Thursday, April 7, 2022

“ಭಯ್ಯಾ... ಮೆಹೆಂಗಾಯಿ ಕಮರ್ ತೋಡ್ ರಹಿ ಹೈ”



ದೇಶದ ಜನರ ಕತ್ತು ಹಿಸುಕುತ್ತಿರುವ ಬೆಲೆ ಏರಿಕೆ | ಮೋದಿ ಮೋಸ ಮಾಡಿದ್ರು..!

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ಮೋಸಗಾರ, ಸುಳ್ಳುಗಾರ ಎಂಬುವುದನ್ನು ಮತ್ತೆ ಸಾಬೀತು ಮಾಡಿದ್ದಾರೆ. ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ದೇಶಕ್ಕೆ ಮೋದಿ ಕೊಟ್ಟಿದ್ದೇನು ಅಂತ ಕೇಳಿದ್ರೇ, ಬರೀ ಅರ್ಧಂಬರ್ದ ಅವ್ಯವಸ್ಥೆಯ ಯೋಜನೆಗಳೇ ಕಣ್ಣಿಗೆ ರಾಚುತ್ತವೆ. ಏನು ಮಾಡಿದ್ದಾರೆ ಕೇಳಿದ್ರೇ, ದೇಶದ ಜನರೆದುರಿಗೆ ಕೈ ಅಗಲಿಸಿಕೊಂಡು ಸುಳ್ಳು ಭಾಷಣ ಬಿಗಿದಿದ್ದು, ಜಗತ್ತು ಸುತ್ತಿದ್ದು ಬಿಟ್ಟರೇ ಮತ್ತೇನಿಲ್ಲ. ಈ ಹಿಂದಿನ ಸರ್ಕಾರಗಳು ದೇಶದ ಮುಗ್ಧ ಜನರಿಗೆ ಮಾಡಿಕೊಂಡು ಬಂದಿರುವ ಮಹಾನ್ ಮೋಸವನ್ನೇ ಈ ವಿಶ್ವದ ನಂಬರ್ ಒನ್ ಲೀಡರ್ ಬಿರುದಾಂಕಿತ ಸೋ ಕಾಲ್ಡ್ ದೇಶದ ಅಭಿವೃದ್ಧಿ ಹರಿಕಾರ ಪ್ರಧಾನಿ ನರೇಂದ್ರ ಮೋದಿ ಮುಂದುವರಿಸಿದ್ದಾರೆ ಎನ್ನುವುದು ಅಪ್ಪಟ ಸತ್ಯ. 

ದೇಶದ ಜನರಿಗೆ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದಾಗ ನಿಜಕ್ಕೂ ಒಂದು ಹೊಸ ನಿರೀಕ್ಷೆ ಇತ್ತು. ಮೋದಿ ಸರ್ಕಾರ ದೇಶದ ಹಿತಕ್ಕಾಗಿ ಒಳ್ಳೆಯ ಅಭಿವೃದ್ಧಿ ಕಾರ್ಯವನ್ನೇ ಮಾಡುತ್ತದೆ ಎಂದು ಜನ ಅಕ್ಷರಶಃ ನಂಬಿಕೆ ಇಟ್ಟಿದ್ದರು. ಕೆಲವು ದಶಕಗಳಿಂದ ಜೀವಂತ ಸಮಸ್ಯೆಗಳಾಗಿ ದೇಶದ ಅಭಿವೃದ್ಧಿಗೆ ಮುಳುವಾಗಿದ್ದ ನಿರುದ್ಯೋಗ, ಬಡತನ, ಹಸಿವು, ಭ್ರಷ್ಟಾಚಾರಗಳನ್ನು ನಿವಾರಿಸುವಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಈ ದೇಶದ ಮಹಾನ್ ಜನತೆ ಮರುಳಾಗಿ ನಂಬಿದ್ದರು. ಆದರೇ, ಈ ಸರ್ಕಾರ ಏನು ಮಾಡಿದೆ ಎನ್ನುವುದು ನಿಮ್ಮ ಕಣ್ಣೆದುರಿಗೆ ಇದೆ. 

