Wednesday, January 25, 2023

ಮೌಲಿಕ ವಿಚಾರಗಳಷ್ಟೇ ತಂತ್ರಗಾರಿಕೆಗೆ ಸಾಲದು..!

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ತತ್ವ ರಾಜಕೀಯಕ್ಕೆ ಗೆಲುವು ತಂದುಕೊಡುವ ಅಸ್ತ್ರ..!

ಕಾಂಗ್ರೆಸ್ ತನ್ನ ಪ್ರಚಾರದ ಕಾರ್ಯ ವೈಖರಿಯನ್ನು ಇನ್ನಾದರೂ ಬದಲಾಯಿಸಿಕೊಳ್ಳದೆ ಹೋದರೇ, ಬರುವ ಚುನಾವಣಾ ಸುತ್ತಿನಲ್ಲೂ ಸೋಲಿನ ಫಲಿತಾಂಶದೊಂದಿಗೆ ತೃಪಿಪಟ್ಟುಕೊಳ್ಳಬೇಕಾಗಬಹುದು ಎನ್ನುವುದು ಬಹುತೇಕ ನಿಶ್ಚಿತ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಮೌಲಿಕವಾದ ವಿಚಾರಗಳನ್ನು ಮುನ್ನೆಲೆಗೆ ತರುವುದರ ಮುಖೇನ ಮುಖ್ಯ ಅನ್ನಿಸುವ ಚಿಂತನೆ ಮತ್ತು ನಂಬಿಕೆಗಳನ್ನು ಎತ್ತಿ ಹಿಡಿಯುವುದಷ್ಟನ್ನೇ ರಾಜಕೀಯ ಪ್ರಚಾರದಲ್ಲಿ ಕಾಂಗ್ರೆಸ್ ಬಳಸಿದರಷ್ಟೇ ಸಾಲದು ಎಂಬುವುದು ಬಹುತೇಕ ಎಲ್ಲಾ ರಾಜ್ಯಗಳ ಚುನಾವಣೆಯಲ್ಲಿ ಕಾಣಸಿಕ್ಕಿದೆ. ವೇದಿಕೆಯಲ್ಲಿ, ಸಾರ್ವಜನಿಕ ಸಂಪರ್ಕ ಸಭೆಗಳಲ್ಲಿ ಜನರನ್ನು ಉದ್ದೀಪ್ತಗೊಳಿಸುವ ಬಿರುಸಾದ ಭಾಷಣ ಬಿಗಿಯುವುದು, ನ್ಯೂ ಮೀಡಿಯಗಳನ್ನು ಅಪಪ್ರಚಾರ ಮಾಡುವ ಪಾಲಿಟಿಕಲ್ ಟೂಲ್ ಆಗಿ ಪರಿಣಾಮಕಾರಿಯಾಗಿ ಪರಿವರ್ತಿಸಿಕೊಳ್ಳದಿದ್ದರೇ ಚುನಾವಣೆಯನ್ನು ಗೆಲ್ಲುವುದಕ್ಕೆ ಪರ್ಯಾಯ ದಾರಿ ಯಾವುದೂ ಇಲ್ಲವೆಂಬಷ್ಟರ ಮಟ್ಟಿಗೆ ಸ್ಥಿತಿ ಬಂದೊದಗಿದೆ ಎನ್ನುವುದು ಸ್ಪಷ್ಟವಾಗುತ್ತಿದೆ.

