Thursday, September 29, 2022

ಸುಳ್ಳುಗಳು, ಐಟಿ ಸೆಲ್‌ಗಳು, ಮಾಸ್ ಬ್ರೈನ್‌ಗಳು..!

‘ಡಿಜಿಟಲೀಕರಣ’ ಬಿಜೆಪಿಯ ರಾಜಕೀಯ ಅಸ್ತ್ರ | ಪ್ರಚಾರ ರಾಜಕೀಯದಲ್ಲಿ ಸೋತ ಕಾಂಗ್ರೆಸ್.!

ಸತ್ಯವನ್ನು ಸುಳ್ಳು ಮಾಡುವ ಮತ್ತು ಸುಳ್ಳನ್ನು ಸತ್ಯ ಮಾಡುವುದಕ್ಕೆ ಸಾಧ್ಯವಾಗುವ ಏಕೈಕ ಸಾಧನವೆಂದರೇ, ಅದು ರಾಜಕೀಯ. ಸುಳ್ಳುಗಳು ಇಲ್ಲಿ ಪಟ್ಟವನ್ನು ಏರಿಸುತ್ತವೆ. ಸತ್ಯಕ್ಕಿಂತ ಸುಳ್ಳು ಇಲ್ಲಿ ಬೇಗ ಆಕರ್ಷಣೆಗೆ ಒಳಗಾಗುತ್ತದೆ. ಅದು ರಾಜಕೀಯದ ಲಕ್ಷಣ ಮತ್ತು ಇಂದಿನ ರಾಜಕಾರಣ. ರಾಜಕೀಯದ ‘ಸಣ್ಣತನ’ದಿಂದ ರೋಸಿ ಹೋದ ಸಾಮಾನ್ಯ ಜನರಿಗೆ ಇವು ಗೊತ್ತಾಗದೇ ಹೋಗುವುದು ಈ ಕಾಲಮಾನದ ದುರಂತ. 

