Wednesday, August 21, 2024

ಕಾಯ್ದೆ, ಕಾನೂನುಗಳು ಬಲಗೊಳ್ಳದೇ ಇದ್ದರೆ…

 

ಕೊಲ್ಕತ್ತಾದ ಘಟನೆ ದೇಶದ ಆತ್ಮವಲೋಕನಕ್ಕೆ ಅನುವು ಮಾಡಿಕೊಡಲಿ !  

 ಪ್ರಧಾನಿ ನರೇಂದ್ರ ಮೋದಿ ಬೇಟಿ ಬಚಾವೋ ಎನ್ನುವ ಘೋಷ ವಾಕ್ಯವನ್ನು ಹೋದಲ್ಲೆಲ್ಲಾ ಉಚ್ಚರಿಸುತ್ತಲೇ ಇರುತ್ತಾರೆ. ಆದರೇ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ದಿನನಿತ್ಯದ ಸಾಮಾನ್ಯ ಸಂಗತಿ. ನ್ಯಾಷನಲ್ ಕ್ರೈಮ್ ರೆಕಾಡ್ಸ್ ಬ್ಯೂರೋ(ಎನ್ ಸಿಆರ್ ಬಿ) ನೀಡುವ ಮಾಹಿತಿಯ ಪ್ರಕಾರ 2021ರಲ್ಲಿ 31,677, 2022ರಲ್ಲಿ 31,000 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ, ಒಂದು ದಿನಕ್ಕೆ ಸರಾಸರಿ 86 ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ನಡೆಯುತ್ತಿವೆ. 15 ನಿಮಿಷಕ್ಕೆ ಒಂದು ಅತ್ಯಾಚಾರ ದೇಶದಲ್ಲಿ ನಡೆಯುತ್ತಿದೆ.

ಕೋಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಆಗಸ್ಟ್ 9 ರಂದು ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾದ ಹೇಯ ಘಟನೆ ವೈದ್ಯಕೀಯ ವಲಯದಲ್ಲಿ ರಾಷ್ಟ್ರವ್ಯಾಪಿ ಆಕ್ರೋಶವನ್ನು ಹುಟ್ಟುಹಾಕಿದೆ. ಈ ಭೀಕರ ಪ್ರಕರಣವನ್ನು ವಿರೋಧಿಸಿ ಭಾರತದಾದ್ಯಂತ ಹಲವಾರು ಆಸ್ಪತ್ರೆಗಳ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.

ಕೋಲ್ಕತ್ತಾದಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರದ ಘಟನೆ 1973 ರಲ್ಲಿ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ, ಕರ್ನಾಟಕ ಮೂಲದ ನರ್ಸ್ ಅರುಣಾ ಶಾನ್‌ಬಾಗ್ ಅವರ ಮೇಲೆ ನಡೆದ ಭೀಕರ ಹಲ್ಲೆಯ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಅರುಣಾ 2015 ರಲ್ಲಿ ನಿಧನರಾಗುವ ಮೊದಲು 42 ವರ್ಷಗಳ ಕಾಲ ಕೋಮಾದಲ್ಲಿಯೇ ಇದ್ದರು ಎನ್ನುವುದು ಉಲ್ಲೇಖಾರ್ಹ. ಕೋಲ್ಕತ್ತಾದಲ್ಲಿ ಯುವ ವೈದ್ಯೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್, ಅರುಣಾ ಶಾನಭಾಗ್ ಅವರ ಪ್ರಕರಣವನ್ನು ಪ್ರಸ್ತಾಪಿಸಿದರು. ಮತ್ತೊಂದು ಪ್ರಕರಣ, ಕೇರಳದ ಕೊಲ್ಲಂನ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಮೇ 2023 ರಲ್ಲಿ, ಡ್ರಗ್ ವ್ಯಸನಿಯೊಬ್ಬ ಡಾ. ವಂದನಾ ದಾಸ್ ಅವರನ್ನು ಕೊಲೆ ಮಾಡಿದ. ಹೀಗೆ ಅನೇಕ ಅನೇಕ ಸಂಗತಿಗಳನ್ನು ಉಲ್ಲೇಖಿಸುವುದಾದರೇ, ಪಟ್ಟಿ ಬೆಳೆಯುತ್ತಲೇ ಹೋಗುತ್ತವೆ. ಆಸ್ಪತ್ರೆಗಳಲ್ಲಿ ಹಿರಿಯ ವೈದ್ಯಾಧಿಕಾರಿಗಳಿಂದ ಕಿರಿಯ ವೈದ್ಯೆಯರ ಮೇಲೆ ಲೈಂಗಿಕ ಕಿರುಕುಳಂತಹ ಪ್ರಕರಣಗಳು ಹೀಗೆ ಹತ್ತು ಹಲವು. ಎಷ್ಟೋ ಪ್ರಕರಣಗಳು ಹೊರ ಬರದೇ ಅಲ್ಲಲ್ಲೇ ಮರ್ಯಾದೆಯ ಕಾರಣಕ್ಕೆ ಮುಚ್ಚಿ ಹೋಗಿವೆ. ಸುದ್ದಿಯಾಗದೇ ಉಳಿದಿವೆ.  

"ರೋಗಿಗಳಿಗೆ ಕಾಳಜಿ ವಹಿಸಿ, ಅಧಿಕ ಗಂಟೆಗಳ ಕಾಲ ಕೆಲಸ ಮಾಡಿ ಮತ್ತು ವೈಯಕ್ತಿಕ ಸಮಯವನ್ನು ತ್ಯಾಗ ಮಾಡಿಯೂ ಚಿಕಿತ್ಸೆ ಫಲಕಾರಿಯಾಗದೆ ರೋಗಿ ಸತ್ತರೆ, ಸಂಬಂಧಿಕರು, ಸಮಾಜ ಆಗಾಗ್ಗೆ ದೂಷಿಸುವುದು ವೈದ್ಯರನ್ನೇ. “ವೈದ್ಯರ ಸುರಕ್ಷತೆ, ಅವರ ಜೀವನ ಮತ್ತು ಅವರ ಯೋಗಕ್ಷೇಮವನ್ನು ಯಾರು ಕಾಪಾಡುತ್ತಾರೆ? ವಿಶೇಷವಾಗಿ ಇತ್ತೀಚಿನ ಘಟನೆಗಳು ಯಾರು ಇಲ್ಲಿ ಸುರಕ್ಷಿತರು ಎನ್ನುವ ಪ್ರಶ್ನೆಯನ್ನು ಮುಂದಿರಿಸಿದೆ. ಸಮಾಜ ಯಾರನ್ನು ಎಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದು ಸಮಾಜದಲ್ಲಿ ಆಘಾತಕಾರಿಯಾದ ವಿಷಯವಾಗಿದೆ.

ಇನ್ನು, ನಮ್ಮ ದೇಶದ ಮೆಡಿಕಲ್‌ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳನ್ನು ಗಮನಿಸಿ, ಫೆಬ್ರವರಿ 202 ರ ಎನ್‌ಎಂಸಿ ಡೇಟಾ ನೀಡುವ ಮಾಹಿತಿಯ ಪ್ರಕಾರ, ಸುಮಾರು 153 ಎಂಬಿಬಿಸ್ ವಿದ್ಯಾರ್ಥಿಗಳು ಮತ್ತು 1,117 ಮೆಡಿಕಲ್ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಕಳೆದ ಐದು ವರ್ಷಗಳಲ್ಲಿ, ಎಂಬಿಬಿಎಸ್ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವೈದ್ಯರು ಸೇರಿದಂತೆ ಕನಿಷ್ಠ 122 ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡ, ಮಾನಸಿಕ ಹಿಂಸೆ, ಪ್ರತಿಕೂಲವಲ್ಲದ ಕೆಲಸದ ವಾತಾವರಣ ಮತ್ತು ದಂಡನಾತ್ಮಕ ನೀತಿಗಳಿಂದ ಬಳಲಿ ಆತ್ಮಹತ್ಯೆಗೆ ಬಲಿಯಾಗಿದ್ದಾರೆ.

ವೈದ್ಯಕೀಯ ವೃತ್ತಿಗೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ, ಅವರು ನೀಟ್ (ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ) ಫಾರ್ಮ್ ಅನ್ನು ಭರ್ತಿ ಮಾಡುವಾಗಲೇ, ಮಾನಸಿಕ ಒತ್ತಡ ಮತ್ತು ಅವರಲ್ಲಿ ಅನಿಶ್ಚಿತತೆ ಪ್ರಾರಂಭವಾಗುತ್ತದೆ. ನೀಟ್‌ ಗೆ ಅರ್ಹತೆ ಪಡೆದ ಅನೇಕರು ಊಹಿಸಲು ಸಾಧ್ಯವಾಗದ ವೈದ್ಯಕೀಯ ಪಠ್ಯಕ್ರಮಗಳ ಕಾರಣದಿಂದ ಮಾನಸಿಕ ಒತ್ತಡಕ್ಕೆ ಸಿಲುಕಿ ಎಷ್ಟೋ ಮಂದಿ ಅರ್ಧಕ್ಕೆ ಮೊಟಕುಗೊಳಿಸಿರುವ ಉದಾಹರಣೆಗಳಿವೆ.

ಹೆಚ್ಚಿನ ರಾಜ್ಯಗಳು ಪದವಿಪೂರ್ವ, ಸ್ನಾತಕೋತ್ತರ ಮತ್ತು ಸೂಪರ್-ಸ್ಪೆಷಾಲಿಟಿ ಎಲ್ಲಾ  ಹಂತಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಬಾಂಡ್ ಷರತ್ತುಗಳನ್ನು ವಿಧಿಸುತ್ತವೆ. ಎರಡು ರೀತಿಯ ಬಾಂಡ್‌ಗಳಿವೆ 'ಸೀಟ್ ಲೀವಿಂಗ್' ಬಾಂಡ್‌ಗಳು ಮತ್ತು 'ಸರ್ವೀಸ್' ಬಾಂಡ್‌ಗಳು ಹೀಗೆ ಇನ್ನೂ ಹಲವು. ಸೇವಾ ಬಾಂಡ್‌ಗಳಿಗೆ ವೈದ್ಯರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ 1-5 ವರ್ಷಗಳ ಕಾಲ ರಾಜ್ಯದ ಹೆಲ್ತ್‌ ಕೇರ್ಸ ಸಿಸ್ಟಮ್‌ ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ, ಬಾಂಡ್ ಮೀರಿದರೇ 10 ಲಕ್ಷದಿಂದ 1 ಕೋಟಿವರೆಗೆ ದಂಡ ವಿಧಿಸಲಾಗುತ್ತದೆ. ಎಲ್ಲಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮೂರು ತಿಂಗಳ ರೆಸಿಡೆನ್ಸಿ ಪೋಸ್ಟಿಂಗ್ ಅನ್ನು ಎನ್‌ಎಂ ಸಿ ಕಡ್ಡಾಯಗೊಳಿಸುತ್ತದೆ.

ಇದೇ, ಮೇ ತಿಂಗಳಲ್ಲಿ, ಡೆಹ್ರಾಡೂನ್‌ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ 26 ವರ್ಷದ ನಿವಾಸಿ ವೈದ್ಯ ದಿವೇಶ್ ಗಾರ್ಗ್ ಆತ್ಮಹತ್ಯೆ ಮಾಡಿಕೊಂಡರು. ಅವ್ಯವಸ್ಥೆ ಮತ್ತು ಹಿರಿಯ ವೈದ್ಯರ ಕಿರುಕುಳ ಅವರ ಸಾವಿಗೆ ಪ್ರಮುಖಾಂಶಗಳೆಂದು ಅವರ ಪೋಷಕರು ಆರೋಪಿಸಿದ್ದಾರೆ. ಒತ್ತಡದ ಹೊರತಾಗಿಯೂ, ಬಾಂಡ್‌ ನ ಕಾರಣದಿಂದಾಗಿ ರಿಸೈನ್‌ ಮಾಡುವುದಕ್ಕೂ ಸಾಧ್ಯವಾಗಿಲ್ಲ. ಮಧ್ಯಪ್ರದೇಶ ಸರ್ಕಾರವು ಸೀಟು ಬಿಡುವ ಬಾಂಡ್(ಸೀಟ್‌ ಲಿವಿಂಗ್‌ ಬಾಂಡ್) ನೀತಿಯನ್ನು ರದ್ದುಗೊಳಿಸಿತು, ಹೀಗೆ ಮಾಡಿದ ಮೊದಲ ಭಾರತೀಯ ರಾಜ್ಯವಾಯಿತು ಎನ್ನುವುದು ಉಲ್ಲೇಖಾರ್ಹ. ಹೀಗೆ ಸಮಸ್ಯೆಗಳು ನಮ್ಮ ಮೆಡಿಕಲ್‌ ವ್ಯವಸ್ಥೆಯಲ್ಲಿ ತುಂಬಾ ಇವೆ. ಬಿಳಿಕೋಟಿನ ದಂಧೆ, ಹಗರಣ, ಅಕ್ರಮ ಎಲ್ಲವೂ ಇಂತಹ ಘಟನೆಗಳು ಮತ್ತೆ ಮತ್ತೆ ಆಗುವುದಕ್ಕೆ ಪ್ರಮುಖಾಂಶಗಳು ಎನ್ನುವುದರಲ್ಲಿ ಸಂಶಯವೇ ಇಲ್ಲ.

ಇನ್ನು, ಆರ್‌ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು 31 ವರ್ಷದ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದ ಸ್ಥಳದಲ್ಲಿ ವರ್ಗಾವಣೆ ಹುದ್ದೆ ಮತ್ತು ಅಕ್ರಮ ಮೆಡಿಕಲ್ ಸಿಂಡಿಕೇಟ್ ನ್ನು ಒಳಗೊಂಡಿರುವ ಬೃಹತ್ ದಂಧೆಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಬಹಿರಂಗಪಡಿಸಿದೆ. ಈ ದಂಧೆ ಹಲವು ವರ್ಷಗಳಿಂದ ನಡೆಯುತ್ತಿದ್ದು, ಇತರ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಇದು ವ್ಯಾಪಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ವರದಿಗಳಾಗಿವೆ. ಈ ಅಕ್ರಮ ಜಾಲದ ಮೂಲಕ ರಾಜ್ಯ ಸರ್ಕಾರ ಖರೀದಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳನ್ನು ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ರವಾನಿಸಿರುವುದನ್ನು ಸಿಬಿಐ ಪತ್ತೆ ಹಚ್ಚಿದೆ.

ಈ ದುಷ್ಕೃತ್ಯಗಳ ವಿರುದ್ಧ ಸಂತ್ರಸ್ತೆ ವಿವಿಧ ವೇದಿಕೆಗಳಲ್ಲಿ ಪ್ರತಿಭಟಿಸಿರುವುದೇ ಅತ್ಯಾಚಾರ ಮತ್ತು ಕೊಲೆಗೆ ಕಾರಣವಾಗಿರಬಹುದೆಂದು ಸಿಬಿಐ ಆಂತರಿಕ ಮೂಲಗಳು ಹೇಳುತ್ತಿರುವುದಾಗಿಯೂ ವರದಿಯಾಗಿವೆ. ಇಡೀ ದೇಶಕ್ಕೆ ದೇಶವೇ ಇಂತಹ ಘಟನೆಗಳಾದಾಗೆಲ್ಲಾ ಆಕ್ರೋಶ ಹೊರ ಹಾಕಿದರೂ, ಪ್ರಯೋಜನವಿಲ್ಲದಂತಾಗುತ್ತಿದೆ. ತಪ್ಪುಗಳನ್ನು ಪ್ರಶ್ನಿಸಿದ್ದು, ಹೆಣ್ಣಾದರೇ ಹೀಗೆ ಎಲ್ಲೋ ಅತ್ಯಾಚಾರ, ಕೊಲೆಯಾಗಿ ಪತ್ತೆಯಾಗುವ, ಗಂಡಾದರೇ, ಎಲ್ಲೋ ಬರ್ಬರವಾಗಿ ಶವವಾಗಿ ಪತ್ತೆಯಾಗುವ ಭಯದ ಪರಿಸ್ಥಿತಿ ಇಡಿ ದೇಶದಾದ್ಯಂತ ಸಡಿಲ ಕಾನೂನು ನೀತಿಗಳಿಂದಲೇ ನಿರ್ಮಾಣವಾಗಿದೆ ಎಂದರೇ ತಪ್ಪಿಲ್ಲ.

ಇಂತಹ ಘಟನೆಗಳು ಇಡೀ ದೇಶದ ಆತ್ಮವಲೋಕನಕ್ಕೆ ಅನುವು ಮಾಡಿಕೊಡಬೇಕಾಗಿರುವ ತುರ್ತಿದೆ. ಆಡಳಿತ ಸರ್ಕಾರ ಸಾರ್ವಜನಿಕರ ನಂಬಿಕೆ, ವಿಶ್ವಾಸ ಕಳೆದುಕೊಂಡಾಗ ನ್ಯಾಯಾಂಗ ಮಧ್ಯ ಪ್ರವೇಶಿಸಿರುವುದು ಅಸಹಾಯಕರಲ್ಲಿ, ಸಂತ್ರಸ್ತರಲ್ಲಿ, ದಮನಿತರಲ್ಲಿ ಧೈರ್ಯ ತಂದಿದೆ. ಆ ಧೈರ್ಯ ದ್ವಿಗುಣವಾಗಬೇಕಿದೆ. ಹೆಣ್ಣು ಬರೀ ಅಂಗಾಂಗವೆಂಬಂತೆ ನೋಡುವ, ಬರೀ ಭೋಗದ ವಸ್ತುವಾಗಿ ನೋಡುವ ಗಂಡಿನ ಮಾನಸಿಕತೆ ಬದಲಾಗಬೇಕಿದೆ. ಆಕೆಯೂ ಕೂಡ ನಮ್ಮ ಸಮಜೀವಿ, ಸಹಜೀವಿ ಎನ್ನುವ ನಾಗರಿಕ ಪ್ರಜ್ಞೆ ಇನ್ನೂ ದೇಶದಲ್ಲಿ ಮೂಡಿಲ್ಲ ಎನ್ನುವುದೇ ದೊಡ್ಡ ದುರಂತ. ಕಾಯ್ದೆ ಕಾನೂನುಗಳು ಇನ್ನಷ್ಟು ಬಲಗೊಳ್ಳದೇ ಇದ್ದರೇ ಇನ್ನಷ್ಟು ಇಂತಹ ಘಟನೆಗಳನ್ನು ಕಾಣುವುದಕ್ಕೆ ದೇಶ ತಯಾರಾಗಬೇಕಿದೆ.

