ಈ ಕವಿಗೆ ಭೂತ-ವರ್ತಮಾನ-ಭವಿಷ್ಯತ್ ಕಾಲಗಳೆಲ್ಲವೂ ಮುಖ್ಯವಾಗುತ್ತವೆ. ಗತ ಕಾಲದಲ್ಲಿ ಕಣ್ಣ ಮುಂದೆ ನಡೆದ ದುರ್ಘಟನೆಗಳು ಮನಸ್ಸನ್ನು ಕದಡಿಸಿ ಕಂಗೆಡುವಂತೆ ಮಾಡಿದರೆ ವರ್ತಮಾನದ ತುರ್ತಿಗೂ ಅವರು ಗಾಢವಾಗಿ ಸ್ಪಂದಿಸುತ್ತಾರೆ. ಅವರ ಕಾವ್ಯಸೃಷ್ಟಿಯು ಅವರು ಜಗತ್ತನ್ನು ಪರಿಗ್ರಹಿಸುವ ರೀತಿಯನ್ನು ಪ್ರತಿನಿಧಿಸುತ್ತದೆ. ಮೊದಲ ಸಂಕಲನ ‘ರಿಕ್ತ ನಕ್ಷತ್ರ’ ದ ನಂತರ ಈ ಮೂರು ವರ್ಷಗಳಲ್ಲಿ ಅವರ ಲೋಕ ಗ್ರಹಿಕೆಯಲ್ಲಿ ಸಾಕಷ್ಟು ಪರಿಷ್ಕಾರವಾಗಿದೆ. ಅವರ ಕಾವ್ಯಚಿಂತನೆಯ ಹಿಂದಿನ ತಾತ್ವಿಕ ನಿಲುವುಗಳು ಗೊಂದಲಗಳಿಂದ ಮುಕ್ತವಾಗಿ ಸ್ಪಷ್ಟತೆಯನ್ನು ಪಡೆದಿವೆ. ಕಂಡದ್ದನ್ನು ಕಂಡಂತೆ ನೇರವಾದ ಶಬ್ದಗಳಲ್ಲಿ ಪರಿಣಾಮಕಾರಿಯಾಗಿ ಹಿಡಿದಿಡುವ ಕಲೆ ಅವರಿಗೆ ಸಿದ್ಧಿಸಿದೆ.
ಮೊದಲ ಕವನ ‘ಕವನ ಪಕ್ಷಿ’ಯೇ ಅವರ ಸಾಮಾಜಿಕ ಕಾಳಜಿಗೆ ಸಾಕ್ಷಿ. ಕಾವ್ಯ ರಚನೆಯ ಮೂಲಕ ಜನರಲ್ಲಿ ಅರಿವು ಮೂಡಿಸುವುದು ಕವಿಯ ಹೊಣೆ. ಅಂತೆಯೇ, ಹಾಡಿನ ಮೂಲಕ ಜನರಿಗೆ ಸಂತೋಷ ನೀಡುವುದು ಪಕ್ಷಿಯ ಕೆಲಸ. ಇಲ್ಲಿ ಪಕ್ಷಿಯೇ ಒಂದು ಪ್ರತಿಮೆಯಾಗಿದೆ. ಇಂದು ಆ ಪಕ್ಷಿಗೆ ಹಾಡುವ ಮನಸ್ಸಿಲ್ಲ. ಮನಸ್ಸಿಗೆ ಸಂತೋಷವಿಲ್ಲ. ಯಾಕೆಂದರೆ ಸಮಾಜದಲ್ಲಿ ಬದಲಾವಣೆ ತರಬಲ್ಲ ಪವಾಡ ಪುರುಷರ ಶಕ್ತಿ ಎಲ್ಲೋ ಕಳೆದು ಹೋಗಿದೆ. ಬದುಕಿಸುವ ಮಾತುಗಳು ‘ಕೋಮಿನ ಅಫೀಮು ಸೇವಿಸಿದಂತೆ’ ಹಾದಿ ತಪ್ಪಿವೆ. ಮುನ್ನಡೆಯ ಬೇಕಾದ ಹಾದಿಯಲ್ಲೆಲ್ಲ ಅಡತಡೆಗಳು ತುಂಬಿವೆ. ಇಂಥ ಸ್ಥಿತಿಯಲ್ಲಿ ಕವನ ಪಕ್ಷಿ ಹೇಗೆ ತಾನೇ ಹಾಡೀತು ? ಇದು ಕವಿಯ ಅಸಹಾಯಕತೆ ಕೂಡಾ ಆಗಿದೆ.
