Friday, August 6, 2021

ಬೊಮ್ಮಾಯಿ ಸಂಪುಟ ಕೇವಲ ಸಮಾಧಾನದ ಪರಿಹಾರ..!

 


ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ರಾಜ್ಯ ಬಿಜೆಪಿ ಸರ್ಕಾರದ ನೊಗ ಹೊತ್ತುಕೊಂಡ ಬಸವರಾಜ ಬೊಮ್ಮಾಯಿ ಅವರಿಗೆ ನೊಗ ಭಾರವಾಗಿದ್ದಂತೂ ಸ್ಪಷ್ಟವಾಗಿ ಕಾಣಿಸುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಎಲ್ಲಿಯೂ ಇಲ್ಲದ ಮಹತ್ತರವಾದ ಬದಲಾವಣೆ ಆಗುತ್ತದೆ ಎಂಬ ದೊಡ್ಡ  ನಿರೀಕ್ಷೆಗಳೆಲ್ಲಾ ಹುಸಿ ಆಗಿ ಹೋಗಿವೆ. 

ರಾಜ್ಯ ಸರ್ಕಾರದ ಸಚಿವ ಸಂಪುಟ ಹೇಗಾಗಿದೆ ಎಂದರೇ, ಹಿರಿತನ, ಸಮುದಾಯಗಳ ಮಾನದಂಡದಲ್ಲಿ ನೀಡಿದ ಸಮಾಧಾನದ ಪರಿಹಾರದಂತಾಗಿದೆ. ಬಿಜೆಪಿ ಹೈಕಮಾಂಡ್ ಗೆ ಕರ್ನಾಟಕದ ಬಿಜೆಪಿ ನಾಯಕರನ್ನು ಸಮಾಧಾನ ಪಡಿಸುವುದೇ ಒಂದು ರೀತಿಯಲ್ಲಿ ಮೂಲಮಂತ್ರದಂತಾಗಿದೆ. ಅತ್ತ ಯಡಿಯೂರಪ್ಪರವರನ್ನು ಮೂಲೆಗುಂಪು ಮಾಡುವುದಕ್ಕೆ ಸಾಧ್ಯವಿಲ್ಲದೇ ಅವರನ್ನು ಸಮಾಧಾನ ಪಡಿಸುವುದರಲ್ಲೇ ಹೈಕಮಾಂಡ್ ಜಾಣತನದ ಪರಿಹಾರ ಒದಗಿಸಿದೆ. 

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಕರ್ನಾಟಕ ಬಿಜೆಪಿಗೆ ಪಿತಾಮಹ ಇದ್ದ ಹಾಗೆ. ಯಡಿಯೂರಪ್ಪ ಅವರಿಗೆ ಸಮನಾದಂತಹ ನಾಯಕ ಬಿಜೆಪಿ ಕರ್ನಾಟಕದಲ್ಲಿ ಇಲ್ಲದಿರುವುದರಿಂದ ಯಡಿಯೂರಪ್ಪರನ್ನು ಬದಿಗೊತ್ತಿ ಪಕ್ಷ ಬೆಳೆಸುತ್ತೇವೆ ಎಂದರೇ, ದಕ್ಷಿಣ ಭಾರತದಲ್ಲಿಯೇ ಬಿಜೆಪಿ ದೊಡ್ಡ  ಆಘಾತ ಕಾಣಬೇಕಾಗುತ್ತದೆ ಎಂಬ ಭಿತಿಯಲ್ಲಿಯೇ ಹೈಕಮಾಂಡ್ ಜಾಣತನ ತೋರಿಸಬೇಕಾದ ಸ್ಥಿತಿಯಲ್ಲಿದೆ. ಅತ್ತ ಕೋಲು ಮುರಿಯಬಾರದು, ಇತ್ತ ಹಾವು ಸಾಯಬಾರದು ಹಾಗಾಗಿದೆ ಬಿಜೆಪಿ ಹೈಕಮಾಂಡ್ ಕಥೆ. 

ಅಳೆದು ತೂಗಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಅತೃಪ್ತ ಬಿಜೆಪಿ ನಾಯಕರ ಅಸಮಾಧಾನದ ಕಿಡಿ ರಾಜ್ಯ ಬಿಜೆಪಿ ವಲಯದಲ್ಲಿ ಜೀವ ಪಡೆದಿದ್ದು, ಸರ್ಕಾರದ ಅಸ್ತಿತ್ವದ ಮೇಲೆ ದೊಡ್ಡ ಪ್ರಶ್ನೆಯೆಬ್ಬಿಸಿದೆ. ಇದುವರೆಗೆ ಪೂರ್ಣ ಬಹುಮತ ಇಲ್ಲದೇ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಮಾಡಿರುವುದರಿಂದ ಸರ್ಕಾರ ರಚನೆಯಲ್ಲಿ ಸಹಕರಿಸಿದ ಎಲ್ಲರಿಗೂ ಕೊಟ್ಟಿದ್ದ ಮಾತು ಉಳಿಸಿಕೊಳ್ಳುವ ಜವಾಬ್ದಾರಿ ಬಿ. ಎಸ್ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಬೊಮ್ಮಾಯಿ ಮೇಲೆ ಇತ್ತು ಎನ್ನುವುದು ಈಗ ಸಚಿವ ಸಂಪುಟದಲ್ಲಿ ಮತ್ರಿಗಿರಿ ಪಡೆದ ವಲಸಿಗರ ಪಟ್ಟಿ ನೋಡಿದರೆ ತಿಳಿಯುತ್ತದೆ. 

ಹೈಕಮಾಂಡ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಗೆ, ಬಿ. ಎಸ್ ಯಡಿಯೂರಪ್ಪ ಅವರ ಸಲಹೆಯನ್ನು ಪಡೆಯುವುದು ಬೇಡ, ನೀವು ನಿಮ್ಮ ನೇತೃತ್ವದಲ್ಲೇ ರಾಜ್ಯದಲ್ಲಿ ಕಾರ್ಯನಿರ್ವಹಿಸಿ ಎಂದಿದ್ದರೂ, ಬೊಮ್ಮಾಯಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ವೈ ಅವರನ್ನು ‘ನಮ್ಮ ನಾಯಕರು’ ಎಂದು ಸಂಭೋದಿಸುತ್ತಿರುವುದನ್ನು ಗಮನಿಸಿದರೇ, ಯಡಿಯೂರಪ್ಪ ಅವರ ಕೈಯಲ್ಲೇ ಇನ್ನೂ ಸೂತ್ರ ಇದೆ. ಸಚಿವ ಸಂಪುಟವೂ ಬಿ. ಎಸ್ ವೈ ನಿರ್ದೇಶನದಲ್ಲಿಯೇ ನಡೆದಿದೆ ಎನ್ನುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. 

ತ್ರಿಶಂಕು ಸ್ಥಿತಿಯಲ್ಲಿ ಬೊಮ್ಮಾಯಿ : 

ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಈಗ ತ್ರಿಶಂಕು ಸ್ಥಿತಿ. ಅತ್ತ ಹೈಕಮಾಂಡ್, ಇತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಕೇಳಿಕೊಂಡೇ ಮುಂದುವರಿಯಬೇಕಾದ ಸ್ಥಿತಿ. ಒಂದು ರೀತಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಈಗಾಗಲೇ ಹಗ್ಗದ ಮೇಲೆ ನಡಿಗೆ ಆರಂಭಿಸಿದ್ದಾರೆ ಎನ್ನುವುದು ಸತ್ಯ. 

ಸಮುದಾಯ, ಜಾತಿ ಲೆಕ್ಕಾಚಾರ, ಹಿರಿತನ, ಸರ್ಕಾರದ ರಚನೆಯಲ್ಲಿ ಪಾಲು, ಪಕ್ಷ ಸಂಘಟನೆ ಹಾಗೂ ಮುಂದಿನ ವಿಧಾನ ಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ರಚನೆ ಮಾಡಲಾಗಿದೆ.  ಸರ್ಕಾರವನ್ನು ಅರ್ಧದಾರಿಯಿಂದ ಪೂರ್ಣತ್ವದೆಡೆಗೆ ಸಾಗಿಸುವ ಹೊಣೆಗಾರಿಗೆ ಬೊಮ್ಮಾಯಿ ಅವರಿಗಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ವಿಶ್ವಾಸ, ಗೌರವ ಇರಿಸಿಕೊಳ್ಳಬೇಕಾದ ಅನಿವಾರ್ಯವಿದೆ. 

ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಕೆಲವು ಸಚಿವರು ಭ್ರಷ್ಟಾಚಾರದ ಆರೋಪವನ್ನು ಹೊತ್ತಿದ್ದರು. ಆ ಎಲ್ಲಾ ಕಳಂಕದಿಂದ ಮುಕ್ತವಾಗಿ ಸರ್ಕಾರವನ್ನು ಮುನ್ನಡೆಸುವ ನೇತೃತ್ವ ಬೊಮ್ಮಾಯಿ ಅವರ ಮೇಲಿದೆ. ಹೈಕಮಾಂಡ್ ಕೂಡ ಅದೇ ಸಲಹೆಯನ್ನು ಬೊಮ್ಮಾಯಿಗೆ ನೀಡಿದ್ದಾರೆ. ಆದರೇ, ಈಗಾಗಲೇ ಇತ್ತೀಚೆಗಷ್ಟೇ ‘ಮೊಟ್ಟೆ ಕೇಸ್’ ನಲ್ಲಿ ಸಿಲುಕಿಕೊಂಡಿದ್ದ ಶಶಿಕಲಾ ಜೊಲ್ಲೆ ಅವರಿಗೆ ಸ್ಥಾನ ಸಿಕ್ಕಿದ್ದು, ಅತೃಪ್ತ ಶಾಸಕರಿಗೆ, ಪ್ರತಿಪಕ್ಷಗಳಿಗೆ ಈ ವಿಚಾರ ಆಹಾರವಾಗಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. 

ಈಶ್ವರಪ್ಪ ಅಸಮಾಧಾನ, ಕಾಂಗ್ರೆಸ್ ಗೆ ವರದಾನ..? 

ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಸಚಿವ ಈಶ್ವರಪ್ಪರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕದೇ ಇರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ಕೊನೆಯ ಪಕ್ಷ ಉಪ ಮುಖ್ಯಮಂತ್ರಿ ಸ್ಥಾನವನ್ನಾದರೂ ನೀಡಲಿ ಎಂದು ಈಶ್ವರಪ್ಪ ಪಕ್ಷದ ಹೈಕಮಾಂಡ್ ನನ್ನು ಬಹಿರಂಗವಾಗಿ ಬೇಡಿಕೊಂಡಿದ್ದರು. ಅದು ಕೂಡ ಫಲಿಸಲಿಲ್ಲ. 

ಕಳೆದ ಸಚಿವ ಸಂಪುಟದಲ್ಲಿ, ಅಂದರೇ, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಉಪ ಮುಖ್ಯಮಂತ್ರಿ ಸ್ಥಾನ ರಚಿಸಿ ರಾಜ್ಯ ಬಿಜೆಪಿಯಲ್ಲಿ ಹೇಳುವಂತದ್ದೇನೂ ಬದಲಾವಣೆಯಾಗಿರಲಿಲ್ಲ. ಈಶ್ವರಪ್ಪ ಅವರಿಗೂ ಆ ಸಂದರ್ಭದಲ್ಲಿಯೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಿಲ್ಲ. ಆಗ ಅಸಮಧಾನ ತೋರ್ಪಡಿಸಿಕೊಳ್ಳುವುದಕ್ಕೆ ಆಗದ ಸ್ಥಿತಿಯಲ್ಲಿ ಈಶ್ವರಪ್ಪ ಇದ್ದಿದ್ದರು. ಗೋವಿಂದ ಕಾರಜೋಳ, ಡಾ. ಸಿ ಎನ್. ಅಶ್ವಥ್ ನಾಯಾರಣ  ಲಕ್ಷ್ಮಣ ಸವದಿಯವರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಾಲಾಗಿತ್ತು. 

ಸಮುದಾಯವವನ್ನು ಬಿಟ್ಟು ಬಿಡಬಾರದು, ಯಾವ ನಾಯಕರಿಗೂ ಅಸಮಾಧಾನ ಉಂಟಾಗಬಾರದೆಂಬ ಉದ್ದೇಶದಿಂದಲೇ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಅವಕಾಶವನ್ನೇ ನೀಡಿಲ್ಲ. ಇದು ಉಪ ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿದ್ದ ಈಶ್ವರಪ್ಪ, ಸುನಿಲ್ ಕುಮಾರ್, ಆರ್. ಅಶೋಕ್, ಶ್ರೀರಾಮುಲು ಪಾಲಿಗೆ ಕಹಿಯಾಗಿತ್ತು ಎನ್ನುವುದು ಸತ್ಯ. 

ಈಶ್ವರಪ್ಪ ಈ ಬಗ್ಗೆ ಈಗಾಗಲೇ ಅಸಮಧಾನ ವ್ಯಕ್ತ ಪಡಿಸಿದ್ದು, ಈವರೆಗೆ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿರಲಿಲ್ಲ. ಮುಂದೆ ಪೂರ್ಣ ಬಹುಮತ ಸಿಗಲಿದೆ. ಆಗ  ರಾಷ್ಟ್ರವಾದಿ ನಾಯಕ ಮುಖ್ಯಮಂತ್ರಿಯಾಗುತ್ತಾರೆ ಎಂದು ಈಗಾಗಲೇ ಬೊಮ್ಮಾಯಿ, ಹೈಕಮಾಂಡ್ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದ್ದು, ಬಂಡಾಯದ ಸುಳಿವು ನೀಡಿದ್ದಾರೆ. ಆ ರಾಷ್ಟ್ರವಾದಿ ನಾಯಕ ಯಾರು..? ಆ ರಾಷ್ಟ್ರವಾದಿ ನಾಯಕ ಈಶ್ವರಪ್ಪನವರೇ..? ಅಥವಾ ಇನ್ಯಾರು..? ಒಂದು ವೇಳೆ  ಈಶ್ವರಪ್ಪ ನಾಯಕತ್ವದಲ್ಲಿ ಮುಂದೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದರೂ, ಸಮರ್ಥ ಆಡಳಿತ ನೀಡುವಲ್ಲಿ ಹಿನ್ನಡೆ ಅನುಭವಿಸಬಹುದು ಎನ್ನುವುದರಲ್ಲಿ ಅನುಮಾನವೇ ಇಲ್ಲ ಎನ್ನುವುದಕ್ಕೆ ಈಶ್ವರಪ್ಪ ವೃದ್ಧಿಸಿಕೊಳ್ಳದ ವಿಶ್ವಾಸಾರ್ಹ ರಾಜಕೀಯದ ಮುಖವೇ ಸಾಕ್ಷಿ. 

ಪಕ್ಷದಲ್ಲಿನ ಹಿರಿಯ ನಾಯಕ ಈಶ್ವರಪ್ಪ ಅವರನ್ನೊಳಗೊಂಡು ಕೆಲವರ ಅಸಮಾಧಾನವನ್ನೇ ಕಾಂಗ್ರೆಸ್ ಲಾಭ ಮಾಡಿಕೊಳ್ಳಬಹುದು. ಆದರೂ, ಯಡಿಯೂರಪ್ಪ ಅವರ ಇರುವ ತನಕ ಅಷ್ಟು ಸುಲಭವಾಗಿ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಬಹುಮತದೊಂದಿಗೆ ಅಧಿಕಾರ ಹಿಡಿಯುವುದಕ್ಕೆ ಸಾಧ್ಯವಿಲ್ಲ ಎನ್ನುವ ರಾಜಕೀಯ ವಿಶ್ಲೇಷಣೆಯನ್ನು ತೆಗೆದು ಹಾಕುವಂತಿಲ್ಲ. ಆದರೇ, ಯಡಿಯೂರಪ್ಪ ಕೂಡ ಒಂದು ವೇಳೆ ಪಕ್ಷ ನೀಡುತ್ತಿರುವ ಗೌರವ ಕಡಿಮೆಯಾಗಿಯೋ, ಸಮಧಾನದಿಂದಲೋ ಬಿಜೆಪಿ ವಿರುದ್ಧ 2011 ರಂತೆ ತಿರುಗಿ ಬಿದ್ದರೇ, ಕಾಂಗ್ರೆಸ್ ಗೆ ಲಾಭ ಆಗುವುದಂತೂ ಸತ್ಯ.    

ಇನ್ನು, ಬಿ. ಎಸ್ ವೈ ಸರ್ಕಾರದಲ್ಲಿ ಸವದಿಯವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದ್ದು, ಸಮುದಾಯದ ಲೆಕ್ಕಾಚಾರದಲ್ಲಿ ಬಿ. ಎಸ್. ವೈ ಅವರ ಉತ್ತರಾಧಿಕಾರಿಯಾಗಬಹುದೇನೋ ಎಂಬ ಯೋಚನೆಯಲ್ಲಿ ಹೈಕಮಾಂಡ್ ಇದ್ದಿತ್ತೇನೋ ಎಂದು ನಾವು ಅರ್ಥೈಸಿಕೊಂಡರೂ, ಸವದಿ ಒಬ್ಬ ಸಮುದಾಯದ ನಾಯಕರಾಗಿ, ಪಕ್ಷದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರಲಿಲ್ಲ. ಅವರ ಮೇಲೆ ಹಿಂದೆ ಇದ್ದ ವಿವಾದಗಳು ಅವರಿಗೆ ಆ ವರ್ಚಸ್ಸನ್ನು ತಂದುಕೊಟ್ಟಿಲ್ಲ. ಇತ್ತ, ಅರವಿಂದ ಬೆಲ್ಲದ ಅವರ ಕಥೆಯೂ ಹಾಗೆ ಆಗಿ ಹೋಯಿತು. ಜಿಂದಾಲ್ ಒಳಗೊಂಡು ಇತರೆ ವಿಷಯಗಳನ್ನು ಮುಂದಿಟ್ಟುಕೊಂಡು ಬಿ ಎಸ್ ವೈ ಅವರ ವಿರುದ್ಧ ಮಾತನಾಡಿ, ಎದುರು ಹಾಕಿಕೊಂಡರು. ಹಾಗಾಗಿ ಯಡಿಯೂರಪ್ಪ ಅವರ ಆಪ್ತ ಬಣದಲ್ಲೊಬ್ಬರಾದ ಬಸವರಾಜ ಬೊಮ್ಮಾಯಿ ಅವರಿಗೆ ಮಣೆ ಹಾಕಲಾಯಿತು. ಹಾಗಾಗಿ ಸಂಪುಟದಲ್ಲಿ ಈ ಇಬ್ಬರನ್ನೂ ಸೇರಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಈಗ ಈ ಎಲ್ಲಾ ಅತೃಪ್ತರ ಗುಂಪು ಸರ್ಕಾರದ ವಿರುದ್ಧ ತಿರುಗಿ ಬೀಳಬಹುದೇ ಎನ್ನುವುದು ಪ್ರಶ್ನೆಯಾಗಿದೆ. 