ದೇಶದಲ್ಲಿನ ಆರ್ಥಿಕ ಹಾಗೂ ಸಾಮಾಜಿಕ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ನೀಡಿದ ಭರವಸೆಗಳು ಅಷ್ಟಿಷ್ಟಲ್ಲ. ಆ ಭರವಸೆಯ ಭ್ರಮಾ ಲೋಕದಲ್ಲಿ ತೇಲಿ ಮೋಸ ಹೋದ ಈ ದೇಶದ ಜನ ಸಂಖ್ಯೆ ಬಹಳ ದೊಡ್ಡದಿದೆ. ಅಭಿವೃದ್ಧಿ ಮಾಡುವುದಾಗಿ ಭರವಸೆ ಕೊಟ್ಟಿದ್ದು ಈ ನೆಲದ ಜನರಿಗೆ. ಆದರೇ, ಈ ಸರ್ಕಾರ ಪೊರೆದಿದ್ದು ಉದ್ಯಮಪತಿಗಳ ಪ್ರತಿಷ್ಠೆಯನ್ನು ಎನ್ನುವುದರಲ್ಲಿ ಸಂಶಯವೇ ಇಲ್ಲ. 

ಜನರ ಹಿತದೃಷ್ಟಿಗಾಗಿ ಕೆಲಸ ಮಾಡಬೇಕಾದ ಸರ್ಕಾರ ಬೆಲೆ ಏರಿಕೆಯಂತಹ ಸಮಸ್ಯೆಯ ದೊಡ್ಡ ಮೂಟೆಯನ್ನೇ ಜನರ ತಲೆಯ ಮೇಲೆ ಅವ್ಯಾಹತವಾಗಿ ಹೇರುತ್ತಿದೆ. ಮಾತ್ರವಲ್ಲದೇ, ಈ ಬೆಲೆ ಹೇರಿಕೆಯನ್ನೇ ಚುನಾವಣೆಯ ಒಂದು ಅಸ್ತ್ರವನ್ನಾಗಿ  ಮಾಡಿಕೊಳ್ಳುವಷ್ಟರ ಮಟ್ಟಿಗೆ ಮೋದಿ ಸರ್ಕಾರ ತನ್ನ ಜಾಣ್ಮೆಯ ಪ್ರದರ್ಶನವನ್ನು ಈ ದೇಶದ ಜನರಿಗೆ ಮಾಡಿದೆ. ಚುನಾವಣೆ ಬಂದಾಗ ಕೊಂಚ ಬೆಲೆ ಇಳಿಸಿದಂತೆ ಮಾಡಿ, ಚುನಾವಣೆಯ ಫಲಿತಾಂಶದ ಬಳಿಕ ಮತ್ತೆ ಏರಿಕೆ ಮಾಡುವ ಮೋದಿ ಸರ್ಕಾರದ ‘ಇಂಟೆಲಿಜೆಂಟ್ ಧೋರಣೆ’ ಈ ದೇಶದ ಬಹುತೇಕ ಮಂದಿಗೆ ಗೊತ್ತೇ ಆಗಿಲ್ಲ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್‌ನಂತಹ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟದ ಸಂಕೋಲೆಗೆ ತಳ್ಳಿದಷ್ಟು ಈ ಹಿಂದಿನ ಯಾವ ಸರ್ಕಾರವೂ ತಳ್ಳಿದ ಉದಾಹರಣೆ ಇಲ್ಲ. ಈ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಜನತಂತ್ರದ ಕತ್ತು ಹಿಸುಕುವ ಅಪಾಯಕಾರಿ ಸಿದ್ಧಾಂತವನ್ನು ಹೊಂದಿದೆ ಎಂದು ಈ ದೇಶದ ಒಬ್ಬನೇ ಒಬ್ಬ ಊಹಿಸಿರಲಿಕ್ಕಿಲ್ಲ. ಈಗ ಮತ ಹಾಕಿದ ಒಬ್ಬೊಬ್ಬನು ಶಪಿಸದೇ ಇರಲಾರ. 