-ಶ್ರೀರಾಜ್‌ ವಕ್ವಾಡಿ  

Thursday, August 15, 2024

ಸ್ವಾತಂತ್ರ್ಯ ಸಾರ್ಥಕವಾಗಬೇಕಾದರೇ…


 ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಸ್ವಾತಂತ್ರ್ಯವನ್ನು ದೇಶ ಕಿತ್ತುಕೊಂಡಿಲ್ಲ !   

ಎಪ್ಪತ್ತೆಂಟು ವರ್ಷಗಳ ಹಿಂದೆ, ಸ್ವಾತಂತ್ರ್ಯ ಗಳಿಸಿದ ಬಗ್ಗೆ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಭಾಷಣವೊಂದರಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, “ನಾವು ಇಂದು ಆಚರಿಸುವ ಸಾಧನೆ ನಮ್ಮ ಮೊದಲ ಹೆಜ್ಜೆ, ನಮ್ಮ ಮುಂದಿರುವ ಅವಕಾಶಗಳ ತೆರೆಯುವಿಕೆ. ಇದು ನಮಗೆ ಕಾಯುತ್ತಿರುವ ವಿಜಯಗಳು ಮತ್ತು ಸಾಧನೆಗಳು. ಆದರೇ, ಈ ಅವಕಾಶಗಳನ್ನು ಬಳಸಿಕೊಳ್ಳಲು ಹಾಗೂ ಎದುರಿಸಲು ನಾವೆಷ್ಟು ಸಮರ್ಥರಾಗಿದ್ದೇವೆ, ನಾವೆಷ್ಟು ಧೈರ್ಯಶಾಲಿಗಳಾಗಿದ್ದೇವೆ ಎಂದು ಅಂದು ಪ್ರಶ್ನಿಸಿದ್ದರಂತೆ. ಬಹುಶಃ ಅಂದು ಜವಾಹರಲಾಲ್‌ ನೆಹರು ಅವರು ಕೇಳಿದ್ದ ಪ್ರಶ್ನೆ ಇಂದಿಗೂ ಪ್ರಸ್ತುತ. ಕಳೆದೆರಡು ಮೂರು ವರ್ಷಗಳ ಹಿಂದೆ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ಆಚರಸಿಕೊಂಡೆವು. ಮತ್ತೆ ಮರಳಿ ಮರಳಿ ವರ್ಷಗಳು ಉರುಳುತ್ತಿವೆ. ಸ್ವಾತಂತ್ರ್ಯ ಅಂದರೇ ಏನು ? ಅದು ಒಂದು ಹೊತ್ತಿನ ಆಚರಣೆಗೆ ಅಷ್ಟೇ ಸೀಮಿತವಲ್ಲ ಎನ್ನುವುದನ್ನು ನಾವಿನ್ನೂ ಅರ್ಥೈಸಿಕೊಳ್ಳದೇ ಇರುವುದು ನಮ್ಮ ದೇಶದ ದುರಂತವೇ ಸರಿ.

ದೇಶ ಬ್ರಿಟೀಷ್‌ ಆಳ್ವಿಕೆಯಿಂದ ಬಂಧಮುಕ್ತವಾಗಿ ಇಷ್ಟು ವರ್ಷಗಳನ್ನು ದಾಟಿ ಮುಂದೆ ಬಂದರೂ ನೆಹರು ಅವರ ಈ ಮಾತು ಇಂದಿಗೂ ಪ್ರಸ್ತುತ. ವಸಾಹತುಶಾಹಿಯ ನೊಗದಿಂದ ಮುಕ್ತವಾದ ಭಾರತದ ಮುಂದೆ ದೊಡ್ಡ ಸವಾಲಿತ್ತು. ಸ್ವತಂತ್ರ ಭಾರತ ತನ್ನದೇ ಒಂದು ಸಂಕಲ್ಪದೊಂದಿಗೆ ಹೊಸ ಪ್ರಯಾಣಕ್ಕೆ ನಾಂದಿ ಹಾಡಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ದೂರದೃಷ್ಟಿ ಹಾಗೂ ವಿಶಿಷ್ಠವಾದ ಉದಾರ ಕಲ್ಪನೆ ಈ ಸ್ವತಂತ್ರ ಭಾರತದ ಭವಿಷ್ಯದ ಮೇಲಿತ್ತು.

ದೇಶದ ಉದಾರ ಪ್ರಜಾಪ್ರಭುತ್ವಕ್ಕೆ ಪ್ರಧಾನವಾಗಿ ಕೆಲಸ ಮಾಡಿದ ಸಂವಿಧಾನ ಸಭೆಯ ಸದಸ್ಯರಲ್ಲಿ ಅಪಾರ ಧ್ಯೇಯೋದ್ದೇಶ ಇತ್ತು. ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವದ ಸಮಗ್ರ ಕಲ್ಪನೆ ಈ ದೇಶವನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಹಾಗಾದರೇ, ಸ್ವಾತಂತ್ರ್ಯ, ಸಂವಿಧಾನ, ಪ್ರಜಾಪ್ರಭುತ್ವವನ್ನು ನಾವೆಷ್ಟು ಪಾಲಿಸಿದ್ದೇವೆ ? ಎನ್ನುವುದು ಇನ್ನೂ ಉತ್ತರವಿಲ್ಲದ ಪ್ರಶ್ನೆ.

ವಾಕ್ ಸ್ವಾತಂತ್ರ್ಯ, ಧರ್ಮ ಮತ್ತು ಜಾತ್ಯತೀತ ವಿಚಾರಗಳನ್ನು ಒಳಗೊಂಡಿರುವ ಹಕ್ಕುಗಳನ್ನು ಖಾತರಿಪಡಿಸುವ ಸಾಂವಿಧಾನಿಕ ಯೋಜನೆ,  ಚುನಾವಣಾ ಪ್ರಕ್ರಿಯೆಗಳ ಅನುಷ್ಠಾನ, ಶಾಸಕಾಂಗ, ಭಾಷಾವಾರು ಆಧಾರದ ಮೇಲೆ ಮರುಸಂಘಟಿತಗೊಂಡ ರಾಜ್ಯಗಳು, ಪ್ರಗತಿಯನ್ನು ಸೂಚಿಸುವ ಸಂಸ್ಥೆಗಳ (ಕೈಗಾರಿಕಾ, ಶೈಕ್ಷಣಿಕ, ವೈದ್ಯಕೀಯ) ನಿರ್ಮಾಣ ಮತ್ತು ವಿಶ್ವ ಆರ್ಥಿಕತೆಗೆ ಭಾರತವನ್ನು ಪ್ರಯೋಜನಕಾರಿಯಾಗಿ ಕಟ್ಟಿದ ಜ್ಞಾನ ಹಾಗೂ ಸಂವಹನ ಕ್ಷೇತ್ರಗಳ ಅಭಿವೃದ್ಧಿ, ಹೀಗೆ ಎಲ್ಲವೂ ಕಾಲಕಾಲಕ್ಕೆ ಅನುಷ್ಠಾನಗೊಂಡ ದೇಶದ ಸ್ವಾತಂತ್ರ್ಯದ ಹಾದಿ.

1947ರ ಕಾಲಘಟ್ಟದಲ್ಲಿ ದೇಶ ಅನುಭವಿಸುತ್ತಿದ್ದ ತೀವ್ರ ಬಡತನ, ಬಹುಶಃ ಇಂದಿಗೂ ಈ ಸಮಸ್ಯೆಯಿಂದ ದೇಶ ಹೊರ ಬಂದಿಲ್ಲ. ಹೌದು, ಜಾಗತಿಕ ಹಸಿವು ಸೂಚ್ಯಂಕದ (ಜಿಎಚ್‌ಐ) ಇತ್ತೀಚೆಗಿನ ವರದಿಯ ಪ್ರಕಾರ, ಒಟ್ಟು 125 ದೇಶಗಳ ಪೈಕಿಯಲ್ಲಿ ಭಾರತ 28.68 (ಗಂಭೀರ ಎಂದು ಸೂಚಿಸುತ್ತದೆ) ಅಂಕಗಳೊಂದಿಗೆ 111ನೇ ಸ್ಥಾನಕ್ಕೆ ಕುಸಿದಿದೆ. ಇದು ಭಾರತದ ಈವರೆಗಿನ ಕನಿಷ್ಠ ರ‍್ಯಾಂಕ್‌. 2022ರ ಸೂಚ್ಯಂಕದಲ್ಲಿ ದೇಶ 107ನೇ ಸ್ಥಾನದಲ್ಲಿ ಇದ್ದಿತ್ತು ಎನ್ನುವುದನ್ನು ನಾವಿಲ್ಲಿ ಗಮನಿಸಬೇಕಿದೆ. ಇವೆಲ್ಲದಕ್ಕೂ ಈ ದೇಶವನ್ನು ಆಳಿದ ಸರ್ಕಾರವೇ ನೇರ ಕಾರಣ. ಹೀಗೆಲ್ಲಾ ಜ್ವಲಂತ ಸಮಸ್ಯೆಗಳು ದೇಶದ ಉದ್ದಗಲಕ್ಕೂ ಬೇಕಾದಷ್ಟಿರುವಾಗ ಸಂಭ್ರಮಗಳು, ಆಚರಣೆಗಳು ಒಂದಿನಿತೂ ಆಳುವ ವರ್ಗಕ್ಕೆ ಆತ್ಮ ವಂಚನೆಯಾಗಿ ಕಾಡುವುದಿಲ್ಲವೇ?

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿನ  ತೊಡಕುಗಳನ್ನು ನಿರ್ಮೂಲನೆ ಮಾಡುವುದಕ್ಕೆ ದೇಶ ಸೋತಿರುವುದು ಸ್ವಾತಂತ್ರ್ಯ ಭಾರತ ಕಂಡಿರುವ ಅಸಮರ್ಥ ಆಡಳಿತವೇ ಕಾರಣ ಅಲ್ಲವೇ ? ಸಾಂವಿಧಾನಿಕ ಕ್ರಮ ಮತ್ತು ಅಗತ್ಯ ಮಾರ್ಪಾಡುಗಳನ್ನು ಅನುಷ್ಠಾನಗೊಳಿಸುವಲ್ಲಿನ ಒತ್ತಡಗಳು ಮತ್ತು ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಪರಿಹಾರ ಮಾರ್ಗವನ್ನೇ ಸ್ವಾತಂತ್ರ್ಯ ಭಾರತ ಕಂಡುಕೊಂಡಿಲ್ಲ ಎನ್ನುವುದು ವಿಷಾದನೀಯವೇ ಸರಿ. 

ದಿನನಿತ್ಯ ದೊಡ್ಡ ಪಿಡುಗಾಗಿಯೇ ಬೆಳೆಯುತ್ತಿರುವ ಕೋಮುವಾದವನ್ನು ಸ್ವಾತಂತ್ರ್ಯ ಭಾರತ ನಿಯಂತ್ರಿಸುವಲ್ಲಿ ಸೋತಿರುವುದು, ಹಾಗೆಯೇ ಅಧಿಕಾರದ ವಿಕೇಂದ್ರೀಕರಣದ ಅಪೂರ್ಣ ಸ್ವರೂಪ ಮತ್ತು ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಗಳ ಸರಿಪಡಿಸುವ ಪ್ರಾಥಮಿಕ ಪ್ರಯತ್ನವೂ ಮಾಡಿಲ್ಲ. ಸರಿದಾರಿಗೆ ತರುವುದಕ್ಕೆ ಪ್ರಯತ್ನ ಮಾಡಿಯೂ ಸೋತಿದೆ ಎಂದರೆ ಯಾವ ಕಾರಣಕ್ಕೆ ಸೋತಿದೆ ಎಂಬುವುದನ್ನು ಪರಿಶೀಲಿಸಿಲ್ಲ ಎನ್ನುವುದೇ ಅರ್ಥ. ಸ್ವಾತಂತ್ರ್ಯದ ಭವಿಷ್ಯದ ಹಾದಿಯನ್ನು ದೇಶ ಸಮರ್ಥವಾಗಿ ಹಾಕಿಕೊಂಡಿಲ್ಲ ಎನ್ನುವುದಕ್ಕೆ ಇದೊಂದೇ ಸಾಕ್ಷಿ ಸಾಕು.

ಜನಸಂಖ್ಯೆಯಲ್ಲಿ ಬೆಳೆದ ಭಾರತ, ಆರ್ಥಿಕತೆಯಲ್ಲಿ ಬೆಳೆದಿಲ್ಲ. ಸಾಮಾಜಿಕ ಸುಸ್ಥಿತಿಯನ್ನು ಕಾಯ್ದುಕೊಂಡಿಲ್ಲ. ಚುನಾವಣೆಯ ಹೆಸರಿನಲ್ಲಿ ವಿಜೃಂಭಿಸುವ ಪ್ರಜಾಪ್ರಭುತ್ವ, ಸ್ವಾತಂತ್ರ್ಯದ ಮೂಲ ಕಲ್ಪನೆಯನ್ನೇ ಕಳೆದುಕೊಂಡಿದೆಯೇ ಅಥವಾ ಕಳೆದುಕೊಳ್ಳುವ ಹಾಗೆ ಮಾಡಲಾಗಿದೆಯೇ ? ಇವೆಲ್ಲಾ ಸಮಸ್ಯೆಗಳಾಗಿ ಕಾಣಿಸದೇ ಇರುವುದು ನಿಜಕ್ಕೂ ಆಶ್ಚರ್ಯವೇ ಸರಿ. ಸಹಕಾರ ಮತ್ತು ಉದಾರ ಸಂಬಂಧಗಳು ವ್ಯಾಪಾರದ ಉದ್ದೇಶದಿಂದಷ್ಟೇ  ಬೆಳೆಯುತ್ತಿವೆ. ಸಾಂಘಿಕ ಪ್ರಗತಿಯ ಚಿಂತನೆ ಇಲ್ಲದ ವಿದೇಶಿ ಒಪ್ಪಂದಗಳು ಕೂಡ ದೊಡ್ಡ ಸವಾಲೇ ಆಗಿದೆ.  ಹವಾಮಾನ ಬದಲಾವಣೆಯು ಒಂದು ಸವಾಲಾಗಿದೆ. ಪರಿಸರ ಸಂರಕ್ಷಣೆಗೆ ಅಗತ್ಯವಾಗಿ ತುರ್ತಾಗಿ ಹಕ್ಕೊತ್ತಾಯಕ್ಕೆ ಮುಂದಾಗಬೇಕಿರುವ ಪರಿಕಲ್ಪನೆಯನ್ನೇ ಸ್ವಾತಂತ್ರ್ಯ ಭಾರತ ಮರೆತಂತಿದೆ.

ಇನ್ನು, ಅಧಿಕಾರವನ್ನು ಕೇಂದ್ರೀಕರಿಸಲು ಮತ್ತು ಭಾರತದ ಕಲ್ಪನೆಯನ್ನು ಏಕರೂಪಗೊಳಿಸಲು ಪ್ರಯತ್ನಿಸುವ ಪ್ರಬಲ ರಾಜಕೀಯ ಶಕ್ತಿಯ ಪ್ರಯೋಗಶೀಲತೆ ಮತ್ತು ವೈವಿಧ್ಯತೆಯ ಗುರುತಿಸುವಿಕೆ ಮತ್ತು ಸಮಗ್ರ ಪ್ರಗತಿಯ ಸಾಧನವಾಗಿ ಒಳಗೊಳ್ಳುವಿಕೆಯ ಸಾಂವಿಧಾನಿಕ ರಚನೆಯನ್ನು ಮುಂದಿಡುವ ತುರ್ತನ್ನು ಅರ್ಥ ಮಾಡಿಕೊಳ್ಳುವುದಕ್ಕೆ ದೇಶದ ಚಿಂತನೆ ಸೋತಂತಿದೆ. ಅಂತರ್ಗತ ಬೆಳವಣಿಗೆಯ ಮೂಲಕ ಆರ್ಥಿಕ ಪ್ರಗತಿ ೧೯೯೦ ರ ದಶಕದ ಆರಂಭದಲ್ಲಿ ಸಮಗ್ರ ಸುಧಾರಣೆಗಳ ನಂತರ ಮತ್ತು ೨೦೦೦ ನೇ ದಶಕದ ಮಧ್ಯಭಾಗದಲ್ಲಿ  ಅಭಿವೃದ್ಧಿ ಆಧಾರಿತ ವಿಧಾನವನ್ನು ಅನುಷ್ಠಾನಗೊಳಿಸಿದ ನಂತರ ವೇಗಗೊಂಡ ಪ್ರಕ್ರಿಯೆ ಕಳೆದ ಕೆಲವು ವರ್ಷಗಳಿಂದೀಚೆಗೆ ನಿಧಾನಗೊಂಡಂತಿದೆ.

ಏತನ್ಮಧ್ಯೆ, ದಕ್ಷಿಣ ಮತ್ತು ಉತ್ತರ ಭಾರತಗಳ ನಡುವೆ ಇರುವ ಒಂದು ಶೀತಲ ಅಸಮಾಧಾನ,  ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಸಂಪೂರ್ಣ ಆರ್ಥಿಕ ಬೆಳವಣಿಗೆಯಲ್ಲಿ ಕೊರಗುತ್ತಿರುವ ಪಶ್ಚಿಮ ಭಾರತ (ದೇಶದ ನಾಲ್ಕೂ ದಿಕ್ಕುಗಳೂ), ಅಂತರಾಜ್ಯ ಅಸಮಾನತೆಗಳು ದಿನೆದಿನೆ ಉಲ್ಬಣಗೊಳ್ಳುತ್ತಿವೆ. ಇವೆಲ್ಲಾ ಸ್ವಾತಂತ್ರ್ಯ ಭಾರತದ ಭವಿಷ್ಯದ ಹಿತಕ್ಕಾಗಿ ಪರಿಹಾರ ಕಂಡುಕೊಳ್ಳುವ ಚರ್ಚೆಯ ವಿಷಯಗಳಾಗಬೇಕಿದೆ.

