Thursday, February 27, 2025

ರಾಜ್ಯ ಕಾಂಗ್ರೆಸ್‌ ಸುಧಾರಣೆ ಆಗುವುದೇ !?

ಸರ್ಕಾರವನ್ನು ಅಭದ್ರಗೊಳಿಸುತ್ತಿರುವ ಕಾಂಗ್ರೆಸ್‌ ನಾಯಕರ ಪ್ರತಿಷ್ಠೆಯ ವ್ಯಸನ

ʼಯುವ ಕಾಂಗ್ರೆಸ್‌ ಒಗ್ಗಟ್ಟಿನಿಂದ ಬಿಜೆಪಿ-ಜೆಡಿಎಸ್‌ ವಿರುದ್ಧ ಹೋರಾಡಬೇಕು. ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಲ್ಲ. ಪಕ್ಷದಲ್ಲಿ ಯಾವುದೇ ಗುಂಪು ಬಣಗಳನ್ನು ಮಾಡಿಕೊಳ್ಳದೆ, ಎಲ್ಲಾ ಕಾರ್ಯಕರ್ತರನ್ನು ಒಂದುಗೂಡಿಸಿಕೊಂಡು ಬಿಜೆಪಿ ವಿರುದ್ಧ ಹೋರಾಟ ಮಾಡಬೇಕು. ನಮ್ಮ ರಾಜಕೀಯ ವೈರಿಗಳ ವಿರುದ್ಧ ಹೋರಾಟ ಮಾಡಬೇಕೆ ಹೊರತು ನಮ್ಮನಮ್ಮಲ್ಲೇ ಆಂತರಿಕ ವೈಷಮ್ಯ ಬೆಳೆಸಿಕೊಳ್ಳಬಾರದುʼ ಎಂದು ಯುವ ಕಾಂಗ್ರೆಸ್‌ ರಾಜ್ಯ ಘಟಕದ ಪದಾಧಿಕಾರಿಗಳನ್ನು ಉದ್ದೇಶಿಸಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್‌ ಅವರು ಆಡಿರುವ ಮಾತನ್ನು ಉಲ್ಲೇಖಿಸಿ ಇತ್ತೀಚೆಗೆ ಆಪ್ತರೊಬ್ಬರೊಂದಿಗೆ ಚರ್ಚೆ ಬೆಳೆಸಿದ್ದೆ. ʼಡಿಕೆಶಿ ನೋಡಿ ಯೂಥ್‌ ಕಾಂಗ್ರೆಸ್‌ಗೆ ಬುದ್ದಿ ಹೇಳ್ತಾರೆ, ಕೆಪಿಸಿಸಿ ಅಧ್ಯಕ್ಷರಾಗಿದ್ದುಕೊಂಡು ಪಕ್ಷದ ಆಂತರಿಕ ಜಗಳವನ್ನು ಸರಿ ಮಾಡುವುದಕ್ಕೆ ಆಗಿಲ್ಲ. “ಊರಿಗೆ ಬುದ್ದಿ ಹೇಳಿ, …..” ಅಂತ ಹೇಳಿದೆ. ಒಂದಿಷ್ಟು ವಾದ ವಿವಾದ ಮುಂದುವರಿದಿತ್ತು.

ʼನಿಮ್ಮ ನಿಲುವು ಯಾವುದು ನೀವು ಯಾರ ಪರವಾಗಿದ್ದೀರಿ ಎನ್ನುವುದು ತಿಳಿಯುವುದಿಲ್ಲ ಎಂದು ಕೇಳಿದ್ದರು. ಮುಂದುವರಿಸಿ ʼರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾದಲ್ಲಿದೆ ಅಲ್ವೇ, ನಿಮ್ಮದೇ ಸರ್ಕಾರ. ನಿಮ್ಮವರೇ ಅಧಿಕಾರದಲ್ಲಿದ್ದಾರೆ. ನೀವು ಸ್ವಲ್ಪ ಅವರ ಪರವಾಗಿಯೇ ಇರುವವರು ಅಲ್ವಾ ಎಂದು ಹೇಳಿದರು. ಆ ಪಕ್ಷದ ಕಾರ್ಯಕರ್ತ ಅಥವಾ ವಕ್ತಾರ ಎನ್ನುವಂತೆ ನನ್ನನ್ನು ಬಿಂಬಿಸಿ ನಡೆದುಕೊಂಡಿದ್ದರು. ಅದು ನನ್ನನ್ನು ನಿಜಕ್ಕೂ ಪ್ರಚೋದಿಸುವಂತಿತ್ತು. ಬಹುಶಃ ಒಂದು ಪಕ್ಷದ ಭಾಗವಾಗುವ ಮನಸ್ಥಿತಿ ಸದ್ಯಕ್ಕಂತೂ ನನ್ನಲ್ಲಿಲ್ಲ. ʼನನ್ನ ಲೇಖನಗಳನ್ನು ಓದಿ, ಕಾಂಗ್ರೆಸ್‌ನ ತಪ್ಪುಗಳನ್ನು, ಕಾಂಗ್ರೆಸ್‌ ರಾಜಕೀಯದ ಅವ್ಯವಸ್ಥೆ, ಬಿಜೆಪಿಯ ಬೌದ್ಧಿಕ ಬಡತನ, ದುರಾಡಳಿತ ಸೇರಿ ಎಲ್ಲವನ್ನೂ ಬೇರೆ ಬೇರೆ ಲೇಖನಗಳಲ್ಲಿ ಟೀಕಿಸಿದ್ದೇನೆ. ಸಾಧ್ಯವಾದರೇ, ಓದಿ. ನಿಮ್ಮ ಅಭಿಪ್ರಾಯ ಬದಲಾಗಬಹುದು ಎಂದೆ. ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ, ವಿರೋಧ ಪಕ್ಷಗಳಲ್ಲಿರುವ ಬಿಜೆಪಿ ಮತ್ತು ಜೆಡಿಎಸ್‌ ಗಳಿಗಿರುವ ಹೆಚ್ಚು ಜವಾಬ್ದಾರಿಗಳ ಗಂಭೀರ ವಿಚಾರಗಳನ್ನು ನನ್ನ ವೈಯಕ್ತಿಕ ನಿಲುವು ಅಥವಾ ಅಭಿಪ್ರಾಯ ಮರೆಮಾಚುವಂತೆ ಆಗಬಾರದು. ಇದು ನನ್ನ ಬಗ್ಗೆಯಾಗಲಿ ಅಥವಾ ಸರ್ಕಾರದ ಬಗ್ಗೆಯಾಗಲಿ, ವಿರೋಧ ಪಕ್ಷಗಳ ಬಗ್ಗೆಯಾಗಲಿ ಅಲ್ಲ. ಇದು ಒಂದು ಸರ್ಕಾರ ಅಡಿಯಲ್ಲಿ ಬದುಕುತ್ತಿರುವ ಸಾಮಾನ್ಯ ನಾಗರಿಕರ ಪ್ರಶ್ನೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದ ಕಾಂಗ್ರೆಸ್‌ ಆಗಬಹುದು ಎಂದು ರಾಜ್ಯದ ಅಧಿಕಾರವನ್ನು ಕಾಂಗ್ರೆಸ್‌ಗೆ ನೀಡಿದ್ದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾ‌ರ್ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದರು. ಭಾರೀ ಬಹುಮತವನ್ನು ನೀಡಿದ್ದರು.  ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ, ಡಿ.ಕೆ ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದರು. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಜಾರಿಗೆ ತಂದಿತು. ಕೆಲವು ತಿಂಗಳುಗಳ ವಿಳಂಬ ಆಗಿದ್ದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ತನ್ನ ಯೋಜನೆಗಳ ಅನುಷ್ಠಾನದ ಬಗ್ಗೆ ಸಮರ್ಥಿಸಿಕೊಳ್ಳುವುದರಲ್ಲೂ ಕಾಂಗ್ರೆಸ್‌ ಬಡತನ ತೋರ್ಪಡಿಸಿತ್ತು.    

ಇನ್ನು, ಕಾಂಗ್ರೆಸ್‌ ಗೆ ಬಹುಮತ ಬಂದಾಗೆಲ್ಲಾ ಒಂದು ರೋಗವಿದೆ. ರಾಜ್ಯದಲ್ಲಿ ಸದ್ಯಕ್ಕೆ ಬೇರೆ ಪಕ್ಷಗಳಿಗೆ ಹೋಲಿಸಿದರೇ, ಸ್ವಲ್ಪ ಪ್ರಬುದ್ಧ ರಾಜಕಾರಣಿಗಳು ಇರುವುದು ಕಾಂಗ್ರೆಸ್‌ನಲ್ಲಿಯೇ. ಆದರೇ, ಕಾಂಗ್ರೆಸ್‌ ನಾಯಕರಲ್ಲಿರುವ ಸ್ವಪ್ರತಿಷ್ಠೆ, ಶ್ರೇಷ್ಠತೆಯ ವ್ಯಸನ ಇಡೀ ಆಡಳಿತ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ ಎಂದರೆ ತಪ್ಪಿಲ್ಲ. ತಾನು ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗೆಲ್ಲಾ ಕಾಂಗ್ರೆಸ್‌ ಈ ವ್ಯಸನದಲ್ಲೇ ಕಾಲ ಕಳೆದಿದೆ. ಇದೇ ಕಾರಣದಿಂದ ಮತದಾರರ ಆಯ್ಕೆಯನ್ನು ಅಪಮಾನಿಸುವಂತೆ ಕಾಂಗ್ರೆಸ್‌ ಸರ್ಕಾರ ಅಕ್ಷರಶಃ ನಡೆದುಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಮೇಲೆ ಜನ ಬಹಳ ವಿಶ್ವಾಸ ಇರಿಸಿಕೊಂಡಿರುವ ಹಿನ್ನೆಲೆಯಲ್ಲಿಯೇ ಬಿಜೆಪಿಯನ್ನು ನಿರಾಕರಿಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೇರಿಸಿದ್ದರು. ಆದರೇ, ಈ ಸರ್ಕಾರವೂ ಬಿಜೆಪಿ ಸರ್ಕಾರಕ್ಕಿಂತ ಭಿನ್ನವೇನಲ್ಲ ಎಂಬಂತಾಗಿದೆ.

ಸರ್ಕಾರ ಕೇವಲ ಎರಡು ವರ್ಷ ಪೂರೈಸುವ ಮುನ್ನವೇ ಕಾಂಗ್ರೆಸ್ ನಾಯಕರು ಕುರ್ಚಿ ಕಿತ್ತಾಟಕ್ಕಿಳಿದಿದ್ದಾರೆ. ಪ್ರತಿಷ್ಠೆ, ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗೆಳುತ್ತಿದ್ದಾರೆ. ಅಧಿಕಾರ ಹಂಚಿಕೆ ವಿವಾದ, ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ, ಒಬ್ಬರಿಗೆ ಒಂದೇ ಹುದ್ದೆ, ಮುಡಾ ಹಗರಣ, ಭ್ರಷ್ಟಾಚಾರ ಆರೋಪಗಳು, ವರ್ಗಾವಣೆ ದಂಧೆಗಳಂತಹ ವಿಚಾರಗಳ ಕಾರಣದಿಂದ ಕಾಂಗ್ರೆಸ್‌ ಸರ್ಕಾರದ ಮೇಲೆ ಜನರಲ್ಲಿ ಅವಿಶ್ವಾಸ ಮೂಡಿಸಿದೆ. ಪ್ರಬುದ್ಧ ರಾಜಕಾರಣಿಗಳು ಎಂದು ವಿರೋಧ ಪಕ್ಷಗಳಿಂದಲೂ ಕರೆಸಿಕೊಂಡವರು ಕೂಡ ಹಾದಿ ಬೀದಿಯಲ್ಲಿ ಆಡಿ, ರಾಡಿ ಎಬ್ಬಿಸಿರುವುದು ಕಾಂಗ್ರೆಸ್‌ ಸರ್ಕಾರದ ಆಡಳಿತಕ್ಕೆ ಮಸಿ ಬಳಿದಂತಾಗಿದೆ. ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚೆಯಾಗಬೇಕಿರುವ ವಿಷಯಗಳನ್ನು ತೀರಾ ಸಣ್ಣತನ ತೋರಿಸಿ ಭ್ರಮನಿರಸನ ಮೂಡಿಸುತ್ತದೆ ಎನ್ನುವ ಅಭಿಪ್ರಾಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಆಯ್ಕೆ ಮಾಡುವಾಗ ಜನರಲ್ಲಿ ಬಹುಶಃ ಇದ್ದಿರಲಿಕ್ಕಿಲ್ಲ.

ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಹೊತ್ತಿಗೆ ಸಿಎಂ ಆಯ್ಕೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ವಯಸ್ಸು ಕೂಡ ಮುನ್ನೆಲೆಗೆ ಬಂದಿತ್ತು. ಮತ್ತವರ ʼಅಹಿಂದʼ ಬಲವೂ ವೃದ್ಧಿಯಾಗಿತ್ತು, ಇನ್ನೊಂದೆಡೆ ಡಿಕೆ ಶಿವಕುಮಾರ್‌ ಕೂಡ ಕಾಂಗ್ರೆಸ್‌ ಪಕ್ಷದಲ್ಲಿ ಸೀನಿಯರ್‌ ಮೋಸ್ಟ್‌ ನಾಯಕರುಗಳಲ್ಲೊಬ್ಬರಾಗಿ ಕಾಣಿಸಿಕೊಂಡಿದ್ದರು. ಸಿದ್ದರಾಮಯ್ಯ ಅವರನ್ನು ಬಿಟ್ಟರೇ, ಮಾಸ್‌ ಲೀಡರ್‌ ಕಾಂಗ್ರೆಸ್‌ ನಲ್ಲಿ ಯಾರೂ ಇಲ್ಲ. ಡಿಕೆಶಿ ಆ ಪಟ್ಟಕ್ಕೆ ಏರುವುದಕ್ಕೆ ಪ್ರಯತ್ನಪಡುತ್ತಿದ್ದರೂ ಬಹುಶಃ ಅವರ ಹಿನ್ನೆಲೆ ಮತ್ತು ಅವರು ರಾಜಕೀಯ ಜೀವನದಲ್ಲಿ ಕಂಡಂತಹ ಏರಿಳಿತಗಳು ಅವರಿಗೆ ಅಡ್ಡಿಯಗುತ್ತಿದೆ. ಎಸ್.‌ಎಂ. ಕೃಷ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಕೃಷ್ಣರ ಅತ್ಯಾಪ್ತರಾಗಿ ಗುರುತಿಸಿಕೊಂಡು, ಅವರ ಬಲಗೈ ಬಂಟ ಎಂಬಂತೆ ಕಾಣಿಸಿಕೊಂಡಿದ್ದ ಡಿಕೆಶಿ, ಅಂದಿನ ಹಿರಿಯ ನಾಯಕರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದಕ್ಕೆ ಸಿಎಂ ಎಸ್‌.ಎಂ ಕೃಷ್ಣರೊಂದಿಗೆ ಕೈ ಜೋಡಿಸಿದ್ದರು. ಅವೆಲ್ಲಾ ಸಿಟ್ಟು ಮಲ್ಲಿಕಾರ್ಜುನ್‌ ಖರ್ಗೆ ಅಂತವರಿಗೆ ಇನ್ನೂ ಡಿಕೆಶಿ ಮೇಲಿದೆ. ಇವೆಲ್ಲಾ ಪ್ರತಿಷ್ಠೆ, ಶ್ರೇಷ್ಠತೆಗಳು ಕಾಂಗ್ರೆಸ್‌ನಲ್ಲಿ ತುಸು ಹೆಚ್ಚೇ ಇದೆ ಎನ್ನುವುದಕ್ಕೆ ಒಂದು ಉದಾಹರಣೆ. ಕುರ್ಚಿ ಜಗಳವಾಗಿ ಈಗ ವ್ಯಕ್ತವಾಗುತ್ತಿದೆ.     

ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ, ಡಿಕೆಶಿ ಅವರು ಇಬ್ಬರೂ ತಮ್ಮ ಪ್ರಭಾವವನ್ನು ತೋರಿಸಿದ್ದರು. ಹೈಕಮಾಂಡ್‌ ಅಳೆದುತೂಗಿ ಕೊನೆಗೆ ಸಿಎಂ ಹುದ್ದೆಗೆ ಸಿದ್ದರಾಮಯ್ಯ ಅವರನ್ನೇ ಆಯ್ಕೆ ಮಾಡಿತ್ತು. ಆಗ ಸಿಎಂ ಪದವಿ ಹಂಚಿಕೆಯ ಒಪ್ಪಂದ ಆಗಿತ್ತು ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಅಸಲಿಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾ‌ರ್ ನಡುವೆ ಯಾವ ರೀತಿ ಅಧಿಕಾರ ಹಂಚಿಕೆಯಾಗಿದೆ ? ಏನು ಮಾತುಕತೆಯಾಗಿದೆ ? ಅಥವಾ ಈ ಒಪ್ಪಂದ ಆಗಿರುವುದು ನಿಜವೇ ? ಅಥವಾ ಇದೊಂದು ರಾಜಕೀಯ ಊಹಾಪೋಹವೇ ? ಎನ್ನುವುದರ ಬಗ್ಗೆ ಸಿದ್ದರಾಮಯ್ಯ ಅವರಾಗಲಿ, ಡಿಕೆಶಿಯವರಾಗಲಿ ಬಾಯಿ ಬಿಟ್ಟು ಹೇಳುತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ಈ ಬಗ್ಗೆ ಬಹಿರಂಗವಾಗಿ ಏನೂ ಮಾತಾಡುತ್ತಿಲ್ಲವಾದರೂ, ಅವರವರ ಆಪ್ತರು ಅಲ್ಲಲ್ಲಿ ಮತ್ತೆ ಮತ್ತೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹೇಳುತ್ತಿರುವುದು ನೋಡಿದರೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಖಡಕ್ ವಾರ್ನಿಂಗ್ ಗೂ ಬೆಲೆ ಇಲ್ಲದಂತಾಗಿದೆ.

ಒಳ್ಳೆಯ ಆಡಳಿತವೂ ಕಾಂಗ್ರೆಸ್‌ ಸರ್ಕಾರದಿಂದ ಕಾಣುತ್ತಿಲ್ಲ. ಬಿಜೆಪಿ ಹಾಗೂ ಜೆಡಿಎಸ್‌ಗೆ ಹೋಲಿಸಿದರೇ, ಕಾಂಗ್ರೆಸ್‌ ಸರ್ಕಾರದಲ್ಲಿ ಪ್ರಭುತ್ವ ರಾಜಕಾರಣಿಗಳಿದ್ದಾರೆ, ಸಮರ್ಥರಿದ್ದಾರೆ, ಒಳ್ಳೆಯ ನಾಯಕರಿದ್ದಾರೆ. ಆದರೇ, ಕಾಂಗ್ರೆಸ್‌ನ ಆಂತರಿಕ ವೈಷಮ್ಯದಿಂದ ಸದ್ವಿನಿಯೋಗವಾಗುತ್ತಿಲ್ಲ ಎನ್ನುವುದು ನೇರವಾಗಿ ಕಾಣಿಸುತ್ತಿದೆ. ಐದು ಗ್ಯಾರಂಟಿಗಳು ನಾಡಿನ ಆರ್ಥಿಕತೆಗೆ ಬಲ ತುಂಬಿದ್ದರೂ, ಸರ್ಕಾರದ ಸಾಧನೆಯನ್ನು ಜನರಿಗೆ ಯಶಸ್ವಿಯಾಗಿ ತಲುಪಿಸುವಲ್ಲಿ ಕಾಂಗ್ರೆಸ್‌ ಸಂಪೂರ್ಣ ವಿಫಲವಾಗಿದೆ. ಆಡಳಿತ ಹಳಿ ತಪ್ಪಿಹೋಗಿದೆ ಎಂದು ಕೆಲವು ಕಾಂಗ್ರೆಸ್‌ ನಾಯಕರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಇನ್ನು, ವಿರೋಧ ಪಕ್ಷದವರು ಹೇಳುವುದು ವಿಶೇಷವಲ್ಲ. ಏನೇ ಆಗಲಿ, ಕಾಂಗ್ರೆಸ್‌ ಸರ್ಕಾರದ ಆಡಳಿತ ಮೊದಲು ಸುಧಾರಿಸಲಿ.

-ಶ್ರೀರಾಜ್‌ ವಕ್ವಾಡಿ

 

Thursday, February 20, 2025

ಇನ್ನೂ ಬಗೆಹರಿಯದ ʼಕೈʼ ನೋವು !

 

ರಾಜ್ಯ ಕಾಂಗ್ರೆಸ್‌ ರಾಜಕೀಯ ಅನಿಶ್ಚಯತೆ | ಹೈಕಮಾಂಡ್‌ಗೆ ಸಂಕಟ

ರಾಜ್ಯ ಕಾಂಗ್ರೆಸ್‌ನಲ್ಲಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಪದೆ ಪದೆ ಸ್ಪಾಟ್‌ಲೈಟ್‌ ಆಗುತ್ತಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಹೊಸ ಚರ್ಚೆಯನ್ನು ಎಬ್ಬಿಸಿದ್ದು ಯಾರೆ ಆದರೂ, ಚರ್ಚೆಯ ವಿಷಯ ಡಿ.ಕೆ. ಶಿವಕುಮಾರ್‌. ಇನ್ನು, ಈಗ ಕಾಂಗ್ರೆಸ್ ಸರ್ಕಾರದಲ್ಲಿ ಚರ್ಚೆಗಳೆಲ್ಲವೂ ಹೈಕಮಾಂಡ್‌ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿರುವುದು ಕೂಡ ಅದೊಂಥರ ನಿಗೂಢ ಹಾಗೂ ಜಾಣ ನಡೆಯಂತೆಯೇ ಕಾಣಿಸುತ್ತಿದೆ. 

ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುವುದು ಬೇಡ ಎಂದು ಸ್ವತಃ ಡಿ.ಕೆ. ಶಿವಕುಮಾರ್‌ ಮಾಧ್ಯಮ ಹೇಳಿಕೆ ನೀಡಿರುವುದರ ಹಿಂದೆ ಬಲವಾದ ಕಾರಣಗಳಿರಬಹುದು. ಸಿಎಂ ಸಿದ್ದರಾಮಯ್ಯ ನಮ್ಮ ಪಕ್ಷದ ಲೀಡರ್‌ ಹಾಗೂ ಪ್ರಶ್ನಾತೀತ ನಾಯಕ ಎಂದು ಡಿಕೆಶಿ ಮೇಲ್ನೋಟಕ್ಕೆ ಹೇಳಿರುವುದಾದರೂ ಪಕ್ಷದೊಳಗೆ ತನ್ನನ್ನು ಟಾರ್ಗೇಟ್‌ ಮಾಡುತ್ತಿರುವವರ ವಿರುದ್ಧ ಡಿಕೆಶಿ ಒಂದು ಕಣ್ಣಿಟ್ಟಿದ್ದಾರೆ ಎನ್ನುವುದು ಸತ್ಯ. ರಾಜ್ಯ ಕಾಂಗ್ರೆಸ್‌ ವಿಚಾರದಲ್ಲಿ ಡಿಕೆಶಿ ಪವರ್‌ ಬಗ್ಗೆ ಹೈಕಮಾಂಡ್‌ ಗೆ ಚೆನ್ನಾಗಿಯೇ ಗೊತ್ತಿದೆ. ಉಳಿದ ನಾಯಕರು ಎಷ್ಟೇ ಹೈಕಮಾಂಡ್‌ ಗೆ ಒತ್ತಾಯ ತಂದರೂ ತಮ್ಮ ಸ್ಥಾನಕ್ಕೆ ಏನೂ ಸಮಸ್ಯೆಯಾಗುವುದಿಲ್ಲ ಎನ್ನುವುದರ ಬಗ್ಗೆ ಡಿಕೆಶಿಗೆ ನಂಬಿಕೆ ಇದೆ. ಡಿಕೆಶಿ ಅವರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವವರಿಗೆ ಡಿಕೆಶಿ ಹೈಕಮಾಂಡ್‌ ಮುಂದೆ ಏನು ಬೇಡಿಕೆ ಇಟ್ಟಿದ್ದಾರೆ ಎನ್ನುವುದರ ಬಗ್ಗೆ ಅರಿವು ಇಲ್ಲ ಎಂದೇ ಕಾಣಿಸುತ್ತಿದೆ. ʼಕೆಪಿಸಿಸಿ ಅಧ್ಯಕ್ಷ ಸ್ಥಾನ ನಾನು ಬಿಟ್ಟುಕೊಡುತ್ತೇನೆ. ಮುಖ್ಯಮಂತ್ರಿ ಸ್ಥಾನ ನೀಡಿʼ ಎಂದು ಡಿಕೆಶಿ ಬೇಡಿಕೆ ಇಟ್ಟಿದ್ದರೆ ಹೈಕಮಾಂಡ್‌ ಆ ಬೇಡಿಕೆಯನ್ನು ಪೂರೈಸುತ್ತದೆಯೇ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ಅವರನ್ನು ಕೆಳಗಿಳಿಸುವುದಕ್ಕೆ ಪ್ರಯತ್ನಿಸುತ್ತಿರುವ ನಾಯಕರು ಡಿಕೆಶಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಸ್ವೀಕರಿಸಲು ತಯಾರಿದ್ದಾರೆಯೇ ಎನ್ನುವುದು ಈಗಿರುವ ಪ್ರಮುಖ ಪ್ರಶ್ನೆಗಳು.

ಕೆಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಹಂತ ಹಂತವಾಗಿ ಬದಲಾವಣೆ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಎಐಸಿಸಿ ಅಧ್ಯಕ್ಷರು ನೀಡಿರುವ ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ತಾವು ಅಂದುಕೊಂಡಂತೆ ಎಲ್ಲವೂ ಆಗಿ ಬಿಡುತ್ತದೆ ಎಂದು ಕನಸು ಕಾಣುತ್ತಿರುವ ಕೆಲ ಕಾಂಗ್ರೆಸ್‌ ನಾಯಕರಿಗೆ, ಮುಂದಿನ ಪರಿಣಾಮದ ಬಗ್ಗೆ ಅರಿವಿಲ್ಲ ಎಂದೇ ಕಾಣಿಸುತ್ತಿದೆ. ರಾಜ್ಯದ ಜನ ಕಾಂಗ್ರೆಸ್‌ ಗೆ ಅಧಿಕಾರ ನೀಡಿರುವಾಗ, ಒಳ್ಳೆಯ ಆಡಳಿತ ನೀಡುವುದನ್ನು ಬಿಟ್ಟು, ಆಂತರಿಕ ವೈಷಮ್ಯ ಕಾರುತ್ತಿರುವುದು ರಾಜ್ಯ ಕಾಂಗ್ರೆಸ್‌ನ ಕೆಲ ಸಚಿವರ ಸಣ್ಣತನಕ್ಕೆ ಹಿಡಿದ ಕನ್ನಡಿ.

ಒಂದೆಡೆ ದಕ್ಷಿಣ ಭಾರತದ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಬಲವಾಗಿ ಅಸ್ತಿತ್ವ ಕಂಡುಕೊಂಡಿದೆ. ಇನ್ನೊಂದೆಡೆ ಉತ್ತರ ಭಾರತದಲ್ಲಿ ಬಹುತೇಕ ಎಲ್ಲಾ ಕಡೆ ಕಾಂಗ್ರೆಸ್‌ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಹಾಗೆ ನೋಡುವುದಾದರೇ ದಿನೇ ದಿನೇ ಇಡೀ ದೇಶದಲ್ಲಿ ಕಾಂಗ್ರೆಸ್‌ ತನ್ನ ವಿಶ್ವಾಸ ಕಳೆದುಕೊಳ್ಳುತ್ತಿದೆ. ಅಧಿಕಾರ ಇರುವ ರಾಜ್ಯಗಳಲ್ಲಿಯೂ ಇಂತಹ ಸಮಸ್ಯೆಗಳಿಂದಲೇ ಬಳಲಿದರೆ ಮುಂದಿನ ಪರಿಣಾಮ ಬಹಳ ಆಘಾತಕಾರಿಯಾಗಿರಲಿದೆ ಎನ್ನುವುದನ್ನು ಕಾಂಗ್ರೆಸ್‌ ಮರೆತು ವರ್ತಿಸಿದಂತಿದೆ.  

ಇಂತಹ ವಿಷಮ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯದ ಕಾಂಗ್ರೆಸ್‌ನ ಆಂತರಿಕ ವೈಷಮ್ಯ ಬೆಳವಣಿಗೆಗೆ ಮಹತ್ವ ಕೊಟ್ಟು ಹೈಕಮಾಂಡ್‌ ತುರ್ತಾಗಿ ಯಾವುದೇ ತೀರ್ಮಾನ ಕೈಗೊಂಡರೂ ಅದರಿಂದ ಪಕ್ಷಕ್ಕೆ ತೀವ್ರ ಸ್ವರೂಪದ ಧಕ್ಕೆ ಉಂಟಾಗಲಿದೆ ಎನ್ನುವುದಂತೂ ಸತ್ಯ. ಈ ಆಂತರಿಕ ವೈಷಮ್ಯದಿಂದ ಪಕ್ಷಕ್ಕಾಗುವ ಹಾನಿಯ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ನ ವರಿಷ್ಠರು ಗೌಪ್ಯವಾಗಿಯೇ ಮನವರಿಕೆ ಮಾಡಿಕೊಟ್ಟಂತಿದೆ. ಹಾಗಾಗಿಯೇ ಸಿಎಂ ಸಿದ್ದರಾಮಯ್ಯ ಅವರಿರಲಿ ಅಥವಾ ಡಿಸಿಎಂ ಡಿ.ಕೆ ಶಿವಕುಮಾರ್‌ ಇರಲಿ ಇಬ್ಬರೂ ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲು ಮುಂದಾಗುತ್ತಿಲ್ಲ.  

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಕೆ.ಸಿ. ವೇಣುಗೋಪಾಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಡಿ.ಕೆ.ಶಿವಕುಮಾರ್ ಪರ ಒಲವು ಹೊಂದಿದ್ದಾರೆ. ಸೋನಿಯಾ ಗಾಂಧಿಗೆ ಡಿಕೆಶಿ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದರೂ ಅದನ್ನು ನೇರವಾಗಿ ವ್ಯಕ್ತಪಡಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ರಾಹುಲ್‌ ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಅನುಭವ ಹಾಗೂ ಡಿಕೆಶಿ ಅವರ ಸಂಘಟನಾ ಶಕ್ತಿಯ ಬಗ್ಗೆ ಅರಿವಿದೆ. ಹಾಗಾಗಿ ಅವರ ನಿಲುವು ಯಾರ ಪರವಿದೆ ಎನ್ನುವುದು ಇನ್ನೂ ನಿಗೂಢ. 

