Wednesday, December 14, 2022

ರಾಜಕೀಯದಲ್ಲಿ ಗೆಲ್ಲುತ್ತಿರುವ ಡಬಲ್ ಥಿಂಕ್ ಥಿಯರಿ

(ಸಾಂದರ್ಭಿಕ ಚಿತ್ರ)

ಪ್ರಧಾನಿ ಬಾಯಿಂದಲೇ ಬಂದ 'ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದವರ ಮಾತು ಕೇಳಬೇಡಿ'

ಭಾರತವು ಸುಳ್ಳಿನ ರಾಜಕೀಯದ ದವಡೆಯಲ್ಲಿ ನಲುಗುತ್ತಿದೆ. ಯಾರು ಸುಳ್ಳಿನ ಭರವಸೆ ನೀಡಿ ಅಧಿಕಾರ ಹಿಡಿದರೋ ಅವರೇ ಇಂದು 'ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದವರ ಮಾತು ಕೇಳಬೇಡಿ' ಎಂದು ಹೇಳುತ್ತಿರುವುದು ನಿಜಕ್ಕೂ ನಗೆಪಾಟಲಿಗೆ ಈಡಾಗುತ್ತಿದೆ.

ಸುಳ್ಳನ್ನು ಸತ್ಯ ಮಾಡುವುದಕ್ಕೆ, ಸತ್ಯವನ್ನು ಸುಳ್ಳು ಮಾಡುವುದಕ್ಕೆ ಇರುವ ಏಕೈಕ ಮಾಧ್ಯಮವೆಂದರೇ ಅದು ರಾಜಕೀಯ. ರಾಜಕೀಯ ನಡೆಸುವ ಸುಳ್ಳಿನ ಅಲೆಯನ್ನು ಕೇವಲ ಸತ್ಯ ಪರಿಶೀಲನೆಯಿಂದ ಸೋಲಿಸುವುದಕ್ಕೆ ಖಂಡಿತ ಸಾಧ್ಯವಿಲ್ಲ. ಸಾಮೂಹಿತ ಬುದ್ಧಿಯನ್ನು ಅಥವಾ 'ಮಾಸ್ ಬ್ರೈನ್'ನನ್ನು ಸುಳ್ಳಿನ ಹೇರಿಕೆಯಲ್ಲಿ ಮಂದಗೊಳಿಸಿದ ರಾಜಕೀಯ ದೇಶ ಕಂಡ ದೊಡ್ಡ ದುರಂತಗಳಲ್ಲೊಂದು.

 ದೇಶದಲ್ಲಿ ಮೋದಿ ಸರ್ಕಾರ ಬಳಸಿಕೊಂಡಿದ್ದು 'ಡಬಲ್ ಥಿಂಕ್' ಥಿಯರಿ. ಸಾಮಾಜಿಕ ಅನ್ಯಾಯದ ಗಹನ ತಿಳಿವಳಿಕೆ, ಸರ್ವಾಧಿಕಾರ ನಾಯಕತ್ವ ಗಾಢ ವಿರೋಧಿ ಜಾರ್ಜ್ಆರ್ವೆಲ್ಥೀಯರಿಯ ಪ್ರಕಾರ, 'ಅತ್ಯಂತ ಧಮನಕಾರಿ, ಸರ್ವಾಧಿಕಾರಿಯ ಶೇಡ್ ಇರುವ ನಾಯತ್ವದ ಆಡಳಿತ ಸುಳ್ಳನ್ನು ವೈಭವೀಕರಿಸಿ, ಸತ್ಯವನ್ನು ಪಾತಾಳಕ್ಕೆ ತಳ್ಳುತ್ತವೆ'. 'ಜನರು ಸುಳ್ಳನ್ನೇ ಸತ್ಯವೆಂದು ಕುರುಡಾಗಿ ನಂಬುತ್ತಾರೆ' 'ಪ್ರಜಾಪ್ರಭುತ್ವದ ಸ್ವಾತಂತ್ರ್ಯವನ್ನು ಗುಲಾಮಗಿರಿಯನ್ನಾಗಿ ಪರಿವರ್ತಿಸಲು ಪರಿಣಾಮಕಾರಿಯಾಗಿ ಶ್ರಮಿಸುತ್ತಾರೆ'. ಹೌದು, ಸದ್ಯಕ್ಕೆ ಭಾರತದಲ್ಲಿ ಇದೇ ಪರಿಸ್ಥಿತಿಯನ್ನು ದೇಶದ ನಾಗರಿಕರು ಹಂತ ಹಂತವಾಗಿ ಕಾಣುತ್ತಿದ್ದಾರೆ ಎನ್ನುವುದು ಸ್ಪಷ್ಟ.

