Thursday, February 29, 2024

ಲೋಕಸಭಾ ದೃಷ್ಟಿಯಲ್ಲಿ ಯುಪಿ ಏಕೆ ಒಂದು ಪ್ರಮುಖ ರಾಜ್ಯ ?

 

ಗೆಲ್ಲುವ ಕುದುರೆಗ್ಯಾಕಿಲ್ಲಿ ಆತಂಕ ? | ಮೋದಿ ಜನಪ್ರಿಯತೆ ಮತ್ತು  ಸವಾಲುಗಳು

ಲೋಕಸಭಾ ಚುನಾವಣೆಯ ಬಿಸಿ ಜೋರಾಗಿದೆ. ರಾಜಕೀಯ, ಸೈದ್ಧಾಂತಿಕ ನಿಲುವುಗಳು, ರಾಜಕೀಯ ಪ್ರೇರಿತ ಚರ್ಚೆಗಳು ಚುನಾವಣೆಯ ಸಂದರ್ಭದಲ್ಲಿ ವೇಗ ಪಡೆದುಕೊಳ್ಳುವುದು ತೀರಾತಿಸಹಜ. ʼಇಂಡಿಯಾʼ ಮೈತ್ರಿಕೂಟ ಅನಿಶ್ಚಿತತೆಯಲ್ಲಿದೆ ಎನ್ನುವುದರ ನಡುವೆ ʼಮತ್ತೆ ದೊಡ್ಡ ಆಘಾತʼ ಎನ್ನಿಸಿಕೊಂಡ ಎಲ್ಲವೂ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂಬಂತೆ ಕಾಣಿಸುತ್ತಿದೆ. ಲೋಕಸಭಾ ಚುನಾವಣೆಗೆ ನಿರ್ಣಾಯಕ ರಾಜ್ಯ ಎಂದೇ ಕರೆಯಲ್ಪಡುವ ಉತ್ತರಪ್ರದೇಶದಲ್ಲಿ ʼಇಂಡಿಯಾʼ ಮೈತ್ರಿಕೂಟ ವಿನಾಶದ ಹಾದಿಯಲ್ಲಿದೆ ಎಂಬ ಭವಿಷ್ಯ ನುಡಿದವರಿಗೆ ಅಲ್ಲಾದ ʼಇಂಡಿಯಾʼ ಮೈತ್ರಿಕೂಟದ ರಾಜಕೀಯ ಬೆಳವಣಿಗೆ ತೀವ್ರ ನಿರಾಶೆಯನ್ನುಂಟು ಮಾಡಿರಬಹುದು.

ಹೌದು, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ) ಸುಮಾರಷ್ಟು ಗೊಂದಲಗಳನ್ನು ಮೀರಿ ಸೀಟು ಹಂಚಿಕೆಯ ತಾರ್ಕಿಕ ಅಂತ್ಯಕ್ಕೆ ಬಂದಿವೆ. ಕಾಂಗ್ರೆಸ್ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಮತ್ತು ಉಳಿದವುಗಳನ್ನು ಎಸ್‌ಪಿ ಮತ್ತು ಮೈತ್ರಿಕೂಟದ ಇತರೆ ಸಣ್ಣ ಪಕ್ಷಗಳು ಎದುರಿಸಲಿವೆ. ಮಧ್ಯಪ್ರದೇಶದಲ್ಲಿ ಎಸ್‌ಪಿಗೆ ಇನ್ನೂ ಒಂದು ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ, ಇದು ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ನಂತರ ಕಾಂಗ್ರೆಸ್‌ ತುರ್ತಾಗಿ ಕಲಿಯಲೇ ಬೇಕಾದ ಪಾಠವನ್ನು ಕಲಿಯುವ ಹಾದಿಯಲ್ಲಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.

ಯುಪಿ ಏಕೆ ಒಂದು ಪ್ರಮುಖ ರಾಜ್ಯ ?

ಕೇಂದ್ರದಲ್ಲಿ ಆಡಳಿತ ನಡೆಸುವ ಗುರಿ ಹೊಂದಿರುವ ಯಾವುದೇ ಪಕ್ಷಕ್ಕೆ ಉತ್ತರಪ್ರದೇಶ ನಿರ್ಣಾಯಕ ರಾಜ್ಯವಾಗಿದೆ. 2014ರಲ್ಲಿ, ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯನ್ನು ಆಯ್ಕೆ ಮಾಡಿದಾಗ, ಅವರು ಗುಜರಾತ್‌ನ ವಡೋದರಾ ಜೊತೆಗೆ ವಾರಣಾಸಿಯಿಂದ ಸ್ಪರ್ಧಿಸಲು ನಿರ್ಧರಿಸಿದರು. ಎರಡೂ ಕ್ಷೇತ್ರಗಳನ್ನು ಗೆದ್ದ ನಂತರ, ಅವರು ವಾರಣಾಸಿಯನ್ನು ಆಯ್ಕೆ ಮಾಡಿದರು ಮತ್ತು ವಡೋದರವನ್ನು ಬಿಟ್ಟುಕೊಟ್ಟರು. ಉತ್ತರ ಪ್ರದೇಶದಲ್ಲಿ ಗಣನೀಯ ಸಂಖ್ಯೆಯ ಕ್ಷೇತ್ರಗಳನ್ನು ಗೆಲ್ಲದೆ, ಪ್ರಧಾನಿಯಾಗುವ ತಮ್ಮ ಜೀವಿತಾವಧಿಯ ಗುರಿಯನ್ನು ಈಡೇರಿಸುವುದು ಅಸಾಧ್ಯವೆಂದು ಮೋದಿ ತಿಳಿದಿದ್ದರು. ನಂತರ ಬಿಜೆಪಿ ಉತ್ತರ ಪ್ರದೇಶದ ಚುನಾವಣೆಯ ಮೇಲ್ವಿಚಾರಣೆಗೆ ಅಮಿತ್ ಶಾ ಅವರನ್ನು ನೇಮಿಸಿದ್ದು ಕಾಕತಾಳೀಯವೇನಲ್ಲ.

ಪಕ್ಷವು 80 ಲೋಕಸಭಾ ಕ್ಷೇತ್ರಗಳಲ್ಲಿ 71 ಕ್ಷೇತ್ರಗಳನ್ನು ಗೆದ್ದುಕೊಂಡಿತು ಮತ್ತು ಅದರ ಮಿತ್ರ ಪಕ್ಷವಾದ ಅಪ್ನಾ ದಳವು ಎರಡು ಕ್ಷೇತ್ರಗಳನ್ನು ಪಡೆದುಕೊಂಡಿತು. ಕೇವಲ ಎರಡು ವರ್ಷಗಳ ಹಿಂದೆ, 2012ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ ಶೇ.15 ರಷ್ಟು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಮೋದಿ-ಶಾ ಜೋಡಿಯು ಎಸ್‌ಪಿ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಪಕ್ಷಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಬಂದೊದಗಿತ್ತು ಎನ್ನುವುದಿಲ್ಲಿ ಉಲ್ಲೇಖಾರ್ಹ.

ಒಂದನೇ ಲೋಕಸಭಾ (೧೯೫1-೫೨) ಚುನಾವಣೆಯಲ್ಲಿ ೮೬ ಲೋಕಸಭಾ ಕ್ಷೇತ್ರಗಳಲ್ಲಿ ೮೧ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆದ್ದಿತ್ತು. ೧೯೫೭ರ ಚುನಾವಣೆಯಲ್ಲಿ ೭೨, ೧೯೬೨ರ ಲೋಕಸಭಾ ಚುನಾವಣೆಯಲ್ಲಿ ೬೨, ೧೯೬೭ ರಲ್ಲಿ ೪೮, ೧೯೭೧ರಲ್ಲಿ ೭೩ ಲೋಕಸಭಾ ಕ್ಷೇತ್ರಗಳನ್ನು ಪಡೆದುಕೊಂಡಿತ್ತು ಕಾಂಗ್ರೆಸ್‌, ೧೯೭೭ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷಾ ೮೫ಕ್ಕೆ ೮೫ ಲೋಕಸಭಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿತ್ತು ಎನ್ನುವುದು ಉಲ್ಲೇಖಾರ್ಹ.  ಆ ಬಳಿಕ ೧೯೮೦ರ ಲೋಕಸಭಾ ಚುನಾವಣೆಯಲ್ಲಿ ಚೇತರಿಸಿಕೊಂಡ ಕಾಂಗ್ರೆಸ್‌ ೫೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು, ೧೯೮೪ರಲ್ಲಿ ೮೩, ೧೯೮೯ರಲ್ಲಿ ಕಾಂಗ್ರೆಸ್‌ ಕೇವಲ ೧೫ ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಂಡಿತ್ತು, ಬಿಜೆಪಿಯ ಉಗಮ, ಎಂಟು ಕ್ಷೇತ್ರಗಳನ್ನು ಪಡೆದುಕೊಂಡಿತ್ತು, ಜೆಡಿ ಬರೋಬ್ಬರಿ ೫೪ ಕ್ಷೇತ್ರಗಳನ್ನು ಗೆದ್ದಿತ್ತು. ಇಲ್ಲಿಂದ ಕಾಂಗ್ರೆಸ್‌ ಉತ್ತರಪ್ರದೇಶದಲ್ಲಿ ತನ್ನ ಪ್ರಾಬಲ್ಯ ಕಳೆದುಕೊಳ್ಳಲಾರಂಭಿಸಿತ್ತು. ೧೯೯೧ರಲ್ಲಿ ೮೫ ಲೋಕಸಭಾ ಕ್ಷೇತ್ರಗಳಲ್ಲಿ ಕೇವಲ ೫ ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವಲ್ಲಿ ತೃಪ್ತಿಪಟ್ಟುಕೊಂಡಿತು. ಬಿಜೆಪಿ ೫೧ ಕ್ಷೇತ್ರಗಳ ಗೆಲುವಿನೊಂದಿಗೆ ಎತ್ತರಕ್ಕೆ ಜಿಗಿದಿತ್ತು. ೧೯೯೬ರಲ್ಲಿ ಕಾಂಗ್ರೆಸ್‌ ೫, ಬಿಜೆಪಿ ೫೨, ೧೯೯೮ರಲ್ಲಿ ಕಾಂಗ್ರೆಸ್‌ ಶೂನ್ಯ ಸಾಧನೆ, ಬಿಜೆಪಿ ೫೯ ಕ್ಷೇತ್ರಗಳಲ್ಲಿ ಗೆಲುವು, ೧೯೯೯ರಲ್ಲಿ ಕಾಂಗ್ರೆಸ್‌ ೧೦, ಬಿಜೆಪಿ ೨೯, ಎಸ್ಪಿ ೩೫, ೨೦೦೪ರ ಚುನಾವಣೆಯಲ್ಲಿ ಕಾಂಗ್ರೆಸ್‌ ೯, ಬಿಜೆಪಿ ೧೦ ಹಾಗೂ ಎಸ್ಪಿ ೩೫, ಬಿಎಸ್‌ಪಿ ೧೯ ಕ್ಷೇತ್ರಗಳಲ್ಲಿ ಗೆಲುವು, ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ೨೨, ಬಿಜೆಪಿ ೧೦, ಎಸ್ಪಿ ೨೨, ಬಿಎಸ್‌ಪಿ ೨೦ ಕ್ಷೇತ್ರಗಳಲ್ಲಿ, ೨೦೧೪ರಲ್ಲಿ ಮೋದಿ ಹವಾ, ಹಿಂದುತ್ವದ ಪರಾಕಾಷ್ಠೆ, ಬಿಜೆಪಿ ೮೦ ಲೋಕಸಭಾ ಕ್ಷೇತ್ರಗಳ ಪೈಕಿ ೭೧ ಲೋಕಸಭಾ ಕ್ಷೇತ್ರಗಳನ್ನು ಪಡೆದುಕೊಂಡು ಮಹಾಜಯ ಸಾಧಿಸಿತ್ತು. ಕಾಂಗ್ರೆಸ್‌ ೨ ಲೋಕಸಭಾ ಕ್ಷೇತ್ರಗಳನ್ನು ಪಡೆದುಕೊಂಡರೆ, ಎಸ್ಪಿ ೫, ಎಡಿಎಸ್‌ ೨ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ೬೨ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್‌ ೧, ಬಿಎಸ್‌ಪಿ ೧೦, ಎಸ್‌ಪಿ ೫, ಎಡಿಎಸ್‌ ೨ ಕ್ಷೇತ್ರಗಳಲ್ಲಿ ನಗು ಬೀರಿದ್ದವು. ಉತ್ತರ ಪ್ರದೇಶದ ಬಿಜೆಪಿಯ ಭದ್ರಕೋಟೆಯಾಗಿ ಬದಲಾಯಿತು.

