Monday, July 27, 2026

ಸಿಜೆಪಿ ಪ್ರತಿಭಟನೆ ಹತ್ತಿಕ್ಕಲು ಪ್ರಭುತ್ವ ಸರ್ಕಾರ ಯತ್ನ!

 ದೆಹಲಿ ಹೈಕೋರ್ಟ್ ನಿರ್ದೇಶನದ ಬೆನ್ನಲ್ಲೇ ಖ್ಯಾತ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರನ್ನು ಸಿಜೆಪಿ ಕಾರ್ಯಕರ್ತರೊಂದಿಗೆ, ವಿದ್ಯಾರ್ಥಿಗಳೊಂದಿಗೆ ದೆಹಲಿಯ ಜಂತರ್‌ ಮಂತರ್‌ ನಲ್ಲಿ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹದ ಸ್ಥಳದಿಂದ ಬಲವಂತವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿರುವುದು, ಪ್ರಸ್ತುತ ಸರ್ಕಾರದ ಸರ್ವಾಧಿಕಾರಿ ಧೋರಣೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ದಾಳಿಯನ್ನು ಸ್ಪಷ್ಟಪಡಿಸುತ್ತದೆ. 

ಶಿಕ್ಷಣ ತಜ್ಞ ಸೋನಮ್‌ ವಾಂಗ್ಚುಕ್‌ ಅವರು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಜುಲೈ 20ರಂದು ಸಂಸತ್‌ ಚಲೋಗೆ ಕರೆ ನೀಡಿದ್ದರು. ಜುಲೈ 20ರ ನಂತರ ನಾನು ನಿಮ್ಮನ್ನು ದೆವ್ವವಾಗಿ ಕಾಡುತ್ತೇನೆ ಅಂದಿದ್ದರು, ವಿದ್ಯಾರ್ಥಿಗಳಿಗಾಗಿ ಪ್ರಾಣತ್ಯಾಗಕ್ಕೂ ಸಿದ್ಧ ಅಂದಿದ್ದರು. ಈ ನಡುವೆ  ಜಂತ‌ರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್ ಅವರ ಆರೋಗ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವಂತೆ ಮತ್ತು ಅಗತ್ಯವಿದ್ದರೆ ವೈದ್ಯಕೀಯ ನೆರವು ನೀಡುವಂತೆ ದೆಹಲಿ ಹೈಕೋರ್ಟ್, ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚನೆ ನೀಡಿತ್ತು. ಸೊನಮ್ ವಾಂಗ್ಚುಕ್ ಅವರ ಆರೋಗ್ಯ ತೀರಾ ಹದಗೆಟಿತ್ತು. ಈಗಾಗಲೇ ಅವರ ತೂಕ 9 ಕೆ.ಜಿ.ಯಷ್ಟು ಕಡಿಮೆಯಾಗಿತ್ತು. ಹೀಗೆಯೇ ಅವರು ಉಪವಾಸ ಮುಂದುವರಿಸಿದರೆ, ಇನ್ನೆರಡು ದಿನಗಳಲ್ಲಿ ಜೀವ ಕಳೆದುಕೊಳ್ಳಲಿದ್ದಾರೆ. ಅವರನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿ ಎಂದು ಕೋರಿ ಸಾಮಾಜಿಕ ಕಾರ್ಯಕರ್ತ, ವಕೀಲ ರಾಕೇಶ್ ಕುಮಾರ್ ಅವರು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, 'ಜೀವ ಅತ್ಯಮೂಲ್ಯ. ಸರ್ಕಾರಿ ವೈದ್ಯರು ನಿಯಮಿತವಾಗಿ ಅವರ ಆರೋಗ್ಯ ತಪಾಸಣೆ ನಡೆಸಬೇಕು' ಎಂದು ಸೂಚನೆ ಕೊಟ್ಟಿತ್ತು. ಅದೇ ನೆಪದಲ್ಲಿ ಈಗ ಪ್ರಭುತ್ವವನ್ನೇ ಪಾಲಿಸುತ್ತಿರುವ ಕೇಂದ್ರ ಸರ್ಕಾರ ಪ್ರತಿಭಟನೆಯನ್ನು, ಸಂಸತ್‌ ಚಲೋವನ್ನು ಹತ್ತಿಕ್ಕವ ಪ್ರಯತ್ನ ಮಾಡಿದೆ. ಇದರ ವಿರುದ್ಧ ಸಿಜೆಪಿ ಮುಖ್ಯಸ್ಥ ಅಭಿಜಿತ್‌ ದೀಪ್ಕೆ ಖಂಡಿಸಿದ್ದು, ಅಮಾನುಷವಾಗಿ ಪೊಲೀಸರು ವರ್ತಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ. 

ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಪ್ರಭುತ್ವವು ನ್ಯಾಯಾಂಗದ ಆದೇಶಗಳನ್ನೂ ತನ್ನ ದಮನಕಾರಿ ನೀತಿಗೆ ದಾಳವನ್ನಾಗಿ ಬಳಸಿಕೊಳ್ಳುತ್ತಿರುವುದು ಈ ಘಟನೆಯಿಂದ ಸಾಬೀತಾಗಿದೆ. 

