Monday, July 27, 2026

ನೀಟ್ ಅಕ್ರಮ : Fast Track Court ಸ್ಥಾಪನೆಯ ಹಿಂದಿನ ಉದ್ದೇಶವೇನು!?

 ಕೊನೆಗೂ ನೀಟ್ ಅಕ್ರಮಗಳ ವಿರುದ್ದ ಪ್ರಧಾನಿ ಮೋದಿಯವರು ಮೌನ ಮುರಿದಿದ್ದಾರೆ. ನೀಟ್ ಅಕ್ರಮಗಳನ್ನು ವಿರೋಧಿಸಿ ಕಳೆದ ಹತ್ತಾರು ದಿನಗಳಿಂದ ಈ ದೇಶದ ಸಹಸ್ರಾರು ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಕಂಡೂ ಕಾಣದಂತಿದ್ದ ಪ್ರಧಾನಿ ಮೋದಿ ಇದೀಗ ಏಕಾಏಕಿ ಎಚ್ಚೆತ್ತುಕೊಂಡು 'ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ದ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ. “ಅದಕ್ಕಾಗಿ ತ್ವರಿತ ಗತಿಯ ನ್ಯಾಯಾಲಯಗಳನ್ನು ಸ್ಥಾಪಿಸಲು ಸರಕಾರ ನಿರ್ಧರಿಸಿದೆ'' ಎಂದೂ ಭರವಸೆ ನೀಡಿದ್ದಾರೆ. ಯುವಕರ ಭವಿಷ್ಯದ ಬಗ್ಗೆ ಬಾಯಿ ತುಂಬಾ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಸೆಲ್ಫಿ ವಿಡಿಯೊ ಮಾಡಿ, ಅದಕ್ಕೂ ಟೆಲಿಪ್ರಾಂಪ್ಟರ್ ಇಟ್ಟುಕೊಂಡು ಪ್ರಧಾನಿ ಮೋದಿಯವರು ಮಾತನಾಡಿದ್ದಾರೆ. ಪ್ರಧಾನಿಗಳ  ಬಾಯಿಯಿಂದ ಇಷ್ಟನ್ನು ಹೊರ ಹಾಕುವುದಕ್ಕೆ ಈ ದೇಶದ ಸಹಸ್ರಾರು ಯುವಜನರು ಕಳೆದ ಹತ್ತಾರು ದಿನಗಳಿಂದ ಮಾಡಿದ ಶ್ರಮ, ತ್ಯಾಗ, ಬಲಿದಾನ ದೊಡ್ಡದು. ಕೆಲವು ಕಡೆ ನೂರಾರು ಪ್ರತಿಭಟನಾಕಾರರ ಮೇಲೆ ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿದ್ದಾರೆ. ಸಾವಿರಾರು ಯುವಕರ ಮೇಲೆ ಪೊಲೀಸರು ಲಾಠಿ ಬೀಸಿ ದೌರ್ಜನ್ಯ ಎಸಗಿದ್ದಾರೆ. ಫಾಸ್ಟ್ ಕೋರ್ಟ್ ಸ್ಥಾಪಿಸುವುದಕ್ಕೆ ಮೋದಿ ನೇತೃತ್ವದ ಸರ್ಕಾರ ಇಷ್ಟು ಸ್ಲೋ ಆಗಿದ್ದು ಯಾಕೆ ? ಅಕ್ರಮ ಸಕ್ರಮಗೊಳಿಸುವುದಕ್ಕಾ? 

ಮೋದಿ ಮಾತನಾಡಿದ್ದು, ಯುವಜನರ ಹೋರಾಟಕ್ಕೆ ಸಿಕ್ಕ ತಾತ್ಕಾಲಿಕ ಜಯವೇ, ಸರ್ಕಾರದ ವಿಳಂಬ ನೀತಿಯ ತಂತ್ರವೇ? ಸುಮಾರು ಒಂದು ತಿಂಗಳಿನಿಂದ ಈ ದೇಶದ ಬೀದಿ ಬೀದಿಗಳಲ್ಲಿ ಸಹಸ್ರಾರು ಯುವಕರು ತಮ್ಮ ಭವಿಷ್ಯಕ್ಕಾಗಿ ನಡೆಸುತ್ತಿರುವ ಹೋರಾಟ ಕೊನೆಗೂ ಆಡಳಿತಾರೂಢ ಸರ್ಕಾರದ ಕಿವಿ ನೆಟ್ಟಗಾಗುವಂತೆ ಮಾಡಿದೆ. ಲಕ್ಷಾಂತರ ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಯಲ್ಲಿಟ್ಟ ‘ನೀಟ್’ (NEET) ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು, ಯುವಕರು ಕ್ರಾಂತಿಕಾರಿ ಪ್ರತಿಭಟನೆ ನಡೆಸಿದ ಬಳಿಕ, ಪ್ರಧಾನಿ ಮೋದಿಯವರು ಕೊನೆಗೂ ತಮ್ಮ ಮೌನ ಮುರಿದಿದ್ದಾರೆ.

