Wednesday, June 8, 2022

ಕಾಂಗ್ರೆಸ್ ರಾಜೀನಾಮೆ ಪರ್ವ

ಮತ ತಂದುಕೊಡುವ ತನ್ನ ಪ್ರಭಾವಿ ಮುಖಗಳನ್ನೇ ಕಳೆದುಕೊಂಡ ಕಾಂಗ್ರೆಸ್..! 

ದಿನ ಕಳೆದಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತನ್ನ ಬಲ ಕಳೆದುಕೊಳ್ಳುತ್ತಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವ್ಯಾಹತವಾಗಿ ಸೋಲು ಅನುಭವಿಸುತ್ತಿರುವ ಕಾಂಗ್ರೆಸ್ ಮತ್ತೆ ಅಷ್ಟು ಸುಲಭದಲ್ಲಿ ಫಿನಿಕ್ಸ್ ಹಕ್ಕಿಯಂತೆ ಪುಟಿದೆದ್ದು ಬಂದು ಈ ದೇಶದಲ್ಲಿ ಅಚ್ಚರಿ ಮೂಡಿಸುತ್ತದೆ ಎಂಬ ಯಾವ ಸಣ್ಣ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗದ ರಾಜಕೀಯ ವಾತಾವರಣದಲ್ಲಿ ಈ ದೇಶದ ಜನರಿದ್ದಾರೆ. ಚುನಾವಣಾ ಸೋಲು, ಪಕ್ಷದ ಆಂತರಿಕ ಜಗಳ, ನಾಯಕತ್ವ, ಪ್ರಬಲ ರಾಜಕೀಯ ತಂತ್ರಗಾರಿಕೆಯ ಕೊರತೆ, ಹಿರಿಯ ಹಾಗೂ ಅನುಭವಿ, ಪ್ರಭಾವಿ ನಾಯಕರ ರಾಜೀನಾಮೆ ಪರ್ವ ನಿಜಕ್ಕೂ ಕಾಂಗ್ರೆಸ್‌ಗೆ ಎಂದೂ ಊಹಿಸಿಕೊಳ್ಳಲಾಗದಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದಂತೂ ಸತ್ಯ. 

ಮಹಾತ್ಮ ಗಾಂಧೀಜಿಯವರ ಸರ್ವೋದಯದ ತತ್ವವನ್ನು ತನ್ನೊಂದಿಗೆ ಸೇರಿಸಿಕೊಂಡಿದೆ ಎನ್ನುವ ಪಕ್ಷ ನಿಜಕ್ಕೂ ಗಾಂಧಿ ತತ್ವ ಪಾಲಿಸಿದೆಯೇ ಅಥವಾ ಈ ದೇಶದ ಜನ ಗಾಂಧಿಯನ್ನು ಮರೆತಿದ್ದಾರೆಯೇ..? ಗಾಂಧಿ ತತ್ವವನ್ನು ಕಾಂಗ್ರೆಸ್ ರಾಜಕೀಯಕ್ಕಷ್ಟೇ ಬಳಸಿಕೊಂಡಿತೇ..? ಜನಪರ ತತ್ವ ತಮ್ಮದು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ಗೆ ಈ ರೀತಿಯ ಹೀನಾಯ ಸೋಲು ಮೇಲಿಂದ ಮೇಲೆ ಎದುರಾಗುತ್ತಿರುವುದಾದರೂ ಯಾಕೆ..? ಸುಮಾರು ನಾಲ್ಕೈದು ದಶಕಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್‌ನ ಮೇಲಿನ ಪ್ರೀತಿ ಜನರಲ್ಲಿ ಕಡಿಮೆಯಾಗಿದ್ದು ಯಾಕೆ..? ರಾಜಕೀಯದ ಹೊಸ ಅಲೆಗೆ ಸಿಲುಕಿ ಕಾಂಗ್ರೆಸ್‌ಗೆ ಈ ಸ್ಥಿತಿ ಉಂಟಾಯಿತೆ..? ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಕಾಂಗ್ರೆಸ್ ಸೋಲಿಗೆ ಕಾರಣವೆ..? ಎಂಬೆಲ್ಲಾ ಪುಂಖಾನುಪುಂಖವಾದ ಪ್ರಶ್ನೆಗಳು ಸದ್ಯ, ‘ಕಾಂಗ್ರೆಸ್’ ಎಂದಾಕ್ಷಣ ಮೂಡುತ್ತಿವೆ. ಇಂತೆಲ್ಲಾ ಪ್ರಶ್ನೆಗಳು ನಿಮ್ಮನ್ನೂ ಕಾಡುತ್ತಿರಬಹುದು ಕಾಂಗ್ರೆಸ್ ಹಿರಿಯ ನಾಯಕರ ಅಸಮಾಧಾನ ಪಾರಂಪರಿಕ ಗಾಂಧಿ ಕುಟುಂಬದ ನಡುವಿನ ಮುಸುಕಿನ ಭಿನ್ನ ಧ್ವನಿ ಬೂದಿ ಮುಚ್ಚಿದ ಕೆಂಡವೇ ಎಂಬಂತೆ ಇರುವುದು ಪರಮ ಸತ್ಯ. ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷದಲ್ಲಿಯೇ ಸ್ವತಂತ್ರ ಧ್ವನಿಗೆ ಅವಕಾಶವೇ ಇಲ್ಲ ಎಂದು ಹೊರಬಂದವರ ಸಂಖ್ಯೆ ದೊಡ್ಡದಿದೆ. 