ಪ್ರಭುತ್ವದ ನಿರ್ಲಕ್ಷ್ಯ ಮತ್ತು ನೈತಿಕತೆಯ ಪತನ ಎದ್ದು ಕಾಣುತ್ತಿದೆ. ನೀಟ್‌ ಅಕ್ರಮದ  ವಿರುದ್ಧ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಒತ್ತಾಯಿಸಿ ವಾಂಗ್ಚುಕ್ ಅವರು ನಡೆಸುತ್ತಿದ್ದ ಹೋರಾಟ ಸಂಪೂರ್ಣವಾಗಿ ಶಾಂತಿಯುತ ಮತ್ತು ಗಾಂಧಿವಾದಿ ಮಾರ್ಗದ್ದಾಗಿತ್ತು. ಇಂತಹ ನಾಯಕನೊಂದಿಗೆ ಮುಕ್ತ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವ ಕನಿಷ್ಠ ರಾಜಕೀಯ ಸೌಜನ್ಯವನ್ನು ಕೇಂದ್ರ ಸರ್ಕಾರ ತೋರಿಲ್ಲ. ನ್ಯಾಯಾಲಯದ ಆದೇಶವನ್ನು ನೆಪವಾಗಿಸಿಕೊಂಡು, ಅರೆಸೇನಾ ಪಡೆ ಹಾಗೂ ಪೊಲೀಸರ ಮೂಲಕ ಬಲವಂತದ ಕ್ರಮ ಕೈಗೊಂಡಿರುವುದು ಪ್ರಭುತ್ವದ ಅಹಂಕಾರ ಮತ್ತು ಜನವಿರೋಧಿ ನಿಲುವನ್ನು ಬಿಂಬಿಸುತ್ತದೆ.


ನ್ಯಾಯಾಂಗದ ಆದೇಶ ಮತ್ತು ಆಡಳಿತದ ದುರುಪಯೋಗ ಇಲ್ಲಿ ಮುಖ್ಯವಾಗಿ ಕಾಣಿಸುತ್ತಿದೆ. ಆರೋಗ್ಯದ ನೆಪದಲ್ಲಿ ಪ್ರತಿಭಟನಾಕಾರರನ್ನು ಬಲವಂತವಾಗಿ ಅಲ್ಲಿಂದ ಕರೆದುಕೊಂಡು ಹೋಗುವುದು ಬಲಪ್ರಯೋಗದ ಹೊಸ ತಂತ್ರವಾಗಿದೆ. ಪ್ರತಿಯೊಬ್ಬನ ಜೀವವೂ ಅಮೂಲ್ಯ. ಆದರೇ, ಅಲ್ಲಿಂದ ಅವರಿಗೆ ಚಿಕಿತ್ಸೆಗೆ ಎಂದು ಕರೆದುಕೊಂಡು ಗೋಗುವುದಕ್ಕಾದರೂ ಸಣ್ಣ ಸೌಜನ್ಯ ತೋರಿಸಬೇಕಿತ್ತು. ನ್ಯಾಯಾಲಯಗಳು ಜೀವ ರಕ್ಷಣೆಯ ದೃಷ್ಟಿಯಿಂದ ನಿರ್ದೇಶನ ನೀಡಿದಾಗ, ಅದನ್ನು ಸಂವೇದನಾಶೀಲತೆಯಿಂದ ನಿರ್ವಹಿಸುವ ಬದಲು ಪ್ರತಿಭಟನೆಯನ್ನು ಹತ್ತಿಕ್ಕುವ ಆಯುಧವನ್ನಾಗಿ ಸರ್ಕಾರ ಬಳಸಿಕೊಂಡಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ನಾಗರಿಕರ ಪ್ರತಿಭಟಿಸುವ ಹಕ್ಕನ್ನು ಪರೋಕ್ಷವಾಗಿ ಕಸಿದುಕೊಳ್ಳುವ ವ್ಯವಸ್ಥಿತ ಸಂಚು.

ಇದು, ನೀಟ್ (NEET) ಹಗರಣ ಮತ್ತು ಶಿಕ್ಷಣ ಇಲಾಖೆಯ ವೈಫಲ್ಯವಲ್ಲದೇ ಮತ್ತಿನ್ನೇನು? ದೇಶದ ಲಕ್ಷಾಂತರ ಯುವಜನರ ಭವಿಷ್ಯವನ್ನು ಬಲಿಗೊಟ್ಟಿದೆ. ನೀಟ್ (NEET) ಪರೀಕ್ಷೆಯ ಬೃಹತ್ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಂಸ್ಥಿಕ ಭ್ರಷ್ಟಾಚಾರಗಳು ಬಹಿರಂಗಗೊಂಡಿದ್ದರೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಮೌನವಾಗಿದ್ದಾರೆ. ಯುವಕರ ಭವಿಷ್ಯದ ಜೊತೆ ಆಟವಾಡಿದ ಇಲಾಖೆಯ ಮುಖ್ಯಸ್ಥರಾಗಿ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕೆಂದು ದೇಶವ್ಯಾಪಿ ವಿದ್ಯಾರ್ಥಿ ಮತ್ತು ಪ್ರಗತಿಪರ ಸಂಘಟನೆಗಳ ಬೇಡಿಕೆಗೆ ಸರ್ಕಾರ ಕಿವುಡಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

-ಶ್ರೀರಾಜ್ ವಕ್ವಾಡಿ 

No comments:

Post a Comment