Thursday, January 12, 2023

ರಾಜಕೀಯಕ್ಕೆ ಇಂದೂ ಅನಿವಾರ್ಯವಾದ ಅಯೋಧ್ಯೆ..!

 


(ಸಾಂದರ್ಭಿಕ ಚಿತ್ರ)

ಧಾರ್ಮಿಕ ಸಂಘರ್ಷಗಳ ರಕ್ತ ಇತಿಹಾಸ ಬರೆದ ರಾಜಕೀಯ | ಮತ್ತೊಂದು ಅನಾಯಾಸ ಮಾರ್ಗ ಸೃಷ್ಟಿಸಿಕೊಂಡ ಬಿಜೆಪಿ.!    

ಅಯೋಧ್ಯೆ ರಾಮ ಮಂದಿರ ೨೦೨೪ರ ಜನವರಿಯ ಮೊದಲ ದಿನದಂದು ಲೋಕಾರ್ಪಣೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಯೂ ಕೂಡ ಅದೇ ವರ್ಷದಲ್ಲಿ ಇರುವುದರಿಂದ ಇದು ಕೇಂದ್ರ ಬಿಜೆಪಿ ಸರ್ಕಾರದ ಚುನಾವಣಾ ಪ್ರಚಾರಕ್ಕೆ ಪೂರಕವಾದ ಆರಂಭ ಸಿಕ್ಕಂತಾಗಿದೆ. ರಾಮ ಮಂದಿರವನ್ನು ತಮ್ಮ ರಾಜಕೀಯಕ್ಕಾಗಿಯೇ ಬಳಸಿಕೊಂಡ ಬಿಜೆಪಿ ಈ ಲೋಕಸಭಾ ಚುನಾವಣೆಯ ಸುತ್ತಿನಲ್ಲಿ ಶ್ರೀರಾಮ ಮಂದಿರದಿಂದಾಗಿ ಮಹತ್ತರವಾದ ಮೈಲೇಜ್ ಪಡೆದುಕೊಳ್ಳಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 

ರಾಮನ ಗಗನದೆತ್ತರದ ಕಟೌಟ್‌ಗಳು ತಯಾರಿಯಲ್ಲಿವೆ, ಬಿಜೆಪಿಗರ ಆಕ್ರೋಶಭರಿತ ಭಾಷಣಗಳ ಸ್ಕ್ರಿಪ್ಟ್ ಸಿದ್ಧತೆಯಲ್ಲಿದೆ, ಬಿಜೆಪಿಯ ಚುನಾವಣಾ ರ‍್ಯಾಲಿಗಳಿಗೆ ಬೇಕಾಗಿ ಶ್ರೀರಾಮನ ಚಿತ್ರಗಳುಳ್ಳ ಬ್ಯಾನರ್‌ಗಳು ತಯಾರಿಯಲ್ಲಿವೆ. ಹೌದು, ಬಿಜೆಪಿಗೆ ರಾಮ ಮಂದಿರವೂ ಆದಂತಾಯಿತು, ಚುನಾವಣೆಯ ಒಂದು ಟೂಲ್ ಕೂಡ ಆದಂತಾಯಿತು. ೧೯೯೦ರ ದಶಕದಿಂದಲೂ ರಾಮ ಮಂದಿರ ನಿರ್ಮಾಣವನ್ನು ಚುನಾವಣಾ ಪ್ರಚಾರ ಹಾಗೂ ಪ್ರಣಾಳಿಕೆಯ ಪ್ರಮುಖ ಭಾಗವಾಗಿಸಿಕೊಂಡು ಬಂದಿದ್ದ ಬಿಜೆಪಿಗೆ ಇದು ಮಹತ್ವದ ಮೈಲಿಗಲ್ಲು, ವಿರೋಧಿ ಬಣವನ್ನು ಮತ್ತೊಂದು ಸುತ್ತು ಅಧಿಕಾರದಿಂದ ದೂರವಿರುವಂತೆ ಮಾಡುವ ಮಹಾ ಸಂಕಲ್ಪಕ್ಕೆ ಬಿಜೆಪಿ ಅನಾಯಾಸ ಮಾರ್ಗ ಸೃಷ್ಟಿಸಿಕೊಂಡತ್ತಾಗಿದೆ.  

