Monday, March 28, 2022

ಸಂಪುಟ ಸರ್ಜರಿ : ಮಗು ಚಿವುಟಿ ತೊಟ್ಟಿಲು ತೂಗಿದರೇ..?


 ವರಿಷ್ಠರ ಧೋರಣೆ ಬದಲಾದರೇ, ಬಿಎಸ್‌ವೈ ಮತ್ತೆ ರೆಬಲ್..? | ಬಿಜೆಪಿ ಮಾಸ್ಟರ್ ಪ್ಲ್ಯಾನ್ 

ರಾಜ್ಯ ಬಿಜೆಪಿ ಮತ್ತೊಮ್ಮೆ ಹೊಸ ಬದಲಾವಣೆಗೆ ಎದುರುಗಾಣುತ್ತಿದೆ. ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಪುಟಕ್ಕೆ ಬದಲಾವಣೆಯ ಸ್ಪರ್ಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಅಂದರೇ, ಸಂಪುಟ ಬದಲಾವಣೆಯ ‘ಹಾಲ್‌ಮಾರ್ಕ್’ ಇದ್ದ ಹಾಗೆ. ಅದು ಬಿಜೆಪಿಯ ಚುನಾವಣಾ ಅಜೆಂಡಾ ಕೂಡ ಹೌದು. ಕಳೆದ ವರ್ಷ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಂದರ್ಭದಲ್ಲಿ ನಡೆದ ರಾಜಕೀಯ ಹೈಡ್ರಾಮ ಗೊತ್ತೇ ಇದೆ. ಕೊನೆಗೆ ಅಚ್ಚರಿಯ ಪ್ರಸಂಗವೊಂದು ರಾಜ್ಯ ಬಿಜೆಪಿಯಲ್ಲಿ ನಡೆದುಹೋಗಿದ್ದು ಈಗ ಇತಿಹಾಸ. ಈಗ ಮತ್ತೊಂದು ಬದಲಾವಣೆಯ ಪರ್ವಕ್ಕೆ ಬಿಜೆಪಿ ಸಜ್ಜಾಗುತ್ತಿದೆ. 