ಸ್ವಾತಂತ್ರೋತ್ತರ ಭಾರತದಲ್ಲಿ ಯಶಸ್ಸು ಮತ್ತು ವೈಫಲ್ಯಗಳು ಭವಿಷ್ಯದ ಸವಾಲುಗಳನ್ನು ಎದುರಿಸಲು ರಾಷ್ಟ್ರಕ್ಕೆ ಮಾರ್ಗಗಳನ್ನು ಒದಗಿಸಿವೆ. ಸ್ವಾತಂತ್ರ್ಯದ ಆರಂಭಿಕ ವರ್ಷಗಳಲ್ಲಿ, ಉನ್ನತ ಶಿಕ್ಷಣ, ಕೈಗಾರಿಕೆ ಮತ್ತು ಆರೋಗ್ಯ ರಕ್ಷಣೆಯ ಅನೇಕ ಆಧುನಿಕ ಸಂಸ್ಥೆಗಳನ್ನು ನಿರ್ಮಿಸಲಾಯಿತು, ನಿರ್ವಹಣೆಯೂ ಸ್ತುತ್ಯಾರ್ಹ. ಆದರೆ ಭಾರತ ಪ್ರಾಥಮಿಕ ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಮೇಲೆ ಸೂಕ್ತ ಗಮನ ನೀಡಿಲ್ಲ. ಇದು ಬಡತನ ಮತ್ತು ಸಾಮಾಜಿಕ ದುಸ್ಥಿತಿಯ ನಿರಂತರತೆಗೆ ಕಾರಣವಾಯಿತು. ಜಾತಿಯ ಆಧಾರದ ಮೇಲೆ ಕಡೆಗಣನೆ ಆರಂಭವಾಯಿತು. ಅಭಿವೃದ್ಧಿ ನಾಗರಿಕರ ಸಾಮರ್ಥ್ಯಗಳ ಆಧಾರದ  ಮೇಲೆ ಕೇಂದ್ರೀಕರಣಗೊಂಡು ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯೇ ಇಲ್ಲದಂತಾಯಿತು. ಆರ್ಥಿಕತೆಯಲ್ಲಿ ಉತ್ಪಾದಕ ಶಕ್ತಿಗಳ ಉತ್ತಮ ಬೆಳವಣಿಗೆಗೆ ಪೂರಕ ವಾತಾವರಣವೇ ಸರಿಯಾಗಿ ಇಲ್ಲ.  ಹೀಗೆ ಹತ್ತು ಹಲವು ಸಮಸ್ಯೆಗಳು ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ಇವೆ. ಇಷ್ಟೆಲ್ಲಾ ಹೇಳಿದ ಮೇಲೆ ಈ ಸಂಭ್ರಮದ ನಡುವೆ ವಿಮರ್ಶೆ ಯಾಕೆ ಎನ್ನುವ ಪ್ರಶ್ನೆಯೂ ಸಹಜವಾಗಿ ನಮ್ಮ ನಿಮ್ಮಲ್ಲಿ ಮೂಡಬಹುದು. ಆದರೇ, ಬಹುಶಃ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವ ಹಾಗೂ ನಮ್ಮ ಬಗ್ಗೆ ನಾವು ಅರಿತುಕೊಳ್ಳುವ, ಸರಿಪಡಿಸಿಕೊಳ್ಳುವ ಸ್ವಾತಂತ್ರ್ಯವನ್ನು ದೇಶ ಕಿತ್ತುಕೊಂಡಿಲ್ಲ. ಇದು ನಮ್ಮನ್ನೇ ನಾವು ಸ್ವತಂತ್ರವಾಗಿ ಸಮಗ್ರ ಚಿಂತನೆಯಲ್ಲಿ ವೃದ್ಧಿಸಿಕೊಳ್ಳುವ ಸ್ವಾತಂತ್ರ್ಯವಾಗಿದೆ. ಇದೂ ಕೂಡ ದೇಶಭಕ್ತಿ ಮತ್ತು ಸ್ವಾತಂತ್ರ್ಯ ಎನ್ನುವುದನ್ನು ಬಹುಶಃ ನಾವೆಲ್ಲರೂ ತುರ್ತಾಗಿ ಅರ್ಥೈಸಿಕೊಂಡ ದಿನವೇ ಬಹುಶಃ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ.

-ಶ್ರೀರಾಜ್‌ ವಕ್ವಾಡಿ 

Thursday, August 8, 2024

ಪ್ರಜಾಪ್ರಭುತ್ವಕ್ಕೆ ಬೆಲೆ ತರುವಂತೆ ರಾಜ್ಯ ಕಾಂಗ್ರೆಸ್‌ ನಡೆದುಕೊಳ್ಳಬೇಕಿದೆ.

 

ರಾಜ್ಯ ಕಾಂಗ್ರೆಸ್‌ಗೆ ಪುನರುಜ್ಜೀವನದ ಅಗತ್ಯವಿದೆ | ಕಾಂಗ್ರೆಸ್‌ ತನ್ನನ್ನು ತಾನು ಪ್ರಶ್ನಿಸಿಕೊಳ್ಳಲಿ !

ರಾಜ್ಯದ ಆಡಳಿತವನ್ನು ಬಿಜೆಪಿಯ ಕಪಿ ಮುಷ್ಟಿಯಿಂದ ಕಾಂಗ್ರೆಸ್‌ಗೆ ನೀಡುವ ಹೊತ್ತಿಗೆ ಮತದಾರರಲ್ಲಿ ಕಾಂಗ್ರೆಸ್‌ ಸರ್ಕಾರದ ಮೇಲೆ ದೊಡ್ಡ ನಿರೀಕ್ಷೆ ಇದ್ದಿರಬಹುದು. ಆದರೇ, ಜನರ ನಿರೀಕ್ಷೆಗಳೆಲ್ಲಾ ಈಗ ಹುಸಿಯಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ನಡೆದಿರುವ ವಿದ್ಯಾಮಾನಗಳನ್ನು ಗಮನಿಸಿದರೇ, ಯಾವುದನ್ನೂ ಸಮರ್ಥನೀಯವಾಗಿ ನಿರ್ವಹಣೆ ಮಾಡಿಲ್ಲ ಎಂದೇ ಹೇಳಬಹುದಾಗಿದೆ. ಬಹುಶಃ ಕಾಂಗ್ರೆಸ್‌ ತಾನು ಅಧಿಕಾರ ವಹಿಸಿಕೊಂಡಾಗಿನಿಂದ ಎದುರಿಸಿದ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದರೆ ನಿಜಕ್ಕೂ ಜನ ಮನ್ನಣೆಗೆ ಪಾತ್ರವಾಗುತ್ತಿತ್ತು. ಜನರಿಗೆ ತನ್ನ ಹಿಂದಿನ ಆಡಳಿತದಲ್ಲಿ ಯೋಜನೆಗಳ ಭಾಗ್ಯಗಳನ್ನೇ ನೀಡಿದ ಕಾಂಗ್ರೆಸ್‌ ಈಗ  ಜನಪ್ರಿಯ ಸರ್ಕಾರ ಎಂದು ಕರೆಸಿಕೊಳ್ಳುವ ಭಾಗ್ಯವನ್ನೇ ಕಳೆದುಕೊಂಡಿದೆ ಎಂಬಂತೆ ಕಾಣಿಸುತ್ತಿದೆ.

ಆರಂಭದಲ್ಲೇ ಎದುರಾದ ಬರ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ಕೇಳಬೇಕಾಯಿತು. ಪ್ರತಿಪಕ್ಷಗಳು ಆಡಳಿತ ಸರ್ಕಾರದ ಪ್ರಾಥಮಿಕ ಅವಧಿಯ ವೈಫಲ್ಯವನ್ನು ಜನರಿಗೆ ಮುಟ್ಟಿಸುವಲ್ಲಿ ಚುರುಕಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾಯಿತು. ವಿರೋಧ ಪಕ್ಷಗಳಲ್ಲಿರುವ ಚುರುಕುತನ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಯಾವುದೇ ವಿಷಯಗಳಲ್ಲಿ ಕಾಣಿಸುತ್ತಿಲ್ಲ. ಕೇಂದ್ರದಲ್ಲಿ ರಾಹುಲ್‌ ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಸಮರ್ಥವಾಗಿ ಎದುರಿಸಿ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಕೇಂದ್ರ ಸರ್ಕಾರವನ್ನು ಪದೆ ಪದೆ ಬೆಕ್ಕಸಬೆರಗಾಗುವಂತೆ ಮಾಡುತ್ತಿದ್ದರೇ, ಇತ್ತ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಚುರುಕು ಮುಟ್ಟಿಸುವಲ್ಲೇ ಸೋತು ಕೂತಿದೆ.

ಆಡಳಿತ ಪಕ್ಷದಲ್ಲಿದ್ದುಕೊಂಡು ಜನಾಂದೋಲನ ಯಾತ್ರೆಯನ್ನು ಮಾಡುವ ದುಸ್ಥಿತಿ ರಾಜ್ಯ ಕಾಂಗ್ರೆಸ್‌ಗೆ ಬಂದಿದೆ ಎಂದರೇ ಇದು ಆಡಳಿತದ ವೈಫಲ್ಯ ಅಲ್ಲವೇ ? ಕಾಂಗ್ರೆಸ್‌ನಿಂದ ಒಂದು ಸುಸ್ಥಿರ ಆಡಳಿತವನ್ನು ಬಯಸಿದ್ದ ಜನರಿಗೆ ರಾಜ್ಯ ಕಾಂಗ್ರೆಸ್‌ ನಡೆ ನಿಜಕ್ಕೂ ಭ್ರಮನಿರಸನ ಮೂಡಿಸಿದೆ.  ಕಾಂಗ್ರೆಸ್‌ ತನ್ನ, ಆಡಳಿತ ವರ್ಚಸ್ಸನ್ನು ಕೇವಲ ಅಲ್ಪಾವಧಿಯಲ್ಲಿ ಕಳೆದುಕೊಳ್ಳುವಂತಾಗುತ್ತದೆ ಎಂಬುವುದನ್ನು ಬಹುಶಃ ರಾಜಕೀಯ ವಲಯವೂ ಊಹಿಸಿರಲಿಕ್ಕಿಲ್ಲ. ಅಧಿಕಾರಕ್ಕಾಗಿ ಕಾಂಗ್ರೆಸ್‌ ನಲ್ಲಿ ಆಂತರಿಕ ವೈಮನಸ್ಸುಗಳ ಕಚ್ಚಾಟ ಆಡಳಿತದ ಜವಾಬ್ದಾರಿಯನ್ನೇ ಮುಳುಗಿಸುತ್ತಿದೆ. ಕಾಂಗ್ರೆಸ್‌ ನಲ್ಲಿ ಆಂತರಿಕ ಅಸ್ಥಿರತೆ ತಲೆದೋರಿದಾಗ ಅವಶ್ಯವಾಗಿ ಗುಣಪಡಿಸುವ ಕಾರ್ಯವನ್ನು ಮಾಡಬೇಕಿತ್ತು. ಆದರೇ, ಅನವಶ್ಯಕ ʼಡಿಸಿಎಂ ಬೇಡಿಕೆʼಗಳನ್ನು ಕಾಂಗ್ರೆಸ್‌ ಶಾಸಕರು, ಸಚಿವರುಗಳು ಮುನ್ನೆಲೆಗೆ ತಂದು ಇಡೀ ರಾಜ್ಯದ ಮುಂದೆ ಕಾಂಗ್ರೆಸ್‌ನ ಆಂತರಿಕ ಅಸಮಾಧಾನವನ್ನು ಬಯಲು ಮಾಡಿದರು. ಹೈಕಮಾಂಡ್‌ ಮಟ್ಟದಲ್ಲಿ ತುಸು ಬಿಸಿ ಮುಟ್ಟಿಸುವ ಕೆಲಸ ಆದರೂ, ಅದು ಅಷ್ಟೊತ್ತಿಗಾಗಲೇ ವಿರೋಧ ಪಕ್ಷಗಳ ಟೀಕೆಗಳಿಗೆ ಆಹಾರವಾಗಿ ಮುಂದಿತ್ತು. ಈ ಎಲ್ಲಾ ಸಣ್ಣ ಪುಟ್ಟ ಆಂತರಿಕ ಅಸಮಾಧಾನಗಳನ್ನು ಅಲ್ಲಲ್ಲೇ ಉಪಶಮನ ಮಾಡಿಕೊಳ್ಳಬೇಕಿದ್ದ ಕಾಂಗ್ರೆಸ್‌ ತನ್ನನ್ನು ತಾನೇ ರಾಜ್ಯದ ಮುಂದೆ ಬೆತ್ತಲು ಮಾಡಿಕೊಂಡಿರುವುದು ರಾಜಕೀಯದ ದುರಂತವೇ ಸರಿ.

ಸಿದ್ದರಾಮಯ್ಯ ಅವರಂತಹ ಸೀನಿಯರ್‌ ಮೋಸ್ಟ್‌ ನಾಯಕರು ಕಾಂಗ್ರೆಸ್‌ನಲ್ಲಿ ಇರುವಾಗ ಇಂತೆಲ್ಲಾ ವಿಚಾರಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿತ್ತು. ಪಕ್ಷದೊಳಗಿನ ಅಸಮಾಧಾನದ ಗುಂಪುಗಾರಿಕೆಗಳು ತೀರಾ ಸುಲಭವಾಗಿ ಕಾಣಿಸಿಕೊಂಡವು. ಲೋಕಸಭಾ ಚುನಾವಣೆಯಲ್ಲಿ ಒಂಬತ್ತು ಸ್ಥಾನಗಳನ್ನು ಪಡೆದುಕೊಂಡಾಗ ಮತ್ತೆ  ಹೆಚ್ಚುವರಿ ಡಿಸಿಎಂ ಹಾಗೂ ಸಿಎಂ ಬದಲಾವಣೆಯ ವಿಚಾರಗಳನ್ನು ಸುಖಾಸುಮ್ಮನೆ ಚರ್ಚೆಗೆ ಬಂದವು. ಯಾವ ಪಕ್ಷ ಜಾತ್ಯಾತೀತವಾಗಿ ಆಡಳಿತ ನೀಡಬೇಕು ಎಂಬ ಸಿದ್ಧಾಂತದಲ್ಲಿ ನಡೆಯುತ್ತಿತ್ತೋ ಅದೇ ಪಕ್ಷದಿಂದಲೇ ಪ್ರಭಾವಿ ಜಾತಿ, ಸಮುದಾಯಕ್ಕೊಂದು ಡಿಸಿಎಂ ಬೇಡಿಕೆಯ ವಿಚಾರಗಳು ಮೇಲೆ ಬಂದಿದ್ದು ವಿಪರ್ಯಾಸ.

ಬಳಿಕ ರಾಜ್ಯ ಕಾಂಗ್ರೆಸ್‌ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ನಿವೇಶನ ವಿತರಣೆ ಹಾಗೂ ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮದಿಂದ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪಗಳು ಕೇಳಿಬಂದವು. ಅಧಿಕಾರದಲ್ಲಿದ್ದುಕೊಂಡು ರಾಜ್ಯದ ಜನರ ಮುಂದೆ, ಮತದಾರರ ಮುಂದೆ ಈ ಬಗ್ಗೆ ಸತ್ಯಾಂಶವನ್ನು ಮುಂದಿಟ್ಟು ಮನದಟ್ಟು ಮಾಡಬೇಕಾಗಿರುವ  ಸರ್ಕಾರ, ಪ್ರತಿಪಕ್ಷಗಳ ಆರೋಪಗಳಿಗೆ ಸಮರ್ಥನೆ ತೆಗೆದುಕೊಳ್ಳುವುದರಲ್ಲೇ ಕಾಲಹರಣ ಮಾಡಿತು. ವಿಪಕ್ಷಗಳು ಕಾಂಗ್ರೆಸ್‌ ʼಖಳನಾಯಕʼ ಎಂದು ಗಂಭೀರ ಆರೋಪ ಮಾಡುತ್ತಿರುವಾಗಲೂ, ಹೌದು ತಾನು ʼಖಳನಾಯಕʼ ಎಂದೇ ಬಿಂಬಿಸಿಕೊಂಡಂತೆ ಕಾಂಗ್ರೆಸ್‌ ನಡೆದುಕೊಂಡಂತಿದೆ.     

ಬಿಜೆಪಿಯ ಮೈಸೂರು ಚಲೋ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ ಜನಾಂದೋಲನ ಯಾತ್ರೆಯನ್ನು ಆಯೋಜಿಸುವ ಅಗತ್ಯವೇ ಇರಲಿಲ್ಲ. ಅಧಿಕಾರದಲ್ಲಿರುವಾಗ ಸತ್ಯಾಂಶ ಬಯಲು ಮಾಡುವುದಕ್ಕೆ ತನಿಖೆ ನಡೆಸಬಹುದಿತ್ತು, ಪ್ರತಿಪಕ್ಷಗಳ ಆರೋಪಕ್ಕೆ ಕಾನೂನಾತ್ಮಕವಾಗಿ ಹೋರಾಡಿ ಉತ್ತರಿಸಬಹುದಿತ್ತು. ರಾಜಕೀಯದಲ್ಲಿ ಯಾವುದಕ್ಕೆ ʼಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕುʼ ಎಂಬ ತಂತ್ರವನ್ನು ಪಾಲಿಸಬೇಕಿತ್ತೋ ಅದಕ್ಕೆ ಪಾಲಿಸದೇ ಕೈಕಟ್ಟಿ ಸುಮ್ಮನಾಗಿತ್ತು ಕಾಂಗ್ರೆಸ್. ಈಗ ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ತನ್ನನ್ನು ಸಮರ್ಥಿಸಿಕೊಳ್ಳುವುದಕ್ಕೆ ಜನಾಂದೋಲನ ಯಾತ್ರೆಯ ಹೆಸರಿನಲ್ಲಿ ಬೀದಿಗಿಳಿದಿರುವುದು ಹಾಸ್ಯಾಸ್ಪದವೇ ಸರಿ. 