ಕಾಂಗ್ರೆಸ್‌ನ ರೆಬಲ್ ವಾಯ್ಸ್ ಪಾರಂಪರಿಕ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದು ಗೊಂದಲ ಸೃಷ್ಟಿಯಾಗಿದ್ದು ಬಟಾಬಯಲಾಯ್ತು. ಸೋ ಕಾಲ್ಡ್ ಜಿ23 ಪಡೆ ಇತ್ತೀಚಿಗಿನ ಕೆಲವು ವರ್ಷಗಳಲ್ಲಿ ಪದೇ ಪದೆ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದು ಹಾಗೂ ಸಮರ್ಥ ನಾಯಕತ್ವದಲ್ಲಿನ ಗೊಂದಲವೇ ಕಾಂಗ್ರೆಸ್‌ನಲ್ಲಿ ಪ್ರಮುಖ ಪ್ರಭಾವಿ ನಾಯಕರ ರಾಜಕೀಯ ಪರ್ವಕ್ಕೆ ನಾಂದಿ ಹಾಡಿದ್ದು. ಇತ್ತೀಚೆಗೆ ರಾಜೀನಾಮೆ ನೀಡಿದ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್, ಮಾಜಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಜಖರ್, ಗುಜರಾತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾರ್ದಿಕ್ ಪಟೇಲ್, ಮಾಜಿ ಎಂಪಿ ಸುಸ್ಮೀತಾ ದೇವ್, ಮಾಜಿ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ್, ಜ್ಯೋತಿರಾದಿತ್ಯ ಸಿಂದಿಯಾ, ಕಾಂಗ್ರೆಸ್‌ನ ಸ್ಟಾರ್ ಫೇಸ್ ಎಂದೇ ಗುರುತಿಸಿಕೊಂಡಿದ್ದ ಖುಶ್ಬು ಸುಂದರ್, ಪ್ರಭಾವಿ ಮುಖ ಎಂದೇ ಗುರುತಿಸಿಕೊಂಡಿದ್ದ ಪ್ರಿಯಾಂಕ ಚತುರ್ವೇದಿ, ಅಸ್ಸಾಂ ಕಾಂಗ್ರೆಸ್‌ನ ಪ್ರಭಾವಿ ನಾಯಕ ಎಂದೇ ಗುರುತಿಸಿಕೊಂಡಿದ್ದ ಹಿಮಂತ್ ಬಿಸ್ವಾ ಶರ್ಮಾ, ಮಾಜಿ ಕೇಂದ್ರ ಸಚಿವ ಆರ್.ಪಿಎನ್ ಸಿಂಗ್, ಉತ್ತರಪ್ರದೇಶದ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ರಿಟಾ ಬಹುಗುಣ ಜೋಶಿ ಅವರ ರಾಜೀನಾಮೆಯ ಪಂಕ್ತಿ  ಕಾಂಗ್ರೆಸ್‌ಗಂತೂ ಬಹಳ ದೊಡ್ಡ ಮಟ್ಟದಲ್ಲೇ ಸಂಕಷ್ಟಕ್ಕೆ ಎದುರಾಗುವಂತೆ ಮಾಡಿದೆ. ಹೌದು, ಬಿಜೆಪಿಯನ್ನು ಸೋಲಿಸಲೇ ಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್‌ಗೆ ಇದು ದೊಡ್ಡ ಮರ್ಮಾಘಾತವೇ ಸರಿ. 

