Tuesday, March 24, 2020

ನರಕ ಬುವಿಗೆ ಜಾರುತ್ತಿದೆ..!


ನರಕ ಬುವಿಗೆ ಜಾರುತ್ತಿದೆ..!
ಕೂಲಿ ಬೆವರಿನ ಅನ್ನ,
ತಳ್ಳುಗಾಡಿ ವ್ಯಾಪಾರಿಗಳ 
ಹೊತ್ತಿನ ತುತ್ತು ಕಸಿದ ವೈರಾಣು..! 

ನಿಶ್ಯಬ್ದ ಹರಿವಿನ ಹೊಳೆಗೆ 
ಕಾಗೆ ಧುಮುಕಿ ಕ್ಷಣ ನಿಲ್ಲದೆ
ನೀರ ಹೀರಿ ಕೊರಳ 
ಕೊಂಕಿಸಿ ಹಾರುತ್ತಿದೆ ..
ಮೊಗಗವಸು ಹಾಕಿದ 
ಮುಸುಡಿಗಳ ಕಂಡು...!

ಗಿಜಿಗುಡುತ್ತಿದ್ದ ರಸ್ತೆ, 
ಪೇಟೆ, ಮಾಲ್ಗಳೆಲ್ಲಾ 
ಸ್ತಬ್ಧ ಸ್ತಬ್ಧ..! 
ಗುಡಿಯ ಗಂಟೆ ಕೇಳಿಸುತ್ತಿಲ್ಲ,
ಮಸೀದಿಯ ಬಾಂಗ್ ಇಲ್ಲ,
ಚರ್ಚಿನ ಪ್ರಾರ್ಥನೆಯಿಲ್ಲ.
ಗುಡಿ, ಚರ್ಚು,‌ಮಸೀದಿಗಳ 
ದೇವರಿಗೂ ಲಾಕ್ಡೌನ್..!

ಅದ್ಯಾರೋ ಗೊತ್ತಿಲ್ಲದ 
ಸೋಂಕು ಹೊತ್ತು ತಂದರು, 
ಪಸರಿಸಿದರು, ಭೀತಿಯ ಬೆಂಕಿ
ಹೊತ್ತಿಸಿದರು..! 
ಮರಣದ ಡೋಲು 
ಬಡಿಯುತ್ತಲೇ ಇದೆ...
ವೈದ್ಯರು, ಪೋಲಿಸರು, 
ಪೌರ ಕಾರ್ಮಿಕರು, 
ಪತ್ರಕರ್ತರಿಗೆ ನಿಶೆಯಿಲ್ಲ..!

ಸ್ತಬ್ಧ ಸ್ತಬ್ಧ
'ನರಕ ಬುವಿಗೆ ಜಾರುತ್ತಿದೆ'
ಸಿದ್ಧರಾಗೋಣ..
ಬದುಕಿಗೋ, ಮರಣಕ್ಕೋ 
ನೀವೇ ನಿರ್ಧರಿಸಿ..! 
-ಕಾವ್ಯ ಬೈರಾಗಿ 
(ಶ್ರೀರಾಜ್ ವಕ್ವಾಡಿ)


2 comments: