ಜೆಡಿಎಸ್ ನ ಪ್ರಬಲ ಕ್ಷೇತ್ರಗಳತ್ತ ಬಿಜೆಪಿ ಕಣ್ಣು |
ಸಿದ್ಧಾಂತ ಮೀರಿದ್ದೇಕೆ ಹಿರಿಗೌಡ್ರು
?
ಎಲ್ಲಾ ರಾಜಕೀಯ ಮೈತ್ರಿಯೆ ಹಾಗೆ. ರಾಜಕೀಯ ಮೈತ್ರಿಗಳು ಉಂಟಾಗುವಾಗ ಸೈದ್ಧಾಂತಿಕ ಬದ್ಧತೆಗಳೆಲ್ಲಾ
ಸಾಮಾನ್ಯವಾಗಿ ಮೂಲೆಗೆ ಸರಿಯುತ್ತವೆ. ಹಲವು ಸಂದರ್ಭಗಳಲ್ಲಿ ಅಧಿಕಾರಕ್ಕಾಗಿ ಮೈತ್ರಿಯಾಗುವುದು ರಾಜಕೀಯದಲ್ಲಿ ಅತ್ಯಂತ ಸಹಜ ಮತ್ತು ಸಾಮಾನ್ಯ.
ಆದರೇ, ಚುನಾವಣಾ ಪೂರ್ವ ಮೈತ್ರಿಯಾಗುವುದು ತೀರಾ ಅಪರೂಪ. ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಪೂರ್ವ
ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿ ಈಗ ರಾಷ್ಟ್ರಮಟ್ಟದ ಸುದ್ದಿ. ಬಿಜೆಪಿಯೊಂದಿಗೆ ಸೈದ್ಧಾಂತಿಕ
ಹೊಂದಾಣಿಕೆಯೇ ಇಲ್ಲದ ಜನತಾದಳ(ಜಾತ್ಯತೀತ) ಮೋದಿ ನೇತೃತ್ವದ ಆಡಳಿತರೂಢ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಎನ್ಡಿಎ ಮಿತ್ರಪಕ್ಷಗಳ ಪೈಕಿಗೆ ಈಗ ಜೆಡಿಎಸ್ ಸೇರ್ಪಡೆಗೊಂಡಿದೆ.
೨೦೦೬ರಲ್ಲಿ ಎಚ್.ಡಿ ಕುಮಾರಸ್ವಾಮಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿಯೊಂದಿಗೆ
ಅಂದು ಮೈತ್ರಿ ಮಾಡಿಕೊಂಡು ಸರ್ಕಾರ ಎಚನೆ ಮಾಡಿದ್ದವು. ಪ್ರಾದೇಶಿಕವಾಗಿ ಒಂದು ರೀತಿಯ ತೀರಾ ಭಿನ್ನ
ಅಧ್ಯಾಯವನ್ನು ಕಂಡ ಜೆಡಿಎಸ್ ಸೀಮಿತ ಪರೀಧಿಯೊಳಗೆ ಈಗ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಜೆಡಿಎಸ್
ರಾಜ್ಯದಲ್ಲಿ ಅಧಿಕಾರ ಅನುಭವಿಸಿದ್ದು ಇದ್ದರೆ ಅದು ಮೈತ್ರಿ ರಾಜಕಾರಣದಿಂದಲೇ ಎನ್ನುವುದು ಇಲ್ಲಿ ಉಲ್ಲೇಖಾರ್ಹ.
ಅಲ್ಲಿಯವರೆಗೆ ಜೆಡಿಎಸ್ ಗಟ್ಟಿ ಇದ್ದಿದ್ದು ಹಳೆ ಮೈಸೂರು ಪ್ರಾಂತ್ಯಗಳಲ್ಲಿ ಮಾತ್ರ.