ಯಡಿರೂಪ್ಪರ ಕೆಂಗಣ್ಣಿಗೆ ಭಸ್ಮವಾದ ಯತ್ನಾಳ್, ಬೆಲ್ಲದ, ಯೋಗೇಶ್ವರ್ : 

ಮಾಜಿ ಬಿಎಸ್ ಯಡಿಯೂರಪ್ಪ ಬದಲಾವಣೆ ಕುರಿತು ಬಹಿರಂಗವಾಗಿ ಭಿನ್ನಮತವೆಬ್ಬಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೇಶ್ವರ್, ಅರವಿಂದ್ ಬೆಲ್ಲದ್... ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಇದು ಯಡಿಯೂರಪ್ಪರನ್ನು ಸಮಾಧಾನ ಮಾಡುವುದಕ್ಕೆ ಹೈಕಮಾಂಡ್ ಮಾಡಿದ ತಂತ್ರ. ಆದರೇ, ಹೈಕಮಾಂಡ್ ಹೆಣೆದ ತಂತ್ರದ ವಿರುದ್ಧ ಈ ಮೂವರು ತಿರುಗಿ ಬೀಳಬಹುದು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಹೈಕಮಾಂಡ್ ಈ ಮೂವರಿಗೆ ಸಮಾಧಾನ ತರಿಸುವ ಕೆಲಸ ಮಾಡದಿದ್ದರೇ, ಸರ್ಕಾರವನ್ನು ಮತ್ತೆ ಅಲುಗಾಡಿಸುವ ಪ್ರಯತ್ನವನ್ನಂತೂ ಮಾಡಿಯೇ ಮಾಡುತ್ತಾರೆ ಎನ್ನುವುದು ಸತ್ಯ. 

ಈಗಾಗಲೇ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಸ್ಥಾನ ತನ್ನ ಪಾಲಿಗಾಗುತ್ತಿದ್ದದ್ದನ್ನು ತಪ್ಪಿಸಿದ್ದು ಯಡಿಯೂರಪ್ಪ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದು, ಆ ಕೋಪ ಮತ್ತಷ್ಟು ರೌದ್ರತೆಯನ್ನು ಕೂಡ ಕಂಡುಕೊಳ್ಳುವ ಎಲ್ಲಾ ಸಾಧ್ಯತೆ ಇದೆ. 

ಇನ್ನು, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಸುತ್ತಬೇಕು. ಇದನ್ನು ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ.  ನನ್ನನ್ನು ಗುರುತಿಸಿರುವ ಕ್ಷೇತ್ರ ವರುಣಾ, ನಾನು ಅಲ್ಲಿಗೆ ಹೆಚ್ಚು ಒತ್ತು ಕೊಡುತ್ತೇನೆ ಎಂದು ಹೇಳಿಕೆ ನೀಡಿದ ಯಡಿಯೂರಪ್ಪ ಪುತ್ರ ಬಿ. ವೈ ವಿಜಯೇಂದ್ರ ಅವರ ಮೇಲೆ ಈ ಅತೃಪ್ತರ ವಕ್ರ ದೃಷ್ಟಿಯಂತೂ ಇದ್ದೇ ಇರುತ್ತದೆ. 

ಸರ್ಕಾರ ರಚನೆಗೆ ಸಹಾಯ ಮಾಡಿದವರಿಗೆ ಸ್ಥಾನಮಾನ..!

ಸರ್ಕಾರ ವಿಶ್ವಾಸ ಕಳೆದುಕೊಂಡಾಗ, ಬಹುಮತವಿಲ್ಲದ ಸಂದರ್ಭದಲ್ಲಿ ಸರ್ಕಾರದ ರಚನೆಗೆ ಸಹಾಯ ಮಾಡಿರುವ ಹಾಗೂ ಪಕ್ಷಕ್ಕೆ ನಿಷ್ಠೆಯಿಂದಿರುವ ಕಾರಣಕ್ಕೆ ಡಾ. ಕೆ. ಸುಧಾಕರ್, ಎಸ್ ಟಿ. ಸೋಮಶೇಖರ್, ಆನಂದ್ ಸಿಂಗ್, ಶಿವರಾಂ ಹೆಬ್ಬಾರ್, ಬಿ. ಸಿ ಪಾಟೀಲ್, ಬೈರತಿ ಬಸವರಾಜ್, ಕೆ. ಗೋಪಾಲಯ್ಯ, ಎಂ. ಟಿ. ಬಿ ನಾಗಾರಾಜ್, ಕೆ. ಸಿ ನಾರಾಯಣ ಗೌಡ, ಮುನಿರತ್ನ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಹೈ ಕಮಾಂಡ್ ಮಣೆ ಹಾಕಿದ್ದು, ಇದಕ್ಕೆ ಯಡಿಯೂರಪ್ಪರ ಶಿಫಾರಸ್ಸು ಕೂಡ ಇದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸರ್ಕಾರ ರಚನೆಗೆ ಸಹಕರಿಸಿದ ವಲಸಿಗರಿಗೆ ಬೊಮ್ಮಾಯಿ ನೇತೃತ್ವದ ಮೂಲಕ ಯಡಿಯೂರಪ್ಪ ಮತ್ತೆ ಋಣ ತೀರಿಸಿಕೊಂಡಿದ್ದಾರೆ. ಆದರೇ, ಅತೃಪ್ತರು, ಪಕ್ಷದಲ್ಲಿ ಹಲವಾರು ವರ್ಷಗಳಿಂದ ಇದ್ದ ಹಿರಿಯ ನಾಯಕರು ಪಕ್ಷದ ವಿರುದ್ಧ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ, ಮುಂದಿನ ಚುನಾವಣೆಯ ಸಂದರ್ಭದಲ್ಲಾದರೂ  ಅಸಮಾಧಾನ ತೋರಿಸಿಕೊಳ್ಳಬಹುದು. ಇದು ಬಿಜೆಪಿಗೆ ಕೆಟ್ಟ ಪರಿಣಾಮವನ್ನು ಕೂಡ ಉಂಟು ಮಾಡಬಹುದು.  

ಈ ಎಲ್ಲಾ ಸಮಾಧಾನ, ಅಸಮಾಧಾನಗಳ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ಸಚಿವರ, ಶಾಸಕರ ವಿಶ್ವಾಸ ಉಳಿಸಿಕೊಳ್ಳಬೇಕಾಗಿದೆ. ಜೊತೆಗೆ ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಬೇಕಾಗಿದೆ. ಈ ವಿಶ್ವಾಸ ಕಳೆದುಕೊಂಡರೇ, ಮತ್ತೆ ಸರ್ಕಾರದಲ್ಲಿ ಗೊಂದಲ ಸೃಷ್ಟಿ ಆಗುವುದಂತೂ ಖಚಿತ. ಬಹಳ ಮುಖ್ಯವಾಗಿ ಬಿ. ಎಸ್. ಯಡಿಯೂರಪ್ಪರಿಗೆ ಯಾವ ಸಂದರ್ಭದಲ್ಲಿಯೂ ನೋವಾಗದ ಹಾಗೆ ನೋಡಿಕೊಳ್ಳಬೇಕಾಗಿದೆ. ಈ ಎಲ್ಲಾ ಒತ್ತಡದ ನಡುವೆ ಬೊಮ್ಮಾಯಿ ಸರ್ಕಾರವನ್ನು ಹೇಗೆ ನಡೆಸುತ್ತಾರೆ ಎನ್ನುವುದರಲ್ಲಿ ಕುತೂಹಲ ಮೂಡಿಸಿದೆ.

-ಶ್ರೀರಾಜ್ ವಕ್ವಾಡಿ

Thursday, August 5, 2021

ವಿಶೇಷ ಸ್ಥಾನಮಾನ ರದ್ದಾಗಿ ಇಂದಿಗೆ 2 ವರ್ಷ | ಜಮ್ಮು ಕಾಶ್ಮೀರದಲ್ಲಾದ ಬದಲಾವಣೆಗಳೇನು.?

 


ನರೇಂದ್ರ ಮೋದಿ ಸರ್ಕಾರ ಎರಡು ವರ್ಷಗಳ ಹಿಂದೆ ಈ ದಿನ ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಪಟ್ಟಂತೆ  ಐತಿಹಾಸಿಕ ಬದಲಾವಣೆಯನ್ನು ತಂದಿತು. ಸಂವಿಧಾನದ 370ನೇ ವಿಧಿ ಮತ್ತು ‘35–ಎ’ ಕಲಂ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ ಡಿಎ ಸರ್ಕಾರ ನಿರ್ಧಾರ ಕೈಗೊಂಡಿತ್ತು. 

ಹೌದು, ಆಗಸ್ಟ್ 5, 2019 ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಮತ್ತು ಅದರ ವಿಭಜನೆಯನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡುವುದಾಗಿ ಪ್ರಸ್ತಾಪವನ್ನು ಮಂಡಿಸಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಏನು..? 370 ನೇ ವಿಧಿ ಏನು..? ‘35–ಎ’ಕಲಂ ಏನನ್ನು ಹೇಳುತ್ತದೆ..? ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಆದ ಬದಲಾವಣೆಗಳೇನು ಎನ್ನುವುದಕ್ಕೆ ಈ ಲೇಖನ ಸಂಕ್ಷಿಪ್ತ ಮಾಹಿತಿ ನೀಡುತ್ತದೆ. 

370 ನೇ ವಿಧಿ ಏನು ಹೇಳುತ್ತದೆ..? 

ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಿಂದೆ ದೊಡ್ಡ ಇತಿಹಾಸವಿದೆ. ಕಣಿವೆ ರಾಜ್ಯದ ಮೇಲೆ 1947ರಲ್ಲಿ ಪಾಕಿಸ್ತಾನ ಪ್ರಚೋದಿತ ದಾಳಿ ನಡೆಯುತ್ತದೆ. ಇದಕ್ಕೆ ಹೆದರಿದ ಅಲ್ಲಿನ ಕೊನೆಯ ರಾಜ ಹರಿಸಿಂಗ್‌ ಓಡಿ ಬಂದು ಭಾರತದ ಬೆಂಬಲ ಕೇಳುತ್ತಾರೆ. ನೆರವು ಕೊಡಲು ಸರ್ಕಾರ ಷರತ್ತು ಹಾಕುತ್ತದೆ. ಅದೇ ವಿಲೀನದ ಷರತ್ತು. ಈ ಹಿನ್ನೆಲೆಯಲ್ಲಿ ಸಂವಿಧಾನದ 370ನೇ ಕಲಂ ಹುಟ್ಟು ಪಡೆಯುತ್ತದೆ. ಅದರಂತೆ ಕಾಶ್ಮೀರದ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಕ್ಷೇತ್ರಗಳು ಕೇಂದ್ರ ಸರ್ಕಾದ ಅಧೀನಕ್ಕೆ ಒಳಪಡುತ್ತವೆ. ಉಳಿದೆಲ್ಲ ಅಧಿಕಾರ ರಾಜ್ಯದಲ್ಲಿ ಉಳಿಯುತ್ತದೆ. ಉಭಯ ಪಕ್ಷಗಳು ನಿಯಮ ಮೀರಿ ಆಚೀಚೆ ಸರಿಯುವಂತಿಲ್ಲ. ಇದರಲ್ಲಿ ಏನೇ ಬದಲಾವಣೆ ಆಗಬೇಕಾದರೂ ಸಂವಿಧಾನ ಸಮಿತಿಯಲ್ಲಿ ಚರ್ಚೆ ಆಗಬೇಕು. ಆದರೆ ಈಗ ಸಂವಿಧಾನ ಸಮಿತಿ ಇಲ್ಲದಿರುವುದರಿಂದ ಸಂಸತ್ತು, ರಾಜ್ಯ ವಿಧಾನಸಭೆಯದೇ ಪರಮಾಧಿಕಾರವಾಗಿದೆ.

ಸಂವಿಧಾನದ 370 ನೇ ವಿಧಿಯು ಜಮ್ಮು-ಕಾಶ್ಮೀರ ರಾಜ್ಯದ ಕುರಿತು ವಿವರಿಸುತ್ತದೆ. ಕಾಶ್ಮೀರದಲ್ಲಿ ಪ್ರತ್ಯೇಕ ಸಂವಿಧಾನವು ಅಸ್ತಿತ್ವದಲ್ಲಿದೆ. 1956ರ ನವೆಂಬರ್‌ 17ರಂದು ರಾಜ್ಯದ ವಿಧಾನಸಭೆಯು ಸರ್ವಾನುಮತದಿಂದ ಇದನ್ನು ಅಂಗೀಕರಿಸಿದೆ. ಈ ಸಂವಿಧಾನದ 1 ರಿಂದ8 ಮತ್ತು 158ನೇ ವಿಧಿಗಳು ಅಂದೇ ಜಾರಿಗೆ ಬಂದಿವೆ. ಉಳಿದೆಲ್ಲಾ ವಿಧಿಗಳು ಜಾರಿಗೆ ಬಂದದ್ದು 1957ರ ಜನವರಿ 26ರಂದು.ಇದರಿಂದಾಗಿಯೇ ಜಮ್ಮು-ಕಾಶ್ಮೀರದ ಸಂವಿಧಾನವು ದೇಶದಲ್ಲಿ ಜಾರಿಯಲ್ಲಿರುವ ಎರಡನೇ ಸಂವಿಧಾನ ಎಂದೂ ಹೇಳಲಾಗುತ್ತಿದೆ. ಕಾಶ್ಮೀರದ ಸಂವಿಧಾನವು ತಿದ್ದುಪಡಿಗೊಳ್ಳುವುದು ಅಲ್ಲಿನ ವಿಧಾನಸಭೆಯಲ್ಲಿ. ಈ ರಾಜ್ಯದಲ್ಲಿ ಆಸ್ತಿ ಹೊಂದಿರುವವರು ಪ್ರತ್ಯೇಕ ಕಾನೂನು ಪಾಲಿಸಬೇಕು ಹಾಗೂ ಪ್ರತ್ಯೇಕ ನಾಗರಿಕತೆ ಹೊಂದಿರಬೇಕು ಎನ್ನುತ್ತದೆ ಈ ವಿಧಿ. ರಾಜ್ಯದ ಜನರ ಮೂಲಭೂತ ಹಕ್ಕುಗಳು ಕೂಡ ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ. 

‘35–ಎ’ಕಲಂ ಏನು ಹೇಳುತ್ತದೆ..?  

ಇದು ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ಮಾತ್ರ ಆಸ್ತಿ, ಶಿಕ್ಷಣ, ಉದ್ಯೋಗದಲ್ಲಿ ವಿಶೇಷ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದ್ದು. 35ಎ ಕಲಂ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರು. ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಈ ವಿಶೇಷ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ಜತೆಗೆ, ಆತನ ಪತ್ನಿಗೂ ಈ ಎಲ್ಲ ಹಕ್ಕುಗಳು ಪ್ರಾಪ್ತವಾಗುತ್ತವೆ. ಸಂವಿಧಾನಕ್ಕೆ ಈ ಕಲಂ ಸೇರ್ಪಡೆಯಾಗಿದ್ದು ಕೂಡ ಸಂಸತ್ತಿನ ನಿರ್ಣಯದ ಮೂಲಕ ಅಲ್ಲ. ಬದಲಿಗೆ, ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಇರುವ ವಿಶೇಷಾಧಿಕಾರ ಬಳಸಿ ರಾಷ್ಟ್ರಪತಿ ಹೊರಡಿಸಿದ ಅಧಿಸೂಚನೆಯ ಮೂಲಕ. 1954ರಲ್ಲಿ ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಿದ್ದರು.

ಈ ಎರಡು ವರ್ಷಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಏನೇನು ಬದಲಾಗಿದೆ..?

ಹೊರ ರಾಜ್ಯದವರೂ ಜಮ್ಮು ಕಾಶ್ಮೀರದಲ್ಲಿ ಭೂಮಿ ಖರೀದಿಸಬಹುದು :

2019 ರ ತನಕ 35ಎ ಕಲಂ ಪ್ರಕಾರ, ಆ ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಅಲ್ಲಿ ಸ್ಥಿರ ಆಸ್ತಿ ಹೊಂದುವಂತಿರಲಿಲ್ಲಿ.  ಆದರೇ, ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಈಗ ಯಾವೊಬ್ಬ ದೇಶದ ನಾಗರಿಕನೂ ಜಮ್ಮು ಕಾಶ್ಮೀರದಲ್ಲಿ ಭೂ ಖರೀದಿಸಬಹುದು, ಆಸ್ತಿ ಹೊಂದಬಹುದಾಗಿದೆ. 

ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ ಹಾಗೂ ಸಂವಿಧಾನವಿಲ್ಲ.!

2019 ರಲ್ಲಿ ನರೇಂದ್ರ ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರದಲ್ಲಿ ದೇಶದ ತ್ರಿವರ್ಣ ಧ್ವಜ ಹಾರಿತ್ತು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಿದ್ದಾಗ ಸ್ವತಂತ್ರ ಧ್ವಜವನ್ನು ಹೊಂದುವ ಅವಕಾಶವಿತ್ತು. ತನ್ನದೇ ಆದ ದಂಡ ಸಂಹಿತೆಯನ್ನು ಹೊಂದಿತ್ತು, ಇದನ್ನು ರಣಬೀರ್ ದಂಡ ಸಂಹಿತೆ ಎಂದು ಕರೆಯಲಾಗುತ್ತಿತ್ತು. 

ಮಹಿಳೆಯರಿಗೆ ಸಮಾನತೆ :

ಆಗಸ್ಟ್ 2019 ಕ್ಕಿಂತ ಮೊದಲು, ಅಲ್ಲಿನ ಮಹಿಳೆ, ರಾಜ್ಯದ ಹೊರಗಿನವರನ್ನು ಮದುವೆಯಾದರೆ ಜಮ್ಮು ಕಾಶ್ಮೀರದಲ್ಲಿ ಇದ್ದ ಎಲ್ಲಾ ಸೌಲಭ್ಯಗಳಿಂದ ವಂಚಿತಳಾಗುತ್ತಾಳೆ. ಆದರೆ, ಅಲ್ಲಿನ ಪುರುಷ ಹೊರರಾಜ್ಯದ ಮಹಿಳೆಯನ್ನು ಮದುವೆಯಾದರೆ ಆತನ ಹಕ್ಕಿಗೆ ಧಕ್ಕೆ ಬರುವುದಿಲ್ಲ. ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ ಈಗ ಜಮ್ಮ ಕಾಶ್ಮೀರದಲ್ಲಿ ಮಹಿಳೆಯರಿಗೆ ಸಮಾನತೆಯ ಹಕ್ಕು ಲಭಿಸಿದೆ. 

ಗುಪ್ಕರ್ ಅಲಿಯನ್ಸ್ - ಕಾಶ್ಮೀರಿ ಮಹಾ ಘಟಬಂಧನ್ :

2014 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ದೇಶದಾದ್ಯಂತ ಬಹುತಮತಗಳಿಂದ ಭರ್ಜರಿ ಗೆಲುವು ಕಂಡ ನಂತರ, ಪ್ರತಿಪಕ್ಷಗಳ ಒಗ್ಗೂಡುವಿಕೆಯ ಬೆಳವಣಿಗೆಗಳು ಕಂಡವು. ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ (ಆರ್‌ ಜೆಡಿ) ಮತ್ತು ಜನತಾದಳ-ಯುನೈಟೆಡ್ (ಜೆಡಿಯು) ಮೈತ್ರಿಯಾಗುವ ಮೂಲಕ ಪ್ರತಿಪಕ್ಷಗಳ ಒಗ್ಗೂಡುವಿಕೆ ಆರಂಭವಾಯಿತು. ಈ ಪ್ರಯೋಗವನ್ನು ಮಹಾ ಘಟಬಂಧನ್, ಮಹಾ ಮೈತ್ರಿ ಎಂದು ಕರೆಯಲಾಯಿತು. ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಇದು ಯಶಸ್ಸು ಕೂಡ ಕಂಡಿತು.  

ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಪ್ರತಿಸ್ಪರ್ಧಿಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮೈತ್ರಿಯಾದವು. 

ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ಯ ಮೆಹಬೂಬ ಮುಫ್ತಿ ಅವರು ಕೈಜೋಡಿಸಿದರು. ಗೃಹ ಬಂಧನದಿಂದ 2020 ರಲ್ಲಿ ಬಿಡುಗಡೆಯಾದ ನಂತರ ಮೈತ್ರಿ ಸಭೆಗಳನ್ನು ನಡೆಸಿದರು. ಮೊದಲು ಜಮ್ಮು ಮತ್ತು ಕಾಶ್ಮೀರಕ್ಕೆ ಲಭ್ಯವಿರುವ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುವ ನಿರ್ಣಯವನ್ನು ಅಂಗೀಕರಿಸಿದರು. 

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಮ್ಮ ಕಾಶ್ಮೀರದ ಪ್ರಾದೇಶಿಕ ಪಕ್ಷಗಳನ್ನು ಸಭೆಗೆ ಕರೆದ್ದರು. ಎಲ್ಲಾ ಪಕ್ಷಗಳು ಚುನಾವಣೆಗೆ ಒಮ್ಮತವನ್ನು ಸೂಚಿಸಿದ್ದವು. ಕೇಂದ್ರ ಸರ್ಕಾರ ಡಿಲಿಮಿಟೇಶನ್ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿತ್ತು. 

ಗುಪ್ಕರ್ ಒಕ್ಕೂಟವು ಮುಂದಿನ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ ಎಂದು ಹೇಳಲಾಗಿದೆ.

ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಪಾಸ್ ಪೋರ್ಟ್ ಇಲ್ಲ..!

ವಿಧ್ವಂಸಕ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಭಾರತೀಯ ಪಾಸ್‌ ಪೋರ್ಟ್‌ ಗಳನ್ನು ನೀಡದಿರಲು ಸರ್ಕಾರ ಇತ್ತೀಚೆಗೆ ನಿರ್ಧರಿಸಿತು.

ಇನ್ನು, ವಿಶೇಷ ಸ್ಥಾನಮಾನ ರದ್ದು ಮಾಡುವುದೆಂದರೆ ಕಾಶ್ಮೀರ ವಿಲೀನದ ವೇಳೆ ರಾಜ ಹರಿಸಿಂಗ್ ಜತೆ ಮಾಡಿಕೊಂಡ ಷರತ್ತಿನ ಉಲ್ಲಂಘನೆಯೂ ಆಗುತ್ತದೆ ಎಂಬ ವಾದವೂ ಇದ್ದಿತ್ತು. ಈ ವಾದ ವಿವಾದಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, 2019 ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತ್ತು. 

-ಶ್ರೀರಾಜ್ ವಕ್ವಾಡಿ

Monday, August 2, 2021

ಕಂಪೆನಿಯ ಯಶಸ್ಸಿಗೆ ಉದ್ಯೋಗಿಗಳೇ ಕಾರಣ, ಸಿಇಒ ಗಳಲ್ಲ..! : ಡಾನ್


(ಸಿಬ್ಬಂದಿಗಳ ಸಂಬಳ ಹೆಚ್ಚಳಕ್ಕೆ ಶೇಕಡಾ. 90ರಷ್ಟು ಸಂಬಳವನ್ನು ಕಡಿತಗೊಳಿಸಿಕೊಂಡ ಸಿಇಒ..! )

ಉದ್ಯಮ ಕ್ಷೇತ್ರದಲ್ಲಿ ತಿಂಗಳ ಕೊನೆಯಲ್ಲಿ ಎಲ್ಲರೂ ಬಯಸುವುದು ಕೈ ತುಂಬಾ ಸಂಬಳ. ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ, ವೃತ್ತಿ ಧರ್ಮ ಪಾಲಿಸುತ್ತಿದ್ದರೂ, ಮಾತ್ರವಲ್ಲದೇ ತನ್ನ ಸಹೋದ್ಯೋಗಿಗಳೊಂದಿಗೆ ಎಷ್ಟೇ ಆಪ್ತ ಬಂಧವನ್ನು ಹೊಂದಿದ್ದರೂ ಕೂಡ  ಸಂಬಳದ ವಿಚಾರದಲ್ಲಿ ಯಾರೂ ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಕೈಗೆ ಸೇರುವ ಸಂಬಳ ಒಂದೆರಡು ದಿನ ತಡವಾದರೂ ಕೂಡ ಎಲ್ಲಾ ಯೋಜನೆಗಳು ಬದಲಾಗುತ್ತವೆ, ಮಾತ್ರವಲ್ಲದೆ ಮಾನಸಿಕ ಸ್ಥಿತಿಯೂ ಬದಲಾವಣೆಯಾಗುತ್ತದೆ. 

ತನಗೆ ಬಂದ ಸಂಬಳದ ಪಾಲಿನಲ್ಲಿ ನನಗಿಷ್ಟೇ ಸಾಕು, ಉಳಿದದ್ದನ್ನು ಸಂಸ್ಥೆಯ ಸಹೋದ್ಯೋಗಿಗಳಿಗೆ ಅಥವಾ ಉದ್ಯೋಗಿಗಳಿಗೆ ನೀಡಿ, ಅದರಿಂದ ಸಂಸ್ಥೆಯ ಬೆಳವಣಿಗೆಗೂ ಲಾಭವಾಗುತ್ತದೆ. ಉದ್ಯೋಗಿಗಳಿಗೆ ಕಾರ್ಯ ಕ್ಷೇತ್ರದಲ್ಲಿ ಒಂದು ಪೂರಕವಾದ ವಾತಾವರಣ ಸೃಷ್ಟಿಯಾಗುತ್ತದೆ ಎನ್ನುವ ವಿಶಾಲವಾದ ಮನಸ್ಸು ಯಾರಿಗಿದೆ ಹೇಳಿ..? ಖಂಡಿತಾ ಇಲ್ಲ. ಕೆಲಸದ ವಿಷಯದಲ್ಲಿ ಅವರೆಷ್ಟು ಒಳ್ಳೆಯತನದಿಂದ ಇದ್ದರೂ, ಹಣದ ವಿಚಾರದಲ್ಲಿ ಎಲ್ಲರೂ ಹತ್ತಾರು ಬಾರಿ ಯೋಚಿಸಿಯೇ ಮುಂದೆ ನಡೆಯುತ್ತಾರೆ. ಆದರೇ, ಇಲ್ಲೊಂದು ಸಂಸ್ಥೆಯ ಸಿಇಒ ಅಥವಾ ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿ ತನಗೆ ಬರುವ ಸಂಬಳದ  90 ಶೇಕಡಾ ಪಾಲನ್ನು ಸಂಸ್ಥೆಯ ಇತರೆ ಉದ್ಯೋಗಿಗಳಿಗೆ ನೀಡುವಂತೆ ಧಾರಾಳತನವನ್ನು ಮೆರೆದಿದ್ದಾರೆ.  



ಕ್ರೆಡಿಟ್ ಕಾರ್ಡ್ ಸಂಸ್ಕರಣಾ ಕಂಪನಿ ಗ್ರಾವಿಟಿ ಪೇಮೆಂಟ್ಸ್  ಮುನ್ನಡೆಸುತ್ತಿರುವ ಡಾನ್ ಪ್ರೈಸ್, ತಮಗೆ ಬರುತ್ತಿರುವ ಒಟ್ಟಾರೆ ಸಂಬಳದ ಒಟ್ಟು 90 ಶೇಕಡಾವನ್ನು ಕಡಿತಗೊಳಿಸಿಕೊಂಡಿದ್ದಾರೆ. ಉಳಿದದ್ದನ್ನು ತನ್ನ ಅಡಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ನೀಡುವುದಕ್ಕೆ ಮುಂದೆ ಬಂದು ಉದ್ಯೋಗಿಗಳಿಗೆ ಸಿಹಿ ಉಣಿಸಿದ್ದಲ್ಲದೇ ಜಾಗತಿಕ ಮಟ್ಟದಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ. 

ತನ್ನ ಸಹೋದ್ಯೋಗಿ ರೋಸಿಟಾ ಎಂಬಾಕೆಗೆ ಆದ ಆರ್ಥಿಕ ಸಮಸ್ಯೆಯನ್ನು ಗಮನಿಸಿದ ಡಾನ್, ಈ ನಿರ್ಧಾರಕ್ಕೆ ಬಂದಿದ್ದಾರೆ. ಜೀವನಕ್ಕೆ ಯಾರಿಗೂ ಕಷ್ಟವಾಗಬಾರದು, ಜೀವನವನ್ನು ಯಾವುದೇ ಕೊರತೆ ಇಲ್ಲದೆ ಬದುಕುವಂತಹ ಸಂಬಳ ಸಂಸ್ಥೆಯ ಎಲ್ಲಾ ಉದ್ಯೋಗಿಗಳಿಗೂ ಇರಬೇಕು ಎನ್ನುವುದೆ ತನ್ನ ಉದ್ದೇಶ ಎನ್ನುತ್ತಾರೆ ಡಾನ್. 

ಈ ಬಗ್ಗೆ ತನ್ನ ಟ್ವೀಟರ್ ಖಾತೆಯ ಮೂಲಕ ಇತ್ತೀಚೆಗೆ ಬರೆದುಕೊಂಡಿರುವ ಡಾನ್, ಫಾಸ್ಟ್ ಫುಡ್ ಚೈನ್‌ ನಲ್ಲಿ ಮ್ಯಾನೇಜರ್ ಆಗಲು ತರಬೇತಿ ಪಡೆಯುತ್ತಿದ್ದ ರೋಸಿಟಾ ಎಂಬ ಉದ್ಯೋಗಿಗೆ  ಹಣದ ಸಮಸ್ಯೆ ಇದೆ ಎಂದು ಅರಿತುಕೊಂಡೆ. ಇದರಿಂದ ನನ್ನ ಮನ ಕಲುಕಿತು ಎಂದು ಡಾನ್ ಬರೆದುಕೊಂಡಿದ್ದರು.

ಸಂಸ್ಥೆಯಿಂದ ಬರುತ್ತಿದ್ದ ಆದಾಯದಿಂದ ಜೀವನ ನಿರ್ವಹಣೆ ಕಷ್ಟ ಸಾಧ್ಯ ಎಂಬ ಉದ್ದೇಶದಿಂದ ರೋಸಿಟಾ, ಇನ್ನೊಂದು ಉದ್ಯೋಗವನ್ನು ಪ್ರಾರಂಭಿಸಬೇಕಾದ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಸಿಇಒ ಡಾನ್, ತನ್ನ ಸಂಸ್ಥೆಯಲ್ಲಿ ದುಡಿಯುತ್ತಿರುವ ಯಾವೊಬ್ಬ ಉದ್ಯೋಗಿಗೂ ಸಂಬಳದ ಕಾರಣದಿಂದ ಜೀವನ ನಿರ್ವಹಣೆಗೆ ಕಷ್ಟವಾಗಬಾರದು ಎಂಬ ಉದ್ದೇಶದಿಂದ ತನಗೆ ಬರುತ್ತಿದ್ದ ಆದಾಯದ ಶೇಕಡಾ 90 ರಷ್ಟು ಪಾಲನ್ನು ತನ್ನ ಸಹೋದ್ಯೋಗಿಗಳಿಗೆ ನೀಡಲು ನಿರ್ಧಾರಿಸಿದ್ದಾಗಿ ಡಾನ್ ಹೇಳುತ್ತಾರೆ. 

'ರೋಸಿಟಾ ತನ್ನ ಮತ್ತೊಂದು ವೃತ್ತಿಯ ಬಗ್ಗೆ ಯಾವುದೇ ವಿಚಾರವನ್ನು ಬಿಟ್ಟುಕೊಡುತ್ತಿರಲಿಲ್ಲ. ತನನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ ಎಂಬ ಭಯದಿಂದ ವರ್ತಿಸುತ್ತಿದ್ದಳು. ಛೇ, ನಾನು ನನ್ನ ಸಂಸ್ಥೆಯಲ್ಲಿ ಎಂತಹ ಭಯದ ವಾತಾವರಣವನ್ನು ಸೃಷ್ಟಿ ಮಾಡಿದ್ದೇನೆ..? ಯಾಕೆ ಹೀಗೆ ಈ ವಾತಾವರಣ, ಸಂಸ್ಕೃತಿ ಸಂಸ್ಥೆಯಲ್ಲಿ ಸೃಷ್ಟಿಯಾಯಿತು..? ಒಬ್ಬ ಉದ್ಯೋಗಿಗೆ ಸಂಸ್ಥೆಯಲ್ಲಿ ಪೂರಕವಾದ ವಾತಾವರಣವಿಲ್ಲದಿರಿವುದು ಎಂತಹ ಸ್ಥಿತಿ..? ಎಂದು ಡಾನ್  ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾರೆ. 

'ರೊಸಿಟಾ ಕಾಲೇಜ್ ಗ್ರಾಡ್ ಆದರೆ ವರ್ಷಕ್ಕೆ $ 30,000 ಗಳಿಸುತ್ತಿದ್ದಳು. ಅವಳು ಸಂಸ್ಥೆಯ ಕೆಲಸವನ್ನು 5 ಕ್ಕೆ ಮುಗಿಸುತ್ತಾಳೆ ಮತ್ತು ಒಂದುವರೆ ವರ್ಷದಿಂದ  5: 30 ರಿಂದ 11 ರ ತನಕ  ಪ್ರತಿ ದಿನ ರಾತ್ರಿಯೂ ಮೆಕ್ ಡೋನಾಲ್ಡ್ ನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಕೆಲಸ ಮಾಡುತ್ತಿದ್ದಾಳೆ. 

ತನ್ನ ಇನ್ನೊಂದು ಉದ್ಯೋಗವನ್ನು ತೊರೆಯಬೇಕಾದರೇ ತನಗೆ $ 10,000 (£ 7,156.50) ಹೆಚ್ಚಿಸುವ ಅಗತ್ಯವಿದೆ ಎಂದು ರೋಸಿಟಾ ಡಾನ್‌ ಗೆ ಹೇಳಿಕೊಂಡಾಗ,  ಕೆಲವು ಹೆಚ್ಚುವರಿ ಕರ್ತವ್ಯಗಳನ್ನು ನಿಭಾಯಿಸುವುದಾರೇ, ವೇತನದ ಪ್ರಮಾಣವನ್ನು ಹೆಚ್ಚಳ ಮಾಡಲಾಗುವುದೆಂದು ಡಾನ್ ಭರವಸೆ ನೀಡುತ್ತಾರೆ. 

ಆಕೆ ಈಗ ಮಾನಸಿಕವಾಗಿಯೂ, ಆರ್ಥಿಕವಾಗಿಯೂ ಸುಧಾರಿಸಿದ್ದಾಳೆ. ತನ್ನ ಮತ್ತೊಂದು ಉದ್ಯೋಗವನ್ನು ತ್ಯಜಿಸಿ ಸಂಪೂರ್ಣ ಸಂಸ್ಥೆಯ ಕಾರ್ಯದಲ್ಲಿಯೇ ತೊಡಗಿಕೊಂಡಿದ್ದಾಳೆ. ಆಕೆಯ ಕಾರ್ಯಕ್ಷಮತೆಯೂ ಸುಧಾರಿಸಿದೆ ಎಂದು ಹೆಮ್ಮೆಯಿಂದ ತನ್ನ ಉದ್ಯೋಗಿ ರೋಸಿಟಾ ಬಗ್ಗೆ ಹೇಳುತ್ತಾರೆ ಡಾನ್ ಪ್ರೈಸ್.

ಅಷ್ಟೇ ಅಲ್ಲ, ಇದಾದ ಬಳಿಕ ಕೆಲವೇ ದಿನಗಳ ಅಂತರದಲ್ಲಿ ರೋಸಿಟಾ ಸಂಸ್ಥೆಯ ಆಪರೇಷನ್ ಡೈರೆಕ್ಟರ್ ಆಗಿ ಬಡ್ತಿ ಪಡೆಯುತ್ತಾಳೆ. ಮಾತ್ರವಲ್ಲದೇ ರೋಸಿಟಾ ಯಶಸ್ಸಿನ ಪರಿಣಾಮವಾಗಿ, ಅವರು ಕಂಪನಿಯ ಎಲ್ಲಾ ಉದ್ಯೋಗಿಗಳ ಕನಿಷ್ಠ ಸಂಬಳವನ್ನು $ 70,000 ಕ್ಕೆ ಹೆಚ್ಚಿಸಲು ನಿರ್ಧರಿಸುತ್ತಾರೆ.

ಇದು, ಗ್ರಾವಿಟಿ ಪೇಮೆಂಟ್ಸ್  ಕಂಪೆನಿಯ ಸಿಇಒ ತೆಗೆದುಕೊಂಡ ನಿರ್ಧಾರದ ಬಗ್ಗೆ ಜಗತ್ತೇ ಬೆರಗುಗಣ್ಣಿನಿಂದ ಕಾಣುವ ಹಾಗೆ ಮಾಡಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

'ಮಿಲಿಯನೇರ್ ಜೀವನಶೈಲಿಯನ್ನು ನಾನು ಕಳೆದುಕೊಂಡಿಲ್ಲ : ಡಾನ್ 

ಡಾನ್ ತನ್ನ ಸ್ವಂತ ವೇತನ ಶೇಕಡಾ 90 ರಷ್ಟನ್ನು ಕಡಿತಗೊಳಿಸಿ, ಅಂದರೇ, ಅಂದಾಜು $ 1.1M (£ 787,017) ನಿಂದ $ 70,000 ಗೆ ಕಡಿತಗೊಳಿಸಿಕೊಂಡು, ತನ್ನ ಉದ್ಯೋಗಿಗಳ ಸಂಬಳವನ್ನು ಹೆಚ್ಚಿಸಲು ಮುಂದಾದರು. 

