Friday, January 17, 2020

ಭರವಸೆಯ ಚಿತ್ರಕಲೆ, ಕಾರ್ಟೂನ್ ಪ್ರತಿಭೆ ಸುಜಾತ ಕಾಮತ್






                                      ಲಲಿತಕಲೆಗಳಲ್ಲಿ ಒಂದಾಗಿರುವ ಚಿತ್ರಕಲೆ ಎಲ್ಲರಿಗೂ ಸಿದ್ಧಿಸುವ ಕಲೆಯಲ್ಲ. ಬಣ್ಣಗಳಿಂದಲೇ ಭಾವನೆಗಳನ್ನು ಹೇಳುವ ಮತ್ತು ಆ ಮೂಲಕ ಸಂದೇಶಗಳನ್ನು ರವಾನೆ ಮಾಡುವ ಕಲಾ  ಮಾಧ್ಯಮವೇ ಚಿತ್ರಕಲೆ. ಕಾರ್ಟೂನ್ ಕೂಡ ಹಾಗಯೇ.. ವಿಡಂಬನಾತ್ಮಕವಾಗಿ ಚಿತ್ರಿಸಿ ವ್ಯವಸ್ಥೆಯ ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಟೀಕೆ, ವಿಮರ್ಶೆಗೆ ಹಚ್ಚುವ ಕಲಾ ಮಾಧ್ಯಮ. ಅಂತಹ ಚಿತ್ರಕಲೆ ಹಾಗೂ ಕಾರ್ಟೂನುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬೆಳೆಯುತ್ತಿರುವ ಯುವ ಪ್ರತಿಭೆ ಸುಜಾತ ಕಾಮತ್.

ಕೋಟೇಶ್ವರದ ಸುರೇಶ್ ಕಾಮತ್ ಮತ್ತು ಗೀತಾ ಪ್ರಭು ದಂಪತಿಗಳ ಮಗಳಾಗಿ ಫೆಬ್ರವರಿ ೭ ೨೦೦೦ದಲ್ಲಿ ಜನಿಸಿದ ಸುಜಾತ...  ಚಿತ್ರಕಲೆ, ಪ್ರಬಂಧ ರಚನೆ, ಭಾಷಣಗಳಲ್ಲಿ ಶಾಲಾ ದಿನಗಳಲ್ಲಿರುವಾಗಲೇ ಮುಂಪಂಕ್ತಿಯಲ್ಲಿದ್ದ ಹುಡುಗಿ. ಕಾಲಾಂತರದ ಬೆಳವಣಿಗೆಯಲ್ಲಿ ಚಿತ್ರಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡು, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಚಿತ್ರಕಲೆಯಲ್ಲಿ ಸಣ್ಣಮಟ್ಟಿಗಾದರೂ ಸಂಪಾದನೆ ಮಾಡುವಷ್ಟರಮಟ್ಟಿಗೆ ಬೆಳೆದು ನಿಂತಿರುವುದು ನಿಜಕ್ಕೂ ಮೆಚ್ಚಲೇ ಬೇಕಾದದ್ದು.
 ೨೦೦೮ ಹಾಗೂ ೨೦೧೧ರಲ್ಲಿ ಕೊರಸಲಾಸ್ ಅಮಲಾಪುರಮ್, ಆಂದ್ರಪ್ರದೇಶ ಆಯೋಜಿಸಿದ ರಾಷ್ಟçಮಟ್ಟದ ‘ಆರ್ಟ್ ವಿಲೇಜ್’, ‘ವಂಡರ್ ಆರ್ಟ್ ವರ್ಲ್ಡ್ ಇಂಟರ್‌ನ್ಯಾಶನಲ್’ ಚಿತ್ರಸ್ಪರ್ಧೆಯಲ್ಲಿ  ‘ಬಾಲಮಿತ್ರ ಅವಾರ್ಡ್’, ‘ಬಾಲ ಚಿತ್ರರತ್ನ’ ಅವಾರ್ಡ್ ಪಡೆದಿರುತ್ತಾರೆ.  ಕುಂದಾಪುರದ ಪ್ರಸಿದ್ಧ ಕಾರ್ಟೂನ್ ಚಿತ್ರಗಾರ ಸತೀಶ್ ಆಚಾರ್ಯ ಆಯೋಜನೆಯಲ್ಲಿ ಖ್ಯಾತಿ ಗಳಿಸಿದ ‘ಕಾರ್ಟೂನ್ ಹಬ್ಬ’ದ ಕಾರ್ಟೂನು ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಸತತ ಎರಡು ಭಾರಿ ಪ್ರಥಮ. ಎರಡು ಭಾರಿ ದ್ವಿತೀಯ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಿದ್ದಲ್ಲದೇ, ಮಂಗಳೂರು ಯೂನಿವರ್ಸಿಟಿ ಆಯೋಜನೆಯ ಇಂಟರ್ ಕಾಲೇಜು ‘ಚಿತ್ತಾರ ೨೦೧೯’ರ ಕಾರ್ಟೂನು ಚಿತ್ರ ಸ್ಪರ್ಧೆಯಲ್ಲಿ ದ್ವಿತಿಯ ಬಹುಮಾನ ಪಡೆದಿದ್ದಾರೆ. ಹೀಗೆ.. ಹತ್ತು ಹಲವು ಸಂಸ್ಥೆಗಳು ಆಯೋಜಿಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.