ಕ್ಷೀಣಿಸುತ್ತಿರುವ ಬಿಎಸ್‌ಪಿ

2022 ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಪ್ರಭಾವಶಾಲಿ ಶೇ. 32ಮತಗಳನ್ನು ಗಳಿಸಿತು, ಅದರ ಅತ್ಯುತ್ತಮ ಸಾಧನೆಯನ್ನು ನಿರಾಕರಿಸುವಂತಿಲ್ಲ. ಅಖಿಲೇಶ್ ಯಾದವ್ ಜಾತಿ ಆಧಾರಿತ ಸಣ್ಣ ರಾಜಕೀಯ ಪಕ್ಷಗಳೊಂದಿಗೆ ಒಕ್ಕೂಟವನ್ನು ರಚಿಸಲು ಪ್ರಯತ್ನಿಸಿದ್ದರು, ಆದರೂ ಚುನಾವಣೆಯ ನಂತರ ಆ ಒಕ್ಕೂಟವು ಉಳಿಯಲಿಲ್ಲ.

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಕೆಲವು ನಿಗೂಢ ಕಾರಣಗಳಿಂದಾಗಿ 2024ರ ಚುನಾವಣೆಯಲ್ಲಿ ಗಂಭೀರವಾಗಿ ಸ್ಪರ್ಧಿಸುವ ಮೂಡ್‌ನಲ್ಲಿಲ್ಲ ಎಂದು ಕಾಣಿಸುತ್ತಿದೆ. ಅವರ ಪಕ್ಷದ ಮತಗಳ ಪ್ರಮಾಣ ತೀವ್ರವಾಗಿ ಕುಸಿದಿದೆ. ಆದಾಗ್ಯೂ, ಬಿಎಸ್‌ಪಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ. ʼಇಂಡಿಯಾʼ ಮೈತ್ರಿಕೂಟದಲ್ಲಿ ಮಾಯಾವತಿ ಇಲ್ಲದಿರುವುದು ಬಿಜೆಪಿಗೆ ಅನುಕೂಲವಾಗಿದೆ. ಆದರೂ, ಈ ಬಾರಿ ಎಸ್‌ಪಿ-ಕಾಂಗ್ರೆಸ್ ಮೈತ್ರಿ ಬಿಜೆಪಿಯ ಬಲಕ್ಕೆ ಸರಿಸಮವಲ್ಲ ಎಂದು ತೀರ್ಮಾನಿಸುವುದು ತಪ್ಪು. ಬಿಜೆಪಿ ಕೂಡ ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಂತಿದೆ.

ಬಿಜೆಪಿಯ ಜಾಣ ನಡೆ :

ʼಇಂಡಿಯಾʼ ಮೈತ್ರಿಕೂಟದಿಂದ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳನ್ನು ದೂರವಿಡುವ ಬಿಜೆಪಿಯ ಪ್ರಯತ್ನವು ಇದನ್ನು ಒತ್ತಿಹೇಳುತ್ತದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಲೋಕಾರ್ಪಣೆಯ ಹೊರತಾಗಿಯೂ, ರಾಜ್ಯದಲ್ಲಿ ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳ ಕಾರ್ಯಕ್ಷಮತೆಯನ್ನು ಪುನರಾವರ್ತಿಸುವುದು ಕಷ್ಟ ಎಂದು ಬಿಜೆಪಿಗೆ ಅರಿವಿದೆ. ಜನವರಿಯಲ್ಲಾದ ರಾಮಮಂದಿರ ಲೋಕಾರ್ಪಣೆಯ ಸಂಭ್ರಮ ಇಳಿಮುಖವಾದಂತಿದೆ.

ಮಂದಿರದ ಬಗೆಗಿನ ಉನ್ಮಾದ ಮತದಾನದ ವಿಚಾರದಲ್ಲಿ ಪ್ರತಿಫಲಿಸುವುದಿಲ್ಲ ಎಂಬುದನ್ನು ಬಿಜೆಪಿ ತಿಳಿದಿದೆ. ಮಂದಿರ ನಿರ್ಮಾಣಕ್ಕಾಗಿ ಜನರು ಬಿಜೆಪಿಗೆ ಕೃತಜ್ಞತೆಯ ರೂಪದಲ್ಲಿ ಮತದಾನ ಮಾಡಬಹುದು ಅಷ್ಟೆ.

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಮೋದಿ ಸರ್ಕಾರ ʼಭಾರತ ರತ್ನʼ ಘೋಷಿಸಿದೆ. ಸಿಂಗ್ ಅವರು ಜಾಟ್ ಸಮುದಾಯದಲ್ಲಿ ಭಾರಿ ಅನುಯಾಯಿಗಳನ್ನು ಹೊಂದಿರುವ ರೈತ ನಾಯಕರಾಗಿದ್ದರು. ʼಇಂಡಿಯಾʼ ಮೈತ್ರಿಕೂಟದ ಭಾಗವಾಗಿದ್ದ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ನಾಯಕ ಹಾಗೂ ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಚೌಧರಿ ಅವರು ಮೈತ್ರಿಕೂಟದಿಂದ ಹೊರಬಂದು ಬಿಜೆಪಿ ಜತೆ ಕೈ ಜೋಡಿಸಿದ ಬೆನ್ನಲ್ಲೇ, ಈ ಆಯ್ಕೆ ಪ್ರಕಟಿಸಲಾಗಿದೆ. ಚರಣ್ ಸಿಂಗ್ ಅವರಿಗೆ ಭಾರತ ರತ್ನ ಗೌರವ ನೀಡಬೇಕು ಎಂದು ಆರ್‌ಎಲ್‌ಡಿ ಈ ಹಿಂದೆಯೇ ಕೇಂದ್ರವನ್ನು ಒತ್ತಾಯಿಸಿತ್ತು. ಅದೀಗ ಈಡೇರಿರುವುದು, ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳ ಮೈತ್ರಿಯ ಪ್ರತಿಫಲವೇ ಸರಿ. ಇನ್ನು, ಜಯಂತ್ ಚೌಧರಿ ಮತ್ತು ಅಖಿಲೇಶ್ ಯಾದವ್ ಉತ್ತಮ ಸಂಬಂಧ ಹೊಂದಿದ್ದರು. ಅವರ ಸಂಬಂಧವನ್ನು ಎಂದಿಗೂ ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂದೂ ಹೇಳಲಾಗಿತ್ತು. ಆರ್‌ಎಲ್‌ಡಿ  ಪಶ್ಚಿಮ ಉತ್ತರ ಪ್ರದೇಶದಲ್ಲಿ ಪ್ರಬಲವಾಗಿತ್ತು. ವಿಶೇಷವಾಗಿ ಜಾಟ್ ಸಮುದಾಯದ ಮತಗಳ ಪ್ರಾಬಲ್ಯದ ಪ್ರದೇಶಗಳಲ್ಲಿ, ಮುಸ್ಲಿಮರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಈ ಮತಗಳು ಆರ್‌ಎಲ್‌ಡಿ ಪರವಾಗಿಯೇ ಬರುತ್ತಿದ್ದವು. ಆದರೇ,  ಜಯಂತ್ ಚೌಧರಿ ಈಗ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ಇದೇ ಕಾರಣದಿಂದಾಗಿ ಮುಂಬರುವ ಚುನಾವಣೆಯಲ್ಲಿ ಆರ್‌ಎಲ್‌ಡಿ, ಬಿಜೆಪಿ ಈ ಭಾಗದಲ್ಲಿ ತೀವ್ರ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್‌ನ ಮೈತ್ರಿಯು ಲೋಕಸಭಾ ಚುನಾವಣೆಯ ವಿಚಾರದಲ್ಲಿ ಕುತೂಹಲ ಸೃಷ್ಟಿಸಿದೆ.

ರೈತರ ಪ್ರತಿಭಟನೆಗಳು :

ರೈತರು ಮತ್ತೆ ಹೋರಾಟಕ್ಕೆ ಇಳಿದಿದ್ದಾರೆ. ರೈತ ಹೋರಾಟವು ಈ ಪ್ರದೇಶದಲ್ಲಿ ಭಾರಿ ಪರಿಣಾಮ ಬೀರಿದೆ. ರೈತರ ಪ್ರತಿಭಟನೆಯ ಪರಿಣಾಮದಿಂದಾಗಿ ಮೋದಿ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕಾಯಿತು. ಆದರೆ ರೈತರ ಪ್ರಮುಖ ಬೇಡಿಕೆಗಳು ಈಡೇರಿಲ್ಲ. ಬೆಳೆಗಳಿಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ)ಗೆ ಕಾನೂನು ಖಾತರಿ ನೀಡಬೇಕು ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಸರ್ಕಾರ ಗೌರವಿಸಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ, ಮೋದಿ ಸರ್ಕಾರವು ಈ ಬಗ್ಗೆ ಅಧ್ಯಯನ ಮಾಡಲು ಸಮಿತಿಯನ್ನು ರಚಿಸಿತ್ತು, ಆದರೆ 35ಕ್ಕೂ ಹೆಚ್ಚು ಸಭೆಗಳು ಕಳೆದರೂ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ.ಇದು ಬಿಜೆಪಿಯ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಮೋದಿ ಜನಪ್ರಿಯತೆ ಮತ್ತು  ಸವಾಲುಗಳು :

ಮೋದಿ ದೇಶದ ಅತ್ಯಂತ ಜನಪ್ರಿಯ ನಾಯಕ. ಹಿಂದುತ್ವದ ಐಕಾನ್ ಎಂಬ ಅವರ ಚಿತ್ರಣ ಅಖಂಡ ಮಟ್ಟದಲ್ಲಿ ಸೃಷ್ಟಿಯಾಗಿದೆ. ದೇಶವನ್ನು ಸದೃಢ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿರುವ ಪ್ರಧಾನಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಆದಾಗ್ಯೂ, ಯಾವುದೇ ಸರ್ಕಾರದ ವಿರುದ್ಧ 10 ವರ್ಷಗಳ ಆಡಳಿತ ವಿರೋಧ ಸಣ್ಣ ವಿಷಯವಲ್ಲ. ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ. ಹಣದುಬ್ಬರ ಹೆಚ್ಚುತ್ತಿದೆ. ದೇಶದ ಮೇಲಿನ ಸಾಲದ ಹೊರೆ ನಿರಂತರ ಹೆಚ್ಚಳವಾಗುತ್ತಿದೆ. ದೇಶದ ಸಾಲ ಈ ವರ್ಷ ೧೮೩.೬೭ ಲಕ್ಷ ಕೋಟಿಗೆ ಏರುವ ಸಾಧ್ಯತೆ ಇದೆ ಎನ್ನುವ ಒಂದು ವರದಿ ನಿಜಕ್ಕೂ ಆತಂಕ ಮೂಡಿಸುತ್ತದೆ. ಉತ್ತರಪ್ರದೇಶ ಮಾತ್ರವಲ್ಲ ದೇಶದ ಉದ್ದಗಲಕ್ಕೂ ಈ ವಿಚಾರ ಆತಂಕಕಾರಿಯಾಗಿ ಕಾಡುತ್ತಿದೆ. ರಾಮ ಮಂದಿರದ ಉನ್ಮಾದ ಈ ಎಲ್ಲಾ ಸಮಸ್ಯೆಗಳನ್ನು ಮರೆ ಮಾಚುವಷ್ಟು ಶಕ್ತವಾಗಿಲ್ಲ ಎನ್ನುವ ಅರಿವು ಬಿಜೆಪಿಗಿದೆ. ಅದಕ್ಕಾಗಿಯೇ ʼಮೋದಿ ಗ್ಯಾರಂಟಿʼಯಂತಹ ಕಸರತ್ತನ್ನು ಬಿಜೆಪಿ ಮಾಡುತ್ತಿದೆ. ಗೆಲ್ಲುವ ಕುದುರೆಯೇ ಆಗಿದ್ದರೂ, ಹಿನ್ನಡೆಯ ಆತಂಕವೂ ಇದೆ. ಉಳಿದದ್ದು ನಿಮ್ಮ ಯೋಚನೆ ಮೀಸಲಿಟ್ಟಿದ್ದು.

-ಶ್ರೀರಾಜ್‌ ವಕ್ವಾಡಿ  

Thursday, February 22, 2024

ಕಾಂಗ್ರೆಸ್ ಒಳಗಿನ ಕಳವಳ ಪ್ರಜಾಪ್ರಭುತ್ವಕ್ಕೆ ಆಘಾತ !

 

ಉಳಿದೆಲ್ಲಾ ಸೈದ್ಧಾಂತಿಕ ನಿಲುವನ್ನು ಮಕಾಡೆ ಮಲಗಿಸಿದ ಬಿಜೆಪಿಯ ಕಾರ್ಯತಂತ್ರ ?