ಬರುವ ಮೇ ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಪೂರ್ಣಗೊಳ್ಳಲಿದೆ. ಈ ಹಂತದಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಈ ಚರ್ಚೆಗಳು ಮೇಲೆದ್ದಿದ್ದು, ಹೈಕಮಾಂಡ್‌ ಗೆ ಸೂಕ್ಷ್ಮ ಎಚ್ಚರಿಕೆ ಎಂದೇ ಹೇಳಬಹುದು. ಅತೃಪ್ತ ಹಿರಿಯ ನಾಯಕರಿಗೆ ಸಚಿವ ಸ್ಥಾನವನ್ನು ನೀಡುವ ಸಲುವಾಗಿ ಸಂಪುಟ ಪುನರಚನೆ ಅಗತ್ಯ ಎನ್ನುವ ಅಭಿಪ್ರಾಯವೂ ಈ ನಡುವೆಯೇ ಕೇಳಿ ಬಂದಿದೆ. ಇನ್ನೊಂದೆಡೆ ಮಾರ್ಚ್ 7 ರಂದು, 2025-2026ನೇ ಸಾಲಿನ ಆಯವ್ಯಯ ಮಂಡನೆಗೆ ಸಿಎಂ ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

 ನಡುವೆ ಸಚಿವ ಸತೀಶ್‌ ಜಾರಕೀಹೊಳಿ, ನಾವು ಡಿಕೆಶಿ ಅವರನ್ನು ಕೆಪಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದಕ್ಕೆ ಹಠ ಹಿಡಿದಿಲ್ಲ. ಅವರಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವಂತೆ ವಿನಂತಿ ಮಾಡಿಕೊಂಡಿದ್ದೇವೆ ಎಂದು ಹೇಳಿಕೆ ನೀಡಿರುವುದು ಗಮನಿಸಿದರೆ, ಸಿಎಂ ಸಿದ್ದರಾಮಯ್ಯ ತಮ್ಮ ಬೆಂಬಲಿಗರಿಗೂ ಮೌನ ವಹಿಸುವಂತೆ ಹೇಳಿದ್ದಾರೆಂದೆ ಕಾಣಿಸುತ್ತಿದೆ. ಇನ್ನೊಂದೆಡೆ ಬಹಿರಂಗವಾಗಿ ತೋರಿಸಿಕೊಳ್ಳದೇ ತಮ್ಮ ತಂತ್ರಗಳನ್ನು ಗೌಪ್ಯವಾಗಿಯೇ ಮುಂದುವರಸಿರುವ ಶಿವಕುಮಾರ್, ಸಹೋದರ ಡಿ.ಕೆ ಸುರೇಶ್‌ ಅವರನ್ನು ಪ್ರತಿರೋಧ ವ್ಯಕ್ತಪಡಿಸುವಂತೆ ಬಿಟ್ಟಿರುವಂತಿದೆ.

ಆದಾಗ್ಯೂ ಬಹಿರಂಗವಾಗಿ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುವುದನ್ನು ಜಾರಿಯಲ್ಲಿರಿಸಿಕೊಂಡರೆ, ಪಕ್ಷದಲ್ಲಿ ಮೂಲೆ ಗುಂಪಾಗುವ ಸಾಧ್ಯತೆಗಳಿವೆ. ಹಾಗಾಗಿ ಸಿಕ್ಕ ಅಧಿಕಾರವನ್ನು ಚೆನ್ನಾಗಿ ಬಳಸಿಕೊಳ್ಳುವ ಒಪ್ಪಂದಕ್ಕೆ ಎರಡೂ ಬಣಗಳ ನಾಯಕರು ನಿಧಾನಕ್ಕೆ ಒಲವು ತೋರಿದಂತೆ ಕಾಣಿಸುತ್ತಿದೆ. ಬಹುಶಃ ಅದು ಯಶಸ್ವಿಯಾದಲ್ಲಿ ರಾಜ್ಯದ ಜನರು ಒಳ್ಳೆಯ ಆಡಳಿತವನ್ನು ನಿರೀಕ್ಷಿಸಬಹುದಾಗಿದೆ.

ಇನ್ನು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿದ್ದರಾಮಯ್ಯ ಬೆಂಬಲಿಗ ಸಚಿವರ ಪೈಕಿ ಹೆಚ್ಚು ಮಾತನಾಡುತ್ತಿರುವವರೆಂದರೆ ಸಚಿವ ಕೆ.ಎನ್. ರಾಜಣ್ಣ. ಇತ್ತೀಚೆಗೆ ಅವರು ಬಹಿರಂಗವಾಗಿಯೇ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಹೈಕಮಾಂಡ್‌ ಕೂಡ ಅಸಮಾಧಾನಗೊಂಡಿದೆ ಎನ್ನಲಾಗುತ್ತಿದೆ. ಪಕ್ಷದಲ್ಲಿ ಸೀನಿಯರ್‌ ಲೀಡರ್‌ ಆಗಿ ರಾಜಣ್ಣ ಪಕ್ಷದ ಪರಿಸ್ಥಿತಿಯನ್ನು ಅರಿತುಕೊಂಡು ಪಕ್ಷದ ರಾಜಕೀಯ ವರ್ಚಸ್ಸಿಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕಿರುವುದು ಅನಿವಾರ್ಯವಿದೆ. ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸೇರಿದಂತೆ ಕೆಲವರಿಗೆ ಭವಿಷ್ಯದಲ್ಲಿ ಕಾಂಗ್ರೆಸ್ ನಲ್ಲೇ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಅನಿವಾರ್ಯತೆಗಳಿವೆ. ಅವರ್ಯಾರೂ ಇಲ್ಲಿ ಬಿಟ್ಟರೆ ಬಿಜೆಪಿ ಅಥವಾ ಇನ್ನೆಲ್ಲಿಗೋ ಹೋಗುವವರಲ್ಲ. ಅಥವಾ ಬಂಡಾಯ ಎದ್ದು ಸ್ವತಂತ್ರವಾಗಿ ಹೋರಾಡುತ್ತೇನೆ ಎನ್ನುವುದಕ್ಕೆ ಅವರಿಗೆ ಬೆಂಬಲಿಗರೂ ಹೆಚ್ಚಿನ ಮಟ್ಟದಲ್ಲಿಲ್ಲ. ಹಾಗಾಗಿ ಯಾರೋ ಒಬ್ಬರಿಂದ ಖಾಲಿ ಆಗುವ ಸ್ಥಾನಕ್ಕಾಗಿ ಇವರೆಲ್ಲಾ ಲಾಭಕ್ಕಾಗಿ ಕಾದು ಕುಳಿತಿರುವುದು ಸಹಜ.

ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಶಿವಕುಮಾರ್ ಅವರನ್ನು ಬದಲಿಸುವ ವಿಚಾರದಲ್ಲಿ ಹೈಕಮಾಂಡ್ ಆಸಕ್ತಿ ತೋರಿಸುತ್ತಿಲ್ಲ. ಕಾಂಗ್ರೆಸ್ ಪಾಲಿಗೆ ಸಂಜೀವಿನಿಯಂತಿರುವ ಶಿವಕುಮಾರ್, ವಿವಿಧ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ತಮ್ಮೆಲ್ಲ ಶಕ್ತಿಯನ್ನೂ ಪಣಕ್ಕಿಟ್ಟಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ನಿಧಾನವಾಗಿ ಸಂಘಟನಾತ್ಮಕವಾಗಿ ಕುಸಿಯುತ್ತಿರುವ ಸನ್ನಿವೇಶದಲ್ಲಿ ಒಕ್ಕಲಿಗರ ಪ್ರಮುಖ ನಾಯಕನಾಗಿ ಶಿವಕುಮಾರ್ ರೂಪುಗೊಳ್ಳುತ್ತಿದ್ದಾರೆ. ಈ ಹಂತದಲ್ಲಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಆ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎನ್ನುವುದು ಹೈಕಮಾಂಡ್‌ ಗೆ ಚೆನ್ನಾಗಿ ತಿಳಿದಿದೆ. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಅವರನ್ನೂ ಕೆಳಗಿಳಿಸುವುದಕ್ಕೂ ಹೈಕಮಾಂಡ್‌ ತಯಾರಿಲ್ಲ. ಒಂದುವೇಳೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ʼಅಂಹಿಂದʼ ವರ್ಗದ ವಿರೋಧವೂ ಎದುರಾಗುತ್ತದೆ. ಹಾಗಾಗಿ ಈ ಅವಧಿಗೆ ಸಿಎಂ ಆಗಿ ಸಿದ್ದರಾಮಯ್ಯ ಅವರನ್ನೇ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಅವರನ್ನೇ ಮುಂದುವರಿಸುವಂತೆ ಮಾಡಿದರೇ ಉಳಿದವರನ್ನು ಹೇಗಾದರೂ ಸಮಧಾನ ಪಡಿಸಬಹುದೆಂಬ ಆಲೋಚನೆಯಲ್ಲಿ ಹೈಕಮಾಂಡ್‌ ಇದ್ದಂತಿದೆ. ಗೊತ್ತಿಲ್ಲ ʼಮೇʼ ಕಳೆದ ಮೇಲೆ ಏನೂ ಆಗಬಹುದು. ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ

 

Thursday, February 13, 2025

ಕಾಂಗ್ರೆಸ್‌ ನಾಯಕತ್ವ ಮತ್ತು ಕಳಪೆ ತಂತ್ರಗಾರಿಕೆ

 

ʼನಾಯಕತ್ವʼ ಜನರನ್ನು ತಲುಪುವ ಮಾದರಿಯಲ್ಲಿ ಬದಲಾಯಿಸಿಕೊಳ್ಳುವುದೇ ಕಾಂಗ್ರೆಸ್‌ ?  

ಒಂದು ರಾಷ್ಟ್ರೀಯ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿಯೇ ತನ್ನ ಅಸ್ತಿತ್ವವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದರ ಬಗ್ಗೆ ಇಂದಿನ ಸ್ಪಾಟ್‌ಲೈಟ್. ದೆಹಲಿ ಎಲ್ಲಾ ರಾಷ್ಟ್ರೀಯ ಪಕ್ಷಗಳಿಗೆ ಮಹತ್ತರವಾದದ್ದು. ರಾಷ್ಟ್ರ ರಾಜಧಾನಿಯಾಗಿರುವುದರಿಂದ ಕೇಂದ್ರದಲ್ಲಿ ಅಧಿಕಾರಲ್ಲಿರುವ ಪಕ್ಷಕ್ಕೂ, ವಿಪಕ್ಷಗಳಿಗೂ ದೆಹಲಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಎನ್ನುವುದೇ ಗುರಿ. ಕ್ಯಾಪಿಟಲ್‌ ಸಿಟಿಯಲ್ಲೇ ಅಧಿಕಾರ ಕಳೆದುಕೊಂಡರೆ, ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿದ್ದರೂ, ಅಧಿಕಾರದ ಗತ್ತು ಗಾಂಭೀರ್ಯ ಇಲ್ಲದಿರುವಂತೆಯೆ ಸರಿ. ಅಥವಾ ಕ್ಯಾಪಿಟಲ್‌ ಕಳೆದುಕೊಂಡು ಅಧಿಕಾರ ನಡೆಸುವುದೆಂದರೆ ಅದೊಂಥರ ಹಿಂದಿನ ಎಲುಬನ್ನೆ ಕಳೆದುಕೊಂಡಂತೆ. ಕಳೆದ ಹತ್ತು ವರ್ಷಗಳಲ್ಲಿ ದೆಹಲಿಯನ್ನು ಆಳಿದ್ದು ಕೇಜ್ರೀವಾಲ್ ನೇತೃತ್ವದ ಆಮ್‌ ಆದ್ಮಿ ಪಾರ್ಟಿ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಿದ್ದರೂ ದೆಹಲಿಯ ರಾಜಕಾರಣವನ್ನು ಹಿಡಿಯುವುದಕ್ಕೆ ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ಬಿಜೆಪಿ ಈ ಬಾರಿ ಅಧಿಕಾರಕ್ಕೇರಿದೆ. ಇನ್ನು, ಕಾಂಗ್ರೆಸ್‌ ಅಂತೂ ಆಮ್‌ ಆದ್ಮಿ ಪಾರ್ಟಿ ಅಸ್ತಿತ್ವಕ್ಕೆ ಬಂದ ಮೇಲೆ ದೆಹಲಿಯಲ್ಲಿ ಅಕ್ಷರಶಃ ನಿಶ್ಯಕ್ತಿಯಿಂದ ಬಳಲಿದೆ.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್‌, ರಾಷ್ಟ್ರ ರಾಜಧಾನಿ ದೆಹಲಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಯೂ ಶೂನ್ಯ ಬರೆದಿದೆ. ಹಾಗಾಗಿ ದೆಹಲಿ ರಾಜಕಾರಣದಲ್ಲಿ ಕಾಂಗ್ರೆಸ್‌ ಈ ಬಾರಿಯೂ ಕಳೆದುಕೊಂಡಿದ್ದು ಏನೂ ಇಲ್ಲ. ರಾಷ್ಟ್ರ ರಾಜಧಾನಿಯಲ್ಲೇ ಕಳೆದ ಹತ್ತು ವರ್ಷಗಳಿಂದೀಚೆಗೆ ಒಂದೇ ಒಂದು ಶಾಸಕ ಸ್ಥಾನ ಗಿಟ್ಟಿಸಿಕೊಳ್ಳದ, ಒಂದೇ ಒಂದು ಸಂಸತ್ ಸ್ಥಾನವನ್ನು ಪಡೆದುಕೊಳ್ಳದ ಕಾಂಗ್ರೆಸ್, ಈ ಬಾರಿ ಮರ್ಯಾದೆಗೂ ಅಂಜದೆ ಚುನಾವಣೆಗೆ ಸ್ಪರ್ಧಿಸಿದ್ದೆ ದೊಡ್ಡದು. ಇದನ್ನು ಕಾಂಗ್ರೆಸ್‌ನ ದುರಿತ ಕಾಲ ಎನ್ನಬೇಕೋ ಅಥವಾ ಕಾಂಗ್ರೆಸ್‌ ನಾಯಕತ್ವದ ದಾರಿದ್ರ್ಯ ಎನ್ನಬೇಕೋ ತಿಳಿಯುತ್ತಿಲ್ಲ. 

ಬಹುಶಃ ಕಾಂಗ್ರೆಸ್‌ನಂತಹ ದೇಶದ ಅತ್ಯಂತ ಹಿರಿಯ ಪಕ್ಷ ದೇಶದ ರಾಜಧಾನಿಯಲ್ಲೇ ಒಂದೇ ಒಂದು ಕ್ಷೇತ್ರ ಪಡೆದುಕೊಳ್ಳದೆ ಹೀನಾಯ ಸೋಲನುಭವಿಸುತ್ತದೆ ಎಂದರೆ, ಅದರ ನಾಯಕತ್ವ ಮತ್ತು ಅದರ ಸೈದ್ಧಾಂತಿಕ ಗೊಂದಲವನ್ನೇ ಎತ್ತಿ ಹಿಡಿಯುತ್ತದೆ. ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್‌ ಪುನರುಜ್ಜೀವನವನ್ನು ಕಾಣುವುದಕ್ಕೂ ಸಾಧ್ಯವಾಗದಷ್ಟರ ಮಟ್ಟಿಗೆ ಕೃಶವಾಗಿದೆ. ಕಾಂಗ್ರೆಸ್‌ ರಾಜಕಾರಣವನ್ನು ಮಣ್ಣು ಮುಕ್ಕಿಸಬೇಕು ಎಂದು ಹಠ ತೊಟ್ಟ ಪಕ್ಷವನ್ನು ಚೂರು ಅಲುಗಾಡಿಸುವುದಕ್ಕೆ ಸ್ವತಂತ್ರವಾಗಿ ಕಾಂಗ್ರೆಸ್‌ ಪಕ್ಷಕ್ಕೆ ಇದುವರೆಗೆ ಸಾಧ್ಯವಾಗಿಲ್ಲ ಎನ್ನುವುದೇ ಬಹುಶಃ ಕಳೆದೊಂದು ದಶಕದ ರಾಜಕೀಯದ ದೊಡ್ಡ ದುರಂತವೆಂದೇ ಹೇಳಬಹುದು.    

ರಾಷ್ಟ್ರ ರಾಜಧಾನಿಯ ಚುನಾವಣೆಗಳಲ್ಲಿನ ನಿರಂತರ ಸೋಲಿನಲ್ಲಿ ಕಾಂಗ್ರೆಸ್‌ಗೆ ಬಹಳ ದೊಡ್ಡ ಪಾಠವಿದೆ. ಕಾಂಗ್ರೆಸ್‌ ಅದನ್ನು ತುರ್ತಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ದೆಹಲಿಯ ಚುನಾವಣಾ ಫಲಿತಾಂಶದ ಬಳಿಕ ಕಾಂಗ್ರೆಸ್‌ನ ನೈತಿಕ ಸ್ಥೈರ್ಯಕ್ಕೆ ಬಲವಾದ ಪೆಟ್ಟು ಬಿದ್ದಿದ್ದಂತೂ ಸತ್ಯ. ಕಾಂಗ್ರೆಸ್‌ ಕಳೆದ ಕೆಲವು ವರ್ಷಗಳಿಂದ ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಪದೆ ಪದೆ ತಿನ್ನುತ್ತಿರುವ ಬಲವಾದ ಏಟಿನಿಂದ ಚೇತರಿಸಿಕೊಳ್ಳುವುದಕ್ಕೂ ಪ್ರಯತ್ನಿಸದಿದ್ದರೆ ಅದರ ಭವಿಷ್ಯ ಚಿಂತಾಜನಕವಾಗಿದೆ. ಚುನಾವಣಾ ತಂತ್ರ ಹೆಣೆಯುವುದರಲ್ಲಿ, ಪಕ್ಷ ಸಂಘಟನೆ ಮಾಡುವುದರಲ್ಲಿ ಕಾಂಗ್ರೆಸ್ ಸೋಲುತ್ತಿದೆ. ಕಾಂಗ್ರೆಸ್‌ನ ನಾಯಕತ್ವ ತಳಮಟ್ಟದ ರಾಜಕಾರಣಕ್ಕೆ ತಲುಪದೆ ಇರುವುದೆ ಕಾಂಗ್ರೆಸ್‌ ಈಗ ಅನುಭವಿಸುತ್ತಿರುವ ದೊಡ್ಡ ಸಮಸ್ಯೆಗೆ ಮೂಲ ಕಾರಣ.