ಸದ್ಯಕ್ಕೆ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಪೋಸ್ಟ್-ಪೋಲ್ ಚೌಕಾಶಿಗೆ ಮುಂದಾಗಿರುವ ಜೆಡಿಎಸ್
ಯಾವಾಗಲೂ ಅಧಿಕಾರಕ್ಕಾಗಿ ಮತ್ತು ತನ್ನ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಮೈತ್ರಿಯನ್ನೇ ಆಧರಿಸಿಕೊಂಡು
ಬಂದ ಪಕ್ಷ. ಕರ್ನಾಟಕದಲ್ಲಿ ಮೈತ್ರಿಯ ಕಾರಣದಿಂದಲೇ ಮುಖ್ಯಮಂತ್ರಿ ಸ್ಥಾನಕ್ಕೇರಿದ ಎಚ್. ಡಿ ಕುಮಾರಸ್ವಾಮಿ
ಈ ಮೈತ್ರಿಗೆ ಮೊದಲು ಮುಂದಡಿ ಇಟ್ಟಿದ್ದು, ೨೦೦೬ರಲ್ಲಿ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದರ
ಬಗ್ಗೆ ತಂದೆ ದೇವೆಗೌಡರಿಗೆ ಅಸಮಾಧಾನ ಇದ್ದರೂ ಅವರ ಮಾತು ಮೀರಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿಯೊಂದಿಗೆ
೨೦೦೬ರಲ್ಲಿ ಮೈತ್ರಿ ಮಾಡಿಕೊಂಡರು. ಎಲ್ಲಿ ಮೈತ್ರಿಯ ʼ೨೦:೨೦ʼ ಒಪ್ಪಂದದ ಅವಧಿ ಮುಗಿಯಿತೋ, ಮುಖ್ಯಮಂತ್ರಿ
ಸ್ಥಾನವನ್ನು ಒಪ್ಪಂದದಂತೆ ಯಡಿಯೂರಪ್ಪ ಅವರಿಗೆ ಬಿಟ್ಟುಕೊಡಬೇಕಾಗಿ ಬಂದಾಗ ಬಿಜೆಪಿ ಜೊತೆಗಿನ ಮೈತ್ರಿ
ಮುರಿದುಕೊಂಡರು. ೨೦೧೯ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಚುನಾವಣೆಗೆ ಸ್ಪರ್ಧಿಸಿದರು.
ಅಂದು ಜೆಡಿಎಸ್ನ ೩೭ ಶಾಸಕರು ಹಾಗೂ ಕಾಂಗ್ರೆಸ್ನ ೮೦ ಶಾಸಕರನ್ನು ಒಳಗೊಂಡ ಸರ್ಕಾರ ರಾಜ್ಯದಲ್ಲಿ
ಅಧಿಕಾರದಲ್ಲಿತ್ತು. ಲೋಕಸಭೆಯಲ್ಲಿ ಕೆಲವು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಂತೂ ಎರಡೂ ಪಕ್ಷಗಳ ಶಾಲು
ಮತ್ತು ಚಿನ್ಹೆಗಳೊಂದಿಗೆ ಲೋಕಸಭಾ ಕಣಕ್ಕಿಳಿದಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ. ಜೆಡಿಎಸ್
ಈವರೆಗೆ ಅಧಿಕಾರ ಅನುಭವಿಸಿದೆ ಎಂದರೆ ಅದು ಮೈತ್ರಿಯ ಕೊಡುಗೆ.
ಜೆಡಿಎಸ್ ತನ್ನ ಪ್ರಾದೇಶಿಕ ಶಕ್ತಿಯನ್ನೂ ಕೂಡ ಕಳೆದುಕೊಂಡಿರುವುದು ಕಳೆದ ವಿಧಾನಸಭಾ ಚುನಾವಣಾ
ಫಲಿತಾಂಶದಲ್ಲಿ ಕಾಣಬಹುದಾಗಿದೆ. ಕೇವಲ ೧೯ ಸ್ಥಾನಗಳಿಗೆ, ಶೇ.೧೩ರಷ್ಟು ಮತ ಹಂಚಿಕೆಯೊಂದಿಗೆ ತೃಪ್ತಿ
ಪಟ್ಟುಕೊಳ್ಳುವಂತಾಗಿದ್ದು, ಜೆಡಿಎಸ್ ಕಳೆದುಕೊಂಡ ಸೈದ್ಧಾಂತಿಕ ವಿಶ್ವಾಸಾರ್ಹತೆಯನ್ನು ಎತ್ತಿ ತೋರಿಸುತ್ತದೆ.