ತನ್ನ ಅತ್ಯಮೂಲ್ಯ ಸಿದ್ಧಾಂತವನ್ನು ಅಥವಾ ತಾನು ನಂಬಿಕೊಂಡು ಬಂದಿರುವ ವಿಚಾರಗಳನ್ನು ಎತ್ತಿಹಿಡಿಯುವುದು ಪ್ರಸ್ತುತ ರಾಜಕೀಯದಲ್ಲಿ ಔಟ್‌ಡೇಟಡ್ ಪಾಲಿಟಿಕಲ್ ಟೂಲ್ ಆಗಿಹೋದಂತಿದೆ. ಪ್ರತಿರೋಧಿಸುವ ಬಗೆಯನ್ನೇ ಬದಲಾಯಿಸಿ ಸಾರ್ವಜನಿಕ ಬುದ್ಧಿಯನ್ನು ಮಂಕಾಗಿಸಿದ ರಾಜಕೀಯ ಈ ದೇಶದಲ್ಲಿ ಆಳ್ವಿಕೆ ನಡೆಸುತ್ತಿರುವಾಗ ಅದಕ್ಕೆ ಸರಿಯಾಗಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ತತ್ವವನ್ನು ಅಗತ್ಯವಾಗಿ ಪಾಲಿಸಲೇಬೇಕಿದೆ. ಅದು ಈ ರಾಜಕೀಯದ ಸ್ಥಿತಿಯಲ್ಲಿ ತುರ್ತು ಕೂಡ ಹೌದು. 

ವಾಸ್ತವವೆಂದರೇ ಕಣ್ಣಿಗೆ ತೋರುವ ಪದರವಷ್ಟೇ ಅಲ್ಲ, ವಾಸ್ತವ ಅಂದರೇ ಪದರದ ಆಳ ಅಗಲವೂ ಹೌದು ಎನ್ನುವುದನ್ನು ಒಪ್ಪಿಕೊಳ್ಳುವುದಿರಲಿ, ಆ ಬಗ್ಗೆ ಯೋಚಿಸುವುದಕ್ಕೂ ಮುಂದಾಗದಷ್ಟರ ಮಟ್ಟಿಗೆ ಸಾರ್ವಜನಿಕ ಬುದ್ಧಿಯನ್ನು ಈ ಹೊಲಸು ರಾಜಕೀಯ ಬಡವಾಗಿಸಿದೆ.

ಚುನಾವಣಾ ಪೂರ್ವ ಸಿದ್ಧತೆಯ ದೃಷ್ಟಿಕೋನದಲ್ಲಿ ಆಳುವ ಪಕ್ಷಕ್ಕಿರುವ ಪರಮೋಚ್ಚ ಗುರಿ ಏನು ಕೇಳಿದರೇ, ವಿರೋಧಕ್ಕೆ ಜನರನ್ನು ಉತ್ತೇಜಿಸುವುದೇ ಆಗಿದೆ. ಈವರೆಗೆ ರಾಜಕೀಯ ನಡೆದುಕೊಂಡು ಬಂದಿದ್ದು ಕೂಡ ಹಾಗೆಯೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಸಮಾಜ ಹಾಗೂ ರಾಜಕೀಯ ನಾವು ತಿಳಿದುಕೊಂಡಿರುವುದಕ್ಕಿಂತ ತೀರಾ ಭಿನ್ನ ಎನ್ನುವುದು ಸತ್ಯ. ಅವಶ್ಯಕ ಹಾಗೂ ಅನಿವಾರ್ಯ ಸಂಗತಿಗಳನ್ನು ತನಗೆ ಬೇಕಾಗುವ ಹೊತ್ತಿಗೆ ದಾಖಲಿಸಿಕೊಳ್ಳುವುದಷ್ಟೇ ಅಲ್ಲದೇ ಪ್ರತಿಪಕ್ಷದ ಮೇಲೆ ಪ್ರತಿರೋಧದ ಅಲೆ ಎಬ್ಬಿಸುವುದು/ಹಬ್ಬಿಸುವುದು ಮಾತ್ರವಲ್ಲದೇ ರಾಜಕೀವಾಗಿ, ಸಾಮಾಜಿಕವಾಗಿ ಗೊಂದಲ ಸೃಷ್ಟಿಸುವುದರ ಮುಖೇನ ಯಾವುದರ ಮೇಲೆ ಅಗತ್ಯವಾಗಿ ಗಂಭೀರವಾದ ಗಮನವಿರಬೇಕೋ ಅಥವಾ ಚಿಂತನೆ ಇರಬೇಕೋ ಅದರ ಕಣ್ತಪ್ಪಿಸಿ ಅದಾಗದಂತೆ ಮಾಡಿ ದಿಕ್ಕು ತಪ್ಪಿಸುವುದೇ ಡಬ್ಬಲ್ ಥಿಂಕ್ ಸ್ಟ್ರ್ಯಾಟಜಿಯ ರಾಜಕೀಯ. ಅದು ಈ ಕಾಲಘಟ್ಟದಲ್ಲಿ ಗೆಲ್ಲುತ್ತಿರುವ ರಾಜಕೀಯವೂ ಹೌದು.