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕಾಂಗ್ರೆಸ್‌ ಹಗರಣಗಳ ವಿರುದ್ಧ ನಡೆಸುತ್ತಿರುವ ಪಾದಯಾತ್ರೆಯನ್ನು ನಾಯಕತ್ವದ ವಿಜೃಂಭಣೆಯಂತೆ ಬಿಂಬಿಸುವುದಕ್ಕೆ ಮುಂದಾದಾಗ ಸಿಎಂ ಪರವಾದ ಹೋರಾಟವಾಗಿ ರೂಪುಗೊಳ್ಳುವಂತೆ ಯಾತ್ರೆಯ ಹೆಸರಿನಲ್ಲಿ ವಿರೋಧ ಪಕ್ಷಗಳ ವಿರುದ್ಧ ಪ್ರತಿಭಟಿಸುವ ಅನಿವಾರ್ಯತೆಗೆ ಕಾಂಗ್ರೆಸ್ ಬಿದ್ದಿದ್ದು ನಿಜಕ್ಕೂ ವಿಷಾದನೀಯವೇ ಸರಿ. ಬಿಜೆಪಿಯಷ್ಟು ಕೆಳಮಟ್ಟಕ್ಕೆ ಎಂದಿಗೂ ಇಳಿಯುವುದಿಲ್ಲ ಎಂದು ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್‌, ಈಗ ತಾನು ಇಳಿದಿರುವ ಆಳದ ಬಗ್ಗೆ ನೋಡಿಕೊಳ್ಳಬೇಕಿದೆ.

ಇನ್ನು, ವರ್ಗಾವಣೆ ದಂಧೆಯಲ್ಲೂ ಕಾಂಗ್ರೆಸ್‌ ನಾಯಕರ ಮೇಲೆ ಪದೆ ಪದೆ ಕೇಳಿ ಬರುತ್ತಿರುವ ಆರೋಪಗಳು ಸರ್ಕಾರದ ಮೇಲೆ ಸಿಟ್ಟೇಳುವಂತೆ ಮಾಡುತ್ತಿದೆ. ತಾಲೂಕು ಮಟ್ಟದಿಂದಲೇ ಹಿರಿಯ ಸೋ ಕಾಲ್ಡ್‌ ನಾಯಕರು ವರ್ಗಾವಣೆಯ ಹೆಸರಿನಲ್ಲಿ ʼಮೇಯುವುದಕ್ಕೆʼ ಮುಂದಾಗಿರುವುದು ಕಾಂಗ್ರೆಸ್‌ ನ ರಾಜಕೀಯ ವರ್ಚಸ್ಸನ್ನು ಹದಗೆಡಿಸುತ್ತಿದೆ. ವರ್ಗಾವಣೆಯ ವಿಚಾರದಲ್ಲಿ ಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಸಚಿವರು, ಶಾಸಕರು, ತಾಲೂಕು ಮಟ್ಟದಲ್ಲಿ ಪಕ್ಷದೊಳಗೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಭಾವಿ ನಾಯಕರು ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದಾರೆ ಎನ್ನುವ ಆರೋಪಗಳಿವೆ. ಜನಸ್ನೇಹಿ ಅಧಿಕಾರಿಗಳನ್ನೂ ಕೂಡ ವರ್ಗಾವಣೆ ಮಾಡಿದರೇ ಜನವಿರೋಧಿ ಸರ್ಕಾರ ಎಂದು ಜನ ಹಣೆಪಟ್ಟಿ ಕಟ್ಟದೇ ಸುಮ್ಮನಾಗುವರೆ ? ಅಧಿಕಾರಿಗಳ ವರ್ಗಾವಣೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಾಮಾನ್ಯ. ಆದರೇ, ಕಾಂಗ್ರೆಸ್‌ ಸರ್ಕಾರದಲ್ಲಿ ವರ್ಗಾವಣೆ ಎಲ್ಲಿಯವರೆಗೆ ಬಂದಿದೆ ಎಂದರೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಹಿಡಿದು ತಾಲೂಕು, ಜಿಲ್ಲೆ, ರಾಜ್ಯಮಟ್ಟದ ಮೇಲಾಧಿಕಾರಿಗಳವರೆಗೆ ಕೇಳಿದಲ್ಲಿಗೆ ಕಳುಹಿಸುವ ಕಾಲ ಬಂದಿದೆ. ಕೇಳಿದಷ್ಟು ಕೊಟ್ಟು ಬೇಕಾದ ಇಲಾಖೆಗೆ, ಜಾಗಕ್ಕೆ ವರ್ಗಾವಣೆ ಆಗುವ ಕಾಲ ಬಂದಿದೆ ಎಂದರೇ ವರ್ಗಾವಣೆ ದಂಧೆ ಕಾಂಗ್ರೆಸ್‌ ಕಾಲದಲ್ಲಿ ಎಲ್ಲಿಯವರೆಗಿದೆ ಎನ್ನುವುದನ್ನು ಊಹಿಸಿಕೊಳ್ಳಿ(ಯಾದಗಿರಿ ಪಿಎಸ್‌ಐ ಪರಶುರಾಮ್‌ ನಿಧನದ ಬಳಿಕ ಈ ಸಂಬಂಧಿಸಿದಂತೆ ಅಲ್ಲಿನ ಕಾಂಗ್ರೆಸ್‌ ಶಾಸಕ ಹಾಗೂ ಅವರ ಮಗನ ಮೇಲೆ ಕೇಳಿ ಬಂದಿರುವ ಹಣದಾಹ ಆರೋಪವೇ ಜ್ವಲಂತ ಸಾಕ್ಷಿ) . ಹೀಗೆ ಪಂಚಾಯತ್‌ ಮಟ್ಟದಿಂದ ಜಿಲ್ಲೆ, ರಾಜ್ಯ ಮಟ್ಟದವರೆಗೆ ನಡೆದರೆ ಭ್ರಷ್ಟಾಚಾರ ಕಡಿಮೆ ಆಗುವುದಕ್ಕೆ ಸಾಧ್ಯವಿದೆಯೇ ? ಯಾವ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೇ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿತ್ತೋ, ಭರವಸೆ ನೀಡಿತ್ತೋ, ಅದೇ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದ ಮೇಲೆ ತಾನು ನೀಡಿದ ಭರವಸೆಯನ್ನು ಸಂಪೂರ್ಣ ಮರೆತು ತನ್ನನ್ನು ನಂಬಿ ಮತ ಚಲಾಯಿಸಿದ ಮತದಾರರನ್ನು ನಿರಾಸೆಗೊಳಿಸಿದೆ, ಅಷ್ಟಲ್ಲದೇ ಇದು, ತನ್ನನ್ನು ತಾನೇ ವಂಚಿಸಿಕೊಂಡಿದ್ದೂ ಹೌದು.

ರಾಜ್ಯ ಕಾಂಗ್ರೆಸ್‌ಗೆ ನಿಜಕ್ಕೂ ಪುನರುಜ್ಜೀವನ ಅಗತ್ಯವಿದೆ. ಪ್ರಜಾಪ್ರಭುತ್ವ, ಸಂವಿಧಾನ ಎಂದು ಮಾತನಾಡುವ ರಾಜ್ಯ ಕಾಂಗ್ರೆಸ್‌, ವಸ್ತುಸ್ಥಿತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಬೆಲೆ ತರುವಂತಹ ನಡವಳಿಕೆಯಿಂದ ಪ್ರಾಮಾಣಿಕವಾಗಿ ಆಡಳಿತ ನಡೆಸಬೇಕಿರುವ ತುರ್ತಿದೆ. ಹೀಗೆ ನಡೆದುಕೊಳ್ಳದಿದ್ದರೇ ಕಾಂಗ್ರೆಸ್‌ ತಾನು ತನಗೇ ಮಾಡಿಕೊಳ್ಳುವ ಆತ್ಮ ವಂಚನೆ ಅಲ್ಲದೇ ಮತ್ತೇನು ?  

-ಶ್ರೀರಾಜ್‌ ವಕ್ವಾಡಿ

Thursday, August 1, 2024

ರಾಜಕೀಯದಲ್ಲಿ ಚಕ್ರವ್ಯೂಹ ಪ್ರಸಂಗ !


ಭೇದ್ಯವ್ಯೂಹಗಳ ಭೇದಿಸುವ ಪಾಠ ಕಲಿಸಿಕೊಡದಿದ್ದರೆ ಇದೇ ಸ್ಥಿತಿಗತಿ

ಶ್ರೀಕೃಷ್ಣನ ಸೋದರಳಿಯ ಅಭಿಮನ್ಯು. ಅರ್ಜುನ, ಸುಭದ್ರೆಯರ ಮಗ. ತಾಯಿಯ ಗರ್ಭದಲ್ಲಿರುವಾಗಲೇ ಮಾವ ಶ್ರೀಕೃಷ್ಣ ತನ್ನ ತಾಯಿ ಸುಭದ್ರೆಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇದಿಸುವುದರ ಬಗ್ಗೆ ಕಥೆಯ ರೂಪದಲ್ಲಿ ಹೇಳುವಾಗಲೇ ಕೇಳಿ ತಿಳಿದಿದ್ದ ಅಭಿಮನ್ಯು. ಎಲ್ಲಾ ತಪ್ಪುಗಳನ್ನು ಎದುರಿಸುವುದಕ್ಕೆ ಮದವೇರಿದ ಆನೆಯಂತೆ ಎದ್ದು ನಿಲ್ಲುವ ವ್ಯಕ್ತಿತ್ವ ಹೊಂದಿದವ. ಎದೆಗಾರಿಕೆ ತುಸು ಹೆಚ್ಚೇ ಅಭಿಮನ್ಯುವಿನಲ್ಲಿತ್ತು. ಮಹಾಭಾರತದಲ್ಲಿ ಸತ್ಯ ಮಾರ್ಗದಲ್ಲಿ ಹೋರಾಡಿ ಹತರಾದ ಯೋಧರಲ್ಲಿ ಅಭಿಮನ್ಯು ಕೂಡ ಒಬ್ಬ ಎನ್ನುವುದನ್ನು ಕಥೆ ರೂಪದಲ್ಲಿ ನಾವೆಲ್ಲರೂ ನೋಡಿ ಕೇಳಿ ತಿಳಿದಿದ್ದೇವೆ. ಅತ್ಯಂತ ಧೈರ್ಯಶಾಲಿ, ವೀರ, ಸಕಲ ಯುದ್ಧ ಕಲೆಗಳನ್ನು ಬಲ್ಲ ಯೋಧನಾಗಿದ್ದರೂ, ಮಹಾಭಾರತ ಯುದ್ಧದಲ್ಲಿ ಕೌರವರು ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಕೊಲ್ಲುತ್ತಾರೆ.

ಹೀಗೆ ವ್ಯೂಹ ರಚಿಸಿ ಸಿಲುಕಿಸುವ ಪದ್ಧತಿ ರಾಜಕಾರಣದಲ್ಲಿಯೂ ಇದೆ. ಅಧಿಕೃತವಾಗಿ ಈ ವಿಚಾರವನ್ನು ರಾಹುಲ್‌ ಗಾಂಧಿಯಿಂದ ಮೇಲೆತ್ತಿದ್ದಾರೆ. ಅಭಿಮನ್ಯುವಿನಂತಹ ಎಳೆಚಿಗುರು ಪರಾಕ್ರಮಿಯೊಬ್ಬನಿದ್ದಾನೆ ಎಂಬುವುದನ್ನು ನಿರೀಕ್ಷಿಸಿರದ ಕೌರವರು ಈ ʼಬಾಲಕʼ ಈ ಪರಾಕ್ರಮಿಗಳನ್ನು ಏನೂ ಮಾಡುವುದಕ್ಕೂ ಸಾಧ್ಯವಿಲ್ಲ ಎಂದು ಅತಿ ಮನಸ್ಥಿತಿಯ ಉಡಾಫೆಯಿಂದಲೇ ನಡೆದುಕೊಂಡಿದ್ದರು. ರಾಷ್ಟ್ರ ರಾಜಕಾರಣದಲ್ಲಿಯೂ ಇಂತದ್ದೆ ಪ್ರಸಂಗ ಆಗಿ ಹೋಗಿದೆ. ನುರಿತ ಪರಾಕ್ರಮಿಗಳಿಗೂ ಯಾವುದೇ ರೀತಿಯಲ್ಲೂ ಕಡಿಮೆಯಲ್ಲ ಎಂಬ ರೀತಿಯಲ್ಲಿ ಅಭಿಮನ್ಯು ಕೌರವರ ಮನಸ್ಸಿನಲ್ಲೊಂದು ಭಾವ ಮೂಡಿಸಿದ್ದ. ರಾಜಕಾರಣದಲ್ಲೂ ಆ ʼಧ್ವನಿʼ ಈಗ ಅದೇ ಭಾವ ಮೂಡಿಸಿದೆ.

ಪಾಂಡವರು ಕೌರವವರ ಎದರು ಕೈ ಚೆಲ್ಲಿ ಕೂತಿದ್ದರು. ರಾಜಕಾರಣದಲ್ಲೂ ಕೂಡ ಒಂದು ಪಕ್ಷ ಆಂತರಿಕವಾಗಿ ಈ ಲೋಕಸಭಾ ಚುನಾವಣೆ ಪೂರ್ವದಲ್ಲಿ ಇದೇ ಸ್ಥಿತಿಯಲ್ಲಿತ್ತು. ದ್ರೋಣಾಚಾರ್ಯರ ನೇತೃತ್ವದಲ್ಲಿ ಕೌರವರ ಪಡೆ ಚಕ್ರವ್ಯೂಹವನ್ನು ರಚಿಸಿತ್ತು. ಚಕ್ರವ್ಯೂಹವನ್ನು ಭೇದಿಸಬಲ್ಲ ಅರ್ಜುನ ಆ ಸಂದರ್ಭದಲ್ಲಿರಲಿಲ್ಲ. ಅಭಿಮನ್ಯುವಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಅಭಿಮನ್ಯು ವಂಶ ರಕ್ಷಣೆಗೆ ಮುಂದಾಗುತ್ತಾನೆ. ಪಾಂಡವರಿಗೆ ಸಂಕಷ್ಟ ಕಾಲ. ರಾಜಕಾರಣದಲ್ಲೂ ಒಂದು ಸಂಕಷ್ಟ ಕಾಲ ಎದುರಾಗಿತ್ತು. ರಾಜಕಾರಣವೂ ಒಂದು ಮಹಾಭಾರತ. ಯುದ್ಧವನ್ನು ಎದುರಿಸಲೇ ಬೇಕು. ವ್ಯೂಹದಿಂದ ಹೊರಬರಲು ಗೊತ್ತಿಲ್ಲ ಎಂದು ತಿಳಿಸಿದರೂ, ಅಭಿಮನ್ಯುವನ್ನು ಒಪ್ಪಿಸಿ ಚಕ್ರವ್ಯೂಹ ಭೇದಿಸುವಂತೆ ಯುದಿಷ್ಠಿರ ಮಾಡುತ್ತಾನೆ. ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸುತ್ತಾನೆ. ಚಕ್ರವ್ಯೂಹದ ಮೊದಲ ವ್ಯೂಹವನ್ನು ಲೀಲಾಜಾಲವಾಗಿ ಅಭಿಮನ್ಯು ಬೇಧಿಸಿ ಒಳನುಗ್ಗುತ್ತಿದ್ದಂತೆಯೇ ಕೌರವರಲ್ಲಿ ಆತಂಕ ಎದುರಾಗುತ್ತದೆ. ಈ ಲೋಕಸಭಾ ಚುನಾವಣೆಯ ಕಾಲಮಾನ, ಫಲಿತಾಂಶ ನಿರೀಕ್ಷೆಗೂ ಮೀರಿದಾಗ ಇದೇ ರೀತಿಯ ಒಂದು ಆತಂಕ ಸೃಷ್ಟಿಯಾಗಿತ್ತು. ಅಭಿಮನ್ಯುವನ್ನು ಕೌರವರ ಪ್ರಮುಖರಾದ ಕರ್ಣ, ದುರ್ಯೋಧನ, ದುಶ್ಯಾಸನ, ದ್ರೋಣಾಚಾರ್ಯರು, ಅಶ್ವತ್ಥಾಮ ಮೊದಲಾದ ಪರಾಕ್ರಮಿಗಳು ಸುತ್ತುವರೆದರು. ರಾಜಕಾರಣದಲ್ಲೂ ಗೆಲುವಿಗಾಗಿ ಇಂತಹದ್ದೇ ಒಂದು ವ್ಯೂಹ ಸೃಷ್ಟಿಸಲಾಗಿತ್ತು. ವಯಸ್ಸಿನಲ್ಲಿಯೂ, ಶೌರ್ಯದಲ್ಲಿಯೂ ತನಗಿಂತ ಹಿರಿಯರಾಗಿದ್ದ ಎಲ್ಲರ ಎದುರು ಅಭಿಮನ್ಯು ಧೃತಿಗೆಡದೇ ಹೋರಾಡಿದ. ತನ್ನ ವಯಸ್ಸಿಗೂ ಮಿಗಿಲಾದ ಪರಾಕ್ರಮವನ್ನೂ ಶೌರ್ಯವನ್ನೂ ಮೆರೆದ. ಅಭಿಮನ್ಯವಿನ ಎದೆಗಾರಿಕೆಗೆ ಸ್ವತಃ ಕೌರವವರೇ ಆಶ್ಚರ್ಯಚಕಿತರಾಗಿದ್ದರು. ಚುನಾವಣಾ ಫಲಿತಾಂಶ ಹೊರಬಂದ ಮೇಲೆ ಅಮೂರ್ತವಾಗಿದ್ದ ಆ ʼಧ್ವನಿʼಯ ಶೌರ್ಯದ ಬಗ್ಗೆಯೂ ಬೆರಗು ಉಂಟಾಗಿತ್ತು. ಸ್ವತಃ ದ್ರೋಣಾಚಾರ್ಯಯರೇ ಅಭಿಮನ್ಯುವಿನ ಶೌರ್ಯವನ್ನು ಕೊಂಡಾಡಿದ್ದರು. ಆಮೇಲೆ ಚಕ್ರವ್ಯೂಹದಿಂದ ಹೊರಬರುವುದಕ್ಕಾಗದೇ ಅಭಿಮನ್ಯು ಪರದಾಡಿದ್ದು,ಅಕ್ಷರಶಃ ನಿರಾಯುಧನಾಗಿಯೂ ಕೌರವವರ ಎದುರು ಹೋರಾಟ ಮಾಡಿದನಾದರೂ ಚಕ್ರವ್ಯೂಹದಲ್ಲಿ ಹಿಂಸೆಯನ್ನು ಅನುಭವಿಸಿ ಅಭಿಮನ್ಯು ವೀರ ಮರಣ ಹೊಂದುತ್ತಾನೆ. ರಾಜಕಾರಣದಲ್ಲೂ ಹೀಗೆ ವಿರೋಚಿತ ಸೋಲು ಉಂಟಾಗಿತ್ತು. ರಾಜಕೀಯದಲ್ಲಿ ನಮ್ಮ ಮುಂದೆ ಯಾರೂ ಇಲ್ಲ ಎಂದವರು ತೀರ್ಪಿಗೆ ಶರಣಾದರು. ಅಭಿಮನ್ಯು ಸಾಯುವುದರ ಹಿಂದೆ ಅವನ ಪೂರ್ವಜನ್ಮದ ಫಲಾಪಲವೇನು, ಅಭಿಮನ್ಯು ಸಾವಿನ ಹಿಂದೆ ಶ್ರೀಕೃಷ್ಣನ ಪಾತ್ರವೇನಿತ್ತು ? ಅಭಿಮನ್ಯು ಹಿಂದಿನ ಜನ್ಮದಲ್ಲಿ ಕೃಷ್ಣನ ಶತ್ರುವಾಗಿದ್ದನೇ ಎಂಬ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಮಹಾಭಾರತವನ್ನೇ ತೆರೆದಿಡಬೇಕಾದೀತು. ರಾಜಕಾರಣದಲ್ಲಿಯೂ ಅಷ್ಟೇ ಪೂರ್ತಿ ಹೇಳುವುದಕ್ಕೆ ಹೊರಟರೆ, ಇತಿಹಾಸವನ್ನೇ ತೆರೆದಿಡಬೇಕಾಗುತ್ತದೆ. ಅದೇನೆ ಇರಲಿ. ಸದ್ಯ ಅಭಿಮನ್ಯು ಮತ್ತು ಚಕ್ರವ್ಯೂಹ ರಾಷ್ಟ್ರ ರಾಜಕಾರಣದಲ್ಲಿ ಸುದ್ದಿಯಲ್ಲಿದೆ.