ಕಪಿಲ್ ಸಿಬಲ್ ಎಂಬ ಕಾಂಗ್ರೆಸ್‌ನ ಹಿರಿಯ ಭಿನ್ನ ಧ್ವನಿ : ಕಾಂಗ್ರೆಸ್‌ನ ಪಾರಂಪರಿಕ ಗಾಂಧಿ ಕುಟುಂಬದ ನಾಯಕತ್ವವನ್ನು ಟೀಕಿಸುತ್ತಲೇ ಬಂದಿರುವ ಸಿಬಲ್, ಜಿ೨೩ ಪಡೆಯಲ್ಲಿ ಪ್ರಮುಖರೆಂದು ಗುರುತಿಸಿಕೊಂಡವರು. ಕಳೆದ ಬಾರಿ ಪಂಜಾಬ್ ಕಾಂಗ್ರೆಸ್‌ನಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ಕುರಿತು ಸಿಬಲ್, ಗಾಂಧಿ ಕುಟುಂಬ ಹಾಗೂ ನಾಯಕತ್ವದ ವಿರುದ್ಧವಾಗಿ ನಡೆಸಿದ ಬಹಿರಂಗ ಹೇಳಿಕೆಯ ಬೆನ್ನಿಗೆ ಸಿಬಲ್ ಮನೆ ಮೇಲೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಆಪ್ತರೆಂದು ಹೇಳಲ್ಪಟ್ಟವರಿಂದ ನಡೆದ ದಾಳಿ ಕಾಂಗ್ರೆಸ್‌ಗೆ ಅಳಿಸಲಾಗದ ಕಪ್ಪು ಚುಕ್ಕಿಯಾಗಿತ್ತು. ಈ ಹಿನ್ನಲೆಯಲ್ಲಿ ಸಿಬಲ್ ತಮ್ಮ ನಿಲುವನ್ನು ಪುನರುಚ್ಛರಿಸಿದ್ದರು. ‘ನಮ್ಮದು ಜಿ23 ಹೊರತಾಗಿ ಜಿ ಹುಜೂರ್ 23 ನಾಯಕರಲ್ಲ’ ಎಂದು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿದ್ದರು. ಇನ್ನು, 2021ರ ತಮ್ಮ ಜನ್ಮದಿನಾಚರಣೆಯದು ಕರೆದಿದ್ದ ಔತಣಕೂಟಕ್ಕೆ ಗಾಂಧಿ ಕುಟುಂಬಕ್ಕೆ ಆಹ್ವಾನವೇ ಇದ್ದಿರಲಿಲ್ಲ. ಯುಪಿಎಯೇತರ ನಾಯಕರಾದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಟಿಎಂಸಿ ಸಂಸದ ಡೆರೆಕ್ ಓಬ್ರಿಯಾನ್ ಸೇರಿ ಪ್ರಮುಖ ರಾಜಕೀಯ ನಾಯಕರು ಔತಣಕೂಟದಲ್ಲಿ ಭಾಗಿಯಾಗಿದ್ದಲ್ಲದೇ, ರಾಷ್ಟ್ರೀಯ ಕಾಂಗ್ರೆಸ್ ನಾಯಕತ್ವದ ಬಗ್ಗೆ ಹಾಗೂ ರಾಜಕೀಯ ಕಾರ್ಯತಂತ್ರಗಳ ಬಗ್ಗೆಯೂ ಚರ್ಚೆಯಾಗಿತ್ತು. ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬಿಟ್ಟು ಬೇರೆಲ್ಲೂ ಹೋಗುವವರು ನಾವಲ್ಲ ಎಂದು ಹೇಳಿದ್ದ ಸಿಬಲ್ ಈಗ ಬಣ್ಣ ಬದಲಾಯಿಸಿಕೊಂಡಿದ್ದಾರೆ ಎನ್ನುವುದು ಸತ್ಯ. 