ಕವಿಗೆ ತನ್ನ ವೈಯಕ್ತಿಕ ಬದುಕು ಸಹ್ಯವೆನ್ನಿಸಿದರೂ ಸಾಮಾಜಿಕ ಬದುಕಿನಲ್ಲಿ ಧಗಧಗಿಸಿ ಉರಿಯುತ್ತಿರುವ ಕೋಮು ದ್ವೇಷದ ಕಿಚ್ಚನ್ನು – ‘ಗುಡಿ-ಚರ್ಚು- ಮಸೀದಿಗಳಿಗೆ ಹೇಸಿಗೆ ಅಂಟಿದ್ದನ್ನು’ -ನೋಡಲಾಗುವುದಿಲ್ಲ. ಧರ್ಮದ ಹೆಸರಿನಲ್ಲಿ ರಕ್ತದ ಕೋಡಿ ಹರಿಸುತ್ತಿರುವುವವರನ್ನು ನೋಡಿದರೆ ದೇವರ ಅಸ್ತಿತ್ವದ ಬಗ್ಗೆಯೇ ಸಂದೇಹ ಹುಟ್ಟುತ್ತದೆ. ( ಎಲ್ಲಿ ಹುಡುಕಲಿ...ಪು.೯) ಆದರೂ ಕವಿಯದ್ದು ಬಹಳ ಗಟ್ಟಿ ಮನಸ್ಸು. ಬಂಡೆಗೆ ಅಂಟಿದ ಪಾಚಿಯಂತೆ ಎಷ್ಟೇ ಕಷ್ಟಗಳು ಬಂದರೂ ಎಲ್ಲಿಯೂ ಬೆಳೆಯಬಲ್ಲೆ ಎಂಬ ಆತ್ಮ ವಿಶ್ವಾಸ ಆತನಲ್ಲಿದೆ. ( ಬಂಡೆಗೆ ಅಂಟಿದ ಪಾಚಿ. ಪು.೧೧) ಆದ್ದರಿಂದ ಕತ್ತಲಲ್ಲಿ ಅನುಭವಿಸಿದ ಸೋಲನ್ನು ಮರೆಸಲೆತ್ನಿಸುತ್ತ ಆತ ಬೆಳಕಿನ ನಿರೀಕ್ಷೆಯಲ್ಲಿ ಕಾಯುತ್ತಾನೆ :
ಬಯಕೆ ಹೊತ್ತ ಬದುಕು/ ಸೋತು ಬಿದ್ದಿದೆ./ಕತ್ತಲು ಮೆಟ್ಟಿದ ದಾರಿಯಲ್ಲಿ/ ಕಲ್ಯಾಣದ ದನಿ/ ಬೆಳಕನ್ನೆಬ್ಬಿಸ ಬೇಕಿದೆ ( ಕತ್ತಲು ಮೆಟ್ಟಿದ ದಾರಿ. ಪು.೧೨)
ಭಾವದರಮನೆಯಲ್ಲಿ ವಿಹರಿಸಿ, ಕಲ್ಪನೆಗಳಿಗೆ ನವ್ಯ ಭಾವ ಭಾಷೆಯಲ್ಲ್ತಿ ಅಭಿವ್ಯಕ್ತಿ ನೀಡಿ, ಕಾವ್ಯ ವೀಣೆಯ ತಂತಿಯನ್ನು ಸಹನೆಯಿಂದ ಮೀಟುತ್ತ ಖುಷಿ ಪಡುತ್ತಿದ್ದಂತೆ ( ಶ್ರುತಿ ರಸ ತುಂಬಿ ಪು.೧೬) ದೀಪದ ತೈಲ ಬತ್ತಿಯೇ ಹೋಯಿತೇನೋ ಎಂಬಂತೆ ಬರಿದಾದ ಭೂಮಿ, ಬತ್ತಿದ ನದಿ, ಮೋಡಗಳ ಕಟ್ಟದ ಗಾಳಿ, ಮಳೆ ಸುರಿಸದ ಆಕಾಶಗಳ ಮಧ್ಯೆ ಕವಿಯ ಬಯಕೆ ಒಮ್ಮೆ ನಲುಗಿ ಚಡಪಡಿಸಿದರೆ (ಹನಿ ತೈಲವಿರುವ ದೀಪ, ಪು.೧೮ ) ಬದುಕಿನ ಬಣ್ಣ-ಭಾವಗಳನ್ನು ಸ್ವೀಕರಿಸುವ ಮನಸ್ಸಿನ ವೀಣೆಯ ತಂತಿ ಶ್ರುತಿ ತಪ್ಪಿ ವ್ಯಸನಗೀತೆ ಹಾಡುತ್ತದೆ (ಹಾಡು ಹಕ್ಕಿಗೆ ದನಿಗೂಡಿಸುತ್ತಿಲ್ಲ, ಪು.೨೦). ಕತ್ತಲೆಯ ಮೌನವೂ ಪಾಚಿಗಟ್ಟಿ ಬೆಳಕಿಲ್ಲದ ಬೆಂಕಿ ನೀಲಿ ರಂಗೇರಿ ಬಾನೆತ್ತರಕ್ಕೆ ಮುಟ್ಟುತ್ತ ಭಾವವನ್ನು ಮಂಕಾಗಿಸುತ್ತದೆ (ನೀಲಿ ರಂಗೇರಿ, ಪು.೬೭). ಕವಿತೆ ಬರೆಯುವುದರ ಮೂಲಕ ಕಂಬನಿಗೊಂದು ಪರಿಹಾರ ಹುಡುಕಲೆತ್ನಿಸಿದರೆ ದೇವರ ವೇಷದ ಮಾನವ-ದಾನವರು ನಿಷ್ಕರುಣರಾಗಿ ‘ಕೆಂಪು ಕವಿತೆ’ ಕಟ್ಟುತ್ತಾರೆ ( ಕೆಂಪು ಕವಿತೆ, ಪು.೨೨)
