Thursday, April 13, 2023

ನಕ್ಸಲ್ ಗ್ಯಾಂಗ್ ಕಟ್ಟಿದ 'ರೈಲುಭೂತ' ಕಥೆ !

ಕ್ರಾಂತಿಕಾರಿ ಸಿದ್ಧಾಂತಗಳನ್ನು ನಂಬುವ ನಕ್ಸಲಿಸಂ, ಅದು ನೆಲೆನಿಂತ ಕಡೆಗಳಲ್ಲಿ ನಂಬಿಕೆಗಳನ್ನು ದುರುಪಯೋಗ ಮಾಡಿಕೊಂಡಿರುವ ವಿಚಾರ ಹೋಸತೇನಲ್ಲ. ಕೋವಿ, ಕತ್ತಿ ರಕ್ತಪಾತಗಳಲ್ಲಿಯೇ ಹೆಚ್ಚು ನಂಬಿಕೆ ಇಟ್ಟುಕೊಂಡು ಕಾನೂನುಬಾಹಿರ ಚಟುವಟಿಕೆಗಳನ್ನು, ಅನ್ಯಾಯಗಳನ್ನೇ ಉಸಿರಾಡುತ್ತಿರುವ ನಕ್ಸಲ್ ಗ್ಯಾಂಗ್ ಗಳು ನಡೆಸಿದ ಉಪಟಳವನ್ನು ಈ ದೇಶ, ನಾಡು ಕಂಡಿದೆ. ಸಮಾಜದ್ರೋಹಿ ಚಟುವಟಿಕೆಗಳನ್ನು ಹೆಡೆಮುರಿ ಕಟ್ಟಿದೆಯಾದರೂ ಅಲ್ಲಲ್ಲಿ ಇನ್ನೂ ತಲೆ ಎತ್ತಿಕೊಂಡೇ ಇವೆ ಎನ್ನುವುದು ಈ ವ್ಯವಸ್ಥೆಯ ದುರಂತಗಳಲ್ಲಿ ಒಂದು. 

ತಮ್ಮ ಹಿತಾಸಕ್ತಿಗಳಿಗಾಗಿ ರಕ್ತಪಾತ ನಡೆಸುವುದಕ್ಕೂ ತಯಾರಿರುವ ಧೋರಣೆ ಹೊಂದಿರುವ ಹೀನ ದರಿದ್ರ ಮನಸ್ಥಿತಿಯ ನಕ್ಸಲಿಸಂ ಈ ನಾಗರಿಕ ಸಮಾಜಕ್ಕೆ ಮಾರಕ ಶಕ್ತಿಯಿದ್ದಂತೆ. ಉಗ್ರಗಾಮಿತ್ವದ ಸಶಸ್ತ್ರ ದಂಗೆಗೆ ಚಿಮ್ಮು ಹಲಗೆಯಾದದ್ದು ಈ ವ್ಯವಸ್ಥೆಯ ಒಳಗೆಯೇ ಇದ್ದವರು ಎನ್ನುವುದು ಮತ್ತೊಂದು ವಿಷಾದನೀಯ ಸಂಗತಿ. 

ಕಾನೂನಿನ ವಿರುದ್ಧ ವಿಚ್ಚಿದ್ರಕಾರಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಒಂದು ಸಮಾಜದ್ರೋಹಿ ನಕ್ಸಲ್ ಗ್ಯಾಂಗ್ ಹೂಡುವ ಸಮಾಜದ್ರೋಹಿ ಕೆಲಸವನ್ನು ಬಟಾಬಯಲುಗೊಳಿಸುವ ರೋಚಕ ಕಥೆಯಾಧಾರಿತ ನಾಟಕ 'ರೈಲುಭೂತ'( ಮೂಲ : ಅರ್ನಾಲ್ಡ್ ರಿಡ್ಲೆ, ಕನ್ನಡ ರೂಪಾಂತರ : ಡಾ. ಪಾರ್ವತಿ ಜಿ‌. ಐತಾಳ್ ). 

