Wednesday, December 7, 2022

ಪಟೇಲರ ಸಾಮ್ರಾಜ್ಯದಲ್ಲಿ ಗೆದ್ದ ರಾಜಕೀಯ ಆಟ

(ಸಾಂದರ್ಭಿಕ ಚಿತ್ರ) 

ಸರ್ದಾರ್ ‘ಏಕತಾ ಪ್ರತಿಮೆ’ಯ ಹಿಂದೆ ಮರೆಯಾಗಿ ಉಳಿದ ಮೋದಿ ಜಾತಿ ಲೆಕ್ಕಾಚಾರ..!   

ಜಾತಿ ಲೆಕ್ಕಾಚಾರವನ್ನು ಬಿಟ್ಟು ಯಾವ ರಾಜಕೀಯವೂ ನಡೆಯುವುದಿಲ್ಲವೆಂಬುವುದು ಲೋಕಸತ್ಯ. ಚುನಾವಣೆ ಬಂದಾಗ ತನ್ನ ಪಾರುಪತ್ಯದೊಳಗಿರುವ ಎಲ್ಲಾ ಜಾತಿ ಸಮುದಾಯಗಳನ್ನು ಓಲೈಸುವ ದೃಷ್ಟಿಯಲ್ಲಿ ಯೋಜನೆಗಳನ್ನು, ಅನುದಾನಗಳನ್ನು ಬಿಡುಗಡೆ ಮಾಡುವುದು ಅಥವಾ ಭರವಸೆ ನೀಡುವುದು ರಾಜಕೀಯ ಪಕ್ಷಗಳ ಸಾಮಾನ್ಯ ಗುಣಲಕ್ಷಣ. ಜಾತಿ ಲೆಕ್ಕಾಚಾರದಲ್ಲೇ ಬದುಕುವ ರಾಜಕೀಯದ ಒಳಸುತ್ತಿನ ಆಟ ಸಾಮಾನ್ಯವಾಗಿ ಅಧಿಕಾರವಧಿಯ ಒಳ್ಳೆಯ ಕೆಲಸವೇ ಎಂದು ಬಿಂಬಿತವಾಗುವುದು ರಾಜಕೀಯದ ಗುಟ್ಟು. ಸದ್ಯ ಗುಜರಾತ್‌ನಲ್ಲಿ ಚುನಾವಣೆ ನಡೆದಿದ್ದು, ರಾಷ್ಟ್ರೀಯ ಪಕ್ಷಗಳಾದ ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಕೂಡ ಜಾತಿ ಲೆಕ್ಕಾಚಾರದ ಮೂಲಕವೇ ಚುಣಾವಣೆ ಮುಗಿಸಿವೆ. 

ಪಟೇಲ್ ಸಮುದಾಯ ಗುಜರಾತ್‌ನ ಪ್ರಬಲ ಸಮುದಾಯ. ಈ ಸಮುದಾಯವನ್ನು ಓಲೈಸಿಕೊಳ್ಳುವುದು ಗುಜರಾತ್ ರಾಜಕೀಯದ ಪರಮ ಅಸ್ತ್ರ. ಗುಜರಾತ್‌ನಲ್ಲಿ ಪಟೇಲ್ ಸಮುಧಾಯ ಚುನಾವಣೆಯ ನಿರ್ಣಾಯಕ ಸಮುದಾಯ. ಪಟೇಲ್ ಮತದಾರರ ಬಾಹುಳ್ಯವಿರುವ ಗುಜರಾತ್‌ನಲ್ಲಿ ಅದೇ ಸಮುದಾಯದ ಅಭ್ಯರ್ಥಿಗಳನ್ನೇ ಹೆಚ್ಚಾಗಿ ಕಣಕ್ಕಿಳಿಸಿ ಅಧಿಕಾರ ಅನುಭವಿಸಿದ್ದು ಗುಜರಾತ್‌ನ ರಾಜಕೀಯ ಇತಿಹಾಸ ಹೇಳುತ್ತದೆ. ಈ ಬಾರಿಯ ಚುನಾವಣೆಯೂ ಅದರಂತೆಯೇ ಮುಗಿದಿದೆ. 