ಈ ದೇಶದಲ್ಲಿ ಒಂದು ಸುದೀರ್ಘವಾದ ಇತಿಹಾಸವನ್ನು ಕಂಡ ಕಾಂಗ್ರೆಸ್‌ ಪಕ್ಷದೊಳಗಿನ ಕಳವಳ ಈ ದೇಶದ ಭವಿಷ್ಯಕ್ಕೆ ಭಾರಿ ದೊಡ್ಡ ಆಘಾತವನ್ನು ಉಂಟು ಮಾಡಲಿದೆ ಎಂದನ್ನಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಎದುರು ಕಾಂಗ್ರೆಸ್‌ ಈ ಮಟ್ಟಿಗೆ ದುರಿತ ಕಾಲ ಎದುರಿಸುತ್ತಿರುವುದು ದುರಂತವೇ ಸರಿ. ಈ ಸಂದರ್ಭದಲ್ಲಿ ರಾಜಕೀಯ ತಲ್ಲಣಗಳು, ಕಾಂಗ್ರೆಸ್‌ ನಿಧಾನವಾಗಿ ನಿರ್ನಾಮವಾಗುವ ಹಂತಕ್ಕೆ ತಲುಪುತ್ತಿರುವುದನ್ನು ನೋಡಿದರೇ, ಇದು ಒಂದು ಹಂತದಲ್ಲಿ ʼಅಸಂಖ್ಯ ಪ್ರಶ್ನೆಗಳೆʼ ಸತ್ತು ಮಲಗಿದಂತೆಯೇ ಸರಿ ಎಂದರೇ ತಪ್ಪಿಲ್ಲ.  

ಸರ್ವಾಧಿಕಾರವನ್ನು ಕೊನೆಗಾಣಿಸಬೇಕು, ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕು ಎಂಬ ಸದುದ್ದೇಶದಿಂದ ಬಿಜೆಪಿಯೇತರ ಪಕ್ಷಗಳು ಯುದ್ಧ ಸಾರುವ ರೀತಿಯಲ್ಲಿ ರಚನೆಯಾದ ʼಇಂಡಿಯಾʼ ಮೈತ್ರಿಕೂಟ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ಸಮರವನ್ನೇ ಸಾರುತ್ತದೆ ಎಂಬ ರಾಜಕೀಯ ವಿಶ್ಲೇಷಣೆ ಈ ದೇಶದ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿತ್ತು. ಸಂವಿಧಾನದ ನಿಜವಾದ ಚೇತನವನ್ನು ಮರಳಿ ತರುತ್ತೇವೆ ಎಂಬ ಸಂಕಲ್ಪದೊಂದಿಗೆ ಒಗ್ಗೂಡಿದ ಪಕ್ಷಗಳು ವಿಶ್ವಾಸವನ್ನು ಕಳೆದುಕೊಂಡು ಅನಿಶ್ಚಿತತೆಯಲ್ಲಿ ಮುಳುಗಿರುವುದು ಈ ದೇಶದ ಸುದೀರ್ಘ ರಾಜಕೀಯ ಇತಿಹಾಸದ ಬಹುದೊಡ್ಡ ದುರಂತಗಳಲ್ಲೊಂದು.

ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಯ ಹ್ಯಾಟ್ರಿಕ್‌ ಗೆಲುವನ್ನು ತಡೆದು ನಿಲ್ಲಿಸಬೇಕು ಎಂಬ ಮಹತ್ತರ ಸಂಕಲ್ಪ ಹೊತ್ತುಕೊಂಡಿದ್ದ ಕಾಂಗ್ರೆಸ್‌, ೧೯೭೭ರಲ್ಲಿ ಜನತಾ ಒಕ್ಕೂಟ  ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮ ಆಗುವುದನ್ನು ಖಚಿತ ಪಡಿಸಿಕೊಂಡಂತೆ, ಈಗ ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ನಿರ್ನಾಮ ಆಗುವಂತೆ ಕಾಂಗ್ರೆಸ್‌  ಕಂಡುಕೊಳ್ಳಬೇಕಿತ್ತು. ಅಂದರೇ, ಆ ಮಟ್ಟಿಗೆ ಕಾಂಗ್ರೆಸ್‌ ಕಾರ್ಯ ನಿರ್ವಹಿಸಬೇಕಿತ್ತು. ಆದರೇ ಕಾಂಗ್ರೆಸ್‌ನ ದುರದೃಷ್ಠಕರ ಸಂಗತಿಯೆಂದರೇ, ಈ ಮೇಲೆ ಉಲ್ಲೇಖಿಸಿದ ಹಿಮಾಚಲ ಪ್ರದೇಶವೊಂದನ್ನು ಬಿಟ್ಟು ಉಳಿದೆಲ್ಲಾ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಅಂತಿಮ ಹಂತದಲ್ಲಿ ಈಗ ನ್ಯಾಯ್‌ ಯಾತ್ರೆಯ ಮೂಲಕ ಮರಳಿ ಇಲ್ಲೆಲ್ಲಾ ಚೇತರಿಸಿಕೊಳ್ಳುತ್ತೇವೆ ಎಂದರೇ ಅದು ಸಾಧ್ಯವಾಗುವ ಮಾತು ಅಂತ ಅನ್ನಿಸುತ್ತಿದೆಯೇ ? ಖಚಿತವಾಗಿ ಕಷ್ಟವೇ ಎಂದು ಹೇಳಬಹುದಾಗಿದೆ. ಹಿಂದಿ ಮಾತನಾಡುವ ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಿದ್ದರೇ, ಕಾಂಗ್ರೆಸ್‌ ಮೈತ್ರಿಕೂಟದ ಸಹಾಯದಿಂದ ಈ ಲೋಕಸಭೆಯನ್ನು ಬಹಳ ಅನಾಯಾಸವಾಗಿ ಗೆಲ್ಲಬಹುದಿತ್ತೇನೋ, ಆದರೇ, ಈಗ ಕಾಂಗ್ರೆಸ್‌ ಮುಂದೆ ಆ ಅವಕಾಶಗಳಿಲ್ಲ. ಮೈತ್ರಿಕೂಟದ ಪ್ರಮುಖ ಪ್ರಾದೇಶಿಕ ಪಕ್ಷಗಳೇ ಕಾಂಗ್ರೆಸ್‌ ವಿರುದ್ಧ ತಿರುಗಿ ಬಿದ್ದಿರುವುದರಿಂದ ʼಇಂಡಿಯಾʼ ಮೈತ್ರಿಕೂಟವನ್ನು ಮುನ್ನಡೆಸುವ ಅರ್ಹತೆಯನ್ನೇ ಕಾಂಗ್ರೆಸ್‌ ಕಳೆದುಕೊಂಡಂತೆಯೇ ? ಪ್ರಶ್ನೆ ಮುಂದಿದೆ.

ನಿಶ್ಚಿತವಾಗಿ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಗೆಲ್ಲುವ ಎಲ್ಲಾ ಅನುಕೂಲಕರ ಸ್ಥಿತಿಯನ್ನು ಸೃಷ್ಠಿಸಿಕೊಂಡಿದೆ. ಬಿಜೆಪಿಯನ್ನು ಕಳೆದ ಕೆಲವು ದಶಕಗಳಿಂದ ಪೊರೆಯುತ್ತಲೇ ಬಂದ ಶ್ರೀರಾಮ ಮಂದಿರ ಈ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಬಹಳ ದೊಡ್ಡ ಗೆಲುವನ್ನು ತಂದುಕೊಡಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ ಲೋಕಸಭಾ ಚುನಾವಣೆಗಿಂತಲೂ ಹೆಚ್ಚಿನ ಲೋಕಸಭಾ ಕ್ಷೇತ್ರಗಳಲ್ಲಿ ಈ ಚುನಾವಣೆಯಲ್ಲಿ ಗೆಲ್ಲುವ ಆಶಾಭಾವನೆಯಲ್ಲಿ ಬಿಜೆಪಿ ಇದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ʼಮಿಷನ್‌ ೪೦೦ʼ ಗುರಿಯ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಿ ಪ್ರತಿಪಕ್ಷಗಳಿಗೆ ಸವಾಲೆಸೆದಿದ್ದರು. ಹಿಂದುತ್ವ ಹಾಗೂ ರಾಮ ಮಂದಿರದ ಸುತ್ತ ಸೃಷ್ಟಿಸಿದ ಒಂದು ರಾಜಕೀಯ ಪ್ರೇರಿತವಾದ ಉನ್ಮಾದ ಬಿಜೆಪಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪರವಾದ ಮತಗಳಾಗಿ ಪರಿವರ್ತನೆಯಾಗುತ್ತದೆ ಎಂದು ಬಹುಶಃ ಯಾರೂ ಊಹಿಸಿರಲಿಕ್ಕಿಲ್ಲ. ಆದರೇ ಎಲ್ಲರ ಊಹೆಯನ್ನು ಮೀರಿ ಬಿಜೆಪಿ ಇವತ್ತು ಬೆಳೆದು ನಿಂತಿದೆ. ಕಾಂಗ್ರೆಸ್‌ ನಂತಹ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂಬ ಸಂಕಲ್ಪದೊಂದಿಗೆ ಅಡಿಯಿಟ್ಟ ಬಿಜೆಪಿ  ಆ ಸಂಕಲ್ಪವನ್ನು ಈಡೇರಿಸುತ್ತಿರುವಂತೆ ಕಾಣಿಸುತ್ತಿದೆ. ಬಿಜೆಪಿಯ ʼನ್ಯಾಷನ್ಯಾಲಿಟಿಯʼ ಹೆಸರಿನ ಹಿಂದುತ್ವವಾದ ಉಳಿದೆಲ್ಲಾ ಸೈದ್ಧಾಂತಿಕ ನಿಲುವನ್ನು ಮಕಾಡೆ ಮಲಗುವಂತೆ ಮಾಡಿರುವುದು ಆಶ್ಚರ್ಯವೇ ಸರಿ.

ಇದು ಕಾಂಗ್ರೆಸ್‌ ಸೇರಿ ಎಲ್ಲಾ ಬಿಜೆಪಿಯೇತರ ಪಕ್ಷಗಳ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಬಹುಶಃ ಕಾಂಗ್ರೆಸ್‌ ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಇಲ್ಲಿನ ಜನರು ಮರೆಯದೇ ಇರಬಹುದು. ಕಾಂಗ್ರೆಸ್‌ನ ಜನಪರ ಯೋಜನೆಗಳನ್ನು ಜನರು ಸದಾ ಸ್ಮರಿಸಿಕೊಳ್ಳಬಹುದು. ಜನರಿಗೆ ಬದುಕು ನೀಡಿದ ಕಾಂಗ್ರೆಸ್‌ನ ಆಡಳಿತವನ್ನು ಜನ ನಿರಂತರ ಸ್ಮರಿಸಿಕೊಳ್ಳಬಹುದು. ಆದರೇ, ಅವೆಲ್ಲಾ ಒಂದು ʼರಾಮ ಮಂದಿರʼದ ನಿರ್ಮಾಣದಿಂದ ಮರೆಯಾಗಿ ಹೋಗುತ್ತವೆ ಎಂದು ಸ್ವತಃ ಕಾಂಗ್ರೆಸ್‌ ಊಹಿಸಿರಲಿಕ್ಕಿಲ್ಲ. ಕಾಂಗ್ರೆಸ್‌ ಎಂದೂ ರಾಜಕೀಯದಲ್ಲಿ ʼಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕುʼ ಎಂಬ ತತ್ವವನ್ನು ಪಾಲಿಸಿಲ್ಲ. ಆದರೇ, ಬಿಜೆಪಿ ಆ ತತ್ವವನ್ನು ಯಶಸ್ವಿಯಾಗಿ ಬಳಸಿಕೊಂಡಿತು. ಕಾಂಗ್ರೆಸ್‌ ಎಲ್ಲವನ್ನೂ ಕಳೆದುಕೊಂಡ ಮೇಲೆ  ಜೋಡೋ, ನ್ಯಾಯ ಅಂತ ಬೀದಿಗಿಳಿದು ಪ್ರಶ್ನೆ ಮಾಡುತ್ತಿದೆ. ಕಾಂಗ್ರೆಸ್‌ ಯಾವ ಸಮಯಕ್ಕೆ ಯಾವುದನ್ನು ಮಾಡಬೇಕೋ ಅದನ್ನು ಮಾಡದೇ ಕಾಲ ಕಳೆಯಿತು. ಬಿಜೆಪಿ ಲೋಕಸಭೆ ಚುನಾವಣೆಗೆ ಸರಿಯಾಗಿಯೇ ರಾಮ ಮಂದಿರ ನಿಲ್ಲಿಸಿ ದೇಶದ ಬಹುದೊಡ್ಡ ಸಂಖ್ಯೆಯ ಮತದಾರರನ್ನು ಸೆಳೆದುಕೊಂಡಿತ್ತು. ರಾಮ ಮಂದಿರದ ನಿರ್ಮಾಣದ ಕೂಗಿಗೆ ರಾಮ ಮಂದಿರವೂ ತಲೆ ಎತ್ತಿ ನಿಂತಿತು, ಲೋಕಸಭೆಗೆ ರಾಮಮಂದಿರವೇ ಬೆನ್ನೆಲುಬು ಆಯಿತು. ಈ ಚುನಾವಣೆಗಂತೂ ಬೇರೆ ಯಾವ ದೊಡ್ಡ ಹತ್ತರ ಭರವಸೆಯನ್ನೇನೂ ನೀಡುವ ಅಗತ್ಯವೇನಿಲ್ಲ. ಈ ರಾಮ ಮಂದಿರ ಒಂದೇ ಸಾಕು. ಯಾವ ಸಂದರ್ಭದಲ್ಲಿ ಬೀದಿಗಿಳಿದು ಜನರನ್ನು ಸೆಳೆದುಕೊಳ್ಳಬೇಕಿತ್ತೋ, ಯಾವ ಸಂದರ್ಭದಲ್ಲಿ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕಿತ್ತೋ, ಯಾವ ಸಂದರ್ಭದಲ್ಲಿ ಆಡಳಿತದ ವಿರುದ್ಧ ಧ್ವನಿ ಎತ್ತಬೇಕಿತ್ತೋ, ಯಾವ ಸಂದರ್ಭದಲ್ಲಿ ತನ್ನ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಳ್ಳಬೇಕಿತ್ತೋ, ಯಾವ ಸಂದರ್ಭದಲ್ಲಿ ತನ್ನ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತೋ, ಯಾವ ಸಂದರ್ಭದಲ್ಲಿ ತನ್ನ ಎರಡನೇ ನಾಯಕತ್ವವನ್ನು ಬೆಳೆಸಿಕೊಳ್ಳಬೇಕಿತ್ತೋ ಅವೆಲ್ಲವನ್ನು ಮಾಡದೇ ಇರುವುದರಿಂದಲೇ ಕಾಂಗ್ರೆಸ್‌  ಈ ಸ್ಥಿತಿಯನ್ನು ಎದುರುಗಾಣುತ್ತಿದೆ.