‘ಮಾಸ್ ಬ್ರೈನ್’ ಬಳಸಿಕೊಂಡಿತ್ತು ಬಿಜೆಪಿ : ಸಾಮಾಜಿಕ ಸಿದ್ಧಾಂತವೇ ಹಾಗೆ. ಅಧಿಕಾರದಲ್ಲಿರುವವ ಅಥವಾ ಸಮಾಜದ ಮುಂಪಕ್ತಿಯಲ್ಲಿರುವವ ತನ್ನದೇ ಆದ ಹೊಸ ಸಿದ್ಧಾಂತವನ್ನೋ, ಯೋಜನೆಯನ್ನೋ, ಐಡಿಯಾಲಜಿಯನ್ನೋ ತಯಾರು ಮಾಡಿ ಅದನ್ನು ಸಮಾಜಕ್ಕೆ ಎಷ್ಟು ಸಾಧ್ಯವಾಗುತ್ತೋ ಅಷ್ಟರಮಟ್ಟಿಗೆ ಪ್ರಚಾರ/ಪ್ರಸಾರ ಮಾಡುವುದಕ್ಕೆ ಪ್ರಯತ್ನ ಮಾಡುತ್ತಾನೆ. ಅದು ಸತ್ಯವೋ, ಸುಳ್ಳೊ ಅಥವಾ ಅದರಲ್ಲಿ ಸ್ಪಷ್ಟತೆಯಿದೆಯೋ, ಇಲ್ಲವೋ ಎನ್ನುವುದು ಅದರ ಮತ್ತೊಂದು ಮಜಲು. ಅದರ ಮರ್ಜಿ ಬೇರೆಯದೇ ಇದೆ. ತಾನು ತಯಾರಿಸಿದ ಅಥವಾ ರೂಪಿಸಿದ ಹೊಸ ಸಿದ್ಧಾಂತ/ಯೋಜನೆಯನ್ನು ಪ್ರಚಾರ/ಪ್ರಸಾರ ಮಾಡುವುದರ ಮೂಲಕ ಸಮಾಜದ ‘ಮಾಸ್ ಬ್ರೈನ್’ಗೆ ತುಂಬಿ ತನ್ನತ್ತ ಸೆಳೆದುಕೊಳ್ಳುತ್ತಾನೆ. ವೈಯಕ್ತಿಕ ಬುದ್ಧಿಗೆ, ಚಿಂತನೆಗೆ ಒಳಗಾಗದಂತೆ ಆತ ಹಿಡಿದಿಟ್ಟುಕೊಂಡಿರುತ್ತಾನೆ. ‘ಮಾಸ್ ಬ್ರೈನ್’/‘ಸಾಮೂಹಿಕ ಬುದ್ಧಿ’ ಇಲ್ಲಿ ಹೆಚ್ಚು ಕೆಲಸ ಮಾಡುತ್ತದೆ. ಸಮಾಜದಲ್ಲಿರುವವ ಸಾಮಾನ್ಯನೊಬ್ಬ ಏನಿದು ? ಯಾಕಿದು ? ಇದರ ಉದ್ದೇಶವೇನು..? ಎಂಬೆಲ್ಲದರ ಬಗ್ಗೆ ಚಿಂತನೆಗೆ ಹೋಗದೆ ಅಥವಾ ತಲೆ ಕೆಡಿಸಿಕೊಳ್ಳದೇ, ಎಲ್ಲರೊಂದಿಗೆ ತನ್ನದೂ ಒಂದು ಇರಲಿ ಎಂಬ ದೃಷ್ಟಿಯಲ್ಲಿ ಇರುತ್ತಾನೆ. ಈ ದೇಶದಲ್ಲಿರುವ ಎಲ್ಲಾ ಸಿದ್ಧಾಂತಗಳು, ಐಡಿಯಾಲಜಿಗಳು ಹೀಗೆಯೇ ಹುಟ್ಟಿಕೊಂಡಿರುವವುಗಳು. ಯಾವನೋ ಒಬ್ಬ ತಯಾರು ಮಾಡಿ ಸಮಾಜದ ತನ್ನ ‘ಟಾರ್ಗೇಟ್ ಗ್ರೂಪ್’ಗೆ ಪ್ರಚಾರ ಮಾಡಿದ, ಸಮಾಜ ಅದರ ಪ್ರಭಾವಕ್ಕೆ ಒಳಗಾಯ್ತು. ಈ ರೀತಿಯಲ್ಲಿ ‘ಮಾಸ್ ಬ್ರೈನ್’ನನ್ನು ಬಳಸಿಕೊಂಡ ಐಡಿಯಾಲಜಿಗಳು ಸಮಾಜದಲ್ಲಿ ಹೊಸದೊಂದು ಶಕ್ತಿಯ ಉಗಮಕ್ಕೂ ಸಾಕ್ಷಿಯಾಗಿದ್ದೂ ಇವೆ, ಸಮಾಜವನ್ನು ಬಲಿತೆಗೆದುಕೊಂಡ ಉದಾಹರಣೆಗಳೂ ಇವೆ. 