ಹಾಗೆ ನೋಡುವುದಕ್ಕೆ ಹೋದರೇ, ಈ ಶ್ರೀರಾಮ ಮಂದಿರವನ್ನು ರಾಜಕಾರಣಕ್ಕೆ ಒಂದು ವಿಷಯವಾಗುವ ಹಾಗೆ ಮಾಡಿಕೊಟ್ಟಿದ್ದೇ ಕಾಂಗ್ರೆಸ್. ಕಾಂಗ್ರೆಸ್ ಮಾಡಿದ ಬಹುತೇಕ ಎಲ್ಲವನ್ನೂ ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ ಎನ್ನುವುದು ಇಲ್ಲಿ ಗಮನಾರ್ಹ. ನೀವು ಆಶ್ಚರ್ಯಪಡಬೇಕಾಗಿಲ್ಲ, ಹಿಂದುತ್ವಕ್ಕೆ ಸ್ವತಃ ರಾಜೀವ್ ಗಾಂಧಿಯವರೇ ಕರೆದು ಶ್ರೀರಾಮ ಮಂದಿರವನ್ನು ಒಂದು ಅಸ್ತçದಂತೆ ಕೊಟ್ಟು ತಮ್ಮ ರಾಜಕೀಯ ವರ್ಚಸ್ಸನ್ನು ತಾವೇ ಕಳೆದುಕೊಂಡರು..! ಇನ್ನು, ಅಯೋಧ್ಯೆಯ ರಾಮಮಂದಿರ ವಿಚಾರ ಇಂದಿಗೂ ರಾಜಕೀಯದ ಅಸ್ತçವಾಗಿಯೇ ಇದೆ. ಭಾವನ್ಮಾತಕವಾಗಿ ರಾಜಕೀಯಕ್ಕೆ ಉರುಳಿದ ಅಯೋಧ್ಯೆಯ ವಿಷಯ ಈವರೆಗೆ ರಾಜಕೀಯವನ್ನು ಪೊರೆಯುತ್ತಾ ಬಂದಿದೆ. ಮತ್ತು ರಾಜಕಾರಣ ಅಯೋಧ್ಯೆಯನ್ನು ಬಳಸಿಕೊಳ್ಳುತ್ತಾ ಬಂದಿದೆ.    

ರಾಮ ಮಂದಿರದ ಬೀಗ ತೆಗೆಸಿದ ಶಾಬಾನೋ ಪ್ರಕರಣ ! : ಅಯೋಧ್ಯೆ ಭೂಮಿ ವಿವಾದದ ದಿಕ್ಕನ್ನು ಬದಲಿಸಿದ್ದು ಶಾಬಾನೋ ಪ್ರಕರಣದ ತೀರ್ಪು. ಹೌದು, ಏಪ್ರಿಲ್ ೨೩ ೧೯೮೫ರಂದು ಸುಪ್ರೀಂ ಕೋರ್ಟ್ ವಿಚ್ಛೇದಿತ ಮಹಿಳೆ ಶಾಬಾನೋ, ತನ್ನ ಮಾಜಿ ಪತಿಯಿಂದ ಜೀವನಾಂಶವನ್ನು ಪಡೆಯುವುದಕ್ಕೆ ಅರ್ಹಳು ಎಂದು ತೀರ್ಪು ಕೊಟ್ಟಿದ್ದೇ ಈ ಎಲ್ಲದಕ್ಕೂ ಕಾರಣವೆಂಬುವುದು ಆಶ್ಚರ್ಯವೆನ್ನಿಸಿದರೂ ಸತ್ಯ. 