ಆಶ್ಚರ್ಯವೆನ್ನಿಸಿದರೂ ಕೂಡ ಪ್ರಸ್ತುತ ಗುಜರಾತ್‌ನ ರಾಜಕೀಯದಲ್ಲಿ ಶೇಕಡಾ ೨೫ ರಷ್ಟು ಶಾಸಕರು ಹಾಗೂ ಸಂಸದರು ಇದೇ ಸಮುದಾಯದವರು ಎನ್ನುವುದು ಇಲ್ಲಿ ಗಮನಾರ್ಹ. ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲರಾಗಿರುವ ಈ ಸಮುದಾಯವನ್ನೇ ರಾಜಕೀಯ ಪಕ್ಷಗಳು ಇಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೆ ಸದಾ ಬಳಸಿಕೊಳ್ಳುತ್ತವೆ ಎನ್ನುವುದ ಗುಜರಾತ್ ರಾಜಕೀಯದ ಸತ್ಯ.  

ಗುಜರಾತ್‌ನ ಪಾಟಿದಾರ ಸಮುದಾಯವನ್ನು ವಿಶ್ವದಾದ್ಯಂತ ಪಟೇಲರು ಎಂದು ಕರೆಯಲಾಗುತ್ತದೆ. ಕೃಷಿ ಮೂಲ ಸಂಸ್ಕೃತಿಯಿಂದ ಬಂದ ಈ ಸಮುದಾಯ ಮೂಲತಃ ಪಂಜಾಬ್‌ನವರು. ಪಂಜಾಬ್‌ನಲ್ಲಿ ಗೆದ್ದು ಬೀಗಿದ ನಂತರ ಆಮ್ ಆದ್ಮಿ ಪಕ್ಷ ಗುಜರಾತ್‌ನತ್ತ ಕಣ್ಣಿಟ್ಟಿದ್ದು ಈ ಕಾರಣಕ್ಕೂ ಹೌದು. ಸುಲ್ತಾನರ ಕಾಲಘಟ್ಟದಲ್ಲಿ ಕೃಷಿ ಮಾಡುವ ಸಲುವಾಗಿ ಪಂಜಾಬ್‌ನಿಂದ ಈ ಸಮುದಾಯದವರನ್ನು ಇಲ್ಲಿಗೆ ಕರೆತಂದು ಹಳ್ಳಿಹಳ್ಳಿಗಳನ್ನೇ ಕೃಷಿ ಗುತ್ತಿಗೆಗೆ ನೀಡಲಾಯಿತು ಎನ್ನುವುದು ಗುಜರಾತ್‌ನ ಐತಿಹಾಸಿಕ ಸತ್ಯ.

ಪಟೇಲರಿಲ್ಲದೇ ಗುಜರಾತ್‌ನಲ್ಲಿ ಯಾವುದೂ ಯಶಸ್ವಿಯಾಗುವುದಕ್ಕೆ ಖಂಡಿತ ಸಾಧ್ಯವಿಲ್ಲ. ಕೆಲವು ದಶಕಗಳಿಂದ ರಾಜಕೀಯದಲ್ಲಿರುವ ಪಟೇಲ್ ಸಮುದಾಯ ಗುಜರಾತ್‌ನಲ್ಲಿ ಸುಮಾರು ೧೪ ಶೇಕಡಾದಷ್ಟು ಮಂದಿ ಇದ್ದಾರೆ. ಪಟೇಲ ಸಮುದಾಯವನ್ನು ಕಡೆಗಣಿಸಿದ ಪಕ್ಷ ಅಧಿಕಾರ ಕಳೆದುಕೊಂಡ ಉದಾಹರಣೆಯೂ ಗುಜರಾತ್‌ನಲ್ಲಿ ಇದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಚುನಾವಣೆ ವಿಚಾರದಲ್ಲಿ ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತದೆಯೋ ಹಾಗೆಯೇ ಗುಜರಾತ್‌ನಲ್ಲಿ ಪಾಟೀದಾರ ಸಮುದಾಯ ಅಥವಾ ಈ ಪಟೇಲ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ. ಪಟೇಲ್ ಸಮುದಾಯವನ್ನು ನಿರ್ಲಕ್ಷಿಸಿದ ಕಾಂಗ್ರೆಸ್, ಸುಮಾರು ಇಪ್ಪತ್ತೇಳು ವರ್ಷಗಳಿಂದ ಅಧಿಕಾರದಿಂದ ಹೊರಗೆ ಉಳಿದಿರುವುದು ಈ ಸಮುದಾಯದ ಪ್ರಾಬಲ್ಯವನ್ನು ತಿಳಿಸುತ್ತದೆ. 

ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಗುಜರಾತ್‌ನಲ್ಲಿ ಪಟೇಲ್ ಸಮುದಾಯವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡ ಬಿಜೆಪಿ, ಪ್ರತಿ ಚುನಾವಣೆಯಲ್ಲಿ ಸರಿಸುಮಾರು ಎಂಬತ್ತರಿಂದ ಎಂಬತ್ತೈದು ಶೇಕಡಾದಷ್ಟು ಪಟೇಲ್ ಸಮುದಾಯದ ಮತಗಳನ್ನು ತನ್ನದಾಗಿಸಿಕೊಳ್ಳುತ್ತದೆ ಎನ್ನುವುದು ಇಲ್ಲಿನ ರಾಜಕೀಯ. ಕರ್ನಾಟಕದಲ್ಲಿ ಹೇಗೆ ಲಿಂಗಾಯತ ಸಮುದಾಯ ಬಿಜೆಪಿಯನ್ನು ಚುನಾವಣೆಯಲ್ಲಿ ಪೊರೆಯುತ್ತದೆಯೋ ಹಾಗೆಯೇ ಗುಜರಾತ್‌ನಲ್ಲಿ ಬಿಜೆಪಿಯನ್ನು ಪೊರೆಯುತ್ತಿರುವುದು ಪಟೇಲ್ ಸಮುದಾಯ. 

ಪ್ರಸ್ತುತ ವಿಧಾನಸಭೆಯ ಒಟ್ಟು ೧೮೨ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ೪೪ ಮಂದಿ ಪಾಟೀದಾರ ಅಥವಾ ಪಟೇಲ್ ಸಮುದಾಯದವರು. ಗುಜರಾತ್‌ನ ಬರೋಬ್ಬರಿ ೮೩ ವಿಧಾಸಭಾ ಕ್ಷೇತ್ರಗಳ ತೀರ್ಪನ್ನು ಇದೇ ಸಮುದಾಯ ನಿರ್ಧರಿಸುತ್ತವೆ ಎನ್ನುವುದು ಇದರ ರಾಜಕೀಯ ಗುಟ್ಟು. ಈ ೮೩ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ಶೇಕಡಾ ೩೫ಕ್ಕೂ ಹೆಚ್ಚು ಈ ಸಮುದಾಯದವರಿದ್ದಾರೆ. ಇವರ ಮತಗಳು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀಳುತ್ತವೆ.