ಕಳೆದ ಎಂಟು ಹತ್ತು ವರ್ಷಗಳಿಂದ ಈ ದೇಶದಲ್ಲಿ ಬಿಜೆಪಿ ಪಾಲಿಸಿಕೊಂಡು ಬಂದಿದ್ದು ಇದೇ ಸೈದ್ಧಾಂತಿಕ ತಂತ್ರಗಾರಿಕೆ. ದೇಶದಲ್ಲಿ ಎಂಥಹ ಹಣದುಬ್ಬರ, ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳಿರುವಾಗಲೂ, ಆಡಳಿತದ ವಿರುದ್ಧ ಅಸಮಾಧಾನ ಇದ್ದಾಗಲೂ ಬಿಜೆಪಿಯ ಕೈ ಹಿಡಿದಿದ್ದು ಇದೇ ‘ಮಾಸ್ ಬ್ರೈನ್’. ಬಿಜೆಪಿ ಅಧಿಕಾರ ಹಿಡಿದಿದ್ದೇ ಈ ‘ಮಾಸ್ ಬ್ರೈನ್’ ತಂತ್ರಗಾರಿಕೆಯನ್ನು ಬಳಸಿಕೊಂಡು ಎನ್ನುವುದು ಅಕ್ಷರಶಃ ಸತ್ಯ. ಬಿಜೆಪಿಗೆ ತನ್ನ ಟಾರ್ಗೇಟ್ ಗ್ರೂಪ್‌ನ ಬಗ್ಗೆ ಸ್ಪಷ್ಟವಾದ ನೀಲಿ ನಕ್ಷೆ ಇದ್ದಿತ್ತು. ಒಂದು ಸಾಮೂಹಿಕ ವಲಯ ಈ ಮಾಸ್ ಬ್ರೈನ್ ತಂತ್ರಗಾರಿಕೆಯ ಪ್ರಭಾವಕ್ಕೆ ಒಳಗಾದರೇ, ಅದರಿಂದ ಹೊರಗೆ ಬರುವುದು ಅಷ್ಟು ಸುಲಭವಿಲ್ಲ. ಅದು ಬಿಜೆಪಿಯಂತಹ ಪಕ್ಷಕ್ಕೆ ಗೊತ್ತಿತ್ತು. ಅದರ ಆಧಾರದಲ್ಲಿಯೇ ಈ ದೇಶದಲ್ಲಿ ಬಿಜೆಪಿ ಈ ತಂತ್ರಗಾರಿಕೆಯನ್ನು ಬಳಸಿಕೊಂಡು ಇಡೀ ಭಾರತದ ತನ್ನ ಟಾರ್ಗೇಟ್ ಗ್ರೂಪ್ (ಯುವ ಸಮುದಾಯ, ಹಿಂದೂ ಸಮುದಾಯ)ನನ್ನು ವಶ ಪಡಿಸಿಕೊಂಡಿತ್ತು. ಅದರ ಫಲವಾಗಿಯೇ ತನ್ನ ಆಡಳಿತದ ವಿರುದ್ಧ ಎಂಥಹ ದೊಡ್ಡ ವಿರೋಧಿ ಅಲೆ ಇದ್ದರೂ ಮತ್ತೆ ಮತ್ತೆ ಅಧಿಕಾರ ಹಿಡಿಯುತ್ತಿರುವುದು ಎನ್ನುವುದು ಇಲ್ಲಿ ಚಿಂತನಾರ್ಹ ವಿಷಯ. ಬಿಜೆಪಿ ತನ್ನ ರಾಜಕೀಯಕ್ಕೆ ಬಳಸಿಕೊಂಡ ಈ ಸೈದ್ಧಾಂತಿಕ ತಂತ್ರಗಾರಿಕೆಯನ್ನು ಉಳಿದ ಯಾವುದೇ ರಾಜಕೀಯ ಪಕ್ಷಗಳು, ಅದರಲ್ಲೂ ಪ್ರಮುಖವಾಗಿ ದೇಶದ ಅತ್ಯಂತ ಹಿರಿಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಪಕ್ಷ ಕೂಡ ಇದನ್ನು ಬಳಸಿಕೊಂಡಿಲ್ಲ. 