ಸುಪ್ರೀಂ ಕೋರ್ಟ್ ನೀಡಿದ ಈ ತೀರ್ಪಿಗೆ ಮುಸ್ಲೀಂ ಮೂಲಭೂತವಾದಿಗಳು ಸಂಪೂರ್ಣವಾಗಿ ತಿರುಗಿ ಬಿದ್ದರು. ಅಂದು ಈ ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಮೇಲೆ ‘ಮುಸ್ಲೀಂ ವೈಯಕ್ತಿಕ ಕಾನೂನುಗಳನ್ನು ತಿದ್ದುವ/ ಬದಲಾಯಿಸುವ ಯಾವುದೇ ಅಧಿಕಾರ ಯಾರಿಗೂ ಇಲ್ಲ’ ಎಂಬ ಒತ್ತಡ ಹೇರಿದ ಪರಿಣಾಮ, ರಾಜೀವ್ ಗಾಂಧಿ ಇದು ತಮ್ಮ ರಾಜಕೀಯಕ್ಕೆ ಅಡಚಣೆಯಾಗಬಹುದು ಎಂದು ಭಾವಿಸಿ ಕಾನೂನು ತಿದ್ದುಪಡಿ ಮೂಲಕ ಸುಪ್ರೀಂ ಕೋರ್ಟ್ನ ತೀರ್ಪು ಅಸಿಂಧುವಾಗುವಂತೆ ಮಾಡಿದರು. ರಾಜೀವ್ ಗಾಂಧಿ ಕೈಗೊಂಡ ಈ ತೀರ್ಮಾನ ವಿಶ್ವಹಿಂದೂ ಪರಿಷತ್‌ಗೆ ಹೊಸ ಅಸ್ತçವಾಗಿ ಪ್ರಾಪ್ತಿಯಾಯಿತು. ರಾಜೀವ್ ವಿರುದ್ಧ ಹಿಂದೂ ಪರ ಸಂಘಟನೆಗಳ ವಿರೋಧ ಈ ದೇಶದಲ್ಲಿ ಹೊಸ ಚರ್ಚೆ ಹುಟ್ಟುಹಾಕಿತ್ತು. ‘ಧರ್ಮದ ಆಧಾರದಲ್ಲಿ ಕಾಂಗ್ರೆಸ್ ಹುಸಿ ಜಾತ್ಯಾತೀತ ನೀತಿ’ ಪಾಲಿಸುತ್ತಿದೆ ಎಂಬ ವಿರೋಧವನ್ನು ರಾಜೀವ್ ಗಾಂಧಿ ಎದುರಿಸಬೇಕಾಯಿತು. ಪಕ್ಷದ ಒಳಗೂ, ಹೊರಗೂ ರಾಜೀವ್‌ಗೆ ವಿರೋಧಿ ಬಣ ದೊಡ್ಡದಾಗುತ್ತಾ ಹೋಯಿತು. ಹಿಂದೂ ಮತಗಳು ಕಾಂಗ್ರೆಸ್‌ನನ್ನು ತೊರೆದು ಬೇರೆ ಕಡೆ ವಾಲುತ್ತಿರುವುದು ರಾಜೀವ್‌ಗೆ ಕಾಣಿಸಿತು. ತೊರೆದು ಹೋಗುತ್ತಿರುವ ಹಿಂದೂ ಮತಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಕಾರಣದಿಂದ ತಂತ್ರ ಹೂಡಿದ್ದ ರಾಜೀವ್, ವಿವಾದದಲ್ಲಿದ್ದ ರಾಮ ಮಂದಿರದ ಬೀಗ ತೆಗೆಸಿ ಹಿಂದೂ ಧರ್ಮದವರಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟರು. 

‘ಕೈ’ಗೆ ಕೈಕೊಟ್ಟ ಸದ್ಭಾವನಾ ಯಾತ್ರೆ : ಎರಡೂ ಧರ್ಮಗಳಲ್ಲಿ ಎದ್ದಿದ್ದ ಭಿನ್ನಾಭಿಪ್ರಾಯಗಳನ್ನು ಈ ಮೂಲಕ ನಿವಾರಿಸಬಹುದು ಎಂದುಕೊಂಡಿದ್ದ ರಾಜೀವ್ ಲೆಕ್ಕಾಚಾರ ಇಲ್ಲಿ ಅದಲು ಬದಲಾಯಿತು. ಮುಸ್ಲೀಂ ವೈಯಕ್ತಿಕ ಕಾನೂನಿನ ನಿಯಂತ್ರಣಕ್ಕೆ ಸಂಬಂಧಿಸಿದ ವಿಚಾರದಲ್ಲಿ ರಾಜೀವ್ ಗಾಂಧಿ ಮಧ್ಯಪ್ರವೇಶಿಸಿದ್ದೇ ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ ಮುಳುವಾಗಿ ಪರಿಣಮಿಸಿತು. ರಾಜೀವ್ ಗಾಂಧಿ ಮೇಲೆ ಈವರೆಗಿದ್ದ ಒಂದು ಅಭಿಪ್ರಾಯ ಸಂಪೂರ್ಣವಾಗಿ ಬದಲಾಯಿತು. ದೇಶದಲ್ಲಿ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ ಎಂಬ ಹಿಂದೂ ಸಂಘಟನೆಗಳ ಬಲವಾದ ವಿರೋಧ ರಾಜೀವ್ ಗಾಂಧಿ ಹಾಗೂ ಕಾಂಗ್ರೆಸ್‌ಗೆ ರಾಜಕೀಯವಾಗಿ ದೊಡ್ಡ ಪೆಟ್ಟು ಕೊಟ್ಟಿತು. ರಾಜೀವ್ ಗಾಂಧಿ ನಿರ್ಧಾರಗಳಿಂದ ಆತಂಕಕ್ಕೆ ಒಳಗಾದ ಹಿಂದೂ ಮತಗಳು ಬಿಜೆಪಿಯತ್ತ ವಾಲಿತು. ಹಿಂದುತ್ವದ ರಾಜಕಾರಣ ಪ್ರವರ್ಧಮಾನಕ್ಕೆ ಬರಲಾರಂಭಿಸಿತು. ಕಾಂಗ್ರೆಸ್ ವಿರುದ್ಧ ಹಾಗೂ ರಾಜೀವ್ ಗಾಂಧಿ ವಿರುದ್ಧ ದೇಶದಾದ್ಯಂತ ಹಿಂದೂ ಪರ ಸಂಘಟನೆಗಳು ವಿರೋಧದ ಅಲೆ ಎಬ್ಬಿಸಿದವು. ೧೯೮೯ರಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣಕ್ಕೆ ದೇಶದಾದ್ಯಂತ ಇಟ್ಟಿಗೆ ಸಂಗ್ರಹ ಅಭಿಯಾನ ಆರಂಭವಾಯಿತು. ೧೯೮೯ರಲ್ಲಿ ಸರ್ಕಾರದ ಅನುಮತಿಯಲ್ಲಿ ಶಿಲನ್ಯಾಸವೂ ಮುಗಿಯಿತು. 