ಇದೇ ಸಮುದಾಯದಿಂದ ರಾಜಕೀಯ ಪ್ರವೇಶಿಸಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದವರ ಪಟ್ಟಿ ಗುಜರಾತ್‌ನಲ್ಲಿ ದೊಡ್ಡದಿದೆ. ಈ ಸಮುದಾಯ ಮತ್ತು ರಾಜಕೀಯದ ನಂಟಿನ ಇತಿಹಾಸವನ್ನು ಗಮನಿಸುವುದಾದರೇ, ಗುಜರಾತ್‌ನಲ್ಲಿ ಒಟ್ಟು ಎಂಟು ಸಾರ್ತಿ ಐದು ಮಂದಿ ಪಾಟೀದಾರ್ ಸಮುದಾಯದ ರಾಜಕೀಯ ನಾಯಕರು ಇಲ್ಲಿ ಮುಖ್ಯಮಂತ್ರಿಗಳಾಗಿ ಆಳ್ವಿಕೆ ನಡೆಸಿದ್ದಾರೆ. (ಚಿಮ್‌ನಾಭಾಯ್ ಪಟೇಲ್(ಕಾಂಗ್ರೆಸ್) , ಬಾಬುಭಾಯ್ ಪಟೇಲ್(ಜನತಾ ಮೋರ್ಚಾ, ಜನತಾ ಪಾರ್ಟಿ). ಕೇಶುಭಾಯ್ ಪಟೇಲ್(ಬಿಜೆಪಿ), ಆನಂದಿಬೇನ್ ಪಟೇಲ್ (ಬಿಜೆಪಿ), ಭೂಪೇಂದ್ರಭಾಯ್ ಪಟೇಲ್ (ಬಿಜೆಪಿ)ತಮ್ಮ ರಾಜಕೀಯ ಹಾಗೂ ಸಮುದಾಯದ ಬಲದ ಮೇಲೆ ಮುಖ್ಯಮಂತ್ರಿಗಳಾದವರು). 

ಮಧ್ಯ ಗುಜರಾತ್(ಲೇಯುವಾ ಪಟೇಲರು ಹೆಚ್ಚಿರುವ ಪ್ರದೇಶ) ಹಾಗೂ ಸೌರಾಷ್ಟ್ರ(ಕಡ್ವಾ ಪಟೇಲರ ಬಾಹುಳ್ಯವಿರುವ ಪ್ರದೇಶ) ಭಾಗಗಳಲ್ಲಿ ಹೆಚ್ಚಿರುವ ಈ ಸಮುಧಾಯ ರಾಜಕೀಯ ಹಾಗೂ ಸಂಘಟನೆ, ಚಳುವಳಿ ವಿಚಾರದಲ್ಲಿ ತಮ್ಮದೇ ಆದಂತಹ ಪ್ರಭಾವವನ್ನು ಹೊಂದಿದ್ದಾರೆ. ಗುಜರಾತ್‌ನ ಒಟ್ಟು ೬೦.೪ ಮಿಲಿಯನ್ ಜನಸಂಖ್ಯೆಯಲ್ಲಿ ಸುಮಾರು ಒಂದು ಕೋಟಿ ಹತ್ತು ಲಕ್ಷದಷ್ಟು ಮಂದಿ ಈ ಸಮುದಾಯದವರಿದ್ದಾರೆ (ಸುಮಾರು ಒಟ್ಟು ಜನಸಂಖ್ಯೆಯ ೧೪ ಶೇಕಡಾದಷ್ಟು ಜನ. ಸುಮಾರು ಶೇಕಡಾ ೬೦ರಷ್ಟು ಲೆಯುವಾ ಪಟೇಲ್ ಹಾಗೂ ಸುಮಾರು ಶೇಕಡಾ ೪೦ರಷ್ಟು ಕಡ್ವಾ ಪಟೇಲ್). 

