Thursday, July 7, 2022

ಉದ್ಧವ್ ಪರಾಜಯ, ಶಿಂಧೆ ‘ಮಹಾ’ಜಯ..!

ಬಿಜೆಪಿ ನಿರ್ದೇಶನ, ಅಘಾಡಿ ಪತನ, ಮರಾಠ ಸೂತ್ರ - ಶಿಂಧೆ ಪಾತ್ರ...! 

ಮಹಾ ವಿಕಾಸ್ ಅಘಾಡಿ ಮುರಿದ ಮೇಲೆ ಬೀದಿ ರಾಜಕಾರಣದ ಕಿಂಗ್ ಎಂದೇ ಖ್ಯಾತನಾಮರಾದ, ಉದ್ಧವ್ ಠಾಕ್ರೆ ಪಡೆ ಎದುರು ಬಂಡೆದ್ದ ಏಕನಾಥ್ ಶಿಂಧೆ ಶಿವಸೇನೆಯ ಶಾಸಕಾಂಗ ನಾಯಕ ಮಾನ್ಯತೆ ಪಡೆಯುವುದರೊಂದಿಗೆ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಜಕೀಯವ ವಲಯ ಊಹಿಸಿಯೇ ಇರಲಿಲ್ಲ. ‘ಸೂಪರ್ ಸಿಎಂ, ಮೈತ್ರಿ ಮೇಲಿನ ಅಸಮಾಧಾನ, ಅತೃಪ್ತರ ಬಂಡಾಯ, ಅನರ್ಹತೆಯ ಅಸ್ತ್ರ, ಸುಪ್ರೀಂ ಕೋರ್ಟ್ ಆದೇಶ, ಉದ್ಧವ್ ಪರಾಜಯ, ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನಾಂದಿ, ಶಿಂಧೆ ಮುಖ್ಯಮಂತ್ರಿ, ಫಡ್ನವಿಸ್ ಉಪಮುಖ್ಯಮಂತ್ರಿ, ಮರಾಠ ಲೆಕ್ಕಾಚಾರ’ ಎಲ್ಲವೂ ದಿಢೀರ್ ಅಂತಾಗಿ ಮಹಾ ಅಚ್ಚರಿ ಸೃಷ್ಟಿಯಾಯಿತು.  

