ʼಸಿಎಂ ಪದವಿ ಹಸ್ತಾಂತರʼ ವಿಶ್ವಾಸಾತ್ಮಕವಾಗಿ ನಡೆಯಬೇಕೆನ್ನುವುದೇ ಡಿಕೆಶಿ ಗುರಿ !
ಸಿದ್ದರಾಮಯ್ಯ,
ಡಿ.ಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವೆ ʼಸಿಎಂ ಪದವಿʼ ಹಂಚಿಕೆಯ ಒಪ್ಪಂದ ಆಗಿರುವ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ
ವಿಧಾನಸಭಾ ಚುನಾವಣೆಯಲ್ಲಿ ಬಾರಿ ಬಹುಮತದೊಂದಿಗೆ ಗೆದ್ದು ಬೀಗಿದ ರಾಜ್ಯ ಕಾಂಗ್ರೆಸ್ ಸರ್ಕಾರದ ನೇತೃತ್ವ
ವಹಿಸಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ಹೈಕಮಾಂಡ್ ಮುಂದೆ ತಮ್ಮ ಪ್ರಭಾವ ತೋರಿಸಿದ್ದರು.
ಡಿಕೆಶಿ ಅವರನ್ನು ಸಮಾಧಾನಗೊಳಿಸುವುದಕ್ಕೆ ಹೈಕಮಾಂಡ್ಗೆ ವಾರಕ್ಕೂ ಹೆಚ್ಚು ಕಾಲ ಬೇಕಾಯಿತು. ಕಾಂಗ್ರೆಸ್
ಒಳಗಿನ ಈ ಗೊಂದಲ ಪ್ರತಿಪಕ್ಷಗಳ ಪಾಲಿಗೆ ರಾಜಕೀಯ ಅಸ್ತ್ರವಾಗಿ ಸಿಕ್ಕಿತ್ತು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ
ಡಿಕೆಶಿ ʼಸಿಎಂ ಪದವಿ ಹಂಚಿಕೆʼಯ ಒಪ್ಪಂದ ಆಗಿರುವುದರ ಬಗ್ಗೆ ಹೇಳಿಕೊಂಡಿದ್ದರಿಂದ ಆ ವಿಷಯ ಮತ್ತೆ ಮೇಲೆ
ಬಂದಿದೆ. ಸಿಎಂ ಸಿದ್ದರಾಮಯ್ಯ ಇದನ್ನು ತಳ್ಳಿ ಹಾಕಿದ್ದಾರೆ. ಇನ್ನು,
ಈಚೆಗೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮೂರಕ್ಕೆ ಮೂರು
ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಅದರಲ್ಲೂ ಒಕ್ಕಲಿಗ ಪ್ರಾಬಲ್ಯವಿರುವ ಚೆನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆದ್ದಿರುವುದು
ಡಿಕೆಶಿ ಬಲ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪದವಿ ಒಪ್ಪಂದದ ದೊಡ್ಡ ರಾಜಕೀಯ ಪ್ರಹಸನಕ್ಕೆ
ಮಾಜಿ ಪ್ರಧಾನಿ ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ನಡೆದ ಕಾಂಗ್ರೆಸ್ ನ ಬೃಹತ್ ಜನ ಕಲ್ಯಾಣ ಸಮಾವೇಶದ
ಮೂಲಕ ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎಂದೇ ಕಾಣಿಸುತ್ತಿದೆ.
ವಿಧಾನಸಭಾ ಚುನಾವಣೆಗೂ ಮುನ್ನಾ
2022ರಲ್ಲಿ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನದ ಅಂಗವಾಗಿ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಅಮೃತ
ಮಹೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ನಡೆದಿತ್ತು. ದಾವಣಗೆರೆ ಸಮಾವೇಶದಿಂದ
ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪ್ಲಸ್ ಆಗಿತ್ತು. ಆದರೇ, ಅಧಿಕಾರ ಹಿಡಿದ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಸಾಲು ಸಾಲು ವಿವಾದಕ್ಕೀಡಾಗಿದೆ.
ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ಅಬಕಾರಿ
ಇಲಾಖೆ ಭ್ರಷ್ಟಾಚಾರ, ವಕ್ಫ್ ಭೂ ವಿವಾದ, ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಮರ, ಗುತ್ತಿಗೆದಾರರ ಕಮಿಷನ್ ಆರೋಪ, ಗ್ಯಾರಂಟಿ ಯೋಜನೆ ಮಿತಿ ವಿವಾದ, ರೇಷನ್ ಕಾರ್ಡ್ ರದ್ದು ವಿಚಾರ ಸೇರಿದಂತೆ ಹಲವು ವಿವಾದಗಳು ರಾಜ್ಯ ಸರ್ಕಾರಕ್ಕೆ
ಕಾಡಿವೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕಾಂಗ್ರೆಸ್ಗಿಂತ ಹೆಚ್ಚಾಗಿ ಸಿಎಂ ಸಿದ್ದರಾಮಯ್ಯ ಅವರನ್ನೇ
ರಾಜಕೀಯವಾಗಿ ಟಾರ್ಗೇಟ್ ಮಾಡುವುದಕ್ಕೆ ಈ ಎಲ್ಲಾ ವಿವಾದಗಳು ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಕಾಂಗ್ರೆಸ್ಗೆ
ಇವೆಲ್ಲವುಗಳಿಂದ ಹೊರ ಬರಲು ಉಪ ಚುನಾವಣೆಯ ಫಲಿತಾಂಶ ದೊಡ್ಡ ಮಟ್ಟದಲ್ಲೇ ಸಹಕರಿಸಿತು ಎಂದರೇ ತಪ್ಪಿಲ್ಲ.
ಈ ಬೆನ್ನಲ್ಲೇ, ಕಾರ್ಯಕರ್ತರು,
ಜನರ ವಿಶ್ವಾಸ ಮರಳಿ ಗಳಿಸಲು ಬೃಹತ್ ಮಟ್ಟದಲ್ಲಿಯೇ ಸರ್ಕಾರಿ ಹಾಗೂ ರಾಜಕೀಯ
ಸಮಾವೇಶವನ್ನು ಮಾಜಿ ಪ್ರಧಾನಿ ದೇವೇಗೌಡರ ಕರ್ಮಭೂಮಿಯಲ್ಲೇ ಕಾಂಗ್ರೆಸ್ ನಡೆಸಿರುವುದರ ಹಿಂದೆ ಎರಡೆರಡು
ಉದ್ದೇಶ ಎದ್ದು ಕಾಣುತ್ತಿವೆ.
2005ರಲ್ಲಿ
ಸಿದ್ದರಾಮಯ್ಯ ಎಚ್. ಡಿ. ದೇವೇಗೌಡರ ಜೆಡಿಎಸ್ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಸಿಟ್ಟಿಗೆದ್ದ
ಸಿದ್ದರಾಮಯ್ಯ ದೇವೇಗೌಡರ ವಿರುದ್ಧ ಹುಬ್ಬಳ್ಳಿಯಲ್ಲಿ ಬೃಹತ್ ಅಹಿಂದ ಸಮಾವೇಶ ನಡೆಸುವ ಮೂಲಕ ಬಲಪ್ರದರ್ಶನ
ತೋರ್ಪಡಿಸಿದ್ದರು. ಅಂದಿನ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಸೇರ್ಪಡೆಗೊಂಡಿದ್ದರು.
ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಹೊಸ ಶಕೆ ಅಂದು ಆರಂಭವಾಗಿತ್ತು. ಕಾಂಗ್ರೆಸ್ ಮೂಲಕ ಸಿದ್ದರಾಮಯ್ಯ
ರಾಜ್ಯ ರಾಜಕಾರಣದಲ್ಲಿ ಏರಬಲ್ಲ ಎಲ್ಲಾ ಎತ್ತರವನ್ನು ಏರಿದ್ದರು. ಇದು ದೇವೇಗೌಡರ ಮುನಿಸಿಗೆ ಕಾರಣವಾಗಿತ್ತು.
ಸಿದ್ದರಾಮಯ್ಯ ಅವರಲ್ಲಿಯೂ ದೇವೇಗೌಡರ ವಿರುದ್ಧ ಸಿಟ್ಟು ಬೂದಿಯೊಳಗಿನ ಕೆಂಡದಂತೆಯೇ ಎದೆಯೊಳಗಿತ್ತು.
