ ಹೊಸ ಹುರುಪಿನಲ್ಲಿದೆ.
ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಖಂಡಿತವಾಗಿಯೂ ರಾಜ್ಯಾದ್ಯಂತ ಪ್ರಭಾವ ಬೀರದಿದ್ದರೂ, ಅವರ ನಿರ್ಗಮನವು ಅವರ ತವರು ಕ್ಷೇತ್ರಗಳಾದ ಹುಬ್ಬಳ್ಳಿ-ಧಾರವಾಡ (ಧಾರವಾಡ) ಮತ್ತು ಅಥಣಿ (ಬೆಳಗಾವಿ) ಮತ್ತು ಸುತ್ತಮುತ್ತಲಿನ ಎಂಟರಿಂದ ಹತ್ತು ಸ್ಥಾನಗಳಲ್ಲಿ ಖಂಡಿತವಾಗಿಯೂ ಪರಿಣಾಮ ಬೀರಬಹುದು ಎಂಬ ರಾಜಕೀಯ ವಲಯದ ಚರ್ಚೆಯನ್ನು ಅಲ್ಲಗಳೆಯುವಂತಿಲ್ಲ.
ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡದಿಂದ ಆರು ಬಾರಿ ಶಾಸಕರಾಗಿದ್ದರೆ, ಸವದಿ ಅಥಣಿಯಿಂದ ಮೂರು ಬಾರಿ ಶಾಸಕರಾಗಿದ್ದಾರೆ, ಆದರೂ ಅವರು ೨೦೧೮ ರಲ್ಲಿ ಚುನಾವಣೆಯಲ್ಲಿ ಸೋತಿದ್ದರು. ಪಕ್ಷಾಂತರಗೊಂಡ ಮೇಲೆ ಬಿಜೆಪಿ ಬೆಂಬಲಿಗರು ಈ ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಸೋಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಿಸಿದ ದತ್ತಾಂಶವು ೨೦೧೬ ಮತ್ತು ೨೦೨೦ ರ ನಡುವೆ ಪಕ್ಷಾಂತರಗೊಂಡ ೪೩೩ ಶಾಸಕರು ಮತ್ತು ಸಂಸದರಲ್ಲಿ ೫೨ ಪ್ರತಿಶತದಷ್ಟು ಮಂದಿ ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ಹೇಳುತ್ತದೆ. ಒಟ್ಟಿನಲ್ಲಿ ಕರ್ನಾಟಕದಲ್ಲಿ "ಆಯಾ ರಾಮ್ ಗಯಾ ರಾಮ್" ರಾಜಕೀಯ ಜೋರಾಗಿ ನಡೆದಿದೆ. ಇಂತಹ ಪಕ್ಷಾಂತರಗೊಂಡವರಿಗೆ ಮತದಾರರು ಹೇಗೆ ಪ್ರತಿಕ್ರಿಯಿಸುತ್ತಾರೆ ? ಅವರು ಅವಕಾಶವಾದಿಗಳೇ ? ಸೈದ್ಧಾಂತಿಕ ನಿಲುವು ? ಚುನಾವಣೆಯಲ್ಲಿ ಯಶಸ್ವಿಯಾಗುತ್ತಾರಾ ? ಎನ್ನುವುದನ್ನು ಕಾದು ನೋಡಬೇಕಿದೆ.
ಶೆಟ್ಟರ್ ಮತ್ತು ಸವದಿ ಅವರನ್ನು ಕೈಬಿಡಲು ಬಿಜೆಪಿ ಕೊಟ್ಟ ಕಾರಣ, ಹೊಸ ಮುಖಗಳಿಗೆ ಅವಕಾಶ ನೀಡುವುದು. ಆದಾಗ್ಯೂ, ಇಲ್ಲಿ ಒಂದು ವಿರೋಧಾಭಾಸವಿದೆ. ʼಹಳೆಯ ಯುದ್ಧ ಕುದುರೆʼ ಯಡಿಯೂರಪ್ಪ ಇನ್ನೂ ಬಬಿಜೆಪಿಯ ಪ್ರಚಾರದ ಮುಖವಾಗಿಯೇ ಉಳಿದುಕೊಂಡಿದ್ದಾರೆ. ಕಾರಣ ಯಡಿಯೂರಪ್ಪ ಲಿಂಗಾಯತ ʼಸಮುದಾಯದ ನಾಯಕʼ. ಆದರೇ, ಸ್ಪರ್ಧಾ ಕಣದಲ್ಲಿ ಅವರಿಲ್ಲ. ಶೆಟ್ಟರ್, ಸವದಿ ಕಾಂಗ್ರೆಸ್ ಪಾಳಯಕ್ಕೆ ಸೇರಿಕೊಂಡಿದ್ದಾರೆ. ಲಿಂಗಾಯತರ ಮತಗಳು ಯಾವ ಕಡೆಗೆ ಹೋಗುತ್ತವೆ ? ಮೇ ೧೩ರವರೆಗೆ ಕಾದು ನೋಡೋಣ. ಏನಂತೀರಿ ?
-ಶ್ರೀರಾಜ್ ವಕ್ವಾಡಿ



.jpeg)