ಪ್ರಯೋಗಗಳು ಕೆಲವೊಮ್ಮೆ ತುಂಬಾ ಸುಲಭವಾಗಿ ಪ್ರಭಾವಕ್ಕೊಳಗಾಗುತ್ತವೆ, ಮತ್ತೆ ಕೆಲವೊಮ್ಮೆ ಅದು ಎಂಥದ್ದೇ ಪ್ರಯೋಗ ಮಾಡಿದರೂ ಅಷ್ಟು ಸುಲಭದಲ್ಲಿ ಪ್ರಭಾವಕ್ಕೊಳಗಾಗುವುದಿಲ್ಲ. ಪ್ರಯೋಗಗಳ ಅಂತಿಮ ಸುತ್ತಿನ ಫಲಿತಾಂಶ ಭವಿಷ್ಯದ ಗರ್ಭದಲ್ಲಿರುತ್ತದೆ. ರಾಜಕೀಯದಲ್ಲಿ ಹಾಗಲ್ಲ. ಪ್ರಯೋಗ ಮಾಡಿದ ಆರಂಭಿಕ ಹಂತದಲ್ಲಿಯೇ ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯ. ಇದು ಕೆಲವೊಮ್ಮೆ ಸುಳ್ಳಾಗಿದ್ದು ಕೂಡ ರಾಜಕೀಯದ ಇತಿಹಾಸದಲ್ಲಿದೆ. ಆದರೇ, ಮೊದಲು ಪ್ರಯೋಗಿಸಿದವ ಸಾಮಾನ್ಯವಾಗಿ ಗೆಲ್ಲುತ್ತಾನೆ. ಎರಡನೇಯವ ಎಷ್ಟೇ ಪ್ರಭಾವಿಸುವುದಕ್ಕೆ ಪ್ರಯತ್ನ ಪಟ್ಟರೂ ಅವನ ಭವಿಷ್ಯದ ಗರ್ಭದಲ್ಲಿ ಸುಫಲವಿರುವುದು ತೀರಾ ವಿರಳ. ಇಲ್ಲಿ ಒಂದೇ, ಪ್ರಯೋಗ ಹೊಸತಾಗಿರಬೇಕು ಅಥವಾ ಅನುಷ್ಠಾನಗೊಳಿಸುವ ಮಾದರಿ ಬದಲಾಗಿರಬೇಕು. ಯಾವಾಗಲೂ ಮೊದಲಿಗೆ ಹೆಚ್ಚು ಪ್ರಾಶಸ್ಯ. ನಂತರದವುಗಳಿಗೆ ಪ್ರಾಶಸ್ಯ ಕಡಿಮೆ. ರಾಜಕೀಯದಲ್ಲಿ ಇದನ್ನು ಬಲ್ಲವ ಗೆಲ್ಲಬಲ್ಲ. ಭಾರತೀಯ ರಾಜಕೀಯದಲ್ಲಿ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಸೋಲುತ್ತಿರುವುದು ಈ ಕಡೆಗಿನ ಕೊರತೆಯಲ್ಲಿಯೇ. ಕಾಂಗ್ರೆಸ್ ಕೂಡ ಜನರ ಒಲವನ್ನು ಪಡೆಯುವಲ್ಲಿ ಸೋಲುತ್ತಿರುವುದು ಇಲ್ಲೇ. ಬಿಜೆಪಿ ೨೦೧೪ರಲ್ಲಿ ನ್ಯೂ ಮೀಡಿಯಾಗಳನ್ನು ಪಾಲಿಟಿಕಲ್ ಟೂಲ್ ಆಗಿ ಪರಿವರ್ತಿಸಿಕೊಂಡು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡ ಮಾದರಿಯನ್ನು ಕಾಂಗ್ರೆಸ್ ಈಗ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಅದಕ್ಕೆ ಈ ಸ್ಥಿತಿಗತಿಯಲ್ಲಿ ಕಾಂಗ್ರೆಸ್‌ನ ತಂತ್ರಗಾರಿಕೆ ಔಟ್‌ಡೇಟಡ್ ಅಂತ ಹೇಳುವುದು. ಇಂತಹ ತಂತ್ರಗಾರಿಕೆಯಲ್ಲಿ ಬಿಜೆಪಿ ಈಗ ಕಾಂಗ್ರೆಸ್ ಸೇರಿ ಎಲ್ಲಾ ಪ್ರತಿಪಕ್ಷಗಳಿಗಿಂತ ಮತ್ತಷ್ಟು ಮುಂದೆ ಹೋಗಿರಬಹುದು. ಈಗ ಅಭಿವೃದ್ಧಿಯ ಕೆಲಸವನ್ನು ಪ್ರಚಾರ ಮಾಡುವುದಕ್ಕಿಂತ ವೈಯಕ್ತಿಕ ಹಾಗೂ ಪಕ್ಷದ ರಾಜಕೀಯ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವಂತದ್ದೇ ಪರಿಣಾಮಕಾರಿಯಾಗಿ ಚುನಾವಣಾ ಟೂಲ್ ಬದಲಾಗಿದೆ. ಅದು ಚುನಾವಣಾ ರಾಜಕೀಯದ ಟ್ರೆಂಡ್ ಕೂಡ ಹೌದು. 