ಈ ಹಿಂದೆ ಬಿಜೆಪಿ ದೊಡ್ಡ ಜಾತಿ ಲೆಕ್ಕಾಚಾರವನ್ನೇ ಮಾಡಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮರಾಠರ ಶ್ರೇಷ್ಠ ಬಲಿದಾನದ ಇತಹಾಸ ಸಾರುವ ಮಹಾರಾಷ್ಟ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಆದ ಶೇಕಡಾ ೬೧ರಷ್ಟು ಮತದಾನದಲ್ಲಿ ಶೇಕಡಾ ೨೭.೫೯ ರಷ್ಟು (೧,೪೯,೧೨,೧೩೯),  ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಒಟ್ಟು ಆದ ಶೇಕಡಾ ೬೧.೪ ರಷ್ಟು ಮತದಾನದಲ್ಲಿ ಶೇಕಡಾ ೨೫.೭೫ ರಷ್ಟು (೧೪,೧೯೯,೩೭೫) ಮತಗಳನ್ನು ಎನ್‌ಡಿಎ ಮೈತ್ರಿ ಸರ್ಕಾರ ಪಡೆದುಕೊಂಡಿತ್ತು. ಮಹಾರಾಷ್ಟ್ರದ ಮರಾಠ ಒಲವಿನ ಪ್ರಾಂತೀಯ ಸಿದ್ದಾಂತದ ಎದುರು ಬಿಜೆಪಿಯ ರಾಷ್ಟ್ರೀಯವಾದ ಹಾಗೂ ಹಿಂದುತ್ವವಷ್ಟೇ ಕೆಲಸ ಮಾಡುವುದಿಲ್ಲ ಎನ್ನುವುದು ಸ್ವತಃ ಬಿಜೆಪಿಗೂ ಗೊತ್ತಿದೆ. ಪ್ರಾಂತೀಯ ಮರಾಠ ಪ್ರಭಾವದ ಹೈಪರ್ ಹಿಂದುತ್ವದ ಗಾಳಿ ಮಹಾರಾಷ್ಟ್ರದಲ್ಲಿ ಅಡಿಗಡಿಗೂ ಇದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಮಹಾರಾಷ್ಟ್ರದ ವಿಚಾರಕ್ಕೆ ಬಂದರೇ, ಹಿಂದೆ ಮುಂದೆ ನೋಡುವುದು ಈ ‘ಮರಾಠ’ ವಿಚಾರಕ್ಕೆ ಅಷ್ಟೇ. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷ ಏಕಾಂಗಿಯಾಗಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಉದಾಹರಣೆ ಮಹಾರಾಷ್ಟ್ರದಲ್ಲಿ ಇಲ್ಲ. ಬಿಜೆಪಿಗೆ ಮಹಾರಾಷ್ಟçದಲ್ಲಿ ಪ್ರಾಂತೀಯ ಪಕ್ಷವನ್ನು ಆಧರಿಸಿಕೊಳ್ಳಲೇ ಬೇಕು. ಕ್ರಮಾನುಸಾರವಾಗಿ ಒಟ್ಟು ೪೮ ಲೋಕಸಭಾ ಕ್ಷೇತ್ರಗಳಲ್ಲಿ ೨೦೦೪ರ ಚುನಾವಣೆಯಲ್ಲಿ ೧೩ ಕ್ಷೇತ್ರಗಳು, ೨೦೦೯ರಲ್ಲಿ ೯ ಕ್ಷೇತ್ರಗಳು, ೨೦೧೪ರಲ್ಲಿ ೨೩ ಕ್ಷೇತ್ರಗಳು ಹಾಗೂ ಮತ್ತೆ ೨೦೧೯ರಲ್ಲಿ ೨೩ ಕ್ಷೇತ್ರಗಳನ್ನು ಬಿಜೆಪಿ ಪಡೆದುಕೊಂಡಿತ್ತು. ಈ ಹಿಂದಕ್ಕೆ ಹೋದರೇ, ಬಿಜೆಪಿಯ ಹೆಸರು ಅಲ್ಲಲ್ಲಿ ಕೇಳುತ್ತಿತ್ತಷ್ಟೇ ಹೊರತು ಮತ್ತೇನಿರಲಿಲ್ಲ. ಸ್ವಲ್ಪ ಜೀವ ಬಂದಿದ್ದಿದ್ದರೇ ಅದು ೨೦೧೪ರ ನಂತರವಷ್ಟೇ. ಈಗ ಬಿಜೆಪಿಗೆ ಇರುವುದು ೨೦೨೪ರ ಗುರಿ. ಬಿಜೆಪಿಗೆ ಎಲ್ಲಾ ಆಯಾಮದಲ್ಲಿಯೂ ಮಹಾರಾಷ್ಟ್ರ ಬಹಳ ಮುಖ್ಯ. ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ್ ಹೆಸರನ್ನು ಬಿಜೆಪಿ ರಾಜಕೀಯಕ್ಕಾಗಿ ಬಳಸಿಕೊಂಡಿದೆ. ಹಿಂದುತ್ವದ ಕ್ಷಾತ್ರ ಧ್ವನಿ ಇರುವ ಹಾಗೂ ಮರಾಠ ದೊರೆ ಶಿವಾಜಿಯ ನೆಲ, ದೇಶದಲ್ಲಿಯೇ ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಹೊಂದಿರುವ ಮಹಾರಾಷ್ಟ್ರವನ್ನು ಬಿಟ್ಟುಕೊಡುವುದಕ್ಕೆ ಬಿಜೆಪಿಗೆ ಸುತಾರಾಂ ಇಷ್ಟವಿಲ್ಲ. ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಬಹುಮತವಿಲ್ಲದಿದ್ದರೂ ೧೦೫ ಕ್ಷೇತ್ರಗಳಲ್ಲಿ ಜಯಸಾಧಿಸಿದರೂ ಶಿವಸೇನೆಯೊಂದಿಗಿನ ಆಂತರಿಕ ಮೈತ್ರಿ ಭಿನ್ನಮತದ ಕಾರಣದಿಂದಾಗಿ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವಾಯ್ತು. ಕೇವಲ ಎರಡುವರೆ ವರ್ಷಗಳಲ್ಲಿ ಅಘಾಡಿ ಮೈತ್ರಿಯ ಲಗಾಡಿ ತೆಗೆಯುವುದರಲ್ಲಿ ಬಿಜೆಪಿ ಪರೋಕ್ಷವಾಗಿ ಯಶಸ್ವಿಯಾಯಿತು. ಈಗ ಬಿಜೆಪಿಗೆ ಮುಂದಿರುವುದು ೨೦೨೪ರ ಲೋಕಸಭಾ ಚುನಾವಣೆ ಹಾಗೂ ವಿಧಾನ ಸಭಾ ಚುನಾವಣೆ. ಉದ್ಧವ್ ಮುನಿಸಿಕೊಂಡಿದ್ದಾರೆ, ಉದ್ಧವ್ ಬದಲಿಗೆ ಅಷ್ಟೇ ಪ್ರಭಾವಿಯೊಬ್ಬ ಬಿಜೆಪಿಗೆ ಬೇಕಿದ್ದ ಕಾರಣ ಈ ಬಂಡಾಯ ಎಬ್ಬಿಸಿದ್ದು, ಎನ್ನುವುದು ತಿಳಿದಿರುವ ವಿಷಯ. ಮರಾಠರ ಓಲೈಕೆ ಮಾಡಿಕೊಳ್ಳದೇ ಮಹಾರಾಷ್ಟ್ರದಲ್ಲಿ ಏನನ್ನು ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ಸತ್ಯ ಬಿಜೆಪಿಗೆ ಗೊತ್ತಿದೆ. ಹಾಗಾಗಿ ಬಂಡಾಯ ನಾಯಕ ಏಕನಾಥ್ ಶಿಂಧೆಗೆ ಸಿಎಂ ಸ್ಥಾನ ನೀಡುವುದರ ಮುಖೇನ ಬಿಜೆಪಿ ಚಾಣಾಕ್ಷತನ ಮೆರೆದಿದೆ. 