ಪಟೇಲ್ ಸಮುದಾಯದ ಯುವಶಕ್ತಿಯನ್ನು ಕಳೆದುಕೊಂಡ ಕಾಂಗ್ರೆಸ್ : ಎರಡು-ಮೂರು ದಶಕಗಳ ಕಾಲದಿಂದ ಗುಜರಾತ್‌ನನ್ನು ಆಳ್ವಿಕೆ ಮಾಡಿದ ಬಿಜೆಪಿ ಎದರು ಕಾಂಗ್ರೆಸ್ ಹೇಳಹೆಸರಿಲ್ಲದಂತಾಗಿತ್ತು. ೨೦೧೭ರಲ್ಲಿ ಹಾರ್ದಿಕ ಪಟೇಲ್ ಕಾಂಗ್ರೆಸ್‌ನಲ್ಲಿ ಇದ್ದಾಗ ಪಾಟೀದಾರ್ ಚಳುವಳಿಯ ನೇತೃತ್ವ ವಹಿಸಿದ್ದರು. ಅಷ್ಟಾಗಿಯೂ ಗುಜರಾತ್‌ನ ಪಟೇಲರು ಬಿಜೆಪಿಯನ್ನು ಬಿಟ್ಟುಕೊಟ್ಟಿಲ್ಲ. ಆದರೂ ದಕ್ಷಿಣ ಗುಜರಾತ್ ಹಾಗೂ ಸೌರಾಷ್ಟ್ರದ ಕೆಲವಡೆ ಪಟೇಲರು ಅಕ್ಷರಶಃ ಕಾಂಗ್ರೆಸ್‌ನನ್ನು ಬೆಂಬಲಿಸಿದ್ದರು ಎನ್ನುವುದು ಸತ್ಯ. ಹೌದು, ಕಳೆದ ಬಾರಿಯ ಗುಜರಾತ್‌ನ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಸುದ್ದಿಯಲ್ಲಿದ್ದ ಒಂದೇ ಒಂದು ಹೆಸರು ಹಾರ್ದಿಕ್ ಪಟೇಲ್. ರಾಜ್ಯಾದ್ಯಂತ ಪಟೇಲ್ ಸಮುದಾಯವನ್ನು ಒಗ್ಗೂಡಿಸಿದ ಹಾರ್ದಿಕ್ ಎಂಬ ಯುವ ನಾಯಕ ಗುಜರಾತ್‌ನಲ್ಲಿ ಒಂದು ಹಂತದಲ್ಲಿ ಬಿಜೆಪಿಯ ನಿದ್ದೆಗೆಡಿಸಿದ್ದ. ಈ ಯುವಕನ ಸಾಮರ್ಥ್ಯ ಅರಿತ ಕಾಂಗ್ರೆಸ್, ತನ್ನೊಳಗೆ ಸೇರಿಸಿಕೊಂಡಿತ್ತು. ಕಾಂಗ್ರೆಸ್‌ಗೆ ಇದರಿಂದ ಒಂದಿಷ್ಟು ಲಾಭವೂ ಆಗಿತ್ತು. ಆದರೇ, ಈಗ ಹಾರ್ದಿಕ ಕಾಂಗ್ರೆಸ್‌ನೊAದಿಗಿನ ಆಂತರಿಕ ವೈಮನಸ್ಸಿನ ಕಾರಣದಿಂದಾಗಿ ಬಿಜೆಪಿ ಸೇರಿಕೊಂಡಿದ್ದಾರೆ. ಇತ್ತ ಸೌರಾಷ್ಟ್ರ ಭಾಗದ ಪ್ರಭಾವಿ ಉದ್ಯಮಿ ಹಾಗೂ ಶ್ರೀ ಖೋಡಾಲ್ದಾಮ್ ಟ್ರಸ್ಟ್‌ನ ಅಧ್ಯಕ್ಷ ನರೇಶ್ ಪಟೇಲ್ ಕೂಡ ತಣ್ಣಗಾಗಿದ್ದು, ಕಾಂಗ್ರೆಸ್ ಪಾಲಿಗೆ ದೊಡ್ಡ ನಷ್ಟವೇ ಆಗಿದೆ ಎಂದರೇ ತಪ್ಪಿಲ್ಲ. 