2019ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 421 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು ಮತ್ತು ಕೇವಲ 52 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿತ್ತು. ಇದು ಕೂಡ ಕೆಲವು ರಾಜ್ಯಗಳಲ್ಲಿ ಮೈತ್ರಿಯ ಭಾಗವಾಗಿತ್ತು. ಬಿಹಾರದಲ್ಲಿ ಆರ್‌ಜೆಡಿ, ಮಹಾರಾಷ್ಟ್ರದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಕರ್ನಾಟಕದಲ್ಲಿ ಜನತಾ ದಳ (ಜಾತ್ಯತೀತ), ಜಾರ್ಖಂಡ್‌ನಲ್ಲಿ ಜೆಎಂಎಂ ಮತ್ತು ತಮಿಳುನಾಡಿನ ಡಿಎಂಕೆ. ಅದರಂತೆ, ಬಿಹಾರದ 40 ಕ್ಷೇತ್ರಗಳಲ್ಲಿ ಒಂಬತ್ತು, ಜಾರ್ಖಂಡ್‌ನ 14 ಕ್ಷೇತ್ರಗಳಲ್ಲಿ ಏಳು, ಕರ್ನಾಟಕದ 28 ಕ್ಷೇತ್ರಗಳಲ್ಲಿ 21, ಮಹಾರಾಷ್ಟ್ರದ 48 ಕ್ಷೇತ್ರಗಳಲ್ಲಿ 25 ಮತ್ತು ತಮಿಳುನಾಡಿನ 39 ಕ್ಷೇತ್ರಗಳಲ್ಲಿ 9 ಕ್ಷೇತ್ರಗಳಲ್ಲಿ ಉತ್ತರ ಪ್ರದೇಶದಲ್ಲಿ 80 ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧಿಸಿತ್ತು. ಬರೋಬ್ಬರಿ 437 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಭಾರತೀಯ ಜನತಾ ಪಕ್ಷವು ಶೇ. 37.36 ಮತಗಳನ್ನು ಪಡೆದುಕೊಂಡಿತು, ಇದು 1989 ರ ಸಾರ್ವತ್ರಿಕ ಚುನಾವಣೆಯ ನಂತರ ರಾಜಕೀಯ ಪಕ್ಷವೊಂದು ಅತ್ಯಧಿಕ ಮತ ಪಡೆದುಕೊಂಡ ಇತಿಹಾಸವನ್ನೇ ನಿರ್ಮಾಣ ಮಾಡಿತ್ತು. ಮತ್ತು 303 ಕ್ಷೇತ್ರಗಳನ್ನು ಗೆದ್ದು, ಅದರ ಗಣನೀಯ ಬಹುಮತವನ್ನು ಮತ್ತಷ್ಟು ಹೆಚ್ಚಿಸಿಕೊಂಡಿತು. ಜೊತೆಗೆ, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಒಟ್ಟಾರೆಯಾಗಿ 353 ಕ್ಷೇತ್ರಗಳನ್ನು ಗೆದ್ದಿತ್ತು. ಬಿಜೆಪಿ ಶೇ. 37.76 ಮತಗಳನ್ನು ಗಳಿಸಿದರೆ, ಒಟ್ಟಾರೆಯಾಗಿ ಎನ್‌ಡಿಎ ಮೈತ್ರಿ ಮತವು 603.7 ಮಿಲಿಯನ್ ಮತಗಳಲ್ಲಿ ಶೇ. 45 ರಷ್ಟು ಮತಗಳನ್ನು ಗಳಿಸಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 52 ಕ್ಷೇತ್ರಗಳನ್ನು ಗೆದ್ದುಕೊಂಡಿತು, ವಿರೋಧ ಪಕ್ಷದ ಸ್ಥಾನವನ್ನು ಪಡೆಯಲು ಬೇಕಾದ  ಶೇ.10 ಕ್ಷೇತ್ರಗಳನ್ನು ಪಡೆಯಲು ವಿಫಲವಾಯಿತು . ಒಟ್ಟಾರೆಯಾಗಿ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) 91 ಕ್ಷೇತ್ರಗಳನ್ನು ಪಡೆದುಕೊಳ್ಳುವುವಲ್ಲಿ ಸಫಲವಾಯಿತು. ಇತರ ಪಕ್ಷಗಳು 98 ಸ್ಥಾನಗಳನ್ನು ಗೆದ್ದವು. ಇನ್ನು, ಕಾಂಗ್ರೆಸ್‌ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ತನ್ನ ವಶದಲ್ಲಿದ್ದ ೧೬೨ ಕ್ಷೇತ್ರಗಳನ್ನು ಕಳೆದುಕೊಂಡಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಇಲ್ಲಿಂದಲೇ ಕಾಂಗ್ರೆಸ್‌ ಪಾಲಿನ ದುರಿತ ಕಾಲಕ್ಕೆ ನಾಂದಿ ಸಿಕ್ಕ ಚುನಾವಣೆ ಎಂದರೇ ತಪ್ಪಿಲ್ಲ.

ಇನ್ನು, ಆರ್‌ಎಸ್‌ಎಸ್‌ ಮೂಲದಿಂದ ಹುಟ್ಟಿಕೊಳ್ಳುವ ಬಿಜೆಪಿಗೆ ಅನುಕೂಲವಾಗುವ ಎಲ್ಲಾ ಕಾರ್ಯತಂತ್ರಗಳಿಗೆ ಪ್ರತಿಯಾಗಿ ಒಂದು ಕಾರ್ಯತಂತ್ರಗಳನ್ನು ಹೆಣೆಯುವುದಕ್ಕೆ ಕಾಂಗ್ರೆಸ್‌ ಸೇರಿ ಪ್ರತಿಪಕ್ಷಗಳಿಗೆ ಈವರೆಗೆ ಗೋಚರಕ್ಕೆ ಬಂದಂತೆ ಕಾಣಿಸುತ್ತಿಲ್ಲ. ಕಾಂಗ್ರೆಸ್‌ ಹಾಗೂ ಪ್ರತಿಪಕ್ಷಗಳ ಎಲ್ಲಾ ಕಾರ್ಯತಂತ್ರಗಳು ಕೂಡ ಸೋತು ತಿರುಮಂತ್ರವಾಗುವಂತೆ ಬಿಜೆಪಿ ನೋಡಿಕೊಳ್ಳುತ್ತಿರುವುದು ವಿಪರ್ಯಾಸ, ಮತ್ತದು ಬಿಜೆಪಿಯ ಚಾಣಾಕ್ಷತನವೂ ಹೌದು. ಆಡಳಿತವನ್ನು ಪ್ರಶ್ನಿಸುವ ಎಲ್ಲವನ್ನೂ ಗೌಣವನ್ನಾಗಿಸುವ ವ್ಯವಸ್ಥೆ ಇಲ್ಲಿ ಭದ್ರವಾಗಿ ಸ್ಥಾಪಿಸಲ್ಪಡಲಾಗಿದೆ. ಭಾವನಾತ್ಮಕ ವಿಷಯಗಳನ್ನೇ ಮುಂದುಡುತ್ತಿರುವ ಬಿಜೆಪಿಗೆ ಪ್ರತಿತಂತ್ರವಾಗಿ ಸಕಾರಾತ್ಮಕ ಚಿಂತನೆಗಳನ್ನು ಮುಂಪಂಕ್ತಿಗೆ ತರುವಂತಹ ಕೆಲಸ ಕಾಂಗ್ರೆಸ್‌ನಿಂದ ಆಗಬೇಕಿದೆ. ಹಿರಿತಲೆಗಳನ್ನು ಸಮಾಧಾನ ಪಡಿಸುವುದರಲ್ಲೇ ಕಾಲ ಕಳೆದ ಕಾಂಗ್ರೆಸ್‌ನ ಧೋರಣೆಯಿಂದ ನೊಂದು ಎಷ್ಟೋ ಯುವ ನಾಯಕರು ಪಕ್ಷಾಂತರ ಮಾಡಿರುವ ಪಟ್ಟಿ ದೊಡ್ಡದಿದೆ. ಇನ್ನಾದರೂ ಕಾಂಗ್ರೆಸ್‌ ಹೊಸ ಧ್ವನಿಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮನಸ್ಸು ಮಾಡದೇ ಇದ್ದರೇ, ಭವಿಷ್ಯ ಹಸನಾಗಿರುವುದಂತೂ ಕಷ್ಟಸಾಧ್ಯ ಎಂದೇ ದಟ್ಟವಾಗಿ ಕಾಣಿಸುತ್ತಿದೆ.

ಈ ನಡುವೆ ಕಾಂಗ್ರೆಸ್ ನಂತಹ ಹಿರಿಯ ಪಕ್ಷದ ಪ್ರಭಾವಿ ನಾಯಕರು 'ದೇಶಕ್ಕಾಗಿ' ಎಂಬ ಕಾರಣಕೊಟ್ಟು ಕಾಂಗ್ರೆಸ್ ತೊರೆದು ಬಿಜೆಪಿ ಅಂಗಳವನ್ನು ಸೇರಿಕೊಂಡಿದ್ದಾರೆ. ಸದಾ ಕಾಂಗ್ರೆಸ್ ನನ್ನು ಭ್ರಷ್ಟ ಪಕ್ಷ, ಕುಟುಂಬ ರಾಜಕಾರಣದ ಪಕ್ಷ ಅಂತೆಲ್ಲಾ ಪುಂಖಾನುಪುಂಖವಾಗಿ ಟೀಕೆ ಮಾಡುತ್ತಿದ್ದ ಬಿಜೆಪಿ, ಈಗ ಒಮ್ಮಿಂದೊಮ್ಮೆಲೆ ಕಾಂಗ್ರೆಸ್ ತೊರೆದು ತನ್ನೆಡೆಗೆ ಬಂದವರನ್ನು 'ಅಪ್ಪಟ ಚಿನ್ನ' ಅನ್ನುತ್ತಿರುವ ಧೋರಣೆ ಎಂತದ್ದು ಎನ್ನುವುದೇ ಅರ್ಥವಾಗುತ್ತಿಲ್ಲ. ಬಿಜೆಪಿ ಎಲ್ಲಿ ಲಾಭ ಇದೆಯೋ ಅದನ್ನು ಸೆಳೆಯುವ ರಾಜಕಾರಣವನ್ನು ತನ್ನ ಹುಟ್ಟಿನಿಂದ ಮಾಡಿಕೊಂಡು ಬಂದಿದೆ ಎನ್ನುವುದಕ್ಕೊಂದು ಇದು ಸಣ್ಣ ಉದಾಹರಣೆ ಅಷ್ಟೆ. ಅವುಗಳ ಸಾಲಿನಲ್ಲಿ ರಾಮ ಮಂದಿರ, ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟ್ಯಾಚ್ಯೂ, 'ಭಾರತ ರತ್ನ'ವೂ ಸೇರಿವೆ ಎನ್ನುವುದು ಇಲ್ಲಿ ಗಮನಾರ್ಹ.  ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟಕ್ಕಂತೂ ಒಕ್ಕೂಟದ ಜತೆ ನಿರಂತರ ಸಂಪರ್ಕ ಹಾಗೂ ನಿಗಾ ವಹಿಸಲು ತಂಡ ರಚನೆ ಮಾಡುವಂತಹ ಪರಿಸ್ಥಿತಿ ಬಂದಿದೆ. ಉಳಿದದ್ದು ನೀವೇ ಯೋಚನೆ ಮಾಡಿ.

