ಸರ್ವಪಕ್ಷದ ನಾಯಕರು ಲೋಕಾಯುಕ್ತದ ಬಲ ಕುಂದುವುದನ್ನೇ ಕಾದು ಕುಳಿತಿದ್ದರು..!
2016ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಲು ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳವನ್ನು ರಚಿಸಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅಪರಾಧ ದಾಖಲಿಸಲು ಹಾಗೂ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ಹೊಂದಿದ್ದ ಅಧಿಕಾರವನ್ನು ಹಿಂಪಡೆದು ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ರದ್ದುಪಡಿಸಿ ರಾಜ್ಯ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಈ ತೀರ್ಪಿನಿಂದ ಎಸಿಬಿ ಪೂರ್ಣ ಪ್ರಮಾಣದಲ್ಲಿ ರದ್ದಾಗಿದೆ. ಈ ತೀರ್ಪು ಈಗ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿದೆ.
ರಾಜಕಾರಣಿಗಳ ಸಿಂಹಸ್ವಪ್ನದಂತಿದ್ದ ಲೋಕಾಯುಕ್ತರ ಅಧೀನದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೇರ್ಪಡಿಸಿ ಸರ್ಕಾರದ ಅಧೀನಕ್ಕೆ ತೆಗೆದುಕೊಂಡಿದೆ ಎಂಬ ಆರೋಪವೂ ಇದೆ. ೨೦೧೫ರಲ್ಲಿ ಮುಖ್ಯ ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು, ಮಾತ್ರವಲ್ಲದೇ ಈ ಪ್ರಕರಣದಲ್ಲಿ ಅವರ ಮಗ ಜೈಲು ಪಾಲಾಗಿದ್ದರು. ಬಹುತೇಕ ರಾಜ್ಯಗಳಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ತನಿಖಾ ಸಂಸ್ಥೆಯನ್ನು ರಚಿಸಿಕೊಂಡಿದ್ದವು ಎಂಬ ಕಾರಣಕೊಟ್ಟು ಸಿದ್ದರಾಮಯ್ಯ ಸರ್ಕಾರ, ಜನ ಪ್ರತಿನಿಧಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯಲ್ಲಿಯೇ ಬೆಳಕಿಗೆ ಬಂದ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹ ದಳವೊಂದನ್ನು ತನ್ನ ಅಧೀನಕ್ಕೊಳಪಡುವ ಹಾಗೆ ರಚಿಸಿತ್ತು. ಇದಕ್ಕೂ ಮುಂಚೆ ಈ ಭ್ರಷ್ಟಾಚಾರ ನಿಗ್ರಹ ದಳ ಲೋಕಾಯುಕ್ತ ಸಂಸ್ಥೆಯ ಒಂದು ಮುಖ್ಯ ಅಂಗವಾಗಿತ್ತು. ಆಡಳಿತ ಸುಧಾರಣೆ ಇಲಾಖೆಯ ಅಧೀನಕ್ಕೆ ಒಳಪಡುವ ಭ್ರಷ್ಟಾಚಾರ ನಿಗ್ರಹ ದಳವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ತನ್ನ ಅಧೀನಕ್ಕೆ ತೆಗೆದುಕೊಂಡಿತ್ತು ಎನ್ನುವುದು ಇಲ್ಲಿ ಗಮನಾರ್ಹ ವಿಷಯ. ಒಟ್ಟಿನಲ್ಲಿ, ಈಗ ಲೋಕಾಯುಕ್ತ ತನ್ನ ಹಳೆ ಖದರ್ ಪಡೆಯುವಂತಾಗಬೇಕು ಎಂಬ ಹೈಕೋರ್ಟ್ ನೀಡಿದ ಆದೇಶದಿಂದಾಗಿ ಕೆಲವು ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ರದ್ದು - ಮರುಜೀವ ಕಂಡ ಲೋಕಾಯುಕ್ತ : ಲೋಕಾಯುಕ್ತ ರದ್ದು – ಮರು ಜೀವ ಕಂಡಿದ್ದು ಇದೇ ಮೊದಲಲ್ಲ. ಇದ್ದೂ ಇಲ್ಲದಂತೆ ಕೂಡ ಆಗಿದ್ದಿದೆ. ನಾಗರಿಕರ ಕುಂದುಕೊರತೆಗಳಿಗೆ ಪರಿಹಾರ ನೀಡುವುದಕ್ಕೆ ಸಲುವಾಗಿ ೧೯೬೬ರಲ್ಲಿ ಆಡಳಿತ ಸುಧಾರಣಾ ಆಯೋಗದ ವರದಿಯು ಫೆಡರಲ್ ಮಟ್ಟದಲ್ಲಿ ಲೋಕಪಾಲ ಹಾಗೂ ರಾಜ್ಯ ಮಟ್ಟದಲ್ಲಿ ಲೋಕಾಯುಕ್ತವನ್ನು ಸ್ಥಾಪಿಸಲು ಶಿಫಾರಸ್ಸು ಮಾಡಿತ್ತು. ದೇವರಾಜ್ ಅರಸ್ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಆರ್ಡಿನೆನ್ಸ್ ಆಕ್ಟ್ ೧೯೭೯ನನ್ನು ಮೊಟ್ಟಮೊದಲ ಬಾರಿಗೆ ಚಲಾಯಿಸಿದರು ಮತ್ತು ರಾಜ್ಯಕ್ಕೆ ಮೊದಲ ಲೋಕಾಯುಕ್ತರನ್ನು ನೇಮಕ ಮಾಡಿಕೊಳ್ಳಲಾಯಿತು. ದೇವರಾಜ್ ಅರಸ್ ಅವರ ನಿಧನದ ನಂತರ ಆರ್. ಗುಂಡೂರಾವ್ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದಾಗ ಇದೇ ಸಂಸ್ಥೆಯನ್ನು ರದ್ದುಗೊಳಿಸಲಾಯಿತು ಎನ್ನುವುದು ಇಲ್ಲಿ ಗಮನಾರ್ಹ. ತರುವಾಯ ರಾಮಕೃಷ್ಣ ಹೆಗ್ಡೆ ಅವರು ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ವಿಧಾನಸಭೆಯಲ್ಲಿ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತ ಮಸೂದೆಯನ್ನು ೧೯೮೩ರ ಚುನಾವಣಾ ಪ್ರಣಾಳಿಕೆಯ ಅನ್ವಯ ಪರಿಚಯಿಸಿದ ನಂತರ ಈ ಸಂಸ್ಥೆಗೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ೧೯೮೪ರ ಮೂಲಕ ರಾಜ್ಯದಲ್ಲಿ ಮರುಜೀವ ತುಂಬಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಒಮ್ಮೊಮ್ಮೆ ಜೀವನ್ಮೃತ ಸ್ಥಿತಿಯಲ್ಲಿಯೂ ಈ ಸಂಸ್ಥೆ ಕಾರ್ಯ ನಿರ್ವಹಿಸಿದ ಉದಾಹರಣೆಯೂ ಇದೆ. ೨೦೧೫ರಲ್ಲಿ ಸಂಸ್ಥೆಯಲ್ಲಿಯೇ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಸಂಸ್ಥೆಯ ಬಲ ಕುಂದಿಸಿ ಪ್ರತ್ಯೇಕ ಎಸಿಬಿಯನ್ನು ರಚಿಸಿ ತನ್ನ ಅಧೀನದಲ್ಲಿ ಇರುವ ಹಾಗೆ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿತ್ತು. ಇನ್ನು, ಅಧಿಕಾರಕ್ಕೆ ಬಂದರೇ ಎಸಿಬಿಯನ್ನು ರದ್ದುಗೊಳಿಸುವುದಾಗಿ ತನ್ನ ಚುನಾವಣಾ ಪ್ರಣಾಳಿಯಲ್ಲಿ ಬಿಜೆಪಿ ಹೇಳಿಕೊಂಡಿತ್ತು, ಅದಕ್ಕೆ ಪೂರಕವೆಂಬಂತೆ ಈಗ ಹೈಕೋರ್ಟ್ ತೀರ್ಪು ನೀಡಿದೆ. ಅಂತೆಯೇ ಬಿಜೆಪಿ ಸರ್ಕಾರ ರಾಜಕೀಯ ಲಾಭ ಹಾಗೂ ಮುಂದೆ ಎದುರಾಗಬಲ್ಲ ಎಲ್ಲಾ ಅನಾಹುತಗಳನ್ನು ಅಳೆದು ತೂಗಿ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯಂತೆಯೇ, ಲೋಕಾಯುಕ್ತಕ್ಕೆ ಮತ್ತೆ ಮೊದಲಿನ ಬಲ ನೀಡುವಂತೆ ಹೈಕೋರ್ಟ್ ಆದೇಶಿಸಿದಂತೆಯೇ ನಡೆದುಕೊಳ್ಳುವುದಾಗಿ ಹೇಳಿರುವುದು ಗಮನಾರ್ಹ.
