Wednesday, January 4, 2023

ಜೋಡೋ ಯಾತ್ರೆ ಕಾಂಗ್ರೆಸ್‌ನ ಒಂದು ಮಹತ್ವದ ಹೆಜ್ಜೆ..! ಆದರೂ...


(ಸಾಂದರ್ಭಿಕ ಚಿತ್ರ)

ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಹೊರಟವರು ಸೋಲುತ್ತಿರುವುದೆಲ್ಲಿ..?  

ಸನ್ ಆಫ್ ರಾಜೀವ್ ಗಾಂಧಿ ಭಾರತ್ ಜೋಡೋ ಯಾತ್ರೆ ಈ ದೇಶದುದ್ದಕ್ಕೂ ಮಾಡಬೇಕು ಎಂಬ ಸಂಕಲ್ಪ ಮಾಡಿಕೊಂಡಾಗ ಈ ಮಟ್ಟಿಗೆ ಬೆಂಬಲ ದೊರಕ್ಕುತ್ತದೆ ಎಂದು ಕನಸು ಕೂಡ ಕಂಡಿರಲಿಕ್ಕಿಲ್ಲ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬಗೆಗಿನ ಮಾಧ್ಯಮಗಳ ದಿವ್ಯ ನಿರ್ಲಕ್ಷ್ಯದ ಹೊರತಾಗಿಯೂ ಜನ ರಾಹುಲ್ ನಡೆದಲ್ಲೆಲ್ಲಾ ಅಪ್ಪಿ ಒಪ್ಪಿ ಕೊಂಡಾಡಿರುವುದನ್ನು ಈ ದೇಶದ ಕಣ್ಣುಗಳು ಕಂಡಿವೆ. ಬಿಜೆಪಿಯಂತಹ ದೊಡ್ಡ ಕಾರ್ಯಕರ್ತರ ಬೆಂಬಲವಿರುವ ರಾಷ್ಟ್ರೀಯ ಪಕ್ಷ ಸೃಷ್ಟಿಸಿದ ಕಾಂಗ್ರೆಸ್ ವಿರುದ್ಧದ ರಾಜಕೀಯ ತಂತ್ರಗಾರಿಕೆಯ ನಡುವೆಯೂ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಇಷ್ಟರ ಮಟ್ಟಿಗೆ ಜನಪ್ರೀತಿ ಗಳಿಸಿದ್ದು/ಗಳಿಸುತ್ತಿರುವುದು ನಿಜಕ್ಕೂ ಆಶ್ಚರ್ಯದ ಸಂಗತಿ. ದಾಟ್ಸ್ ರಿಯಲಿ ಗ್ರೇಟ್. 