ಬಿಜೆಪಿ ಚುನಾವಣಾ ತಂತ್ರಗಾರಿಕೆಯಲ್ಲಿ ಸ್ಪಷ್ಟವಾಗಿದೆ ! : ಕೇಂದ್ರದಲ್ಲಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವುದಕ್ಕಾಗಿ ಎಲ್ಲಾ ಹಂತದಲ್ಲಿ ಬಿಜೆಪಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ೨೦೨೪ರ ಮೊದಲು ಒಂಬತ್ತು ಚುನಾವಣೆಗಳು ನಡೆಲಿಕ್ಕಿದೆ. ಎಲ್ಲಾ ಚುನಾವಣೆಗಳಲ್ಲಿ ಗೆಲ್ಲುವ ಹಸಿವು ಬಿಜೆಪಿಗಿದೆ. ಮೋದಿ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕ. ಮೋದಿಯನ್ನು ರಾಜಕೀಯವಾಗಿ ಬಿಂಬಿಸಿದ ಅವತಾರಗಳನ್ನೆಲ್ಲಾ ಈ ದೇಶ ಕಂಡಿದೆ. ಹಿಂದೂ ಹೃದಯ ಸಾಮ್ರಾಟ, ಅಭಿವೃದ್ಧಿಯ ಹರಿಕಾರ ಹೀಗೆ ಇನ್ನೂ ಹಲವು. ಇವೆಲ್ಲವೂ ರಾಜಕೀಯವಾಗಿ ಸೃಷ್ಟಿಯಾದ ಸಂಗತಿಗಳು. ಅದು ವಾಸ್ತವದಲ್ಲಿ ಹೌದೋ ಅಲ್ಲವೋ, ಆದರೇ, ಅದನ್ನು ಬಹಳ ವ್ಯವಸ್ಥಿತವಾಗಿ ಪಕ್ಷದ ಟಾರ್ಗೇಟ್ ವೋರ‍್ಸ್ ತಲೆ ಒಳಗೆ ಕಂಪ್ಯೂಟಿಂಗ್ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈಗ ಒಂದೆರಡು ವರ್ಷಗಳಿಂದ ‘ಜಾಗತೀಕ ರಾಜನೀತಿ ತಜ್ಞ’ ಮತ್ತೊಂದು ಹೊಸ ಅವತಾರದಲ್ಲಿ ಮೋದಿಯವರನ್ನು ಬಿಂಬಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನದಲ್ಲಿದೆ. ಇದೂ ಕೂಡ ಹಾಗೆ, ಇಡಿ ಜಗತ್ತು ಮೋದಿಯನ್ನು ಒಪ್ಪಿಕೊಂಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೇ, ದೇಶದ ಜನರ ತಲೆಯೊಳಗೆ ವ್ಯವಸ್ಥಿತವಾಗಿ ಈ ಅಭಿಪ್ರಾಯವನ್ನು ತುಂಬಿಸುವ ಪ್ರಯತ್ನಗಳನ್ನು ಮಾಧ್ಯಮಗಳಿಂದಾದಿಯಾಗಿ ಎಲ್ಲಾ ಸಾಧ್ಯವಿರುವ ಮಾರ್ಗಗಳಿಂದ ಬಿಜೆಪಿ ಮಾಡಿದೆ. ಇನ್ನು, ೨೦೨೪ ಬರುವಷ್ಟರಲ್ಲಿ ರಾಮ ಮಂದಿರ ತಲೆ ಎತ್ತಿ ನಿಲ್ಲಲಿದೆ. ಅದು ಬಿಜೆಪಿಗೆ ಮತ್ತಷ್ಟು ರಾಜಕೀಯ ಮೈಲೇಜ್ ಖಂಡಿತ ನೀಡಲಿದೆ. ಇನ್ನು, ರಾಮ ಸೇತುವನ್ನು ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವುದಕ್ಕೆ ಕೇಂದ್ರ ಸರ್ಕಾರ ಈ ಚುನಾವಣೆಯ ಕಾಲದಲ್ಲಿ ಮುಂದಾಗಿದೆ. ಹೀಗೆ ಹಲವು ಧಾರ್ಮಿಕ ವಿಚಾರಗಳನ್ನು ರಾಜಕೀಯಕ್ಕೆ ಉರುಳಿಸುವ ತನ್ನ ಹಳೆಯ ಛಾಳಿಯನ್ನು ಮತ್ತೆ ಈ ಬಾರಿಯೂ ಬಿಜೆಪಿ ಮುಂದುವರಿಸಿದೆ.