'ಮಿಲಿಯನೇರ್ ಜೀವನಶೈಲಿಯನ್ನು ನಾನು ಕಳೆದುಕೊಂಡಿಲ್ಲ. ನಾನು ನನ್ನ  ಸಂಸ್ಥೆಯ ಉದ್ಯೋಗಿಗಳ ಪಾಲಿಗೆ ಒಬ್ಬ ಒಳ್ಳೆಯ ಬಾಸ್ ಆಗಿದ್ದೇನೆ ಎನ್ನುವುದರ ಬಗ್ಗೆ ನನಗೆ ಸಂತೋಷವಿದೆ. ನೆಮ್ಮದಿ ಇದೆ. ಸಂಸ್ಥೆಯ ನೂರಾರು ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ಕಂಡಿದ್ದೇನೆ. ಶ್ರೀಮಂತನಾಗಿ ಬದುಕುವುದೆಂದರೇ, ಹಣ ಸಂಪಾಧನೆ ಮಾಡುವುದಕ್ಕಿಂತ ಇನ್ನೊಬ್ಬರ ಮುಖದಲ್ಲಿ ಸಂತಸ ಕಾಣುವುದೇ ಆಗಿದೆ ಎನ್ನುತ್ತಾರೆ ಡಾನ್. 

ಕಂಪೆನಿಯ ಆದಾಯ ಮೂರು ಪಟ್ಟು ಏರಿಕೆ..!

ಸಿಇಒ ಡಾನ್ ಪ್ರೈಸ್ ತೆಗೆದುಕೊಂಡ ಈ ನಿರ್ಧಾರದಿಂದ ಕಂಪೆನಿಗೆ ಏನು ಪ್ರಯೋಜನವಾಯಿತಿ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಹೌದು, ಡಾನ್ ತೆಗೆದುಕೊಂಡ ನಿರ್ಧಾರದಿಂದ ಕಂಪನಿಯ ಆದಾಯವು ಮೂರು ಪಟ್ಟು ಹೆಚ್ಚಾಗಿದೆ. ಗ್ರಾಹಕರ ಸಂಖ್ಯೆ ದ್ವಿಗುಣವಾಗಿದೆ, ಸಂಸ್ಥೆಯ ಉದ್ಯೋಗಿಗಳ ಬದುಕು ಮೊದಲಿಗಿಂತ ಚೆನ್ನಾಗಿದ್ದು, ಸಂಸ್ಥೆಯ ಉದ್ಯೋಗಿಗಳು ಹೊಸದಾಗಿ ಖರೀದಿಸಿದ ಮನೆಗಳು 10 ಪಟ್ಟು ಹೆಚ್ಚಾಗಿದೆ. ಉದ್ಯೋಗಿಗಳು ದಾಖಲೆಯ ಮಾರಾಟವನ್ನು ನಡೆಸಿದ್ದಾರೆ ಮತ್ತು ನಾವು ಈಗ 20,000 ಸಣ್ಣ ವ್ಯಾಪಾರ ಗ್ರಾಹಕರನ್ನು ಹೊಂದಿದ್ದೇವೆ ಎನ್ನುತ್ತದೆ ಕಂಪೆನಿ. 

ಈ ಬಗ್ಗೆ ಹರ್ಷ ವ್ಯಕ್ತ ಪಡಿಸುವ ಡಾನ್, 'ನಾನು ಇನ್ನೂ ಉತ್ತಮ ಬಾಸ್ ಆಗಲು ಕಲಿಯುತ್ತಿದ್ದೇನೆ. ಇತರ ಸಿಇಒಗಳಿಗೆ ಹೋಲಿಸಿದಾಗ ಮಾತ್ರ ನಾನು "ಚೆನ್ನಾಗಿ" ಕಾಣುತ್ತೇನೆ. ನಾನು ಇನ್ನಷ್ಟು ಚೆನ್ನಾಗಿ ನನ್ನ ಉದ್ಯೋಗಿಗಳೊಂದಿಗೆ ಇರಲು ಬಯಸುತ್ತೇನೆ ಎನ್ನುತ್ತಾರೆ.

'ನಿಮ್ಮ ಉದ್ಯೋಗಿಗಳನ್ನು ಕೇಳಿ, ಅವರನ್ನು ನಂಬಿ, ಅವರಿಗೆ ಸಂಸ್ಥೆಯಲ್ಲಿ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿ. ಕಂಪನಿಯ ಯಶಸ್ಸಿಗೆ ಉದ್ಯೋಗಿಗಳೇ ಕಾರಣ. ಸಿಇಒಗಳಲ್ಲ. ’ ಎಂದು ಅಬಿಪ್ರಾಯ ವ್ಯಕ್ತಪಡಿಸುತ್ತಾರೆ ಡಾನ್. 

-ಶ್ರೀರಾಜ್ ವಕ್ವಾಡಿ

Saturday, July 31, 2021

'ಸುರಗಂಗೆ' ಪಾರ್ವತಿ ಜಿ. ಐತಾಳರ ಕೃತಿಗಳ ಒಳಸೂಚಿ

 


ಡಾ. ಪಾರ್ವತಿ ಜಿ. ಐತಾಳ್ ಇದುವರೆಗೆ ಪ್ರಕಟಿಸಿದ ಅಪೂರ್ವ ಸಾಹಿತ್ಯ ಕೊಡುಗೆಗಳ ಸಂಕಲನ 'ಸುರಗಂಗೆ'. ಅನುವಾದ ಕ್ಷೇತ್ರದಲ್ಲಿ ಅತ್ಯಪೂರ್ವ ಸಾಧನೆಗೈದಿರುವ ಅವರ ಬದುಕೇ ಸಾಹಿತ್ಯಕ್ಕೆ ಒಂದು ರೀತಿಯಲ್ಲಿ ಮುಡಿಪು‌. 

ಬದುಕು ಮತ್ತು ಬರಹ, ಕಾವ್ಯ ಮತ್ತು ಸ್ಪಂದನ, ಕೃತಿ ಮತ್ತು ಕೃಷಿಗಳ ಒಟ್ಟು ಸ್ವರೂಪವಾಗಿ 'ಸುರಗಂಗೆ' ಮೂಡಿಬಂದಿದೆ. ಅವರ ಸಂವೇದನೆಯೇ ಇಲ್ಲಿ ಬರಹಗಳ ಮೂರ್ತರೂಪವೆತ್ತಿವೆ‌. ಕನ್ನಡ ಮಲಯಾಳಂ ಒಳಗೊಂಡು ಪಂಚ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಮಾಡುತ್ತಿರುವ ಪಾರ್ವತಿ ಜಿ‌. ಐತಾಳ್ ಅವರನ್ನೇ ಪ್ರತಿಬಿಂಬಿಸುವ ಅವರ 80 ಕ್ಕೂ ಅಧಿಕ ಕೃತಿಗಳ ಒಟ್ಟು ತೆಳು ಸಾರದಂತೆ ಹೊರಬಂದಿದೆ ಈ ಕೃತಿ‌. 

ಆತ್ಮಸ್ಥೈರ್ಯ ತೋರಿದ ಸೃಜನಶೀಲ ಸಂಕಲ್ಪ ಶಕ್ತಿಯಾಗಿ ತೋರುವ ಸ್ತ್ರೀ ಅಂತರ್ಮುಖಗಳು ಪಾರ್ವತಿ ಜಿ. ಐತಾಳ್ ಅವರ ಅಷ್ಟೂ ಕೃತಿಗಳಲ್ಲಿ ಕಾಣಸಿಗುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ‌. ಅವರ ಕೃತಿಗಳನ್ನು ಓದುವುದೇ ಒಂದು ಸ್ತ್ರೀಯರ ಬದುಕಿನ ಸಮರ್ಥ ಹಾಗೂ ಸಾರ್ಥಕ ಸಂವೇದನೆ ಎಂದರೇ ತಪ್ಪಾಗಲಾರದು. 

ಸ್ತ್ರೀ ಸಂವೇದನೆಯ ಬಂಡಾಯ ಧೋರಣೆಯಲ್ಲಿ ಮೂಡಿ ಬಂದಿಲ್ಲ ಎನ್ನುವುದೇ ಪಾರ್ವತಿ ಜಿ. ಐತಾಳ್ ಅವರ ಎಲ್ಲಾ ಕೃತಿಗಳ ಹಿರಿಮೆ. ಅದೊಂದು ಸಮಾಜದ ಧ್ವನಿ, ಉಸಿರು, ವೇದನೆಯಾಗಬೇಕು ಎನ್ನುವುದೇ ಅವರ ಎಲ್ಲಾ ಕೃತಿಗಳ ಆಶಯ. ಸಿಡಿ, ಗುಡುಗು, ಕಿಡಿ, ದಾಳಿ, ದ್ವೇಷ, ಅಸೂಯೆ, ಸೌಮ್ಯ ಹೀಗೆ ಹೆಣ್ಣಿನ ಎಲ್ಲಾ ವಯಸ್ಸಿನ, ಎಲ್ಲಾ ಆಯಾಮದ ವಸ್ತು ಚಿತ್ರಣವನ್ನು ಅವರ ಕಥಾ ವಸ್ತುಗಳ ಆಯ್ಕೆಯಲ್ಲಿ ನಮಗೆ ಕಾಣಸಿಗುತ್ತವೆ. 

ವಿಶ್ವದ ನೆಲೆಯಲ್ಲಿ ಸ್ತ್ರೀ ಸ್ತರಗಳ ಸ್ವರ ಇರಬೇಕು ಎಂಬ ಆಶಯ ಒಟ್ಟು ಸಂಕಲನವಾಗಿ ಈ ಕೃತಿ ಹೊರಬಂದಿದೆ‌. ನರೇಂದ್ರ ಎಸ್‌. ಗಂಗೊಳ್ಳಿ ಇದರ ಸಂಪಾದನೆಯನ್ನು ಚೆನ್ನಾಗಿ ಮಾಡಿದ್ದಾರೆ. 

ದಾರ್ಶನಿಕ ಪ್ರಜ್ಞೆಗಳ ದಾಖಲೀಕರಣ ಪಾರ್ವತಿ ಜಿ. ಐತಾಳ್ ಅವರ ಅನುವಾದ ಕೃತಿಗಳಲ್ಲಿ ಕಾಣುವ ಗುಣಧರ್ಮ‌. ಗೊತ್ತಿಲ್ಲದ ಒಬ್ಬ ಲೇಖಕನ ಬದುಕನ್ನು ಮತ್ತು ಅವರ ಕೃತಿಯನ್ನು ಪರಿಚಯಿಸುವ ಕೆಲಸವನ್ನು ಮಾತ್ರ ಮಾಡುವುದು ಅನುವಾದವಲ್ಲ, ಇನ್ನೊಂದು ಭಾಷೆಗೆ ಭಾವವನ್ನು ಜೋಡಿಸುವ ಕೆಲಸವನ್ನು ಅನುವಾದ ಮಾಡುತ್ತದೆ ಎಂದು ತೋರಿಸಿಕೊಟ್ಟ ಕೆಲವೇ ಕೆಲವು ಅನುವಾದಕರಲ್ಲಿ ಡಾ‌. ಪಾರ್ವತಿ ಜಿ. ಐತಾಳ್ ಅಗ್ರಸ್ಥಾನದಲ್ಲಿ ಕಾಣಿಸುತ್ತಾರೆ ಎನ್ನುವುದಕ್ಕೆ ಅವರ ಅನುವಾದ ಕೃತಿಗಳಲ್ಲಿನ ಆಪ್ತ ಶೈಲಿಯೇ ಸಾಕ್ಷಿ‌. 

ಬರಿಯ ಸ್ತ್ರೀ ಸಂವೇದನೆ ಅಲ್ಲ ಅಥವಾ ಬರಿಯ ಸ್ತ್ರೀ ಪರ ಕಾಳಜಿ ಅಲ್ಲ‌. ಸ್ತ್ರೀ ಪುರುಷರ ಸಮಾನತೆಯ ಮೃದುವಾದ ವಾದ ಸಂವಾದಗಳು ಇವರ ಕೃತಿಗಳಲ್ಲಿ ಗಮನಾರ್ಹ. ಮಾನವ ಸಂಬಂಧಗಳ ಬೆಳವಣಿಗೆ ಹಾಗೂ ಅದರ ಉಳಿವಿಕೆಯೂ ಅವರ ಎಲ್ಲಾ ಕೃತಿಗಳಲ್ಲಿ ಮುಖ್ಯಾಂಶಗಳಾಗಿ ಕಾಣಸಿಗುತ್ತವೆ. ಪ್ರಸ್ತುತತೆಗೆ ದರ್ಪಣ ರೂಪಿಯಾಗಿಯೂ ಅವರ ಸ್ವರಚಿತ ಹಾಗೂ ಅನುವಾದ ಕೃತಿಗಳಿವೆ ಎನ್ನುವುದು ವಿಶೇಷ. ಅಂದರೇ ಕೇವಲ ಕಾಲ್ಪನಿಕ ಮಾತ್ರವಲ್ಲ ವಾಸ್ತವದ ವಸ್ತು ಚಿತ್ರಣವೂ ಇಲ್ಲಿ ಪ್ರಾಧಾನ್ಯತೆಯನ್ನು ಕಂಡುಕೊಳ್ಳುತ್ತವೆ‌. 

ಕೃತಿಗಳು ಒಂದು ಚಿಂತನೆಗೆ ಒಳಪಡಿಸಬೇಕು. ಅವಘಡಗಳನ್ನು ತಂದಿತ್ತ ಪಲ್ಲಟಗಳಿಗೆ ಉತ್ತರವಾಗಿರಬೇಕು. ಸಂವೇದನೆಯನ್ನು ಮೀಟುವ ಶಕ್ತಿಯಾಗಿರಬೇಕು ಎನ್ನುವುದಕ್ಕೆ ಪ್ರತಿರೂಪವಾಗಿ ಇವರ ಕೃತಿಗಳಿವೆ ಎನ್ನುವುದು ಸತ್ಯ. 

ಸ್ತ್ರೀ ಸಂವೇದನೆಯ ಆಕ್ರೋಶಗಳು ಅವರ ಕೆಲವು ಕೃತಿಗಳಲ್ಲಿ ಸಣ್ಣದಾದ ಎಳೆ ತೋರಿಸಿಕೊಟ್ಟರೂ, ಪಾರ್ವತಿ ಜಿ. ಐತಾಳ್ ವಾಸ್ತವ ಬದುಕಿನಲ್ಲಿ ಬಂಡಾಯ ಎದ್ದೋ, ಹೋರಾಟ ಮಾಡಿಯೋ, ಪ್ರತಿಭಟನೆ ಮಾಡಿಯೋ ತಾನು 'ಸ್ತ್ರೀ ಧ್ವನಿ' ಎಂದು ತೋರಿಸಿಕೊಟ್ಟಂತಹ ವ್ಯಕ್ತಿತ್ವದವರಲ್ಲ. ಅವರೊಳಗಿನ ಅವ್ಯಕ್ತಗಳು ಅವರ ಕೃತಿಗಳಲ್ಲಿ ನೈಜ ಧ್ವನಿಯಾಗಿ ವ್ಯಕ್ತವಾಗಿವೆ ಎನ್ನುವುದಕ್ಕೆ ಅವರ ಕೃತಿಗಳು ಹಾಗೂ ಕುವೆಂಪು ಭಾಷಾ ಭಾರತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೊಳಗೊಂಡು ಅನೇಕ ಪ್ರಶಸ್ತಿಗಳು ಲಭಿಸಿದ್ದೇ ಸಾಕ್ಷಿ. 

ಮತ್ತೊಂದು ವಿಚಾರ ಅವರ ಕೃತಿಗಳಲ್ಲಿ ಕಾಣುವುದೇನೆಂದರೇ, ಸಂವೇದನೆ ಎನ್ನುವುದು ಬೌದ್ಧಿಕ ಚರ್ಚೆ ಮಾತ್ರವಲ್ಲ. ಅದಹ ಬೌದ್ಧಿಕ ಚರ್ಚೆಯ ಗಡಿ ದಾಟಿ ಎಲ್ಲಾ ವರ್ಗದ ಮಹಿಳೆಯರಿಗೆ ತಲುಪಬೇಕೆಂಬ ಆಶಯವಿದೆ‌. ಅನಾಮಿಕವಾಗಿಯೇ ಉಳಿದುಬಿಟ್ಟ ಅದೆಷ್ಟೋ ಹೆಣ್ಣು ಮಕ್ಕಳ ಮೂಕ ಸಂವೇದನೆಯನ್ನು ಅಕ್ಷರಕ್ಕಿಳಿಸಿ ಸಮಾಜದ ವ್ಯವಸ್ಥೆಗೆ ರಾಚುವಂತಹ ಶಕ್ತಿ ಅವರ ಬಹುತೇಕ ಎಲ್ಲಾ ಕೃತಿಗಳಲ್ಲಿ ಕಾಣಸಿಗುತ್ತವೆ.

ಇಷ್ಟೆಲ್ಲಾ ಪ್ರಬಲ ಧ್ವನಿ ಇರುವ ಒಬ್ಬ ಲೇಖಕಿಯ ಸುಮಾರು ಎಂಬತ್ತಕ್ಕೂ ಅಧಿಕ ಕೃತಿಗಳು ಕನ್ನಡದ ಓದುಗರಿಗೆ ಅಷ್ಟಾಗಿ ತಲುಪಿಲ್ಲ ಎನ್ನುವ ಬೇಸರ ನನಗಿದೆ. ಸಂಪಾದಕರು ಮತ್ತು ಅವರ ಬಳಗ ಅದೇ ಬೇಸರದಲ್ಲಿ ಪಾರ್ವತಿ ಜಿ. ಐತಾಳ್ ಅವರ ಕೃತಿ ನೋಟವನ್ನಾದರೂ ಕನ್ನಡದ ಓದುಗರಿಗೆ ತಲುಪಿಸುವ ಪ್ರಯತ್ನದಲ್ಲಿ ಈ 'ಸುರಗಂಗೆ'ಯನ್ನು ಹೊರಗೆ ತಂದಿರಬಹುದೆಂದು ನನಗೆ ಅನ್ನಿಸಿದೆ‌. ಪಾರ್ವತಿ ಜಿ. ಐತಾಳ್ ಅವರಿಗೆ ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರಿದೆ, ಸ್ಥಾನಮಾನವಿದೆ‌.  ಕನ್ನಡದಲ್ಲಿ ಅಷ್ಟಿಲ್ಲ. ಅದು ಬಲಾಢ್ಯರ ಪಾಲಾಗಿದೆ ಅಂತ ನನಗೆ ಅದೆಷ್ಟೋ ಬಾರಿ ಅನ್ನಿಸಿದೆ‌. ಕನ್ನಡದಲ್ಲಿಯೂ ಪಾರ್ವತಿ ಜಿ. ಐತಾಳ್ ಅಂತಹ ಒಬ್ಬ ಒಳ್ಳೆಯ ಲೇಖಕಿಯ ಧ್ವನಿಯನ್ನು ಮತ್ತಷ್ಟು ಪರಿಚಯಕ್ಕೆ ತರುವ ಪ್ರಯತ್ನದಲ್ಲಿ ಸಂಪಾದಕರು ಮತ್ತು ಅವರ ತಂಡ ಮಾಡಿದ ಪ್ರಯತ್ನ ಮೆಚ್ಚುವಂತದ್ದು‌. ಆ ಪ್ರಯತ್ನ ಸಾಫಲ್ಯ ಕಂಡುಕೊಳ್ಳಲಿ. 