ಹೌದು, ರಾಜ್ಯ ಬಿಜೆಪಿ ಹೈಕಮಾಂಡ್‌ನ ‘ಚಾಣಾಕ್ಯರ’ ಬರುವಿಕೆಯ ನಿರೀಕ್ಷೆಯಲ್ಲಿದೆ. ಈಗಿರುವ ಸಂಪುಟದಲ್ಲಿನ ಕೆಲವರಿಗೆ ಕೋಕ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕಂತೂ ಮತ್ತೆ  ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ವರಿಷ್ಠರು ಯೋಚನೆ ಮಾಡಿದಂತೆ ಕಾಣಿಸುತ್ತಿಲ್ಲ. ಆದರೂ, ಯಾವ ಕ್ಷಣದಲ್ಲೂ ಬೇಕಾದರೂ ಕೂಡ ಅಚ್ಚರಿಯ ಬದಲಾವಣೆ ಬಿಜೆಪಿಯಂತಹ ರಾಜಕೀಯ ಪಕ್ಷದಲ್ಲಿ ಸಾಧ್ಯ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಬಸವರಾಜ್ ಬೊಮ್ಮಾಯಿ ರಾಜಕೀಯ ಜೀವನದಲ್ಲಿ ಯಾರೂ ನೀರೀಕ್ಷಿಸಿರದ ಎತ್ತರವನ್ನು ಏರಿದ್ದರು. ತಂದೆ ಎಸ್. ಆರ್ ಬೊಮ್ಮಾಯಿ ಕೂಡ ಇದೇ ರೀತಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದು. ಬಸವರಾಜ್ ಬೊಮ್ಮಾಯಿ ತಂದೆಯಂತೆಯೇ ಇನ್ನೊಬ್ಬರೊಂದಿಗೆ ವೈಮಸ್ಸು ಇಟ್ಟುಕೊಂಡವರಲ್ಲ. ಸ್ನೇಹಪರ ಜೀವಿ. ಎಲ್ಲರೊಂದಿಗೂ ವಿಶ್ವಾಸ ಉಳಿಕೊಂಡ ನಾಯಕ. ಉಪ ಚುನಾವಣೆಯ ಸೋಲು ಕಂಡ ಮುಖ್ಯಮಂತ್ರಿಗಳ ಬಗ್ಗೆ ರಾಜ್ಯದ ಕೆಲವು ಅತೃಪ್ತ ನಾಯಕರು ಅಸಮಾಧಾನದಿಂದ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರೂ ಕೂಡ, ಬಸವರಾಜ್ ಬೊಮ್ಮಾಯಿ ವರಿಷ್ಠರ ವಿಶ್ವಾಸ ಉಳಿಕೊಂಡಿದ್ದಾರೆ ಎನ್ನುವುದು ಸತ್ಯ. ಹಾಗೆ ಒಂದು ವೇಳೆ ವರಿಷ್ಠರು ಕೂಡ ಬದಲಾವಣೆ ಬಯಸಿದರೇ, ‘ಆಗಲಿ’ ಎಂದು ಸ್ಥಾನ ಬಿಟ್ಟುಕೊಡುವ ಸಜ್ಜನ ನಾಯಕ ಬೊಮ್ಮಾಯಿ. ಯಡಿಯೂರಪ್ಪ ಅವರ ಅಧಿಕಾರದಲ್ಲಿ ಉಡುಪಿಯ ಉಸ್ತುವಾರಿಯಾಗಿದ್ದಾಗ ಬೊಮ್ಮಾಯಿ ಬಗ್ಗೆ ವಿರೋಧ ಧ್ವನಿ ಇದ್ದಿತ್ತು ಹೊರತಾಗಿ, ಮುಖ್ಯಮಂತ್ರಿಯಾದ ಬಳಿಕ ‘ಅಸಮರ್ಥರು’ ಎಂಬ ಭಿನ್ನಮತಕ್ಕೆ ಗುರಿಯಾದವರಲ್ಲ. ಹಾಗಾಗಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆಯ ಗೋಜಿಗೆ ಬಿಜೆಪಿ ಹೈಕಮಾಂಡ್ ಮುಂದಾದಂತೆ ಕಾಣಿಸುತ್ತಿಲ್ಲ.  

ಹಾಗಾದರೇ, ಸಂಪುಟದಲ್ಲಿ ಏನು ಬದಲಾವಣೆ ಆಗುವುದಕ್ಕೆ ಸಾಧ್ಯವಿದೆ..? ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದ ಕೆಲವರಿಗೆ ಕೋಕ್ ನೀಡಿ, ಐದಾರು ಬಾರಿ, ಮೂರ‍್ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾದ ಹಿರಿಯ ನಾಯಕರಿಗೆ ಈ ಸಂಪುಟ ಸರ್ಜರಿಯ ಮೂಲಕ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ನಾಯಕತ್ವದ ವಿಚಾರವಾಗಿ ಬಹಿರಂಗವಾಗಿ ಅಸಮಾಧಾನ ವ್ಯಕ್ತ ಪಡಿಸಿದ ಸಿಪಿವೈ ಸೇರಿ ಏಳು ಮಂದಿಗೆ ಕಳೆದ ಬಾರಿ ಕೋಕ್ ನೀಡಲಾಗಿತ್ತು. ಸರ್ಕಾರ ಕಟ್ಟುವುದಕ್ಕೆ ಸಹಾಯ ಮಾಡಿದ ವಲಸಿಗರನ್ನು ಕೈ ಬಿಡುವಂತಿಲ್ಲ. ಇತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಅವರ ಮನಸ್ಸಿಗೂ ನೋವಾಗದಂತೆ ಸಂಪುಟ ಬದಲಾವಣೆ ಮಾಡಬೇಕಾಗಿದೆ. ಇದು ಕೇಸರಿ ಪಾಳಯದ ಸದ್ಯದ ಇಂಟ್ರೆಸ್ಟಿಂಗ್ ಮ್ಯಾಟರ್. 