ಕೇಸರಿ ಪಾಳಯವನ್ನು ಒಪ್ಪಿಕೊಂಡ ಸುನಿಲ್ ಜಖರ್ : ಪಂಜಾಬ್ ಕಾಂಗ್ರೆಸ್‌ನಲ್ಲಿ ಉಂಟಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಹಿಂದೆಯೇ ಇದ್ದು ಲಾಭಕ್ಕೆ ಟವೆಲ್ ಹಾಕಿ ಕೂತ ಪಂಜಾಬ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸುನಿಲ್ ಜಖರ್. ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಿದ್ದಾಗ ಸಿಎಂ ಸ್ಥಾನದ ರೇಸ್‌ನಲ್ಲಿದ್ದವರಲ್ಲಿ ಇವರೂ ಒಬ್ಬರು. ಆದರೇ, ಕೊನೆಗೆ ಚರಣ್‌ಜಿತ್ ಸಂಗ್ ಚೆನ್ನಿ ಅವರನ್ನು ಸಿಎಂ ಮಾಡುವುದರ ಮೂಲಕ ದೊಡ್ಡ ಅಚ್ಚರಿಯೇ ಉಂಟಾಗಿತ್ತು. ಚೆನ್ನಿ ವಿರುದ್ಧ ನಿರಂತರ ಟೀಕೆ ಮಾಡಿದವರಲ್ಲಿ ಜಖರ್ ಒಬ್ಬರು. ಪಕ್ಷ ವಿರೋಧಿ ಚಟುವಟಿಕೆಯ ಆರೋಪದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ನೋಟಿಸ್ ನೀಡಿ ಎಚ್ಚರಿಕೆ ನೀಡಿತ್ತು. ಇದರ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಕೇಸರಿ ಪಾಳಯಕ್ಕೆ ಸೇರಿಕೊಂಡರು. ಅಮರಿಂದರ್ ಸಿಂಗ್ ಪಕ್ಷತೊರೆದು ಹೊಸ ಪಕ್ಷ ಕಟ್ಟಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರಾದರೂ ಪಂಜಾಬ್‌ನಲ್ಲಿ ಏನೂ ಪ್ರಯೋಜನಕ್ಕೆ ಬಂದಿಲ್ಲ. ಸ್ವತಃ ಕ್ಯಾಪ್ಟನ್ ಪಟಿಯಾಲದಲ್ಲಿ ಹೀನಾಯವಾಗಿ ಸೋತರು. ಆದರೂ, ಕ್ಯಾಪ್ಟನ್ ರಾಜೀನಾಮೆ ಕಾಂಗ್ರೆಸ್‌ಗೆ ಪಂಜಾಬ್‌ನಲ್ಲಿ ದೊಡ್ಡ ನಷ್ಟವೇ ಹೌದು. 