ಪಾರ್ವತಿ ಜಿ. ಐತಾಳ್ ಅವರ ಕೃತಿಗಳು ಕೇವಲ ಓದಿಗೆ ಖುಷಿ ಕೊಡುವವು ಮಾತ್ರ ಅಲ್ಲ. ಅದರೊಳಗೆ ಪರಾಮರ್ಶಿಸುವ, ಚಿಂತನೆಗೊಳಪಡಿಸುವ ಅಗಾಧ ಶಕ್ತಿಗಳಿವೆ‌. ಅದರ ಇಣುಕು ನೋಟ 'ಸುರಗಂಗೆ'ಯಾಗಿ ಬಂದಿದೆ‌. ಲೇಖಕಿಯ ಎಲ್ಲಾ ಕೃತಿಗಳನ್ನು ಓದುವುದಕ್ಕೆ ಸಿಗದವರಿಗೆ, ಅವರ ಬಗ್ಗೆ ತಿಳಿಯುವುದಕ್ಕೆ 'ಸುರಗಂಗೆ' ವಿಕಿಪೀಡಿಯ ಇದ್ದ ಹಾಗೆ. 

ಅವರಿಂದ ಸ್ತ್ರೀ ಸಂವೇದನೆಯ ಹೊಸ ನೆಲೆಗಟ್ಟಿನ ಕೃತಿಗಳು ಮತ್ತಷ್ಟು ಬರಲಿ ಎನ್ನುವುದು ನನ್ನ ತುಂಬೊಲವಿನ ಹಾರೈಕೆಯೊಂದಿಗೆ ಒಳ್ಳೆಯ ಓದಿನ ಚಿಂತನೆ ನೀಡಬಲ್ಲ ಪಾರ್ವತಿ ಅವರ ಕೃತಿಗಳು ನಿಮ್ಮ ಓದಿಗೆ ದಕ್ಕಲಿ‌. 

-ಶ್ರೀರಾಜ್ ವಕ್ವಾಡಿ


ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!

 



ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ಕೊಂಚ ಮಟ್ಟಿಗೆ ದೇಶ ಮತ್ತೆ ಚೇತರಿಸಿಕೊಳ್ಳುತ್ತಿದೆ ಎಂಬಷ್ಟರಲ್ಲೇ ಕೇರಳದಲ್ಲಿ ಕೋವಿಡ್ ಸೋಂಕಿನ ಮೂರನೇ ಅಲೆಯ ಸುಳಿವು ಸಿಕ್ಕಿದ್ದು, ಈಗ ಮತ್ತಷ್ಟು ಆಘಾತಕಾರಿಯಾಗಿದೆ. 

ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಮಾದರಿ ರಾಜ್ಯ ಎನ್ನಿಸಿಕೊಂಡಿದ್ದ ಕೇರಳದಲ್ಲಿ ಈಗ ಸೋಂಕು ನಿಯಂತ್ರಣಕ್ಕೆ ಬಾರದೇ ಕಳೆದ ಕೆಲವು ದಿನಗಳಿಂದ ಪ್ರತಿ ನಿತ್ಯ ಇಪ್ಪತ್ತು ಸಾವಿರಕ್ಕೂ ಹೆಚ್ಚು ಸೋಂಕು ಪತ್ತೆಯಾಗುತ್ತಿರುವುದರಿಂದ ಮೂರನೇ ಅಲೆ ತನ್ನ ಹಬ್ಬುವಿಕೆಯನ್ನು ಆರಂಭ ಮಾಡಿದೆಯೇ ಎಂಬ ಪ್ರಶ್ನೆಯೊಂದನ್ನು ಎಬ್ಬಿಸಿದೆ. 

ಕೋವಿಡ್ ನ ಮೊದಲ ಅಲೆಯನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದ ಕೇರಳ, ಈಗ ಯಾಕೆ ವಿಫಲವಾಯಿತು..? ಕೇರಳ ಸರ್ಕಾರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯದ ಧೋರಣೆ ಮಾಡಿತೇ..? 

ದೇವರ ನಾಡು ಎಂದು ಕರೆಸಿಕೊಳ್ಳೂವ ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿಯೂ ಈಗ ಸೋಂಕಿನ ಹೆಚ್ಚಳವಾಗುತ್ತಿರುವುದು ಮತ್ತಷ್ಟು ಭೀತಿ ಹೆಚ್ಚಿಸಿದೆ. 

ಕಳೆದ ಬಾರಿ ಕೋವಿಡ್  ಸೋಂಕು ತಡೆಗಟ್ಟುವಲ್ಲಿ ಕೇರಳ ಸರ್ಕಾರ ಕೈಗೊಂಡ ಕ್ರಮಗಳು ಅಂತರಾಷ್ಟ್ರೀಯ  ಮಟ್ಟದಲ್ಲಿ ಮೆಚ್ಚುಗೆ ಪಡೆದಿದೆ. ಕೇರಳದಲ್ಲಿ ಸೋಂಕು ಮೊದಲು ಕಾಣಿಸಿಕೊಂಡಾಗಲೇ 28 ದಿನಗಳ ಕ್ವಾರಂಟೈನ್, ಹಳ್ಳಿ ಹಳ್ಳಿಗಳಲ್ಲಿ ಕ್ಲೀನಿಂಗ್, ಸ್ಕ್ರೀನಿಂಗ್ ಬೂತ್‌ ಗಳನ್ನು ಅಳವಡಿಸಿದ್ದಲ್ಲದೇ, ಅಲ್ಲಿನ ತುರ್ತು ಪರಿಸ್ಥಿತಿಗಾಗಿ ಕೇರಳ ಸರ್ಕಾರ ಬರೋಬ್ಬರಿ 20,000 ಕೋಟಿ ಪ್ಯಾಕೇಜ್, ರಿವರ್ಸ್ ಕ್ವಾರಂಟೈನ್ ನಂತಹ ಉಪಕ್ರಮಗಳನ್ನು ಜಾರಿಗೆ ತಂದು ಪ್ರಶಂಸೆಗೆ ಪಾತ್ರವಾಯಿತು. ಆದರೇ, ಈಗ ಮತ್ತೆ ಅದೇ ಕೇರಳ ಕೋವಿಡ್ ಸೋಂಕಿನಿಂದ ಬಳಲುತ್ತಿದೆ. 

ಕಳೆದ ಬಾರಿ ದೇಶದಾದ್ಯಂತ ಲಾಕ್ ಡೌನ್ ತೆರವುಗೊಳಿದರೇ ಏನಾಗಬಹುದು ಎಂಬುದರ ಬಗ್ಗೆ ಚಿಂತೆ ಮಾಡಿತ್ತು ಕೇರಳ. ರಿವರ್ಸ್ ಕ್ವಾರಂಟೈನ್ ಯೋಜನೆಯನ್ನು ರೂಪುಗೊಳಿಸಿ ಕೋವಿಡ್ ಸೋಂಕಿನಿಂದ ಹಿರಿಯವರನ್ನು ರಕ್ಷಿಸುವಲ್ಲಿ ನಿರಂತರ ಪ್ರಯತ್ನ ಮಾಡಿತ್ತು ಎನ್ನುವುದನ್ನು ಮರೆಯುವಂತಿಲ್ಲ. 

ಕೇರಳ ಮೊದಲ ಅಲೆಯಲ್ಲಿ ಜಾರಿಗೆ ತಂದಿದ್ದ “ರಿವರ್ಸ್ ಕ್ವಾರಂಟೈನ್” ಅಂದ್ರೆ ಏನು..? 

 ‘ರಿವರ್ಸ್ ಕ್ವಾರಂಟೈನ್’ಕೋ ವಿಡ್ ಸೋಂಕನ್ನು ಬಡಿದೋಡಿಸಬೇಕೆಂಬ ಉದ್ದೇಶದಿಂದ ಆಗಿನ ಪಿಣರಾಯ್ ವಿಜಯನ್ ನೇತೃತ್ವದ ಸರ್ಕಾರದ ಆರೋಗ್ಯ ಮಂತ್ರಿಯಾಗಿದ್ದ ಕೆ. ಕೆ ಶೈಲಜಾ (ಶೈಲಜಾ ಟೀಚರ್) ಜಾರಿಗೆ ತಂದ ಯೋಜನೆ.  

ಸೋಂಕು ನಿಯಂತ್ರಣಕ್ಕೆ ಬರಬೇಕು, ನಾಗರಿಕರ ಬದುಕು ಕೂಡ ಸಹಜ ಸ್ಥಿತಿಗೆ ಬರಬೇಕು ಎಂಬೆಲ್ಲಾ ಯೋಜನೆಗಳ ಬಗ್ಗೆ ಸಮಯೋಚಿತವಾಗಿ ಪೂರ್ವವಾಗಿ ಯೋಜಿಸಿ ಈ ರಿವರ್ಸ್ ಕ್ವಾರಂಟೈನ್ ಯೋಜನೆಯನ್ನು ರಾಜ್ಯದಾದ್ಯಂತ ಕಾರ್ಯ ರೂಪಕ್ಕೆ ತಂದಿತ್ತು.  

ಈ ಕ್ವಾರಂಟೈನ್ ಸಂಪೂರ್ಣ ಭಿನ್ನವಾಗಿತ್ತು. ಸೋಂಕು ತಗಲಿದವರನ್ನು ಅಥವಾ ಅವರನ್ನು ಸಂಪರ್ಕಿಸಿದವರನ್ನು ಪ್ರತ್ಯೇಕಿಸಿ ಇಡುವುದು ಕ್ವಾರಂಟೈನ್ ಆದರೇ, ಸೋಂಕು ಇಲ್ಲದೇ ಇರುವವರನ್ನೂ ಪ್ರತ್ಯೇಕಿಸಿ ಇರಿಸುವುದೇ ಕೇರಳದ ಈ ರಿವರ್ಸ್ ಕ್ವಾರಂಟೈನ್‌ ನ ಸೂತ್ರವಾಗಿತ್ತು. ಇಡೀ ದೇಶಕ್ಕೆ ದೇಶವೇ ಹೋಮ್ ಕ್ವಾರಂಟೈನ್‌ ನಲ್ಲಿರುವಾಗ ಇದೇನು ವಿಶೇಷ ಅಲ್ಲ ಅಂತನ್ನಿಸಿದರೂ ಶೈಲಜಾ ಟೀಚರ್ ಅವರ ಪ್ಲ್ಯಾನ್ ಸಕ್ಸಸ್ ಆದ ಮೇಲೆ ವಿಶ್ವದೆಲ್ಲೆಡೆಯಿಂದ ಶ್ಲಾಘನೆಯ ಮಹಾಪೂರವೇ ಹರಿದು ಬಂದಿತ್ತು. 

ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಗುರುತಿಸಿ ಅವರನ್ನು ಯಾವುದೇ ರೀತಿಯಲ್ಲಿ ಸೋಂಕಿಗೆ ಒಳಗಾಗದಂತೆ ಮನೆಯಲ್ಲಿಯೇ ಪ್ರತ್ಯೇಕಿಸಿ ಇರಿಸುವುದೇ ಕೇರಳ ಸರ್ಕಾರದ ರಿವರ್ಸ್ ಕ್ವಾರಂಟೈನ್‌ ನ ಯೋಜನೆ. ಕೇರಳದ ಒಟ್ಟು 3.47 ಕೋಟಿ ಜನಸಂಖ್ಯೆಯ ಪೈಕಿಯಲ್ಲಿ ಅಂದಾಜು 12 ರಿಂದ 13 ಶೇಕಡಾ ಜನರು ಅನಾರೋಗ್ಯದಿಂದಿದ್ದಾರೆ ಕೇರಳ ಸರ್ಕಾರ ಹೇಳುತ್ತದೆ.

 ಸ್ಥಳೀಯ ಮಟ್ಟದ ಆಡಳಿತಗಳ ಸಹಾಯದಿಂದ ಅನಾರೋಗ್ಯದವರನ್ನೆಲ್ಲಾ ಪತ್ತೆಹಚ್ಚಿ ಅವರನ್ನು ಸುರಕ್ಷಿತವಾಗಿರಿಸುವ ಕೇರಳ ಸರ್ಕಾರದ ಯೋಚನೆಯಿದು. ಟ್ರ್ಯಾಕ್, ಟ್ರೇಸ್, ಟ್ರೀಟ್‌ಮೆಂಟ್ ಸೂತ್ರವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವುದಕ್ಕೆ ಕೇರಳ ಸರ್ಕಾರ ವೈದ್ಯಕೀಯ ಇಲಾಖೆಗಳ ಸಹಕಾರದೊಂದಿಗೆ ಒಂದು ಹೆಜ್ಜೆ ಮುಂದಿಟ್ಟ ಯೋಜನೆ.  

ಇನ್ನು, ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸಲು, ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ನಿವಾರಿಸಲು ಹಾಗೂ ಸಾಮಾಜಿಕ ಜನ ಜೀವನವನ್ನು ಸಹಜ ಸ್ಥಿತಿಗೆ ಬರುವಂತೆ ಮಾಡುವ ಬಗ್ಗೆ ಕೇಂದ್ರ ಸರ್ಕಾರವನ್ನು ಒಳಗೊಂಡು ಎಲ್ಲಾ ರಾಜ್ಯ ಸರ್ಕಾರಗಳು ಯೋಜನೆ ಮಾಡುತ್ತಿದ್ದ ಸಂದರ್ಭ, ಬಹುತೇಕ ಎಲ್ಲಾ ರಾಜ್ಯಗಳು ಹಣೆಗೆ ಕೈಕೊಟ್ಟು ಕೂತಿದ್ದವು. ಇನ್ನು, ಲಾಕ್ಡೌನ್ ಕೊಂಚ ಸಡಿಲಗೊಳಿಸುವುದನ್ನೂ ಕೆಲವು ರಾಜ್ಯ ಸರ್ಕಾರಗಳು ಮಾಡುವುದಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ, ಕೇರಳ ಸರ್ಕಾರ ಮಾತ್ರ ಮುಂದಾಲೋಚನೆಯಿಂದ ಆರ್ಥಿಕ ಸ್ಥಿತಿ ಸರಿದೂಗಿಸುವ ಯೋಚನೆಯೊಂದಿಗೆ ಇಂತಹದ್ದೊಂದು ನೂತನ ಸೋಂಕು ನಿಯಂತ್ರಣಕ್ಕೆ ತರುವ ಮಾರ್ಗದ ಪ್ರಯತ್ನಕ್ಕೆ ಅಲ್ಲಿನ ಸ್ಥಳಿಯ ಆಡಳಿತದ ಸಹಕಾರದಿಂದ ಮುಂದಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು. 

ಹೌದು,  ರಾಜಕೀಯ ಸಿದ್ಧಾಂತಗಳಲ್ಲಿ ಭಿನ್ನತೆ ಇದೆ ಎಂಬ ಕಾರಣದಿಂದ ಕೇರಳವನ್ನು ಬದಿಗೆ ದೂಡುವ ಧೋರಣೆಯೊಂದು ರಾಜಕೀಯ ವಲಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ಕೂಡ ನಡೆದಿತ್ತು ಎನ್ನುವುದನ್ನು ಒಪ್ಪಲೇಬೇಕು. ಆದರೇ, ಕೇರಳ ಸರ್ಕಾರ ಸೋಂಕು ನಿವಾರಣೆಗೆ  ಕೈಗೊಂಡ ಕ್ರಮಗಳಿಂದ ಅಲ್ಲಿನ ಸೋಂಕಿನ ಹೊಸ ಪ್ರಕರಣಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸಿ ಜಗತ್ತಿಗೆ ತೋರಿಸಿದೆ. 

ಮೊದಲನೆ ಅಲೆಯ ಸಂದರ್ಭದಲ್ಲಿ ರಾಷ್ಟ್ರದ ಅತಿ ಹೆಚ್ಚು ಸೋಂಕಿತರು ಹೊಂದಿರುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಕೇರಳ, ಸೋಂಕು ಹರಡುವಿಕೆಯ ನಿಯಂತ್ರಣ ಮಾಡುವ ಬಿಗಿ ಕ್ರಮಗಳನ್ನು ಪಾಲನೆಗೆ ತರುವ  ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ಅದಕ್ಕೆ ಕೇರಳದಲ್ಲಿ, ಕೋವಿಡ್ ತಡೆಗಟ್ಟುವಿಕೆಗೆ ತಂದ ಕ್ರಮಗಳನ್ನು ಅಮೇರಿಕಾ ಮೂಲದ ‘ದಿ ವಾಸಿಂಗ್ಟನ್ ಪೋಸ್ಟ್’ಎಂಬ ಸುದ್ದಿ ಸಂಸ್ಥೆಯೂ ಹಾಡಿ ಹೊಗಳಿದ್ದೇ ಸಾಕ್ಷಿ.

ಕೇರಳಕ್ಕೆ ‘ನಿಫಾ’ ಸೋಂಕನ್ನು ಎದುರಿಸಿದ ಅನುಭವವಿತ್ತು..!