ಹಿಂದುತ್ವ ಹಾಗೂ ಮರಾಠಿಗರ ಅಸ್ಮಿತೆಗಾಗಿ ತನ್ನ ಉದಯದ ಆರಂಭದಾದಿಯಾಗಿ ಹೋರಾಟ ಮಾಡುತ್ತಾ ಬಂದ ಶಿವಸೇನೆಯ ಉದ್ಧವ್ ಠಾಕ್ರೆಯನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬ್ರಾಹ್ಮಣ ಸಮುದಾಯದ ದೇವೇಂದ್ರ ಫಡ್ನವಿಸ್‌ಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಕೊಟ್ಟರೇ ಏನೂ ವರ್ಕೌಟ್ ಆಗುವುದಿಲ್ಲ ಎಂಬ ಕಾರಣದಿಂದಾಗಿ ಬಿಜೆಪಿ ಮರಾಠ ನಾಯಕ ಶಿಂಧೆ ಅವರ ಮೂಲಕ ಮರಾಠರ ಮತ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ. 

ಶೇಕಡಾ ೩೧ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮರಾಠ ಸಮುದಾಯದ ಮತಗಳು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಹಳ ಮುಖ್ಯ. ಬಿಜೆಪಿಗೆ ಸದ್ಯಕ್ಕೆ ಬೇಕಿರುವುದು ಸಿದ್ಧಾಂತಕ್ಕಿಂತ ಮಿಗಿಲಾಗಿ ಮತ ತಂದುಕೊಡುವ ಮುಖ. ಏಕನಾಥ್ ಶಿಂಧೆಯನ್ನೂ ಒಳಗೊಂಡು ಶಿವಸೇನೆಯಿಂದ ಹೊರಬಂದ ಶಾಸಕರು ಬಿಜೆಪಿಗೆ ಠಾಕ್ರೆ ಹೆಸರಿಲ್ಲದೇ ಹೇಗೆ ಮತ ತಂದುಕೊಡುತ್ತಾರೆ ಎನ್ನುವುದು ಸದ್ಯದ ಕುತೂಹಲ. ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಸಿದ್ಧಾಂತಕ್ಕಿಂತ ಹೆಚ್ಚಾಗಿ, ಪ್ರಾಂತೀಯ ಸಿದ್ಧಾಂತವೇ ಅಂದರೇ, ಮರಾಠ ಹೋರಾಟಗಳಿಗೆ ಧ್ವನಿಯಾಗುವ ನಾಯಕರನ್ನು ಬೆಂಬಲಿಸುವ ಮತದಾರರೇ ಹೆಚ್ಚಿರುವುದೇ ಕಾರಣ. ಬಿಜೆಪಿಗೆ ಸೇರಿದವರೆಲ್ಲಾ ಶಿವಸೇನೆಯ, ಮರಾಠ ಸಮುದಾಯದ ಪ್ರಭಾವಿಗಳಲ್ಲ ಎನ್ನುವುದು ಕೂಡ ಗಮನಾರ್ಹ. ಇನ್ನು, ೧೦೬ ಶಾಶಕರನ್ನು ಹೊಂದಿರುವ ದೊಡ್ಡ ಪಕ್ಷದ ಹೊರತಾಗಿಯೂ ತನ್ನೊಂದಿಗಿನ ಎರಡಂಕಿಯ ಶಾಸಕರ ಬೆಂಬಲದಿಂದ ಬಿಜೆಪಿಯೊಂದಿಗೆ ಕೈ ಜೋಡಿಸಿದ ಶಿಂಧೆ ಬಳಗವನ್ನು ಮುಂದೆ ಬಿಜೆಪಿ ಹೇಗೆ ನೋಡಿಕೊಳ್ಳುತ್ತದೆ ಎನ್ನುವುದರಲ್ಲಿ ಬಹಳ ಕುತೂಹಲವಿದೆ. ಇಲ್ಲಿ ಗಮನಿಸಲೇಬೇಕಾದ ವಿಷಯವೇನೆಂದರೇ, ಬಿಜೆಪಿಗೆ ಶಿವಸೇನೆಯನ್ನು ಮುಗ್ಗರಿಸುವುದಕ್ಕಿಂತ ಮಿಗಿಲಾಗಿ ಉದ್ಧವ್ ಠಾಕ್ರೆಗೆ ಬುದ್ಧಿ ಕಲಿಸುವುದು ಪರಮ ಗುರಿಯಾಗಿತ್ತು, ಹಾಗಾಗಿಯೇ ಕಳೆದ ಎರಡು ವರ್ಷಗಳಿಂದ ಅತ್ಯಂತ ಸೂಕ್ಷ್ಮ ಲೆಕ್ಕಾಚಾರ ಮಾಡಿ, ಕಳೆದ ಬಾರಿ ಮುಖ್ಯಮಂತ್ರಿ ಹುದ್ದೆಗೆ ಕರ್ಚಿಫ್ ಹಾಕಿ ಕುಳಿತಿದ್ದ ಶಿಂಧೆ ಅವರನ್ನು ಛೂ ಬಿಟ್ಟು ಬಂಡೆಬ್ಬಿಸಿ ಸರ್ಕಾರ ಉರುಳಿಸಿದೆ ಎನ್ನುವುದು ಬಹಳ ಸ್ಪಷ್ಟ.