ರಾಹುಲ್ ಗಾಂಧಿ ನೇತೃತ್ವದ ಜೋಡೋ ಯಾತ್ರೆ ನಿಸ್ಸಂದೇಹವಾಗಿ ರಾಜಕೀಯದ ಸಾರ್ವಜನಿಕ ಸಂಪರ್ಕವೇ ಆಗಿದ್ದರೂ, ಅಲ್ಲಿ ಭ್ರಾತೃತ್ವದ ನಗು ಹೊರಸೂಸುತ್ತಿತ್ತು. ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್‌ನ ಒಂದು ಮಹತ್ವದ ಹೆಜ್ಜೆ ಕೂಡ ಹೌದು. ಮತ್ತು ಅದು ಸಾರ್ವಜನಿಕ ವಲಯದಲ್ಲಿ ಸೃಷ್ಟಿಸಿದ ಪ್ರಭಾವವನ್ನು ತಳ್ಳಿ ಹಾಕುವುದಕ್ಕೆ ಖಂಡಿತ ಸಾಧ್ಯವಿಲ್ಲ. ಈ ದೇಶದ ಹಿರಿಯ ರಾಜಕೀಯ ಪಕ್ಷದ ನಾಯಕ, ಗಾಂಧಿ ಕುಟುಂಬದ ಕುಡಿ, ಕಾಂಗ್ರೆಸ್ ನಾಯಕ ಎಂಬೆಲ್ಲಾ ಪ್ರಭಾವಳಿಯನ್ನು ಕಳಚಿಟ್ಟು ಸಾರ್ವಜನಿಕರೊಂದಿಗೆ ತೀರಾ ಸಾಮಾನ್ಯನಂತೆಯೇ ನಡೆದು ಜಾತಿ, ಮತ, ಧರ್ಮಗಳನ್ನು ನೋಡದೇ ತನ್ನೆಡೆಗೆ ಓಡಿ ಬಂದವರನ್ನು ಅಪ್ಪಿ ಮಾತನಾಡಿಸಿ, ಅವರ ಸಂಕಷ್ಟಗಳಿಗೆ ದನಿಯಾಗುವುದಿದೆಯಲ್ವಾ..? ಅದು ಎಲ್ಲರಿಗೂ ಸಾಧ್ಯವಿಲ್ಲ. ರಾಹುಲ್ ಗಾಂಧಿ ಅಂತಹ ತೆರೆದ ಮನಸ್ಸಿನ, ಈ ದೇಶದ ಬಗೆಗೆ ದೂರದೃಷ್ಟಿ ಇಟ್ಟುಕೊಂಡವನಿಂದ ಮಾತ್ರ ಸಾಧ್ಯ. ಆ ಕಾರಣಕ್ಕೆ ಪಕ್ಷಾತೀತವಾಗಿ ರಾಹುಲ್ ಗಾಂಧಿಯನ್ನು ಮೆಚ್ಚಲೇಬೇಕು. ಇನ್ನು, ಈ ಯಾತ್ರೆ ಕಾಂಗ್ರೆಸ್‌ಗೆ ಮರುಜನ್ಮ ನೀಡುವಷ್ಟರ ಮಟ್ಟಿಗೆ ಬಲ ತುಂಬಿಸಿದೆಯೇ ಎಂದು ಕೇಳಿದರೇ, ಖಂಡಿತ ಅದಿನ್ನೂ ಸ್ಪಷ್ಟವಿಲ್ಲ. ಅದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೂ, ಯಾತ್ರೆಯ ಸಂಕಲ್ಪ ಈ ದೇಶದಲ್ಲಿ ಒಂದು ಆಶಾಕಿರಣವನ್ನು ಮೂಡಿಸಿದೆ ಎನ್ನುವುದು ಸತ್ಯ. 