‘ನಿಫಾ’ ಮನುಷ್ಯರಿಂದ ಪ್ರಾಣಿಗಳಿಗೆ, ಪ್ರಾಣಿಗ‌ಳಿಂದ ಮನುಷ್ಯರಿಗೆ  ಹರಡುವ ಸೋಂಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 2018ರಲ್ಲಿ ನಿಫಾ ಸೋಂಕು ಕಾಣಿಸಿಕೊಂಡಾಗಲೇ, ಕೇರಳ ಸರ್ಕಾರ, ಐಸೋಲೇಷನ್, ಕ್ವಾರಂಟೈನ್‌ ಗಳಂತಹ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿತ್ತು. ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಸುಮಾರು 40 ರಿಂದ 5೦ ಮಂದಿಗೆ ಈ ಸೋಂಕು ಕಾಣಿಸಿಕೊಂಡು, ಸೋಂಕಿನಿಂದ ಸುಮಾರು 17 ಮಂದಿ ಸಾವಿಗೀಡಾಗಿದ್ದರು. ಆದರೇ, ನಿಫಾ ಸೋಂಕನ್ನು ರಾಜ್ಯದ ಇತರೆ ಯಾವ ಕಡೆಗಳಿಗೂ ಹರಡದಂತೆ ಕೇರಳ ಸರ್ಕಾರ ಯಶಸ್ವಿಯಾಗಿತ್ತು. ‘ನಿಫಾ’ ಕಾಣಿಸಿಕೊಂಡಾಗ ಎದುರಿಸಿದ ಸವಾಲುಗಳು, ಪಾಲಿಸಿದ ನಿಯಮಗಳು.. ಕೋವಿಡ್ ಸೋಂಕಿನ ಮೊದಲ ಅಲೆಯನ್ನು ನಿಯಂತ್ರಣ ಮಾಡುವಲ್ಲಿ ಕೇರಳ ಸರ್ಕಾರಕ್ಕೆ ಸಹಾಯವಾಗಿವೆ ಎನ್ನುವುದರಲ್ಲಿ ಸಂಶಯವಿಲ್ಲ.

ಆದರೇ, ಈಗೇಕೆ ಹೀಗೆ..? 

ಕೇರಳದಲ್ಲಿಯೇ ಮೊದಲ ಕೊರೋನಾ ಸೋಂಕು ದೃಢಗೊಂಡಿದ್ದು. ಕೇರಳದ ಕಾರಣದಿಂದಾಗಿ ರಾಜ್ಯದ ಮಂಗಳೂರಿಗೆ ಹಾಗೂ ಮಡಿಕೇರಿಗೆ ಅಪಾಯದ ಸಂಭವವೂ ಇದ್ದಿತ್ತು. ಆ ಬಗ್ಗೆ ಕರ್ನಾಟಕ ಸರ್ಕಾರ ತಲೆಗೆ ಕೈವೊತ್ತಿ ಕುಳಿತಿತ್ತು. ಅದೇ ಪರಿಸ್ಥಿತಿ ಈಗ ಮತ್ತೆ ಕರ್ನಾಟಕಕ್ಕೆ ಬಂದಿದೆ. ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಪಾಲನೆಗೆ ಕರ್ನಾಟಕ ಜಾರಿಗೆ ತರುವುದರ ಮೂಲಕ ಯಶಸ್ವಿಯಾಯಿತು. ಈಗ ಅದೇ ಸೂತ್ರವನ್ನು ಕರ್ನಾಟಕ ಮಾಡದಿದ್ದಲ್ಲಿ ಕರ್ನಾಟಕವೂ ಕೂ ಸೋಂಕಿನಿಂದ ಮತ್ತೆ ಸೊರಗಬೇಕಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಕಾಲೋಚಿತ ನಿಯಂತ್ರಣದ ಕ್ರಮಗಳನ್ನು ಕೇರಳ ರಾಜ್ಯ ಸರ್ಕಾರ ಕೈಗೊಂಡಿದ್ದ ಸರ್ಕಾರ ಈಗ ಎಡವಿತೇ..? ಯಾವುದೋ ಒಂದು ಸಮುದಾಯದವರನ್ನು ಓಲೈಸುವುದಕ್ಕೆ ಹೋಗಿ ಈ ಅಪಾಯವನ್ನು ತನ್ನ ಬುಡಕ್ಕೆ ತಂದಿಟ್ಟುಕೊಂಡಿತೇ ಎಂಬ ಚರ್ಚೆ ಸಾಮಾಜಿಕ ವಲಯದಲ್ಲಿ ಈಗ ಹರಿದಾಡುತ್ತಿದೆ. 

ಇತ್ತೀಚೆಗಷ್ಟೇ ಸೆರೋ ಸರ್ವೇ ಬಿಡುಗಡೆಗೊಳಿಸಿದ ಒಂದು ಅಧ್ಯಯನ ವರದಿಯಲ್ಲಿ ಕೇರಳದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಜನರಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯ ಸೃಷ್ಟಿಯಾಗಿದೆ ಎಂದು ಹೇಳಿದೆ. ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯ ಕಡಿಮೆ ಜನರಲ್ಲಿ ಸೃಷ್ಟಿಯಾಗಿರುವುದು ಮತ್ತು ಕೇರಳ ಸರ್ಕಾರ ತೆಗೆದುಕೊಂಡ ಕೆಲವು ತಪ್ಪು ನಿರ್ಧಾರಗಳೇ ಮತ್ತೆ ಕೇರಳದಲ್ಲಿ ಸೋಂಕು ಹೆಚ್ಚಳವಾಗುವುದಕ್ಕ ಕಾರಣ ಇರಬಹುದು ಎನ್ನಲಾಗುತ್ತಿದೆ.  

ಕೋವಿಡ್ ಸೋಂಕಿನ ಜೊತೆಗೆ ಹೊಸದಾಗಿ ಹುಟ್ಟಿಕೊಂಡ ಝೀಕಾ ವೈರಸ್ ಕೂಡ ಕೇರಳದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಕೋವಿಡ್ ನಿಯಂತ್ರಣ ಮಾಡುವಲ್ಲಿ ಮಾದರಿ ರಾಜ್ಯ ಎನ್ನಿಸಿಕೊಂಡಿದ್ದ ಕೇರಳ, ಈಗ ಭಯ ಹುಟ್ಟಿಸುತ್ತಿದೆ ಎನ್ನುವುದು ಸುಳ್ಳಲ್ಲ.  

ಕೇರಳದೊಂದಿಗೆ ತನ್ನ ಗಡಿ ಹಂಚಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪಾಸಿಟಿವಿಟಿ ದರ ಶೇಕಡಾ 4 ನ್ನು ದಾಟಿದೆ. ಕೊಡಗಿನ ಪಾಸಿಟಿವಿಟಿ ದರ 3. 51ಕ್ಕೆ ಹೆಚ್ಚಳವಾಗಿದ್ದು ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ. 

ಒಟ್ಟಿನಲ್ಲಿ,  ಗಡಿ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಿನ ತಪಾಸಣೆ ಮಾಡದಿದ್ದಲ್ಲಿ ಕರ್ನಾಟಕ ಮತ್ತೆ ಕೋವಿಡ್ ಸೋಂಕಿನ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. 

-ಶ್ರೀರಾಜ್ ವಕ್ವಾಡಿ

ನಿಮ್ಮ ಭಾವನೆಯ ಆ ಮೂರು ಅಂಶಗಳ ಬಗ್ಗೆ ನಿಮಗೆ ಮಾಹಿತಿ ಇಲ್ಲ..! ಆ ಅಂಶಗಳ್ಯಾವುವು..?

 



ಮನುಷ್ಯನಿಗೆ ಭಾವನೆಗಳನ್ನು ಹೊರತಾಗಿ ಬದುಕುವುದಕ್ಕೆ ಸಾಧ್ಯವಿಲ್ಲ. ಭಾವನೆಗಳು ನೀವು ಹೇಗೆ ಯೋಚಿಸುತ್ತೀರಿ ಮತ್ತು ಕಾರ್ಯನಿರ್ವಹಿಸುತ್ತವೆ ಎಂಬುದರ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ನೀವು ಪ್ರತಿದಿನ ಅನುಭವಿಸುವ ಭಾವನೆಗಳು ನಿಮ್ಮ ಜೀವನದಲ್ಲಿ ನೀವು ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಮತ್ತು ಪ್ರಭಾವಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ. ಭಾವನೆಯ ಮೂರು ಮೂಲಭೂತ ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬದುಕಿನಲ್ಲಿ ಬಹಳ ಮುಖ್ಯ. ಈ ಮೂರು ಅಂಶಗಳನ್ನು ನಾವು ಅರ್ಥ ಮಾಡಿಕೊಂಡಿಲ್ಲವೆಂದಾದಲ್ಲಿ ಭಾವನೆಗಳಿಂದಲೇ ಕೊರಗಬೇಕಾಗುತ್ತದೆ ಎನ್ನವುದು ಸತ್ಯ. 

ಸಾಮಾನ್ಯವಾಗಿ ಕೆಲವರು ತಮ್ಮನ್ನು ತಾವು ಭಾವನಾತ್ಮಕ ಜೀವಿ ಎಮದು ಗುರುತಿಸಿಕೊಳ್ಳುತ್ತಾರೆ. ಅದು ಇನ್ನೊಬ್ಬರು ತನ್ನ ಮೇಲೆ ಒಂದಿಷ್ಟು ಅನುಕಂಪ ಇಟ್ಟುಕೊಳ್ಳಲಿ ಎಂಬ ತಂತ್ರವೂ ಹೌದು ಎನ್ನುತ್ತದೆ ಮನಃಶಾಸ್ತ್ರ. ಆದರೇ, ಎಲ್ಲಾ ಸಂದರ್ಭದಲ್ಲಿಯೂ ಅಲ್ಲ. 

ಒಂದು ಭಾವನೆಯು ಮೂರು ಅಂಶಗಳಿಂದ ಕೂಡಿದೆ : 

ವ್ಯಕ್ತಿನಿಷ್ಠ ಅಂಶ :  ಇದು ನೀವು ಭಾವನೆಯನ್ನು ಹೇಗೆ ಅನುಭವಿಸುತ್ತೀರಿ ಎನ್ನುವುದರ ಮೇಲೆ ಆಧರಿಸಿ ಇರುತ್ತದೆ. ಭಾವನೆಗಳನ್ನು ಅನುಭವಿಸುವುದು ಮುಖ್ಯ.ಅನುಭವಿಸುವ ಗುಣ ಇಲ್ಲದಿದ್ದರೇ. ಭಾವನೆಗಳಲ್ಲೇ ಮುಳಗಿ ಹೋಗಬೇಕಾಗುತ್ತದೆ ಎನ್ನುವುದು ಅಕ್ಷರಶ‍ಃ ಸತ್ಯ. 

ಶಾರೀರಿಕ ಅಂಶ : ಇದು ನಿಮ್ಮ ದೇಹವು ಭಾವನೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುವುದನ್ನು ಅನುರಿಸಿ ಇರುತ್ತದೆ. ಶಾರೀರಿಕ ಪ್ರತಿಕ್ರಿಯೆಯೂ ಭಾವನೆಗಳಿಗೆ ಮುಖ್ಯವಾಗುತ್ತದೆ. ಭಾವನಗೆಗಳಿಗೆ ಶರೀರ ಪ್ರತಿಕೂಲವಾಗಿ ಸ್ಪಂದಿಸದೇ ಇದ್ದರೇ ವ್ಯತ್ಯಾಸ ಆಗುವ ಸಾಧ್ಯತೆಯೂ ಇದೆ.

ಅಭಿವ್ಯಕ್ತಿಗೊಳಿಸುವ ಅಂಶ  : ಭಾವನೆಗೆ ಪ್ರತಿಕ್ರಿಯೆಯಾಗಿ ನೀವು ಹೇಗೆ ವರ್ತಿಸುತ್ತೀರಿ ಎನ್ನುವುದು ಕೂಡ ಇಲ್ಲಿ ಬಹಳ ಮುಖ್ಯವಾಗುತ್ತದೆ. ಉದಾಹರಣೆಗೆ, ಅಳುವನ್ನು ಅದುಮಿಟ್ಟುಕೊಂಡರೇ, ಅದು ನಿಮ್ಮನ್ನು ಮತ್ತಷ್ಟು ಹಿಂಸಿಸುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಅಳು ಬಂದಾಗ ಅಳುವುದು, ಸಿಟ್ಟು ಬಂದಾಗ ಅದನ್ನು ವ್ಯಕ್ತ ಪಡಿಸಿಕೊಳ್ಳುವುದು ಭಾವನೆಗಳ ವಿಚಾರದಲ್ಲಿ ಮುಖ್ಯವಾಗುತ್ತದೆ.  

ಭಾವನೆಗಳು ಕ್ಷಣಿಕವಾಗಬಹುದು, ಉದಾಹರಣೆಗೆ ಸಹೋದ್ಯೋಗಿಯ ಮೇಲಿನ ಕೋಪ, ಅಥವಾ ಅವರ ಸಂಬಂಧವನ್ನು ಕಳೆದುಕೊಳ್ಳುವ ದುಃಖ ದೀರ್ಘಕಾಲೀನವಾಗಬಹುದು. ಆದರೆ ನೀವು ಮೊದಲಿಗೆ ಭಾವನೆಗಳನ್ನು ಏಕೆ ಅನುಭವಿಸುತ್ತೀರಿ ? ಭಾವನೆಗಳು ಯಾವ ಕಾರ್ಯವನ್ನು ಹೊಂದಿವೆ ? ಭಾವನೆ ನಮಗೆ ಸಹಾಯ ಮಾಡುವ ಕೆಲವು ವಿಧಾನಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

ಭಾವನೆಯು ಚಿತ್ತಸ್ಥಿತಿ, ಮನೋಧರ್ಮ, ವ್ಯಕ್ತಿತ್ವ ಮತ್ತು ಸ್ವಭಾವ ಹಾಗೂ ಪ್ರೇರಣೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಇಂಗ್ಲಿಷ್ ಪದ 'ಇಮೋಷನ್' ನನ್ನು ಫ್ರೆಂಚ್ ಪದ ಇಮೌವಾಯರ್ ನಿಂದ ಪಡೆಯಲಾಗಿದೆ. ಇದು ಲ್ಯಾಟಿನ್ ಪದ ಇಮೋವೀರ್ ನನ್ನು ಆಧರಿಸಿದೆ, ಇದರಲ್ಲಿ ಇ ಅಂದರೆ 'ಹೊರಗೆ' ಮತ್ತು ಮೋವೂರ್ ಅಂದರೆ 'ಚಲನೆ' ಎಂದರ್ಥ.

 ಸಂಬಂಧಿತ ಪದ "ಮೋಟಿವೇಶನ್” ನನ್ನೂ ಸಹ ಮೋವೀರ್ ನಿಂದ ಪಡೆಯಲಾಗಿದೆ.

ಭಾವನೆ ಮತ್ತು ಭಾವನೆಯಿಂದಾಗುವ ಪರಿಣಾಮಗಳ, ಪ್ರಧಾನವಾಗಿ ವರ್ತನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳ, ಮಧ್ಯೆ ಸಂಬಂಧಿತ ಭಿನ್ನತೆ ಇರುತ್ತದೆ. 

ಸಾಮಾನ್ಯವಾಗಿ ಹೆಚ್ಚಿನವು ಅವರವರ ಭಾವನಾತ್ಮಕ ಸ್ಥಿತಿಯ ನೇರ ಪರಿಣಾಮವಾಗಿ ಕೆಲವು ರೀತಿಗಳಲ್ಲಿ ವರ್ತಿಸುತ್ತಾರೆ, ಅಳುವುದು, ಜಗಳವಾಡುವುದು ಅಥವಾ ತೊರೆದುಬಿಡುವುದು ಹೀಗೆ ಹಲವು…. ಅನುಗುಣವಾದ ವರ್ತನೆಯಿಲ್ಲದ ಭಾವನೆಯನ್ನು ಹೊಂದಿದ್ದರೆ, ಭಾವನೆಗೆ ವರ್ತನೆಯ ಅಗತ್ಯವಿಲ್ಲ ಎಂದು ನಾವು ಪರಿಗಣಿಸಬಹುದು.

ಯೋಚನೆಯೊಂದನ್ನು ಪಡೆದು ಅದು ಭಾವನಾತ್ಮಕ ಪ್ರತಿಕ್ರಿಯೆಯಾಗಿ ಹೊರಹೊಮ್ಮುವ ಮೊದಲು ಒಂದು "ಅದ್ಭುತವಾದ ಕೆಲ ಸೆಕೆಂಡು" ಇರುತ್ತದೆ ಎಂದು ನರ ವೈಜ್ಞಾನಿಕ ಸಂಶೋಧನೆಯು ಸೂಚಿಸುತ್ತದೆ. ಆ ಕೆಲ ಕ್ಷಣಗಳಲ್ಲೆ ಭಾವನೆಗಳು ನಮ್ಮನ್ನು ಸಂತೋಷ ಪಡಿಸಲೂ ಬಹದು ಮತ್ತು ದುಃಖ ಪಡಿಸಲೂ ಬಹುದು. 

ಭಾವನೆಗಳನ್ನು ನಮಗೆ ನಿಯಂತ್ರಿಸಲು ಸಾಧ್ಯವಿಲ್ಲವೆನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೇ, ಮೇಲೆ ಹೇಳಿರುವ ಮೂರು ಅಂಶಗಳನ್ನು ಅಳವಡಿಸಿಕೊಂಡರೇ, ಭಾವನೆಗಳಿಗೆ ಪ್ರತಿ ಸ್ಪಂದಿಸುವುದಕ್ಕೆ ಆಗುತ್ತದೆ. ಮಾತ್ರವಲ್ಲದೇ, ಎಲ್ಲಾ ಭಾವನೆಗಳನ್ನು ಕೇವಲ ಭಾವನೆಗಳಂತೆಯೇ ಸ್ವೀಕರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಭಾವನೆಗಳು ‘ಕೊರಗು’ ಗಳಾಗಿ ಪರಿವರ್ತೆನಯಾಗುತ್ತವೆ. 

ನಿಮ್ಮ ಭಾವನೆಗಳು, ನೀವು ಕಂಡುಹಿಡಿದಂತೆ, ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತವೆ. ಭಾವನೆಗಳು ಸಂಕ್ಷಿಪ್ತ, ದೀರ್ಘಕಾಲೀನ, ತೀವ್ರವಾದ, ಮತ್ತು ಸಂಕೀರ್ಣ ಜೀವನವನ್ನು ಬದಲಾಯಿಸುವಂತಹುದು. ಕೆಲವು ರೀತಿಯಲ್ಲಿ ಕಾರ್ಯನಿರ್ವಹಿಸಲು ಅವರು ನಿಮ್ಮನ್ನು ಪ್ರೇರೇಪಿಸಬಹುದು ಮತ್ತು ನಿಮ್ಮ ಸಾಮಾಜಿಕ ಜೀವನದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಬೇಕಾದ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಡುತ್ತದೆ. 

-ಶ್ರೀರಾಜ್ ವಕ್ವಾಡಿ

ಸಂಭೋಗಕ್ಕೆ ಭಯ ಪಟ್ಟು ಹಿಂದೆ ಉಳಿಯುವುದು ಮಾನಸಿಕ ಸಮಸ್ಯೆಗೆ ನೇರ ಕಾರಣವಾಗಬಹುದು ಎಚ್ಚರ..!