ಇನ್ನೊಂದೆಡೆ ಡಿಕೆಶಿಗೂ ಕುಮಾರಸ್ವಾಮಿ ಮೇಲೆ ಎಲ್ಲಿಲ್ಲದ ಹಠ. ಒಕ್ಕಲಿಗ ಸಮುದಾಯಕ್ಕೆ ತಾನೇ ನಾಯಕನಾಗಬೇಕೆಂಬ
ಹಠವೂ ಅವರಲ್ಲಿದೆ. ಹಿಂದೊಮ್ಮೆ ಜೆಡಿಎಸ್, ಕಾಂಗ್ರೆಸ್ ಮೈತ್ರಿಗೆ ಡಿಕೆಶಿಯೇ ಮುಖ್ಯ ಕಾರಣವಾದರೂ,
ಕುಮಾರಸ್ವಾಮಿ ʼಒಕ್ಕಲಿಗ ಸಮುದಾಯದ ನಾಯಕʼನಾಗಿ ಬೆಳೆಯುವುದು ಡಿಕೆಶಿಗೆ ಇಷ್ಟವಿರಲಿಲ್ಲ. ಸಿದ್ದರಾಮಯ್ಯ,
ಡಿಕೆಶಿ ತಮ್ಮೆಲ್ಲಾ ಸಿಟ್ಟನ್ನು ಈಗ ತಮ್ಮ ಅಧಿಕಾರವಧಿಯಲ್ಲಿ ಭಾಗಶಃ ತೀರಿಸಿಕೊಂಡಿದ್ದಾರೆ
ಎನ್ನುವುದರಲ್ಲಿ ಸಂಶಯವೇ ಇಲ್ಲ.
ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದ
ಸಿಎಂ ಸಿದ್ದರಾಮಯ್ಯರಿಗೆ ʼಕಾಂಗ್ರೆಸ್ ಜನ ಕಲ್ಯಾಣ ಸಮಾವೇಶʼ ಎಂಬ ಶೀರ್ಷಿಕೆಯಡಿಯಲ್ಲಿಯೇ, ಪಕ್ಷದ ವೇದಿಕೆಯೆಲ್ಲಿಯೇ ನಡೆಯಬೇಕು ಎಂದು ಹೈಕಮಾಂಡ್ ಖಡಕ್ ಆಗಿ ಹೇಳಿರುವುದು
ಸಿದ್ದರಾಮಯ್ಯ ಅವರ ರಾಜಕೀಯಕ್ಕೆ ದೊಡ್ಡ ಮಟ್ಟದ ಆಘಾತವಾಗದಿದ್ದರೂ,
ಒಂದು ಹಂತದ ಹಿನ್ನೆಡೆ ಎಂದೇ ಹೇಳಬಹುದು. ಪಕ್ಷದ ಕಾರ್ಯಕ್ರಮವೇ ಆಗಬೇಕು
ಎಂದು ಎಲ್ಲಿಯೂ ರಾಜಕೀಯ ಸಂಘರ್ಷಕ್ಕೆ, ವಿವಾದಕ್ಕೆ ಎಡೆ ಮಾಡಿಕೊಡದೇ ಹೈಕಮಾಂಡ್ ಮಟ್ಟದಲ್ಲೇ ಇಂಥದ್ದೊಂದು ಸೂಚನೆ
ಕೊಡಿಸುವಲ್ಲಿ ಡಿಕೆಶಿ ಗೌಪ್ಯವಾಗಿಯೇ ಯಶ ಕಂಡಿದ್ದರು. ಕೆಪಿಸಿಸಿ ನಿರ್ದೇಶನದಲ್ಲೇ ಕಾರ್ಯಕ್ರಮ ಆಗುವಂತೆ
ಡಿಕೆಶಿ ಕಂಡುಕೊಂಡಿದ್ದರು. ಅರ್ಥಾತ್ ಪರೋಕ್ಷವಾಗಿ ತಮ್ಮ ಕೆಪಿಸಿಸಿ ಅಧ್ಯಕ್ಷತೆಯಲ್ಲೇ ಸಮಾವೇಶ ನಡೆದಿದೆ
ಎನ್ನುವ ಹಾಗೆ ಮಾಡಿಕೊಳ್ಳುವುದರಲ್ಲಿಯೂ ಯಶಸ್ವಿಯಾದರು.