ಇನ್ನು, ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ, ಭಾರತ್‌ ಜೋಡೋ ನ್ಯಾಯ್‌ ಯಾತ್ರೆಗಳ ಮೂಲಕ ದೇಶವ್ಯಾಪಿ ತಮ್ಮ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಂಡಿರುವುದು ಮತ್ತು ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ರಾಹುಲ್‌ ಧ್ವನಿ ಎತ್ತುತ್ತಿರುವುದರ ಬಗ್ಗೆ ಸ್ವತಃ ಬಿಜೆಪಿಗೂ ಸಣ್ಣ ಭಯ ಇದೆ. ಆದರೇ, ನರೇಂದ್ರ ಮೋದಿ ಅವರಿಗೆ ಬಿಜೆಪಿ ಮತ್ತು ʼಹಿಂದೂ ಧರ್ಮ ರಾಜಕಾರಣʼ ತಂದು ಕೊಟ್ಟ ಚರಿಷ್ಮಾದ ಎದುರಿಗೆ ಸಮನಾಗಿ ರಾಹುಲ್‌ ಗಾಂಧಿ, ಜನರ ಕಣ್ಣಿಗೆ ಕಾಣಿಸುತ್ತಿಲ್ಲವಾದ್ದರಿಂದ ʼರಾಹುಲ್‌ ಗಾಂಧಿಯಂತಹ ನಾಯಕತ್ವದ ಎಲ್ಲಾ ಅರ್ಹತೆʼಯೂ ಬದಿಗೆ ಸರಿಯುತ್ತಿದೆ. ಬಹುಶಃ ಅದು ಕಾಂಗ್ರೆಸ್‌ ಮತ್ತು ರಾಹುಲ್‌ ಅವರ ತಪ್ಪು ಕೂಡ ಹೌದು.

ಕಾಂಗ್ರೆಸ್‌ ಸಿದ್ದಾಂತ ಕ್ರಾಂತಿಕಾರಿ ಸಿದ್ದಾಂತವಾಗಿದೆ. ಅಹಿಂಸ್ಮಾತಕವಾಗಿ ನಾವು ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದೇವು. ಈ ಮೂಲಕ ನಾವು ಬ್ರಿಟೀಷರನ್ನು ಸೋಲಿಸಿದೆವು. ಭಾರತೀಯರ ಹೃದಯದಲ್ಲಿ ಈ ಸಿದ್ದಾಂತವು ಅತ್ಯಂತ ಪ್ರಬಲವಾಗಿದೆ. ಪ್ರಸ್ತುತ ಈ ಸಿದ್ಧಾಂತದ ಮೇಲೆ ಆರ್‌.ಎಸ್‌.ಎಸ್‌ ಸಿದ್ಧಾಂತವು ದಾಳಿ ನಡೆಸುತ್ತಿದೆ. ಆರ್‌.ಎಸ್‌.ಎಸ್‌ ಸಿದ್ಧಾಂತವು ಹಿಂಸಾತ್ಮಕ ಮತ್ತು ಪುರುಷ ದುರಾಭಿಮಾನದ ಸಿದ್ಧಾಂತವಾಗಿದೆ. ಕಾಂಗ್ರೆಸ್ ನ ಮೂಲ ಸಿದ್ಧಾಂತದ ರಕ್ಷಣೆಯಿಂದ ಕಾಂಗ್ರೆಸ್‌ ಅನ್ನು ಬಲಪಡಿಸಬೇಕಿದೆ. ದೇಶದಾದ್ಯಂತ ಎಲ್ಲೆಲ್ಲಿ ಕಾಂಗ್ರೆಸ್‌ ಸಿದ್ಧಾಂತದ ಮೇಲೆ ದಾಳಿ ನಡೆಯುತ್ತಿದೆಯೋ ಅಲ್ಲೆಲ್ಲಾ ಕಾಂಗ್ರೆಸ್‌ ಸಂಘಟನೆಯು ನಮ್ಮ ಮೂಲ ಸಿದ್ಧಾಂತದ ರಕ್ಷಣೆಗೆ ನಿಲ್ಲಬೇಕು” ಎಂದು ರಾಹುಲ್ ಗಾಂಧಿ ಪಕ್ಷವನ್ನು ಉದ್ದೇಶಿಸಿ ಹೇಳಿರುವುದು ರಾಹುಲ್‌ ಅವರಿಗಿರುವ ಸ್ಥಿತಪ್ರಜ್ಞೆ. ಆದರೇ, ರಾಹುಲ್‌ ಮುಖ್ಯ ರಾಜಕಾರಣಕ್ಕೆ ಬರುವುದಕ್ಕೂ ಮೊದಲು ಕಾಂಗ್ರೆಸ್‌ನ ಹಿರಿಯ ತಲೆಮಾರಿನ ನಾಯಕರು ಪಕ್ಷದ ವಿಷಮ ಸ್ಥಿತಿಯಲ್ಲಿ ಏನು ಮಾಡುತ್ತಿದ್ದರು ಎನ್ನುವುದು ಇಲ್ಲಿ ದೊಡ್ಡ ಪ್ರಶ್ನೆ. ರಾಹುಲ್‌ ಹೇಳಿರುವ ಎಲ್ಲಾ ವಿಷಯವೂ ಕಾಂಗ್ರೆಸ್‌ನ ದೃಷ್ಟಿಯಲ್ಲಿ ಸರಿ. ಆದರೇ, ಒಂದು ಸಿದ್ಧಾಂತ, ಇನ್ನೊಂದು ಸಿದ್ಧಾಂತದ ಮೇಲೆ ದಾಳಿ ಮಾಡುವುದು ಅಥವಾ ತನ್ನ ಸಿದ್ಧಾಂತದ ಗೆಲುವಿಗಾಗಿ ಶ್ರಮಿಸುವುದು ಲೋಕದ ಸಹಜ ನಿಯಮ. ಕಾಂಗ್ರೆಸ್‌ ನ ಮೂಲ ಸಿದ್ಧಾಂತದ ಮೇಲೆ ಆರ್‌.ಎಸ್‌.ಎಸ್‌ ಸಿದ್ಧಾಂತ ದಾಳಿ ಮಾಡುತ್ತಿರುವಾಗ ಕಾಂಗ್ರೆಸ್‌ ಎಚ್ಚರ ತಪ್ಪಿತ್ತೇ ?ಅದಕ್ಕೆ ಕಾಂಗ್ರೆಸ್‌ ಸಡಿಲಗೊಂಡಿರುವುದೇ ಕಾರಣ ಅಲ್ಲವೇ ? ಎನ್ನುವುದನ್ನು ಕಾಂಗ್ರೆಸ್‌ ಮತ್ತು ರಾಹುಲ್‌ ಪರಾಮರ್ಶಿಸಿಕೊಳ್ಳಬೇಕಿದೆ. ಇನ್ನು, ರಾಹುಲ್‌ ಹೇಳಿರುವುದನ್ನು ಕಾಂಗ್ರೆಸ್‌ನ ಎಷ್ಟು ನಾಯಕರು ಸ್ವೀಕರಿಸುತ್ತಾರೆ ಅಥವಾ ರಾಹುಲ್‌ ಹೇಳಿರುವುದು ಸ್ಥಳೀಯ ಮಟ್ಟದ ಎಷ್ಟು ಕಾರ್ಯಕರ್ತರಿಗೆ ತಲುಪಿದೆ/ತಲುಪುತ್ತದೆ ಎನ್ನುವುದು ಕೂಡ ಇಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.

ದೇಶದೆಲ್ಲೆಡೆಯ ಕಾಂಗ್ರೆಸ್‌ನ ಈ ದಯನೀಯ ಸ್ಥಿತಿಗೆ ತಳಮಟ್ಟಕ್ಕೆ ಕಾಂಗ್ರೆಸ್‌ ನಾಯಕತ್ವ ತಲುಪದಿರುವುದೇ ಮೂಲ ಕಾರಣ. ಹಾಗಾಗಿ ಬಹುಶಃ ಕಾಂಗ್ರೆಸ್‌ ತನ್ನ ನಾಯಕತ್ವವನ್ನು ತಲುಪಿಸುವ ಮಾದರಿಯನ್ನು ಅಗತ್ಯವಾಗಿ ಪರಿವರ್ತಿಸಿಕೊಳ್ಳಬೇಕಿದೆ. ಪಕ್ಷ ಸಂಘಟನೆಗಾಗಿ ರಾಹುಲ್‌ ಅವರಂತಹ ಸಮಾನ ಮನಸ್ಸಿನ ನಾಯಕರು, ಯುವಕರು, ಚಿಂತಕರನ್ನು ಕಾಂಗ್ರೆಸ್‌ ಅಗತ್ಯವಾಗಿ ವೃದ್ಧಿಸಿಕೊಳ್ಳಬೇಕಿದೆ. ಈಚೆಗಿನ ವರ್ಷಗಳಲ್ಲಿ ಕಾಂಗ್ರೆಸ್‌ ಅನುಸರಿಸುತ್ತಿರುವ ಯಾವ ಕಾರ್ಯತಂತ್ರವೂ ಮತದಾರರ ಮೇಲೆ ಸುದೀರ್ಘ ಪರಿಣಾಮ ಬೀರುತ್ತಿಲ್ಲ. ಇವೆಲ್ಲವೂ ಕಾಂಗ್ರೆಸ್‌ ದೇಶವ್ಯಾಪಿ ಹಿನ್ನೆಡೆ ಅನುಭವಿಸುತ್ತಿರುವುದಕ್ಕೆ ಮೂಲ ಕಾರಣ. ಇವೆಲ್ಲವನ್ನು ಅರ್ಥ ಮಾಡಿಕೊಳ್ಳುವವರೆಗೆ ಕಾಂಗ್ರೆಸ್‌ ಸುಧಾರಿಸುವುದಿಲ್ಲ. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಗುರುತು ಅವು ಪಾಲಿಸುವ ಸಿದ್ದಾಂತಗಳ ಮೇಲೆ ಆಧಾರವಾಗಿರುತ್ತದೆ. ಬಿಜೆಪಿಯ ಯಾರೇ ಒಬ್ಬ ಕಾರ್ಯಕರ್ತನನ್ನು ಕರೆದು ಕೇಳಿದರೆ, ತಡ ಮಾಡದೆ ನಮ್ಮದು ʼಹಿಂದುತ್ವ ಸಿದ್ಧಾಂತʼ, ʼಹಿಂದುತ್ವವೇ ನಮ್ಮ ರಾಷ್ಟ್ರೀಯತೆʼ ಎಂದು ಹೇಳುತ್ತಾನೆ. ಆದರೇ, ಕಾಂಗ್ರೆಸ್‌ ಕಾರ್ಯಕರ್ತ ಏನು ಹೇಳುತ್ತಾನೆ ? ಕಾಂಗ್ರೆಸ್‌ ಕಾರ್ಯಕರ್ತ ಅಕ್ಷರಶಃ ತಡವರಿಸುತ್ತಾನೆ. ಇದು ಕಾಂಗ್ರೆಸ್‌ ಹಿರಿಯ ನಾಯಕರಲ್ಲಿಯೂ ಇರುವ ಸಮಸ್ಯೆ. ʼಸೆಕ್ಯುಲರಿಸಂʼ ನಮ್ಮ ಸಿದ್ಧಾಂತ ಎಂದು ವಾದಿಸುವುದಾದರೇ, ಹಿಂದುತ್ವ, ಹಿಂದೂ ಧರ್ಮವನ್ನು, ಹಿಂದೂ ಧಾರ್ಮಿಕ ನಂಬಿಕೆಗಳನ್ನು ಯಾಕೆ ಅವಮಾನಿಸುತ್ತೀರಿ ಎನ್ನುವ ವಾದ ಖಂಡಿತ ಎದುರಾಗುತ್ತದೆ. ʼಸಂವಿಧಾನದ ಆಶಯಗಳೇ ನಮ್ಮ ಸಿದ್ಧಾಂತʼ ಎಂದು ಎಷ್ಟು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಧೈರ್ಯ ಮಾಡಿ ಹೇಳುತ್ತಾರೆ ? ಧೈರ್ಯ ಮಾಡಿ ಹೇಳದಿರುವಂತೆ ಆಗಿರುವುದೇ ಕಾಂಗ್ರೆಸ್‌ ನಾಯಕತ್ವದ ಕಾರಣದಿಂದ. ಹಾಗಾಗಿ ದೇಶದಾದ್ಯಂತ ಕಾಂಗ್ರೆಸ್ ನಾಯಕತ್ವ, ಪಕ್ಷದ ಕಾರ್ಯಕರ್ತರನ್ನು ಹಾಗೂ ಜನರನ್ನು ತಲುಪುವ ಮಾದರಿಯಲ್ಲಂತೂ ಅಗತ್ಯವಾಗಿ ಬದಲು ಮಾಡಿಕೊಳ್ಳಬೇಕಿದೆ. ಬಹುಶಃ, ಇದಕ್ಕಾಗಿಯೇ ಕಾಂಗ್ರೆಸ್‌ ಸುದೀರ್ಘ ಕಾಲಾವಧಿಯನ್ನು ತೆಗೆದುಕೊಳ್ಳಬಹುದು. ಬಹುಶಃ ಇದು ಆಗುವವರೆಗೆ ದೆಹಲಿಯ ಅನುಭವ ಮರುಕಳಿಸುತ್ತಲೇ ಇರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.    

-ಶ್ರೀರಾಜ್ ವಕ್ವಾಡಿ

Thursday, February 6, 2025

ರಾಜ್ಯ ಬಿಜೆಪಿಯ ಹಾಸ್ಯ ಪ್ರಸಂಗ

 

ವಿಜಯೇಂದ್ರ ವಿರುದ್ಧ ಒಟ್ಟಾದ ಭಿನ್ನರು | ಸಮರ್ಥ ನಾಯಕತ್ವದ ಕೊರತೆ

ʼಹಣ್ಣು ತುಂಬಿದ ಮರಕ್ಕೆ ಕಲ್ಲುʼ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ವಿಚಾರಕ್ಕೆ ಸಂಬಂಧಿಸಿ ಹೇಳುವುದಕ್ಕೆ ಸಾಧ್ಯವಿದೆಯೇ ? ವಿಜಯೇಂದ್ರ ಯಾವ ಲೆಕ್ಕದಲ್ಲಿ ಹಣ್ಣು ತುಂಬಿದ ಮರ ? ಅಥವಾ ಸಾರ ಕಳೆದು ಒಣಗಿದ ಮರ ಎಂಬ ಕಾರಣಕ್ಕಾಗಿ ಭಿನ್ನರು ಅವರ ವಿರುದ್ಧ ಕಲ್ಲು ಎಸೆಯುತ್ತಿದ್ದಾರೆಯೇ ? ಉತ್ತರ ಹುಡುಕಾಟದಲ್ಲಿ ರಾಜಕೀಯ ವಲಯ ನಿರತವಾಗಿದೆ.