ಹೌದು, ಅನಿವಾರ್ಯವಾಗಿ ಯಾವುದೇ ಬೇರೆ ಉಪಾಯವಿಲ್ಲದೇ ಯಡಿಯೂರಪ್ಪ ಅವರ ಮಾತಿಗೆ ಹೈಕಮಾಂಡ್ ಮಣೆ ಹಾಕುತ್ತದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಎದ್ದಿದೆ. ಕರ್ನಾಟಕ ರಾಜಕೀಯದಲ್ಲಿ ಯಾವುದೇ ಕಾರಣಕ್ಕೂ ಯಡಿಯೂರಪ್ಪರನ್ನು ಹೊರತಾಗಿ ಯಾವುದೇ ಸುಧಾರಣೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಹೈಕಮಾಂಡ್‌ಗೆ ಕೂಡ ತಿಳಿದಿದೆ ಎಂದು ಕಾಣಿಸುತ್ತಿದೆ. ಹಾಗಾಗಿ ರಾಜಕೀಯ ಭವಿಷ್ಯದ ದೃಷ್ಟಿ ಮುಂದಿಟ್ಟುಕೊಂಡು ಮತ್ತು ಪಕ್ಷ ಬಲವರ್ಧನೆಯ ಉದ್ದೇಶದಿಂದ ತಮ್ಮ ಮಗನಿಗೆ ಸಚಿವ ಸ್ಥಾನಮಾನ ಕೊಡಿಸುವ ಪ್ರಯತ್ನದಲ್ಲಿ ಯಡಿಯೂರಪ್ಪ ಇದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ವರಿಷ್ಠರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಲ್ಲಿಸಿದ ನೂತನ ಸಚಿವರ ಪಟ್ಟಿಯಲ್ಲಿ ಬಹುತೇಕರು ಯಡಿಯೂರಪ್ಪರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಹೇಳಿಕೇಳಿ ಬೊಮ್ಮಾಯಿ ಯಡಿಯೂರಪ್ಪರ ಮಾತನ್ನಂತೂ ಮೀರಿ ಮುನ್ನಡೆಯುವುದಿಲ್ಲ ಎನ್ನುವುದು ಗೊತ್ತಿರುವ ವಿಷಯ. ವರಿಷ್ಠರೊಂದಿಗೂ ವಿನಯದಿಂದಿದ್ದು, ಸಂಘ ಪರಿವಾರದವರ ಅಜೆಂಡಾದೊಂದಿಗೂ ಹೊಂದಿಕೊಂಡು, ಬಿಎಸ್‌ವೈಗೆ ಋಣಿಯಾಗಿ ಬೊಮ್ಮಾಯಿ ಹೆಜ್ಜೆ ಹಾಕುತ್ತಿದ್ದಾರೆ. ಆದಾಗ್ಯೂ, ವರಿಷ್ಠರು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ ಎಂದು ಬಿಜೆಪಿ ವಲಯದಲ್ಲಿ ಆಗಾಗ ಕೇಳಿ ಬರುತ್ತಿದೆ. ಆದರೇ, ಬೊಮ್ಮಾಯಿ ಸ್ಥಾನವನ್ನು ಬದಲಾಯಿಸುವುದಾದರೇ, ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರದ ಗದ್ದುಗೆ ಕೊಡಿಸಿದ ಯಡಿಯೂರಪ್ಪರನ್ನು ಕೂಡ ಹೈಕಮಾಂಡ್ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎನ್ನುವುದು ಸತ್ಯ. ಹಾಗಾಗಿ ಸದ್ಯಕ್ಕಂತೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದೇ ಹೇಳಲಾಗುತ್ತಿದೆ. 