ಜ್ಯೋತಿರಾದಿತ್ಯ ಸಿಂಧಿಯಾ, ಹಾರ್ದಿಕ್ ಪಟೇಲ್ ಎಂಬ ಯುವಶಕ್ತಿ : ಈ ಹಿಂದೆ ಅಂದರೇ, 10 ಮಾರ್ಚ್ ೨೦೨೦ರಂದು ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರ ಮೇಲಿದ್ದ ಅಸಮಾಧಾನ ಉಲ್ಲೇಖಿಸಿ ಕಾಂಗ್ರೆಸ್ ತೊರೆದರು. ಕಾಂಗ್ರೆಸ್ ‘ಪಕ್ಷ ವಿರೋಧಿ ಚಟುವಟಿಕೆ’ಗೆ ಉಚ್ಛಾಟಿಸಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು. ಸಿಂಧಿಯಾ ರಾಜೀನಾಮೆಯ ಬೆನ್ನಿಗೆ ಅವರ ಆಪ್ತ ಬಳಗದಲ್ಲಿದ್ದ ಕೆಲವು ಶಾಸಕರು ಕೂಡ ರಾಜೀನಾಮೆ ನೀಡಿದರು. ಈ ಕಾರಣದಿಂದಾಗಿ ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿ ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ ನೀಡುವಂತಾಯಿತು. ಕಾಂಗ್ರೆಸ್ ಸರ್ಕಾರ ಪಥನಗೊಂಡಿತು. ಮಧ್ಯಪ್ರದೇಶ ಬಿಜೆಪಿಯ ಪಾಲಾಯಿತು. ಬಿಜೆಪಿ ಸೇರಿದ ಕೆಲವೇ ಕೆಲವು ತಿಂಗಳುಗಳಲ್ಲಿ ಸಿಂಧಿಯಾ ನಾಗರಿಕ ವಿಮಾನಯಾನ ಸಚಿವರಾಗಿ ಅಧಿಕಾರ ವಹಿಸಿಕೊಂಡರು. 

ಇನ್ನು, ಗುಜರಾತ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾರ್ದಿಕ್ ಪಟೇಲ್ ಕಾಂಗ್ರೆಸ್‌ಗೆ ಒಂದು ಭರವಸೆಯ ಯುವ ನಾಯಕರಾಗಿದ್ದರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಹಾರ್ದಿಕ್ ಹಿಂದುಳಿದ ವರ್ಗದಿಂದ ಬಂದವರು. ಹುದ್ದೆ ಇದ್ದರೂ ಕೆಲಸವಿಲ್ಲ ಎಂದೇ ಹೈಕಮಾಂಡ್‌ನನ್ನು ದೂಷಿಸುತ್ತಿದ್ದ ಪಟೇಲ್, ರಾಜೀನಾಮೆ ಪತ್ರದಲ್ಲಿ, ಪಕ್ಷ ಹಾಗೂ ಗುಜರಾತ್ ಬಗ್ಗೆ ಚರ್ಚಿಸಲು ರಾಹುಲ್ ಗಾಂಧಿ ಭೇಟಿಯಾದಾಗ ಅವರು ಮೊಬೈಲ್‌ನಲ್ಲಿ ಮುಳುಗಿದ್ದರು ಎಂದು ನೇರಾನೇರವಾಗಿ ಆರೋಪಿಸಿದ್ದರು. ಇದು ಕಾಂಗ್ರೆಸ್ ಯುವ ನಾಯಕರನ್ನು ಕಂಡುಕೊಂಡ ರೀತಿಯನ್ನು ತಿಳಿಸುತ್ತದೆ. ಕಾಂಗ್ರೆಸ್‌ಗೆ ನಿಜಕ್ಕೂ ಗುಜರಾತ್‌ನಲ್ಲಿ ಒಬ್ಬ ಯುವ ಮುಂದಾಳು ಅಗತ್ಯವಿತ್ತು. ಆದರೇ, ಹಾರ್ದಿಕ್ ಇತ್ತೀಚೆಗೆ ಬಿಜೆಪಿಗೆ ಸೇರಿದರು. ಕೆಲವೇ ಕೆಲವು ತಿಂಗಳುಗಳಲ್ಲಿ ಎಲ್ಲದಕ್ಕೂ ಅಂಬಾನಿ, ಅದಾನಿಯನ್ನು ಟೀಕಿಸಬಾರದು ಎಂದು ಸಿದ್ಧಾಂತ ಬದಲಾಯಿಸಿಕೊಂಡು ತಮ್ಮ ಮಾಜಿ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವಷ್ಟು ಬೆಳೆದರು. 