ಈ ನಡುವೆ, ವಿಜಯೇಂದ್ರ ಯಡಿಯೂರಪ್ಪ ಒಬ್ಬ ಉತ್ತಮ ಸಂಘಟಕ, ರಾಜಕೀಯ ತಂತ್ರಗಾರ ಎಂಬೆಲ್ಲಾ ಶ್ರೇಯ ʼಉಳ್ಳವರ ಸಾಧ್ಯತೆʼಗಳಲ್ಲಿ ಪಡೆದಂತವುಗಳು. ರಾಜಕೀಯಕ್ಕೆ ಅವರ ತಂದೆಯ ರಾಜಕೀಯ ಪ್ರಭಾವಳಿ ಬಹುದೊಡ್ಡ ಸಹಾಯವನ್ನೇ ಮಾಡಿದೆ ಎಂದು ಹೇಳಬಹುದು. ಬಿ. ಎಸ್‌. ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ ಎಂದೇ ಗುರುತಿಸಿಕೊಂಡವರು. ರಾಜ್ಯ ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದಿಂದ ಬಂದ ಅನೇಕ ಪ್ರಭಾವಿ ನಾಯಕರುಗಳಿದ್ದರೂ ʼಸಮುದಾಯದ ನಾಯಕʼ ಎಂದು ಗುರುತಿಸಿಕೊಳ್ಳುವುದಕ್ಕೆ ಬಹುಶಃ ಯಡಿಯೂರಪ್ಪ ಅವರನ್ನು ಹೊರತಾಗಿ ಬೇರೆ ಯಾರಿಗೂ ಸಾಧ್ಯವಾಗಿಲ್ಲ. ವಿಜಯೇಂದ್ರ ಯಡಿಯೂರಪ್ಪ ತಂದೆಯ ಕಾರಣಕ್ಕಾಗಿಯೇ ಲಿಂಗಾಯತ ಸಮುದಾಯದ ಯುವ ನಾಯಕ ಎಂದು ಕರೆಸಿಕೊಳ್ಳುತ್ತಾರೆಯೇ ಹೊರತು, ಅವರ ಸ್ವಂತ ನಾಯಕತ್ವ ಅಥವಾ ರಾಜಕೀಯದ ವರ್ಚಸ್ಸಿನಿಂದ ಖಂಡಿತ ಅಲ್ಲ. ಬಹುಶಃ ಲಿಂಗಾಯತ ಸಮುದಾಯವೂ ಕೂಡ ವಿಜಯೇಂದ್ರ ಅವರನ್ನು ತಮ್ಮ ಸಮುದಾಯದ ಭವಿಷ್ಯದ ಸಮರ್ಥ ನಾಯಕ ಎಂದು ಸರ್ವ ಸಮ್ಮತವಾಗಿ ಮನಸಾರೆ ಒಪ್ಪಿಕೊಳ್ಳುವುದಿಲ್ಲವೋ ಏನೋ. ಒಪ್ಪಿಕೊಂಡರೂ ಅದಕ್ಕೆ ಅನೇಕ ಕಾರಣಗಳಿರಬಹುದು.

ಸರ್ವ ಸಮ್ಮತ ನಾಯಕ ಎನ್ನುವ ಅಭಿಪ್ರಾಯ ಯಾವ ಕಾಲಕ್ಕೂ, ಯಾವ ವಿಚಾರದಲ್ಲೂ, ಯಾವ ಸಿದ್ದಾಂತಗಳಲ್ಲೂ, ಯಾವ ರಾಜಕೀಯ ಪಕ್ಷಗಳಲ್ಲಿಯೂ ಬರುವುದಿಲ್ಲ. ಇಲ್ಲಿ ಎಲ್ಲರೂ, ಎಲ್ಲವೂ ಅನನ್ಯ ಎನ್ನುವ ಅಭಿಪ್ರಾಯ ಬರುವವರೆಗೆ ಭಿನ್ನಮತ ಇದ್ದೇ ಇರುತ್ತದೆ. ಬಹುಶಃ ರಾಜ್ಯ ಬಿಜೆಪಿಯಲ್ಲಿ ಇದು ಸದ್ಯಕ್ಕಂತೂ ಸಾಧ್ಯವಿಲ್ಲವೆಂದೆ ಕಾಣಿಸುತ್ತಿದೆ. ವಿಜಯೇಂದ್ರ ಅವರ ವಿರುದ್ಧ ಒಂದೆಡೆ ಯತ್ನಾಳ್‌, ರಮೇಶ್‌ ಜಾರಕೀಹೊಳಿ, ಕುಮಾರ್‌ ಬಂಗಾರಪ್ಪ, ಡಾ. ಕೆ. ಸುಧಾಕರ್‌ ಸೇರಿ ಮೊದಲಾದ ಭಿನ್ನರ ದೂರು ವರಿಷ್ಠರನ್ನು ಅಧಿಕೃತವಾಗಿ ತಲುಪಿದೆ. ಇನ್ನೊಂದೆಡೆ ರೇಣುಕಾಚಾರ್ಯ ನೇತೃತ್ವದಲ್ಲಿ ಹೊಸದೊಂದು ತಂಡ ತಯಾರಾಗಿದ್ದು, ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರವಾಗಿ ವರಿಷ್ಠರ ಮುಂದೆ ಬ್ಯಾಟ್‌ ಬೀಸಲು ಮುಂದಾಗಿದೆ. ಏನೇ ಆದರೂ ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ಮತ್ತವರ ಕುಟುಂಬದಿಂದ ಮುಕ್ತಗೊಳಿಸುವವರೆಗೆ ತಮ್ಮ ಹೋರಾಟ ನಿಲ್ಲಿಸಲ್ಲ ಎಂದು ಯತ್ನಾಳ್‌ ಪಟ್ಟು ಹಿಡಿದಿದ್ದಾರೆ.     

ಇನ್ನು, ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಯಡಿಯೂರಪ್ಪ ಅವರ ಮೌನ ಇಲ್ಲಿ ಎದ್ದು ಕಾಣಿಸುತ್ತಿದೆ. ಬಿಎಸ್‌ವೈ ಹಿಡಿತದಲ್ಲಿದ್ದ ರಾಜ್ಯ ಬಿಜೆಪಿಯನ್ನು ಹೈಕಮಾಂಡ್‌ ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವುದರ ಮುನ್ಸೂಚನೆ ಅವರಿಗೆ ತಿಳಿದಂತೆ ಕಾಣಿಸುತ್ತಿದೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಹೊತ್ತಿಗೆ ಅವರಿಗೆ ಒಂದು ಹಂತಕ್ಕೆ ಈ ಬಗ್ಗೆ ಅರಿವಾಗಿತ್ತು. ಅಂದು ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದಕ್ಕೆ ಹೈಕಮಾಂಡ್‌ ಮುಂದಾಗಿದ್ದಾಗಲೂ ಇನ್ನು ಉಳಿದೆರಡು ವರ್ಷ ತಾವೇ ಸಿಎಂ ಎಂದು ಘಂಟಾಘೋಷವಾಗಿ ಹೇಳಿಕೊಳ್ಳುತ್ತಿದ್ದರು. ನಾಯಕತ್ವದ ಬಗ್ಗೆ ಯಾವ ಗೊಂದಲವೂ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದರು. ಅಂದು ಏನು ನಡೆದಿತ್ತೋ ಅಂತೆಯೆ ಬಹುತೇಕ ಅದೆ ಪರಿಸ್ಥಿತಿ ಈಗ ಮಗನಿಗೂ ಎದುರಾಗಿದೆ. ವಿಜಯೇಂದ್ರ ಯಡಿಯೂರಪ್ಪ ಕೂಡ ಇಷ್ಟೆಲ್ಲಾ ವಿರೋಧ ಎದುರಿಸುತ್ತಿದ್ದರೂ ಕೂಡ ತಾವೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುತ್ತೇನೆ ಎಂದೇ ಹೇಳಿಕೊಳ್ಳುತ್ತಿದ್ದಾರೆ. ಅವರಲ್ಲಿ ಅಧೈರ್ಯದ ಲವಲೇಶವೂ ಕಾಣಿಸದೇ ಇರುವಂತೆ ನಡೆದುಕೊಳ್ಳುತ್ತಿದ್ದಾರೆ. ಆದರೇ, ಕಳೆದ ಕೆಲವು ತಿಂಗಳಿಂದ ರಾಜ್ಯ ಬಿಜೆಪಿಯಲ್ಲಿ ಉಂಟಾದ ಗೊಂದಲಗಳ ಕಾರಣದಿಂದ ಸ್ವಲ್ಪ ಕಳೆಗುಂದಿದಂತೆಯೂ ಕಾಣಿಸುತ್ತಿದೆ. ಮೊದಲಿದ್ದ ʼಬಾಸಿಸಂʼ ಧೋರಣೆ ಕಡಿಮೆಯಾದಂತಿದೆ.

ಹಾಸಿ ಹೊದೆಯುವಷ್ಟು ಬಿಜೆಪಿಯಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಈ ನಡುವೆ ರಾಜ್ಯದ ವಿಚಾರದಲ್ಲಿ ಲಿಂಗಾಯತ ಮತಗಳನ್ನು ಎದುರು ಹಾಕಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣದಿಂದ ಈವರೆಗೆ ಯಡಿಯೂರಪ್ಪ ಅವರನ್ನು ಸಾಧ್ಯವಾದ ಮಟ್ಟಿಗೆ ಸಮಾಧಾನ ಪಡಿಸುತ್ತಲೇ ಬಂದಿರುವ ಬಿಜೆಪಿ ಹೈಕಮಾಂಡ್‌ಗೂ ಈಗ ಸುಸ್ತಾಗಿದೆ. ಹಾಗಾಗಿ ರಾಜ್ಯ ಬಿಜೆಪಿಯನ್ನು ಸಂಪೂರ್ಣ ಯಡಿಯೂರಪ್ಪ ಅವರ ಕಪಿಮುಷ್ಠಿಯಿಂದ ತಪ್ಪಿಸುವ ಪ್ರಯತ್ನವೂ ಹೈಕಮಾಂಡ್‌ ಮಟ್ಟದಲ್ಲಿ ಈ ಹಿಂದೆಯೂ ನಡೆದಿತ್ತು. ಆದರೆ, ಅದು ಎಂದೂ ಯಶಸ್ವಿಯಾಗಿರಲಿಲ್ಲ. ಈ ಬಾರಿಯ ಪ್ರಯತ್ನದಲ್ಲಿ ಹೈಕಮಾಂಡ್‌ ಹಿಂದೆ ಸರಿಯುವುದಿಲ್ಲ ಎಂದೇ ಕಾಣಿಸುತ್ತಿದೆ. ಯಡಿಯೂರಪ್ಪ ಅವರೊಬ್ಬರನ್ನು ಸಮಾಧಾನ ಪಡಿಸುವ ಉದ್ದೇಶದಿಂದ ಉಳಿದ ಭಿನ್ನರ, ರಾಜ್ಯದ ಮಟ್ಟಿಗೆ ತಮ್ಮದೇ ಆದ ರಾಜಕೀಯ ವರ್ಚಸ್ಸು ಹಾಗೂ ಪ್ರಭಾವ ಬೆಳೆಸಿಕೊಂಡಿರುವ ನಾಯಕರನ್ನು ಕೈ ಬಿಡುವುದಕ್ಕೆ ಹೈಕಮಾಂಡ್‌ ತಯಾರಿಲ್ಲ.

ಬಹಳ ಪ್ರಮುಖವಾಗಿ ರಾಜ್ಯ ಬಿಜೆಪಿಯಲ್ಲಿ ಕೊರತೆಯಾಗಿ ಕಾಣಿಸುತ್ತಿರುವುದು ಸಮರ್ಥ ಹಾಗೂ ಸರ್ವ ಸಮ್ಮತ ನಾಯಕತ್ವ. ಕಳೆದ ಕೆಲವು ವರ್ಷಗಳಿಂದ ನಾಯಕತ್ವವನ್ನೇ ಬಿಜೆಪಿ ಕಳೆದುಕೊಂಡಿದೆ. ಬಿಜೆಪಿ ಹಿಂದೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಹೊರತು, ಅಲ್ಲಿ ಒಬ್ಬ ಸಮರ್ಥ ನಾಯಕ ಇಲ್ಲ. ಅದು ರಾಜ್ಯದಲ್ಲಿಯೂ ಹೌದು, ರಾಷ್ಟ್ರದಲ್ಲಿಯೂ ಹೌದು. ರಾಷ್ಟ್ರದಲ್ಲಿ ಒಬ್ಬ ಸಮರ್ಥ ನಾಯಕನಿಲ್ಲದೇ, ರಾಜ್ಯದಲ್ಲಿಯೂ ಸಮರ್ಥ ನಾಯಕತ್ವವನ್ನು ಬೆಳೆಸುವುದರಲ್ಲಿ ಬಿಜೆಪಿ ಹೀನಾಯವಾಗಿ ಸೋಲುತ್ತಿದೆ. ಬಿಜೆಪಿಯ ಬೌದ್ಧಿಕ ಶ್ರೀಮಂತಿಕೆಯ ಕೊರತೆಯದು. ಬಿಜೆಪಿಗೆ ಮತ ನೀಡುವ ಮತದಾರರು ಕೂಡ ಹಿಂದುತ್ವದ ಆಧಾರದಲ್ಲಿ ಮತ ಕೊಟ್ಟು ಬಿಜೆಪಿಯನ್ನು ಪೊರೆಯುತ್ತಿದ್ದಾರೆ ಹೊರತು, ಬಿಜೆಪಿಯಲ್ಲಿ ಒಂದು ಸಮರ್ಥ ನಾಯಕತ್ವ ಇದೆ ಎಂದಲ್ಲ.

ಬಿಜೆಪಿಯೊಳಗಿನ ಈ ಬಣ ಜಗಳ ಸ್ವತಃ ಬಿಜೆಪಿ ಕಾರ್ಯಕರ್ತರಲ್ಲಿಯೂ ಅಸಮಧಾನ ಮೂಡಿಸಿದೆ. ಬಿ.ಎಸ್‌ ಯಡಿಯೂರಪ್ಪ ಅವರ ರಾಜಕೀಯ ಪ್ರಭಾವಳಿಯಲ್ಲಿ ರಾಜ್ಯ ರಾಜಕಾರಣದ ಮುಖ್ಯ ಸ್ತರಕ್ಕೆ ಬಂದ ಅವರ ಮಗ ವಿಜಯೇಂದ್ರ ಯಡಿಯೂರಪ್ಪ ಅವರನ್ನು ಹೈಕಮಾಂಡ್‌ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿಕೊಳ್ಳುವಾಗ ಸೃಷ್ಟಿಯಾಗಿದ್ದ ಅಸಮಾಧಾನವನ್ನು ದಿಲ್ಲಿ ನಾಯಕರು ತೀರಾ ಏನೂ ಅಲ್ಲ ಎಂಬಂತೆ ನಿರಾಕರಿಸಿರುವುದೇ ಇಂದು ಬಿಜೆಪಿ ಕಂಡಕಂಡೆಲ್ಲಾ ಬಾಗಿಲುಗಳಾಗಿ ಬದಲಾಗುವುದಕ್ಕೆ ಮೂಲ ಕಾರಣ. ಪಕ್ಷದಲ್ಲಿ ಅನೇಕ ವರ್ಷಗಳಿಂದ ದುಡಿಯುತ್ತಾ ರಾಜ್ಯ ರಾಜಕಾರಣದಲ್ಲಿ ಪ್ರಭಾವಿಗಳಾಗಿ ಕಾಣಿಸಿಕೊಂಡವರಿಗೆ ಅನುಭವಕ್ಕೆ ತಕ್ಕಂತೆ ಅಧಿಕಾರ, ಹುದ್ದೆ ಸಿಕ್ಕದ ಹಾಗೆ ನೋಡಿಕೊಂಡವರಿಗೆ ತಿರುಗೇಟು ಎನ್ನುವಂತೆ ಯತ್ನಾಳ್‌ ಯಡಿಯೂರಪ್ಪ ವಿರುದ್ಧ ನೇರಾನೇರವಾಗಿ, ಮುಲಾಜಿಲ್ಲದೇ ಧ್ವನಿ ಎತ್ತಿದಾಗ, ರಾಜ್ಯದ ಜನರು ಕೂಡ ʼಬಾಯಿಗೆ ಬಂದ ಹಾಗೆ ಮಾತಾಡುತ್ತಿದ್ದಾನೆ…. ಎಟುಕದ ದ್ರಾಕ್ಷಿ ಹುಳಿʼ ಎಂಬಂತಹ ಅಭಿಪ್ರಾಯವನ್ನೇ ಇರಿಸಿಕೊಂಡಿದ್ದರು. ಆದರೆ, ಕಾಲಕ್ರಮೇಣ ಯತ್ನಾಳ್‌ ಅವರೊಂದಿಗೆ ಮತ್ತೊಂದಿಷ್ಟು ಅತೃಪ್ತ ನಾಯಕರು ಸೇರ್ಪಡೆಗೊಂಡರು. ಅಸಮಾಧಾನದ ಧ್ವನಿಗೆ ಪುಷ್ಠಿ ದೊರೆಯುತ್ತಾ ಹೋಯಿತು. ಈ ಭಿನ್ನರ ಧ್ವನಿಯನ್ನು ತೀರಾ ಕಡೆಗಣಿಸಿ ನೋಡುವಂತೆಯೂ ಇಲ್ಲ ಎಂಬುವುದು ಈಗ ಸ್ಪಷ್ಟವಾಗಿದಂತಿದೆ.  