-ಶ್ರೀರಾಜ್‌ ವಕ್ವಾಡಿ  

 

Thursday, February 15, 2024

ತಂತ್ರಕ್ಕೆ ಪ್ರತಿತಂತ್ರ, ದುರ್ಬಲಗೊಂಡ ಕಾಂಗ್ರೆಸ್‌ !

 


ಒಂದು ʼಭಾರತ ರತ್ನʼ ಪ್ರತಿಪಕ್ಷಗಳ ಅಷ್ಟೂ ಮತಗಳನ್ನು ಸೆಳೆದುಕೊಳ್ಳುವಷ್ಟು ಬಲಶಾಲಿಯೇ ?

 ಬಿಜೆಪಿಗೆ ಪರ್ಯಾಯವಾಗಿ ಬೇರೊಂದು ಪಕ್ಷ ಉಳಿದುಕೊಂಡಿಲ್ಲವೇ ಎಂಬ ಪ್ರಶ್ನೆಯನ್ನು 2024ರ ಲೋಕಸಭಾ ಚುನಾವಣೆ ಮುಂದಿಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಲೋಕಸಭಾ ಚುನಾವಣೆಯ ಬಗ್ಗೆ ಬಹಳ ದೊಡ್ಡ ಮಟ್ಟದ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಮೂರನೇ ಬಾರಿ ಅಧಿಕಾರ ಹಿಡಿಯುವುದಕ್ಕೆ ಸಮಯ "ದೂರವಿಲ್ಲ" ಎಂದು ಪ್ರತಿಪಾದಿಸಿದರು. ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲಿರುವುದು ಮಾತ್ರವಲ್ಲದೇ ಮಿತ್ರಪಕ್ಷಗಳೊಂದಿಗೆ ಎನ್‌ಡಿಎ 400 ಕ್ಷೇತ್ರಗಳನ್ನು ಮೀರಿ ಗೆಲ್ಲಲಿದೆ ಎಂದು ಅವರು ದಿಟ್ಟ ಭವಿಷ್ಯ ನುಡಿದಿದ್ದಾರೆ.

ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ 3-0 ಸ್ಕೋರ್‌ಲೈನ್ ಬಿಜೆಪಿಗೆ ಮಹತ್ತರವಾದ ನಿರೀಕ್ಷೆಯನ್ನು ಮೂಡಿಸಿತ್ತು. ಗೆಲ್ಲುವ ಮೊದಲೇ ಗೆದ್ದೇ ಬಿಟ್ಟೆವು ಎಂಬ ಕನಸಿನಲ್ಲಿದ್ದ ರಾಜ್ಯದಲ್ಲಿಯೂ ಕಾಂಗ್ರೆಸ್‌ ಮುಗ್ಗರಿಸಿತ್ತು. ಕಾಂಗ್ರೆಸ್‌ ಸುಲಭವಾಗಿ ಮರಳಿ ಚೈತನ್ಯ ಪಡೆಯುವುದಕ್ಕೆ ಸದ್ಯಕ್ಕೆ ಸಾದ್ಯವಿಲ್ಲ ಎಂಬಂತಹ ಚರ್ಚೆಗಳು ಈ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಮೇಲೆದ್ದಿದ್ದವು ಮತ್ತು ದೇಶದಾದ್ಯಂತ ಸಕಾರಾತ್ಮಕ ಉತ್ಸಾಹವನ್ನು, ಹಿಂದುತ್ವದ ಹೊಸ ಉನ್ಮಾದವನ್ನು ಹುಟ್ಟುಹಾಕಿರುವ ರಾಮಮಂದಿರದ ಅದ್ಧೂರಿ ಲೋಕಾರ್ಪಣೆ, ದೇಶದಾದ್ಯಂತ ಹಬ್ಬಿದ ʼಜೈ ಶ್ರೀರಾಮ್‌ʼ ಘೋಷಣೆ ಮತ್ತು ಬಿಜೆಪಿಯನ್ನು ಎದುರಿಸಲು ಮೈತ್ರಿ ಮಾಡಿಕೊಳ್ಳುವಲ್ಲಿ ಪ್ರತಿಪಕ್ಷಗಳ ವೈಫಲ್ಯವು ಒಟ್ಟಾಗಿ ಕೇಸರಿ ಪಕ್ಷದ ಅವಕಾಶಗಳನ್ನು ಹೆಚ್ಚಿಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ʼಇಂಡಿಯಾʼ ಮೈತ್ರಿಕೂಟದ ಅನಿಶ್ಚಿತತೆ :

ಕಳೆದ ವರ್ಷ ಜುಲೈನಲ್ಲಿ ಭಾರೀ ಅಬ್ಬರದೊಂದಿಗೆ ಪ್ರಾರಂಭವಾದ ʼಇಂಡಿಯಾʼ ಮೈತ್ರಿಕೂಟದ ಸ್ಥಿತಿ ಥೇಟ್‌ ಉತ್ತರನ ಪೌರುಷದಂತಾಗಿದೆ. ಎಷ್ಟರ ಮಟ್ಟಿಗೆಂದರೆ ಅದು ಈಗ ಹಿಂದಿನ ಯುಪಿಎ ಅಲ್ಲಿದ್ದ ಚಾರ್ಮ್‌ಗಿಂತಲೂ ಕಡಿಮೆಯಾದಂತೆ ಕಾಣಿಸುತ್ತಿದೆ. ʼಇಂಡಿಯಾʼ ಮೈತ್ರಿಕೂಟದ ಸಂಚಾಲಕರಾಗುವ ಮಹತ್ವಾಕಾಂಕ್ಷೆ ಹೊಂದಿದ್ದ ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಅವರು ಎನ್‌ಡಿಎಗೆ ‘ಘರ್ವಾಪ್ಸಿ’ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾಂಗ್ರೆಸ್‌ ಮೇಲಿನ ಅಸಮಾಧಾನದಿಂದ ‘ಏಕ್ಲಾ ಚಲೋ ರೇ’ ತಂತ್ರಕ್ಕೆ ಮುಂದಾಗಿದ್ದಾರೆ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ 11 ಕ್ಷೇತ್ರಗಳನ್ನು ಮುಂದಿಟ್ಟು ʼಟೇಕ್ ಇಟ್ ಆರ್ ಲೀವ್ʼ ಆಫರ್ ನೀಡಿದ್ದಾರೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸಲಿವೆ.

ʼಇಂಡಿಯಾʼ ಮೈತ್ರಿಕೂಟ ರಚನೆ ಮತ್ತು ಕಳೆದ ವರ್ಷ ಅದರ ಸುತ್ತಲಿನ ಝೇಂಕಾರ 2019ರಲ್ಲಿ ಬಿಜೆಪಿಗೆ ಸಹಾಯ ಮಾಡಿದ್ದ 'ದೇರ್‌ ಈಸ್‌ ನೋ ಅಲ್ಟರ್ನೇಟಿವ್'  ತಂತ್ರವನ್ನು ತಟಸ್ಥಗೊಳಿಸುತ್ತದೆ ಎಂಬ ಕಲ್ಪನೆಯನ್ನು ಪ್ರಚೋದಿಸಿತ್ತು. ಆದರೆ ಮೈತ್ರಿಯು ಈಗ ಅನಿಶ್ಚಿತತೆಯಿಂದ ಬಳಲುತ್ತಿರುವುದಿಂದ  ಮತ್ತೆ ಬಿಜೆಪಿಗೆ ದೇಶದಲ್ಲಿ 'ದೇರ್‌ ಈಸ್‌ ನೋ ಅಲ್ಟರ್ನೇಟಿವ್' ಎಂಬ ಅಭಿಯಾನ ಮೋದಿಯ ಪರವಾಗಿ ಚುನಾವಣೆಯಲ್ಲಿ ನಿಶ್ಚಿತವಾಗಿ ಸಹಾಯ ಮಾಡಲಿದೆ ಎಂದು ದಟ್ಟವಾಗಿ ಕಾಣಿಸುತ್ತಿದೆ. ರಾಹುಲ್‌ ಗಾಂಧಿ ಹೋದಲ್ಲೆಲ್ಲಾ ʼಮೋದಿ ಪರʼ ಧ್ವನಿ ಹೆಚ್ಚಾಗಿಯೇ ಕೇಳಿಬರುತ್ತಿದ್ದು, ಸ್ವತಃ ರಾಹುಲ್‌ ಗೆ ಇದೊಂಥರ ಮುಜುಗರಕ್ಕೀಡು ಮಾಡುತ್ತಿದೆ. ಕಾಂಗ್ರೆಸ್‌ ನಲ್ಲಾಗಲಿ ಅಥವಾ ಮೈತ್ರಿಕೂಟದಲ್ಲಾಗಲಿ ವಿಶ್ವಾಸಾರ್ಹ ಮುಖವಿಲ್ಲ ಎಂಬ ಒಂದು ಅಭಿಪ್ರಾಯ ಈಗ ಭಾರತೀಯ ರಾಜಕೀಯ ವಲಯದಲ್ಲಿ ಸ್ಥಾಪಿಸಲ್ಪಟ್ಟಿದೆ ಎನ್ನುವುದು ಇಲ್ಲಿ ಮುಖ್ಯಾಂಶ.

ದುರ್ಬಲಗೊಂಡ ಕಾಂಗ್ರೆಸ್ :

ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸುವ ಸ್ಥಿತಿಯಲ್ಲಿ ಕಂಡುಬರುತ್ತಿಲ್ಲ. ಅದರ ಕಟ್ಟಾ ಬೆಂಬಲಿಗರ ಒಂದು ವರ್ಗವೂ ಕೂಡ ಈಗ ಇದೇ ಅಭಿಪ್ರಾಯಲ್ಲಿದೆ. ಹಿಂದಿ ಹೃದಯಭಾಗದಲ್ಲಿ ಕಾಂಗ್ರೆಸ್ ಎದುರಿಸಿದ ಹೀನಾಯ ಸೋಲು ಅದರ ಕೇಡರ್ ಮತ್ತು ಎರಡನೇ ಹಂತದ ನಾಯಕತ್ವವನ್ನು ಕೆಳಮಟ್ಟಕ್ಕಿಳಿಸಿದೆ. ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಪಿಎಂ ಮೋದಿ ಕಾಂಗ್ರೆಸ್‌ ವಿರುದ್ಧ ವಂಶ ಪಾರಂಪರ್ಯ ರಾಜಕೀಯವನ್ನು ಪದೇ ಪದೇ ಟೀಕಿಸುತ್ತಾರೆ. ಕುಟುಂಬ ರಾಜಕಾರಣ ಕಾಂಗ್ರೆಸ್‌ ಗೆ ಅಂಟಿದ ಒಂದು ಕಳಂಕವೂ ಹೌದು. ಇದನ್ನೇ ಬಿಜೆಪಿ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ನಿರಂತರ ಕಾಂಗ್ರೆಸ್‌ ಮೇಲೆ ಪ್ರಹಾರ ಮಾಡುತ್ತಲೇ ಬಂದಿದೆ. ಇವೆಲ್ಲಾ ಕಾಂಗ್ರೆಸ್‌ಗೆ ಎಂದಿಗೂ ನಷ್ಟಾಂಶವೇ ಆಗಿವೆ.

ಇನ್ನು, ಅಯೋಧ್ಯೆಯ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಬಹಿಷ್ಕರಿಸಿದ ತಪ್ಪುಗಳು, ಸೀಟು ಹಂಚಿಕೆ ಮಾತುಕತೆಯಲ್ಲಿ ವೈಫಲ್ಯ ಮತ್ತು ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವನ್ನು ಪ್ರಾರಂಭಿಸುವ ಸಮಯದಲ್ಲಿ ಪಕ್ಷದ ಗಮನ ಅಡಕತ್ತರಿಯಲ್ಲಿ ಇರಿಸಿದಂತಾಗಿದ್ದು ಎಲ್ಲವೂ ಕಾಂಗ್ರೆಸ್‌ ದುರ್ಬಲತೆಯನ್ನು ಎತ್ತಿ ತೋರಿಸುತ್ತಿದೆ. ಕಾಂಗ್ರೆಸ್ ಅನ್ನು 2024ರ ಲೋಕಸಭಾ ಚುನಾವಣಾ ಲೆಕ್ಕಾಚಾರದಿಂದ ಹೊರಹಾಕಿವೆ.