ಈ ಯಾತ್ರೆಯ ಸಂಕಲ್ಪದಂತೆ ಈ ದೇಶದ ಜನ ಸಮೂಹವನ್ನು ಸಜ್ಜುಗೊಳಿಸುವ ಮತ್ತು ತನ್ನೊಂದಿಗೆ ಒಳಗೊಳ್ಳಿಸುವ ಇಚ್ಛಾಶಕ್ತಿ ಕಾಂಗ್ರೆಸ್‌ಗಿದೆ. ಆ ಬಗ್ಗೆ ಭಾರತೀಯರಲ್ಲಿ ಕುತೂಹಲ ಮೂಡಿಸಿದೆ. ಮೋದಿ ನೇತೃತ್ವದ ಸರ್ಕಾರ ಈ ದೇಶದ ಜನರಿಗೆ ಕೊಡುಗೆಯಾಗಿ ನೀಡಿದ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಇತ್ಯಾದಿ ಸಮಸ್ಯೆಗಳಿಂದ ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬಳಲಿದ ಈ ದೇಶದ ಎಲ್ಲಾ ಹಂತದ ನಾಗರಿಕರಲ್ಲಿ ಈ ಯಾತ್ರೆ ಸಣ್ಣ ಮಟ್ಟಿಗೆ ಭರವಸೆ ಮೂಡಿಸಿದೆ ಎನ್ನುವುದನ್ನು ಖಂಡಿತ ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ. ರಾಜಕೀಯವಾಗಿ ಕಾಂಗ್ರೆಸ್ ದೇಶದ ಎಲ್ಲಾ ಭಾಗಗಳಲ್ಲಿ ಗೆಲ್ಲುವುದಕ್ಕೆ ಅಥವಾ ಅಧಿಕಾರ ಪಡೆಯುವುದಕ್ಕೆ ಸಮರ್ಥವಿದೆಯೇ.. ಎನ್ನುವುದು ಅದು ಎರಡನೇ ಹಂತದ ಪ್ರಶ್ನೆ ಮತ್ತು ಚರ್ಚೆ. ಆದರೇ, ಸಾಮಾಜಿಕ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿದ್ದ ಈ ದೇಶದ ನಾಗರಿಕರಿಗೆ ತಮ್ಮ ಕಷ್ಟಗಳನ್ನು ಕೇಳುವ ಕಿವಿಯಂತೆ ಕಾಂಗ್ರೆಸ್ ದೊರಕಿದೆ ಎಂಬ ಸಮಾಧಾನ ಮೂಡಿಸಿದೆ ಎನ್ನುವುದನ್ನು ಯಾತ್ರೆಯುದ್ದಕ್ಕೂ ರಾಹುಲ್ ಗಾಂಧಿ ಜೊತೆಗೆ ಬಂದ ಜನಸಮೂಹದಿಂದ ತಿಳಿದುಕೊಳ್ಳಬಹುದಾಗಿದೆ. 

ಎಲ್ಲಾ ಹಂತದಲ್ಲಿಯೂ ಪ್ರಬಲ ಪಕ್ಷ ಸಂಘಟನೆ ಮಾಡಿಕೊಳ್ಳುವುದು ಈಗ ಕಾಂಗ್ರೆಸ್‌ಗೆ ತುರ್ತಿದೆ. ಮಕಾಡೆ ಮಲಗಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಈ ಯಾತ್ರೆ ಬಡಿದೆಬ್ಬಿಸಿದೆ. ಈ ಯಾತ್ರೆಯಲ್ಲಿ ಭಾರತೀಯರೊಂದಿಗೆ ಕಾಂಗ್ರೆಸ್ ಸಂಪರ್ಕ ಪ್ರಬಲವಾಗಬೇಕು ಎಂಬ ಒಂದು ಹಿಡೆನ್ ಅಜೆಂಡಾ ಇದೆ ಎಂದಾದರೂ ಈ ಕಾಲಕ್ಕೆ ಇಂತಹದ್ದೊಂದು ಯಾತ್ರೆಯೋ ಅಥವಾ ಸಾರ್ವಜನಿಕ ಸಂಪರ್ಕ ಆಗಲೇಬೇಕಿತ್ತು. ೧೯೨೦, ೧೯೩೦, ೧೯೪೦ರ ದಶಕದಲ್ಲಿ ಕಾಂಗ್ರೆಸ್ ಸಾರ್ವಜನಿಕರೊಂದಿಗೆ ಉಳಿಸಿಕೊಂಡಿದ್ದ ಸಂಪರ್ಕ ನಿಜಕ್ಕೂ ಪ್ರಬಲವಾಗಿತ್ತು. ಅಂದಿನ ಕಾಂಗ್ರೆಸ್ ನಾಯಕರು ಪಕ್ಷ ಸಂಘಟನನೆಯಲ್ಲಿ ಹಗಲಿರುಳು ದುಡಿದಿದ್ದರು. ಅದಾದ ಮೇಲೆ ವರ್ಷ ಕಳೆದಂತೆ ರಾಜಕೀಯ, ಸೈದ್ಧಾಂತಿಕ ಭಿನ್ನತೆಯ ಮೇಲೆ ಇತರೆ ಪಕ್ಷಗಳ ಉಗಮವಾಯಿತು. ಆ ಎಲ್ಲಾ ಪಕ್ಷಗಳು ತಮ್ಮ ಸೈದ್ಧಾಂತಿಕ ನಿಲುವನ್ನು ಬಿತ್ತಿದವು. ಅದು ರಾಜಕೀಯ ಧ್ರುವೀಕರಣಕ್ಕೆ ಕೂಡ ಕಾರಣವಾಯಿತು. ಈ ದೇಶದಲ್ಲಿ ಹುಟ್ಟಿಕೊಂಡ ಹಲವು ಸಿದ್ಧಾಂತಗಳು ತಮ್ಮದೇ ಸಾಮ್ರಾಜ್ಯವನ್ನು ಸೃಷ್ಟಿ ಮಾಡಿಕೊಂಡವು. ಸಹಜವಾಗಿ ಕಾಂಗ್ರೆಸ್‌ಗೆ ಕೂಡ ಇದು ಪೆಟ್ಟಾಯಿತು. ಈಗ ಬಲವಾದ ಒಂದು ಸೈದ್ಧಾಂತಿಕ ಹೋರಾಟವನ್ನು ಕಾಂಗ್ರೆಸ್ ಎದುರಿಸಬೇಕಿದೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ತಾವಿಬ್ಬರೇ ಈ ದೇಶದಲ್ಲಿ ಕಾಂಗ್ರೆಸ್‌ನನ್ನು ಉಳಿಸುತ್ತೇವೆ ಎಂದರೇ ಸಾಕಾಗಲಿಕ್ಕಿಲ್ಲ. ಆಂತರಿಕವಾಗಿ ಪಕ್ಷ ಬಲಗೊಳ್ಳಬೇಕಿದೆ. 