ಈ ಬಣಗಳ ನಾಯಕರು ಮೊದಲಿನಿಂದಲೂ ಬಿಜೆಪಿ ಪಕ್ಷವನ್ನು ಯಡಿಯೂರಪ್ಪ ಕುಟುಂಬದಿಂದ ಮುಕ್ತಿಗೊಳಿಸುವುದೇ ಪ್ರಧಾನ ಗುರಿಯೆಂದು ಹೇಳುತ್ತಲೇ ಬಂದಿದ್ದಾರೆ. ಹೈಕಮಾಂಡ್‌ ಕೂಡ ಈ ಬಣದ ನಾಯಕರ ಮಾತಿಗೆ ಒಪ್ಪಿ ರಾಜ್ಯ ಬಿಜೆಪಿಯನ್ನು ಯಡಿಯೂರಪ್ಪ ಮತ್ತು ಅವರ ಕುಟುಂಬದ ಕಪಿಮುಷ್ಠಿಯಿಂದ ಬಿಡಿಸುವುದಕ್ಕೆ ಒಪ್ಪಿದ್ದಲ್ಲಿ, ಮುಂದಿನ ರಾಜ್ಯ ಬಿಜೆಪಿ ನಾಯಕರು ಯಾರು ಎನ್ನುವುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಹಾಗೆಂದ ಮಾತ್ರಕ್ಕೆ ವಿರೋಧಿಸುತ್ತಿರುವ ನಾಯಕರನ್ನು ಆಹ್ವಾನಿಸಿ ಮಣೆ ಹಾಕುವ ಸ್ಥಿತಿಯಲ್ಲಿಯೂ ಹೈಕಮಾಂಡ್‌ ಇಲ್ಲ. ಅದಾಗಲೇ ಅನೇಕರು ಈಗ ಆ ಒಂದು ಹುದ್ದೆಗಾಗಿ ಟವೆಲ್‌ ಹಾಕಿ ಕಾಯುತ್ತಿದ್ದಾರೆ. ಒಟ್ಟಿನಲ್ಲಿ, ರಾಜ್ಯ ಬಿಜೆಪಿಯಲ್ಲಿ ಏನೇ ಹೊಸ ಬದಲಾವಣೆ ಆಗಬೇಕಾದರೂ, ಈ ಎಲ್ಲಾ ಸಮಸ್ಯೆಗಳಿಗೆ ಹೈಕಮಾಂಡ್‌ ಪರಿಹಾರ ಕಂಡುಕೊಳ್ಳಬೇಕಿರುವುದು ತೀರಾ ಅನಿವಾರ್ಯವಾಗಿದೆ ಎನ್ನುವುದು ನೂರಕ್ಕೆ ನೂರು ಸತ್ಯಾಂಶ.

-ಶ್ರೀರಾಜ್‌ ವಕ್ವಾಡಿ

Thursday, January 30, 2025

ವಿಜಯೇಂದ್ರ ವಿರುದ್ಧ ಮುಗಿಯದ ಭಿನ್ನರ ಯುದ್ಧ

 

ಪಕ್ಷದ ಶುದ್ಧೀಕರಣಕ್ಕೆ ಮುಂದಾಗದ ಬಿಜೆಪಿ ಹೈಕಮಾಂಡ್‌ | ಬಂಡಾಯ ತೀವ್ರ

ಗ್ಯಾರಂಟಿ ಯೋಜನೆಗಳ ಫಲವಾಗಿ ರಾಜ್ಯದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್‌ ಸರ್ಕಾರವನ್ನು ಹೇಗಾದರೂ ಮಾಡಿ ತಲೆಕೆಳಗಾಗುವಂತೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದ ರಾಜ್ಯ ಬಿಜೆಪಿಯ ಬುಡವೇ ಈಗ ಅಲ್ಲಾಡುತ್ತಿದೆ. ವಿಪಕ್ಷವಾಗಿ ಆಡಳಿತ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯಬೇಕಿದ್ದ ಬಿಜೆಪಿ ತನ್ನೊಳಗಿನ ಭಿನ್ನಮತವನ್ನು ಸರಿಪಡಿಸಿಕೊಳ್ಳುವುದಕ್ಕಾಗಿಯೇ ಹರಸಾಹಸ ಪಡುತ್ತಿರುವುದು ಹಾಸ್ಯಾಸ್ಪದವೇ ಸರಿ.

ನೇರ ಮಾರ್ಗವೋ ಅಥವಾ ವಾಮ ಮಾರ್ಗವೋ ಅದು ಏನೇ ಇರಲಿ, ಪಕ್ಷ ಸಂಘಟನೆಯ ವಿಚಾರದಲ್ಲಿ ಬಿಜೆಪಿ ಮಾಡುವ ಕಾರ್ಯತಂತ್ರವನ್ನು ಕಾಂಗ್ರೆಸ್‌ ಕೂಡ ಬೆರಗು ಕಣ್ಣಿಂದ ಕಾಣುತ್ತದೆ. ಆದರೆ, ಈಗ ಬಿಜೆಪಿಯೊಳಗಿನ ನಾಯಕತ್ವದ ಬಗೆಗಿನ ಬೀದಿ ರಂಪಾಟವನ್ನು ನೋಡಿ ಇವರಿಗಿಂತ ನಾವೇ ಪರವಾಗಿಲ್ಲ ಎಂಬಂತೆ ಕಾಂಗ್ರೆಸ್‌ ಮುಸಿ ಮುಸಿ ನಗುತ್ತಿದೆ ಎಂದನ್ನಿಸುತ್ತಿದೆ. ವಾಸ್ತವ ಏನೆಂದರೆ, ಪಕ್ಷದ ಸಂಘಟನೆಯ ವಿಚಾರದಲ್ಲಿ, ಕಾರ್ಯಕರ್ತರನ್ನು ಜೋಡಿಸುವುದರಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತಲೂ ಒಂದು ಹಂತ ಮೇಲೆಯೇ ಇದೆ. ಆದರೆ, ನಾಯಕತ್ವದ ವಿಚಾರದಲ್ಲಿ ಸಂಪೂರ್ಣ ಶಿಸ್ತು ಕಳೆದುಕೊಂಡಿದೆ ಎನ್ನುವುದು ರಾಜಕೀಯ ವಲಯದ ಅಭಿಪ್ರಾಯ.

ಇಂತಹ ಸ್ಥಿತಿಯಲ್ಲೂ ನಾಯಕತ್ವ, ನೇತೃತ್ವದ ವಿಚಾರದಲ್ಲಿ ರಾಜ್ಯ ಬಿಜೆಪಿಯನ್ನು ಶುದ್ಧೀಕರಣ ಮಾಡುವ ಯೋಚನೆಯಲ್ಲಿಯೂ ಬಿಜೆಪಿ ಹೈಕಮಾಂಡ್‌ ಇದ್ದಂತೆ ಕಾಣಿಸುತ್ತಿಲ್ಲ. ಅಧಿಕಾರದಲ್ಲಿದ್ದಾಗಲೂ, ವಿಪಕ್ಷದಲ್ಲಿದ್ದಾಗಲೂ ರಾಜ್ಯ ಬಿಜೆಪಿ ನಾಯಕರಿಗೆ ನಾಯಕತ್ವ ಅಥವಾ ಜವಾಬ್ದಾರಿಯ ಅಮಲು ತುಸು ಹೆಚ್ಚೇ ಇದೆ. ಬಹುಶಃ ಎಲ್ಲಾ ಕಡೆ, ಎಲ್ಲಾ ಪಕ್ಷಗಳಲ್ಲಿಯೂ ಈ ನಾಯಕತ್ವ ವಹಿಸಿಕೊಳ್ಳುವ ಗೀಳು ಸಾಮಾನ್ಯ. ಆದರೆ ರಾಜ್ಯ ಬಿಜೆಪಿಯಲ್ಲಿ ಅದು ಒಂದು ರೀತಿಯಲ್ಲಿ ರೋಗ. ತಳಮಟ್ಟದ ರಾಜಕಾರಣದಲ್ಲಿ ಎಲ್ಲಾ ವರ್ಗದ ಅರ್ಹ ಕಾರ್ಯಕರ್ತರನ್ನು ಗುರುತಿಸುವ, ಜವಾಬ್ದಾರಿ ನೀಡುವ ಬಿಜೆಪಿಯಲ್ಲಿ ಮೇಲ್ಮಟ್ಟದಲ್ಲಿ ಹಿರಿಯ, ಕಿರಿಯರ ನಡುವೆ ಸಮನ್ವಯ ಇಲ್ಲ ಎನ್ನುವುದು ಎದ್ದು ಕಾಣುತ್ತಿದೆ. ಈಗ ಈ ಕುರಿತಾಗಿ ಬಿಜೆಪಿಯ ತಳಮಟ್ಟದ ಕಾರ್ಯಕರ್ತರಲ್ಲಿಯೂ ಸಿಟ್ಟೆದ್ದಿದೆ. ಮೂಲ ಬಿಜೆಪಿಗರು, ಆರ್‌ಎಸ್‌ಎಸ್‌ ಮೂಲದವರು, ಹೊರಗಿನಿಂದ ಬಂದವರು, ಪ್ರಭಾವ ಮತ್ತು ಕೃಪಾಶೀರ್ವಾದದಿಂದ ಮೇಲ್ಪಂಕ್ತಿಯ ರಾಜಕಾರಣಕ್ಕೆ ಬಂದವರು, ಅಧಿಕಾರ ಹಿಡಿದವರು, ಜವಾಬ್ದಾರಿ ವಹಿಸಿಕೊಂಡವರ ಕಾರಣದಿಂದ ಕಾರ್ಯಕರ್ತರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದಕ್ಕೆ ಬಿಜೆಪಿ ವಿಫಲವಾಗುತ್ತಿದೆ. ಆದಾಗ್ಯೂ, ಬಿಜೆಪಿಯ ಕಾರ್ಯಕರ್ತರಲ್ಲಿ ಹಿಂದುತ್ವದ ಕಿಚ್ಚು ಹೇರಳವಾಗಿ ಇರುವುದರಿಂದ ಈ ನಾಯಕತ್ವಕ್ಕಾಗಿ ಬಡಿದಾಡುವ ಎಲ್ಲಾ ನಾಯಕರನ್ನು ದಿವ್ಯ ನಿರ್ಲಕ್ಷ್ಯ ಮಾಡಿ ಪಕ್ಷಕ್ಕಾಗಿ ದುಡಿಯುವ ಗುಣವಿದೆ. ಇದರಿಂದಲೇ ಬಿಜೆಪಿಯ ಪ್ರಭಾವಿ ನಾಯಕರು ರಾಜಕಾರಣ ಮಾಡತ್ತಿದ್ದಾರೆ.  

ರಾಜ್ಯ ಬಿಜೆಪಿಯ ಶುದ್ಧೀಕರಣದ ಚರ್ಚೆ ಈಗ ಸ್ವಪಕ್ಷೀಯರಿಂದಲೇ ಮತ್ತೆ ಮೇಲೆದ್ದಿದೆ. ರಾಜ್ಯ ಬಿಜೆಪಿಯಲ್ಲಂತೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಕೃಪಾಶೀರ್ವಾದದಿಂದಲೇ ಕೋಟೆ ಕಟ್ಟಿದ ಅನೇಕ ನಾಯಕರಿದ್ದಾರೆ. ಅದು ಮೂಲ ಬಿಜೆಪಿಗರಿಗೆ, ಆರ್‌.ಎಸ್‌.ಎಸ್‌ ಮೂಲದವರಿಗೆ ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಹಿಂದಿನಿಂದಲೂ ಕಾರ್ಯಕರ್ತರ ಪಕ್ಷ ಎಂದು ಗುರುತಿಸಿಕೊಂಡಿರುವ ಬಿಜೆಪಿಯಲ್ಲಿ ಬೆಳೆದ ನಾಯಕರಿಗೆ ಒಬ್ಬ ವ್ಯಕ್ತಿ ಪಕ್ಷಕ್ಕಿಂತ ʼಸುಪ್ರೀಂʼ ಆಗುವುದು ಸುತಾರಾಂ ಇಷ್ಟವಿಲ್ಲ. ನಿಧಾನಕ್ಕೆ ಭಿನ್ನಮತ ಮೇಲೆದ್ದಿತು. ಗುಂಪುಗಾರಿಕೆ ಮುನ್ನೆಲೆಗೆ ಬಂದಿದ್ದಷ್ಟೇ ಅಲ್ಲ ಬೀದಿಗೆ ಬಂತು.

ರಾಜ್ಯ ಬಿಜೆಪಿಯಲ್ಲಿ ಈಗ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ವಿಜಯೇಂದ್ರ ಯಡಿಯೂರಪ್ಪ ಅವರ ಮೇಲಿನ ಸಿಟ್ಟು ಬಿಜೆಪಿಯನ್ನು ಮೂರು ನಾಲ್ಕು ಗುಂಪುಗಳಾಗಿ ಬೇರ್ಪಡುವಂತೆ ಮಾಡಿದೆ. ಈ ಭಿನ್ನಮತ ಚಾಲ್ತಿಯಲ್ಲಿಟ್ಟುಕೊಂಡೇ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿಯೇ ಎಲ್ಲಾ ಬಿಜೆಪಿ ನಾಯಕರೂ ಇದ್ದಾರೆ. ಅದೇ ರಾಜ್ಯ ರಾಜಕಾರಣದ ʼಸ್ಪಾಟ್‌ಲೈಟ್ʼ. ಪಕ್ಷದಲ್ಲಿ ಹಿರಿಯವರೆಂದೆನ್ನಿಸಿಕೊಂಡವರೇ ವರಿಷ್ಠರೊಂದಿಗೆ ಲಾಬಿಗೆ ಇಳಿದು ಸಣ್ಣತನ ತೋರಿಸುತ್ತಿರುವಾಗ ಈ ಸಮಸ್ಯೆಗಳು ಸರಿಯಾಗುವುದಾದರೂ ಹೇಗೆ ? ಹೈಕಮಾಂಡ್‌ ಕೂಡ ಈ ಬಗ್ಗೆ ಜಾಣ ಮೌನ ವಹಿಸಿದೆ.  