ಬಿಜೆಪಿ-ಕಾಂಗ್ರೆಸ್ ನಡುವೆ ಡಿಜಿಟಲ್ ಡಿವೈಡ್ : ಉಳಿದೆಲ್ಲಾ ಪಕ್ಷಗಳನ್ನು ಬಿಟ್ಟು ಯೋಚಿಸುವುದಾದರೇ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಇರುವುದು ‘ಡಿಜಿಟಿಲ್ ಡಿವೈಡ್’. ಈ ಡಿಜಿಟಲ್ ಡಿವೈಡ್ ಅಂದರೇ, ಡಿಜಿಟಲ್ ತಂತ್ರಜ್ಞಾನವನ್ನು ಯಾರು ಹೊಂದಿರುವವರು ಅಥವಾ ಯಾರೂ ಅತ್ಯಂತ ಸಕ್ರಿಯವಾಗಿ ಬಳಸಿಕೊಳ್ಳುವವರು ಮತ್ತು ಹೊಂದಿರದವರು, ಬಳಸಿಕೊಳ್ಳದವರ ನಡುವೆ ಇರುವ ಅಂತರವನ್ನು ಡಿಜಿಟಲ್ ಡಿವೈಡ್ ಎಂದು ಹೇಳಲಾಗುತ್ತದೆ. ಇದು ಕೇವಲ ಕಂಪ್ಯೂಟರ್, ಇಂಟರ್‌ನೆಟ್‌ಗಳಿಗೆ ಮಾತ್ರ ಸೀಮಿತವಲ್ಲ. ಮಾಹಿತಿ ಹಾಗೂ ಸಂವಹನಗಳಿಗೂ ಕೂಡ ಇದು ವಿಸ್ತಾರಗೊಂಡಿದೆ. ಇದು ಜನಸ್ನೇಹಿಯೂ ಹೌದು ಮತ್ತು ಸಾರ್ವಜನಿಕ ವಲಯಕ್ಕೆ ಒಂದು ರೀತಿಯಲ್ಲಿ ಮಾರಕವೂ ಹೌದು. ಈ ಡಿಜಿಟಲ್ ಎಂಬ ಸಾಧನವನ್ನು ತನ್ನ ರಾಜಕೀಯವಾಗಿ ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡ ಒಂದು ಪಕ್ಷ ಈ ದೇಶದಲ್ಲಿದೆ ಎಂತಾದರೇ ಅದು ಬಿಜೆಪಿ ಪಕ್ಷ. ತಾನು ಅಧಿಕಾರ ಹಿಡಿದಾಗಿನಿಂದ ಹೇಳುತ್ತಾ ಬಂದಿರುವ ‘ಡಿಜಿಟಲೀಕರಣ ಅಥವಾ ಡಿಜಿಟಲೈಸೇಶನ್’ನ ಮೂಲಕವೇ ಉಳಿದ ಪಕ್ಷಗಳು ಇದರ ಹಿಂದೆ ರಾಜಕೀಯದ ಘನ ಉದ್ದೇಶವಿದೆ ಎಂದು ತಿಳಿದುಕೊಳ್ಳಬೇಕಿತ್ತು. ಆದರೇ, ಈ ದೇಶದ ಪ್ರತಿಪಕ್ಷಗಳು, ಈ ದೇಶದ ಸಾರ್ವಜನಿಕ ವಲಯ ಅದನ್ನು ಅರ್ಥೈಸಿಕೊಳ್ಳದಿರದಷ್ಟು ಬೌದ್ಧಿಕ ಬಡಸ್ಥಿಕೆಯಲ್ಲಿದ್ದವು ಎಂದರೇ, ಅದು ನಿಜಕ್ಕೂ ವಿಷಾದನೀಯವೇ ಸರಿ. 