ಚುನಾವಣೆಗೆ ಶಿಂಧೆ ಬಳಗ ಮೂಲೆ ಗುಂಪು..? : ಬಿಜೆಪಿಗೆ ಮಹಾರಾಷ್ಟçದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಹಕರಿಸಿದ ಶಿಂಧೆ ಬಳಗ ಚುಣಾವಣೆಗೆ ಬಂದಾಗ ಬಿಜೆಪಿಯಲ್ಲಿ ಮೂಲೆ ಗುಂಪಾಗಲಿದೆಯೇ ಎಂಬ ಪ್ರಶ್ನೆಯೊಂದು ಎದ್ದಿದೆ. ಸರ್ಕಾರ ರಚನೆಯಲ್ಲಿ ಮೋದಿ, ಶಾ ಜೋಡಿ, ಈ ಹಿಂದೆ ಬಿಜೆಪಿಯಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ್ದ ದೇವೇಂದ್ರ ಫಡ್ನವಿಸ್ ಅವರನ್ನು ಬಳಸಿಕೊಂಡು ಶಿಂಧೆಯಿಂದ ಉದ್ಧವ್ ವಿರುದ್ಧ ಬಂಡೆಬ್ಬಿಸಿದ ನಂತರ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ ಫಡ್ನವಿಸ್ ಪ್ರೇರಣೆ ಎಂದು ಹೇಳಿ ಫಡ್ನವಿಸ್‌ಗೆ ಉಪಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ್ದರಲ್ಲೇ ಎಲ್ಲಾ ಜಾಣ ನಡೆ ಅಡಗಿದೆ. ಇನ್ನು, ಒಟ್ಟು ೨೮೮ ಕ್ಷೇತ್ರಗಳಲ್ಲಿ ಈಗಾಗಲೇ ಗೆದ್ದಿರುವ ೧೦೬ ಶಾಸಕರು ಬಿಜೆಪಿಯೊಂದಿಗೆ ಇದ್ದಾರೆ. ಉಳಿದ ಕ್ಷೇತ್ರಗಳಿಗೂ ಬಿಜೆಪಿಯೊಂದಿಗೆ ಕೆಲವು ವರ್ಷಗಳಿಂದ ದುಡಿಯುತ್ತಾ ಬಂದಿರುವ ಅಭ್ಯರ್ಥಿಗಳೂ ಕೂಡ ಇದ್ದಾರೆ. ಇನ್ನು, ಶಿಂಧೆ ಬಳಗ. ಈಗ ಬಿಜೆಪಿ ತಲೆ ಮೇಲೆ ಇರುವುದು ಎಲ್ಲರನ್ನೂ ಸಮಾಧಾನ ಮಾಡುವ ದೊಡ್ಡ ಹೊಣೆಗಾರಿಕೆ. ಒಂದು ವೇಳೆ, ಮತ್ತೊಮ್ಮೆ ಅಧಿಕಾರಕ್ಕೆ ಬರುವವರೆಗೆ ಶಿಂಧೆ ಬಳಗವನ್ನು ಬಳಸಿಕೊಂಡರೂ, ಸರ್ಕಾರ ರಚನೆಯಲ್ಲಿ ಶಿಂಧೆ ಬಳಗವನ್ನು ಬಿಜೆಪಿ ಮೂಲೆ ಗುಂಪು ಮಾಡಿದರೇ, ಶಿಂಧೆಯನ್ನು ನಂಬಿಕೊಂಡು ಬಂದ ಶಾಸಕರು ಅರ್ಧ ದಾರಿಯಲ್ಲಿ ಬಡತನ ಎದುರಿಸುವುದಂತೂ ಸತ್ಯ. ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಚಾಣಾಕ್ಷ ಬ್ರಾಹ್ಮಣ ಸಮುದಾಯದ ಫಡ್ನವಿಸ್ ಅವರನ್ನು ಬಿಜೆಪಿ ಹೈಕಮಾಂಡ್ ನಿರ್ಧಾಕ್ಷಿಣ್ಯವಾಗಿ, ಒತ್ತಡ ಹೇರಿ ಉಪಮುಖ್ಯಮಂತ್ರಿಯಾಗಿ ಮಾಡಿ ಟ್ರೀಟ್ ಮಾಡಿದ್ದು ಗೊತ್ತೇ ಇಲ್ವೇ..? ಮುಖ್ಯಮಂತ್ರಿಯಾಗಿದ್ದವರನ್ನೇ ಸೈಡ್ ಲೈನ್ ಮಾಡಿರುವ ಬಿಜೆಪಿ, ಈ ಹೆಸರಿಲ್ಲದ ಶಿಂಧೆ ಬಳಗದ ಶಾಸಕರನ್ನು ಹೇಗೆ ಟ್ರೀಟ್ ಮಾಡಬಹುದು..? ಅಧಿಕಾರ, ರಾಜಕೀಯ ಅಂತ ಬಂದಾಗ ಏನನ್ನು ಕೂಡ ಮಾಡುವುದಕ್ಕೆ ಮೋದಿ, ಶಾ ಜೋಡಿ ಹಿಂದೆ ಮುಂದೆ ನೋಡಲ್ಲ ಎನ್ನುವುದನ್ನು ಪ್ರತ್ಯೇಕಿಸಿ ಹೇಳುವ ಅಗತ್ಯವಿಲ್ಲ.  