ಕಳೆದ ಎಂಟು ವರ್ಷಗಳ ಹಿಂದೆ ಪೆಟ್ರೋಲ್, ಡಿಸೇಲ್ ಬೆಲೆ ೭೦ ರೂ. ಮುಟ್ಟಿದಾಗ ಬಿಜೆಪಿಯ ನಾಯಕರುಗಳು ಬೀದಿಗಿಳಿದು ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಂಗೆ ಎದ್ದಿದ್ದರು. ೨೦೧೩ರಲ್ಲಿ ಅಡುಗೆ ಅನಿಲದ ಬೆಲೆ ೪೧೬ ರೂ ಆದಾಗ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತು ಬೀದಿ ಬೀದಿಗಳಲ್ಲಿ ಹೋರಾಟ ಮಾಡಿದ್ದರು. ದೇಶದಾದ್ಯಂತ ಬೆಲೆ ಏರಿಕೆಯ ವಿರುದ್ಧ ದೊಡ್ಡ ಹೋರಾಟ ಮಾಡಿದ ಬಿಜೆಪಿ ಪಕ್ಷದ ಆಡಳಿತದ ಅವಧಿಯಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಯನ್ನು ೩೦ ರಿಂದ ೪೦ ರೂಗಳವರಗೆ ಏರಿಸಲಾಯಿತು. ಅಡುಗೆ ಅನಿಲದ ದರ ೫೦೦ - ೫೫೦ ರೂ. ವರೆಗೆ ಏರಿಕೆ ಆಗಿದೆ. ಈಗ ಮತ್ತೆ ಅದೇ ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಸುವ ಹಳೆಯ ಛಾಳಿಯನ್ನೇ ಮುಂದುವರಿಸಿರುವ ಬಿಜೆಪಿ ಸರ್ಕಾರ, ನಿರುದ್ಯೋಗ ಸಮಸ್ಯೆ ನಿವಾರಣೆ ಆಗಬೇಕೆಂದರೇ, ಅಭಿವೃದ್ಧಿ ಆಗಬೇಕೆಂದರೇ ಬೆಲೆ ಏರಿಕೆ ಅಗತ್ಯ ಎಂದು ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಆಗಲಿ, ಇವರು ಬೆಲೆ ಏರಿಕೆ ಮಾಡಿ ಯಾವ ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಿದ್ದಾರೆ..? ಯಾವ ದೇಶದಲ್ಲಿ ಅಭಿವೃದ್ಧಿ ಮಾಡಿದ್ದಾರೆ..? ಭಾರತದಲ್ಲಿಯೋ ಅಥವಾ ಇನ್ನ್ಯಾವುದೋ ಪರದೇಶದಲ್ಲೋ..? ಎಲ್ಲೋ ಒಂದೆರಡು ಶೇಕಡಾ ನಿರುದ್ಯೋಗ ಸಮಸ್ಯೆ ಇಳಿಕೆ ಆಗಿದೆ ಎಂದ ಮಾತ್ರಕ್ಕೆ ನಿರುದ್ಯೋಗ ಸಮಸ್ಯೆಯೇ ಇಲ್ಲ ಈ ದೇಶದಲ್ಲಿ ಎಂದರ್ಥವಲ್ಲ, ಬಿಳುವ ಗೋಡೆಗೆ ಸುಣ್ಣ ಬಳಿದ ಮಾತ್ರಕ್ಕೆ ದೇಶ ಅಭಿವೃದ್ಧಿ ಆಗಿದೆ ಎಂದರ್ಥವಲ್ಲ. ವಾಸ್ತವ ಅಂದರೇ, ಕಣ್ಣಿಗೆ ಕಾಣಿಸುವುದಷ್ಟೇ ಅಲ್ಲ. ಅದರ ಒಳಗಿನ ಪದರವೂ ಹೌದು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದೆ. 

ಯಾವುದೇ ವಸ್ತುವಿನ ಬೆಲೆ ನಿಗಧಿತವಾಗಿ ಇರುವುದಕ್ಕೆ ಖಂಡಿತ ಸಾಧ್ಯವಿಲ್ಲ. ಕಾಲ ಬದಲಾದಂತೆ, ಬೇಡಿಕೆಗಳು ಹೆಚ್ಚಾದಂತೆ ಬೆಲೆ ಏರಿಕೆ ಆಗುವುದು ಸಹಜ. ಆದರೇ, ಬೆಲೆ ಏರಿಕೆ ಕತ್ತು ಹಿಸುಕುವಂತಿರಬಾರದು. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ತಂದುಕೊಡುವ ಸಾಮಾನ್ಯ ಜ್ಞಾನ ಸರ್ಕಾರಗಳಿಗೆ ಇರಬೇಕು. ಇದೇ ಮೋದಿ ಅಲ್ಲವೇ ೨೦೧೩ ರಲ್ಲಿ “ಭಯ್ಯಾ... ಮೆಹೆಂಗಾಯಿ ಕಮರ್ ತೋಡ್ ರಹಿ ಹೈ”(ಬೆಲೆ ಏರಿಕೆ ಸೊಂಟ ಮುರಿಯುತ್ತಿದೆ) ಎಂದು ಹೇಳಿದ್ದು..? 