ಹೌದು, ರಾಷ್ಟ್ರ ರಾಜಕಾರಣದಲ್ಲಿ ಈಗ ಪಾಂಡವರು ಯಾರು ? ಕೌರವವರು ಯಾರು ? ಅಭಿಮನ್ಯು ಯಾರು ? ದ್ರೋಣಾಚಾರ್ಯ ಯಾರು ? ಚಕ್ರವ್ಯೂಹ ಯಾವುದು ? ಶ್ರೀಕೃಷ್ಣ ಯಾರು ? ಎನ್ನುವುದೇ ದೊಡ್ಡ ಪ್ರಶ್ನೆ. ಇರಲಿ, ಬಜೇಟ್‌ ಅಧಿವೇಶನದ ಮೇಲಿನ ಚರ್ಚೆಯಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಈ ಅಭಿಮನ್ಯು ಚಕ್ರವ್ಯೂಹ ಪ್ರಸಂಗವನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಟೀಕಿಸಿದ್ದಾರೆ. ರಾಹುಲ್‌ ಗಾಂಧಿ ಪ್ರಸ್ತುತ ರಾಜಕಾರಣವನ್ನು ಅಭಿಮನ್ಯು ಚಕ್ರವ್ಯೂಹ ಪ್ರಸಂಗಕ್ಕೆ ಹೋಲಿಸಿ ಹೇಳಿರುವುದು ಸರಿ ಎಂದೇ ಅರ್ಥೈಸಿಕೊಂಡರೂ ಕೆಲವು ಜಿಜ್ಞಾಸೆಗಳಿವೆ.

ಲೋಕಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ ರಾಹುಲ್‌ ಗಾಂಧಿ, ʼಕುರುಕ್ಷೇತ್ರದಲ್ಲಿ ಆರು ಮಂದಿ ಚಕ್ರವ್ಯೂಹದಲ್ಲಿ ಅಭಿಮನ್ಯುವನ್ನು ಸಿಲುಕಿಸಿ, ಆತನನ್ನು ಕೊಂದಿದ್ದರು. ಇಂದು ಇಡೀ ಭಾರತದ ಯುವಜನರು, ರೈತರು, ಮಹಿಳೆಯರು, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೂ ಚಕ್ರವ್ಯೂಹದಲ್ಲಿ ಸಿಲುಕಿಸಲಾಗುತ್ತಿದೆ. ಅಂದು ದ್ರೋಣಾಚಾರ್ಯ, ಕರ್ಣ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ ಮತ್ತು ಶಕುನಿ ಇದ್ದಂತೆ, ಇಂದು ಕೂಡ 'ಚಕ್ರವ್ಯೂಹ'ದ ಕೇಂದ್ರದಲ್ಲಿ ಆರು ವ್ಯಕ್ತಿಗಳಿದ್ದಾರೆ, ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಹಾಗೂ ಅದಾನಿ ಎಂದು ರಾಹುಲ್‌ ಗಂಭೀರ ಆರೋಪ ಮಾಡಿದ್ದರು. ಕೇಂದ್ರ ಸರ್ಕಾರದ ಬಜೆಟ್‌ನ ಏಕೈಕ ಗುರಿ ಏಕಸ್ವಾಮ್ಯ ಉದ್ಯಮದ ಚೌಕಟ್ಟನ್ನು ಬಲಪಡಿಸುವುದು ಆಗಿದೆ ಎನ್ನುವ ಅಭಿಪ್ರಾಯವನ್ನು ʼಚಕ್ರವ್ಯೂಹʼ ಬಳಸಿ ರಾಹುಲ್‌ ವ್ಯಕ್ತಪಡಿಸಿದ್ದರು.

ನಮ್ಮ ದೇಶದ ಜನರು 2024ರ ಚುನಾವಣೆಯಲ್ಲಿ ಸರ್ಕಾರವನ್ನು ಮಾತ್ರವಲ್ಲದೆ ಪ್ರತಿಪಕ್ಷವನ್ನೂ ಆಯ್ಕೆ ಮಾಡುವುದಕ್ಕೆ ಬೇಕಾಗಿ ತೀರ್ಪು ನೀಡಿದ್ದಾರೆ. ಪಿಎಂಒ ಆದೇಶಕ್ಕೆ ರಬ್ಬರ್ ಸ್ಟಾಂಪ್ ಆಗಿರಲು ಸಂಸತ್ತು ಇನ್ನು ಮುಂದೆ ವೇದಿಕೆಯಾಗಿರಲ್ಲ. ದೇಶದ ಜನರ ಅನೇಕ ಪ್ರಶ್ನೆಗಳ ಧ್ವನಿಗಳನ್ನು ಪ್ರತಿನಿಧಿಸಲು ಸಂಸತ್ತು ಮತ್ತೊಮ್ಮೆ ಚರ್ಚೆಗೆ, ಸಂವಾದಕ್ಕೆ ವೇದಿಕೆಯಾಗಿರಲಿದೆ. ಹೇಗೆ ಸುಮ್ಮನೆ ಮೋದಿ ಆಗಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಸೃಷ್ಟಿಯಾಗಿತ್ತೋ ಹಾಗೆಯೆ, ಸುಮ್ಮನೆ ರಾಹುಲ್‌ ಗಾಂಧಿ ಕೂಡ ಆಗುವುದಕ್ಕೆ ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಈ ಲೋಕಸಭಾ ಚುನಾವಣೆಯ ಫಲಿತಾಂಶ ತೋರಿಸಿಕೊಟ್ಟಿದೆ. ರಾಹುಲ್‌ ಗಾಂಧಿ ತಮಗೆ ತಾವೇ ಪರೋಕ್ಷವಾಗಿ ಅಭಿಮನ್ಯು ಎಂದುಕೊಂಡರೇ, ಅಥವಾ ರಾಹುಲ್‌ ಗಾಂಧಿಯವರಲ್ಲಿ ಅಭಿಮನ್ಯವಿನಲ್ಲಿರುವ ಗುಣಲಕ್ಷಣಗಳಿವೆಯೇ ? ಅಥವಾ ರಾಹುಲ್‌ ತಾವಿರುವ ಪಕ್ಷವನ್ನು ಪಾಂಡವರ ಪಕ್ಷವೆಂದು ಪರೋಕ್ಷವಾಗಿ ಹೇಳಿಕೊಂಡರೇ ? ಅವರವರನ್ನು ಸಮರ್ಥಿಸಿಕೊಳ್ಳುವುದು ರಾಜಕಾರಣದಲ್ಲಿ ತೀರಾ ಸಾಮಾನ್ಯ.

ಕಳೆದ ಹತ್ತು ವರ್ಷಗಳಿಂದ ಈ ದೇಶದ ರಾಜಕಾರಣ ಮನಸ್ಸು ಮತ್ತು ಬುದ್ಧಿಗೆ ಹೆಣೆದ ಚಕ್ರವ್ಯೂಹದಿಂದ ಇನ್ನೂ ಹೊರಬರುವುದಕ್ಕೆ ಆಗಿಲ್ಲ. ಈಗ ರಾಹುಲ್‌ ಚಕ್ರವ್ಯೂಹವನ್ನು ನಾವು ಭೇದಿಸುತ್ತೇವೆ ಎಂದು ಹೇಳುತ್ತಿದ್ದಾರೆ.‌ ಆಡಳಿತವನ್ನು ಪ್ರಶ್ನಿಸುವ ಭರದಲ್ಲಿ ರಾಹುಲ್‌ ಜವಾಬ್ದಾರಿಯನ್ನು ಮರೆಯುವಂತಿಲ್ಲ. ಜನ ರಾಹುಲ್‌ ಮೇಲೆ ಇಟ್ಟಿರುವ ನಂಬಿಕೆ ಈ ಚುನಾವಣೆಯ ಫಲಿತಾಂಶದಿಂದ ಗೊತ್ತಾಗಿದೆ. ಅಭೇದ್ಯವ್ಯೂಹಗಳ ಭೇದಿಸುವುದಕ್ಕೆ ರಾಹುಲ್ ತಯಾರಾಗುತ್ತಿರುವುದನ್ನು ದೇಶ ನೋಡುತ್ತಿದೆಯೇ ? ಈ ನಂಬಿಕೆಯನ್ನು ಉಳಿಸಿಕೊಳ್ಳಲು ಸ್ವತಃ ರಾಹುಲ್‌ ಅರ್ಜುನನಂತಾಗಲು ಪ್ರಯತ್ನಿಸಬೇಕಿದೆ. ಜನರಿಗೂ ಅಭೇದ್ಯವ್ಯೂಹ ಭೇದಿಸುವ ಪಾಠ ಕಲಿಸಿಕೊಡಬೇಕಿದೆ. ಸರ್ಕಾರದ ಆಡಳಿತವನ್ನು ಜನರೇ ಪ್ರಶ್ನಿಸುವಂತೆ ಮಾಡುವವರೆಗೆ ರಾಹುಲ್‌ ಅಭಿಮನ್ಯು ಆಗಿಯೇ ಉಳಿಯುತ್ತಾರೆಯೆ ಹೊರತು ಅರ್ಜುನನಾಗುವುದಿಲ್ಲ. ವಿರೋಧ ಪಕ್ಷದಲ್ಲಿ ಕೂತು ರಾಹುಲ್‌ ಜನರಿಗೆ ಅರ್ಜುನನ ಪಟ್ಟ ಕಟ್ಟುವುದಷ್ಟೇ ಅಲ್ಲ, ತಾವೂ ಅರ್ಜುನನಾಗುವುದರ ಜೊತೆಗೆ ಸಹಸ್ರ ಅರ್ಜುನರನ್ನು ತಯಾರು ಮಾಡಬೇಕಿದೆ. ಇದೇ ರಾಹುಲ್‌ ಮುಂದಿರುವ ದಾರಿ.

-ಶ್ರೀರಾಜ್‌ ವಕ್ವಾಡಿ 

Thursday, July 25, 2024

ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಸ್ಥಿತಿ ಚಂದ್ರನ್‌ ಮುಖಕ್‌ ಉಗ್ದಂಗೆ !

 

(ಸಾಂದರ್ಭಿಕ ಚಿತ್ರ)

ಉಸ್ತುವಾರಿ ಮೇಲೆ ತಣ್ಣಗಾಗದ ಸ್ವಪಕ್ಷೀಯರ ಮುನಿಸು | ಅಶಕ್ತವಾದ ಕಾಂಗ್ರೆಸ್‌  

ಹಾವು ಸಾಯಬಾರದು, ಕೋಲು ಮುರಿಯಬಾರದು ಎನ್ನುವ ಮಾತು ಉಡುಪಿ ಜಿಲ್ಲಾ ಕಾಂಗ್ರೆಸ್‌ಗೆ ಸದ್ಯಕ್ಕೆ ಸಾರ್ಥಕವಾಗಿ ಒಪ್ಪುತ್ತದೆ. ಹೌದು, ಜಿಲ್ಲೆಯ ಕಾಂಗ್ರೆಸ್‌ಗೆ ತಮ್ಮದೆ ಸರ್ಕಾರವೇ ನೇಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ವಿರೋಧಿಸುವ ಹಾಗೆಯೂ ಇಲ್ಲ, ಸಮರ್ಥಿಸಿಕೊಳ್ಳುವ ಹಾಗೆಯೂ ಇಲ್ಲದಂತಾಗಿದೆ. ತ್ರಿಶಂಕು ಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಇದೆ.

ಜಿಲ್ಲಾ ಮಟ್ಟದಲ್ಲಿ ಆಡಳಿತಾತ್ಮಕ ಅನುಕೂಲವಾಗಬೇಕು ಎಂಬ ದೃಷ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಡಳಿತಾರೂಢ ಸರ್ಕಾರ ನೇಮಿಸುವ ಪದ್ಧತಿ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಇದೆ. ಸ್ಥಳಿಯಾಡಳಿತಕ್ಕೂ ಹಾಗೂ ರಾಜ್ಯ ಸರ್ಕಾರಕ್ಕೂ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕೊಂಡಿಯಾಗಿ ಇರಬೇಕು. ಆದರೇ, ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಇದನ್ನು ಸಂಪೂರ್ಣವಾಗಿ ಮರೆತಿರುವಂತೆ ಕಾಣಿಸುತ್ತಿದೆ.

ಸ್ವತಃ ಆಡಳಿತಾರೂಢ ಕಾಂಗ್ರೆಸ್‌ನ ಉಡುಪಿ ಜಿಲ್ಲೆಯ ಕಾರ್ಯಕರ್ತರೇ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅಸಮಾಧಾನದಿಂದಿದ್ದಾರೆ. ಅದು ಇಲ್ಲಿಯ ಬಿಜೆಪಿಗೆ ರಾಜಕೀಯ ಸರಕಾಗಿಯೂ ದೊರಕಿದೆ. ಕಾರ್ಯಕರ್ತರು ಸ್ವತಃ ಜಿಲ್ಲಾ ಉಸ್ತುವಾರಿಗಳ ಮುಂದೆಯೇ ಆಕ್ರೋಶ ಹೊರ ಹಾಕಿದ್ದರು. ಕಾಂಗ್ರೆಸ್‌ ಅದನ್ನು ಪಕ್ಷದೊಳಗಿನ ಆಂತರಿಕ ವಿಷಯ ಎಂದು ಸಮರ್ಥಿಸಿಕೊಂಡಿತ್ತು. ಲೋಕಸಭಾ ಚುನಾವಣೆಯ ಹೊತ್ತಿಗೆ ತಣ್ಣಗಾಗಿತ್ತು ಎಂದು ತೋರಿದ್ದ ಈ ಉಸ್ತುವಾರಿಗಳ ಮೇಲಿನ ಅಸಮಾಧಾನ ಮತ್ತೆ ಹೆಚ್ಚಾಗಿದೆ.

ನಿರಂತರ ಎಲ್ಲಾ ಚುನಾವಣೆಗಳ ಸೋಲು ಜಿಲ್ಲಾ ಕಾಂಗ್ರೆಸ್‌ಗೆ ತೀರ್ವ ಮುಖಭಂಗಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆಯವರಂತಹ ಸಮರ್ಥ ಅಭ್ಯರ್ಥಿ ಇದ್ದರೂ ಜಿಲ್ಲೆಯ ಪ್ರಮುಖ ತಾಲೂಕುಗಳಾದ ಉಡುಪಿ, ಕುಂದಾಪುರಗಳಲ್ಲೇ ಲೀಡ್‌ ತಂಡುಕೊಡುವುದಕ್ಕಾಗದೇ ʼತಾನು ಅಸಮರ್ಥʼ ಎಂದು ಜಿಲ್ಲಾ ಕಾಂಗ್ರೆಸ್ ತೋರಿಸಿಕೊಟ್ಟಂತಿದೆ. ಈಗ ಉಸ್ತುವಾರಿಗಳ ಬಗ್ಗೆ ಅಸಮಾಧಾನದ ಧ್ವನಿ ಎತ್ತುವುದಕ್ಕೂ ನೈತಿಕತೆ ಕಳೆದುಕೊಂಡ ಸ್ಥಿತಿ ಅನುಭವಿಸುತ್ತಿದೆ.‌ ಒಂದೆಡೆ ರಾಜ್ಯದಾದ್ಯಂತ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂಬ ವಿಪಕ್ಷಗಳ ಆರೋಪಗಳ ನಡುವೆ ಸರ್ಕಾರವನ್ನು ಸಮರ್ಥಿಸಿಕೊಳ್ಳುವಲ್ಲಿಯೂ ಜಿಲ್ಲಾ ಕಾಂಗ್ರೆಸ್‌ ಅಶಕ್ತವಾಗಿದೆ.