 



ಸಾಮಾನ್ಯವಾಗಿ ಸೆಕ್ಸ್ ಬಗ್ಗೆ ಎಲ್ಲರಲ್ಲೂ ಆಸಕ್ತಿ ಇದ್ದೇ ಇರುತ್ತದೆ. ಅದು ಒಂದು ಹಂತದ ತನಕ ಮಾತ್ರ ಅವ್ಯಕ್ತವಾಗಿ ಉಳಿಯುವುದಕ್ಕೆ ಸಾಧ್ಯ. ಅದಕ್ಕೂ ಮೀರಿ ಮನುಷ್ಯ ಬದುಕುಳಿಯಲಾರ.

ಹೊಟ್ಟೆಯ ಹಸಿವನ್ನು ತಣಿಸುವುದಕ್ಕೆ ಹೇಗೆ ಆಹಾರ ಸೇವಿಸುತ್ತಾನೋ, ಹಾಗೆಯೇ ದೇಹದ ಬಯಕೆಯನ್ನು ತಣಿಸುವುದಕ್ಕೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನು ಮನುಷ್ಯ ಮಾಡುತ್ತಾನೆ. ಅದು ನೈಸರ್ಗಿಕವಾಗಿ ಸಹಜವೂ ಹೌದು. ಮಾನವ ಬುದ್ಧಿವಂತ ಎಂದು ಕರೆಸಿಕೊಂಡಿರುವ ಕಾರಣದಿಂದಾಗಿ ಅದಕ್ಕೆ ಒಂದಿಷ್ಟು ಕಟ್ಟು ಪಾಡಗಳನ್ನು ಕೂಡ ಮಾಡಿಕೊಂಡಿದ್ದಾನೆ. ಅದು ನಾಗರಿಕ ಸಮಾಜಕ್ಕೆ ಒಪ್ಪಿಗೆಯಾಗುವ ಹಾಗೆ ಇದೆ. 

 ಮನುಷ್ಯ ಇತರೆ ಪ್ರಾಣಿಗಳಂತಲ್ಲ. ಅವನ ಇರುವಿಕೆಗೆ ಇಂತಂದ್ದೇ ವ್ಯವಸ್ಥೆ, ಕಟ್ಟುಪಾಡು, ಚೌಕಟ್ಟು ಎನ್ನುವುದಿದೆ. ಈ ಲೈಂಗಿಕ ವಿಚಾರದಲ್ಲಿಯೂ ಕೂಡ ಹಾಗೆ. ಮನುಷ್ಯ ತನ್ನದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾನೆ. 

ಆದರೇ, ಮನುಷ್ಯ ಅತ್ಯಂತ ಮಡಿವಂತಿಕೆ ಮಾಡುವ ವಿಚಾರ ಯಾವುದು ಕೇಳಿದರೇ, ಅದು ಸೆಕ್ಸ್. ನಿಜಕ್ಕೂ ಇದು ಮಡಿವಂತಿಕೆ ಮಾಡುವ ವಿಚಾರವಲ್ಲ. ಮತ್ತು ಅದು ಸಂಪೂರ್ಣ ಮುಕ್ತವಾದ ವಿಚಾರವೂ ಕೂಡ ಅಲ್ಲ. ಆದರೇ, ಸೆಕ್ಸ್ ಎನ್ನುವುದು ಕೊಳಕು ಅಲ್ಲ. ಕೊಳಕು ಎನ್ನುವುದಾದರೇ, ಇಡೀ ಪ್ರಪಂಚವೇ ಕೊಳಕಾಗಿದೆ ಎಂದು ನಾವು ಒಪ್ಪಿಕೊಳ್ಳಬೇಕು. ಅದು ಮಾನವ ಬದುಕಿನ ಸಹಜ ಕ್ರಿಯೆ. ಸೆಕ್ಸ್ ನನ್ನು ಅದೊಂದು ಸಹಜ ಕ್ರಿಯೆ ಎಂದು ಮಾತ್ರ ಸ್ವೀಕರಿಸಿಕೊಂಡಾಗ ಮಾತ್ರ ಅದು ಸಹಜ ಕ್ರಿಯೆಯಾಗಿಯೇ ಇರುತ್ತದೆ. ಇಲ್ಲವಾದಲ್ಲಿ ಅದು ಬೇರೆ ಅರ್ಥವನ್ನು ಪಡೆದುಕೊಳ್ಳುತ್ತದೆ. 

‘ಸೆಕ್ಸ್’ ಎನ್ನುವುದು ಇಲ್ಲದೇ ಹೋಗಿದ್ದರೇ, ಇಡೀ ಪ್ರಪಂಚವೇ ಬರಡಾಗಿರುತ್ತಿತ್ತು ಎಂದರೇ, ತಪ್ಪಿಲ್ಲ. ಇಡೀ ಜಗತ್ತಿನ ಸೃಷ್ಟಿಗೆ ಮಿಲನವೇ ಮೂಲ ಎನ್ನುವುದು ಸತ್ಯಾಂಶವಾದರೂ, ಅದನ್ನು ನೋಡುವ ದೃಷ್ಟಿ ಬೇರೆಯೇ ಇದೆ. 

ಇನ್ನು, ಈ ಸೆಕ್ಸ್ ವಿಚಾರಕ್ಕೆ ಬಂದರೇ, ಸಾಕಷ್ಟು ಅಸಹಜ ಭಯ ಇದೆ. ಹೀಗೆ ಹೇಳಿದರೇ, ನಿಮಗೆ ಆಶ್ಚರ್ಯವೆನ್ನಿಸಿದರೂ ಇದು ಅಪ್ಪಟ ಸತ್ಯ. ಈ ಭಯವೂ ಕೂಡ ಅವ್ಯಕ್ತ. ಅದು ಹೇಳಿಕೊಳ್ಳುವುದಕ್ಕೂ ಆಗದೇ, ಹೇಳಿಕೊಳ್ಳದೇ ಇರಲು ಸಾಧ್ಯವಿಲ್ಲದೇ ಇರುವ ಒಂದು ಭೀತಿ ಅಥವಾ ಅಸಹಜ ಭಯ. 

ನಿಮಗೆ ಮದುವೆಯಾಗಿದ್ದರೇ, ನಿಮಗೂ ಈ ಭಯ ಹುಟ್ಟಿರಬಹುದು. ಅಥವಾ ನಿಮ್ಮ ಸಂಗಾತಿಯಲ್ಲಿಯೂ ಕೂಡ ಇಂತಹ ಅಸಹಜ ಭಯ ಇದ್ದಿರಬಹುದು. ಅದರಿಂದ ನಿಮಗೆ ಲೈಂಗಿಕ ಅತೃಪ್ತಿಯೂ ಉಂಟಾಗಿರಬಹುದು. 

ಹೌದು, ಈ ಲೈಂಗಿಕ ವಿಚಾರಕ್ಕೆ ಸಂಬಂಧ ಪಟ್ಟಂತೆ, ಮನಃಶಾಸ್ತ್ರದ ಪ್ರಕಾರ ಸುಮಾರು ಹದಿನೆಂಟು ಫೋಬಿಯಾಗಳಿವೆ. ಅದರಲ್ಲಿ ಒಂದು ಫೋಬಿಯಾದ ಬಗ್ಗೆ ನಾವು ಗಮನಿಸೋಣ.. 

ಇರೋಟೊಫೋಬಿಯಾ/ ಎರೋಟೋಫೋಬಿಯಾ :

ಇದು ಲೈಂಗಿಕತೆಯ ಬಗ್ಗೆ ಯಾವ ವಿಚಾರ ಮಾತನಾಡಿರೂ ಅಸಹಜವಾಗಿ ಹುಟ್ಟಿಕೊಳ್ಳುವ ಭಯ ಎಂದರೇ ತಪ್ಪಿಲ್ಲ. ವಸ್ತುಕ್ರಿಯೆ ಅಥವಾ ಲೈಂಗಿಕ ಕ್ರಿಯೆ, ಅಥವಾ ತನ್ನ ಸಂಗಾತಿಯೊಂದಿಗೆ ಸೇರುವ ವಿಚಾರದಲ್ಲಿ ಆಗುವ ಭಯ ಇದು. ಈ ರೀತಿಯ ಭಯ ಇರುವವರಿಗೆ ಕಾಮ ಬೇಡವೆಂದಲ್ಲ. ಆ ಕ್ರಿಯೆಗೆ ತೊಡಗಿಕೊಳ್ಳುವ ಭಯ ಎಂದು ಹೇಳುತ್ತಾರೆ.

ಸಾಮಾನ್ಯವಾಗಿ ಈ ಲೈಂಗಿಕ ಕ್ರಿಯೆಯ ಬಗ್ಗೆ ಇರುವ ಭಯದ ಕಾರಣಗಳು ಯಾವುವು..? ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ… 

ಹೆಚ್ಚಾಗಿ ಈ ಫೋಬಿಯಾ ಅಥವಾ ಅಸಹಜ ಭಯ ಮಹಿಳೆಯರಲ್ಲಿ ಹೆಚ್ಚಾಗಿ ಇರುತ್ತದೆ ಎಂದು ಮನಃಶಾಸ್ತ್ರ ಕೂಡ ಹೇಳುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಗುಪ್ತಾಂಗಕ್ಕೆ ಅಸಹನೀಯ ನೋವಾಗುತ್ತದೆ. ಆ ನೋವನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎನ್ನುವ ಪೂರ್ವ ಕಲ್ಪಿತ ಭಯ ಇದು. 

ಯಾಕೆ ಈ ಲೈಂಗಿಕತೆಯ ಬಗ್ಗೆ ಇಷ್ಟೊಂದು ಭಯ ಇರಲು ಸಾಧ್ಯ ಎಂದು ನಿಮ್ಮಲ್ಲಿ ಪ್ರಶ್ನೆ ಮೂಡಿದರೇ, ಕೆಲವು  ಕಾರಣಗಳನ್ನು ಗಮನಿಸೋಣ, ಆದರೇ, ಈ ಎಲ್ಲಾ ಅಸಹಜ ಭಯಗಳು ಅಥವಾ ಕಾರಣಗಳು ನಿಮಗೆ ಕ್ಷುಲ್ಲಕ ಅಂತನ್ನಿಸಬಹುದು. ಆದರೇ, ಇದೇ ಸಣ್ಣ ಕಾರಣಗಳಿಂದ ಲೈಂಗಿಕತೆ ಬಯಕೆ ಇದ್ದರೂ ಲೈಂಗಿಕತೆಯಲ್ಲಿ ತೊಡಗಿಕೊಳ್ಳುವುದಕ್ಕೆ ಬಯಸದೇ, ನಿರ್ಲಕ್ಷಿಸುವುದಕ್ಕೆ ನೋಡುತ್ತಾರೆ. ಅಥವಾ ಲೈಂಗಿಕ ಭಾವನೆಯನ್ನು ತಮ್ಮ ಮನದೊಳಗೆ ಹುದುಗಿಸಿಟ್ಟುಕೊಂಡು ಇರುತ್ತಾರೆ. ಆದರೇ, ಹೀಗೆ ಮಾಡುವುದರಿಂದ ಇತರೆ ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು ಎನ್ನುತ್ತದೆ ಮನಃಶಾಸ್ತ್ರ. 

ನಿಮಗೆ ಅಳು ಬಂದಾಗ ಅತ್ತು ಬಿಡಿ, ಕೋಪ ಬಂದಾಗ ಆ ಕೋಪವನ್ನು ಹೊರಹಾಕಿಕೊಳ್ಳಿ, ಬೇಸರವಾದಾಗ ಅದನ್ನು ತೋರ್ಪಡಿಸಿಕೊಳ್ಳಿ…ಹೀಗೆ ಎಲ್ಲಾ ಭಾವನೆಯನ್ನು ತೋರಿಸಿಕೊಳ್ಳಿ, ಆದರೇ, ಕಾಲ, ಸ್ಥಿತಿ, ಸಂಬಂಧಗಳ ಬಗ್ಗೆ ಜ್ಞಾನ ಇರಲಿ. ಈ ಸೆಕ್ಸ್ ವಿಚಾರದಲ್ಲಿಯೂ ಕೂಡ ಹಾಗೆ. ಸೆಕ್ಸ್ ಮಾಡಬೇಕು ಎಂದು ಬಯಕೆ ಹುಟ್ಟಿದಾಗ ಆ ಬಯಕೆಯನ್ನು ಪೂರೈಸಿಕೊಳ್ಳುವುದೇ ಉತ್ತಮ. ಆದರೇ, ಒಪ್ಪಿಗೆಯಿಂದ, ಎರಡೂ ಮನಸ್ಸು ಬಯಸಿ ಮಾಡುವ ಸೆಕ್ಸ್ ನಿಮ್ಮನ್ನು ತೃಪ್ತಿಗೊಳಿಸುತ್ತದೆ. ಇನ್ನು, ಸೆಕ್ಸ್ ನನ್ನು ಅದುಮಿಟ್ಟುಕೊಂಡಷ್ಟು, ಅದು ಮತ್ಯಾವುದೋ ಮಾನಸಿಕ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. 

ಈ ಇರೋಟೊಫೋಬಿಯಾ ಅಥವಾ ಎರೋಟೋಫೋಬಿಯಾ ಯಾಕೆ ಹುಟ್ಟಿಕೊಳ್ಳುತ್ತದೆ ಎಂದರೇ, ರೋಗ ಅಥವಾ ವೈರಸ್ ಬರುವ ಭಯದ ಕಾರಣದಿಂದ ಹುಟ್ಟತ್ತದೆ. ಈ ಅಸಹಜ ಭಯ ಇರೋಟೊಫೋಬಿಯಾ ಒಂದು ಕವಲು ಅಥವಾ ಬ್ರ್ಯಾಂಚ್ ಎಂದೇ ಹೇಳಬಹುದು. ಇದಕ್ಕೆ ಮನಃಶಾಸಸ್ತ್ರದಲ್ಲಿ ನೊಸೊಫೋಬಿಯಾ ಎಂದು ಹೇಳಲಾಗುತ್ತದೆ. 

ಲೈಂಗಿಕತೆಯ ಬಗ್ಗೆ ಭಯ ಇರುವವರಿಗೆ ನಗ್ನವಾಗಿ ತನ್ನ ಸಂಗಾತಿಯೊಂದಿಗೆ ಇರಲು ಮುಜುಗರವಾಗುವುದು ಹಾಗೂ ಒಂದು ರೀತಿಯ ನಾಚಿಕೆಯೊಂದಿಗಿನ ಭಯವೂ ಲೈಂಗಿಕವಾಗಿ ಸೇರುವುದಕ್ಕೆ ಭಯ ಪಡುತ್ತಾರೆ. ಇತರರನ್ನು ಬೆತ್ತಲೆಯಾಗಿ ನೋಡುವ ಭಯ, ತನ್ನನ್ನು ತಾನೇ ಬೆತ್ತಲೆಯಾ ನೋಡಿಕೊಳ್ಳುವುದರ ಭಯ. ಮತ್ತು ಇವರೆಡೂ ಭಯ ಇರುವ ಒಂದು ಅಸಹಜ ಮನಸ್ಥಿತಿ. ಇದನ್ನು ಜಿಮ್ನೋಫೋಬಿಯಾ ಎಂದು ಕರೆಯಲಾಗುತ್ತದೆ. 

ಆಪೋಸಿಟ್ ಸೆಕ್ಸ್ ಅಥವಾ ವಿರುದ್ಧ ಲಿಂಗದ ಭಯ ಇರುವವರು ಕೂಡ ಸೆಕ್ಸ್ ಬಗ್ಗೆ ಭಯ ಪಡುತ್ತಾರೆ ಇದನ್ನು ಹೆಟೆರೊಫೋಬಿಯಾ ಎಂದು ಹೇಳುತ್ತಾರೆ. ಇನ್ನು ಕೆಲವರಿಗೆ ಸೆಕ್ಸ್ ಬಗ್ಗೆ ತುಂಬಾ ಆಸಕ್ತಿ ಇದ್ದರೂ ಅವರಲ್ಲಿ ಸಂಭೋಗದ ಭಯ ಇರುತ್ತದೆ. ಲೈಂಗಿಕ ಕ್ರಿಯೆಯಿಂದ ಅಸಹಜವಾಗಿ ಆಗುವ ಸಣ್ಣ ನೋವು, ಆಯಾಸಕ್ಕೇ ದೊಡ್ಡ ಮಟ್ಟದಲ್ಲಿ ಹೆದರುವ ಮನಸ್ಥಿತಿ ಇದು. ಇಂತಹ ಅಸಹಜ ಮನಸ್ಥಿತಿಯನ್ನು ಅಥವಾ ಭಯವನ್ನು ಕೊಯಿಟೊಫೋಬಿಯಾ ಎಂದು ಹೇಳಲಾಗುತ್ತದೆ. 

ಇನ್ನು, ಕೊನೆಯದಾಗಿ ಈ ಭಯದ ಬಗ್ಗೆ ನಿಮಗೆ ಗೊತ್ತಾದರೇ, ನೀವು ಬಿದ್ದು ಬಿದ್ದು ನಗ್ತೀರಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಹೌದು, ಈ ಭಯ ಇರುವವರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ     ಗರ್ಭಧಾರಣೆಯ ಭಯ ಅಥವಾ ಹೆರಿಗೆ ನೋವಿನ ಭಯ ಇರುತ್ತದೆ. ಸೆಕ್ಸ್ ಆಸಕ್ತಿಯ ಇರುವವರು ಈ ಭಯದಿಂದ ಸೆಕ್ಸ್ ನಲ್ಲಿ ತೊಡಗುವುದಕ್ಕೆ ಇಷ್ಟ ಪಡುವುದಿಲ್ಲ. ಈ ಭಯವನ್ನು ಟೊಕೊಫೋಬಿಯಾ  ಎಂದು ಕರೆಯಲಾಗುತ್ತದೆ. 

ಹೀಗೆ… ದೇಹಕ್ಕೆ ಸೆಕ್ಸ್ ಬೇಕಿದ್ದರೂ ಕೂಡ ಇಂತಹ ಸಣ್ಣ ಸಣ್ಣ ಭಯದಿಂದ ಸೆಕ್ಸ್ ನಿಂದ ದೂರ ಉಳಿಯುವ ಮನಸ್ಥಿತಿ ಅನೇಕ ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು ಎಂಬ ಎಚ್ಚರಿಕೆ ನಿಮ್ಮಲ್ಲಿರುವುದು ಒಳ್ಳೆಯದು.

---------- 

ಸಂಗ್ರಹ ಬರಹ : ಶ್ರೀರಾಜ್ ವಕ್ವಾಡಿ 

Thursday, July 29, 2021

ಬೊಮ್ಮಾಯಿ ರಾಜ್ಯ'ಭಾರ'..! ತಂದೆಗಾದ ಸ್ಥಿತಿ ಮಗನಿಗೂ ಆಗಬಹುದೇ..?