ಆದರೆ, ಇಲ್ಲಿ ಏಳುವ ಪ್ರಮುಖ ಪ್ರಶ್ನೆಯೆಂದರೆ, ಈ ಜಾಗೃತಿ ನಿಜಕ್ಕೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯೇ ಅಥವಾ ಬೆಳೆಯುತ್ತಿರುವ ಜನಕ್ರೋಶದಿಂದ ತಪ್ಪಿಸಿಕೊಳ್ಳುವ ರಾಜಕೀಯ ತಂತ್ರವೇ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ

ನೀಟ್‌ನಂತಹ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಗಳು ಮತ್ತು ಶಿಕ್ಷಣದ ಖಾಸಗೀಕರಣವೇ ಇಂತಹ ದಂಗೆ ಮತ್ತು ಅಕ್ರಮಗಳಿಗೆ ಮೂಲ ಕಾರಣ. ಕೋಚಿಂಗ್ ಸೆಂಟರ್‌ಗಳ ಕಾರ್ಪೊರೇಟ್ ಮಾಫಿಯಾ ಮತ್ತು ಪೇಪರ್ ಲೀಕ್ ದಂಧೆ ಕಷ್ಟಪಟ್ಟು ಓದುವ ಬಡ, ಶ್ರಮಿಕ ವರ್ಗದ ವಿದ್ಯಾರ್ಥಿಗಳ ಹಕ್ಕನ್ನು ಕಸಿಯುತ್ತಿದೆ. ಪರೀಕ್ಷಾ ಅಕ್ರಮದ ವಿರುದ್ಧ ಹತ್ತಾರು ದಿನಗಳ ಕಾಲ ರಸ್ತೆಗಿಳಿದು ಹೋರಾಡಿದ ಯುವಕರು ಕೇವಲ ತಮ್ಮ ಹಕ್ಕಿಗಾಗಿ ಹೋರಾಡಲಿಲ್ಲ; ಬದಲಿಗೆ ಕೆಟ್ಟ ಶಿಕ್ಷಣ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಎನ್.ಟಿ.ಎ ವ್ಯವಸ್ಥೆಯ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.

ವಿದ್ಯಾರ್ಥಿಗಳ ಹೋರಾಟದ ವಿರುದ್ಧ ಸರ್ಕಾರದ ಈವರೆಗಿನ ಧೋರಣೆ ಸಂಪೂರ್ಣ ದಮನಕಾರಿಯಾಗಿತ್ತು.

ನ್ಯಾಯ ಕೇಳಿದ ಸಾವಿರಾರು ಯುವಕರ ಮೇಲೆ ಪೋಲಿಸ್ ಲಾಠಿ ಬೀಸಿದರು, ಅಶ್ರುವಾಯು ಸಿಡಿಸಿದರು. 

ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ಸಂವಿಧಾನಾತ್ಮಕ ಹಕ್ಕು. ಆದರೆ ಆಡಳಿತ ಯಂತ್ರ ಯುವಕರ ಬಲಿದಾನ ಮತ್ತು ತ್ಯಾಗವನ್ನು ಹಸಿಹಸಿಯಾಗಿ ನಿರ್ಲಕ್ಷಿಸಿ, ಲಾಠಿ ಮತ್ತು ಎಫ್‌ಐಆರ್‌ಗಳ ಮೂಲಕ ಪ್ರತಿಭಟನೆಯನ್ನು ಹತೋಟಿಯಲ್ಲಿಡಲು ಯತ್ನಿಸಿತು.