ಸಂಘಟನೆಯ ಕೊರತೆಯನ್ನು ಜಿಲ್ಲಾ ಕಾಂಗ್ರೆಸ್‌ ಅಕ್ಷರಶಃ ಅನುಭವಿಸುತ್ತಿದೆ. ಜಿಲ್ಲೆಯಲ್ಲಿನ ನಿರಂತರ ಸೋಲಿನ ಕಾರಣದಿಂದ ಕಾಂಗ್ರೆಸ್ ತನ್ನ ಎಲುಬುಗಳನ್ನು ಕಳೆದುಕೊಂಡಿದೆ. ನಾಯಕರುಗಳ ನಡುವಿನ ಪ್ರತಿಷ್ಠೆ, ವೈಮನಸ್ಸು ಕಾಂಗ್ರೆಸ್‌ ಸೊರಗುವುದಕ್ಕೆ ಮೂಲ ಕಾರಣ. ಉಸ್ತುವಾರಿ ಸಚಿವರು ನಿಜವಾಗಿಯೂ ಇಚ್ಛಾಶಕ್ತಿಯಿಂದ ಕೆಲಸ ಮಾಡಿದ್ದಾದರೇ, ಇಡೀ ಜಿಲ್ಲೆಯಲ್ಲಿ ತಮ್ಮ ಆಡಳಿತ ವರ್ಚಸ್ಸು ಹಾಗೂ ಆಡಳಿತ ಸರ್ಕಾರದ ಪ್ರಭಾವವನ್ನು ಜಿಲ್ಲೆಯಲ್ಲಿ ಬೀರಬಹುದಾಗಿತ್ತು. ಪಕ್ಷವನ್ನು ಮರಳಿ ಚೇತರಿಸಿಕೊಳ್ಳುವ ಹಾಗೆ ಮಾಡಬಹುದಾಗಿತ್ತು. ಕಾಂಗ್ರೆಸ್‌ ಅಧಿಕಾರ ಹಿಡಿದು ಲೋಕಸಭಾ ಚುನಾವಣೆಗೆ ಒಂದು ವರ್ಷ ಕಾಲ ಇದ್ದಿತ್ತು. ಜಿಲ್ಲೆಯಲ್ಲಿ ಪ್ರಮುಖ ಎರಡು ವಿವಾದಗಳಾದ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ ಹಗರಣ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಹಗರಣಗಳ ಬಗ್ಗೆ ಆಡಳಿತವನ್ನು ಬಳಸಿಕೊಂಡು ಸಮರ್ಥವಾಗಿ ವಿರೋಧಿಸಿದ್ದರೇ, ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಹಾಗೆ ಮಾಡಿದ್ದರೇ, ಜಿಲ್ಲೆಯಲ್ಲಿ ಕಾಂಗ್ರೆಸ್‌ ಮರಳಿ ಚೇತರಿಸಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಿತ್ತು. ಇಲ್ಲಿನ ಉಸ್ತುವಾರಿಗಳೂ ಕೂಡ ಈ ಎರಡು ಹಗರಣಗಳಲ್ಲಿ ತಾವೂ ಶಾಮೀಲಾದವರಂತೆ, ಏನೂ ಆಗಿಲ್ಲ ಎಂಬಂತೆ ನಡೆದುಕೊಂಡರು ಎಂದು ಸ್ವತಃ ಕಾಂಗ್ರೆಸ್‌ ಕಾರ್ಯಕರ್ತರೇ ಹೇಳಿಕೊಂಡಿರುವುದು ದುರಂತವೇ ಸರಿ. ಮಾಡುವ ಕಾಲಕ್ಕೆ ಏನೂ ಮಾಡದೇ ಬಾಯಿ ಮುಚ್ಚಿ ಕುಳಿತ ಕಾಂಗ್ರೆಸ್‌ ಈಗ ನಿದ್ದೆಯಿಂದ ಎದ್ದಂತಿದೆ.   

ಕಾಂಗ್ರೆಸ್‌ ಸ್ಥಿತಿ ಜೆಪಿ ರಾಜರತ್ನಂ ಹೇಳಿದ ಹಾಗೆ ʼಚಂದ್ರನ್‌ ಮುಖಕ್‌ ಉಗ್ದಂಗೆʼ ಎಂಬಂತಾಗಿದೆ. ʼಚಂದ್ರನಿಗೆ ಉಗಿಯುವ ಉಗುಳು ಉಗಿಯುವವರ ಮುಖದ ಮೇಲೆಯೇ ಬೀಳುತ್ತದೆʼ. ಒಂದೆಡೆ ಜಿಲ್ಲೆಯಲ್ಲಿ ಅಭಿವೃಧ್ಧಿಯಾಗುತ್ತಿಲ್ಲ ಎಂದು ಸರ್ಕಾರವನ್ನು ವಿರೋಧಿಸುವುದಕ್ಕೂ ಸಾಧ್ಯವಿಲ್ಲ, ಇನ್ನೊಂದೆಡೆ ಉಸ್ತುವಾರಿಗಳನ್ನು ಪ್ರಶ್ನಿಸುವಂತೆಯೂ ಇಲ್ಲ. ಬಿಜೆಪಿಯ ಶಾಸಕರನ್ನು ಸಮರ್ಥವಾಗಿ ವಿರೋಧಿಸುವಲ್ಲಿಯೂ ಇಲ್ಲಿನ ಕಾಂಗ್ರೆಸ್ ನಾಯಕತ್ವ ಹೀನಾಯವಾಗಿ ಸೋತಿದೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ನಿಷ್ಕ್ರಿಯವಾಗಿರುವುದು ಇದರಿಂದಲೇ ತಿಳಿಯುತ್ತದೆ.

ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ನೇಮಕಗೊಂಡಾಗ ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲ್ಲುವುದಕ್ಕೆ ಸಾದ್ಯವಾಗಿಲ್ಲ ಎಂಬ ವಿಚಾರಕ್ಕೆ ಮುನಿಸಿಕೊಂಡು ಇಲ್ಲಿನ ಕಾರ್ಯಕರ್ತರು ಮತ್ತು ಪ್ರಮುಖ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಕಾರ್ಯಕರ್ತರಲ್ಲಿ ಭ್ರಮನಿರಸನ ಉಂಟು ಮಾಡಿತ್ತು. ಬಳಿಕ ನಡೆದ ಕಾರ್ಯಕರ್ತರ ಸಭೆಗಳಲ್ಲಿ ಕಾರ್ಯಕರ್ತರು ಉಸ್ತುವಾರಿಗಳ ಮೇಲೆಯೇ ತಿರುಗಿ ಬಿದ್ದಿದ್ದರು. ಕಾರ್ಯಕರ್ತರಿಗೆ ಬೇಕಾದ ಸವಲತ್ತುಗಳನ್ನು ಪಕ್ಷ ಒದಗಿಸುವುದಿಲ್ಲ. ಚುನಾವಣೆ ಬಂದಾಗ ನಾಯಕರಿಗೆ ಕಾರ್ಯಕರ್ತರು ಬೇಕು. ಕಾರ್ಯಕರ್ತರು ನಾಯಕರ ಗುಲಾಮರಾ ? ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದರು. ಹೀಗೆ ಕಾರ್ಯಕರ್ತರು ಹಾಗೂ ಉಸ್ತುವಾರಿ ಸಚಿವರ ನಡುವೆ ಅಸಮಾಧಾನ ಮುಂದುವರಿದಿತ್ತು. ಉಸ್ತುವಾರಿಗಳ ಬಗ್ಗೆ  ಬಿಜೆಪಿ ಶಾಸಕರೂ ಕೂಡ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರೊಂದಿಗೆ ಉಸ್ತುವಾರಿಗಳು ಮೃದು ಧೋರಣೆಯಿಂದ ನಡೆದುಕೊಂಡಿದ್ದರು. ಇದು ಕೂಡ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿತ್ತು. ಈಗ ಬಿಜೆಪಿ ಶಾಸಕರಿಂದಲೇ ಉಸ್ತುವಾರಿ ಸಚಿವರ ಮೇಲೆ ಟೀಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಕಾಂಗ್ರೆಸ್‌ ಕಾರ್ಯಕರ್ತರ ವರಸೆ ಬದಲಾದಂತೆ ಕಾಣಿಸುತ್ತಿದೆ. ಉಸ್ತುವಾರಿಗಳ ಮೇಲೆ ಉಡುಪಿ ಶಾಸಕರ ಅಭಿಪ್ರಾಯವೇ ಕಾಂಗ್ರೆಸ್‌ ಕಾರ್ಯಕರ್ತರಲ್ಲಿಯೂ ಇದೆ. ಆದರೇ, ಉಸ್ತುವಾರಿ ಸಚಿವರನ್ನು ಸಮರ್ಥಿಸಿಕೊಳ್ಳಲೇ ಬೇಕಾದ ಸ್ಥಿತಿಯಲ್ಲಿದ್ದಾರೆ. ಉಸ್ತುವಾರಿ ವಿರುದ್ಧ ಯಾವ ಸ್ವಪಕ್ಷೀಯ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದರೋ, ಅವರೇ ಈಗ ಉಸ್ತುವಾರಿಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ಹಾಸ್ಯಾಸ್ಪದವೇ ಸರಿ. ನಾಯಕರ ತಪ್ಪುಗಳನ್ನು ಗುರುತಿಸಿ ಅದನ್ನು ಸರಿಮಾಡಬೇಕಾಗಿರುವ ಕಾರ್ಯಕರ್ತರು, ಸಮರ್ಥಿಸಿಕೊಳ್ಳುವ ಇರಾದೆ ತೋರಿಸುತ್ತಿರುವುದು ಜಿಲ್ಲಾ ಕಾಂಗ್ರೆಸ್‌ನ ದಯನೀಯ ಸ್ಥಿತಿಯೂ ಹೌದು. 

ರಾಜ್ಯದ ಅಧಿಕಾರರೂಢ ಕಾಂಗ್ರೆಸ್ ಸರ್ಕಾರ ಆಂತರಿಕ ಕಚ್ಚಾಟದಲ್ಲಿಯೇ ಮುಳುಗಿದ್ದು, ರಾಜ್ಯದ ಪ್ರಗತಿಯನ್ನು ಮರೆತಿದೆ. ಆಡಳಿತ ನಿಷ್ಕ್ರಿಯಗೊಂಡಿದೆ. ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಬೇಕು. ಆದರೆ ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟಗಳಲ್ಲಿ ನಡೆಯಬೇಕಾದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳು ನಡೆದೇ ಇಲ್ಲ. ಖಾಸಗಿ ಕಾರ್ಯಕ್ರಮಗಳಿಗೆ ಸರಿಯಾದ ಸಮಯಕ್ಕೆ ಹಾಜರಿರುವ ಉಸ್ತುವಾರಿಗಳು ಈ ಬಗ್ಗೆ ಗಮನವೇ  ಕೊಟ್ಟಿಲ್ಲ.

ಮಳೆಗಾಲ ಬಂದರೇ, ಹತ್ತಿರದ ಸಮುದ್ರ ತೀರಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಒಂದು ಫೋಟೋ ತೆಗೆಸಿಕೊಂಡರೇ ಉಸ್ತುವಾರಿಗಳ ಪರಿಶೀಲನೆ ಮುಗಿಯಿತು. ಜಿಲ್ಲೆಯಾದ್ಯಂತ ತೀವ್ರ ಮಳೆಯಾಗುತ್ತಿದೆ. ಕೆಲವೆಡೆ ನೆರೆ ಸೃಷ್ಟಿಯಾಗಿದೆ. ನೆರೆ ಪರಿಹಾರವೂ ಸರಿಯಾಗಿ ವಿನಿಯೋಗವಾಗುತ್ತಿಲ್ಲ. ಸರ್ಕಾರವೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಉಡುಪಿ ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಬೆಳೆಹಾನಿ ಮತ್ತು ಬೈಂದೂರು, ಕಾರ್ಕಳ, ಕುಂದಾಪುರ, ಹೆಬ್ರಿ ತಾಲೂಕುಗಳ ಸಮಸ್ಯೆಗಳ ಬಗ್ಗೆ ಅರಿವೇ ಇಲ್ಲವೇನೋ, ಮಳೆಗಾಲ ಬಂತೆಂದರೇ ಈ ಭಾಗಗಳಲ್ಲಿ ಜನಜೀವನ ಹೈರಾಣಾಗುತ್ತದೆ. ಎಷ್ಟೋ ತಗ್ಗು ಪ್ರದೇಶಗಳಲ್ಲಿ ನೆರೆಯಿಂದ ಊರಿಗೆ ಊರೇ ಮುಳುಗಿ ಹೋಗುತ್ತವೆ. ನೂರಾರು ಕಡೆಗಳಲ್ಲಿ ಉಕ್ಕಿ ಹರಿಯುವ ಹಳ್ಳ, ತೊರೆಗಳಿಗೆ ಸುಸಜ್ಜಿತ ಕಾಲುಸಂಕವೇ ಇಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಶಾಸಕರು, ಅಧಿಕಾರಿಗಳು ಉಸ್ತುವಾರಿಗಳಿಗೆ ತಿಳಿಸಿರಲಿಕ್ಕಿಲ್ಲ. ಉಸ್ತುವಾರಿ ಸಚಿವರೂ ಈ ಬಗ್ಗೆ ಕೇಳಿ ಮಾಹಿತಿ ಪಡೆದಿರಲಿಕ್ಕಿಲ್ಲ. ಅಧಿಕಾರಿಗಳ ವೈಫಲ್ಯ, ಶಾಸಕರ ವೈಫಲ್ಯವನ್ನು ಸಮರ್ಥವಾಗಿ ಪ್ರಶ್ನಿಸಬೇಕಾಗಿರುವ ಕಾಂಗ್ರೆಸ್‌ ತಾನು ಮಾಡಬೇಕಿರುವ ಪ್ರಾಥಮಿಕ ಕೆಲಸವನ್ನೂ ಸರಿಯಾಗಿ ಮಾಡದೇ ಜಿಲ್ಲೆಯಲ್ಲಿ ಮೂಲೆಗೆ ಸರಿಯುತ್ತಿರುವುದು ವಿಷಾದನೀಯವೇ ಸರಿ.     

ಇನ್ನು, ಎಲ್ಲಾ ತಾಲೂಕುಗಳಲ್ಲಿ ಕೆಡಿಪಿ ರಚನೆಯಾಗಿದೆ. ಈವರೆಗೆ ಒಂದೇ ಒಂದು ಕೆಡಿಪಿ ಸಭೆ ಕರೆದಿಲ್ಲ. ಜಿಲ್ಲಾ ಮಟ್ಟದಲ್ಲಿಯೂ ಕೆಡಿಪಿ ಸಭೆಯಾಗಿಲ್ಲ. ಉಸ್ತುವಾರಿಗಳ ಮೇಲೆ ಸ್ವಪಕ್ಷೀಯರ ಮುನಿಸು ಇಲ್ಲಿ ಉಪಶಮನವಾಗುವ ಹಾಗೆ ಕಾಣಿಸುತ್ತಿಲ್ಲ, ಕಾಂಗ್ರೆಸ್‌ ಕೂಡ ಚೇತರಿಸಿಕೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ.   

-ಶ್ರೀರಾಜ್‌ ವಕ್ವಾಡಿ

Wednesday, July 17, 2024

ನಿರಾಸೆ ಮೂಡಿಸಿದ ರಾಜ್ಯ ಕಾಂಗ್ರೆಸ್‌ ಸರ್ಕಾರ

 


ಬಹುಮತದಿಂದ ಗೆದ್ದು ಸಮರ್ಥ ಆಡಳಿತ ನೀಡುವಲ್ಲಿ ಸೋತ ಕಾಂಗ್ರೆಸ್‌ !

 ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ಗೆ ಅಧಿಕಾರ ನೀಡುವುದರ ಹಿಂದೆ ಮತದಾರರ ಸ್ಪಷ್ಟ ಸಂದೇಶವಿದ್ದಿತ್ತು. ಭ್ರಷ್ಟಾಚಾರ, ಸಾರ್ವಜನಿಕ ಸಂಘರ್ಷದಿಂದ ನಾಡಿನ ಜನತೆ ಮುಕ್ತಿಯನ್ನು ಬಯಸಿದ್ದರು. ಇನ್ನೂ ನಿಖರವಾಗಿ ಹೇಳಬೇಕು ಎಂದರೇ, ಸ್ವಾಸ್ಥ್ಯ ಸಮಾಜದ ಬೇಡಿಕೆ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯಬೇಕು ಎಂದು ಮತಹಾಕಿದವರದ್ದಾಗಿತ್ತು. 

ಕಾಂಗ್ರೆಸ್‌ ಬಗ್ಗೆ ಬಹಳ ದೊಡ್ಡ ನಿರೀಕ್ಷೆಯಿಟ್ಟುಕೊಂಡೇ ಜನರು ಅಧಿಕಾರಕ್ಕೇರಿಸಿದ್ದರು. ಅಧಿಕಾರ ವಹಿಸಿಕೊಂಡ ಒಂದು ವರ್ಷದೊಳಗೆ ಕಾಂಗ್ರೆಸ್‌ ಸರ್ಕಾರ ಎರಡು ದೊಡ್ಡ ಭ್ರಷ್ಟಾಚಾರದ ಪ್ರಕರಣಗಳನ್ನು ಎದುರಿಸುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಹಾಗೂ ಮೈಸೂರಿನ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ವ್ಯಾಪಕ ಅಕ್ರಮಗಳ ಪ್ರಕರಣ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಬಹುಮತದಿಂದ ಅಧಿಕಾರಕ್ಕೇರಲೇಬೇಕೆಂಬ ದೃಷ್ಟಿಯಲ್ಲಿ ಬಿಜೆಪಿ ಈ ಎರಡೂ ಪ್ರಕರಣಗಳ ವಿರುದ್ಧ ದೊಡ್ಡ ಹೋರಾಟವನ್ನೇ ಆರಂಭಿಸಿದೆ. ವಿಧಾನಮಂಡಲ ಅಧಿವೇಶನದಲ್ಲೂ ಬಿಜೆಪಿ ಈ ಪ್ರಕರಣಗಳನ್ನೇ ಎತ್ತುತ್ತಿದೆ.