*ಪರ ವಿರೋಧದ ಪ್ರತಿಕಾರ ತೀರಿಸಿಕೊಳ್ಳುವುದರಲ್ಲೇ ಅವಧಿ ಮುಗಿಯುತ್ತದೆಯೇ..?*

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಿಗೆ, ಈಗ ಸಚಿವ ಸಂಪುಟದ ಬಗ್ಗೆ ಚರ್ಚೆ ಆರಂಭವಾಗಿದೆ. ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಪಡೆದಯುವುದರೊಂದಿಗೆ ಹಲವಾರು ಸವಾಲುಗಳನ್ನು ಕೂಡ ಪರೋಕ್ಷವಾಗಿ ಸ್ವೀಕಾರ ಮಾಡಿದ್ದಾರೆ ಬೊಮ್ಮಾಯಿ. 

ರಾಜ್ಯ ರಾಜಕಾರಣದಲ್ಲಿ ಹಲವು ತಿಂಗಳುಗಳಿಂದ ಇದ್ದ ಅಸಮಧಾನ ಸರಿಹೋಗಿದೆ ಎಂದುಕೊಂಡರೇ, ಅದು ಪದಶಃ ತಪ್ಪು. ನೂತನ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡ ಕೆಲವು ಕ್ಷಣಗಳಲ್ಲೇ ಬಣ ರಾಜಕೀಯದ ಸುಳಿವು ಸಿಕ್ಕಿದೆ. ಎನ್ನುವಲ್ಲಿಗೆ ಮತ್ತೆ ರಾಜ್ಯ ರಾಜಕಾರಣದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ನೂತನ ಮುಖ್ಯಮಂತ್ರಿಗಳ ಅಭಿವೃದ್ಧಿ ಕಾರ್ಯಗಳಿಗೂ ತಡೆಯಾಗಬಹುದು ಎನ್ನುವುದು ಕೂಡ ಖಚಿತ. 

ಈ ನಡುವೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರ ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿಯಾಗಿ ಇರುತ್ತಾರೆ ಎನ್ನುವ ಟೀಕೆ, ವಿಮರ್ಶೆಗಳ  ನಡುವಿನಲ್ಲೇ, ‘ಇಲ್ಲ ನಾನು ಯಾರ ರಬ್ಬರ್ ಸ್ಟ್ಯಾಂಪ್  ಆಗಿ ಇರುವುದಿಲ್ಲ’ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರೂ ಕೂಡ ರಬ್ಬರ್ ಸ್ಟ್ಯಾಂಪ್ ಆಗಿಯೇ ಇರುತ್ತಾರೆ, ಯಡಿಯೂರಪ್ಪರ ನೆರಳಾಗಿಯೇ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದಕ್ಕೆ ನಿನ್ನೆ ಮೊನ್ನೆಯ ಒಂದಿಷ್ಟು ಬೊಮ್ಮಾಯಿ ಅವರ ನಡೆಗಳು ತೋರಿಸಿಕೊಟ್ಟಿವೆ. ಎಂಬಲ್ಲಿಗೆ ಬೊಮ್ಮಾಯಿ ಯಡಿಯೂರಪ್ಪರ ಅಭಯದಲ್ಲೇ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದು ಸುಸ್ಪಷ್ಟ. 

ರಾಜ್ಯ ಬಿಜೆಪಿ ರಾಜಕಾರಣ ಈಗ ಮಹಾಭಾರತದ ಪ್ರಸಂಗ ಆದಂತಾಗಿದೆ. ರಾಜ್ಯ ಬಿಜೆಪಿಗೆ ಈಗ ಯುದ್ಧ ಕಾಲ. ಮಹಾಭಾರತದ ಯುದ್ಧದ ಸಂದರ್ಭದಲ್ಲಿ ಪಾರ್ಥನ ರಥ ಸಾರಥಿಯಾಗಿ ಕೃಷ್ಣ ನಿಂತಿದ್ದು ನಿಮಗೆಲ್ಲಾ ತಿಳಿದೇ ಇದೆ. ಮುಂದೇನಾಯಿತು ಎನ್ನುವುದನ್ನು ಪ್ರತ್ಯೇಕಿಸಿ ಹೇಳಬೇಕಿಂದಿಲ್ಲ.  ರಾಜ್ಯ ಬಿಜೆಪಿ ಇಬ್ಭಾಗವಾಗಿದೆ ಎನ್ನುವುದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಲ್ಕನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡ ಕೆಲವೇ ದಿನಗಳಲ್ಲಿ ಸ್ಪಷ್ಟವಾಗಿ ಕಾಣಿಸಿದ್ದು ಎಲ್ಲರಿಗೂ ತಿಳಿದಿದೆ. ಆ ವೈಮನಸ್ಸಿಗೆ ಹೈಕಮಾಂಡ್ ಮುಲಾಮು ಹಚ್ಚುವ ಕೆಲಸ ಮಾಡಿದರೂ ಕೂಡ ಅದು ಸರಿ ಹೋಗಿಲ್ಲ ಎನ್ನುವುದು ರಾಜ್ಯ ಬಿಜೆಪಿಯಲ್ಲಿ ಕಳೆದ ಎರಡು ವರ್ಷಗಳಿಂದ ಆಗುತ್ತಿರುವ ಬೆಳವಣಿಗಳೇ ಸಾಕ್ಷಿ. 

ಇನ್ನು, ಪರ ವಿರೋಧ ಬಣಗಳ ಪ್ರತಿಕಾರ ತೀರಿಸಿಕೊಳ್ಳುವುದರಲ್ಲೇ ಇನ್ನುಳಿದ ಅವಧಿ ಮುಗಿದು ಹೋಗುತ್ತದೆಯೇ ಎಂಬ ಆತಂಕ ಕೂಡ ಸೃಷ್ಟಿಯಾಗಿದೆ. ಮಾತ್ರವಲ್ಲದೇ, ಯಡಿಯೂರಪ್ಪ ಅವರು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದಿದ್ದರೂ ಕೂಡ ರಾಜ್ಯ ಬಿಜೆಪಿಯಲ್ಲಿ ಅವರ ಹಿಡಿತ ಇನ್ನು ಮುಂದೆಯೂ ಪರೋಕ್ಷವಾಗಿಯಾದರೂ ಇರಲಿದೆ ಎಂಬುವುದು ಸತ್ಯ. ಕೃಷ್ಣ ಅರ್ಜುನನ ಸಾರಥಿಯಾಗಿ ಹೇಗೆ ಯುದ್ಧ ಕಾಲದಲ್ಲಿ ಜೊತೆಗಿದ್ದಿದ್ದನೋ ಹಾಗೆಯೇ  ಹಾಲಿ ಮುಖ್ಯಮಂತ್ರಿಗಳು ಮಾಜಿ ಮುಖ್ಯಮಂತ್ರಿಗಳ ನಿರ್ದೇಶನದಲ್ಲೇ ಇರುತ್ತಾರೆ ಎನ್ನುವುದರ ಸಣ್ಣ ಎಳೆ ಈಗಾಗಲೇ ಕಾಣಿಸಿಕೊಂಡಿದೆ. 

ಹೀಗಾದರೇ, ಮುಂದೆ ಹೇಗೆ..? 

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ವರಿಷ್ಠರು ಕಳುಹಿಸಿದ ವೀಕ್ಷಕರೀರ್ವರ ಮುಂದೆ ತಮ್ಮ ಆಪ್ತ ಬಳಗದಲ್ಲಿ ಓರ್ವರಾದ ಬಸವರಾಜ  ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದಾಗಲೇ ಪಕ್ಷದಲ್ಲಿ ಕೆಲವು ದಶಕಗಳಿಂದ ದುಡಿಯುತ್ತಿದ್ದ ಪ್ರಭಾವಿ ನಾಯಕರ ಮನಸ್ಸಿನೊಳಗೆ ಸಣ್ಣ ಕಿಡಿಯೊಂದು ಹೊತ್ತಿ ಕೊಂಡಿದೆ. ಆ ಕಿಡಿ ಸಣ್ಣ ಕಡ್ಡಿಯೊಳಗಡಗಿದ ಕಾಡು ಸುಡುವ ಬೆಂಕಿಯಂತಿದೆ ಎನ್ನುವ ವಿಚಾರವನ್ನು ತೆಗೆದು ಹಾಕುವಂತಿಲ್ಲ. ಯಾವಾಗ ಬೇಕಾದರೂ ಆ ಬೆಂಕಿ ತನ್ನ ಕೆನ್ನಾಲಿಗೆಯನ್ನು ವಿಸ್ತರಿಸಿಕೊಳ್ಳಬಹುದೆನ್ನುವುದಕ್ಕೆ ಹಿರಿಯ ಬಿಜೆಪಿ ನಾಯಕ ಈಶ್ವರಪ್ಪ ಅವರ ನಡೆಯೇ ದೊಡ್ಡ ಸಾಕ್ಷಿ.   

ಅಸ್ಸಾಂ ನ ಮಾಜಿ ಮುಖ್ಯಮಂತ್ರಿ ಸರಬಾನಂದ ಸೋನೋವಾಲ್ ಅವರ ಉತ್ತರಾಧಿಕಾರಿಯಾಗಿ ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದ ಹಿಮಂತ್ ಬಿಸ್ವಾ ಮಿಶ್ರಾ ಅವರಿಗೆ ಅಸ್ಸಾಂ ನ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಿದಂತೆಯೇ, ಇಲ್ಲಿಯೂ ಕೂಡ ಸಂಯುಕ್ತ ಜನತದಳದಿಂದ ಬಿಜೆಪಿಗೆ ವಲಸೆ ಬಂದ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಮಣೆ ಹಾಕಿ, ಪಕ್ಷಕ್ಕೆ ನಿಷ್ಠೆಯಿಂದ ಇರುವವರಿಗೆ ಪಕ್ಷ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯನ್ನೂ ಕೂಡ ನೀಡುತ್ತದೆ ಎಂಬ ಸಂದೇಶವನ್ನು ಪಕ್ಷದೊಳಗೇ ಇದ್ದು, ಪಕ್ಷದ ಕೆಲವು ನಡೆಗಳನ್ನು ಕಟುವಾಗಿ ಟೀಕಿಸುತ್ತಿರುವ ಕೆಲವರಿಗೆ ಹಾಗೂ ಇಡೀ ದೇಶಕ್ಕೆ ಒಂದು ಹೊಸ ಸಂದೇಶವನ್ನು ನೀಡುವ ಪ್ರಯತ್ನವನ್ನು ಹೈಕಮಾಂಡ್ ಮಾಡಿದೆಯಾದರೂ, ಆ ತಂತ್ರ ಕರ್ನಾಟಕದಲ್ಲಿ ಸಫಲ ಆಗುತ್ತದೆಯೇ ಎ‍ನ್ನುವ ಮಿಲಿಯನ್ ಡಾಲರ್ ಪ್ರಶ್ನೆಯೊಂದು ಎದ್ದಿದೆ.

ತಂದೆಗಾದ ಪರಿಸ್ಥಿತಿ ಮಗನಿಗೂ ಆಗಲಿದೆಯೇ..?   

ಈಗಿನ ಬೆಳವಣಿಗೆಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಆರ್.  ಬೊಮ್ಮಾಯಿ ಅವರಿಗಾದ ಪರಿಸ್ಥಿತಿಯನ್ನೇ ಎದುರಿಸಬಹುದೆಂದೆನ್ನಿಸುತ್ತಿದೆ. ಬಿ ಎಸ್ ಯಡಿಯೂರಪ್ಪ ತಮ್ಮ ಮುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯ ರಾಜಕಾರಣ ಒಂದು ಮಹತ್ತರ ತಿರುವ ಕಂಡಿದೆ.  ರಾಜ್ಯ ರಾಜಕೀಯದಲ್ಲಿ ಒಂದು ಕ್ಷಿಪ್ರ ಕ್ರಾಂತಿಯಾಗಿದೆ. ಮುಂದೆ ಈ ಕ್ರಾಂತಿಯನ್ನು ಬಿಜೆಪಿ ಮೂಲದವರು ಒಪ್ಪಿಕೊಳ್ಳುತ್ತಾರೆಯೇ ಎನ್ನುವುದು ಕೂಡ ಇದುವರೆಗೆ ಪ್ರಶ್ನೆಯಾಗಿಯೇ ಉಳಿದಿದೆ.  

ಇನ್ನು,  ಹಿಂದೆ ಇದ್ದ ಯಡಿಯೂರಪ್ಪ ಅವರ ವಿರೋಧಿ ಬಣ ಮತ್ತಷ್ಟು ಗಟ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಮುಂದೆ ಮತ್ತೆ ರಾಜ್ಯ ಬಿಜೆಪಿ ರಾಜಕಾರಣದಲ್ಲಿ ಗೊಂದಲ ಸೃಷ್ಟಿಯಾಗಬಹುದು ಎನ್ನವುದನ್ನು ಅಲ್ಲಗಳೆಯುವಂತಿಲ್ಲ. ಈಗಾಗಲೇ ಹಿರಿಯ ನಾಯಕ ಈಶ್ವರಪ್ಪ ‘ಇನ್ನೂ  ಬದಲಾವಣೆ ಆಗಲಿದೆ” ಎಂದು ಬಂಡಾಯದ ಸೂಚನೆ ನೀಡಿದ್ದು, ಸರ್ಕಾರದ ರಚನೆಯಾಗಿ ಕೆಲವು ತಿಂಗಳುಗಳ ನಂತರದಲ್ಲಿ ಇದರ ಪರಿಣಾಮ ಒಂದೊಂದಾಗಿ ಕಾಣಿಸಿಕೊಳ್ಳಬಹುದು.  ವಿರೋಧಿ ಬಣದ ಅವಿಶ್ವಾಸ, ಶಾಸಕರ ಸಾಮೂಹಿಕ ರಾಜೀನಾಮೆ ಎಲ್ಲದರ ಸುಳಿವನ್ನು ಈಶ್ವರಪ್ಪ ಬಿಟ್ಟುಕೊಟ್ಟರೇ, ಮತ್ತೆ ‘ಬೊಮ್ಮಾಯಿ ಪ್ರಕರಣ’ ರಾಜ್ಯದಲ್ಲಿ ಆಗಬಹುದೇ..? ಎಂಬ ದೊಡ್ಡ ಪ್ರಶ್ನೆ ಮುನ್ನೆಲೆಗೆ ಬಂದಿದೆ. 

ಏನದು “ಬೊಮ್ಮಾಯಿ ಪ್ರಕರಣ”..? 

ಬೊಮ್ಮಾಯಿ ಪ್ರಕರಣ ಇಂದಿಗೂ ಚಾಲ್ತಿಯಲ್ಲಿದೆ. 2019ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ನೇತೃತ್ವದ ಸರ್ಕಾರ ಪತನವಾದಾಗ ಹಾಗೂ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಸರ್ಕಾರ ಪತನವಾದಾಗ ‘ಬೊಮ್ಮಾಯಿ ಪ್ರಕರಣ’ ಸುದ್ದಿ ಮಾಡಿತ್ತು. 

1989 ರ ಏಪ್ರಿಲ್ ತಿಂಗಳು. ಜನತಾ ಪಕ್ಷದಿಂದ ಎಸ್. ಆರ್ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿ ಕೇವಲ ಒಂಬತ್ತು ತಿಂಗಳಾಗಿತ್ತಂದು. ಆ ಸಂದರ್ಭದಲ್ಲಿ ಕೆಲವು ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಬೊಮ್ಮಾಯಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಾಸ್ ಪಡೆಯುವುದಾಗಿ ಹೇಳಿದ್ದರು. ಆಗ ಎಸ್. ಆರ್. ಬೊಮ್ಮಾಯಿ ಅವರ ಸ್ಥಾನ ಅಲುಗಾಡಿತ್ತು.  

ಎಸ್. ಆರ್ ಬೊಮ್ಮಾಯಿ ಬಹುಮತ ಸಾಬೀತು ಪಡಿಸುವುದಕ್ಕೆ ಕಾಲಾವಕಾಶವನ್ನು ರಾಜ್ಯಪಾಲರಲ್ಲಿ ಕೋರಿದರಾದರೂ, ಸಫಲವಾಗಿಲ್ಲ.  ಮರುದಿನವೇ ರಾಜ್ಯ ಸರ್ಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಗೆ ಅಂದಿನ ರಾಜ್ಯಪಾಲ ವೆಂಕಟಸುಬ್ಬಯ್ಯನವರು ಶಿಫಾರಸ್ಸು ಮಾಡಿದರು.

ಅಂದಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ತಮ್ಮ ಆಳ್ವಿಕೆ ಹೇರುವ ಘೋಷಣಾ ಪತ್ರಕ್ಕೆ ಸಹಿ ಹಾಕಿದರು. ಅಲ್ಲಿಗೆ ಎಸ್.ಆರ್‌ ಬೊಮ್ಮಾಯಿಯವರ ಸರ್ಕಾರ ಒಂಬತ್ತೇ ತಿಂಗಳಲ್ಲಿ ಪತನವಾಗಿತ್ತು. 

ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಎಸ್. ಆರ್ ಬೊಮ್ಮಾಯಿ ಹೈ ಕೋರ್ಟ್‌ ಮೆಟ್ಟಿಲೇರಿದ್ದರು. ತ್ವರಿತ ವಿಚಾರಣೆ ಮಾಡಿದ್ದ ಹೈ ಕೋರ್ಟ್‌ ರಾಷ್ಟ್ರಪತಿ ಆಳ್ವಿಕೆಯನ್ನು ಸಂವಿಧಾನದ ಚೌಕಟ್ಟಿನ ಪ್ರಕಾರವೇ ಜಾರಿಗೊಳಿಸಲಾಗಿದೆ ಎಂದು ತೀರ್ಪು ನೀಡಿ ಆದೇಶ ಹೊರಡಿಸಿತ್ತು. ಹೈ ಕೋರ್ಟ್ ನಲ್ಲಿಯೂ ಎಸ್. ಆರ್.  ಬೊಮ್ಮಾಯಿಯವರ ಪ್ರಯತ್ನ ವಿಫಲವಾಯಿತು. ಇದಾದ ಬಳಿಕ ಬೊಮ್ಮಾಯಿ ಸುಪ್ರೀಂ ಕೋರ್ಟ್‌ ಅಂಗಳಕ್ಕಿಳಿದರೂ ಕೂಡ ಮತ್ತದೇ ವಿಫಲ ಯತ್ನ. ಅಂದು ಕೇಂದ್ರದಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಆಡಳಿತದಲ್ಲಿತ್ತು. 

ತಂದೆ ಎಸ್. ಆರ್ ಬೊಮ್ಮಾಯಿ ಅವರ ಕಾಲದಲ್ಲಿದ್ದ ಸ್ಥಿತಿಗೂ, ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಿರುವ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಆದರೂ, ತಂದೆಗಾದ ಪರಿಸ್ಥಿತಿ ಆಗಬಹುದು ಎನ್ನುವುದನ್ನು ತೆಗೆದು ಹಾಕುವಂತಿಲ್ಲ. 

-ಶ್ರೀರಾಜ್ ವಕ್ವಾಡಿ