ಚಿತ್ರಕಲೆ, ಕಾರ್ಟೂನು ಮಾತ್ರವಲ್ಲದೇ ಫೋಟೋಗ್ರಾಫಿಯಲ್ಲಿಯೂ ಸುಜಾತ ಎತ್ತಿದ ಕೈ. ಈ ಎಲ್ಲಾ ಆಸಕ್ತಿ, ಹವ್ಯಾಸಗಳ ನಡುವೆ ವಿದ್ಯಾಭ್ಯಾಸದಲ್ಲಿಯೂ ಮುಂದು.  ಶಾಲಾದಿನಗಳಲ್ಲಿ.. ಚಿಂತನಾ ಪ್ರಕಾಶನ, ಚಿತ್ರದುರ್ಗ ಆಯೋಜನೆಯ ‘ಅಂತರಾಷ್ಟ್ರಿಯ ಚಿಂತನ ವಿಜ್ಙಾನ ಪರೀಕ್ಷೆ’ ೨೦೦೮-೦೯ನೇ ಸಾಲಿನಲ್ಲಿ ಮೂರನೇ ಸ್ಥಾನ, ೨೦೦೯-೧೦ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ಸಾಕ್ಷಿಯೊಂದಿಗೆ ‘ಶಿಕ್ಷಣದಲ್ಲಿ ನಾನು ಹಿಂದಿಲ್ಲ’ ಎನ್ನುವುದನ್ನು ತನ್ನ ತಂದೆ-ತಾಯಿಗೆ, ಅಧ್ಯಾಪಕ ವೃಂದದವರಿಗೆ ತೋರಿಸಿಕೊಟ್ಟಿದ್ದಾರೆ.
ಪ್ರಸ್ತುತ ಕುಂದಾಪುರದ ಭಂಡಾರ್‌ಕರ‍್ಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ಸುಜಾತ, ಚಿತ್ರಕಲೆಯಲ್ಲಿ ದೊಡ್ಡ ಸಾಧನೆ ಮಾಡಬೇಕೆಂಬ ಆಸೆಯೊಂದಿಗೆ ಫ್ಯಾಶನ್ ಡಿಸೈನ್‌ನಲ್ಲಿಯೂ ಆಸಕ್ತಿ ತೋರಿಸಿ, ಈ ಭಾಗದ ಬಹುದೊಡ್ಡ ಭರವಸೆಯಾಗಿ ಕಾಣಿಸುತ್ತಿದ್ದಾರೆ ಎನ್ನುವುದು ಕೇವಲ ಬಣ್ಣದ ಮಾತಿನ ಉತ್ಪ್ರೇಕ್ಷೆಯಲ್ಲ. ಅವರ ಎಲ್ಲಾ ಕನಸುಗಳು ನನಸಾಗಲಿ, ಪ್ರತಿಭೆ ಜಗದಗಲ ವಿಸ್ತರಿಸಲಿ, ಊರಿಗೆ, ಹೆತ್ತವರಿಗೆ, ಬಂಧು ಬಳಗದವರಿಗೆಲ್ಲರಿಗೂ ಕೀರ್ತಿ ತಂದು ಕೊಡುವ ಶಕ್ತಿ ದೇವರು ಒದಗಿಸಿಕೊಡಲಿ ಎನ್ನುವುದು ತುಂಬು ಮನಸ್ಸಿನ ಪ್ರೀತಿ, ಹರಕೆ, ಹಾರೈಕೆ, ಸದಾಶಯ.

-ಶ್ರೀರಾಜ್ ಎಸ್. ಆಚಾರ್ಯ, ವಕ್ವಾಡಿ 

No comments:

Post a Comment