ಹಾಗಾಗಿ ಕಳೆದುಕೊಂಡ ಪ್ರಾದೇಶಿಕ ಶಕ್ತಿಯನ್ನು ಮರು ಸ್ಥಾಪಿಸುವ ಉದ್ದೇಶದಿಂದ ಬಿಜೆಪಿಯೊಂದಿಗೆ ಮೈತ್ರಿ
ಮಾಡಿಕೊಂಡಿದೆ. ಆದರೇ, ಜೆಡಿಎಸ್ನ ಪ್ರಾದೇಶಿಕತೆಗೆ ಒತ್ತು ಕೊಟ್ಟು ಅಂದು ಬೆಂಬಲಿಸಿದ ಮತದಾರರು ಈಗ
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಮೇಲೆಯೂ ಅದೇ ಬೆಂಬಲವನ್ನು ಮುಂದುವರಿಸುವುದಕ್ಕೆ ಸಾಧ್ಯವಿದೆಯೇ
? ಎನ್ನುವ ಪ್ರಶ್ನೆ ಸಹಜವಾಗಿ ರಾಜಕೀಯ ವಲಯದಲ್ಲಿ ಸೃಷ್ಟಿಯಾಗಿದೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ೨೦೦೪ರಿಂದ ಎಲ್ಲಾ ಲೋಕಸಭಾ ಚುನಾವಣೆಗಳಲ್ಲಿ
ಅತಿ ಹೆಚ್ಚು ಸ್ಥಾನಗಳನ್ನು (ಕನಿಷ್ಟ ೧೭) ಬಿಜೆಪಿ ಪಡೆದುಕೊಂಡಿದೆ. ೨೦೨೪ರ ಲೋಕಸಭಾ ಚುನಾವಣೆಯಲ್ಲಿಯೂ
೨೮ ಲೋಕಸಭಾ ಕ್ಷೇತ್ರಗಳಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿಯೇ ಪಡೆದುಕೊಳ್ಳುತ್ತದೆ ಎಂಬ ರಾಜಕೀಯ
ವಲಯದ ಭವಿಷ್ಯದ ನಡುವೆಯೂ ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಬಲವಾದ ಕಾರಣವಿದೆ ಎನ್ನುವುದರಲ್ಲಿ
ಸಂಶಯವೇ ಇಲ್ಲ. ಬಿಜೆಪಿಯಂತಹ ಒಂದು ರಾಷ್ಟ್ರೀಯ ಪಕ್ಷ ಈ ಮೈತ್ರಿಗೆ ಒಪ್ಪುವುದಕ್ಕೂ ಬಲವಾದ
ಪ್ರಾದೇಶಿಕ ಕಾರಣಗಳಿವೆ. ಸಾಂಪ್ರದಾಯಿಕವಾಗಿ, ಕರ್ನಾಟಕದಲ್ಲಿ ಬಿಜೆಪಿಯ ದುರ್ಬಲ ಸ್ಥಾನಗಳು ಜೆಡಿಎಸ್ ಭದ್ರಕೋಟೆಯಾಗಿದೆ ಮತ್ತು
ಪ್ರಾದೇಶಿಕ ಪಕ್ಷದ ಕೋರ್ ಒಬಿಸಿ ಒಕ್ಕಲಿಗ ಜಾತಿ ಮತಗಳ ಮೂಲವಾಗಿದೆ ಎಂಬುವುದು ತಿಳಿದಿರುವ ಸಂಗತಿ.
ಉದಾಹರಣೆಗೆ,
ಬಿಜೆಪಿ ೨೦೧೯ರಲ್ಲಿ ೨೮ ಸಂಸದರ ಪೈಕಿ ೨೫ ಸ್ಥಾನಗಳನ್ನು ಗೆದ್ದಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ನ ಡಿಕೆ ಸುರೇಶ್ ಗೆದ್ದಿದ್ದರು, ಮಂಡ್ಯದಲ್ಲಿ ಕಾಂಗ್ರೆಸ್ನಿಂದ ಬಂಡಾಯ ಎದ್ದು ಸ್ವತಂತ್ರ ಅಭ್ಯರ್ಥಿಯಾಗಿ
ಸುಮಲತಾ ಗೆದ್ದರೇ, ಮತ್ತು ಹಾಸನದಲ್ಲಿ ಎಚ್.ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದು ಸಂಸತ್ತನ್ನು ಪ್ರವೇಶಿಸಿದ್ದಾರೆ.