ಇನ್ನು, ಪ್ರಧಾನಿ ಮೋದಿ ದೇಶ ಆರ್ಥಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದೆ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ಭಾರತ ಈಗ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಮೋದಿ ಅವರ ಮೂರನೇ ಅವಧಿಯಲ್ಲಿ ದೇಶ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು 'ಮೋದಿ ಗ್ಯಾರಂಟಿ' ಎಂಬ ಬಿಜೆಪಿಯ ರಾಜಕೀಯ ಅಭಿಯಾನ ಚುನಾವಣೆಯಲ್ಲಿ ಧನಾತ್ಮಕ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ರಾಜಕೀಯದಲ್ಲಿ ಒಂದು ಮಾತಿದೆ. ʼಸುಳ್ಳನ್ನೇ ಹೇಳಿದರೂ ನೂರು ಸಾರ್ತಿ ಹೇಳಬೇಕು, ಆಗ ಆ ಸುಳ್ಳು ಕೂಡ ಸತ್ಯವಾಗಿ ಬದಲಾಗುತ್ತದೆʼ. ಬಿಜೆಪಿ ಈ ತಂತ್ರಗಾರಿಕೆಯನ್ನು ರಾಜಕೀಯದಲ್ಲಿ  ಬೇರೆಲ್ಲಾ ಪಕ್ಷಗಳಿಗಿಂತ ತುಸು ಹೆಚ್ಚೇ ಬಳಸಿಕೊಂಡಿದೆ ಹಾಗೂ ಇಲ್ಲಿನ ಜನರು ಕುರುಡಾಗಿ ನಂಬಿದ್ದಾರೆ ಕೂಡ. ಮಾತ್ರವಲ್ಲದೇ, ತಮ್ಮ ಸರ್ಕಾರ ಮನಮೋಹನ್ ಸಿಂಗ್ ಅವರ 10 ವರ್ಷಗಳ ಅವಧಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಅಷ್ಟಲ್ಲದೆ ಎಲ್ಲಾ ಪ್ರಧಾನ ಮಂತ್ರಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂಬ ಅಭಿಪ್ರಾಯವನ್ನು ಮತದಾರರ ಮನಸ್ಸಿನಲ್ಲಿ ನೆಲೆನಿಲ್ಲಿಸಲು ಪಿಎಂ ಮೋದಿ ಆಗಾಗ್ಗೆ "10 ವರ್ಷಗಳು ವರ್ಸಸ್ 70 ವರ್ಷಗಳು" ಎಂಬ ಘೋಷಣೆಯನ್ನು ಬಳಸುತ್ತಾರೆ.

ಆರ್ಥಿಕ ಅಸಮಾನತೆ, ಬೆಲೆ ಏರಿಕೆ, ನಿರುದ್ಯೋಗ ಮತ್ತು ಕೃಷಿ ವಿಚಾರಗಳ ಸುತ್ತ ಸಮಸ್ಯೆಗಳಿದ್ದರೂ, ಮತದಾರರು ತಮ್ಮ ಪ್ರತಿಪಕ್ಷಗಳಿಗೆ ಹೋಲಿಸಿದರೆ ಈ ಸಮಸ್ಯೆಗಳನ್ನು ಪರಿಹರಿಸಲು  ಅಲ್ಲಿ ವಿಶ್ವಾಸಾರ್ಹ ನಾಯಕನ ಕೊರತೆ ಇರುವುದರಿಂದ ಮೋದಿ ಸಹಜವಾಗಿ ರಾಜಕೀಯದ ವೈಭವೋಪೇತ ವರ್ಚಸ್ಸಿನಲ್ಲಿದ್ದಾರೆ.  

ಬಿಜೆಪಿ 25 ಕೋಟಿ ಜನರನ್ನು ಬಹು ಆಯಾಮದ ಬಡತನದಿಂದ ಹೊರ ತಂದಿದೆ ಎಂದು ಹೇಳಲಾಗುತ್ತದೆ. 4 ಕೋಟಿ ಮನೆಗಳನ್ನು ನಿರ್ಮಿಸಿದೆ ಎಂದು ಮೋದಿ ಆಗಾಗ ಹೇಳುತ್ತಾರೆ. ಯುವಕರು, ಮಹಿಳೆಯರು, ರೈತರು ಮತ್ತು ಬಡವರನ್ನು ಕೇಂದ್ರೀಕರಿಸಿಕೊಂಡ ಹಲವಾರು ಯೋಜನೆಗಳ ಮೂಲಕ ಬಿಜೆಪಿ ಮತದಾರರ ದೊಡ್ಡ ಸಮೂಹವನ್ನೇ ತನ್ನ ತೆಕ್ಕೆಯೊಳಗೆ ಹಾಕಿಕೊಂಡಿದೆ. ಗರೀಬ್ (ಬಡವರು), ಕಿಸಾನ್ (ರೈತರು), ಯುವ (ಯುವಕರು) ಮತ್ತು ಮಹಿಳಾ ಎಂಬ ನಾಲ್ಕು ಪ್ರಮುಖ ಸಮೂಹಗಳ ಕೇಂದ್ರೀಕರಿಸಿಕೊಂಡ ಯೋಜನೆಗಳು ಬಿಜೆಪಿಗೆ ದೊಡ್ಡ ಲಾಭವನ್ನೇ ತಂದುಕೊಡಬಹುದಾಗಿದೆ. ಇತ್ತ ವಿವಿಧ ಬೇಡಿಕೆಗಳನ್ನಿಟ್ಟು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ರೈತರನ್ನು ತಡೆದಿದೆ. ರೈತರು ಬರುವ ದಾರಿಗೆ ಕಬ್ಭಿಣದ ಮೊಳೆ, ತಡೆಗೋಡೆಗಳನ್ನು ನಿರ್ಮಿಸಿ ಪ್ರತಿಭಟನೆಯನ್ನು ಪೊಲೀಸರಿಂದ ಅಶ್ರುವಾಯು ಪ್ರಯೋಗ ಮಾಡಿಸಿದೆ. ಇದು ಮೋದಿ ನೇತೃತ್ವದ ಸರ್ಕಾರದ ಇನ್ನೊಂದು ಮುಖ.

ಹಿಂದುಳಿದ ವರ್ಗಗಳು ಭಾರತದಲ್ಲಿನ ಜನಸಂಖ್ಯೆಯ ಅತ್ಯಧಿಕ ಪಾಲನ್ನು ಹೊಂದಿದ್ದು, ಅಂದಾಜು ಶೇ. 45 ರಿಂದ  ಶೇ.50 ರಷ್ಟಿದೆ. ಪಿಎಂ ಮೋದಿ ಸ್ವತಃ ಒಬಿಸಿ ನಾಯಕರಾಗಿರುವುದರಿಂದ ಬಿಜೆಪಿ ಇಂದು ಅತಿ ಹಿಂದುಳಿದ ಒಬಿಸಿಗಳ ಆಯ್ಕೆಯ ಪಕ್ಷವಾಗಿದೆ. ಸೆಂಟರ್‌ ಫಾರ್‌ ದಿ ಸ್ಟಡಿ ಆಫ್‌ ಡೆವಲಾಪಿಂಗ್‌ ಸೊಸೈಟಿಸ್ ನೀಡಿದ ಮಾಹಿತಿಯ ಪ್ರಕಾರ, ಹಿಂದುಳಿದ ವರ್ಗಗಳ ಬೆಂಬಲವು 10 ವರ್ಷಗಳಲ್ಲಿ ದ್ವಿಗುಣಗೊಂಡಿದೆ(2009 ರಲ್ಲಿ ಶೇ. 23 ಮತ್ತು 2019 ರಲ್ಲಿ  ಶೇ.44) ಎಂದು ಹೇಳಲಾಗಿದೆ. ಇನ್ನು, ಕರ್ಪೂರಿ ಠಾಕೂರ್‌ಗೆ ʼಭಾರತ ರತ್ನʼ ಮತ್ತು ನಿತೀಶ್ ಕುಮಾರ್ ಎನ್‌ಡಿಎ ಗೆ ಘರ್ವಾಪ್ಸಿ, ರೈತರ ನಾಯಕ ಚೌಧರಿ ಚರಣ್‌ ಸಿಂಗ್‌, ನರಸಿಂಹ ರಾವ್‌ ಹಾಗೂ ಎಂಎಸ್‌ ಸ್ವಾಮಿನಾಥನ್‌, ಎಲ್‌ಕೆ ಅಡ್ವಾಣಿ ಅವರಿಗೆ ʼಭಾರತ ರತ್ನʼ ಘೋಷಣೆ ಮಾಡಿರುವುದೆಲ್ಲವೂ ರಾಹುಲ್ ಗಾಂಧಿಯವರ ʼಜಿತ್ನಿ ಅಬಾದಿ ಉತ್ನಾ ಹಕ್ʼ (ಜನಸಂಖ್ಯೆಗೆ ಅನುಗುಣವಾಗಿ ಹಕ್ಕುಗಳು) ಘೋಷಣೆಯನ್ನು ಬಿಜೆಪಿ ಪಂಕ್ಚರ್ ಮಾಡಿದಂತಿದೆ. ಒಂದು ʼಭಾರತ ರತ್ನʼ ಪ್ರತಿಪಕ್ಷಗಳ ಅಷ್ಟೂ ಮತಗಳನ್ನು ಸೆಳೆದುಕೊಳ್ಳುವಷ್ಟು ಮಾಂತ್ರಿಕ ಶಕ್ತಿಯನ್ನು ಹೊಂದಿದೆಯೇ ? ಪ್ರಶ್ನೆ ಮುಂದಿದೆ.

ಇನ್ನು, ವಿರೋಧ ಪಕ್ಷಗಳ ನಾಯಕರ ಮೇಲೆ ಜಾರಿ ನಿರ್ದೇಶನಾಲಯದ ದಾಳಿಗಳು ಮತ್ತು ನಂತರದ ಅನೇಕ ಉನ್ನತ ಮಟ್ಟದ ನಾಯಕರ ಬಂಧನಗಳು, ವಿರೋಧ ಪಕ್ಷದ ನಾಯಕತ್ವವು ಭ್ರಷ್ಟವಾಗಿದೆ ಎಂಬ ನಿರೂಪಣೆಯನ್ನು ಸ್ಥಾಪಿಸಲು ಬಿಜೆಪಿ ಅಧಿಕಾರವನ್ನು ಬಳಸಿಕೊಂಡಿದೆ. ಇವೆಲ್ಲಾ ಮೋದಿಗೆ ಕೆಡಿಸಲಾಗದ ಇಮೇಜ್ ಅನ್ನು ನೀಡುವಲ್ಲಿ ಸಹಾಯ ಮಾಡಿದವು. 2014ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿಯು 2ಜಿ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಹಗರಣಗಳು ಮತ್ತು ಕಾಂಗ್ರೆಸ್ ಅನ್ನು ಗುರಿಯಾಗಿಸಲು ರಾಹುಲ್ ಗಾಂಧಿಯವರ ಭಾವ ಹಾಗೂ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರ ಹಾಗೂ ರಿಯಲ್ ಎಸ್ಟೇಟ್ ಕಂಪನಿ ಡಿಎಲ್‌ಎಫ್ ನಡುವಿನ ವಿವಾದಿತ ಭೂ ಖರೀದಿ ಒಪ್ಪಂದ ಹಗರಣವನ್ನು ಮೇಲೆ ತಂದಿತ್ತು. ಇದು ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಅಧಿಕಾರಕ್ಕೆ ಬಂದ ಮೇಲಂತೂ ಬಿಜೆಪಿ ತನ್ನ ವಿರೋಧ ಪಕ್ಷಗಳನ್ನು ಮೌನಗೊಳಿಸಲು ಕೇಂದ್ರೀಯ ಸಂಸ್ಥೆಯನ್ನು ನಿರಂತರವಾಗಿ ಬಳಸುತ್ತಿದೆ. ಇವೆಲ್ಲಾ ಮತದಾರನಲ್ಲಿ ಬಿಜೆಪಿ ಮೇಲೆ ವಿಶ್ವಾಸ ಮೂಡಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಇವೆಲ್ಲಾ ಗಣನೆಗೆ ಬರುವುದಂತೂ ಸತ್ಯ. ಹಾಗಾದರೆ, 2024ರಲ್ಲಿ ಎನ್‌ಡಿಎ 400 ಕ್ಷೇತ್ರಗಳನ್ನು ದಾಟಬಹುದೇ? ಕಾಂಗ್ರೆಸ್‌ ಹಾಗೂ ʼಇಂಡಿಯಾʼ ಮೈತ್ರಿಕೂಟದ ಸ್ಥಿತಿ ಏನು ? ಉಳಿದದ್ದನ್ನು ನಿಮಗೆ ಮೀಸಲಿಡುತ್ತೇನೆ. ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ

Thursday, February 8, 2024

ಆಂತರಿಕ ಪ್ರಕ್ಷುಬ್ಧತೆಯಲ್ಲಿ ʼಇಂಡಿಯಾʼ ಮೈತ್ರಿಕೂಟ

 


ಕೂಡಿ ಬರದ ಮೈತ್ರಿ ಮತ್ತು ಕಾಂಗ್ರೆಸ್‌ ಪಾಲಿನ ರಾಜಕಾರಣದ ವಿಷಘಳಿಗೆ !