ಕಾಂಗ್ರೆಸ್ ಇವತ್ತಿಗೂ ಸೋಲುತ್ತಿರುವುದೆಲ್ಲಿ ? : ಗಮನಿಸಿ, ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶ್ನಾತೀತ ನಾಯಕರಾದರೂ ಕೂಡ, ಬಿಜೆಪಿಯಲ್ಲಿ ಮತ್ತು ಆರ್‌ಎಸ್‌ಎಸ್ ಪರಿವಾರದಲ್ಲಿ ಮೋದಿಯನ್ನು ಹೊರತಾಗಿಯೂ ಸಾಕಷ್ಟು ಮಂದಿ ಪಕ್ಷ ಸಂಘಟನೆಗೆ, ಪಕ್ಷ ಬಲವರ್ಧನೆಗೆಂದೇ ಇದ್ದಾರೆ. ಆದರೇ, ಕಾಂಗ್ರೆಸ್‌ನ ಸ್ಥಿತಿ ಹಾಗಲ್ಲ. ಕಾಂಗ್ರೆಸ್‌ನ ಬಹುತೇಕ ಎಲ್ಲಾ ಪ್ರಧಾನ ಹುದ್ದೆಗಳು ಕೇವಲ ನಾಮಕಾವಸ್ಥೆಗಷ್ಟೇ ಎಂಬಂತಿದ್ದು, ಆಳುವವರು ಮತ್ತ್ಯಾರೋ ಇದ್ದಾರೆ ಎನ್ನುವುದು ಕಾಂಗ್ರೆಸ್ ಪಕ್ಷದೊಳಗಿನ ಕೊರತೆ. ಅಂದರೇ, ಕಾಂಗ್ರೆಸ್ ತನಗೆ ಬೇಕಾಗುವಷ್ಟು ಪ್ರಭಾವಿ ನಾಯಕರನ್ನು ಬೆಳೆಸಿಲ್ಲ ಎಂಬುವುದು ಇದರ ಅರ್ಥ. ಇದು ಕಾಂಗ್ರೆಸ್‌ನ ಜೋಡೋ ಯಾತ್ರೆಯಲ್ಲಿಯೂ ಅಲ್ಲಲ್ಲಿ ಕಾಣಸಿಕ್ಕಿದೆ. ಎಲ್ಲೋ ಸಾಂದರ್ಭಿಕವಾಗಿ ಜೈರಾಂ ರಮೇಶ್, ಶಶಿ ತರೂರ್, ಕನ್ಹಯ್ಯಾ ಕುಮಾರ್, ಜಿಗ್ನೇಷ್ ಮೇವಾನಿ, ಅಶೋಕ್ ಗೆಹ್ಲೋಟ್‌ರಂತವರು ಈ ಸಾಲಿನಲ್ಲಿ ಇದ್ದಾರೆ ಹೊರತಾಗಿ ಹಲವರನ್ನು ಕಾಣುವುದಕ್ಕೆ ಸಾಧ್ಯವಿಲ್ಲ. ಅಷ್ಟಕ್ಕೂ ಮಿಗಿಲಾಗಿ ಪ್ರಭಾವಿ ಯುವ ನಾಯಕರನ್ನು ಕಾಂಗ್ರೆಸ್‌ನಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ. ಸೈದ್ಧಾಂತಿಕ ಸಂಗ್ರಾಮಕ್ಕೆ ಇಂತಹ ಹಲವರ ಸೃಷ್ಟಿ ಅಗತ್ಯವಿದೆ ಎನ್ನುವುದು ಕಾಂಗ್ರೆಸ್‌ಗೆ ಗೊತ್ತಾಗದೇ ಇರುವುದು ಎಲ್ಲೋ ಒಂದು ಕಡೆಯಲ್ಲಿ ಅದರ ಸೈದ್ಧಾಂತಿಕ ಹೋರಾಟದ ಕಡೆಗಿರುವ ಕೊರತೆಯನ್ನೋ, ಅಸಮರ್ಥತೆಯನ್ನೋ ಸೂಚಿಸುತ್ತದೆ.