ಇನ್ನು,
ಈ ಸಮಾವೇಶದ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ವರ್ಚಸ್ಸಿಗೆ ಅಂಟಿದ
ಕೊಳೆಯನ್ನು ಭಾಗಶಃ ತೊಳೆದುಕೊಂಡಿದ್ದಲ್ಲದೇ, ದೇವೇಗೌಡರ ಕರ್ಮಭೂಮಿಯಲ್ಲೇ ಅವರ ಮೇಲಿದ್ದ ಸಿಟ್ಟನ್ನು ತೀರಿಸಿಕೊಂಡರು.
ಜೊತೆಗೆ ಡಿಕೆಶಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ತಾನೇ ʼಒಕ್ಕಲಿಗ ಸಮುದಾಯದ ನಾಯಕʼ ಎಂದು ತೋರಿಸಿಕೊಳ್ಳುವುದರೊಂದಿಗೆ ಹೈಕಮಾಂಡ್ಗೆ ಮುಂದಿನ ʼಸಿಎಂ ಪದವಿʼ ತಮ್ಮ ಪಾಲಿಗೆ ಮೀಸಲು ಎನ್ನುವುದನ್ನು ಸೂಚ್ಯವಾಗಿ ಎತ್ತಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಈ
ಮಟ್ಟಿಗೆ ಬೆಳೆಯುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಮಾತ್ರವಲ್ಲ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಅವರ ಸಂಘಟನಾತ್ಮಕ ಶಕ್ತಿಯೂ ಮುಖ್ಯ ಕಾರಣ ಎನ್ನುವುದು ಡಿಕೆಶಿ ಅವರ ಬೆಂಬಲಿಗರು ಹೇಳುವ ಮಾತು. ಹಾಗಾಗಿ
ಇದೂ ಕೂಡ ʼಮುಖ್ಯಮಂತ್ರಿ ಪದವಿ ಹಸ್ತಾಂತರʼದ ವಿಚಾರ ಆಗಾಗ್ಗೆ ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುವುದಕ್ಕೆ ಮುಖ್ಯ
ಕಾರಣ ಎಂದು ಹೇಳಬಹುದು.
ಸಮಾವೇಶದಲ್ಲಿ ಡಿಕೆಶಿ ಸಿಎಂ
ಸಿದ್ದರಾಮಯ್ಯ ಪರ ಮಾತಾಡಿರುವುದರ ಹಿಂದೆಯೂ ಮಹತ್ತರವಾದ ದೂರದೃಷ್ಟಿ ಇದೆ. ಹೈಕಮಾಂಡ್ ದೃಷ್ಟಿಗೆ
ಸಿದ್ದರಾಮ್ಯ ಹಾಗೂ ತಮ್ಮ ನಡುವೆ ಯಾವುದೇ ಭಿನ್ನಮತವಿಲ್ಲ ಎನ್ನುವ ವಿಚಾರ ತೋರಿಸುವ ತಂತ್ರವೂ ಇದಾಗಿದೆ.
ಡಿಕೆಶಿ ತನ್ನ ಬೆಂಬಲವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಿದ್ದರಾಮಯ್ಯ ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ
ಎನ್ನುವುದು ಕೂಡ ʼಸಿಎಂ
ಪದವಿ ಹಸ್ತಾಂತರʼ ವಿಶ್ವಾಸಾತ್ಮಕವಾಗಿಯೇ
ನಡೆಯಲಿ ಎನ್ನುವುದೇ ಆಗಿದೆ. ಸಿಎಂ ಸಿದ್ದರಾಮಯ್ಯ ಅವರ ಹಿಂದೆ ʼಅಹಿಂದʼ ವರ್ಗದ ದೊಡ್ಡ ಬೆಂಬಲವಿದೆ. ಈ ಬೆಂಬಲದ ನೆರಳಲ್ಲೇ ಮುಂದಿನ ರಾಜಕೀಯ ಭವಿಷ್ಯವನ್ನು
ಡಿಕೆಶಿ ಭದ್ರಗೊಳಿಸಿಕೊಳ್ಳುವ ಮುಖವಾಗಿ ತಮ್ಮ ಬುದ್ದಿವಂತಿಕೆಯನ್ನು ತೋರಿಸುತ್ತಿರುವುದು ಸ್ಪಷ್ಟವಾಗಿ
ಕಾಣಿಸುತ್ತಿದೆ.