ಜನ ಸರ್ಕಾರಿ ತೆರಿಗೆ ಕಟ್ಟುವುದರಿಂದಲೇ ಬೇಸತ್ತು ಹೋಗಿದ್ದಾರೆ. ಹೌದು, ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ತೈಲ ಕಂಪನಿಗಳು ತೈಲ ಖರೀದಿಸಿ ಸಂಸ್ಕರಿಸಿದ ನಂತರ ಪ್ರತಿ ಲೀಟರ್‌ನ ಬೆಲೆ ಸರಿಸುಮಾರು ೩೫ ರಿಂದ ೪೦ ರೂ. ಆಗಬಹುದು. ಇದಕ್ಕೆ ಕೇಂದ್ರದ ತೆರಿಗೆ ಅಂದಾಜು ೩೦ ರಿಂದ ೩೨ ರೂ. ಇದರೊಂದಿಗೆ ರಾಜ್ಯ ಸರ್ಕಾರಗಳು ವಿಧಿಸುವ ವ್ಯಾಟ್ ಅಥವಾ ಮಾರಾಟ ತೆರಿಗೆ ೨೩ ರೂಪಾಯಿಗಳು. ಎನ್ನುವಲ್ಲಿಗೆ ಜನರು ಸರ್ಕಾರಕ್ಕೆ ತೆರಿಗೆ ಕಟ್ಟುವುದರಲ್ಲೇ ಸುಸ್ತಾಗಿದ್ದಾರೆ ಎನ್ನುವುದು ಸತ್ಯ. ಕೇಂದ್ರ ಸರ್ಕಾರ ಆರ್ಥಿಕ ಕೊರತೆ ಸರಿದೂಗಿಸಲು ರಾಜ್ಯ ಸರ್ಕಾರಗಳ ಮೇಲೆ ಹೆಚ್ಚು ಸಾಲ ತೆಗೆದುಕೊಳ್ಳದಂತೆ ಒತ್ತಡ ಹೇರುತ್ತಿದೆ, ಜೊತೆಗೆ ಕೇಂದ್ರದಿಂದ ಕೊಡಬೇಕಾದ ತೆರಿಗೆ ಪಾಲು ಕೂಡ ಪೂರ್ತಿ ಕೊಡುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ರಾಜ್ಯ ಸರ್ಕಾರಗಳು ಬೆಲೆ ಅಥವಾ ತೆರಿಗೆ ಹೆಚ್ಚಳ ಮಾಡಲೇಬೇಕಿದೆ. ಇನ್ನು, ಪ್ರಮುಖ ವಿಷಯವೆಂದರೇ, ಇತ್ತೀಚೆಗೆ ವಿಧಾನಸಭೆಯಲ್ಲಿ ೨೦೨೨-೨೩ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಚರ್ಚೆಯ ಸಂದರ್ಭ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೇಂದ್ರದ ತೆರಿಗೆ ಪಾಲಿನಲ್ಲಿ ಕರ್ನಾಟಕ ಸರ್ಕಾರಕ್ಕೆ ಆದಷ್ಟು ಅನ್ಯಾಯ ಬೇರೆ ಯಾವ ರಾಜ್ಯ ಸರ್ಕಾರಕ್ಕೂ ಆಗಿಲ್ಲ. ಕರ್ನಾಟಕವೊಂದರಲ್ಲೇ ಕೇಂದ್ರ ಸರ್ಕಾರ ವಾರ್ಷಿಕವಾಗಿ ತೆರಿಗೆ ರೂಪದಲ್ಲಿ ಸುಮಾರು ೩ ಲಕ್ಷ ಕೋಟಿ ಸಂಗ್ರಹಿಸುತ್ತದೆ. ರಾಜ್ಯಕ್ಕೆ ಸುಮಾರು ಶೇಕಡಾ ೪೨ರಷ್ಟು ಪಾಲು ಕೇಂದ್ರ ಸರ್ಕಾರ ನೀಡಬೇಕು. ಆದರೇ, ಕೇಂದ್ರ ಸರ್ಕಾರ ಕೇವಲ ೪೪ ಸಾವಿರ ಕೋಟಿ ಅಷ್ಟೇ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು, ಈ ಹಿಂದಿನ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪ ಕೂಡ ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ತೆರಿಗೆಯ ಪಾಲು ನೀಡುವಂತೆ ಕೇಳಿಕೊಂಡಿದ್ದರು. ಕಳೆದೆರಡು ವರ್ಷಗಳಿಂದ ಬಿಜೆಪಿಗೆ ೨೫ ಸಂಸದರನ್ನು ಕೊಟ್ಟ ದಕ್ಷಿಣ ಭಾರತದ ಏಕೈಕ ರಾಜ್ಯ ಕರ್ನಾಟಕಕ್ಕೂ ಕೇಂದ್ರದಿಂದ ನೀಡಬೇಕಾಗಿರುವ ತೆರಿಗೆ ಪಾಲು ಸರಿಯಾಗಿ ದೊರಕದೇ ರಾಜ್ಯದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ ಎನ್ನುವುದು ಇಲ್ಲಿ ಗಮನಾರ್ಹ. 