ಅದು ಡಿಜಿಟಲ್ ತಂತ್ರಜ್ಞಾನ ವ್ಯಾಪಕವಾಗಿ ಹರಡಿದ್ದ ಪಕ್ವ ಕಾಲ. ಆ ಸಂದರ್ಭದಲ್ಲಿ ಜನರನ್ನು ತನ್ನತ್ತ ಸೆಳೆದುಕೊಳ್ಳಬೇಕೆಂದರೇ, ಡಿಜಿಟಲ್ ಎಂಬ ‘ಮಾಯಾ ಜಾಲ’ ಒಂದೇ ಒಂದು ಸಾಧನ ಎಂದು ಸೂಕ್ಷö್ಮವಾಗಿ ಅರ್ಥೈಸಿಕೊಂಡ ಪಕ್ಷವೊಂದಿದ್ದರೇ ಅದು ಬಿಜೆಪಿ ಮಾತ್ರ. ಡಿಜಿಟಲ್ ಇಂಡಿಯಾ ಎಂಬ ಒಂದು ಯೋಜನೆಯ ಮೂಲಕ ೨೦೧೫ರಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂದಿನ ಕಾಲಕ್ಕೆ ಸುಮಾರು ಒಂದು ಲಕ್ಷ ಕೋಟಿ ಅನುಮೋದನೆ ಹೊರಡಿಸಿ, ಭಾರತೀಯರ ಡಿಜಿಟಲ್ ಸಬಲೀಕರಣ, ಮಾಹಿತಿ ಡಿಜಿಟಲೀಕರಣದ ಹೆಸರಿನಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಆರಂಭಿಸಿದ ಡಿಜಿಟಲ್ ಇಂಡಿಯಾ ಒಂದು ಸ್ವಾಗತಾರ್ಹ ಬೆಳವಣಿಗೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೇ, ಬಿಜೆಪಿಯಂತಹ ಪಕ್ಷದ ಜಾಣ್ಮೆ ಅಷ್ಟಕ್ಕೇ ನಿಂತಿರಲಿಲ್ಲ. ಇದೇ ಡಿಜಿಟಲ್ ಸಾಧನವನ್ನೇ ಬಳಸಿಕೊಂಡು ತನ್ನ ಪಕ್ಷದ ಐಟಿ ಸೆಲ್‌ಗಳನ್ನು ಬಲ ಪಡಿಸಿಕೊಂಡಿತು. ೨೦೧೪ರ ಆದಿಯಾಗಿ ಡಿಜಿಟಲ್ ಮೀಡಿಯಾಗಳ ಮೂಲಕ ಐಟಿ ಸೆಲ್‌ನೊಂದಿಗೆ ‘ಮಾಸ್ ಬ್ರೈನ್' ಸೈದ್ಧಾಂತಿಕ ತಂತ್ರಗಾರಿಕೆ’ಯನ್ನು ತನ್ನ ರಾಜಕೀಯ ಮೇಲಾಟಗಳಿಗೆ ಬಳಸಿಕೊಳ್ಳುವುದಕ್ಕೆ ಪ್ರಾರಂಭ ಮಾಡಿತ್ತು. ಅದು ಪ್ರತಿಪಕ್ಷಗಳಿಗೆ ಬೃಹತ್ ಡಿಜಿಟಲ್ ಅಟ್ಯಾಕ್ ಎಂಬಂತಾಗಿತ್ತು. ಡಿಜಿಟಲ್ ಮಾಧ್ಯಮಗಳನ್ನು ಅಥವಾ ಸಾಮಾಜಿಕ ಜಾಲತಾಣಗಳನ್ನು ತನ್ನ ರಾಜಕೀಯಕ್ಕಾಗಿ ಬಳಸಿಕೊಳ್ಳುವುದರ ಮೂಲಕ ತನ್ನ ಅಧಿಕಾರ ಪರ್ವವನ್ನು ಬಿಜೆಪಿ ಆರಂಭ ಮಾಡಿತ್ತು. ತನ್ನ ರಾಜಕೀಯ ಮೇಲಾಟಗಳಿಗಾಗಿ ಡಿಜಿಟಲ್ ಎಕ್ಸ್ ಪರ್ಟ್ ಗಳನ್ನು ನೇಮಕ ಮಾಡಿಕೊಂಡು ವಾಟ್ಸಾಪ್, ಫೇಸ್ ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ವಿರೋಧ ಪಕ್ಷಗಳ ವಿರುದ್ಧ ಸುಳ್ಳು ಸುದ್ದಿಗಳನ್ನು ಪುಂಖಾನುಪುಂಖವಾಗಿ ಹರಡಿಸಲಾರಂಭಿಸಿತ್ತು. ಜನ ಅವನ್ನೇ ಮರುಳಾಗಿ ನಂಬಿದರು. ಜನರು ಈ ವಾಟ್ಸಾಪ್, ಫೇಸ್ ಬುಕ್ ಯೂನಿವರ್ಸಿಟಿಗಳು ಹೇಳಿಕೊಡುತ್ತಿರುವ ಪಾಠವನ್ನೇ ಕೇಳಿ ಅವುಗಳಿಗೆ ವಿದೇಯ ವಿದ್ಯಾರ್ಥಿಗಳಾದರು. ಸತ್ಯಾಂಶದ ಬಗ್ಗೆ ಗಮನವೂ ಕೊಡಲಿಲ್ಲ. ಇದರ ವಿರುದ್ಧ ಕಾಂಗ್ರೆಸ್ ಇದು ‘ಸತ್ಯವಲ್ಲ ಸುಳ್ಳು’ ಎಂದು ಸಮಾಜಕ್ಕೆ ತಿಳಿಸುವುದಕ್ಕೆ ಪ್ರಯತ್ನಪಟ್ಟರೂ ಕೂಡ ಸಮಾಜ ಅದನ್ನು ಕೇಳಿಸಿಕೊಳ್ಳುವುದಕ್ಕೆ ತಯಾರಿರಲಿಲ್ಲ. ಜನ ಬಿಜೆಪಿ ಹೆಣೆದ ‘ಮಾಸ್ ಬ್ರೈನ್’ ಸೈದ್ಧಾಂತಿಕ ತಂತ್ರಗಾರಿಕೆಯ ಪ್ರಭಾವಕ್ಕೆ ಒಳಗಾಗಿದ್ದರು. ಕಾಂಗ್ರೆಸ್ ಬಿಜೆಪಿಯ ಈ ಡಿಜಿಟಲ್ ದಾಳಿಯ ಎದುರು ಅಸಮರ್ಥವಾಗಿ ಮುಖ ಮುಖ ನೋಡಿಕೊಳ್ಳುವ ಪರಿಸ್ಥಿತಿಯನ್ನು ಕಂಡಿದ್ದು ಇಡೀ ದೇಶಕ್ಕೆ ಗೊತ್ತಿದೆ. ಈಗ ಲೋಕಸಭಾ ಚುನಾವಣೆ ಬರುತ್ತಿದೆ, ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಬರುತ್ತಿದೆ, ಬಿಜೆಪಿ ೨೦೧೪ರಲ್ಲಿ ರಾಜಕೀಯಕ್ಕೆ ಬಳಸಿದ ಡಿಜಿಟಲ್ ಅಸ್ತçವನ್ನು ಕಾಂಗ್ರೆಸ್ ಈಗ ಬಳಸುತ್ತಿರುವುದು ನೋಡಿದರೇ, ‘ಹಲ್ಲಿಲ್ಲದವನಿಗೆ ಕಡಲೆಕಾಯಿ ಮೇಲಾಸೆ’ ಎಂಬಂತಾಗಿದೆ. 