ಬಹಳ ಪ್ರಮುಖವಾಗಿ
ಇಲ್ಲಿ ಗಮನಿಸಲೇಬೇಕಾದ ವಿಚಾರ ಏನೆಂದರೇ, ೨೦೧೯ರಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ
ಜೆಡಿಎಸ್ನಿಂದ ಬಂಡಾಯ ಎದ್ದು ಬಂದ ಎ. ಮಂಜು, ಪ್ರಜ್ವಲ್ ರೇವಣ್ಣ ವಿರುದ್ಧ ಪರಾಜಯಗೊಂಡರು. ಮತ್ತೆ
ಎ. ಮಂಜು ಜೆಡಿಎಸ್ಗೆ ಮರಳಿದರು ಕೂಡ. ಹಾಸನ ವಿಧಾನಸಭಾ ಕ್ಷೇತ್ರದಿಂದ ೨೦೨೩ರ ವಿಧಾನಸಭಾ ಕ್ಷೇತ್ರದಿಂದ
ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದರು. ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಈ ಮೂರು ಕ್ಷೇತ್ರಗಳಲ್ಲಿ
ಬಿಜೆಪಿ ಪ್ರಾಬಲ್ಯವನ್ನು ಹೊಂದಿಲ್ಲ.
ಈ ಮೂರು ಸ್ಥಾನಗಳು
ಮತ್ತು ಇನ್ನೂ ಐದು ಸ್ಥಾನಗಳಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಹೊಂದಿದೆ. ಈ ಎಂಟು ಲೋಕಸಭಾ ಕ್ಷೇತ್ರಗಳು
ವಿಧಾನಸಭಾ ಚುನಾವಣೆಯಲ್ಲಿ ಸುಮಾರು ೫೦ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿವೆ. ಬಿಜೆಪಿಯ ಈ ಮೈತ್ರಿ
ಸಾಧನೆಯು, ಜೆಡಿಎಸ್ ಜೊತೆಗಿನ ಮೈತ್ರಿಯು ೨೦೨೪ರ ಲೋಕಸಭಾ ಚುನಾವಣೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ
ದೂರದೃಷ್ಟಿಯೂ ಆಗಿದೆ. ರಾಜಕೀಯ ಲೆಕ್ಕಾಚಾರದಲ್ಲಿ ಬಿಜೆಪಿ ನೇತೃತ್ವದಲ್ಲಿ ರಾಜ್ಯದಲ್ಲಿ ಸರ್ಕಾರವನ್ನು ಮರಳಿ ಸ್ಥಾಪಿಸುವ ಮೊದಲ ಹೆಜ್ಜೆಯಂತೆ ಕಾಣಿಸುತ್ತಿದೆ. ಜೆಡಿಎಸ್ ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಕಾಂಗ್ರೆಸ್ ಕಡೆಗೆ ವಾಲುವ
ಒಕ್ಕಲಿಗ ಮತಗಳನ್ನು ಈ ಮೈತ್ರಿ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತದೆ ಎನ್ನುವುದು ನಿಶ್ಚಿತವಾಗಿದೆ.
ಆದರೇ, ಇಲ್ಲಿ ಜಾತಿ ಗಣನೆಗೆ ಬರುತ್ತೋ ಅಥವಾ ಜೆಡಿಎಸ್ ಮತ್ತು ಬಿಜೆಪಿಯ ಸೈದ್ಧಾಂತಿಕತೆಯನ್ನು ಒಪ್ಪುತ್ತದೆಯೆ
ಎನ್ನುವುದು ಇಲ್ಲಿ ಪ್ರಶ್ನಾರ್ಹ ವಿಷಯ.
ಬಿಜೆಪಿಯನ್ನು ಈಗಾಗಲೇ ಕರ್ನಾಟಕದ ಲಿಂಗಾಯತ ಸಮುದಾಯದ ಪಕ್ಷ ಎಂಬಂತೆ ಬಿಂಬಿಸಲಾಗಿದೆ. ಜೆಡಿಎಸ್ ಪರವಾಗಿರುವ ಒಬಿಸಿ ಒಕ್ಕಲಿಗ ಸಮುದಾಯವು
ಕರ್ನಾಟಕದ ಎರಡನೇ ಅತಿ ದೊಡ್ಡ ಮತಗಳನ್ನು ಹೊಂದಿರುವ ಸಮುದಾಯವಾಗಿದೆ. ಲಿಂಗಾಯತರು ಕರ್ನಾಟಕದಾದ್ಯಂತ ಇದ್ದರೂ, ಒಕ್ಕಲಿಗರು ಜೆಡಿಎಸ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ಹೆಚ್ಚಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಮತಗಳನ್ನು ಈ ಮೈತ್ರಿಯತ್ತ ಸೆಳೆದುಕೊಳ್ಳುವುದು
ಹೇಳಿದಷ್ಟು ಸುಲಭವಿಲ್ಲ. ಈ ಎರಡು ಸಮುದಾಯಗಳು ಹೆಚ್ಚಿರುವ ಪ್ರದೇಶಗಳಲ್ಲಿ ಅಂತ ಸಮುದಾಯದ ನಾಯಕರೆನ್ನಿಸಿಕೊಂಡವರೂ
ಇಲ್ಲ. ಈ ವಿಚಾರವನ್ನು ಮುಂದಿಟ್ಟುಕೊಂಡು ಮೈತ್ರಿಯ ಸೀಟು ಹಂಚಿಕೆ ಹೇಗಾಗುತ್ತದೆ ಎನ್ನುವುದನ್ನು ಕಾದು
ನೋಡಬೇಕಿದೆ.
ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದರೂ ದಕ್ಷಿಣ ರಾಜ್ಯದಲ್ಲಿ
ಬಿಜೆಪಿ ಸರಳ ಬಹುಮತ ಗಳಿಸದಿರಲು ಜೆಡಿಎಸ್ ಹೃದಯ ಭಾಗದಲ್ಲಿರುವ ದುರ್ಬಲತೆಯೂ ಒಂದು ಕಾರಣ.
ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಹೋರಾಟ ಜೆಡಿಎಸ್ ಕಣದಲ್ಲಿ ಯಾವಾಗಲೂ ಕಾಂಗ್ರೆಸ್ಗೆ
ಲಾಭದಾಯಕವಾಗಿದೆ ಎನ್ನುವುದನ್ನು ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಗಮನಿಸಬಹುದಾಗಿದೆ.
ಇನ್ನು, ಕರ್ನಾಟಕದ ವಿಚಾರದಲ್ಲಿ ಕಾಂಗ್ರೆಸ್
ನ ಕೇಂದ್ರ ನಾಯಕತ್ವ ಎಚ್ಚರಿಕೆ ವಹಿಸಲು ಈ “ಹೊಂದಾಣಿಕೆ ರಾಜಕೀಯ”ವೂ ಕಾರಣ.
ಉದಾಹರಣೆಗೆ, ೨೦೧೯ ರಲ್ಲಿ,
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪತನವಾದಾಗ, ಬಿಎಸ್ ಯಡಿಯೂರಪ್ಪ ಅವರನ್ನು ಬೆಂಬಲಿಸಲು ೧೩ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು
, ಅವರಲ್ಲಿ ಅನೇಕರು ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಷ್ಠಾವಂತರು
ಎಂದು ಪರಿಗಣಿಸಲ್ಪಟ್ಟರು. ಕೆಲವು ಶಾಸಕರು ಈಗ ಕಾಂಗ್ರೆಸ್ಗೆ ಮರಳುವತ್ತ ಪ್ರಯತ್ನದಲ್ಲಿದ್ದಾರೆ
ಎಂಬ ಸುದ್ದಿ ಇದೆ.