ಜೆಡಿಎಸ್ ಬಿಜೆಪಿಯೊಂದಿಗೆ
ಈಗ ಅರ್ಧ ವಿಲೀನ. ಜೆಡಿಎಸ್ ಪ್ರಾದೇಶಿಕ ಪಕ್ಷದ ಸಾಮರ್ಥ್ಯವನ್ನು ಸಂಪೂರ್ಣ ಕಳೆದುಕೊಳ್ಳುವುದರತ್ತ
ಸಾಗುತ್ತಿದೆ. ಲೋಕಸಭೆಗಾಗಿ ಬಿಜೆಪಿಯೊಂದಿಗಿನ ಮೈತ್ರಿ ಕೆಲವು ಜೆಡಿಎಸ್ ನಾಯಕರಿಗೆ ಹಿಡಿಸಿಲ್ಲ.
ಅತೃಪ್ತ ಜೆಡಿಎಸ್ ನಾಯಕರು ಕಾಂಗ್ರೆಸ್ ಸೇರಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ದೇವೇಗೌಡರ ಕಾಲದ
ನಂತರ ಜೆಡಿಎಸ್ ಬಿಜೆಪಿಯೊಂದಿಗೆ ಸಂಪೂರ್ಣ ವಿಲೀನ ಆಗುವ ಲಕ್ಷಣಗಳು ಕಾಣಿಸುತ್ತಿದೆ. ಹಾಗಾಗಿ ಈ ಸಂದರ್ಭವನ್ನು
ಚೆನ್ನಾಗಿ ಬಳಸಿಕೊಳ್ಳಬೇಕು ಎನ್ನುವ ಇಂಗಿತವೂ ಡಿಕೆಶಿಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ
ಸಂಘಟನೆಯನ್ನು ಭದ್ರಗೊಳಿಸಿಕೊಳ್ಳುವುದು, ʼಒಕ್ಕಲಿಗ ಸಮುದಾಯ ನಾಯಕʼನಾಗಿ ಮತ್ತಷ್ಟು ಪ್ರಭಾವಿಯಾಗುವುದೇ ಡಿಕೆಶಿ ಮುಂದಿರುವ ಸದ್ಯದ ಗುರಿ.
ಈ ಗುರಿಯನ್ನು ಯಶಸ್ವಿಯಾಗಿ ತಲುಪಿದರೇ, ಮುಂದೆ ಸುಲಭದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಬಹುದು ಎನ್ನುವುದು
ಡಿಕೆಶಿ ಯೋಚನೆ. ಇನ್ನು, ಶಿವಕುಮಾರ್ ಹೇಳಿಕೆಯ ಕಾರಣಕ್ಕೆ ʼಮುಖ್ಯಮಂತ್ರಿ ಪದವಿ ಹಂಚಿಕೆʼಯ ಈ ಸಮರ ಕೊನೆಗೊಂಡಿತೆಂದೇನೂ ಅಲ್ಲ. ಅದು ಈಗಷ್ಟೇ ಶುರುವಾಗಿದೆ.
ಬಹುಶಃ ಕಾಂಗ್ರೆಸ್ನಲ್ಲಿ
ಇನ್ನು ಮುಂದೆ ಆಗುವ ಬೆಳವಣಿಗೆ ಖಂಡಿತವಾಗಿ ರಾಜ್ಯ ರಾಜಕಾರಣದ ಭವಿಷ್ಯವನ್ನು ನಿರ್ಧರಿಸಲಿದೆ ಎನ್ನುವುದರಲ್ಲಿ
ಅನುಮಾನವೇ ಇಲ್ಲ.
-ಶ್ರೀರಾಜ್ ವಕ್ವಾಡಿ.