ಖದರ್ ವೆಂಕಟಾಚಲ ಬೇಟೆಗೆ ಬೆದರಿದ ರಾಜಕಾರಣ : ೨೦೦೧ ರಿಂದ ೨೦೦೬ರವರೆಗೆ ಕರ್ನಾಟಕದ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್. ವೆಂಕಟಾಚಲ ಭ್ರಷ್ಟಾಚಾರದ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿದ ಕೆಲವೇ ಕೆಲವು ಲೋಕಾಯುಕ್ತರಲ್ಲಿ ಒಬ್ಬರು. ಕರ್ಣಾಟಕದ ಎಲ್ಲಾ ಜಿಲ್ಲೆಗಳಲ್ಲಿ ಓಡಾಡಿ ಆಸ್ಪತ್ರೆ, ಸರ್ಕಾರಿ ಕಚೇರಿಗಳು, ಖಾಸಗಿ, ಅರೆಖಾಸಗಿ ಕಚೇರಿಗಳು, ಸರ್ಕಾರಕ್ಕೆ ಒಳಪಡುವ ಎಲ್ಲಾ ಇಲಾಖೆಗಳ ಮೇಲೆ ದಾಳಿ ಮಾಡಿ ಭ್ರಷ್ಟಾಚಾರದ ಕರಾಳ ಮುಖವನ್ನು ಬಟ್ಟಬಯಲಾಗಿಸಿದರು. ಅಧಿಕಾರದ ಮದದಲ್ಲಿ ಆಸ್ತಿಬಾಕ ಅಧಿಕಾರಿಗಳ ಅಕ್ರಮ ಆಸ್ತಿಪಾಸ್ತಿಗಳನ್ನು ಹೊರಕ್ಕೆ ತೆಗೆದರು. ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಸೇವೆಯಿಂದ ಅಮಾನತುಗೊಳಿಸಲು ಶಿಫಾರಸು ಮಾಡಿದರು. ರಾಜ್ಯ ರಾಜಧಾನಿ ಬೆಂಗಳೂರಿನ ಸುತ್ತಮುತ್ತಲಿದ್ದ ಐದು ನಗರ ಸಭೆಗಳಲ್ಲಿ ನಡೆದ ಸಾವಿರಾರು ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು, ಅವ್ಯವಹಾರವನ್ನು ತೆರೆದಿಟ್ಟರು. ಲೋಕಾಯುಕ್ತ ಸಂಸ್ಥೆಯ ಪವರ್ನನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟರು. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ವೆಂಕಟಾಚಲ ಅವರ ನಿವೃತ್ತಿಯ ಬಳಿಕ ಅವರ ಸಾಮಾಜಿಕ ಕಾಳಜಿ, ಪ್ರಾಮಾಣಿಕತೆ, ನ್ಯಾಯ ನಿಷ್ಠುರತೆ ನೋಡಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನೇತೃತ್ವದ ಕರ್ನಾಟಕ ಸರ್ಕಾರ ಇವರನ್ನು ಲೋಕಾಯುಕ್ತರನ್ನಾಗಿ ನೇಮಿಸಿಕೊಂಡಿತ್ತು. ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದಲ್ಲಿ ದೇಶದ ಪ್ರಧಾನಿಯನ್ನೂ ಕೂಡ ಸ್ವತಂತ್ರ ತನಿಖಾ ಸಂಸ್ಥೆಗಳು ವಿಚಾರಣೆಗೆ ಒಳಪಡಿಸುವಂತಹ ಬ್ರಿಟನ್ನಲ್ಲಿರುವ ಭ್ರಷ್ಟಾಚಾರ ತಡೆ ಕಾನೂನು ನಮ್ಮ ದೇಶದಲ್ಲಿಯೂ ಬರಬೇಕು ಎಂಬ ಅಭಿಪ್ರಾಯವನ್ನು ವೆಂಕಟಾಚಲ ಹೊಂದಿದ್ದರು. ಕಾರ್ಯಾಂಗದಲ್ಲಿನ ಲಂಚಬಾಕತನದ ಕರಾಳ ಮುಖಕ್ಕೆ ಬಿಗ್ ಶಾಕ್ ನೀಡಿದ ಅಂದಿನ ಲೋಕಾಯುಕ್ತರಾಗಿದ್ದ ವೆಂಕಟಾಚಲವರ ಕಾರ್ಯವೈಖರಿಗೆ ಲೋಕಾಯುಕ್ತರಾಗಿ ನೇಮಿಸಿಕೊಂಡಿದ್ದ ಅಂದಿನ ಸರ್ಕಾರದ ಕೆಲವು ಸಚಿವರು ಹಾಗೂ ಇಡೀ ರಾಜಕೀಯ ವಲಯವೂ ಕೂಡ ಬೆದರಿತ್ತು ಎನ್ನುವುದು ಇಲ್ಲಿ ಮುಖ್ಯಾಂಶ.
ಸಂತೋಷ್ ಹೆಗ್ಡೆ ಎಂಬ ರಾಜಕಾರಣಿಗಳ ಪಾಲಿನ ದುಸ್ವಪ್ನ : ರಾಜಕಾರಣಿಗಳ ಕನಸಿನಲ್ಲಿಯೂ ಲೋಕಾಯುಕ್ತಾ ಕಾಣುವ ಹಾಗೆ ಮಾಡಿದ ನಾಡು ಕಂಡ ಉತ್ತಮ ಲೋಕಾಯುಕ್ತರೆಂದರೇ ಅದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ. ವೆಂಕಟಾಚಲ ಅವರ ಲೋಕಾಯುಕ್ತ ಅಧಿಕಾರವಧಿಯ ಬಳಿಕ ಕರ್ನಾಟಕ ಲೋಕಾಯುಕ್ತರಾಗಿ ನೇಮಕಗೊಂಡವರು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದ ಹೆಗ್ಡೆ, ಭ್ರಷ್ಟರ ಹುಟ್ಟಡಗಿಸಿ ಇಡೀ ದೇಶಕ್ಕೆ ಲೋಕಾಯುಕ್ತದ ಖದರ್, ಪವರ್ ಏನು ಎಂಬುವುದನ್ನು ಮತ್ತೆ ಪರಿಚಯಿಸಿಕೊಟ್ಟರು. ಬಳ್ಳಾರಿ ಗಣಿಗಳಲ್ಲಿ ಕಂಡು ಬಂದ ಕ್ರಮಬಾಹೀರ ಚಟುವಟಿಕೆಗಳನ್ನು ಹೆಗ್ಡೆ ಬಟ್ಟಬಯಲುಗೊಳಿಸಿ, ಗಣಿ ದೊರೆಗಳ ಅಟ್ಟಹಾಸದ ಹುಟ್ಟಡಗಿಸಿದರು. ಓಬಳಾಪುರಂ ಮೈನಿಂಗ್ ಕಂಪೆನಿಯ ಸ್ವಾಮ್ಯತ್ವದಲ್ಲಿರುವ ಹಾಗೂ ರಾಜ್ಯ ಸರ್ಕಾರದ ಸಂಪುಟದಲ್ಲಿ ಸಚಿವರಾಗಿದ್ದ ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ ಮಾಲೀಕತ್ವದ ಗಣಿಗಳೂ ಕೂಡ ಇವುಗಳಲ್ಲಿ ಸೇರಿದ್ದವು ಎನ್ನುವುದು ಇಲ್ಲಿ ಗಮನಾರ್ಹ.