ಬಿಜೆಪಿ ಹೈಕಮಾಂಡ್ ತಲೆಯಲ್ಲಿರುವುದು ಸದ್ಯಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ. ಕಳೆದ ಎರಡು ಮೂರು ವರ್ಷಗಳಿಂದ ಹಲವು ವಿವಾದಗಳಿಗೆ ಸಾಕ್ಷಿಯಾದ ಬಿಜೆಪಿ ತನ್ನ ವರ್ಚಸ್ಸನ್ನು ಮರು ಸೃಷ್ಟಿಸಿಕೊಳ್ಳುವ ಪ್ರಯತ್ನದಲ್ಲಿದೆ. ಬಿಎಸ್‌ವೈ ಪದತ್ಯಾಗ, ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅನಿರಿಕ್ಷಿತ ಆಯ್ಕೆ, ಜಾರಕಿಹೊಳಿ ಸಿ.ಡಿ ಪ್ರಕರಣ, ಈಶ್ವರಪ್ಪ ರಾಜೀನಾಮೆ, ೪೦% ಕಮಿಷನ್, ಪಿಎಸ್‌ಐ ಹಗರಣ, ಬಿಜೆಪಿಯ ಪ್ರಭಾವಿ ನಾಯಕರ ಆಪ್ತ ಸ್ಯಾಂಟ್ರೋ ರವಿ ಪ್ರಕರಣ ಎಲ್ಲವೂ ರಾಜ್ಯ ಬಿಜೆಪಿ ಸರ್ಕಾರದ ರಾಜಕೀಯದ ಓಟಕ್ಕೆ ಒಂದಿಷ್ಟು ಬ್ರೇಕ್ ಹಾಕಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾರ್ವಜನಿಕ ಸಂಪರ್ಕಗಳ ಮೂಲಕ ಚುನಾವಣಾ ಸಮೀಕ್ಷೆಯಲ್ಲಿ ಮುಳುಗಿರುವ ಬಿಜೆಪಿ, ಕಾಂಗ್ರೆಸ್ ನೀಡುತ್ತಿರುವ ಭರವಸೆ, ದೇಶದಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ತುಸು ಹೆದರಿಯೇ ಚುನಾವಣೆಗೆ ಸಜ್ಜಾಗುತ್ತಿದೆ. 