ಯಡಿಯೂರಪ್ಪ ಅವರು ಬಾಹ್ಯ ನೋಟದಲ್ಲಿ ಯಾವುದೇ ನೋವಿಲ್ಲದಂತೆ ಕಾಣಿಸಿಕೊಳ್ಳುತ್ತಿದ್ದರೂ, ಎರಡೆರಡು ಬಾರಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಪಕ್ಷದ ಹೈಕಮಾಂಡ್ ವಿರುದ್ಧ ಅವರ ಎದೆಯೊಳಗೆ ಆರಿಸಲಾಗದ ಕಿಚ್ಚಿದೆ ಎನ್ನುವುದು ಅಪ್ಪಟ ಸತ್ಯ. ಆ ಕಿಚ್ಚು ಯಾವಾಗ ಹೊರ ಬರುವುದಕ್ಕೂ ಸಾಧ್ಯವಿದೆ ಎನ್ನುವುದನ್ನು ಹೈಕಮಾಂಡ್ ಮರೆಯುವಂತಿಲ್ಲ. ಹೇಳಿಕೇಳಿ ಯಡಿಯೂರಪ್ಪ ‘ಹೋರಾಟದ ರೆಬಲ್ ಧೊರಣೆ’ಯಿಂದಲೇ ರಾಜಕೀಯ ಪ್ರವೇಶ ಮಾಡಿದವರು. ಹೈಕಮಾಂಡ್ ಅದು ಎಂಥದ್ದೇ ರಾಜಕೀಯ ರಣತಂತ್ರ ಹೂಡಿದರೂ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವನ್ನು ಬಿಟ್ಟು ಮುಂದೆ ಹೋಗುವುದಕ್ಕೆ ಖಂಡಿತ ಸಾದ್ಯವಿಲ್ಲ. ಕರ್ನಾಟಕದ ಇನ್ಯಾವ ರಾಜಕಾರಣಿಯೂ ಹೊಂದಿರದಷ್ಟು ಅಪಾರ ಜನ ಬೆಂಬಲ, ಫಾಲೋರ‍್ಸ್, ಲಿಂಗಾಯತ ಬಲ ಇರುವ ಬಿ. ಎಸ್. ಯಡಿಯೂರಪ್ಪರಿಗೆ ಸಮಾನಾಗಿ ಲಿಂಗಾಯತ ಸಮುದಾಯದ ನಾಯಕರಾಗಿ ಗುರುತಿಸಿಕೊಂಡವರು ಯಾರೂ ಇಲ್ಲ. ಒಂದು ವೇಳೆ ಯಡಿಯೂರಪ್ಪರ ಅಭಿಪ್ರಾಯಕ್ಕೆ ಮೀರಿ ಹೈಕಮಾಂಡ್ ನೆಡೆದುಕೊಂಡರೇ, ಬಿಜೆಪಿ ದೊಡ್ಡ ಹೊಡೆತ ತಿನ್ನಬೇಕಾಗುತ್ತದೆ ಎನ್ನುವುದು ಅಕ್ಷರಶಃ ಸತ್ಯ. 