ಆದರೂ ಕವಿಯ ಕಲ್ಪನೆಯ ಕೆಂಪು ಕೊರಳ ಹಕ್ಕಿ ಸೋಲುವುದಿಲ್ಲ. ಏನೇ ಆದರೂ ಕತ್ತಲೆಗೆ ಹೊಂದಿಕೊಂಡು ಅದನ್ನು ಸವಾಲಾಗಿ ಸ್ವೀಕರಿಸಿಕೊಳ್ಳುತ್ತೇನೆಂದು ನಿರ್ಧರಿಸಿ ಆಕ್ರಂದನವನ್ನು ಅದುಮಿಟ್ಟು ಬಯಸಿದ್ದನ್ನು ಹುಡುಕುತ್ತ ಭಯ-ಬೇಗುದಿಗಳ ನಡುವೆ ಹಾಡುತ್ತಲೇ ಇದೆ :
‘ಬತ್ತಿದ ನದಿಯಲ್ಲಿ/ಹುಟ್ಟಿಲ್ಲದ ದೋಣಿಯಲಿ/ನಾಳೆಯ ಬಯಸಿ/ ಹೊಸ ಕನಸುಗಳನ್ನಪ್ಪಿ / ತಬ್ಬಿ ಸಾಗುತ್ತಿದೆ.’
ಇಲ್ಲಿನ ಸಾಲುಗಳು ಎಲ್ಲವನ್ನೂ ಹಲ್ಲು ಕಚ್ಚಿ ಸಹಿಸಿಕೊಂಡು ಭವಿಷ್ಯದ ಬಗ್ಗೆ ಹೊಸ ಕನಸುಗಳನ್ನು ಹೆಣೆಯುವ ಚಿತ್ರವು ಬದುಕಿನಲ್ಲಿ ಎದುರಾಗುವ ಅಹಿತಕರ ಸನ್ನಿವೇಶಗಳನ್ನು ಸವಾಲಾಗಿ ಸ್ವೀಕರಿಸುವ ಕವಿಯ ದಿಟ್ಟತನದ ಪ್ರತೀಕವಾಗಿ ಕಾಣುತ್ತದೆ. ಇದು ಸಂಕಲನದ ಒಂದು ಸುಂದರ ಕವನವೂ ಹೌದು.
ಬಣ್ಣಗಳೆಲ್ಲವೂ ನಶ್ವರ ಎನ್ನುವ ಕವಿ ಪ್ರೀತಿಯ ಬಣ್ಣಕ್ಕೆ ಸೋಲುತ್ತಾನೆ. ದಾರಿ ಕಾಣದೆ ಕಂಗೆಡುವ ಕವಿಗೆ ಪ್ರೀತಿಯೊಂದೇ ಭರವಸೆಯ ಬೆಳಕಾಗಿ ಕಾಣುವುದು ಬದುಕಿನಲ್ಲಿ ಕವಿ ಕಾಣುವ ಸೌಂದರ್ಯದ ಪ್ರತೀಕವಾಗಿ ಕಾಣುತ್ತದೆ. ಹೀಗೆ ಸಮಾಜವನ್ನು ತುಂಬುವ ದ್ವೇಷ-ದೌರ್ಜನ್ಯ ರಕ್ತಪಾತಗಳನ್ನು ನೋಡಿ ನೊಂದ ಹಕ್ಕಿಯ ಕೊರಳು ಕೇಂಪಾದರೂ ಭವಿಷ್ಯದ ಹೊಂಗನಸನ್ನು ನನಸು ಮಾಡಲೆಂದು ನಿರಂತರವಾಗಿ ದಣಿವಿಲ್ಲದೆ ಕಾವ್ಯ ಬೈರಾಗಿಯಂತೆ ಹಾಡುತ್ತಲೇ ಇರುವ ಹಕ್ಕಿಯನ್ನು ನಾವಿಲ್ಲಿ ಕಾಣುತ್ತೇವೆ.
-ಡಾ. ಪಾರ್ವತಿ ಜಿ.ಐತಾಳ್
ಕೆಂಪು ಕೊರಳ ಹಕ್ಕಿ
ಲೇ : ಕಾವ್ಯ ಬೈರಾಗಿ
ಪ್ರ : ಜಾನಕಿರಾಮ ಪಬ್ಲಿಷರ್ಸ್
ವಕ್ವಾಡಿ, ಕುಂದಾಪುರ
8762723716


No comments:
Post a Comment