ಬಳ್ಳಾರಿಯ ಕಬ್ಬಿಣ ಹಾಗೂ ಅದಿರಿನ ಗಣಿಗಾರಿಕೆಯಲ್ಲಿ ನಡೆಯುತ್ತಿದ್ದ ನಿಯಮ ಬಾಹೀರ ಚಟುವಟಿಕೆಗಳು, ಭ್ರಷ್ಟಾಚಾರಗಳನ್ನು ವರದಿ (೧೬೦. ೮೫ ಶತಕೋಟಿ ವಂಚನೆ ಪ್ರಕರಣ) ಮೂಲಕ ಹೆಗ್ಡೆ ಬಹಿರಂಗಗೊಳಿಸಿದರು. ಗಣಿಗಾರಿಕೆಗೆ ಅವಕಾಶ ನೀಡಿದ್ದ ಭೌಗೋಳಿಕ ಪ್ರದೇಶದಲ್ಲಿನ ಉಲ್ಲಂಘನೆ, ಅರಣ್ಯ ಪ್ರದೇಶದ ಒತ್ತುವರಿ, ರಾಜ್ಯ ಗಣಿಗಾರಿಕೆಯ ರಾಯಧನಗಳು ತುಲನಾತ್ಮಕವಾಗಿ ತೀರಾ ಅಲ್ಪ ಪ್ರಮಾಣದಲ್ಲಿ ಪಾವತಿಯಾಗಿರುವುದು ಹಾಗೂ ಸರ್ಕಾರದ ಗಣಿಗಾರಿಕಾ ಅಸ್ತಿತ್ವದಲ್ಲಿನ ಅವ್ಯವಸ್ಥೆಗಳೆಲ್ಲವೂ ಹೆಗ್ಡೆ ಸೃಷ್ಟಿಸಿದ ವರದಿಗೆ ಸಾಕ್ಷಿಗಳಾಗಿ ದೊರೆತವು. ಗಣಿದೊರೆಗಳಿಗೆ ಜೈಲೂಟ ಉಣ್ಣಿಸಿದರು. ಇನ್ನು, ಅವ್ಯಾಹತವಾಗಿ ನಡೆದ ಪ್ರತಿಭಟನೆ, ಸಾರ್ವಜನಿಕ ವಲಯದ ಒತ್ತಡದ ತರುವಾಯ ೩೫ ಲಕ್ಷ ಮೆಟ್ರಿಕ್ ಟನ್ನುಗಳಷ್ಟು ಕಬ್ಬಿನದ ಅದಿರಿನ ಒಳಗೊಂಡಿರುವ, ಬೇಲಿಕೇರಿ ಬಂದರಿನಲ್ಲಿ ನಡೆದ ಕಾನೂನು ಬಾಹೀರ ಕಬ್ಬಿಣ – ಅದಿರಿನ ರಫ್ತು ವ್ಯವಹಾರವನ್ನು ರಾಜ್ಯ ಸರ್ಕಾರದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ. ಎಸ್ ಯಡಿಯೂರಪ್ಪ ಒಪ್ಪಿಕೊಂಡರು. ಈ ಪ್ರಕರಣವು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಹುದ್ದೆಗೆ ರಾಜೀನಾಮೆ ನೀಡುವಂತಾಗಿ ಜೈಲಿಗೆ ಕಳುಹಿಸಿತ್ತು.
ಇನ್ನು, ಕೈಗಾರಿಕಾ ಯೋಜನೆಗಳಿಗೆ ಸಂಬAಧಿಸಿದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿನ ೧೦೭ ಕೋಟಿ ಮೌಲ್ಯದ ವಂಚನೆಯನ್ನು ಹೆಗ್ಡೆ ಬಯಲುಗೊಳಿಸಿದ್ದರು. ಹೀಗೆ ಲಂಚಬಾಕ, ಅಧಿಕಾರ ದಾಹಿ ಜನ ಪ್ರತಿನಧಿಗಳ ವಿರುದ್ಧ ಸರಣಿ ಕೇಸುಗಳನ್ನು ದಾಖಲಿಸಿ ಸೇವೆಯಿಂದ ಅಮಾನತು ಮಾಡುವಂತೆ ಶಿಪಾರಸ್ಸು ಮಾಡುವುದರ ಮೂಲಕ ಅಧಿಕಾರಿಳು ಹಾಗೂ ರಾಜಕಾರಣಿಗಳ ಪಾಲಿಗೆ ಹೆಗ್ಡೆ ದುಸ್ವಪ್ನದಂತಾಗಿದ್ದಂತೂ ಸತ್ಯ.
ಲೋಕಾಯುಕ್ತ ಬಲ ಕುಂದುವುದನ್ನೇ ಕಾದಿದ್ದ ಸರ್ವಪಕ್ಷದ ನಾಯಕರು : ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರ ಮೇಲೆಯೇ ಕೇಳಿ ಬಂದಿದ್ದ ಭ್ರಷ್ಟಾಚಾರದ ಆರೋಪದಿಂದಾಗಿ ವಿಶೇಷ ತನಿಖಾ ಸಂಸ್ಥೆಗೆ ಪ್ರಕರಣದ ತನಿಖೆ ನಡೆಸುವ ಬೆಳವಣಿಗೆ ನಡೆಯಿತು. ತನಿಖೆಯಲ್ಲಿ ಅಂದು ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ಪುತ್ರ ಅಶ್ವಿನ್ ಲೋಕಾಯುಕ್ತ ಹೆಸರಿನಲ್ಲಿ ಲಂಚ ಕೇಳಿದ ವಿಚಾರ ಬಯಲಾಯಿತು. ನಂತರ ಸಿದ್ದರಾಮಯ್ಯ ಸರ್ಕಾರ ಪರೋಕ್ಷವಾಗಿ ಲೋಕಾಯುಕ್ತದಿಮದ ಎಸಿಬಿಯನ್ನು ಬೇರ್ಪಡಿಸಿ ಲೋಕಾಯುಕ್ತದ ಬಲ ಕುಂದಿಸುವ ಹಾಗೆ ಮಾಡಿತ್ತು. ಅದು ಲೋಕಾಯುಕ್ತ ಇದ್ದರೂ ಇಲ್ಲದ ಹಾಗಿನ ಸ್ಥಿತಿಗೆ ತಂದಿಟ್ಟಿತ್ತು. ಇದು ರಾಜಕಾರಣಿಗಳ ಪಾಲಿಗೆ ಸಿಹಿ ಸುದ್ದಿಯಾಗಿತ್ತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಲೋಕಾಯುಕ್ತದಿಂದಾಗಿ ಹಲವಾರು ಅಧಿಕಾರಿಗಳು, ರಾಜಕಾರಣಿಗಳು ಜೈಲು ವಾಸ ಕಾಣುವಂತಾಗಿದೆ. ಹಲವು ಘಟಾನುಘಟಿ ನಾಯಕರ ವಿರುದ್ಧ ದೂರು ಕೂಡ ದಾಖಲಾಗಿದ್ದವು. ಎಸಿಬಿ ರಚನೆಯಿಂದಾಗಿ ಲೋಕಾಯುಕ್ತ ತನ್ನ ಬಲಕಳೆದುಕೊಂಡಿತ್ತು. ದೂರುಗಳು ವಿಚಾರಣೆಯಾಗದೇ ಹಾಗೆ ಉಳಿದಿದ್ದವು. ಈಗ ಮತ್ತೆ ಲೋಕಾಯುಕ್ತಕ್ಕೆ ಬಲಬರುವಂತಾಗಿದ್ದು, ಘಟಾನುಘಟಿಗಳ ಎದೆಯಲ್ಲಿ ಕಂಪನ ಆರಂಭವಾಗಿದೆ.
-ಶ್ರೀರಾಜ್ ವಕ್ವಾಡಿ


.jpeg)