ಬಿಜೆಪಿಯ ಶಿಸ್ತು ಸಮಿತಿಯಾಗಲಿ, ಕೇಂದ್ರ ಸಂಸದೀಯ ಮಂಡಳಿಯಾಗಲಿ ಗೊಂದಲಗಳ ಬಗ್ಗೆ ಮಾತಾಡುತ್ತಿಲ್ಲ. ಹೆಚ್ಚಾಗಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರ ಮೇಲೆಯೇ ಇರುವ ಅಸಮಧಾನವಾಗಿರುವುದರಿಂದ  ಆ ಪ್ರಭಾವವೂ ಇಲ್ಲಿ ಕೆಲಸ ಮಾಡುತ್ತಿದೆ. ಮಿಗಿಲಾಗಿ ರಾಜ್ಯದಲ್ಲಿ ಈಗ ಚುನಾವಣೆಯ ಸಂದರ್ಭವೇನೂ ಅಲ್ಲ. ಹಾಗಾಗಿ ಜಗಳ ಮಾಡುವಷ್ಟು ಮಾಡಲಿ ಎಂದು ಹೈಕಮಾಂಡ್‌ ಸುಮ್ಮನಾಗಿರುವಂತಿದೆ.  ಇಂತಹ ಸಂದರ್ಭದಲ್ಲಿ ಯಾವ ಗುಂಪಿನ ಪರವಾಗಿಯೂ ತೀರ್ಮಾನ ತೆಗೆದುಕೊಳ್ಳುವುದು ಕೂಡ ಹೈಕಮಾಂಡ್‌ ಗೆ ಕಷ್ಟದ ಸಂಗತಿ. ಎಲ್ಲಾ ಗುಂಪಿನ ನಾಯಕರಿಗೆ ತಮ್ಮದೇ ಆದ ರಾಜಕೀಯ ಪ್ರಭಾವ ರಾಜ್ಯದಲ್ಲಿದೆ. ಹಾಗಾಗಿ ಈ ಸಮಸ್ಯೆ ತಾನಾಗಿಯೇ ಬಗೆಹರಿಯಲಿ ಎಂದು ಕಾದು ನೋಡುವ ತಂತ್ರದಲ್ಲಿ ಹೈಕಮಾಂಡ್‌ ಇದೆ. 

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ನಡುವಿನ ಸಿಎಂ ಪದವಿ ಹಸ್ತಾಂತರ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್‌ ಪಾಳಯದಲ್ಲಿ ಮೇಲೆದ್ದಿದ್ದ ಭಿನ್ನಮತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಒಂದೇ ಒಂದು ಖಡಕ್ ಎಚ್ಚರಿಕೆಯಿಂದ ತಣ್ಣಗಾಯಿತು. ಆದರೇ, ಬಿಜೆಪಿಯಲ್ಲಿ ಎಚ್ಚರಿಕೆ ಕೊಡುವವರೂ ಇಲ್ಲದಂತಾಗಿದೆ. ಎಚ್ಚರಿಕೆ ಕೊಡುವವರ ವಿರುದ್ಧವೇ ಬಿಜೆಪಿಯಲ್ಲಿ ಬಣ ರಾಜಕೀಯ ಸೃಷ್ಟಿಯಾಗಿರುವುದರಿಂದ ಇಲ್ಲಿನ ಪರಿಸ್ಥಿತಿ ಕಾಂಗ್ರೆಸ್‌ಗಿಂತ ಭಿನ್ನ. ಹಾಗಾಗಿ ಬಿಜೆಪಿ ತನ್ನ ಸಂಪೂರ್ಣ ಶಿಸ್ತನ್ನು ಕಳೆದುಕೊಂಡಿದೆ ಎಂದೇ ಹೇಳಬೇಕು.

ಬಿಜೆಪಿಯಲ್ಲಿ ಎರಡು ಹಂತದಲ್ಲಿ ಶುದ್ಧೀಕರಣ ಆಗಬೇಕಿರುವ ಅನಿವಾರ್ಯತೆ ಇದೆ. ಒಂದು ವಿಜಯೇಂದ್ರ ವಿಜಯೇಂದ್ರ ವಿರುದ್ಧ ಬಹಿರಂಗ ಸಮರ ಸಾರಿರುವ ಶಾಸಕ ಬಸವನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಹರೀಶ್ ಮೊದಲಾದವರ ಜತೆಗೆ ಇದೀಗ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ, ಆರ್. ಅಶೋಕ್ ಸೇರಿದಂತೆ ಪ್ರಮುಖ ಮುಖಂಡರು ಸಮರಕ್ಕೆ ಮುಂದಾಗಿರುವುದರ ಬಗ್ಗೆ, ಮತ್ತೊಂದು ಪಕ್ಷದಲ್ಲಿದ್ದೂ ಕಾಂಗ್ರೆಸ್ ಗೆ ನಿಷ್ಠೆ ವ್ಯಕ್ತಪಡಿಸಿರುವ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ಮತ್ತು ಆಚೆಗೂ ಇಲ್ಲ, ಈಚೆಗೂ ಇಲ್ಲ ಎಂದು ಪಕ್ಷದ ಒಳಗೆ ಆಗುತ್ತಿರುವ ಗೊಂದಲಗಳನ್ನು ವರಿಷ್ಠರಿಗೆ ಮುಟ್ಟಿಸದೇ ಸುಮ್ಮನೆ ಆಟ ನೋಡುತ್ತಿರುವವರನ್ನೂ ಶುದ್ದೀಕರಣ ಮಾಡಬೇಕಿದೆ.

ಯಡಿಯೂರಪ್ಪ ಅವರ ಶಿಫಾರಸ್ಸಿನ ಮೇರೆಗೆ ರಾಜ್ಯದ ಬಿಜೆಪಿಯ ವಿಷಮ ಸ್ಥಿತಿಯಲ್ಲಿ ಮುಖ್ಯಮಂತ್ರಿ ಪದವಿಗೆ ಏರಿದ ಬಸವರಾಜ್‌ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಂದು ಗುಂಪು ಕ್ರಿಯಾಶೀಲವಾಗಿದೆ. ಸಂಘ ಪರಿವಾರ ಅಥವಾ ಬಿಜೆಪಿಯ ಹಿನ್ನೆಲೆ ಇಲ್ಲದಿದ್ದರೂ ಬಸವರಾಜ್ ಬೊಮ್ಮಾಯಿ ಸದ್ಯದ ಪರಿಸ್ಥಿತಿಯಲ್ಲಿ ಆಚೆಗೂ ಇಲ್ಲ, ಈಚೆಗೂ ಇಲ್ಲ ಎಂಬಂತಿರುವ ರಾಜ್ಯ ಬಿಜೆಪಿ ಹೊಸ ಗುಂಪಿನ ನೇತೃತ್ವ ವಹಿಸಿಕೊಂಡಿರುವುದರ ಹಿಂದೆ ಹೊಸ ಲೆಕ್ಕಾಚಾರಗಳು ಹೇರಳವಾಗಿ ಕಾಣಿಸುತ್ತಿವೆ. 

ರಾಜ್ಯ ಬಿಜೆಪಿಗೆ ಲಿಂಗಾಯತ ಮತಗಳೇ ಆಸರೆ. ಬಸವರಾಜ್‌ ಬೊಮ್ಮಾಯಿ ಕೂಡ ಲಿಂಗಾಯತ ಸಮುದಾಯದವರೇ ಆಗಿದ್ದಾರೆ. ಸದ್ಯ ಅಧ್ಯಕ್ಷರಾಗಿರುವ ವಿಜಯೇಂದ್ರ ಯಡಿಯೂರಪ್ಪ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಿಜೆಪಿಯೊಂದಿಗಿನ ರಾಜಕಾರಣದ ಮಾರ್ಗದರ್ಶಕರಾಗಿದ್ದ ಯಡಿಯೂರಪ್ಪ ಅವರನ್ನು ನೇರವಾಗಿ ಎದರು ಹಾಕಿಕೊಳ್ಳುವುದಕ್ಕೆ  ಬೊಮ್ಮಾಯಿ ಅವರಿಗೆ ಸಾಧ್ಯವಿಲ್ಲ. ಹಾಗಾಗಿ ತಟಸ್ಥ ನಿಲುವಿನೊಂದಿಗೆ ಇದ್ದು, ವಿಜಯೇಂದ್ರ ಹಾಗೂ ಯಡಿಯೂರಪ್ಪ ಅವರ ವಿರುದ್ಧ ಬಂಡಾಯ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆದರೆ, ಲಾಭ ಪಡೆದುಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಬೊಮ್ಮಾಯಿ ಇದ್ದಿರಬಹುದು ಎಂದು ಕಾಣಿಸುತ್ತಿದೆ. ಇಲ್ಲವಾದರೇ, ಸಂಸದರಾಗಿರುವಾಗ ವರಿಷ್ಠರಿಗೆ ಇಲ್ಲಿನ ಸಮಸ್ಯೆಗಳನ್ನು ಹೇಳಿ ಸರಿಪಡಿಸಬಹುದಲ್ಲವೇ ? ಹೇಳಿ ಸರಿಪಡಿಸುವ ಸ್ಥಾನದಲ್ಲಿದ್ದುಕೊಂಡವರೇ ತಮಗಾಗುವ ಲಾಭಕ್ಕಾಗಿ ಕಾದು ಕುಳಿತಿದ್ದಾರೆ.

ಇನ್ನು, ಸದ್ಯದ ಮಟ್ಟಿಗೆ ಯಡಿಯೂರಪ್ಪ ಅವರನ್ನು ವಿರೋಧ ಕಟ್ಟಿಕೊಂಡು ವರಿಷ್ಠರು ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳೂ ತೀರಾ ಕಡಿಮೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಸದ್ಯಕ್ಕೆ ಬಗೆ ಹರಿಯುವ ಲಕ್ಷಣಗಳಂತೂ ಕಾಣಿಸುತ್ತಿಲ್ಲ. ಇಂತಹ ವಿಷಮ ಸ್ಥಿತಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ವಿಚಾರದಲ್ಲಿ ವಿಜಯೇಂದ್ರ ಎಡವುತ್ತಿದ್ದಾರೆ. ಹಿರಿಯ ನಾಯಕರೊಂದಿಗೆ ಸಮನ್ವಯ ಕಾಯ್ದುಕೊಳ್ಳದೆ ತಮ್ಮದೇ ದಾರಿಯಲ್ಲಿ, ತಂದೆಯ ಕೃಪಾಶೀರ್ವಾದದ ಧೈರ್ಯದಲ್ಲಿ ನಡೆಯುತ್ತಿರುವುದು ಅವರ ಭವಿಷ್ಯದ ಮೇಲೆಯೇ ಕೆಟ್ಟ ಪರಿಣಾಮ ಬೀರಲಿದೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ನೇರವಾಗಿ ಕಾಣಿಸುತ್ತಿದೆ. ಏನೇ ಆಗಲಿ, ಒಟ್ಟಿನಲ್ಲಿ ರಾಜ್ಯ ಬಿಜೆಪಿಯ ಭವಿಷ್ಯದ ಬಗ್ಗೆ ದೊಡ್ಡ ಕುತೂಹಲವಂತೂ ಇದೆ.

-ಶ್ರೀರಾಜ್‌ ವಕ್ವಾಡಿ  

Thursday, January 23, 2025

ಕಲ್ಲು ಮುಳ್ಳಿನ ಹಾದಿಯಲ್ಲಿ ಡಿಕೆಶಿ ಮತ್ತು ಮಹಾತ್ವಾಕಾಂಕ್ಷೆ

 


ಕಾಂಗ್ರೆಸ್‌ ಆಂತರಿಕ ಭಿನ್ನಮತ | ಹೈಕಮಾಂಡ್‌ಗೆ ಡಿಕೆಶಿ ಡಿಮಾಂಡೇ ಸವಾಲು !

ತಮ್ಮ ರಾಜಕಾರಣದ ಉದ್ದಗಲಕ್ಕೂ ಕಲ್ಲು ಮುಳ್ಳಿನ ಹಾದಿಯನ್ನೇ ಕಂಡ ಡಿ.ಕೆ ಶಿವಕುಮಾರ್‌ ಅವರ ಮೇಲೆ ಇಂದಿನ ಸ್ಪಾಟ್‌ಲೈಟ್‌. ರಾಜ್ಯದ ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ. ಕೆ ಶಿವಕುಮಾರ್‌ ಅವರ ಹಿನ್ನೆಲೆ ಏನೇ ಇರಬಹುದು, ಆದರೆ ಡಿ.ಕೆ ಶಿವಕುಮಾರ್‌ ಅವರ ಸಂಘಟನಾ ಶಕ್ತಿಯ ಬಗ್ಗೆ ಕಾಂಗ್ರೆಸ್‌ ಮಾತ್ರವಲ್ಲದೇ, ಬಿಜೆಪಿಗೂ ತಿಳಿದಿದೆ. ಡಿಕೆಶಿ ಅವರ ಪ್ಲಸ್‌ ಅಂಡ್‌ ಮೈನಸ್‌ ಬಹುಶಃ ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿ ಅಧಿಕಾರದಲ್ಲಿದ್ದಾಗೆಲ್ಲಾ ಅವರು ಸ್ವಪಕ್ಷೀಯರಿಂದಲೂ, ವಿಪಕ್ಷಗಳಿಂದಲೂ ಟೀಕೆಗೆ ಗುರಿಯಾದವರೇ ಆಗಿದ್ದಾರೆ. ಇದು ಡಿ.ಕೆ. ಶಿವಕುಮಾರ್‌ ಪರಿಸ್ಥಿತಿ.

ಡಿ. ಕೆ. ಶಿವಕುಮಾರ್‌ ಅವರಿಗೆ ಅಧಿಕಾರದ ಬಗ್ಗೆ ಒಂದು ಮಹತ್ವಾಕಾಂಕ್ಷೆ ಇದೆ. ಅದರ ಜೊತೆಗೆ ಈಗ ರಾಜಕೀಯದ ಸುದೀರ್ಘ ಅನುಭವದ ಹಿನ್ನೆಲೆಯಲ್ಲಿ ಸನ್ನಿವೇಶಕ್ಕೆ ತಕ್ಕುದಾಗಿ ನಡೆದುಕೊಳ್ಳುವ ಪ್ರೌಢಿಮೆಯನ್ನು ಅವರು ಹೇರಳವಾಗಿ ವೃದ್ಧಿಸಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್‌ ಅವರಲ್ಲಿ ಕೆಲವು ವರ್ಷಗಳ ಹಿಂದಿದ್ದ ಸಿಡಿಮಿಡಿ ಸ್ವಭಾವ ಈಗ ಇಲ್ಲ. ಎಲ್ಲವನ್ನೂ ಸಾವಧಾನದಿಂದ ಸ್ವೀಕರಿಸುವ ಮನೋಭಾವವನ್ನು ಅವರು ಬೆಳೆಸಿಕೊಂಡಿದ್ದಾರೆ. ತಮ್ಮ ರಾಜಕೀಯದ ದುರ್ಗಮವಾದ ಹಾದಿಯಲ್ಲಿ ಅವರು ತಮ್ಮಲ್ಲಿ ಇರಿಸಿಕೊಂಡಿರುವ ಅಧಿಕಾರದ ಬಗೆಗಿನ ಮಹಾತ್ವಾಕಾಂಕ್ಷೆಯನ್ನು ದಾಟಲು ಬಹಳ ಕಷ್ಟಪಟ್ಟವರು ಮತ್ತು ಈಗಲೂ ಕಷ್ಟ ಪಡುತ್ತಲೇ ಇದ್ದಾರೆ. ಬಹುಶಃ ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಏರಿದ ಮೇಲೂ ಡಿಕೆಶಿ ತಮ್ಮ ರಾಜಕೀಯದ ದುಸ್ಥಿತಿಯಿಂದ ಹೊರಬರುವುದಕ್ಕೆ ಇನ್ನೂ ಒದ್ದಾಡುತ್ತಲೇ ಇದ್ದಾರೆ.