ಇನ್ನು, ದೊಡ್ಡ ಮಟ್ಟಿಗಿನ ಕಾರ್ಯಕರ್ತರ ಬಳಗ, ಫಂಡ್, ಪ್ರಭಾವ ಎಲ್ಲವನ್ನೂ ಒಳಗೊಂಡಿರುವ ಬಿಜೆಪಿ, ಕೇಂದ್ರದಲ್ಲಿ ಗೆಲ್ಲುವ ಎಲ್ಲಾ ಟ್ರೆಂಡ್ ಹೊಂದಿದೆಯಾದರೂ ದಕ್ಷಿಣ ಭಾರತದಲ್ಲಿ ಬಿಜೆಪಿಯ ಹವಾ ನಡೆಯುವುದಿಲ್ಲವೆಂಬ ಸತ್ಯ ಸ್ವತಃ ಬಿಜೆಪಿಗೂ ಗೊತ್ತಿದೆ. ದಕ್ಷಿಣದಲ್ಲಿ ಗೆಲ್ಲುವ ಸೂತ್ರವನ್ನು ಭೇದಿಸುವ ತಂತ್ರಗಾರಿಕೆಯನ್ನು ಬಿಜೆಪಿ ತಯಾರು ಮಾಡಿಕೊಳ್ಳಬೇಕಾಗಿದೆ. ದಕ್ಷಿಣ ಭಾರತದ ಉದ್ದಗಲಕ್ಕೂ ಕರ್ನಾಟಕವನ್ನು ಹೊರತುಪಡಿಸಿದರೇ, ಬೇರೆ ಎಲ್ಲೂ ಬಿಜೆಪಿ ಅಜೆಂಡಾ, ಸಿದ್ಧಾಂತವನ್ನು ಒಪ್ಪುವ ಮತದಾರರು ಇಲ್ಲ. ಇದ್ದರೂ ತೀರಾ ವಿರಳ. ಮೋದಿಯನ್ನು ಮುಂದಿಟ್ಟುಕೊಂಡು ಎಂಥಾ ಅವತಾರದಲ್ಲಿ ಬಿಂಬಿಸಿ ಚುನಾವಣೆಗೆ ಬಂದರೂ ಇಲ್ಲಿ ಯಃಕಶ್ಚಿತ್ ಎಂಬ ಧೋರಣೆಯನ್ನೇ ಬಿಜೆಪಿ ಎದುರಿಸಬೇಕು. ಇದು ಅಪ್ಪಟ ಸತ್ಯ. ‘ಮೋದಿ ಶುದ್ಧತ್ವ’ ಇಲ್ಲಿ ನಡೆಯುವುದಿಲ್ಲ. ಅಲ್ಲೋ ಇಲ್ಲೋ ಮೈತ್ರಿ ಮಾಡಿಕೊಳ್ಳಬಹುದಷ್ಟೇ ಬಿಟ್ಟರೇ, ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದಕ್ಕೆ ಖಂಡಿತ ಬಿಜೆಪಿಗೆ ಸಾಧ್ಯವಿಲ್ಲ. ಅದು ಕರ್ನಾಟಕದಲ್ಲಿಯೂ ಬಿಜೆಪಿಗೆ ಈವರೆಗೆ ಆಗಿಲ್ಲ ಎನ್ನುವುದು ಗಮನಾರ್ಹ. ಈ ವಿಧಾನ ಸಭಾ ಚುನಾವಣೆಯಲ್ಲಿಯೂ ಅದು ಸಂಶಯವೇ ಆಗಿದೆ. 