ತಮ್ಮ ಆಪ್ತ ಬಳಗದಲ್ಲಿರುವ ಉದ್ಯಮಪತಿಗಳ ಒಡೆತನದ ಕಾರ್ಪೋರೇಟ್ ಕಂಪೆನಿಗಳ ತೆರಿಗೆ ವಿನಾಯಿತಿ, ಕಾರ್ಪೋರೇಟ್ ತೆರಿಗೆ ಕಡಿತ, ವಿಶ್ವದ ಅಗ್ರ ಶ್ರೀಮಂತರ ಪಟ್ಟಿಯಲ್ಲಿರುವವರಿಗೆ ತೆರಿಗೆ ಕಡಿತ ಮಾಡುವ ಸರ್ಕಾರರಿಂದ ತೈಲಕ್ಕೆ ಹಾಕುವ ತೆರಿಗೆಯಲ್ಲಿ ವಿನಾಯಿತಿಯನ್ನು ನಿರೀಕ್ಷಿಸಿದರೇ ಪ್ರಯೋಜನ ಉಂಟೆ..? ಇನ್ನು, ಪರ್ಯಾಯ ವ್ಯವಸ್ಥೆಯ ಚಿಂತನೆಯಲ್ಲಿ ಸರ್ಕಾರ ಇದೆಯೇ ಅಂತ ಕೇಳಿದರೇ, ಹೌದು, ಬರೀ ಕರೆ ನೀಡುವುದರಲ್ಲಿ ಮತ್ತು ಭರವಸೆ ನೀಡುವುದರಲ್ಲಿ ಅಷ್ಟೇ. ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲದೇ ಇರುವಷ್ಟು ಬಡತನ ಬಂದಿದೆ ಈ ಸರ್ಕಾರಕ್ಕೆ. ಜಗತ್ತಿನ ಇತರೆ ದೇಶಗಳು ಆಧುನಿಕ ಪರ್ಯಾಯ ಇಂಧನದ ವ್ಯವಸ್ಥೆಯತ್ತ ಮುಖ ಮಾಡುತ್ತಿದ್ದರೇ, ಭಾರತ ಮಾತ್ರ ಇನ್ನೂ ತೈಲ ಬಳಕೆ ಮಾಡುತ್ತಿದೆ. ಹೌದು, ನಿಜ ಇದ್ಯಾವುದು ತತ್‌ಕ್ಷಣದಲ್ಲಿ ಕಾರ್ಯರೂಪಕ್ಕೆ ಬರುವುದಕ್ಕೆ ಸಾಧ್ಯವಿಲ್ಲ. ಆದರೇ, ಆ ಮುಖವಾಗಿ ಚಿಂತನೆ ಮಾಡುವುದಕ್ಕೆ, ವ್ಯವಸ್ಥೆ ಸಿದ್ಧತೆ ಮಾಡಿಕೊಳ್ಳುವುದಕ್ಕೆ ಹಾಗೂ ತೆರಿಗೆ ಸಂಗ್ರಹದ ವಿಚಾರದಲ್ಲಿ ಹೊಸ ವ್ಯವಸ್ಥೆಯ ಬಗ್ಗೆ ಗಮನ ಹರಿಸುವುದಕ್ಕೆ ಹೇರಳವಾದ ಅವಕಾಶವಿದೆ. ಆದರೇ, ಆ ಮುಖವಾಗಿ ಚಿಂತನೆಗಳು ಆಗುತ್ತಿವೆಯಾ..? ಆಗುತ್ತಿದ್ದರೇ, ಎಷ್ಟರ ಮಟ್ಟಿಗೆ ಆಗುತ್ತಿದೆ..? ಹೌದು, ದೇಶದಲ್ಲಿ ಬಹಳ ಪ್ರಮುಖವಾಗಿ ‘ಪರೆಶಾನಿ ಪೇ ಚರ್ಚಾ’ (ಸಮಸ್ಯೆಗಳ ಬಗ್ಗೆ ಚರ್ಚೆ) ತುರ್ತಿದೆ.

-ಶ್ರೀರಾಜ್ ವಕ್ವಾಡಿ              


No comments:

Post a Comment