ಇನ್ನು, ಸುಮಾರು 32 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ಇದ್ದ ಸಿಂಗ್, ಕಾಂಗ್ರೆಸ್ ಈ ಹಿಂದೆ ಇದ್ದ ಹಾಗೆ ಇಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿ ಕಳೆದ ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಕೇಸರಿ ಪಾಳಯವನ್ನು ಒಪ್ಪಿ ಕಾಂಗ್ರೆಸ್‌ಗೆ ಗುಡ್ ಬಾಯ್ ಹೇಳಿದರು. ಹಿಂದಿನ ವರ್ಷ ಉತ್ತರ ಪ್ರದೇಶ ಕಾಂಗ್ರೆಸ್‌ನ ಮತ್ತೊಬ್ಬ ಪ್ರಭಾವಿ ನಾಯಕರಾಗಿದ್ದ ಜಿತಿನ್ ಪ್ರಸಾದ್ ಕೂಡ ರಾಜೀನಾಮೆ ನೀಡಿದ್ದರು. ಉಭಯ ನಾಯಕರು ಕೇಂದ್ರದ ರಾಜ್ಯ ಖಾತೆ ಸಚಿವಸ್ಥಾನವನ್ನು ಮುನ್ನಡೆಸಿದ ಅನುಭವವುಳ್ಳವರಾಗಿದ್ದರು.   

ಕಾಂಗ್ರೆಸ್‌ನೊಂದಿಗೆ 4 ದಶಕಗಳನ್ನು ಕಳೆದ ಮಾಜಿ ಕೇಂದ್ರ ಸಚಿವ ಅಶ್ವನಿ ಕುಮಾರ್, ರಿಪುನ್ ಬೋರಾ ಕೂಡ ಕಳೆದ ಐದು ತಿಂಗಳುಗಳಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ನಾಯಕರ ಪೈಕಿಯಲ್ಲಿರುವವರು. ಕಾಂಗ್ರೆಸ್‌ಗೆ ಈವರೆಗೆ ರಾಜೀನಾಮೆ ನೀಡಿದ ಎಲ್ಲರದ್ದೂ ಒಂದೇ ಅಭಿಪ್ರಾಯವಾಗಿದೆ ಎನ್ನುವುದು ಇಲ್ಲಿ ಗಮನಾರ್ಹ. ಕಾಂಗ್ರೆಸ್ ನಾಯಕರ ಒಳಜಗಳ, ರಾಜೀನಾಮೆ ರಾಜಕೀಯ ಬಿಕ್ಕಟ್ಟು ಇನ್ನೊಂದು ಪಕ್ಷಕ್ಕೆ ಅಧಿಕಾರ ಹಿಡಿಯುವಂತೆ ಪರೋಕ್ಷವಾಗಿ ಸಹಾಯ ಮಾಡಿತು ಎನ್ನುವುದರಲ್ಲಿ ಸಂಶಯವೇ ಇಲ್ಲ. ಕೆಲವು ರಾಜ್ಯಗಳಲ್ಲಂತೂ ತನ್ನ ಪ್ರಮುಖ ಪ್ರಭಾವಿ ಮುಖಗಳನ್ನೇ ಕಳೆದುಕೊಂಡಿದೆ. ಭವಿಷ್ಯದಲ್ಲಿ ಕಾಂಗ್ರೆಸ್ ನಿರೀಕ್ಷಿತ ಕುಸಿದತ್ತ ಸಾಗುವುದು ಮಾತ್ರ ಕಾಣಿಸುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಪುನಶ್ಚೇತನಕ್ಕೆ ಕನಸು ಕಾಣುತ್ತಿದೆ ಎನ್ನುವುದು ಸದ್ಯದ ಅಚ್ಚರಿ. 

-ಶ್ರೀರಾಜ್ ವಕ್ವಾಡಿ   


No comments:

Post a Comment