ರಾಜೀವ್ ಈ ಸಂದರ್ಭದಲ್ಲಿಯೂ ಕ್ಲೆವರ್ ಗೇಮ್ ಆಡುವುದಕ್ಕೆ ಪ್ರಯತ್ನಿಸಿದರಾದರೂ, ಕಾಂಗ್ರೆಸ್ ನಾಯಕರೇ ಅವರನ್ನು ತಡೆದರು. ರಾಮಮಂದಿರ ಶಿಲನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ಮುಂದಾಗಿದ್ದ ರಾಜೀವ್ ಗಾಂಧಿಯವರ ಮೇಲೆ ಕಾಂಗ್ರೆಸ್‌ನ ಕೆಲವು ನಾಯಕರು ಭಿನ್ನ ಮಾತಾಡಿದರು. ಶಿಲನ್ಯಾಸದಲ್ಲಿ ರಾಜೀವ್ ಪಾಲ್ಗೊಂಡಿದ್ದಿದ್ದರೇ, ಪರಿಣಾಮ ಇಷ್ಟು ಖಾರವಾಗಿ ಕಾಂಗ್ರೆಸ್‌ಗೆ ಬೀರುತ್ತಿರಲಿಲ್ಲವೇನೋ, ಆದರೇ ಇದರ ಪರಿಣಾಮ ಕಾಂಗ್ರೆಸ್‌ಗೆ ನುಂಗಲಾರದ ಬಿಸಿ ತುಪ್ಪವಾಗಿತ್ತು. 

ರಾಜೀವ್ ಗಾಂಧಿ ಕೈಗೊಂಡ ನಿರ್ಣಯದಿಂದ ಹಾಗೂ ಹಿಂದೂ ಸಂಘಟನೆಗಳ ವಿರೋಧದಿಂದಾಗಿ ಕಾಂಗ್ರೆಸ್‌ಗೆ ಉಂಟಾಗಿದ್ದ ಹಾನಿಯನ್ನು ಸರಿಪಡಿಸುವುದಕ್ಕೆ ರಾಜೀವ್ ಸದ್ಭಾವನಾ ಯಾತ್ರೆ ಆರಂಭಿಸಿದರಾದರೂ ಯಾವುದೇ ಲಾಭವಾಗಿಲ್ಲ. ಕೆಲವೇ ತಿಂಗಳ ಬಳಿಕ ನಡೆದ ಚುನಾವಣೆ ಬಿಜೆಪಿಗೆ ವರದಾನವಾಯಿತು. ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಬಿಜೆಪಿಯ ೮೬ ಸ್ಥಾನಗಳ ಬಾಹ್ಯ ಬೆಂಬಲದೊಂದಿಗೆ ವಿ. ಪಿ ಸಿಂಗ್ ನೇತೃತ್ವದ ಸರ್ಕಾರ ರಚನೆಯಾಯಿತು. 