ಸರ್ಧಾರ್ ಏಕತಾ ಪ್ರತಿಮೆ ಮೋದಿ ಮಾಸ್ಟರ್ ಪ್ಲ್ಯಾನ್ :  ಪಟೇಲ್ ಸಮುದಾಯವನ್ನು ಓಲೈಸುವ ಕೆಲಸವನ್ನು ಮೋದಿ ಹಾಗೂ ಬಿಜೆಪಿ ಸರ್ಕಾರ ಮಾಡಿಕೊಂಡು ಬಂದಿದೆ. ಕಾಂಗ್ರೆಸ್‌ಗೆ ಟಕ್ಕರ್ ನೀಡುವ ಹಾಗೆ ಆದರ್ಶ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರ ಕಂಡ ಶ್ರೇಷ್ಟ ರಾಜಕಾರಣಿ ಎಂದೆಲ್ಲಾ ಸರ್ಧಾರ್ ವಲಭಭಾಯ್ ಪಟೇಲ್‌ರನ್ನು ರಾಜಕೀಯವಾಗಿ ವೈಭವೀಕರಿಸಿ, ನರ್ಮದಾ ನದಿಯ ಅಣೆಕಟ್ಟಿನ ಎದುರಾಗಿ ೨.೫ ಕೀಲೋಮೀಟರ್ ದೂರದ ಸಾಧು ಬೆಟ್ ಎಂಬ ದ್ವೀಪದಲ್ಲಿ ‘ಏಕತಾ ಪ್ರತಿಮೆ’ ಎಂಬ ಹೆಸರಿನಲ್ಲಿ ಒಬ್ಬ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕನೊಬ್ಬನ (ಮಹಾತ್ಮ ಗಾಂಧಿ ಹೊರತಾಗಿ) ೧೮೨ ಮೀಟರ್(ತಳಪಾಯ ೨೪೦ ಮೀಟರ್ ಎತ್ತರ) ಎತ್ತರದ ವಿಶ್ವದ ಅತೀ ಎತ್ತರದ ಉಕ್ಕು, ಬಲವರ್ದಿತ ಕಾಂಕ್ರೀಟ್, ಕಂಚಿನ ಲೇಪದ ಮೂರ್ತಿ ನಿಲ್ಲಿಸಿರುವ ಹಿಂದೆ ಮೋದಿ ಗುಜರಾತ್‌ನಲ್ಲಿ ಜಾತಿ ಲೆಕ್ಕಾಚಾರ ಮಾಡಿದ್ದರು. ಮೂಲತಃ ಸರ್ಧಾರ್ ವಲ್ಲಭಭಾಯ್ ಪಟೇಲ್ ಪಾಟೀದಾರ/ಪಟೇಲ್ ಸಮುದಾಯಕ್ಕೆ ಸೇರಿದವರು. ಸರ್ಧಾರ್ ಪಟೇಲ್ ಮೇಲೆ ಅಪಾರ ಗೌರವ ಇಟ್ಟುಕೊಂಡಿರುವ ಗುಜರಾತ್‌ನ ಪಾಟೀದಾರ್ ಸಮುದಾಯವನ್ನು ತನ್ನ ತೆಕ್ಕೆಯೊಳಗೆ ಇಟ್ಟುಕೊಳ್ಳುವುದಕ್ಕೆ ಮೋದಿ ೨೦೧೩ರಲ್ಲಿ ಹೆಣೆದ ಮಾಸ್ಟರ್ ಪ್ಲ್ಯಾನ್ ಇದು. ತಾನಿಲ್ಲದೆಯೂ ಗುಜರಾತ್‌ನಲ್ಲಿ ಬಿಜೆಪಿ ಮೇಲೆ ಪಟೇಲ್ ಸಮುದಾಯ ನಂಬಿಕೆ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಈ ರಾಜಕೀಯ ತಂತ್ರಗಾರಿಕೆ ಹೂಡಿದ್ದರು. ಇಲ್ಲದಿದ್ದರೇ, ಎಲ್ಲಿ ರಾಷ್ಟçದೊಳಗಿನ ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಸರ್ಧಾರ್ ಪಟೇಲ್ ? ಎಲ್ಲಿ ಮೋದಿ..? ವ್ಯಕ್ತಿತ್ವದಲ್ಲೂ, ರಾಜಕೀಯದಲ್ಲೂ, ಸಿದ್ಧಾಂತದಲ್ಲೂ ಸರ್ಧಾರ್ ಹತ್ತಿರಕ್ಕೂ ಮೋದಿಗೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕನೊಬ್ಬನ ಏಕತಾ ಮೂರ್ತಿ ಗುಜರಾತ್‌ನಲ್ಲಿ ಬಿಜೆಪಿಗೆ ಮತ್ತಷ್ಟು ರಾಜಕೀಯ ಮೈಜೇಜ್ ತಂದುಕೊಟ್ಟಿತ್ತು ಎಂದರೇ ತಪ್ಪಿಲ್ಲ. ಮತ್ತೇನೂ ಅಲ್ಲ. ಗುಜರಾತ್‌ನಲ್ಲಿ ಸರ್ಧಾರ ಪಟೇಲ್‌ರನ್ನು ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸುವುದಕ್ಕಾದರೂ ಬಳಸಿಕೊಳ್ಳುವಲ್ಲಿ ಒಂದಿಷ್ಟು ಚಿಂತಿಸಬಹುದಿತ್ತು, ಆದರೇ ಕಾಂಗ್ರೆಸ್, ತನ್ನದೇ ರಾಜಕೀಯ ಸೋರ್ಸ್ ನನ್ನು ತನ್ನ ಎದುರಾಳಿ ಪಕ್ಷಕ್ಕೆ ಅನಾಯಾಸ ಗ್ರಾಸವಾಗಿ ಬಿಟ್ಟುಕೊಡುವಷ್ಟು ಬೌದ್ಧಿಕ ಬಡಸ್ಥಿಕೆ ಹೊಂದಿತ್ತು ಎನ್ನುವುದು ಇಲ್ಲಿನ ವಿಷಯ. ಮೋದಿ ಚಾಣಾಕ್ಷತನದಿಂದ ಪಟೇಲ್ ಸಮುದಾಯದ ಅಪ್ರತಿಮ ನಾಯಕ ಸರ್ಧಾರ್ ಏಕತಾ ಪ್ರತಿಮೆಯನ್ನು ಗಗನಕ್ಕೇರಿಸಿ ಗುಜರಾತ್‌ನಲ್ಲಿ ಮಾತ್ರವಲ್ಲ, ದೇಶದಾದ್ಯಂತ ತನ್ನ ರಾಜಕೀಯ ವರ್ಚಸ್ಸನ್ನು ವೃದ್ಧಿಸಿಕೊಂಡರು. ಮೋದಿ ಪಟೇಲ್ ಸಮುದಾಯವನ್ನು ಬಿಜೆಪಿ ತೆಕ್ಕೆಯೊಳಗೆ ಇಟ್ಟುಕೊಳ್ಳುವ ಸಲುವಾಗಿ ನಿರ್ಮಿಸಿದ ಏಕತಾ ಪ್ರತಿಮೆಯನ್ನು ಇಡೀ ದೇಶ, ಪ್ರಧಾನಿ ಮೋದಿ ಭಾರತೀಯ ಪ್ರವಾಸೋದ್ಯಮಕ್ಕೆ ಎಂದೂ ಎಲ್ಲೂ ಇಲ್ಲದ ಮಹತ್ವದ್ದನ್ನು ನೀಡಿದ್ರು ಎಂದು ಕುರುಡಾಗಿ ನಂಬಿರುವುದು ಈ ದೇಶದ ದುರಂತಗಳಲ್ಲೊಂದು.      

-ಶ್ರೀರಾಜ್ ವಕ್ವಾಡಿ 

No comments:

Post a Comment