ಬಿಜೆಪಿ ಸರ್ಕಾರದ ವಿರುದ್ಧ  ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ವಸೂಲಾತಿ, ಬಿಟ್ ಕಾಯಿನ್ ಹಗರಣಗಳ ಬಗ್ಗೆ ತೀವ್ರ ಟೀಕಾಸ್ತ್ರ ಬಳಸಿ, ಚುನಾವಣೆಗೆ ಅವನ್ನೇ ಮುಖ್ಯಾಸ್ತ್ರಗಳನ್ನಾಗಿ ಬಳಸಿಕೊಂಡು ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಒಂದು ವರ್ಷದ ಅವಧಿ ಪೂರ್ಣಗೊಂಡ ಸಂದರ್ಭದಲ್ಲೇ ಈ ಎರಡು ಹಗರಣಗಳು ನುಂಗಲಾರದ ತುತ್ತಾಗಿ ಪರಿಣಮಿಸಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ರಾಜಕೀಯ ವಿದ್ಯಮಾನ ಅನೇಕ ಅನಿರೀಕ್ಷಿತ ಬೆಳವಣಿಗೆಗಳಿಗೆ ಸಾಕ್ಷಿಯಾದರೂ ಆಶ್ಚರ್ಯವೇನಿಲ್ಲ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಬಿಜೆಪಿ ವಿರೋಧ ಪಕ್ಷದಲ್ಲಿದ್ದು, ತನ್ನ ಪಾತ್ರವನ್ನು ತಾನು ಬಹಳ ಸಮರ್ಥವಾಗಿಯೇ ನಿಭಾಯಿಸುತ್ತಿದೆ ಎಂದರೇ ತಪ್ಪಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಹಿಡಿದಿದ್ದು ಇದ್ದರೇ, ಅದು ಜನಾದೇಶವನ್ನು ಮೀರಿಯೇ ಹೊರತು, ಬಹುಮತವನ್ನು ಪಡೆದು ಅಧಿಕಾರ ಹಿಡಿದ ಉದಾಹರಣೆಯೇ ಈ ರಾಜ್ಯದ ರಾಜಕೀಯ ಇತಿಹಾಸದಲ್ಲಿಲ್ಲ. ಏನೇ ಆದರೂ, ಅಧಿಕಾರ ಹಿಡಿದಾಗ ಬಿಜೆಪಿ ತನ್ನ ಆಡಳಿತ ರೂಪುರೇಷೆಗಳ ಬಗ್ಗೆ ಸ್ಪಷ್ಟತೆಯನ್ನು ಹೊಂದಿತ್ತು. ವಿರೋಧ ಪಕ್ಷದಲ್ಲಿದ್ದಾಗ ಆಡಳಿತ ಪಕ್ಷದ ತಪ್ಪನ್ನು ಸಮರ್ಥವಾಗಿಯೇ ಟೀಕಿಸಿತ್ತು. ಈಗ ಪ್ರಬುದ್ಧತೆಯನ್ನು ಕಳೆದುಕೊಂಡಿರುವುದು ಬೇರೆ ವಿಷಯ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ರಾಜಕೀಯ ದೊಡ್ಡ ಅಭಿಯಾನವನ್ನೇ ಸೃಷ್ಟಿಸಿ ಚುನಾವಣೆಯನ್ನು ಗೆದ್ದ ಕಾಂಗ್ರೆಸ್‌ನ ಪರಿಸ್ಥಿತಿ ಈಗ ʼಬೇಲಿಯೇ ಎದ್ದು ಹೊಲೆ ಮೇಯ್ದಂತಾಗಿದೆʼ.

ರಾಜಕೀಯದ ಹಣೆಬರಹವೇ ಅಷ್ಟೇ ಬಿಡಿ. ಆಡಳಿತ ಪಕ್ಷದಲ್ಲಿರುವವರು ತಪ್ಪು ಮಾಡಿದಾಗ ವಿರೋಧ ಪಕ್ಷದಲ್ಲಿರುವವರು ಆಡಳಿತದ ತಪ್ಪನ್ನು ಎತ್ತಿಹಿಡಿದು ಹೋರಾಟ ಮಾಡುತ್ತಾರೆ. ವಿರೋಧ ಪಕ್ಷದಲ್ಲಿರುವವರಿಗೆ ಮತ್ತೆ ಅಧಿಕಾರದ ಯೋಗ ಮತದಾರ ಕಲ್ಪಿಸಿಕೊಡುತ್ತಾನೆ. ಚುನಾವಣೆಯಲ್ಲಿ ಗೆದ್ದು ಆಡಳಿತವನ್ನು ಹಿಡಿಯುವ ಪಕ್ಷ ಮತ್ತದೆ ತಪ್ಪನ್ನು ಮಾಡುತ್ತದೆ. ಹೀಗೆ ರಾಜಕೀಯದಲ್ಲಿ ಈ ಪದ್ಧತಿ ಸರ್ವೇಸಾಮಾನ್ಯ.

ಕಾಂಗ್ರೆಸ್‌ನ ಆಂತರಿಕ ಅಸಮಾಧಾನದ ಬೆಳವಣಿಗೆಗಳ ನಡುವೆ ಈ ಎರಡು ಪ್ರಕರಣಗಳು ಪ್ರತಿಪಕ್ಷಗಳಿಗೆ ಸುಲಭವಾಗಿ ಸಿಕ್ಕ ಸರಕಾಗಿವೆ. ಕಾಂಗ್ರೆಸ್‌ ಒಳಗಿನ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಎದ್ದ ಧ್ವನಿಗಳು ಕಾಂಗ್ರೆಸ್‌ ಆಡಳಿತದಲ್ಲಿ ಹಳಿತಪ್ಪುತ್ತಿರುವುದನ್ನು ಬಯಲುಗೊಳಿಸಿತು. ನಂತರ ಬೆಳಕಿಗೆ ಬಂದ ವಾಲ್ಮೀಕಿ ನಿಗಮದಲ್ಲಿ ನಡೆದ ಬಹುಕೋಟಿ ಭ್ರಷ್ಟಾಚಾರ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅಕ್ರಮಗಳು ವಿವಾದವಾಗಿವೆ. ಎಸ್‌ಸಿ ಹಾಗೂ ಎಸ್‌ಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್‌ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ ಎಂಬ ವಿಚಾರ ರಾಜ್ಯ ಮಾತ್ರವಲ್ಲದೇ, ರಾಷ್ಟ್ರಮಟ್ಟದಲ್ಲಿಯೂ ಚರ್ಚಗೆ ಗ್ರಾಸವಾಯಿತು. ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ಕಾಂಗ್ರೆಸ್‌ ಮೇಲೆ ಮುಗಿಬಿದ್ದಿವೆ. ಕಾಂಗ್ರೆಸ್‌ ನೈತಿಕವಾಗಿ ಈ ಪ್ರಕರಣಗಳೆರಡನ್ನು ಎದುರಿಸಲಾಗದ ಸ್ಥಿತಿಯನ್ನು ಅನುಭವಿಸುತ್ತಿದೆ. ಕಾಂಗ್ರೆಸ್‌ ತನ್ನ ಆಡಳಿತವನ್ನು ಇನ್ನೂ ಅರ್ಥಮಾಡಿಕೊಂಡಿಲ್ಲ ಎಂಬಂತೆ ಕಾಣಿಸುತ್ತಿದೆ.

ಬೆಲೆ ಏರಿಕೆಯ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ ಕಾಂಗ್ರೆಸ್‌ ಸರ್ಕಾರವೇ ಪೆಟ್ರೋಲ್‌, ಡಿಸೇಲ್‌ ದರ ಏರಿಕೆ ಮಾಡಿತು. ಗ್ಯಾರಂಟಿ ಯೋಜನೆಗಳ ಅಸಮರ್ಥ ನಿರ್ವಹಣೆ ಹಾಗೂ ಬೆಲೆ ಏರಿಕೆಯನ್ನೇ ರಾಜಕೀಯಕ್ಕೆ ಬಳಸಿಕೊಳ್ಳಬೇಕು ಎಂದು ಕಾಯುತ್ತಿದ್ದ ಬಿಜೆಪಿ ಬೆಲೆ ಏರಿಕೆಯ ವಿರುದ್ಧ ಜನರಲ್ಲಿ ʼಕಾಂಗ್ರೆಸ್‌ ಜನವಿರೋಧಿ ಸರ್ಕಾರʼ ಎಂದು ಬಿಂಬಿಸುವಲ್ಲಿ ಯಶಸ್ವಿಯಾಯಿತು. ಇಂಧನ ಬೆಲೆ ಏರಿಕೆಯಿಂದ ಸರಕು ಸಾಗಾಟದ ಮೇಲೆ ನೇರ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾಂಗ್ರೆಸ್‌ ಸರ್ಕಾರಕ್ಕೆ ಈ ವಿಚಾರ ಗೊತ್ತಿಲ್ಲದ ವಿಚಾರವೇನಲ್ಲ. ಬೆಲೆ ಏರಿಕೆಯಿಂದ ರಾಜ್ಯದ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇವೆ ಎಂಬ ಸಮರ್ಥನೆಯನ್ನೂ ಕಾಂಗ್ರೆಸ್‌ ಮಾಡಿಕೊಂಡಿತ್ತು. ಅಧಿಕಾರದಲ್ಲಿ ಇಲ್ಲದೇ ಇರುವಾಗ ಇದೇ ವಿಚಾರವನ್ನು ವಿರೋಧಿಸುವುದಕ್ಕೆ ಬಳಸಿಕೊಂಡಿದ್ದ ಕಾಂಗ್ರೆಸ್‌, ಈಗ ತನ್ನನ್ನೇ ತಾನು ಸಮರ್ಥಿಸಿಕೊಂಡಿರುವುದನ್ನು ನೋಡಿರುವುದು ಹಾಸ್ಯಾಸ್ಪದವೇ ಸರಿ. ಇಂಧನ ಬೆಲೆ ಏರಿಕೆ ಅಗತ್ಯ ವಸ್ತುಗಳ ಬೆಲೆ ಏರಿಸುತ್ತದೆ. ಅದು ಬಡವರು ಮತ್ತು ಮಧ್ಯಮವರ್ಗದವರ ಜೇಬಿಗೆ ಕತ್ತರಿ ಹಾಕುತ್ತದೆ. ಅದರ ಪ್ರಮಾಣ ಎಷ್ಟು ಎನ್ನುವುದು ಅಂದಾಜಿಗೂ ಸಿಗುವುದಿಲ್ಲ. ಹಾಗಾಗಿ ಇದು ಸರ್ಕಾರದ ಸರಿಯಾದ ನಡೆಯಲ್ಲ ಎನ್ನುವುದು ಸ್ಪಷ್ಟ. ಇನ್ನು, ಈ ನಡುವೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ವರ್ಗಾವಣೆಯನ್ನು ‘ದಂಧೆ’ಯ ಆರೋಪವೂ ಬಹಳ ದೊಡ್ಡ ಮಟ್ಟದಲ್ಲೇ ಕೇಳಿಬಂತು.  

ಹೀಗೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಒಂದು ವರ್ಷದೊಳಗೆ ಈ ರೀತಿಯ ಆಡಳಿತವನ್ನು ನೀಡುತ್ತದೆ ಎಂಬ ಊಹೆ ಆ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಮತ ಹಾಕಿದವರಲ್ಲಿಯೂ ಇದ್ದಿರಲಿಕ್ಕಿಲ್ಲ. ಹೊಸ ಸರ್ಕಾರವೊಂದು ಅಧಿಕಾರ ಹಿಡಿದಾಗ ಆ ಪಕ್ಷದಲ್ಲಿ ಆಂತರಿಕವಾಗಿ ಆಗುವ ಕೆಲವು ಬದಲಾವಣೆಗಳು ಹಾಗೂ ಆಡಳಿತದಲ್ಲಿ ಕಾಣುವ ಕೆಲವು ನಡೆಗಳು ಆ ಸರ್ಕಾರದ ಭವಿಷ್ಯವನ್ನು ಹೇಳುತ್ತದೆ. ಕಾಂಗ್ರೆಸ್ ಸರ್ಕಾರದ ಈವರೆಗಿನ ಆಡಳಿತವನ್ನು ನೋಡಿದರೆ, ರಾಜ್ಯದ ಜನ ನಿರೀಕ್ಷಿಸಿದ ಮಟ್ಟದಲ್ಲಿ ಕಾಂಗ್ರೆಸ್‌ ನಡೆದುಕೊಂಡಿಲ್ಲ ಎಂದೇ ಕಾಣಿಸುತ್ತಿದೆ. ಸಮರ್ಥನೀಯವಲ್ಲದ ಆಡಳಿತವನ್ನೇ ರಾಜ್ಯ ಕಾಂಗ್ರೆಸ್‌ ಸರ್ಕಾರ ರಾಜ್ಯದ ಜನರಿಗೆ ತೋರಿಸಿದೆ.

ಬಿಜೆಪಿ ಸರ್ಕಾರದ ಅಧಿಕಾರವಧಿಯಲ್ಲಿ ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ದಂಧೆಯು ಸೇರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲಾ ಭ್ರಷ್ಟಾಚಾರಗಳ ತನಿಖೆ ನಡೆಸುತ್ತೇವೆ ಎಂದು ಹೇಳಿದ ಕಾಂಗ್ರೆಸ್‌ ಈಗ ಭ್ರಷ್ಟಾಚಾರದ ಆರೋಪದ ಸುಳಿಯಲ್ಲಿ ಸಿಲುಕಿರುವುದು ದುರಂತವೇ ಸರಿ. ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್‌ ಕುಮಾರ್‌ ಅವರ ನೇತೃತ್ವದಲ್ಲಿ ನಡೆದಿದೆ ಎನ್ನಲಾಗುತ್ತಿರುವ ನಕಲಿ ಪರಶುರಾಮ ಮೂರ್ತಿ ಹಾಗೂ ಥೀಂ ಪಾರ್ಕ್‌ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣಗಳ ಬಗ್ಗೆ ಸ್ಥಳೀಯ ಹೋರಾಟಗಾರರು ಧ್ವನಿ ಎತ್ತಿದ ಕಾರಣ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾಯಿತು, ಕಾಂಗ್ರೆಸ್‌ ಸರ್ಕಾರ ತನಗೆ ಈ ಬಗ್ಗೆ ಅರಿವೇ ಇಲ್ಲವೆಂಬಂತೆ ವರ್ತಿಸಿತು. ಕಾಟಾಚಾರಕ್ಕೆ ಈಗ ಸಿಒಡಿ ತನಿಖೆಗೆ ಒಪ್ಪಿಸಿದೆ. ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಗಮನವೂ ನೀಡಿಲ್ಲ. ಇವನ್ನೆಲ್ಲಾ ಅಸಮರ್ಥನೀಯ ನಡೆ ಎನ್ನದೆ ಮತ್ತೇನೆಂದು ಹೇಳಬೇಕು ? ಇಲಾಖೆಗಳು ನಿದ್ರೆಗೆ ಜಾರಿವೆ, ಪ್ರಗತಿ ಪರಿಶೀಲನಾ ಸಮಿತಿ ಕೆಡಿಪಿ ಇದೆಯೇ ಇಲ್ಲವೋ ಎನ್ನುವುದನ್ನು ನೋಡಬೇಕಿದೆ. ಇಷ್ಟಾಗ್ಯೂ ಕಾಂಗ್ರೆಸ್‌ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಿರುವುದನ್ನು ನೋಡಿದರೇ, ಪ್ರಜಾಪ್ರಭುತ್ವದ ಅಣಕದಂತೆ ತೋರುತ್ತಿದೆ.

-ಶ್ರೀರಾಜ್‌ ವಕ್ವಾಡಿ   

 

Thursday, July 11, 2024

ಪ್ರಜಾಪ್ರಭುತ್ವದ ಧ್ವನಿಗೆ ಒಲಿಯಬಹುದೇ ʼರಾಗಾʼ !?

 ಮೋದಿಗೆ ಪ್ರಬಲ ʼಛಾಯಾ ಪಿಎಂʼ  

ಯಾವುದೇ ಸರ್ಕಾರದಲ್ಲಿ ಪ್ರತಿಪಕ್ಷಗಳು ನಿರ್ವಹಿಸಬೇಕಾದ ಬಹಳ ಮುಖ್ಯ ಪಾತ್ರವೆಂದರೆ ಪರಿಣಾಮಕಾರಿ ಹಾಗೂ ಬಲವಾದ ಟೀಕೆ. ಸರ್ಕಾರದ ಸುಗಮ ಕಾರ್ಯನಿರ್ವಹಣೆಯಲ್ಲಿ ವಿರೋಧ ಪಕ್ಷ ಪ್ರಮುಖ ಜವಾಬ್ದಾರಿಯುತ ಪಾತ್ರ ನಿಭಾಯಿಸುತ್ತದೆ. ಪ್ರಸ್ತುತ ಸರ್ಕಾರವನ್ನು ಅದರ ನೀತಿಗಳಿಗೆ ಹೊಣೆಗಾರರನ್ನಾಗಿ ಮಾಡಲು ಪ್ರತಿಪಕ್ಷ ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತದೆ. ದುರ್ಬಲ ಪ್ರತಿಪಕ್ಷವಿದ್ದರೆ, ಆಡಳಿತ ಪಕ್ಷ ಶಾಸಕಾಂಗದ ಮೇಲೆ ಮುಕ್ತ ಆಳ್ವಿಕೆಯನ್ನು ಹೊಂದಿರುತ್ತದೆ, ಇದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಸೂಕ್ತವಾದುದ್ದಲ್ಲ.  