ಬಂಡಾಯಕ್ಕೆ ಬಿಜೆಪಿ ಫಂಡ್ : ಒಡೆದು ಆಳುವುದರಲ್ಲಿ ಬಿಜೆಪಿಯನ್ನು ಮೀರಿಸುವುದಕ್ಕೆ ಯಾವ ಪಕ್ಷಕ್ಕೂ ಸಾದ್ಯವಿಲ್ಲ. ಅಷ್ಟು ರಾಜಕೀಯ ತಂತ್ರಗಾರಿಕೆ ಬಿಜೆಪಿಗಿದೆ ಎನ್ನುವುದು ಇದರ ಅರ್ಥ. ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದ ಬಿಜೆಪಿ ಹೈಕಮಾಂಡ್, ಶಿವಸೇನೆಯ ಅತೃಪ್ತ ಶಿಂಧೆಯೊಂದಿಗೆ ಸಂಪರ್ಕದಲ್ಲಿತ್ತು. ನಾವು ಎಲ್ಲಾ ಮಾಡುತ್ತೇವೆ ನೀವು ಬಂಡಾಯ ಎದ್ದರಷ್ಟೇ ಸಾಕು. ನಿಮಗೆ ಬೇಕಾದದ್ದನ್ನೆಲ್ಲಾ ಮಾಡುತ್ತೇವೆ ಎಂಬ ಭರವಸೆಯನ್ನೂ ಬಿಜೆಪಿ ನೀಡಿತ್ತು. ಅದಕ್ಕೆ ಶಿಂಧೆ ಒಂದಿಷ್ಟು ಷರತ್ತನ್ನೂ ವಿಧಿಸಿದ್ದರು. ಅದಕ್ಕೆ ಬಿಜೆಪಿ ‘ಅಸ್ತು’ ಅಂದಿತ್ತು. ಅದರಲ್ಲಿ ಠಾಕ್ರೆ ಹೊರತಾಗಿಯೂ ಮರಾಠ ಮತ ಸೆಳೆಯುವ ತಂತ್ರಗಾರಿಕೆಯನ್ನು ಬಿಜೆಪಿ ಹೆಣೆದಿತ್ತು. ಬಂಡಾಯ ಎದ್ದ ಒಂದೆರಡು ದಿನಗಳಲ್ಲಿ ಸ್ವತಃ ಶಿಂಧೆ ರಾಷ್ಟ್ರೀಯ ಪಕ್ಷವೊಂದು ಸಂಪರ್ಕದಲ್ಲಿದೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದರು, ಮತ್ತೆ ಆ ಮಾತನ್ನು ವಾಪಾಸ್ ಕೂಡ ತೆಗೆದುಕೊಂಡಿದ್ದರು, ಕೆಲವೇ ದಿನಗಳಲ್ಲಿ ಚಿತ್ರಣವೇ ಬದಲಾಗಿತ್ತು. ಇವೆಲ್ಲಾ ಬಂಡಾಯ ಪಡೆಗೆ ಬಿಜೆಪಿ ಹೈಕಮಾಂಡ್ ಮಾಡಿದ ನಿರ್ದೇಶನವೆಂದೇ ಹೇಳಲಾಗುತ್ತಿದೆ. ಶಿಂಧೆ ಬಳಗ ಕ್ಯಾಂಪ್ ಮಾಡಿದ್ದ ಗುಹಾವಟಿಯ ಐಷಾರಾಮಿ ಹೋಟೇಲ್ ಬುಕ್ ಮಾಡಿದ್ದು ಕೂಡ ಬಿಜೆಪಿ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆಗುತ್ತಿದೆ. ಕೇವಲ ಎಂಟು ದಿನಗಳ ಶಿಂಧೆ ಬಳಗದ ಕ್ಯಾಂಪ್‌ಗೆ ಬರೋಬ್ಬರಿ ೭೦ಲಕ್ಷ ಖರ್ಚಾಗಿತ್ತು ಎಂಬ ವರದಿಯೂ ಕೂಡ ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. 

ಒಟ್ಟಿನಲ್ಲಿ, ಮರಾಠ ಸೂತ್ರ ಹೆಣೆದು, ಶಿಂಧೆಯನ್ನು ಪಾತ್ರಧಾರಿಯನ್ನಾಗಿ ಇಟ್ಟುಕೊಂಡು ಮಹಾರಾಷ್ಟçದಲ್ಲಿ ಅಘಾಡಿ ಉರುಳಿಸುವ ನಿರ್ದೇಶನದಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಮುಂದೆ ಶಿಂಧೆ ಆಡಳಿತ ಹೇಗಿರುತ್ತದೆ..? ಫಡ್ನವಿಸ್ ನಡೆ ಹೇಗಿರುತ್ತದೆ..? ಮರಾಠರ ಒಲವು ಎತ್ತ ಕಡೆ..? ಉದ್ಧವ್ ಮುಂದಿನ ಪ್ಲ್ಯಾನ್ ಏನು..? ಮಹಾ ವಿಕಾಸ್ ಅಘಾಡಿ ಉಳಿಯಲಿದೆಯೇ..? ಎಂಬುವುದರ ಮೇಲೆ ಕುತೂಹಲ ಹೆಚ್ಚಿದೆ. 

-ಶ್ರೀರಾಜ್ ವಕ್ವಾಡಿ  


No comments:

Post a Comment