ಇನ್ನು, ಈ 'ಫಾಸ್ಟ್ ಟ್ರ್ಯಾಕ್ ಕೋರ್ಟ್' ಸ್ಥಾಪನೆಯ ಬಗ್ಗೆ ಮೋದಿ ನೀಡಿರುವ ಭರವಸೆ ವಿಳಂಬ ನೀತಿಯೋ ಅಥವಾ ಅಕ್ರಮ ಮುಚ್ಚಿಹಾಕುವ ಯತ್ನವೋ?

ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ‘ತ್ವರಿತ ಗತಿಯ ನ್ಯಾಯಾಲಯಗಳನ್ನು’ ಸ್ಥಾಪಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ಆದರೆ ಪ್ರಶ್ನೆ ಎಂದರೆ, ಫಾಸ್ಟ್ ಕೋರ್ಟ್ ಸ್ಥಾಪಿಸಲು ಮೋದಿ ಸರ್ಕಾರ ಇಷ್ಟು 'ಸ್ಲೋ' ಆಗಿದ್ದೇಕೆ?

ಇಷ್ಟು ದಿನಗಳ ಕಾಲ ಮೌನ ವಹಿಸಿದ್ದು ಅಕ್ರಮ ಎಸಗಿದ ಕಾರ್ಪೊರೇಟ್ ಶಕ್ತಿಗಳಿಗೆ ಮತ್ತು ದಂಧೆಕೋರರಿಗೆ ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ಅಕ್ರಮವನ್ನು 'ಸಕ್ರಮ' ಗೊಳಿಸಲು ಕಾಲಾವಕಾಶ ನೀಡಲಿಕ್ಕಾಗಿಯೇ ಎಂಬ ಅನುಮಾನಗಳು ಬಲವಾಗುತ್ತಿವೆ. ಸರ್ಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದಿದ್ದರೆ ಮೊದಲ ದಿನವೇ ತನಿಖೆಗೆ ಆದೇಶಿಸಬಹುದಿತ್ತು.

ಕೇವಲ ಭರವಸೆ ಸಾಲದು, ವ್ಯವಸ್ಥಿತ ಬದಲಾವಣೆ ಬೇಕು.

ಪ್ರಧಾನಿಯವರ ಬಾಯಿಂದ ಬಂದ ಕೇವಲ ಆಶ್ವಾಸನೆಯ ಮಾತುಗಳು ಯುವಜನರ ಗಾಯಕ್ಕೆ ಮುಲಾಮು ಆಗ್ತದೆ ಎಂದರೆ, ಅದು ಭ್ರಮೆ ಅಷ್ಟೇ. ಹತ್ತಾರು ದಿನಗಳ ಹೋರಾಟ, ರಕ್ತ ಹರಿಸಿದ ಯುವಕರು, ವಿದ್ಯಾರ್ಥಿಗಳ ತ್ಯಾಗಕ್ಕೆ ಸಿಗಬೇಕಾದದ್ದು ಕೇವಲ 'ಫಾಸ್ಟ್ ಕೋರ್ಟ್' ಭರವಸೆಯಲ್ಲ; ಬದಲಿಗೆ, ನೀಟ್ ಅಕ್ರಮದ ಸಮಗ್ರ ಮತ್ತು ಸ್ವತಂತ್ರ ತನಿಖೆ.

ಮತ್ತು ಅಕ್ರಮದಲ್ಲಿ ಭಾಗಿಯಾದ ಪ್ರಭಾವಿ ಕಾರ್ಪೊರೇಟ್ ಶಕ್ತಿಗಳ ಬಂಧನ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ಎಲ್ಲಾ ಸುಳ್ಳು ಎಫ್‌ಐಆರ್‌ಗಳ ರದ್ದತಿ. ಇವಿಷ್ಟು ಮಾಡಿದರೇ, ನಿಜಕ್ಕೂ ಮೋದಿ ಗ್ರೇಟ್. ಇನ್ಸ್ಟಾಗ್ರಾಮ್ ಅಲ್ಲಿ ಟೆಲಿಪ್ರಾಂಮ್ಟರ್ ಇಟ್ಕೊಂಡು ನಾವೆಲ್ಲಾ ಸರಿ ಮಾಡ್ತೇವೆ ಅಂದರೇ, ಏನೂ ಆಗಲ್ಲ ಎನ್ನುವುದು ಇಲ್ಲಿ ಮುಖ್ಯಾಂಶ‌. 

-ಶ್ರೀರಾಜ್ ವಕ್ವಾಡಿ

No comments:

Post a Comment