ಇತ್ತೀಚೆಗೆ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ನಡೆದ ನಾಟಕೋತ್ಸವದಲ್ಲಿ ಅಮೋಘ (ರಿ.) ಹಿರಿಯಡಕ ತಂಡ ಈ ನಾಟಕವನ್ನು ಅಮೋಘವಾಗಿಯೇ ಪ್ರಸ್ತುತ ಪಡಿಸಿದೆ ಎನ್ನುವುದು ಅತಿಶಯೋಕ್ತಿಯಲ್ಲ. 'ಬದುಕೊಂದು ಭಾವನೆಗಳ ಬಂಡಿ' ಎಂಬ ಶೀರ್ಷಿಕೆ ಗೀತೆಯೊಂದಿಗೆ, ನಿಸ್ತೇಜ ಸಣ್ಣ ಹಳ್ಳಿಯೊಂದರ ನಿರ್ಜನ ರೈಲ್ವೆ ಸ್ಟೇಷನ್ ನ  ರೈಲು ಬರುವ ಸಮಯದ ಅನೌನ್ಸ್ ಮೆಂಟ್ ನೊಂದಿಗೆ ತೆರೆದುಕೊಳ್ಳುವ ನಾಟಕ, ಆರಂಭದಿಂದಲೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.  

ಬೇರೆ ಬೇರೆ ಹಿನ್ನಲೆಯುಳ್ಳ ಐದಾರು ಪ್ರಯಾಣಿಕರು ಈ ನಿರ್ಜನ ಪಾಳುಬಿದ್ದ ರೈಲ್ವೆ ಸ್ಟೇಷನ್ ನಲ್ಲಿ ಕಳೆಯುವ ಒಂದು ರಾತ್ರಿಯಲ್ಲಿ ಎದುರಿಸುವ ಭಯಾನಕ ರೈಲುಭೂತ ಕಥೆ ಹಾಗೂ ಸ್ಮಗ್ಲಿಂಗ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ನಕ್ಸಲ್ ಗ್ಯಾಂಗ್ ಮಾಡುವ ಕುತಂತ್ರದಿಂದಾಗಿ ಸೃಷ್ಟಿಯಾಗುವ ಅಹಿತಕರ ಘಟನೆಗಳು ಎದುರಿಸುತ್ತಾ ಅಲ್ಲಿದ್ದ ಎಲ್ಲರೂ ಒಬ್ಬರಿಗೊಬ್ಬರಾಗುತ್ತಾರೆ. ಒಂದೆಡೆ ಮದುವೆಯಾಗಿ ಹೊಸತರಲ್ಲಿರುವ ಜೋಡಿ, ಇನ್ನೊಂದೆಡೆ ಮದುವೆಯಾಗಿ ವಿಚ್ಛೇದನದೊರೆಗೂ ಹೋಗಿ ಮತ್ತೆ ಒಂದಾಗುವ ಜೋಡಿ, ಈ ನಕ್ಸಲ್ ಗ್ಯಾಂಗ್ ನ ಬೆನ್ನು ಹತ್ತಿ ಅವರ ಕಾನೂನುಬಾಹಿರ ಚಟುವಟಿಕೆಗಳನ್ನು ಬಯಲಿಗೆಳೆಯಲು ಉದ್ದೇಶಪೂರ್ವಕವಾಗಿ ಹಾಸ್ಯಪ್ರಜ್ಞೆಯುಳ್ಳವನಂತೆ ನಟಿಸುವ ಸಿಐಡಿ, ಹಾಸ್ಯಕ್ಕೆ ಬೇಕಾಗಿ ಡೊಳ್ಳು ಹೊಟ್ಟೆಯ ಮತ್ತೊಂದು ಪಾತ್ರ, ಸ್ಟೇಷನ್ ಮಾಸ್ಟರ್ ನಡುವೆ ಈ ಗ್ಯಾಂಗ್ ಹೆಣೆಯುವ ಕುತಂತ್ರದ ಸುತ್ತ ಒಂದು ರೀತಿಯಲ್ಲಿ ಪತ್ತೇದಾರಿಯಂತೆ ಸಾಗುವ ನಾಟಕದ ವಸ್ತು ಗಂಭೀರತೆಯಿಂದ ಕೂಡಿದ್ದರೂ ಆರಂಭದಿಂದ ಕೊನೆಯವರಗೂ ಹಾಸ್ಯದ ಜೊತೆಜೊತೆಗೆ ಸಾಗುತ್ತದೆ. 