ಐಟಿ ಸೆಲ್‌ಗಳು, ಸುಳ್ಳುಗಳು : ಇನ್ನು, ಬಿಜೆಪಿ ಡಿಜಿಟಲ್ ಮಾಧ್ಯಮಗಳೊಂದಿಗೆ ಐಟಿ ಸೆಲ್‌ಗಳನ್ನು ಎಷ್ಟರಮಟ್ಟಿಗೆ ಬಳಸಿಕೊಂಡಿತ್ತೆಂದರೇ, ಅದನ್ನು ಊಹಿಸಿಕೊಳ್ಳುವುದಕ್ಕೂ ಸಾದ್ಯವಿಲ್ಲ. ಟೆಕ್ ಫಾಗ್ ಎಂಬ ಅಪ್ಲಿಕೇಶನ್ ಮೂಲಕ ಬಿಜೆಪಿ ವ್ಯವಸ್ಥಿತವಾಗಿ ದ್ವೇಷವನ್ನು ಹರಡಲು ಪ್ರಯತ್ನಿಸಿತ್ತು, ಮಾತ್ರವಲ್ಲದೇ ತನ್ನ ರಾಜಕೀಯ ವಿರೋಧಿಗಳನ್ನು ಟೀಕೆ ಮಾಡಲು ಬಳಸಿಕೊಂಡಿತ್ತು ಎಂಬ ತನಿಖಾ ವರದಿಯೊಂದನ್ನು ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ಸಂಸ್ಥೆ ‘ದಿ ವೈರ್ ಡಾಟ್ ಇನ್’ ಬಹಿರಂಗಪಡಿಸಿತ್ತು. ಸುಳ್ಳು ಸುದ್ದಿಗೆ ಬಿಜೆಪಿ ಐಟಿ ಸೆಲ್ ಖ್ಯಾತಿ ಪಡೆದಿದೆ. ಮೋದಿ ನಿಂತರೇ, ಕೂತರೇ, ಈ ಜಗತ್ತಿನ ಉದ್ಧಾರಕ ಎಂದು ಬಿಂಬಿಸುವ ಬಿಜೆಪಿ ಪ್ರಾಯೋಜಿತ ಡಿಜಿಟಲ್ ಮಾಧ್ಯಮಗಳು ಎಷ್ಟು ವಿಡಂಬನೆಗೆ ಒಳಗಾಗಿವೆ ಎನ್ನುವುದು ಗೊತ್ತೇ ಇದೆ. ಕಳೆದ ವರ್ಷ ಕ್ವಾಡ್ ಸಮ್ಮೇಳನದಲ್ಲಿ ಭಾಗವಹಿಸಿ ಮೋದಿ ಅಮೇರಿಕಾದಿಂದ ಭಾರತಕ್ಕೆ ವಾಪಾಸ್ಸಾಗುವ ದಿನ(ಸೆಪ್ಟೆಂಬರ್ ೨೬, ೨೦೨೧) ಅಮೆರಿಕಾದ ಪ್ರತಿಷ್ಠಿತ ಪತ್ರಿಕೆ ‘ದಿ ನ್ಯೂಯಾರ್ಕ್ ಟೈಮ್ಸ್’ನ ಮುಖಪುಟದಲ್ಲಿ ಪ್ರಕಟಗೊಂಡಿದ್ದು ಎಂದು ಹೇಳಲಾದ ಮೋದಿ ಭಾವಚಿತ್ರವಿರುವ ಪಿಡಿಎಫ್ ಪ್ರತಿಯೊಂದು ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಅದನ್ನೇ ಮರುಳಾಗಿ ನಂಬಿ ಮೋದಿಯನ್ನು ಈ ದೇಶದ ಜನ ‘ಅವತಾರ ಪುರುಷ’ ಎಂದು ಬಿಂಬಿಸಿದ ಉದಾಹರಣೆಯೂ ಇದೆ. ಆದರೇ, ಇದೊಂದು ಶುದ್ಧ ಸುಳ್ಳು ಸುದ್ದಿ ಎಂದು ‘ಆಲ್ಟ್ ನ್ಯೂಸ್’ ಹಾಗೂ ‘ಐಬಿ ಟೈಮ್ಸ್’ ಸೇರಿ ಇತ್ಯಾದಿ ಜಾಗತಿಕ ಸುದ್ದಿ ಸಂಸ್ಥೆಗಳು ಖಚಿತ ಪಡಿಸಿದವು. ಮಾತ್ರವಲ್ಲದೇ, ಅಮೇರಿಕಾದ ‘ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಕೂಡ ಈ ಸುದ್ದಿಗೂ ತನಗೂ ಸಂಬಂಧವೇ ಇಲ್ಲ ಎಂದು ಹೇಳಿತ್ತು ಎನ್ನುವುದು ಇಲ್ಲಿ ಗಮನಾರ್ಹ. 