ರಾಮಮಂದಿರ ರಾಜಕೀಯಕ್ಕೆ ಉರುಳಲು ಯಾರು ಕಾರಣ ? : ಹಿಂದೂ ಧರ್ಮದವರನ್ನು ಓಲೈಸಿಕೊಳ್ಳುವುದಕ್ಕಾಗಿ ರಾಮಮಂದಿರದಲ್ಲಿ ಪೂಜೆ ಸಲ್ಲಿಸುವುದಕ್ಕೆ ಅವಕಾಶ ನೀಡುವ ತನಕವೂ ಧರ್ಮದ ಪರಿಧಿಯೊಳಗೆಯೇ ಇದ್ದ ಅಯೋಧ್ಯ ವಿಚಾರ, ೧೯೮೬ರಲ್ಲಿ ರಾಜಕೀಯಕ್ಕೆ ಉರುಳಿತು. ದೇಶದಲ್ಲಿನ ಧಾರ್ಮಿಕ ವಿಚಾರವೊಂದು ರಾಜಕೀಯಕ್ಕೆ ಉರುಳುವುದಕ್ಕೆ ರಾಜೀವ್ ಪರೋಕ್ಷ ಕಾರಣರಾದರು ಎನ್ನುವುದು ಸತ್ಯ. ರಾಮಮಂದಿರ ಶಿಲನ್ಯಾಸದ ನಂತರ ಬಾಬರಿ ಮಸಿದಿ-ರಾಮಮಂದಿರ ಹೋರಾಟ ರಾಜಕೀಯ ಹೋರಾಟವಾಗಿ ಹೊಸರೂಪ ಪಡೆದುಕೊಂಡಿತು. ಬಿಜೆಪಿ ತನ್ನ ರಾಜಕೀಯ ಅಸ್ತçವಾಗಿ ಬಳಸಿಕೊಳ್ಳುವುದಕ್ಕೆ ಆರಂಭಿಸಿತು. ಒಂದು ರೀತಿಯಲ್ಲಿ ಕಾಂಗ್ರೆಸ್ ಈ ದೇಶದಲ್ಲಿ ಧಾರ್ಮಿಕ ಧಗೆ ಏಳುವುದಕ್ಕೆ ಕಾರಣವಾಯಿತು. ಬಿಜೆಪಿ ಕಾಂಗ್ರೆಸ್ ಮಾಡಿದ ತಪ್ಪನ್ನು ರಾಜಕೀಯವಾಗಿ ಚೆನ್ನಾಗಿಯೇ ಬಳಸಿಕೊಂಡಿತು. ವಿಶ್ವ ಹಿಂದೂ ಪರಿಷತ್ ಸೇರಿ ಇತರೆ ಹಿಂದೂ ಸಂಘಟನೆಗಳು, ಆರ್‌ಎಸ್‌ಎಸ್, ಬಿಜೆಪಿ.. ಕಾಂಗ್ರೆಸ್ ವಿರುದ್ಧ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟುವುದರ ಮೂಲಕ ದೇಶದ ಉದ್ದಗಲಕ್ಕೂ ಪಸರಿಸಿತು. ನಂತರ ನಡೆದ ಎಲ್ ಕೆ. ಅಡ್ವಾಣಿ ನೇತೃತ್ವದ ‘ರಾಮ ರಥಯಾತ್ರೆ’ ಬಿಜೆಪಿಯ ಹಿಂದೂ ಪರ ಸಿದ್ಧಾಂತವನ್ನು ದೇಶದಾದ್ಯಂತ, ಅದರಲ್ಲೂ ಪ್ರಮುಖವಾಗಿ ಉತ್ತರ ಭಾರತದಲ್ಲಿ ಬಲವಾಗಿ ಪ್ರತಿಷ್ಠಾಪಿಸಿತು. ಇದು ಎಲ್ಲಿಯವರೆಗೆ ಪ್ರಭಾವಿಸಿತು ಎಂದರೇ, ವಿವಾದಿತ ಕಟ್ಟಡವನ್ನು ಕೆಡವುವರೆಗೆ ಮುಂದುವರಿಯಿತು. 