ಇನ್ನು, ಕಾಂಗ್ರೆಸ್‌ಗೆ ಒಂದು ಅಧಿಕೃತ ಪ್ರಬಲ ಮುಖವಾಣಿ ಮಾಧ್ಯಮ ಬೇಕು. ತನ್ನ ನಿಲುವನ್ನು ಅತ್ಯಂತ ಪರಿಣಾಮಕಾರಿಯಾಗಿ ಸಾರ್ವಜನಿಕ ವಲಯಕ್ಕೆ ತಲುಪಿಸಬಲ್ಲ ಒಂದು ಮಾಧ್ಯಮ ಸೇತುವನ್ನು ಕಾಂಗ್ರೆಸ್ ಬೆಳೆಸದರಿರುವುದು ಕಾಂಗ್ರೆಸ್ ಮಾಡಿದ ತಪ್ಪುಗಳಲ್ಲೊಂದು. ವಿರೋಧಿಗಳ ಆಕ್ರೋಶ ಭರಿತ ಭಾಷಣಗಳ ನಡುವೆ ದೇಶದ ಸಮಸ್ಯೆಗಳ ಬಗ್ಗೆ ಅಲ್ಲೊಬ್ಬ ಇಲ್ಲೊಬ್ಬ ಧ್ವನಿಯೆತ್ತಿದರೇ ಏನು ಪ್ರಯೋಜನವಿದೆ..?   ತನ್ನ ಸಿದ್ಧಾಂತವನ್ನು ಸ್ಪಷ್ಟವಾಗಿ ಪಾಲಿಸುವವನ್ನು ಕಾಂಗ್ರೆಸ್ ಕಣ್ಣೆತ್ತಿಯೂ ನೋಡಿಲ್ಲ. ಈ ದೇಶದ ಹಿರಿಯ ಪಕ್ಷ ಎಂದು ಗುರುತಿಸಿಕೊಂಡಿದ್ದರೂ ಕೂಡ ಸಾರ್ವಜನಿಕ ವರ್ತನೆಯನ್ನು ಬದಲಾಯಿಸಿದ ತನ್ನ ವಿರೋಧ ಪಕ್ಷದ ಡಬಲ್ ಸ್ಪೀಕ್ ಸಿದ್ಧಾಂತವನ್ನು ಮಣಿಸುವಲ್ಲಿ ಕಾಂಗ್ರೆಸ್ ಸೋಲನುಭವಿಸಿತು. ಸಾರ್ವಜನಿಕ ವಲಯದಲ್ಲಿ ಬಿಜೆಪಿ ಹೆಣೆದ ರಾಜಕೀಯ ತಂತ್ರಕ್ಕೆ ಪ್ರತಿಯಾಗಿ ತಂತ್ರ ಹೂಡುವುದರಲ್ಲಿ ಸಂಪೂರ್ಣ ವಿಫಲತೆ ಅನುಭವಿಸಿದ್ದು ಈ ದೇಶ ಕಂಡಿದೆ. ಧ್ರುವೀಕರಣ ಮಾಡುವ ಸಿದ್ಧಾಂತಗಳ ವಿರುದ್ಧ ಪ್ರತಿಕ್ರಿಯಿಸುವ ಶಕ್ತಿ ಕಾಂಗ್ರೆಸ್‌ನಲ್ಲಿ ಇಲ್ಲದಿರುವುದೇ ಸೋಲಿಗೆ ಪ್ರಧಾನ ಕಾರಣಗಳಲ್ಲಿ ಮತ್ತೊಂದು. ‘ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುತ್ತೇನೆ’ ಎಂಬ ರಾಹುಲ್ ಅವರ ನಿಲುವಷ್ಟೇ ಈ ರಾಜಕೀಯ ಸಂಗ್ರಾಮವನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಪ್ರಜಾಸತ್ತಾತ್ಮಕ ಹಕ್ಕುಗಳು ಮಾತ್ರ ಭಾರತದ ಮುಂದಿರುವ ಏಕಮಾತ್ರ ವಿಷವೇನಲ್ಲ. ಈ ದೇಶದಲ್ಲಿ ಸಮಸ್ಥಿತಿಗೆ ತುರ್ತಾಗಿ ಬರಲೇಬೇಕಾದ ಸಮಸ್ಯೆಗಳು ಹಲವಿವೆ. ಪ್ರಜಾಪ್ರಭುತ್ವವನ್ನು ರಕ್ಷಿಸುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕಾಂಗ್ರೆಸ್ ಮಾಡಿಕೊಳ್ಳಬೇಕಿದೆ ಮತ್ತು ತನ್ನ ಅಸ್ತಿತ್ವವನ್ನೂ ಕೂಡ ಭದ್ರಪಡಿಸಿಕೊಳ್ಳಬೇಕಿದೆ ಎನ್ನುವುದು ಅಷ್ಟೇ ಮುಖ್ಯ.  