ಲೋಕಸಭಾ ಚುನಾವಣೆ ಸನಿಹವಾಗುತ್ತಿದ್ದಂತೆ ಕಾಂಗ್ರೆಸ್‌ನ ಧೋರಣೆ ʼಬೇರು ಗಟ್ಟಿಯಾಗಿರದಿರುವಾಗ ರೆಂಬೆ ಕೊಂಬೆಗಳು ಗಟ್ಟಿಯಾಗಿ ಬೆಳೆಯಬೇಕು ಎಂಬ ಹುಂಬತನʼದಂತಿದೆ ಎಂಬಂತೆ ಕಾಣಿಸುತ್ತಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಹುಟ್ಟಿಕೊಂಡ ವಿರೋಧ ಪಕ್ಷಗಳ ʼಇಂಡಿಯಾʼ ಮೈತ್ರಿಕೂಟ ಈಗ ಆಂತರಿಕ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದೆ. ಯಾವುದೇ ಕಾರಣಕ್ಕೂ ಬಿರುಕು ಮೂಡಬಾರದು ಎಂದು ಶಪತ ಮಾಡಿಕೊಂಡಿದ್ದ ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಮೈತ್ರಿಕೂಟ ಈಗ ಅಪ್ಪ ಅಮ್ಮ ಇಲ್ಲದಂತಾಗಿದೆ. ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ "ಏಕ್ಲಾ ಚಲೋ ರೆ" ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಏಕಾಂಗಿಯಾಗಿ ಚುನಾವಣೆಯನ್ನು ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಮೈತ್ರಿಯಿಂದ ದೂರವಿದ್ದಂತೆ ಕಾಣಿಸುತ್ತಿದ್ದರೂ, ಇಲ್ಲ ಮೈತ್ರಿಯನ್ನು ಮುರಿದುಕೊಂಡಿಲ್ಲ ಎಂದೇ ಕಾಂಗ್ರೆಸ್‌ ಹಿರಿತಲೆಗಳು ಹೇಳುತ್ತಿವೆ.

ಎಎಪಿ ಕೂಡ ಪಂಜಾಬ್‌ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ನಿರ್ಧರಿಸಿದೆ, ಕಾಂಗ್ರೆಸ್‌ನೊಂದಿಗೆ ತಿಂಗಳುಗಳ ಅನಿರ್ದಿಷ್ಠಾವಧಿ ಮಾತುಕತೆಯನ್ನು ಕೊನೆಗೊಳಿಸಿ ಆಪ್‌ ಈ ನಿರ್ಧಾರಕ್ಕೆ ಬಂದಿದೆ. ನಿತೀಶ್ ಕುಮಾರ್, ʼಇಂಡಿಯಾʼ ಮೈತ್ರಿಕೂಟದ ಪ್ರಬಲ ನಾಯಕರಾಗಿ ಕಾಣಿಸಿಕೊಂಡಿದ್ದರು. ಮತ್ತೆ ಎನ್‌ಡಿಎ ತೆಕ್ಕೆಗೆ ಮರಳಿದ್ದಾರೆ. ಶಿವಸೇನೆ (ಯುಬಿಟಿ) ಕೂಡ ಮಹಾರಾಷ್ಟ್ರದಲ್ಲಿ 23 ಕ್ಷೇತ್ರಗಳಿಗೆ ಬೇಡಿಕೆಯಿಡುತ್ತಿದೆ. ಪ್ರಾದೇಶಿಕ ಪ್ರಬಲ ಪಕ್ಷಗಳನ್ನು ವಿಶ್ವಾಸ ಗಳಿಸಿಕೊಳ್ಳುವಲ್ಲಿ ವಿಫಲಗೊಂಡಿವೆ ಎನ್ನುವುದಕ್ಕೆ ಇವೇ ಕೆಲವಂಶಗಳು ಸಾಕು. ಏತನ್ಮಧ್ಯೆ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಮಾತುಕತೆಯು ಉತ್ತರ ಪ್ರದೇಶದಲ್ಲಿ ಕೆಲವು ರೀತಿಯ ತಡೆಯನ್ನು ಸೃಷ್ಟಿ ಮಾಡಿದೆ. ಕಾಂಗ್ರೆಸ್ 20 ಕ್ಷೇತ್ರಗಳಿಗೆ ಬೇಡಿಕೆ ಇಡುತ್ತಿದ್ದರೇ, ಅಖಿಲೇಶ್ ಯಾದವ್ 11 ಕ್ಷೇತ್ರಳನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ.   

ʼಇಂಡಿಯಾʼ ಮೈತ್ರಿಕೂಟದ ಇಂತಹ ಕೆಲವು ಗೊಂದಲಗಳು ಬಿಹಾರ, ಪಂಜಾಬ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಫಲಿತಾಂಶದ ಮೇಲೆ ದಟ್ಟವಾಗಿ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಈ ರಾಜ್ಯಗಳು ಒಟ್ಟಾರೆಯಾಗಿ 223 ಕ್ಷೇತ್ರಗಳನ್ನು ಹೊಂದಿವೆ, 2019ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅರ್ಧಕ್ಕಿಂತ ಹೆಚ್ಚು (122) ಗೆದ್ದಿದೆ, ಇವು ಲೋಕಸಭೆಯ ಬಲದ ಶೇ. 41 ರಷ್ಟಿದೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ. ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಏನೇ ಆಗಲಿ ಈ ಬಾರಿ ಸೋಲಿಸಬೇಕು ಎಂಬ ಸಂಕಲ್ಪದೊಂದಿಗೆ ಸೃಷ್ಟಿಯಾದ ಮೈತ್ರಿಕೂಟ ತನಗೆ ಹೆಚ್ಚು ಕ್ಷೇತ್ರಗಳು ಎಲ್ಲಿ ಸಿಗುವ ಸಂಭಾವ್ಯತೆ ಇದೆಯೋ ಅಲ್ಲೇ ಈ ರೀತಿಯ ಗೊಂದಲ ಸೃಷ್ಟಿ ಮಾಡಿಕೊಂಡಿರುವುದು ನೋಡಿದರೇ, ಈ ರಾಜ್ಯಗಳಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಕ್ಷೇತ್ರಗಳಿಗಿಂತ ಹೆಚ್ಚು ಬಿಜೆಪಿ ಗಳಿಸಬಹುದು ಅಂತನ್ನಿಸುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ಗೆ 42 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲು ಆರಂಭದಲ್ಲಿ ಒಪ್ಪಿದ ಟಿಎಂಸಿ ಈಗ ಎಲ್ಲಾ 42 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದೆ. 2019 ರಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ಮೈತ್ರಿ ಮಾಡಿಕೊಂಡಿದ್ದರೆ, ಟಿಎಂಸಿ  22 ಕ್ಷೇತ್ರಗಳಿಗಿಂತ 6 ಹೆಚ್ಚು ಕ್ಷೇತ್ರಗಳನ್ನು ಗಳಿಸಬಹುದಿತ್ತು. ನಿರೀಕ್ಷೆಯಂತೆ ಏನೂ ಆಗಿಲ್ಲ. ಪ. ಬಂಗಾಳದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ, ಅಮಿತ್‌ ಶಾ ವಾರಗಟ್ಟಲೇ ಅಲ್ಲೇ ಚುನಾವಣಾ ಪ್ರಚಾರ ಮಾಡಿದರೂ ದೀದಿ ಅಭೂತಪೂರ್ವಾಗಿ ಗೆದ್ದರು, ಅದಕ್ಕೂ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಮೂರು ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಂಡಿದ್ದ ಬಿಜೆಪಿ, 77 ಕ್ಷೇತ್ರಗಳನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿತು. ಕಾಂಗ್ರೆಸ್‌ ತನ್ನಲ್ಲಿದ್ದ 44 ವಿಧಾನಸಭಾ ಕ್ಷೇತ್ರಗಳನ್ನೂ ಕಳೆದುಕೊಂಡಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೀದಿ ಹಾಗೂ ಬಿಜೆಪಿ ಪರವಾಗಿ ಬಂದ ಮತಗಳು ಕಾಂಗ್ರೆಸ್‌ನ ವಿರುದ್ಧವಾಗಿ ಬಂದ ಮತಗಳು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ದೀದಿ ಈಗ ಪ್ರಸ್ತಾಪಿಸುತ್ತಿರುವ ವಿಷಯ ಇದೆ ಆಗಿದೆ. ಕಾಂಗ್ರೆಸ್‌ ಅದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ.

ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂಬ ಮಾತುಗಳಿತ್ತು. ಆದರೇ, ಪಂಜಾಬ್ ಮುಖ್ಯಮಂತ್ರಿ ಭಗವಂತ್‌ ಮಾನ್‌, ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. 2022ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಪ್ ಕಾಂಗ್ರೆಸ್ ಅನ್ನು ಸೋಲಿಸಿತು. ಆಪ್‌ ಅಂದು ಕಾಂಗ್ರೆಸ್‌ನೊಂದಿಗೆ ಸೇರಿಕೊಂಡಿದ್ದರೆ, ಕಾಂಗ್ರೆಸ್‌ ವಿರುದ್ಧದ ಮತಗಳು ಅಕಾಲಿದಳ ಅಥವಾ ಬಿಜೆಪಿ ಕಡೆಗೆ ವಾಲುತ್ತಿತ್ತು. ಆಪ್‌ ಪಂಜಾಬ್‌ನಲ್ಲಿ ಈಗ ತನ್ನದೇ ಆದ ಒಂದು ಹೆಜ್ಜೆಗುರುತನ್ನು ಹಾಕಿಕೊಂಡಿದೆ. ಕಾಂಗ್ರೆಸ್‌ ಒಲವು ಇಲ್ಲಿ ಹೆಚ್ಚಿಲ್ಲ. ಹಾಗಾಗಿ ಆಪ್‌ ಇಲ್ಲಿ ಏಕಾಂಗಿಯಾಗಿ ಸ್ಪರ್ಧೆಗೆ ಇಳಿಯಲು ಮುಂದಾಗಿರುವುದು ಆಶ್ಚರ್ಯವೇನಲ್ಲ. 

ಬಿಹಾರದಲ್ಲಿ ನಿತೀಶ್ ಕುಮಾರ್ ಆರ್‌ಜೆಡಿ-ಎಡ-ಕಾಂಗ್ರೆಸ್ ಮೈತ್ರಿಯನ್ನು ಕೈಬಿಟ್ಟು ಮತ್ತೆ ಎನ್‌ಡಿಎ ಸೇರಿದ್ದಾರೆ. ಈ ಬೆಳವಣಿಗೆ ಬಿಹಾರದಲ್ಲಿ ಎನ್‌ಡಿಎ ಕ್ಷೇತ್ರಗಳನ್ನು ಬಲಪಡಿಸುತ್ತದೆ, ಎನ್‌ಡಿಎ ಮೈತ್ರಿ 2019ಲೋಕಸಭಾ ಚುನಾವಣೆಯಲ್ಲಿ 40 ಕ್ಷೇತ್ರಗಳ ಪೈಕಿ  39 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಗ್ರ ಸ್ಥಾನಕ್ಕೆ ಏರಿತ್ತು. ನಿತೀಶ್ ಇಲ್ಲದಿದ್ದರೆ, ಜೆಡಿಯು, ಆರ್‌ಜೆಡಿ, ಐಎನ್‌ಸಿ ಮತ್ತು ಎಡಪಕ್ಷಗಳನ್ನು ಒಳಗೊಂಡಿರುವ ಸಂಯೋಜಿತ ವಿರೋಧದ ಮುಖಾಂತರ ಇಲ್ಲಿ ಎನ್‌ಡಿಎ ಸಂಖ್ಯಾಬಲ ಕ್ಷೀಣಿಸುತ್ತಿತ್ತು. ಬಿಹಾರದಲ್ಲಿ ನಿತೀಶ್‌ ಕುಮಾರ್‌ ನಿರ್ಣಾಯಕ ಪಾತ್ರ ವಹಿಸುತ್ತಾರೆ. ʼಇಂಡಿಯಾʼ ಮೈತ್ರಿಕೂಟ ನಿತೀಶ್‌ ಕುಮಾರ್‌ ಅವರನ್ನು ಉಳಿಸಿಕೊಳ್ಳಬೇಕಿತ್ತು. ನಿತೀಶ್‌ ಕುಮಾರ್‌ ಪಕ್ಷಾಂತರ ಮಾಡುವ ಹೊತ್ತಿಗೆ ರಾಹುಲ್‌ ಗಾಂಧಿ ಯಾತ್ರೆಯಲ್ಲಿ ಇದ್ದರೆ, ಮಲ್ಲಿಕಾರ್ಜುನ್‌ ಖರ್ಗೆ ಹೋಮ್ ಟೌನ್ ಅಲ್ಲಿದ್ದರು. ನಿತೀಶ್‌ ಕುಮಾರ್‌ ಅವರನ್ನು ತಡೆಯುವ ಯಾವ ಸಾಧ್ಯತೆಗಳು ದೆಹಲಿಯ ರಾಜಕೀಯ ವಲಯದಲ್ಲಿರಲಿಲ್ಲ.