೨೦೨೪ರ ಲೋಕಸಭೆಗಾಗಿ ನಡೆಯುವ ಈ ಮೈತ್ರಿ ಪ್ರಯೋಗವು ಜೆಡಿಎಸ್ ಗಿಂತ
ಹೆಚ್ಚು ಬಿಜೆಪಿಗೆ ಲಾಭವಾಗಿರಲಿದೆ. ರಾಷ್ಟ್ರೀಯ
ಮತ್ತು ಪ್ರಾದೇಶಿಕ ಮಟ್ಟದಲ್ಲಿ ಈ ಮೈತ್ರಿ ಕೆಲಸ ಮಾಡಿದರೆ, ಜೆಡಿಎಸ್ ಮತವನ್ನು ಸೆಳೆದುಕೊಳ್ಳುವಲ್ಲಿ ಬಿಜೆಪಿ ಖಂಡಿತ
ಮುಂದಡಿಯಿಡುತ್ತದೆ. ಜೆಡಿಎಸ್ಗೆ ಇದು ಮುಂದೆ ದೊಡ್ಡ ಸವಾಲಾಗಿ ಪರಿಣಮಿಸುವುದರಲ್ಲಿ ಸಂಶಯವೇ
ಇಲ್ಲ. ದೇವೇಗೌಡರ ಕುಟುಂಬದಲ್ಲಿ ಹಲವು ಬಣಗಳಿವೆ. ಮಾಜಿ ಸಚಿವ ಎಚ್.ಡಿ.ರೇವಣ್ಣ
ಕಾಂಗ್ರೆಸ್ ಗೆ ಒಂದು ತರದಲ್ಲಿ ಸಾಫ್ಟ್ ಮನೋಧೋರಣೆ ತೋರಿಸುತ್ತಾ ಬಂದಿರುವುದು ಗೊತ್ತಿರುವ
ವಿಷಯ. ೨೦೨೪ರ ನಂತರ ಜೆಡಿಎಸ್ ವಿಭಜನೆಯಾದರೆ, ವಿವಿಧ ಬಣಗಳು ವಿಭಿನ್ನ ರೀತಿಯಲ್ಲಿ ತಲೆ ಎತ್ತಬಹುದು ಎಂಬ ಚರ್ಚೆಯೂ ರಾಜಕೀಯ
ವಲಯದಲ್ಲಿ ಇದೆ.
೨೦೦೬ರಲ್ಲಿ ಬಿಜೆಪಿಯೊಂದಿಗೆ ಕುಮಾರಸ್ವಾಮಿ ಮೈತ್ರಿ ಮಾಡಿಕೊಳ್ಳಲು ಹೊರಟಾಗ ವಿರೋಧಿಸಿದ್ದ ಜೆಡಿಎಸ್
ವರಿಷ್ಠ ದೇವೇಗೌಡ್ರು, ಈಗ ಬಿಜೆಪಿಯೊಂದಿಗೆ ಸೇರಿಕೊಳ್ಳುವುದಕ್ಕೆ ತೋರಿಸಿದ ಉತ್ಸಾಹ ನಿಜಕ್ಕೂ ಆಶ್ಚರ್ಯವೇ
ಸರಿ. ವೈಯಕ್ತಿಕ ಲಾಭಕ್ಕೆ ಮತ್ತು ಕುಟುಂಬದ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ತಮ್ಮ ಸಿದ್ಧಾಂತವನ್ನೇ
ಮರೆತು ತಮ್ಮ ವಿರುದ್ಧ ಸಿದ್ಧಾಂತವನ್ನು ಪಾಲಿಸುವ ಒಂದು ಪಕ್ಷದೊಂದಿಗೆ ಸೇರಿಕೊಂಡಿರುವುದರ ಹಿಂದಿನ
ಬಲವಾದ ಉದ್ದೇಶವೇನು ಎಂಬುವುದು ಪ್ರಶ್ನೆಯಾಗಿಯೆ ಉಳಿದಿದೆ. ದೇವೇಗೌಡರಿಗೆ ಬಿಜೆಪಿಯಿಂದ ರಾಷ್ಟ್ರಮಟ್ಟದಲ್ಲಿ
ಒಂದು ದೊಡ್ಡ ಮಟ್ಟದ ಮನ್ನಣೆ, ಗೌರವ, ಸನ್ಮಾನವೇನೋ ದೊರಕಬಹುದು ಆದರೇ, ಜೆಡಿಎಸ್ ನ ಭವಿಷ್ಯ ? ಕಾದು
ನೋಡೋಣ.
-ಶ್ರೀರಾಜ್ ವಕ್ವಾಡಿ







.jpeg)