ಈ ವರ್ಷದ ಕೇಂದ್ರ ಬಜೆಟ್ ಹಾಗೂ ಬಿಜೆಪಿಯ ಈ ಅವಧಿಯ ಬಹುತೇಕ ಕೊನೆಯ ಬಜೆಟ್ ಬಗ್ಗೆ ಕುತೂಹಲ ಹೆಚ್ಚಿದೆ. ರಾಜಕೀಯ ಬದ್ಧ ವೈರಿ ರಾಹುಲ್ ಗಾಂಧಿ ಕೆಲವು ತಿಂಗಳುಗಳಿಂದ ದೇಶದುದ್ದಗಲಕ್ಕೂ ಭಾರತ್ ಜೋಡೋ ಯಾತ್ರೆ ಮೂಲಕ ಬೃಹತ್ ಸಾರ್ವಜನಿಕ ಸಂಪರ್ಕ ಮಾಡುವುದರ ಜೊತೆಗೆ ಜನರ ಸಮಸ್ಯೆಗಳನ್ನು ಆಲಿಸುತ್ತಿರುವುದು, ಜನ ಕೂಡ ರಾಹುಲ್ ಗಾಂಧಿಗೆ ನಿರೀಕ್ಷೆಗೂ ಮೀರಿ ಬೆಂಬಲಿಸುತ್ತಿರುವುದು ಸಹಜವಾಗಿ ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿದೆ. ರಾಹುಲ್ ಗಾಂಧಿ ಪಾದಯಾತ್ರೆಯಿಂದ ಬಿಜೆಪಿಗೆ ಆದ ಎಲ್ಲಾ ಧಕ್ಕೆಯನ್ನು ಬಿಜೆಪಿ ಬಜೆಟ್ ಮೂಲಕ ಸರಿಪಡಿಸಿಕೊಳ್ಳುವ ಪ್ರಯತ್ನದಲ್ಲಿದೆ. ಬಜೆಟ್ ಮೂಲಕ ದೇಶದ ನಾಗರಿಕರನ್ನು ಸಮಾಧಾನ ಮಾಡುವ ಸಲುವಾಗಿ ತಯಾರಿಯಲ್ಲಿರುವ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಮತ್ತೊಂದು ಹೆಜ್ಜೆಯ ತಂತ್ರಗಾರಿಕೆಗೆ ತಯಾರಾಗದಿದ್ದರೇ ಇಷ್ಟೆಲ್ಲ ಮಾಡಿಯೂ ಏನೂ ಪ್ರಯೋಜನವಿಲ್ಲದಂತಾಗುತ್ತದೆ. ಅದಕ್ಕೆ ಹೇಳುವುದು ಬಿಜೆಪಿ ರಾಜಕೀಯ ತಂತ್ರಗಾರಿಕೆಯ ವಿಚಾರದಲ್ಲಿ ಕಾಂಗ್ರೆಸ್‌ಗಿಂತಲೂ ಕ್ಲೆವರ್. ಒಟ್ಟಿನಲ್ಲಿ, ರಾಜಕೀಯ ತಂತ್ರಗಾರಿಕೆಗಳ ನಡುವೆ ಚುನಾವಣೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ. 

-ಶ್ರೀರಾಜ್ ವಕ್ವಾಡಿ              


No comments:

Post a Comment