ಇನ್ನು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಎನ್‌ಸಿಪಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, 4 ಕ್ಷೇತ್ರಗಳನ್ನು ಸಣ್ಣ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಆದರೆ, ಉದ್ಧವ್‌ ಠಾಕ್ರೆಯ ಶಿವಸೇನೆ ಬಣದ ಬೇಡಿಕೆ ಇಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.  ಶಿವಸೇನೆಯ 18 ಸಂಸದರ ಪೈಕಿ 13 ಮಂದಿ ಈಗ ಏಕನಾಥ್ ಶಿಂಧೆ ಬಣದಲ್ಲಿದ್ದಾರೆ. ಇದರ ಹೊರತಾಗಿಯೂ, ಉದ್ಧವ್‌ ಬಣ 23 ಕ್ಷೇತ್ರಗಳ ಬೇಡಿಕೆ ಇಟ್ಟಿದೆ.

ಯುಪಿಯಲ್ಲಿ ಎಸ್‌ಪಿ 7 ಸೀಟುಗಳನ್ನು ಆರ್‌ಎಲ್‌ಡಿಗೆ ಹಂಚಿಕೆ ಮಾಡಿದ್ದರೆ, ಕಾಂಗ್ರೆಸ್ 20 ಸೀಟುಗಳಿಗೆ ಬೇಡಿಕೆ ಇಟ್ಟಿದೆ. 2014ರಲ್ಲಿ ಎಲ್ಲ ವಿರೋಧ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಕಾಂಗ್ರೆಸ್ 2 ಕ್ಷೇತ್ರಗಳನ್ನು ಗೆದ್ದು ತೃಪ್ತಿಪಟ್ಟುಕೊಂಡಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಸದ್ಯ ಆರ್‌ಎಲ್‌ಡಿ ಕೂಡ ʼಇಂಡಿಯಾʼ ಮೈತ್ರಿ ತೊರೆದು ಎನ್‌ಡಿಎ ಮೈತ್ರಿಗೆ ಸೇರ್ಪಡೆಗೊಳ್ಳುವ ಸಾದ್ಯತೆ ಇದೆ ಎಂಬ ಮಾತುಗಳಿವೆ. ಆರ್‌ಎಲ್‌ಡಿ ಕೂಡ ಮೈತ್ರಿ ತೊರೆದರೇ ಮತ್ತೆ ಸಂಕಷ್ಟ.

ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆಯಲು 26 ವಿರೋಧ ಪಕ್ಷಗಳು ಒಗ್ಗೂಡಿ ʼಇಂಡಿಯಾ ʼ ಮೈತ್ರಿಕೂಟ ರಚನೆಯಾಗಿತ್ತು. ಯುಪಿಎಯನ್ನು ಐ.ಎನ್.ಡಿ.ಐ.ಎ ಎಂದು ಮರುನಾಮಕರಣ ಮಾಡಲಾಯಿತು. ಜುಲೈನಲ್ಲಿ ವಿರೋಧ ಪಕ್ಷಗಳ ಸಭೆಯಲ್ಲಿ ಯುಪಿಎ ಮೂಲತಃ ಆರ್‌ಜೆಡಿ, ಡಿಎಂಕೆ, ಜೆಎಂಎಂ, ಎನ್‌ಸಿಪಿ ಹಾಗೂ ಐಯುಎಂಎಲ್‌ ಪಕ್ಷಗಳು ಸೇರಿ ಇತರ ಕೆಲವು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡಿತ್ತು. ಸದ್ಯ, ಜೆಡಿಯು, ಶಿವಸೇನೆ (ಉದ್ಧವ್ ಬಣ), ಟಿಎಂಸಿ, ಎಸ್‌ಪಿ ಮತ್ತು ಎಎಪಿ ಹಾಗೂ ಇತರೆ ಪ್ರಮುಖ ಪ್ರಾದೇಶಿಕ ಪಕ್ಷಗಳ ಸೇರ್ಪಡೆಯೊಂದಿಗೆ ತನ್ನ ಬಲವನ್ನು ವೃದ್ಧಿಸಿಕೊಂಡಿತು, ತನ್ನ ನೆಲೆ ಮತ್ತು ವ್ಯಾಪ್ತಿಯನ್ನು ವಿಸ್ತರಿಸಿತು.

ಆರಂಭದಲ್ಲಿ, ʼಇಂಡಿಯಾʼ ಮೈತ್ರಿ ವಿರೋಧ ಪಕ್ಷಗಳಲ್ಲಿ ಆಶಾವಾದವನ್ನು ಹುಟ್ಟುಹಾಕಿತು, ಅನೇಕ ರಾಜಕೀಯ ವಿಶ್ಲೇಷಕರು ಮತ್ತು ತಜ್ಞರು ಮುಂಬರುವ ಏಪ್ರಿಲ್-ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಪ್ರಬಲ ಸವಾಲು ಎಸೆಯಬಹುದು ಎಂದು ಭವಿಷ್ಯ ನುಡಿದಿದ್ದರು. ಮೈತ್ರಿಯು ಮಾಧ್ಯಮಗಳ ಗಮನವನ್ನು ಸೆಳೆದಿತ್ತು. ದೊಡ್ಡ ಮಟ್ಟದಲ್ಲೇ ಎನ್‌ಡಿಎ ಸರ್ಕಾರಕ್ಕೆ ಸವಾಲೆಸೆಯಬಹುದೆಂಬ ಚರ್ಚೆ ಎದ್ದಿತ್ತು.

ಇನ್ನು, ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಗಳ ಪೈಕಿ ಮೂರು ರಾಜ್ಯಗಳನ್ನು ಗೆಲ್ಲಬಹುದು ಎಂದು ಹೇಳಲಾಗಿತ್ತು. ಅಲ್ಲಿಯೂ ಒಂದಿಷ್ಟು ಗೊಂದಲ. ಈ ಚುನಾವಣೆಗಳಲ್ಲಿ ಮೈತ್ರಿಯಾಗಿ ಸ್ಪರ್ಧಿಸದೇ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿ ರಾಜ್ಯ ಚುನಾವಣೆಗಳತ್ತ ಹೆಚ್ಚು ಗಮನ ನೀಡಿದ್ದು, ʼಇಂಡಿಯಾʼ ಮೈತ್ರಿಯಲ್ಲಿ ಕಾಂಗ್ರೆಸ್‌ ಮೇಲೆ ವಿಶ್ವಾಸ ಕಡಿಮೆ ಆಗುವುದಕ್ಕೆ ಕಾರಣವಾಯ್ತು.  ಚುನಾವಣಾ ಫಲಿತಾಂಶ ಬಂದಾಗ, ದು ರಾಜ್ಯಗಳ ಪೈಕಿ ತೆಲಂಗಾಣದಲ್ಲಷ್ಟೇ ಕಾಂಗ್ರೆಸ್ ಗೆಲ್ಲುವುದರಲ್ಲಿ ಸಫಲವಾಯ್ತು. ಅಷ್ಟೊತ್ತಿಗಾಗಲೇ ಮಿತ್ರಪಕ್ಷಗಳು ಕಾಂಗ್ರೆಸ್‌ನ ಧೋರಣೆಯಿಂದ ಅತೃಪ್ತಿಯನ್ನು ಹೆಚ್ಚಿಸಿಕೊಂಡು ಭಿನ್ನಾಭಿಪ್ರಾಯದ ಬೀಜಗಳನ್ನು ಬಿತ್ತತೊಡಗಿದವು.

2019ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 422 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಬಾರಿ ಟಿಎಂಸಿ ಸೇರಿದಂತೆ ಪ್ರಾದೇಶಿಕ ಶಕ್ತಿಗಳು 300 ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್‌ನನ್ನು ವಿನಂತಿಸಿದ್ದವು, ಅಂದರೆ ಪರೋಕ್ಷವಾಗಿ ಯುಪಿ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಬಾರದು ಎಂದು ಅವು ಬಯಸಿದ್ದವು. ಈಗ ಬಂಗಾಳ ಮತ್ತು ಪಂಜಾಬ್‌ ನಲ್ಲಿ ಸೀಟು ಹಂಚಿಕೆ ಬಗೆಹರಿಯದೇ ಇರುವ ಕಾರಣ, ಎಲ್ಲರ ಕಣ್ಣುಗಳು ಈಗ ಯುಪಿ ಮೇಲೆ ನೆಟ್ಟಿದೆ. ಒಂದು ವೇಳೆ ಅಲ್ಲಿಯೂ ಮೈತ್ರಿ ಕಾರ್ಯರೂಪಕ್ಕೆ ಬರದಿದ್ದರೆ ʼಇಂಡಿಯಾʼ ಮೈತ್ರಿಕೂಟ ಪರಿಣಾಮಕಾರಿಯಾಗಿ ನಿಷ್ಕ್ರಿಯಗೊಳ್ಳಬಹುದೇನೋ. ರಾಮ ಮಂದಿರದ ಉನ್ಮಾದದ ನಡುವೆಯೂ ಕಾಂಗ್ರೆಸ್‌ ನ ದುಸ್ಥಿತಿಯ ಕಾಲದಲ್ಲಿಯೂ ಇಲ್ಲಿ 20 ಕ್ಷೇತ್ರಗಳ ಬೇಡಿಕೆ ಮೈತ್ರಿಯ ಮುಂದಿಟ್ಟಿರುವುದು ಆಶ್ಚರ್ಯವೇ ಸರಿ.

ಒಂದು ವೇಳೆ ʼಇಂಡಿಯಾʼ ಮೈತ್ರಿಕೂಟ ಮುರಿದು ಹೋದರೇ, ಮತ್ತೆ ಹಳೆಯ ʼಯುಪಿಎʼಯೇ ಗತಿ. ಯುಪಿಎ 2019ಲೋಕಸಭಾ ಚುನಾವಣೆಯಲ್ಲಿ ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಜಾರಿಯಲ್ಲಿತ್ತು, ಆ ರಾಜ್ಯಗಳಲ್ಲಿ ಒಟ್ಟು ಕೇವಲ 161 ಕ್ಷೇತ್ರಗಳು. ಲೋಕಸಭೆಯ ಬಲದ ಶೇ. 30ರಷ್ಟು ಕ್ಷೇತ್ರಗಳನ್ನಷ್ಟೇ ಹೊಂದಿವೆ. ಅಂದರೇ, ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳ ಸ್ಥಿತಿ ಎಲ್ಲಿಯವರೆಗೆ ಹೋಗಿ ತಲುಪಬಹುದೆಂದು ನೀವೇ ಊಹಿಸಿಕೊಳ್ಳಿ.

ರಾಮಮಂದಿರದ ಲೋಕಾರ್ಪಣೆಯ ನಂತರ ದೇಶದಲ್ಲಿ ಹೆಚ್ಚಿದ ಒಂದು ರೀತಿಯ ಭಾವನಾತ್ಮಕ ಕಂಪನ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಮಹತ್ವದ ಲಾಭವನ್ನು ತಂದುಕೊಡಲಿದೆ ಎನ್ನುವುದು ನಿಶ್ಚಿತ. ʼಇಂಡಿಯಾʼ ಮೈತ್ರಿಕೂಟ ಪ್ರಸ್ತುತ ಸಂಪೂರ್ಣ ಅಸ್ತವ್ಯಸ್ತವಾಗಿರುವಂತಿದೆ. ರಾಹುಲ್‌ ಗಾಂಧಿ ಸೂಕ್ತವಲ್ಲದ ಕಾಲದಲ್ಲಿ ಯಾತ್ರೆಯಲ್ಲಿದ್ದಾರೆ. ರಾಹುಲ್‌ ನಡತೆ ಕಾಂಗ್ರೆಸ್‌ ನಡತೆಯೇ ? ಅಥವಾ ಮೈತ್ರಿಕೂಟದ ನಡತೆ ಆಗಲಿಕ್ಕೆ ಸಾಧ್ಯವೇ ? ರಾಹುಲ್‌ ಒಬ್ಬ ಪ್ರಬುದ್ಧ ನಾಯಕನಾಗಿ ಬದಲಾಗಿದ್ದನ್ನು ಒಪ್ಪುವವರು, ʼಕಾಂಗ್ರೆಸ್‌ನ ನಾಯಕʼನನ್ನಾಗಿ ಒಪ್ಪುವುದಕ್ಕೆ ಸಾಧ್ಯವೇ ? ಮೈತ್ರಿ ಆಗಿ ಬರುತ್ತಿಲ್ಲ. ಇದೊಂದು ಕಾಂಗ್ರೆಸ್‌ಗೆ ವಿಷಘಳಿಗೆಯೇ ಸರಿ. ಮತ್ತೆ ಮತ್ತೆ ಯಾಕೋ ನನಗೆ ರಾಹುಲ್ ನತದೃಷ್ಟ ನಾಯಕ ಅಂತನ್ನಿಸುತ್ತಿದ್ದಾರೆ. ಉಳಿದದ್ದು ನಿಮ್ಮ ಯೋಚನೆಗೆ ಮೀಸಲಿಟ್ಟಿದ್ದು.

-ಶ್ರೀರಾಜ್‌ ವಕ್ವಾಡಿ