ಕಥೆಗೆ ಬೇಕಾದ ರಂಗಸಜ್ಜಿಕೆ, ಬೆಳಕು, ಸಂಗೀತ ಎಲ್ಲವೂ ನಿಜಕ್ಕೂ ವೀಕ್ಷಕನೊಬ್ಬನ ಮನ ತಟ್ಟುವಂತೆ ಮಾಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ನಿರ್ದೇಶಕ ಪ್ರದೀಪ್ ಚಂದ್ರ ಕುತ್ಪಾಡಿಯವರ ಜಾಣ್ಮೆ ನಿಜಕ್ಕೂ ಶ್ಲಾಘನೀಯ. ಕಥೆಯಲ್ಲಿ ಪಾಲ್ಪಡೆದ ಎಲ್ಲಾ ಪಾತ್ರಧಾರಿಗಳು ಪಾತ್ರಕ್ಕೆ ಜೀವ ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ಈ ನಾಟಕದ ಮೂಲ ಕಥೆ ನೂರಾರು ವರ್ಷಗಳ ಹಿಂದಿನದ್ದಾದರೂ ಇಂದಿಗೂ ಪ್ರಸ್ತುತತೆಯನ್ನು ಕಾಯ್ದುಕೊಂಡಿದೆ ಎನ್ನುವುದು ನಾಟಕದ ಹೆಚ್ಚುಗಾರಿಕೆ. ಮೂಲವನ್ನು ರೂಪಾಂತರಿಸಿ ಇನ್ನೊಂದು ಭಾಷಗೆ ತರುವುದು ಸುಲಭದ ಕೆಲಸವಲ್ಲ. ಹಿರಿಯ ಅನುವಾದಕಿ ಡಾ. ಪಾರ್ವತಿ ಜಿ. ಐತಾಳ್ ಅವರು ಕನ್ನಡ ರಂಗಭೂಮಿಗೆ ನೀಡಿದ ಉತ್ತಮ ಕೊಡುಗೆಗಳಲ್ಲಿ 'ರೈಲುಭೂತ' ನಾಟಕವೂ ಒಂದು. ಕಥೆಯನ್ನು ರಂಗಕ್ಕೆ ತರುವುದು ಕೂಡ ಸುಲಭವಿಲ್ಲ, ರಂಗದಲ್ಲಿ ಎಲ್ಲೂ ಭ್ರಮನಿರಸನ ಮೂಡಿಸದೆ ಹಿಡಿದಿಟ್ಟುಕೊಳ್ಳುವಲ್ಲಿ ನಿರ್ದೇಶಕರು ಮತ್ತು ಇಡೀ ಅಮೋಘ ತಂಡ ಯಶಸ್ವಿಯಾಗಿದೆ. ರಂಗಾಸಕ್ತರನ್ನು ಇನ್ನಷ್ಟು ಈ ನಾಟಕ ತಲುಪುವಂತಾಗಲಿ. 

-ಕಾವ್ಯ ಬೈರಾಗಿ

#ShreerajVakwady 


ಚಿತ್ರಗಳು : ಛಾಯಾ ಕುಂದಾಪುರ 


No comments:

Post a Comment