ಇಂದೂ ರಾಜಕೀಯಕ್ಕೆ ಅನಿವಾರ್ಯವಾದ ಅಯೋಧ್ಯೆ :  ೧೯೮೯ರ ಬಳಿಕ ಅಯೋಧ್ಯೆ, ರಾಮ ಮಂದಿರ ಎಲ್ಲಾ ರಾಜಕೀಯ ಪಕ್ಷಗಳಿಗೂ ಅನಿವಾರ್ಯ ವಿಷಯವಾಗಿ ಬದಲಾಯಿತು. ಬಲ, ಎಡ ಧೋರಣೆಯ ಬುದ್ಧಿ ಜೀವಿಗಳು ತಮ್ಮ ತಮ್ಮ ವಾದವನ್ನು ಮುಂದಿಡುವುದಕ್ಕೆ ಆರಂಭಿಸಿದರು. ಉಭಯ ವಾದಗಳನ್ನು ಬದಲಾಯಿಸುವ ಪ್ರಯತ್ನಗಳು ಎರಡು ಕಡೆಯ ಧೋರಣೆಗಳಿಂದ ನಡೆದವು. ಧರ್ಮದ ವಿಷಯದಲ್ಲಿ ಧ್ರುವೀಕರಣ ತೀವ್ರ ರೂಪವನ್ನು ಪಡೆದುಕೊಳ್ಳುತ್ತಾ ಬಂತು. ವಿ.ಪಿ ಸಿಂಗ್ ನೇತೃತ್ವದ ಸರ್ಕಾರದ ಮೇಲೆ ಅಯೋಧ್ಯೆ ವಿಚಾರದಲ್ಲಿ ಚರ್ಚೆ ಆಯೋಜಿಸುವಂತೆ ಒತ್ತಡ ತಂದಿತ್ತಾದರೂ, ಚರ್ಚೆಯಲ್ಲಿ ವಾದವನ್ನು ಸಮರ್ಥಿಸಿಕೊಳ್ಳುವುದಕ್ಕೆ ಪುರಾವೆ ನೀಡುವುದರಲ್ಲಿ ಎಡಪಂಥೀಯರು ಸೋಲನುಭವಿಸಿದರು. ಆ ಸಮಯದಲ್ಲೇ ಚರ್ಚೆಯನ್ನು ವಿಸ್ತರಿಸಿ, ಮುಸ್ಲೀಂ ಸಮುದಾಯದವರಿಗೆ ಪರಿಹಾರ ನೀಡಿ, ಜಾಗವನ್ನು ಹಿಂದೂಗಳಿಗೆ ಒಪ್ಪಿಸಿದ್ದರೇ, ಅಯೋಧ್ಯೆ ವಿವಾದ ಅಂತ್ಯ ಕಂಡು ಇಂದಿಗೆ ಮೂರು ದಶಕಗಳು ಕಳೆಯುತ್ತಿತ್ತು. ‘ರಾಜಕೀಯವಾಗಿ ಈ ಅಯೋಧ್ಯೆ’ ಎಲ್ಲಾ ಪಕ್ಷಗಳಿಗೂ ಬೇಕಿತ್ತು. ಪ್ರತಿ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಇದೇ ಅಯೋಧ್ಯೆ ವಿಚಾರ ಮುನ್ನೆಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಂಡವು. ಸಮಾಜ ಧರ್ಮದ ಆಧಾರದಲ್ಲಿ ಧ್ರುವೀಕರಣಗೊಂಡು ಒಡೆದು ಹೋಯಿತು. ಧಾರ್ಮಿಕ ಸಂಘರ್ಷಗಳ ರಕ್ತ ಇತಿಹಾಸಗಳಿಗೆ ರಾಜಕೀಯ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಧೋರಣೆ ಮೆರೆಯಿತು. ಸುಪ್ರೀಂ ಕೋರ್ಟ್ ತೀರ್ಪು ಬಂದಾದ ಮೇಲೂ ಅಯೋಧ್ಯೆ ರಾಜಕೀಯ ವಿಷಯವಾಗಿಯೇ ಉಳಿದಿದೆ. ಮಾತ್ರವಲ್ಲದೇ, ಬೇರೆ ಯಾವುದೂ ಇಲ್ಲದೇ, ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಯೋಧ್ಯೆಯನ್ನು ಮತ್ತೆ ಒಂದು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಎಲ್ಲಾ ಹಂತದ ತಯಾರಿಯಲ್ಲಿರುವುದು ಈ ದೇಶದ ಮತ್ತೊಂದು ದುರಂತ. 

-ಶ್ರೀರಾಜ್ ವಕ್ವಾಡಿ           


No comments:

Post a Comment