ಕರ್ನಾಟಕವನ್ನು ಗಮನಿಸಿ, ಇನ್ನು ಕೆಲವು ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ರಾಜ್ಯ. ಆಡಳಿತ ಪಕ್ಷದ ಮೇಲೆ ಜನರ ಒಲವಿಲ್ಲ. ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕರುಗಳಾದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಮುಸುಕಿನ ಗುದ್ದಾಟ. ಕಾಂಗ್ರೆಸ್‌ನ ವಿರೋಧ ಬಿಜೆಪಿಯೊಂದಿಗಿರಬೇಕೆ ಹೊರತು ಆಂತರಿಕ ಬಣಗಳೊಂದಿಗಲ್ಲ. ಒಂದು ಪ್ರಬಲವಾದ ಒಗ್ಗಟ್ಟಿನ ಕೊರತೆ ಕಾಂಗ್ರೆಸ್‌ನಲ್ಲಿದೆ ಎನ್ನುವುದನ್ನು ಇದು ಸ್ಪಷ್ಟವಾಗಿ ಸೂಚಿಸುತ್ತದೆ. ಇಂತಹದ್ದೇ ಕಾರಣಕ್ಕೆ ತನ್ನ ಚಕ್ರಾದಿಪತ್ಯದಲ್ಲಿದ್ದ ರಾಜ್ಯವನ್ನು ಕಳೆದುಕೊಂಡ ಇತಿಹಾಸವನ್ನೂ ಕೂಡ ಕಾಂಗ್ರೆಸ್ ಕಂಡಿದೆ ಎನ್ನುವುದು ಗಮನಾರ್ಹ. ಅದನ್ನು ಪ್ರತ್ಯೇಕಿಸಿ ಹೇಳಬೇಕೆಂದಿಲ್ಲ. ಇನ್ನು, ಕಾಂಗ್ರೆಸ್‌ನಲ್ಲಿ ಇಂತಹ ಬೆಳವಣಿಗೆ ಹೀಗೆಯೇ ಮುಂದುವರಿದರೇ, ಇನ್ನೊಬ್ಬನಿಗೆ ರಾಜಕೀಯ ಲಾಭ ಮಾಡಿಕೊಡಬಹುದು ಎಂಬ ರಾಜಕೀಯ ಪಡಸಾಲೆಯಲ್ಲಿನ ಚರ್ಚೆಯನ್ನು ಅಲ್ಲಗಳೆಯುವಂತಿಲ್ಲ. ‘ಜೋಡೋ’ ಪಕ್ಷದ ಒಳಗೂ ಆಗಬೇಕಿದೆ ಎನ್ನುವುದನ್ನು ಕಾಂಗ್ರೆಸ್ ಅರ್ಥೈಸಿಕೊಳ್ಳಬೇಕಿದೆ. 