ಕಾಂಗ್ರೆಸ್‌ ರಾಜಕೀಯದಲ್ಲಿ ಈಗ ಡಿಕೆಶಿ ಅವರದ್ದೇ ಚರ್ಚೆ. ರಾಜ್ಯ ಕಾಂಗ್ರೆಸ್‌ನ ಒಳಗೆ ಸೃಷ್ಟಿಯಾದ ಒಂದಿಷ್ಟು ಭಿನ್ನಾಭಿಪ್ರಾಯಗಳು ಮತ್ತು ಅದು ಸುದ್ದಿ ಮಾಧ್ಯಮಗಳಲ್ಲಿ ಪಡೆದ ವಾಖ್ಯಾನಗಳು ವಿಪಕ್ಷ ಬಿಜೆಪಿಗೆ ಚರ್ಚೆಯ ವಸ್ತುವಾಯಿತು. ಹೌದು, ಕರ್ನಾಟಕದ ಮಟ್ಟಿಗೆ ಅತ್ಯಂತ ಪ್ರಭಾವಿ ನಾಯಕರು ಎನ್ನಿಸಿಕೊಂಡಿರುವ ಡಿಕೆಶಿ ರಾಜಕೀಯ ವರ್ಚಸ್ಸಿಗೆ ಅಂಟಿದ ಕೆಲವು ಕಳಂಕಗಳೇ ಅವರು ಇನ್ನೂ ಏರಬಹುದಾದ ಎತ್ತರವನ್ನು ಏರುವುದಕ್ಕೆ ಬಿಡದೆ ಕಾಡುತ್ತಿದೆ. ರಾಜಕೀಯದಲ್ಲಿ ಇಂತಹ ಬೆಳವಣಿಗೆ ತೀರಾ ಸಾಮಾನ್ಯ. ರಾಜಕೀಯ ಏರಿಳಿತವನ್ನು ಕಂಡು ಮತ್ತೆ ಮರಳಿ ರಾಜಕೀಯದಲ್ಲಿ ತಮ್ಮದೇ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದು ಕಳೆದ ವಿಧಾನಸಭಾ ಚುನಾವಣೆಯಲ್ಲಿ. ಡಿಕೆಶಿ ಸಂಘಟನೆಯಲ್ಲಿ ಎತ್ತಿದ ಕೈ. ಪಕ್ಷ ಸಂಘಟನೆಯ ಬಗ್ಗೆ ಅವರಲ್ಲಿದ್ದ ಯೋಚನೆ ಮತ್ತು ಯೋಜನೆ ಬಹುಶಃ ಸಿದ್ದರಾಮಯ್ಯ ಅವರಿಗೂ ಇರಲಿಕ್ಕಿಲ್ಲ. ಹಾಗಂತ ಸಿದ್ದರಾಮಯ್ಯ ಅವರನ್ನು ಒಬ್ಬ ಮಾಸ್‌ ಲೀಡರ್‌ ಎಂದು ಹೇಳುವುದನ್ನು ಖಂಡಿತ ಅಲ್ಲಗಳೆಯುವಂತಿಲ್ಲ. ಎಷ್ಟೇ ಆದರೂ, ಚುನಾವಣೆ, ಪಕ್ಷ ಸಂಘಟನೆ ಎಂದು ಬಂದಾಗ ಕಾಂಗ್ರೆಸ್‌ ಪಾಳಯದಲ್ಲಿ ಕರ್ನಾಟಕದ ಪಾಲಿಗಂತೂ ಮೊದಲು ನೆನಪಾಗುವುದು ಡಿಕೆಶಿ ಎನ್ನುವುದು ಕಾಂಗ್ರೆಸ್ಸಿಗರೂ ಕೂಡ ಒಪ್ಪುವ ವಿಷಯ. ಹೀಗಾಗಿ ಡಿಕೆಶಿ ಅವರನ್ನು ಅಧಿಕಾರದ ವಿಚಾರದಲ್ಲಿ ಸರಿಯಾಗಿ ನಡೆಸಿಕೊಳ್ಳುವುದು ಕಾಂಗ್ರೆಸ್‌ ಹೈಕಮಾಂಡ್‌ಗೂ ಒಂದು ಸವಾಲಿನ ಕೆಲಸ. ಇನ್ನು, ಕರ್ನಾಟಕದ ವಿಚಾರದಲ್ಲಿ ಪಾರ್ಟಿ ಫಂಡ್‌ ಎಂದು ಬಂದಾಗಲೂ ಹೈಕಮಾಂಡ್‌ಗೆ ಮೊದಲು ನೆನಪಾಗುವುದೇ ಡಿಕೆಶಿ. ಹಾಗಾಗಿ ಡಿಕೆಶಿ ಅವರನ್ನು ನಿಭಾಯಿಸುವುದು ತುಸು ಕಷ್ಟ.

ಹಾಗಾಂತ ವೈಯಕ್ತಿಕವಾಗಿ ಡಿ.ಕೆ. ಶಿವಕುಮಾರ್‌ ಅವರ ವಿಚಾರವಾಗಿ ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ಅಂತಹ ಒಳ್ಳೆಯ ಒಲವೇನೂ ಇಲ್ಲ. ಒಳ್ಳೆಯ ಅಭಿಪ್ರಾಯವೂ ಇಲ್ಲ. ಆದರೇ, ಪಾರ್ಟಿ ಫಂಡ್‌, ಚುನಾವಣೆ, ಸಂಘಟನೆ ಎಂದು ಬಂದಾಗ ಅದರ ನೇತೃತ್ವ ವಹಿಸಿಕೊಳ್ಳುವುದಕ್ಕೆ ಡಿಕೆಶಿಯೇ ಸಮರ್ಥರು ಎನ್ನುವ ಅಭಿಪ್ರಾಯ ಡಿಕೆಶಿ ಬಗೆಗೆ ಭಿನ್ನಾಭಿಪ್ರಾಯ ಇರಿಸಿಕೊಂಡಿರುವ ಕಾಂಗ್ರೆಸ್‌ ನಾಯಕರಲ್ಲಿಯೂ ಇದೆ ಎನ್ನುವುದು ಅಪ್ಪಟ ಸತ್ಯ. ಡಿಕೆಶಿ ಅವರಿಗೂ ಈ ಪಕ್ಷ ಸಂಘಟನೆ, ಚುನಾವಣೆಯ ಉಸ್ತುವಾರಿ, ಸಮಸ್ಯೆ ನಿವಾರಣೆ, ಪಾರ್ಟಿ ಫಂಡ್‌ ವಿಚಾರದಲ್ಲಿ ತಾವೇ ಹೈಕಮಾಂಡ್‌ಗೆ ಪ್ರಮುಖರಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ವಿಚಾರವೂ ತಿಳಿದಿದೆ. ಇದನ್ನೇ ಬಳಸಿಕೊಂಡು ಒಮ್ಮೊಮ್ಮೆ ತಮ್ಮದಲ್ಲದ ಜವಾಬ್ದಾರಿಗಳಲ್ಲಿ ಹಸ್ತಕ್ಷೇಪ ಮಾಡುವುದು, ಅಧಿಕಾರದ ಧೋರಣೆ ತೋರಿಸುವುದು, ದರ್ಬಾರು ಮಾಡುವುದನ್ನೆಲ್ಲಾ ಡಿಕೆಶಿ ಮಾಡಿದ್ದಾರೆ. ಮಾಡಿಲ್ಲ ಎಂದರೆ ಅದು ತಪ್ಪು. ಅಂತಹ ಸಂದರ್ಭಗಳಲ್ಲಿ ಹೈಕಮಾಂಡ್‌ ಅಂಕುಶ ಪ್ರಯೋಗಿಸಿ ಅವರನ್ನು ಹದ್ದುಬಸ್ತಿನಲ್ಲಿಡುವುದನ್ನೂ ಮಾಡಿಕೊಂಡು ಬಂದಿದೆ. ಹೀಗೆ ಈ ರೀತಿಯಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಪ್ರಕಟಗೊಳಿಸುತ್ತಲೇ ಇರುವುದು ಕಾಂಗ್ರೆಸ್‌ ಹಾಗೂ ಡಿಕೆಶಿ ನಡುವಿನ ರೋಗಗ್ರಸ್ತ ಮನಸ್ಥಿತಿ ಎಂದೇ ಹೇಳಬಹುದು. ಇಂತವನ್ನೆಲ್ಲಾ ಸುದ್ದಿ ಮಾಧ್ಯಮಗಳು ಊಹಾತ್ಮಕವಾಗಿ ರಾಜಕೀಯ ರಂಜನೆಗಾಗಿ ಸುದ್ದಿಗಳನ್ನು ತಯಾರಿಸುತ್ತಾ ಜನರ ದಾರಿ ತಪ್ಪಿಸುತ್ತಾ, ರಾಜಕೀಯ ಚರ್ಚೆಯನ್ನು ತಿರುಚುತ್ತಾ ಬಂದಿದೆ.

ಇನ್ನು, ಡಿಕೆಶಿ ಬಂಡಾಯ, ಕಾಂಗ್ರೆಸ್‌ ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ಚಿತ್ರಚಿತ್ರವಾಗಿ ಮಾಧ್ಯಮಗಳು ಸುದ್ದಿ ಮಾಡುತ್ತಲೇ ಬಂದಿವೆ. ಡಿಕೆಶಿ ತಮ್ಮ ಮಾತೃಪಕ್ಷ ಕಾಂಗ್ರೆಸ್‌ ವಿರುದ್ಧ ಬಂಡಾಯ ಏಳುತ್ತಾರೆ ಎನ್ನುವುದು ಅಪ್ಪಟ ಸುಳ್ಳಾದರೂ, ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಭಿನ್ನಾಭಿಪ್ರಾಯ ಇರುವುದು ಸತ್ಯಾಂಶವೇ ಆಗಿದೆ. ಬಹುಶಃ ಇಂತಹ ವಿಷಮ ಸಂದರ್ಭದಲ್ಲಿ ಡಿಕೆಶಿ ಪ್ರತಿಕ್ರಿಯಿಸಿರುವುದರಲ್ಲಿ ಪ್ರೌಢಿಮೆ ಎದ್ದು ಕಾಣಿಸುತ್ತದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಯಾಗಿ ಪಕ್ಷದೊಳಗಿನ ಈ ಸಮಸ್ಯೆಯನ್ನು ಡಿಕೆಶಿ ನಿಭಾಯಿಸಿರುವುದನ್ನು ಮೆಚ್ಚಲೇ ಬೇಕು. ಸತೀಶ್‌ ಜಾರಕೀಹೊಳಿ, ಡಾ. ಜಿ. ಪರಮೇಶ್ವರ್‌ ಅವರ ಹೇಳಿಕೆಗಳು ಡಿಕೆಶಿ ಅವರನ್ನು ಸ್ವಲ್ಪ ಮಟ್ಟಿಗೆ ಕೆರಳಿಸಿತ್ತು, ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದರಾದರೂ ಆಮೇಲೆ ಏನೂ ಆಗಿಲ್ಲ ಎಂಬಂತೆ ಪಕ್ಷದ ಸಮಸ್ಯೆಗಳು ವಿಪಕ್ಷಗಳ ಬಾಯಿಗೆ ತುತ್ತಾಗಬಾರದು ಎಂಬ ದೃಷ್ಟಿಯಲ್ಲಿ ನಡೆದುಕೊಂಡಿರುವುದು ನಿಜಕ್ಕೂ ಮೆಚ್ಚಲೇ ಬೇಕು.

ಸೋನಿಯಾ ಗಾಂಧಿ ಅವರ ತ್ಯಾಗವನ್ನು ಸದಾ ಉಲ್ಲೇಖಿಸುವ ಡಿಕೆಶಿ, ಈ ಅಧಿಕಾರ ಹಂಚಿಕೆ ಹಾಗೂ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ವಿಚಾರ ಮೇಲೆ ಬಂದಾಗ, ಸೋನಿಯಾರನ್ನೇ ಸ್ಫೂರ್ತಿಯಾಗಿ ಇರಿಸಿಕೊಂಡಂತೆ ʼಪಕ್ಷಕ್ಕಾಗಿ ಉಸಿರು ಬಿಗಿ ಹಿಡಿದು ತ್ಯಾಗ ಮಾಡಿದ್ದೇನೆʼ ಎಂಬ ಹೇಳಿಕೆ ನೀಡಿದ್ದರು. ಆ ಹೇಳಿಕೆಯಲ್ಲಿ ಅವರಿಟ್ಟುಕೊಂಡಿರುವ ಮಹಾತ್ವಕಾಂಕ್ಷೆ ಈಡೇರಿಲ್ಲ ಎನ್ನುವ ನೋವು ಎದ್ದು ಕಾಣಿಸುತ್ತಿತ್ತು. ʼಪಕ್ಷಕ್ಕಾಗಿ ನಾನು ಈ ಹಿಂದಿನಿಂದಲೂ ಹಲವು ತ್ಯಾಗ ಮಾಡಿದ್ದೇನೆ. ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದಲ್ಲೂ ಉಸಿರು ಬಿಗಿ ಹಿಡಿದುಕೊಂಡು ತ್ಯಾಗ ಮಾಡಿದ್ದೇನೆ. ನನಗೆ ಪಕ್ಷವೇ ಮುಖ್ಯ. ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಕೆಲಸ ಮಾಡುವವರ ಎದುರು ತಲೆಬಾಗಿ ಅವರ ಸೇವೆ ಮಾಡುತ್ತೇನೆ. ನನಗೆ ಫಲದ ಅಗತ್ಯವಿಲ್ಲ' ಎಂದಿದ್ದರು. ಇವೆಲ್ಲಾ ಅವರ ಹೆಚ್ಚುಗಾರಿಕೆ ಎಂಬಂತೆ ಕಾಣುವುದಕ್ಕೆ ಆರಂಭವಾಯಿತು.

ಡಿಕೆಶಿ ಅವರಿಗೆ ಇನ್ನೂ ಅವಕಾಶವಿದೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮಗೆ ಅಂಟಿರುವ ಎಲ್ಲಾ ಕಳಂಕದಿಂದ ಮುಕ್ತರಾಗಿ, ಪಕ್ಷದವರನ್ನು ಇನ್ನಷ್ಟು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ಎತ್ತರವನ್ನು ಏರುವುದಕ್ಕೆ ಖಂಡಿತ ಸಾಧ್ಯವಿದೆ. ಡಿಕೆಶಿ ಇಂತಹ ವಿಷಮ ಪರಿಸ್ಥಿತಿಯಲ್ಲಿ ತ್ಯಾಗಿಗಳಾಗಿಯೇ ಹೀರೋ ಆದರೇ, ಅವರ ಭವಿಷ್ಯಕ್ಕೂ ಒಳ್ಳೆಯದು ಎಂದು ಅವರು ಅರಿತುಕೊಂಡು ನಡೆದರೇ ಪಕ್ಷಕ್ಕೂ, ಅವರಿಗೂ ಒಳ್ಳೆಯದು. ಹೇಗೂ ಪಕ್ಷ ಸಂಘಟನೆಯಲ್ಲಿ ಡಿಕೆಶಿ ಅವರಿಗೆ ತಮ್ಮದೇ ಆದ ಚಾರ್ಮ್‌ ಇದೆ. ಪಾರ್ಟಿಗೆ ಅಗತ್ಯವಿದ್ದಲ್ಲಿ ಫಂಡ್‌ ಒದಗಿಸುವ ಎಲ್ಲಾ ಸಾಮರ್ಥ್ಯವೂ ಇದೆ. ಪಕ್ಷದಲ್ಲಿ ಪ್ರಭಾವಿಯೂ ಹೌದು. ಸ್ವಲ್ಪ ತಾಳ್ಮೆಯನ್ನು ಅವರು ತಂದುಕೊಳ್ಳಬೇಕಿದೆ. ಪಕ್ಷದ ಒಳಗೆ ಹಾಗೂ ಸಿದ್ದರಾಮಯ್ಯ ಮತ್ತು ಡಿಕೆಶಿ, ಹೈಕಮಾಂಡ್ ನಡುವೆ ಅಧಿಕಾರದ ಹಂಚಿಕೆಯ ಬಗ್ಗೆ ಯಾವ ರೀತಿಯ ಒಪ್ಪಂದ ಆಗಿದೆಯೋ ಗೊತ್ತಿಲ್ಲ. ಆಗದೆ ಇದ್ದರೇ,  ಸಿಎಂ ಸ್ಥಾನಕ್ಕೆ ಡಿಕೆಶಿ ಸದ್ಯಕ್ಕೆ ಡಿಮ್ಯಾಂಡ್‌ ಮಾಡದೆ ಉಳಿದರೇ ಅವರ ಮೇಲೆ ಇನ್ನಷ್ಟು ಭರವಸೆ ಮೂಡಲಿದೆ. ಬಹುಶಃ ಡಿಕೆಶಿ ಕಾಂಗ್ರೆಸ್‌ನ ಭವಿಷ್ಯದ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವುದರಲ್ಲಿ ಅನುಮಾನವೇ ಇಲ್ಲ. ಇದರ ಮೇಲೆ ಮುಂದೇನಾಗುತ್ತದೆಂದು ಕಾದು ನೋಡೋಣ.

-ಶ್ರೀರಾಜ್‌ ವಕ್ವಾಡಿ.