ಇವೆಲ್ಲವನ್ನೂ ನೀರೆರೆದು ಪೋಷಿಸುತ್ತಿರುವುದು ದೇಶದ ಅತ್ಯಂತ ದುರ್ಬಲ ವಿರೋಧ ಪಕ್ಷ, ಆಡಳಿತ ಪಕ್ಷದ ಮುಖವಾಣಿಯಂತೆ ಕಾರ್ಯ ನಿರ್ವಹಿಸುತ್ತಿರುವ  ಮಾಧ್ಯಮ(ಆಡಳಿತ ಪಕ್ಷಗಳ ಮಡಿಲ ಕೂಸುಗಳಂತಿರುವ ಮಾಧ್ಯಮಗಳು) , ಸಾಮಾಜಿಕ ಮಾಧ್ಯಮದ ಸುಳ್ಳಿನ ಕಾರ್ಖಾನೆಗಳು, ರಾಜಕೀಯ ನಾಯಕರ ವ್ಯಕ್ತಿತ್ವ ಆರಾಧನೆ, ಮತದಾರರ ಕುರುಡು ನಂಬಿಕೆಗಳು ದೇಶದ ರಾಜಕಾರಣವನ್ನು ಹದಗೆಡಿಸುವ ಪ್ರಮುಖಾಂಶಗಳು. ಇಲ್ಲಿ ನಡೆಯುತ್ತಿರುವುದು ಅಧಿಕಾರದ ಸರಳ ಸುಳ್ಳುಗಳ ಪ್ರತಿಪಾದನೆ. ಯಾರು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಾರೆ ಮತ್ತು ಅವರ ಸುಳ್ಳುಗಳು ಸಿಲುಕಿಕೊಳ್ಳದಂತೆ  ಯಾರು ಹಿಂದೆ ಸರಿಯುತ್ತಾರೆ ಎಂಬ ಸ್ಪರ್ಧೆಯಾಗಿ ದೇಶದ ರಾಜಕೀಯ ಮಾರ್ಪಟ್ಟಿದೆ.

ಇದೊಂದು ವಿಚಾರವನ್ನು ಸ್ಪಷ್ಟವಾಗಿ ಗಮನಿಸಿ, 2016 ರಲ್ಲಿ, ಕ್ರಿಸ್ಟೋಫರ್ ಪಾಲ್ ಮತ್ತು ಮಿರಿಯಮ್ ಮ್ಯಾಥ್ಯೂಸ್ ಅವರು  ರಾಷ್ಟ್ರೀಯ ಭದ್ರತೆಯ ಮೂಲ ಗಹನವನ್ನು ಹೊಂದಿರುವ ರೀಸರ್ಚ್ ಅಂಡ್ ಡೆವೆಲಪ್ಮೆಂಟ್ ಕಾರ್ಪೊರೇಷನ್ ಎಂಬ ಅಮೇರಿಕನ್ ಥಿಂಕ್-ಟ್ಯಾಂಕ್ ಗೆ ಬರೆದ ಪತ್ರದಲ್ಲಿ, ರಷ್ಯಾದಲ್ಲಿ ವ್ಲಾಡಿಮಿರ್ ಪುಟಿನ್ ಸರ್ಕಾರವು ಬಳಸಿದ ಪ್ರಚಾರ ತಂತ್ರಗಳನ್ನು ವಿಶ್ಲೇಷಿಸಿದ್ದಾರೆ. ಅವರು ಅದನ್ನು "ಸುಳ್ಳಿನ ಫೈರ್ ಹೌಸ್" ಎಂದು ಕರೆದರು ರಷ್ಯಾದ ಮಾದರಿಯು ನಿಮ್ಮನ್ನು ಸುಳ್ಳನ್ನು ನಂಬುವಂತೆ ಮಾಡುವುದು ಅಷ್ಟೇ ಅಲ್ಲ - ಸುಳ್ಳು ಸಾಮಾನ್ಯವಾಗಿ ಸುಳ್ಳಾಗಿರುತ್ತದೆ, ಅದನ್ನು ನಂಬಲು ನೀವು ಮೂರ್ಖರಾಗುತ್ತೀರಿ. "ಮನರಂಜಿಸುವುದು, ಗೊಂದಲಗೊಳಿಸುವುದು ಮತ್ತು ಅಶಕ್ತರಾಗಿಸಿ ಮುಳುಗಿಸುವುದು" ಇಂತಹ ರಾಜಕೀಯ ಉದ್ದೇಶಗಳು ನಮ್ಮ ದೇಶದಲ್ಲೂ ಇದೆ ಎನ್ನುವುದು ಆಘಾತಕಾರಿ. ಮೋದಿ ರಷ್ಯಾದೊಂದಿಗೆ ಬೆಳಸಿಕೊಂಡ ಸ್ನೇಹ ಸಂಬಂಧದ ಹಿಂದೆ ಉದ್ದೇಶವೂ ಇರಬಹುದು ಎನ್ನುವುದನ್ನು ಹೇಗೆ ಅಲ್ಲಗೆಳೆಯುವುದಕ್ಕೆ ಸಾಧ್ಯ..?