೨೫ ನೇ ಮುಖ್ಯಮಂತ್ರಿಯಾಗಿ ೨೦೦೮ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿಎಸ್‌ವೈ ಭ್ರಷ್ಟಾಚಾರದ ಪ್ರಕರಣದಲ್ಲಿ ಸಿಲುಕಿದರು. ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಇದ್ದಾಗ ಗಣಿದನಿ ಜನಾರ್ಧನ್ ರೆಡ್ಡಿ ಅಂದಿನ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾಡಿದ್ದ ಜಂತಕಲ್ ಗಣಿ ಪ್ರಕರಣದ ಕಾರಣದಿಂದಾಗಿ ಯಡಿಯೂರಪ್ಪ ಅವರ ಇಡೀ ಕುಟುಂಬದ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಲೋಕಾಯುಕ್ತ ನೀಡಿದ ವರದಿಯಲ್ಲಿ ಬಿಎಸ್‌ವೈ ಹೆಸರು ಇದ್ದ ಕಾರಣ ೨೦೧೧ ರಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಕ್ಕಾಗಿ ಹೈಕಮಾಂಡ್ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಬಿಎಸ್‌ವೈ ಕರ್ನಾಟಕ ಜನತಾ ಪಕ್ಷ ಕಟ್ಟಿದ್ದರು. ಇದರಿಂದ ನಷ್ಟವಾಗಿದ್ದು ಬಿಜೆಪಿಗೆಯೇ ಹೊರತು ಬಿಎಸ್‌ವೈಗೆ ಅಲ್ಲ. ೨೦೧೨ ಡಿಸೆಂಬರ್ ೯ ರಂದು ರಾಜ್ಯ ರಾಜಕೀಯದಲ್ಲಿ ಬಿಎಸ್‌ವೈ ನೇತೃತ್ವದ ಕೆಜೆಪಿ ಬಿಜೆಪಿ ವಿರುದ್ಧ ದೊಡ್ಡ ಸದ್ದು ಮಾಡಿತ್ತು, ಕೆಜೆಪಿ ಪಕ್ಷದ ಮೂಲಕ ಬಿಜೆಪಿಗೆ ಚುನಾವಣೆಯಲ್ಲಿ ಪೈಪೋಟಿ ನೀಡುವುದಕ್ಕಾಗದಿದ್ದರೂ, ಬಿಜೆಪಿಯ ಮತ ಒಡೆಯುವ ಕೆಲಸದಲ್ಲಿ ಬಿಎಸ್‌ವೈ ಯಶಸ್ವಿಯಾಗಿದ್ದರು. ಕೆಜೆಪಿ ಪಕ್ಷ ಕಟ್ಟುವುದರೊಂದಿಗೆ ತಾವು ರಾಜಕೀಯ ಪಾಠ ಕಲಿತಿದ್ದಲ್ಲದೇ, ಬಿಜೆಪಿಗೂ ತಾನೇನೆಂಬುವುದನ್ನು ಬಿಎಸ್‌ವೈ ತೋರಿಸಿಕೊಟ್ಟಿದ್ದರು. ಕೆಜೆಪಿ ಹಾಗೂ ಬಿಜೆಪಿ ನಡುವಿನ ವೈಮನಸ್ಸಿನ ಪರಿಣಾಮವಾಗಿ ೨೦೧೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬರೋಬ್ಬರಿ ೧೨೨ ಕ್ಷೇತ್ರಗಳಲ್ಲಿ ಜಯಗಳಿಸುವುದರ ಮುಖೇನ ರಾಜ್ಯದ ಅಧಿಕಾರ ಹಿಡಿಯಿತು. ಅದಾದ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿಲ್ಲ, ಅಧಿಕಾರ ಹಿಡಿದಿದ್ದು ವಲಸಿಗರ ಸಹಾಯದಿಂದ ಎನ್ನುವುದು ಇಲ್ಲಿ ಗಮನಾರ್ಹ ವಿಷಯ. ಹೈಕಮಾಂಡ್ ನಿಲುವು ಒಪ್ಪಿತವಾಗಿರದಿದ್ದರೇ, ಮತ್ತೆ ಕೆಜೆಪಿಯನ್ನು ಬಿಎಸ್‌ವೈ ತಮ್ಮ ಪ್ರಾಬಲ್ಯದ ಅಸ್ತçವಾಗಿ ಬಳಸಿಕೊಳ್ಳಬಹುದು ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ. ಹಾಗಾಗಿ, ಹೈಕಮಾಂಡ್ ಬಿಎಸ್‌ವೈ ಅವರನ್ನು ಗಮನದಲ್ಲಿಟ್ಟುಕೊಂಡೇ ಜಾಣ್ಮೆಯ ನಡೆ ಪ್ರದರ್ಶಿಸಬೇಕಿದೆ. 