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿ ಟಿಡಿಪಿ ಹಾಗೂ ಜೆಡಿಯು ಪಕ್ಷಗಳ ಸಹಾಯದಿಂದ ಸರ್ಕಾರ ರಚನೆ ಮಾಡಬೇಕಾಗಿ ಬಂತು. ಪ್ರಧಾನಿ ನೇತೃತ್ವದ ಬಿಜೆಪಿಗೆ ಇದು ದೊಡ್ಡ ಹಿನ್ನಡೆಯೇ ಸರಿ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತ ದೇಶದ ಜನಸ್ನೇಹಿಯಾಗಿರಲಿಲ್ಲ ಎನ್ನುವ ರಾಜಕೀಯ ಚರ್ಚೆಗಳಿವೆ. ಅದೇನೇ ಇರಲಿ ಬಿಡಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು, ಆಡಳಿತ ವೈಫಲ್ಯವನ್ನು ಒಳಗೊಂಡು ನಾಗರಿಕ ಸಂಘರ್ಷಗಳು ಈ ಸರ್ಕಾರದ ಆಡಳಿತ ಹೇಗಿತ್ತು ಎನ್ನುವುದಕ್ಕೆ ಹಿಡಿದ ಕನ್ನಡಿ. ಒಂದು ಸರ್ಕಾರದ ಆಡಳಿತದಲ್ಲಿ ನಡೆದ ಜನರ ಬದುಕು ಸ್ವಾಸ್ಥ್ಯ ಕಸಿದುಕೊಳ್ಳುವ ಬೆಳವಣಿಗೆಗಳು ಆಡಳಿತ ದಕ್ಷವಾಗಿ ಇರಲಿಲ್ಲ ಎನ್ನುವುದಕ್ಕೆ ಸಾಕ್ಷಿ. ಕಳೆದ ಎರಡು ಅವಧಿಗಳಲ್ಲಿ ದೇಶ ಅನೇಕ ಗಂಭೀರ ಸಮಸ್ಯೆಗಳನ್ನು, ಆಡಳಿತ ವಿರೋಧಿ ಅಲೆಗೆ ಸಾಕ್ಷಯಾಗಿದೆ ಎನ್ನುವುದನ್ನು ಇದಕ್ಕೂ ಹೆಚ್ಚು ನಿಖರವಾಗಿ ಹೇಳುವ ಅಗತ್ಯವಿಲ್ಲ ಅನ್ನಿಸುತ್ತದೆ.

ಕಾಂಗ್ರೆಸ್‌ನಂತಹ ಅತ್ಯಂತ ಸುದೀರ್ಘ ರಾಜಕೀಯ ಅನುಭವ ಹೊಂದಿದ ಪಕ್ಷದ ಅಸಮರ್ಥ ಸಂಘಟನೆಯ ನಡುವೆಯೂ ಬಿಜೆಪಿ ಫಲಿತಾಂಶದಲ್ಲಿ ಕುಸಿದು ಬಿದ್ದಿದೆ ಎಂದರೇ, ಜನ ಬದಲಾವಣೆಯನ್ನು ನಿರೀಕ್ಷಿಸಿದ್ದರು ಎಂದೇ ಅರ್ಥೈಸಿಕೊಳ್ಳಬೇಕು. ಇನ್ನು, ಕಳೆದ ಎರಡು ಲೋಕಸಭಾ ಚುನಾವಣೆಯ ಸುತ್ತಿನಲ್ಲಿ ಸದನದ ವಿಪಕ್ಷ ಸ್ಥಾನವನ್ನು ಹೊಂದುವುದಕ್ಕೆ ಬೇಕಾದ ಒಟ್ಟು ಕ್ಷೇತ್ರಗಳ ಪೈಕಿ ಶೇ. 10 ಷ್ಟನ್ನು ಪಡೆಯದೇ ಇರುವಷ್ಟು ಕಾಂಗ್ರೆಸ್ ದುರ್ಬಲವಾಗಿತ್ತು.‌ ಆದರೇ, ಕಾಂಗ್ರೆಸ್‌ ಈಗ ಮರಳಿ ಚೇತರಿಸಿಕೊಂಡಿದೆ. ಲೋಕಸಭಾ ಸದನದ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ.

ರಾಹುಲ್‌ ಗಾಂಧಿ ಮೊದಲ ಅಧಿವೇಶನದಲ್ಲೇ ಹುರುಪಿನಲ್ಲಿರುವುದನ್ನು ತೋರಿಸಿಕೊಟ್ಟರು. ವಿಪಕ್ಷ ನಾಯಕನಾಗಿ ರಾಹುಲ್‌ ಗಾಂಧಿ ಮಾತು, ತಿರುಗೇಟು, ಸರ್ಕಾರದ ವಿರುದ್ಧ ಅವರು ಮಾಡುತ್ತಿರುವ ಟೀಕೆ ಪ್ರಜಾಸತ್ತಾತ್ಮಕವಾದ ಅತ್ಯುನ್ನತ ಮಟ್ಟದ ವಾಗ್ವಾದವೇ ಸರಿ. ನಿರ್ದಿಷ್ಟ ವಿಚಾರಗಳಲ್ಲಿ ಅವರು ಕಳೆದ ಕೆಲವು ವರ್ಷಗಳಲ್ಲಿ ವೃದ್ಧಿಸಿಕೊಂಡ ಹಿಡಿತ ನಿಜಕ್ಕೂ ಶ್ಲಾಘನೀಯ. ರಾಹುಲ್‌ ತಮಗೆ ಮತ್ತು ತಮ್ಮ ಪಕ್ಷಕ್ಕೆ ದೊರಕಿರುವ ದೊಡ್ಡ ಅವಕಾಶವನ್ನು ಸಮರ್ಥವಾಗಿಯೇ ಬಳಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಈ ಅವಕಾಶವನ್ನು ಕಳೆದುಕೊಂಡಿದ್ದ ಕಾಂಗ್ರೆಸ್‌ ಮತ್ತಷ್ಟು ಗುಣಮುಖಗೊಳ್ಳುವುದಕ್ಕೆ ಬೇಕಾಗಿ ಔಷಧಿ ನೀಡುವ ಪ್ರಯತ್ನದ ಹಾದಿಯಲ್ಲಿಯೂ ರಾಹುಲ್ ಈ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸುವುದರೊಂದಿಗೆ ಒಳ್ಳೆಯ ಆರಂಭವನ್ನೇ ಕಂಡುಕೊಂಡಿದ್ದಾರೆ.

ರಾಹುಲ್‌ ಗಾಂಧಿ ಇವತ್ತಿನ ರಾಜಕಾರಣಕ್ಕೆ ಯೋಗ್ಯನಲ್ಲ ಎಂದು ಯಾರು ಜರೆದಿದ್ದರೋ ಅವರೇ ರಾಹುಲ್‌ ಕೈ ಕುಲುಕುವ ಹಾಗೆ ಒಂದು ಸನ್ನಿವೇಶ ಎದುರಾಗಿದ್ದು ಈ ದೇಶ ಕಂಡ ರಾಜಕೀಯದ ಅಚ್ಚರಿ ಅದು. ರಾಹುಲ್‌ ಪಾಲಿಗೆ ರಾಜಕೀಯ ಹೆಚ್ಚು ಶ್ರಮ ಬೇಡಿದೆ. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಖಂಡಿತ ರಾಹುಲ್‌ಗೆ ಸಾಧ್ಯವಿಲ್ಲ. ಅದನ್ನು ಅವರು ಚೆನ್ನಾಗಿ ಅರಿತಂತೆ ಕಾಣಿಸುತ್ತಿದೆ. ಬಹುಶಃ ರಾಹುಲ್‌ ಗಾಂಧಿಗೆ ಕಳೆದ ಹತ್ತು ವರ್ಷಗಳಲ್ಲಿ ಅವರ ವಿರುದ್ಧವಿರುವ ಪಕ್ಷ ಸೃಷ್ಟಿಸಿದ ʼಗಂಭೀರ ರಾಜಕಾರಣಿ ಅಲ್ಲʼ ಎಂಬ ಹಣೆಪಟ್ಟಿಯನ್ನು ಕಳಚಿಟ್ಟಿದ್ದಾರೆ ಎನ್ನುವುದಕ್ಕೆ ಅವರು ಲೋಕಸಭೆಯ ಮೊದಲ ಅಧಿವೇಶನದಲ್ಲಿ ಮಾತನಾಡಿದ್ದೆ ಸಾಕ್ಷಿ.

ವಿಪಕ್ಷ ನಾಯಕನಾಗಿ ನೆರೆಪೀಡಿತ ಅಸ್ಸಾಂನ ನಿರಾಶ್ರಿತರ ಶಿಬಿರಕ್ಕೆ ಭೇಟಿ, ಹತ್ರಾಸ್‌ ಭೀಕರ ಕಾಲ್ತುಳಿತ ನಡೆದ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸಂತ್ರಸ್ತರಿಗೆ ಸಾಂತ್ವಾನ, ಮಣಿಪುರದ ಸಂತ್ರಸತರೊಂದಿಗೆ ರಾಹುಲ್‌ ನಡೆಸಿದ ಸಂವಾದಗಳೆಲ್ಲವೂ ಒಬ್ಬ ಪ್ರಧಾನಿಯಾಗಿ ಮಾಡಬೇಕಾಗಿರುವ ಕೆಲಸ. ಲೋಕಸಭೆಯ ವಿಪಕ್ಷ ನಾಯಕನನ್ನು ʼಛಾಯಾ ಪಿಎಂʼ ಎಂದೂ ಕರೆಯುತ್ತಾರೆ. ರಾಹುಲ್‌ ʼಛಾಯಾ ಪಿಎಂʼ ಆಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅಂತಂದುಕೊಳ್ಳಬಹುದೇನೋ.   

ಬಹುಶಃ ಅವಕಾಶದ ಹುರುಪಿನಲ್ಲಿ ರಾಹುಲ್‌ ತಮ್ಮ ಸ್ಥಾನದ ಗೌರವವನ್ನು ಮರೆಯದೆ ನಡೆದುಕೊಳ್ಳಬೇಕಷ್ಟೆ. ಸದನದಲ್ಲಿ ವೈಯಕ್ತಿಕ ಪಕ್ಷವೊಂದು ವಿಪಕ್ಷ ಮಾನ್ಯತೆ ಪಡೆಯದೆ ಹೇಳಹೆಸರಿಲ್ಲದಂತಿದ್ದ ಎರಡು ಅವಧಿಯ ಬರವನ್ನು ಕಾಂಗ್ರೆಸ್‌ ಈಗ ನೀಗಿಸಿಕೊಂಡಿದೆ. ಇಲ್ಲಿನ ಜನರ ಧ್ವನಿಯಾಗಿ ನಿಂತು ಈ ದೇಶ ಇತ್ತೀಚಿನ ವರ್ಷಗಳಲ್ಲಿ ಸಂಸತ್ತು ಕಂಡ ಪ್ರಬಲ ವಿಪಕ್ಷ ನಾಯಕನಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಸದನದಲ್ಲಿ ಅವರು ವಿಷಯಪೂರ್ಣವಾಗಿ ಮಾತನಾಡಿರುವುದನ್ನು ನೋಡಿದರೆ ಸ್ಪಷ್ಟವಾಗುತ್ತದೆ.

ರಾಹುಲ್‌ ಮುಂದೆ ಇನ್ನೂ ಸುದೀರ್ಘವಾದ ದಾರಿ ಇದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತರುವುದಕ್ಕೆ ಹೊರಟಿರುವ ʼಒಂದು ದೇಶ, ಒಂದು ಚುನಾವಣೆʼಯಂತಹ ಯೋಜನೆಗಳಿಗೆ ಈಗಾಗಲೇ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ ʼಜಾರಿಗೊಳಿಸಬಹುದುʼ ಎಂಬ ಶಿಫಾರಸ್ಸು ನೀಡಿದೆ. ಕ್ಷೇತ್ರ ಪುನರ್‌ ವಿಂಗಡನೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಂತಹ ವಿಷಯಗಳನ್ನು ರಾಹುಲ್‌ ಸಮರ್ಥವಾಗಿ ಎದುರಿಸಬೇಕಾಗಿದೆ. ಇಂತಹ ವಿವಾದಾತ್ಮಕ ವಿಷಯಗಳನ್ನು ಸಂಸತ್ತಿನಲ್ಲಿ ತಾರ್ಕಿಕ ಅಂತ್ಯ ಕಾಣುವಂತೆ ಮಾಡುವಲ್ಲಿ ರಾಹುಲ್‌ ಪಾತ್ರ ನಿರ್ಣಾಯಕವಾಗಲಿದೆ. ರಾಹುಲ್‌ ಸಾಮರ್ಥ್ಯವನ್ನು ಪ್ರಶ್ನಿಸಿದವರು ಈಗ ರಾಹುಲ್‌ ಮಾತಿಗೆ ಸಂಸತ್ತಿನಲ್ಲಿ ಕಿವಿಕೊಡಲೇ ಬೇಕಿದೆ ಎನ್ನುವುದು ಹತ್ತು ವರ್ಷಗಳ ಬಳಿಕ ಈ ದೇಶದ ರಾಜಕೀಯದಲ್ಲಿ ಆದ ಅಚ್ಚರಿಯ ಬೆಳವಣಿಗೆ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಇದು ರಾಹುಲ್‌ ಗಾಂಧಿ ʼಪಪ್ಪು ಟು ಸಮರ್ಥʼ ಆದ ಬಗೆ. ಸರ್ಕಾರದ ನಡೆಯನ್ನು ಟೀಕೆ ಮಾಡುವುದನ್ನು ದೇಶದ್ರೋಹ ಎಂದು ಹೇಳುವ ಸ್ಥಿತಿಯ ಬೌದ್ಧಿಕ ಬಡತನವನ್ನು ಈ ದೇಶ ಕಂಡ ಕಾಲದಲ್ಲಿ ನಾವೆಲ್ಲಾ ಬದುಕಿದ್ದೇವೆ. ಒಬ್ಬ ಪ್ರಧಾನಿಗೆ ಈ ದೇಶದ ಸಮಸ್ಯೆಗಳನ್ನು ಹೋಗಲಾಡಿಸುವ ಪ್ರಾಮಾಣಿಕ ಬಯಕೆ ಇಲ್ಲವೇ ಇಲ್ಲ ಎನ್ನುವುದನ್ನು ಹೇಳುವಷ್ಟು ಯಾರಾದರು ಎದೆಗಾರಿಕೆ ವೃದ್ಧಿಸಿಕೊಂಡಿದ್ದಾರೆ ಎನ್ನುವುದಿದ್ದರೇ ಅದು ರಾಹುಲ್‌ ಗಾಂಧಿ ಮಾತ್ರ. ರಾಹುಲ್‌ ಅವರನ್ನು ಸುಖಾಸುಮ್ಮನೆ ಹೊಗುಳುವ ಅಗತ್ಯವೇನಿಲ್ಲ. ಆದರೇ, ಪ್ರಜಾಪ್ರಭುತ್ವ ದೇಶದಲ್ಲಿ ಒಬ್ಬ ವಿಪಕ್ಷ ನಾಯಕ ಇಲ್ಲಿನ ಸಮಸ್ಯೆಗಳನ್ನು ಧ್ವನಿಸುತ್ತಿರುವಾಗ ಅದನ್ನು ಬೆಂಬಲಿಸುವುದು ಎಲ್ಲಾ ನಾಗರಿಕನ ಕರ್ತವ್ಯವೂ ಹೌದು. ಸರ್ಕಾರ ತಪ್ಪು ದಾರಿಯಲ್ಲಿ ನಡೆಯದಂತೆ ನೋಡಿಕೊಳ್ಳುವುದಕ್ಕೆ ವಿಪಕ್ಷ ನಾಯಕನಿಗೆ ಎಷ್ಟು ಜವಾಬ್ದಾರಿ ಇದೆಯೋ ಇಲ್ಲಿನ ನಾಗರಿಕರಿಗೂ ಅಷ್ಟೇ ಜವಾಬ್ದಾರಿ ಇದೆ. ಹಾಗಿದ್ದಾಗ ಇಲ್ಲಿನ ಸಮಸ್ಯೆಗಳ ಬಗ್ಗೆ ವಿಪಕ್ಷ ನಾಯಕನೊಬ್ಬ ಧ್ವನಿ ಎತ್ತುತ್ತಿರುವಾಗ ನಾಗರಿಕರು ಬೆಂಬಲಿಸದೇ ಉಳಿದರೆ ?  

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ತನ್ನ ರಾಜಕೀಯ ತಂತ್ರಗಾರಿಕೆಯಲ್ಲಿ ಸೋತಿರಬಹುದು. ಆದರೇ, ತಾತ್ವಿಕ ನೆಲೆಗಟ್ಟಿನಲ್ಲಿ, ವೈಚಾರಿಕ ಚಿಂತನೆಗಳೊಂದಿಗೆ ರಾಹುಲ್ ನಡೆಯುತ್ತಿರುವ ದಾರಿ ಈ ದೇಶದ ಗೆಲುವಿನ ದಾರಿ ಎಂಬ ಅಭಿಪ್ರಾಯವನ್ನು ಅಲ್ಲಗಳೆಯುವಂತಿಲ್ಲ. ಜನತಾ ಪಕ್ಷದ ಸರ್ಕಾರದ ಎದುರು ಕಾಂಗ್ರೆಸ್‌ನ ಸಿ.ಎಂ. ಸ್ಟೀಫನ್‌, ಕಾಂಗ್ರೆಸ್‌ ಸರ್ಕಾರದ ಎದುರು ಬಿಜೆಪಿಯ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಸುಷ್ಮಾ ಸ್ವರಾಜ್‌ ನಂತವರು ಸಮರ್ಥವಾಗಿ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದನ್ನು ನೋಡಿದ್ದೇವೆ, ಓದಿ/ಕೇಳಿ ತಿಳಿದುಕೊಂಡಿದ್ದೇವೆ. ಅಂತಹ ಸಮರ್ಥ ವಿಪಕ್ಷ ನಾಯಕರ ಸಾಲಿಗೆ ರಾಹುಲ್‌ ಸೇರಲಿ ಎನ್ನುವುದೇ ಈ ದೇಶದ ನಾಗರಿಕರ ಆಶಯ. ಕಾಂಗ್ರೆಸ್‌ ಪಕ್ಷದ ಆಶಯವೂ ಅದೇ ಆಗಿದೆ ಅಂತನ್ನಿಸುತ್ತದೆ.  

-ಶ್ರೀರಾಜ್‌ ವಕ್ವಾಡಿ