ಇವಿಷ್ಟೇ ಅಲ್ಲ, ಬಿಜೆಪಿ ಈ ಡಿಜಿಟಲ್ ಮಾಧ್ಯಮಗಳನ್ನು ಬಳಸಿಕೊಂಡು ಹರಡಿದ ಸುಳ್ಳಿನ ಪಟ್ಟಿ ದೊಡ್ಡದಿದೆ. ಹೀಗಿರುವಾಗ ಕಾಂಗ್ರೆಸ್ ಈಗಷ್ಟೆ ‘ಡಿಜಿಟಲ್’ನೊಂದಿಗೆ ತನ್ನ ರಾಜಕೀಯ ತಂತ್ರ ಹೆಣೆಯಲಾರಂಭಿಸಿದೆ. ಬಿಜೆಪಿ ಈಗ ಮತ್ತಷ್ಟು ದೂರ ಕ್ರಮಿಸಿರಬಹುದು, ಅದರ ಪ್ರತಿದಾಳಿಗೆ ಕಾಂಗ್ರೆಸ್ ಸಿದ್ಧವಾಗದಿದ್ದರೇ, ಮತ್ತೆ ಹೀನಾಯ ಸೋಲಿನ ರುಚಿಯನ್ನೇ ಉಣ್ಣಬೇಕು ಎನ್ನುವುದರಲ್ಲಿ ಸಂಶಯವಿಲ್ಲ. 

-ಶ್ರೀರಾಜ್ ವಕ್ವಾಡಿ.   

 

  


No comments:

Post a Comment