ಇನ್ನು, ರಾಜ್ಯ ಬಿಜೆಪಿಯಲ್ಲಿ ಸಂಘ ಪರಿವಾರದ ಹಿನ್ನೆಲೆಯುಳ್ಳ ಹಿರಿಯ, ಕಿರಿಯ ನಾಯಕರಿದ್ದರೂ ಕೂಡ ಅರ‍್ಯಾರು ಪಕ್ಷಕ್ಕೆ ಮತ ತಂದು ಕೊಡುವ ವರ್ಚಸ್ಸಿನ ಮುಖವುಳ್ಳವರಲ್ಲ. ಹೆಚ್ಚೆಂದರೇ, ಒಂದಿಷ್ಟು ಧಾರ್ಮಿಕ ವಿಚಾರಗಳ ವಿವಾದಗಳನ್ನು ಅತಿರಂಜಕಗೊಳಿಸಿ ಅಥವಾ ಸೆನ್ಸೇಷನಲೈಸ್ ಮಾಡಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವುದಕ್ಕೆ ಬೆವರು ಸುರಿಸಬಹುದು ಅಷ್ಟೇ. ಸಂಘ ಪರಿವಾರದ ಯಾವುದೇ ನಾಯಕರಿಗೆ ರಾಜ್ಯದ ಯಾವುದೇ ಪ್ರಧಾನ ಹುದ್ದೆಗಳಿಗೆ ಅಥವಾ ಮುಖ್ಯಮಂತ್ರಿ ಸ್ಥಾನಕ್ಕೆ ಮಣೆ ಹಾಕಿದರೇ, ಅದು ಬಿಜೆಪಿ ಪಕ್ಷಕ್ಕೆ ವರ್ಕೌಟ್ ಆಗುವ ಸಾದ್ಯತೆ ತೀರಾ ಕಡಿಮೆ ಇದೆ. ಸಂಘ ಪರಿವಾರದವರು ರಾಜಕೀಯಕ್ಕಲ್ಲ, ಅವರು ಸಂಘಟನೆಗಷ್ಟೇ ಒಳಿತು ಎನ್ನುವುದು ಕೆಲವು ಕೇಸರಿ ರಾಜಕಾರಣಿಗಳ ‘ಸಂಘ ಧಾರ್ಷ್ಟ್ಯ’ದಿಂದ ರಾಜ್ಯದ ಜನರು ಕಂಡುಕೊಂಡಿದ್ದಾರೆ ಎನ್ನುವುದು ಸತ್ಯ. ಇದೆಲ್ಲವನ್ನು ಮುಂದಿಟ್ಟುಕೊಂಡು ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. 

ಒಟ್ಟಿನಲ್ಲಿ, ರಾಜ್ಯದ ಸಚಿವ ಸಂಪುಟದ ಮತ್ತೊಂದು ಸರ್ಜರಿಗೆ ತಯಾರಾಗಿರುವ ಲೆಕ್ಕಾಚಾರ ಹೇಗಿದೆ..? ಜಿಲ್ಲೆ, ಪ್ರದೇಶ, ಜಾತಿ, ವರ್ಗ ಸಣ್ಣ ಸಮುದಾಯಗಳನ್ನು ಓಲೈಸಿಕೊಳ್ಳುವುದಕ್ಕೆ ಹೈಕಮಾಂಡ್ ಯಾವ ರಣತಂತ್ರ ಹೂಡಲಿದೆ..? ಪಕ್ಷದ ಅಧಿಕಾರದ ಜುಟ್ಟು ಯಡಿಯೂರಪ್ಪನವರ ಕೈಯಿಂದ ತಪ್ಪಿಸುವ ಪ್ರಯತ್ನದಲ್ಲಿ ಬಿಜೆಪಿಯ ಹೈಕಮಾಂಡ್ ಇದೆಯೇ..? ಅಥವಾ ಹಾಗೆ ಮಾಡುವುದರಲ್ಲಿ ಹೈಕಮಾಂಡ್ ಸಫಲವಾಗುತ್ತದೆಯೇ..? ಮತ್ತೆ ಹೈಕಮಾಂಡ್ ಬಿಎಸ್‌ವೈ ಡಿಮಾಂಡ್‌ಗೆ ಮಣಿಯುತ್ತದೆಯೇ..? ಮಗು ಚಿವುಟಿ, ತೊಟ್ಟಿಲು ತೂಗುವುದೇ..? ಎಂಬ ಪುಂಖಾನುಪುಂಖವಾದ ಪ್ರಶ್ನೆಗಳು ರಾಜ್ಯ ಬಿಜೆಪಿ ಬಗೆಗಿನ ಸದ್ಯದ ಕುತೂಹಲವನ್ನು ಕೆರಳಿಸಿವೆ.

-ಶ್ರೀರಾಜ್ ವಕ್ವಾಡಿ

No comments:

Post a Comment