ಏನೇ ಇರಲಿ, ರಾಹುಲ್ ಗಾಂಧಿಯವರ ಬದುಕಿನಲ್ಲಿ ಹಾಗೂ ಕಾಂಗ್ರೆಸ್ ಇತಿಹಾಸದಲ್ಲಿ ಭಾರತ್ ಜೋಡೋ ಯಾತ್ರೆ ಒಂದು ಹೆಗ್ಗುರುತಾಗಿ ಉಳಿಯಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ದೇಶದುದ್ದಕ್ಕೂ ಸಾರ್ವಜನಿಕರೊಂದಿಗೆ ಸಂಪರ್ಕ ಬೆಸೆಯುವುದಕ್ಕೆ ಸೃಷ್ಟಿಸಿಕೊಂಡ ಈ ಯಾತ್ರೆ, ರಾಹುಲ್ ಗಾಂಧಿಯವರ ವೈಯಕ್ತಿಕ ವರ್ಚಸ್ಸಿಗೂ ಘನತೆಯನ್ನು ತಂದುಕೊಟ್ಟಿದೆ. ಕಾಂಗ್ರೆಸ್‌ನನ್ನು ಇನ್ನಷ್ಟು ಪ್ರಬಲವಾಗಿಸಿದೆ. 

ಪ್ರಜಾಸತ್ತಾತ್ಮಕ ಹಕ್ಕುಗಳ ಹೋರಾಟದ ಗುರುತರವಾದ ಬಲವರ್ಧನೆ ಹೇಗಾಗುತ್ತದೆ ಎಂಬುವುದು ರಾಹುಲ್ ಗಾಂಧಿಯ ಮುಂದಿನ ನಡೆ ಹೇಗಿರಲಿದೆ ಎಂಬುವುದರ ಮೇಲೆ ಅಲ್ಲ. ಯಾತ್ರೆಯ ಜೊತೆಗಿದ್ದವರು/ಜೊತೆಗಿರುವವರು ಹೇಗೆ ಇರಲಿದ್ದಾರೆ ಎನ್ನುವುದರ ಮೇಲೆ ಅವಲಂಭಿತವಾಗಿದೆ ಎನ್ನುವುದು ಅಪ್ಪಟ ಸತ್ಯ. 

-ಶ್ರೀರಾಜ್ ವಕ್ವಾಡಿ 


No comments:

Post a Comment