'ಮೋದಿ ಭಾರತಕ್ಕೆ ದೇವರ ಕೊಡುಗೆ!' ಎಂದು ವೆಂಕಯ್ಯ ನಾಯ್ಡು ಅವರು ಉಪರಾಷ್ಟ್ರಪತಿ ಹುದ್ದೆಗೆ ಏರುವ ಮುನ್ನ ಘೋಷಿಸಿದ್ದರು. ಮತ್ತು ಬಿಜೆಪಿ ಪರವಾಗಿರುವ ಸೋ ಕಾಲ್ಡ್ ರಾಜಕೀಯ ವಿಶ್ಲೇಷಕರು ಇದನ್ನೇ ಹೇಳಿ ತಮ್ಮ ಜನ್ಮ ಪಾವನವಾಯಿತು ಎಂಬಂತೆ ವರ್ತಿಸುತ್ತಾರೆ ಎನ್ನುವುದು ದೇಶ ಕಂಡ ಪರಮ ಸತ್ಯ. ಇರಲಿ ಬಿಡಿ, ಇವೆಲ್ಲವನ್ನೂ ನಿಜವೆಂದೇ ಭಾವಿಸೋಣ, ನೋಟು ಅಮಾನ್ಯೀಕರಣದಂತಹ ರಾಜಕೀಯದ ಮಹಾಕಾವ್ಯ ಇಡೀ ದೇಶವನ್ನೇ ಸಾಮಾಜಿಕ, ಆರ್ಥಿಕ ಹೊಡೆತವನ್ನು ಇದೇ 'ದೇವರು' ಕೊಟ್ಟ ವರವೆಂದು ಏಕೆ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೇ, ಮೋದಿ ನಾಯಕತ್ವ ಇಡೀ ದೇಶವನ್ನು ಸ್ವತಂತ್ರವಾಗಿ ಯೋಚಿಸುವ ಬುದ್ಧಿ ಶಕ್ತಿಯನ್ನು ಸಾಮಾಜಿಕ ಜಾಲತಾಣಗಳ ವಿಶ್ವವಿದ್ಯಾಲಯಗಳ ಮೂಲಕ ರೋಬೋ ಪಾಲಿಟಿಕ್ಸ್ ತಂತ್ರ ಪ್ರಯೋಗಿಸಿ ಕಿತ್ತೊಗೆದಿದೆ.

 2019ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಜಕೀಯ ಪ್ರಚಾರ ಸಭೆಯಲ್ಲಿ ಮೋದಿ ಮಾತನಾಡುತ್ತಾ, "ನಿಮ್ಮ ಚೌಕಿದಾರ್ ಕರ್ತವ್ಯದಲ್ಲಿದ್ದಾಗ ದೇಶದ ಮೇಲೆ ಒಂದೇ ಒಂದು ಭಯೋತ್ಪಾದಕ ದಾಳಿ ನಡೆದಿದೆಯೇ?" ಎಂದು ಕೇಳಿದ್ದರು.  ಅವರು ಪ್ರಶ್ನೆಯನ್ನು ಕೇಳಿದ್ದು ಇದೇ ಮೊದಲಲ್ಲ. ಆದರೇ, ಇದು ಅಪಹಾಸ್ಯಕ್ಕೆ ಈಡಾಗಿತ್ತು ಎನ್ನುವುದಕ್ಕೆ ಇಲ್ಲಿ ಉಲ್ಲೇಖಿಲಾಗುತ್ತಿದೆ.  ಪಠಾಣ್ಕೋಟ್, ಗುರುದಾಸ್ಪುರ, ಅಮರನಾಥ ಯಾತ್ರೆ, ಉರಿ, ಪುಲ್ವಾಮಾ ಮುಂತಾದೆಡೆ ನಡೆದ ದಾಳಿಗಳು ಭಯೋತ್ಪಾದಕರ ದಾಳಿಯಲ್ಲ ಎಂದು ಪರಿಗಣಿಸಿದರೇ ಇಲ್ಲಿ ಯಾವುದೇ ಅಭ್ಯಂತರವಿಲ್ಲ. ಆದರೇ, ಇವೆಲ್ಲವೂ ಭಯೋತ್ಪಾದಕ ದಾಳಿ ಎಂದು ಪರಿಗಣನೆಗೆ ಒಳಗಾಗಿರುವುದರಿಂದ , ಮೋದಿ ಪ್ರಶ್ನೆಯನ್ನು ಮತ್ತೆ ನೆನಪಿಸುತ್ತದೆ. ನಿಮ್ಮ ಗಮನಕ್ಕೆ, ಕೇಂದ್ರ ಸರ್ಕಾರ ನೀಡಿರುವ ಅಂಕಿಅಂಶಗಳು ಹೇಳಿಕೆಯನ್ನು ಅಲ್ಲಗಳೆಯುತ್ತವೆ. ಡಿಸೆಂಬರ್ 19, 2018 ರಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರ ಲಿಖಿತ ಹೇಳಿಕೆಯ ಪ್ರಕಾರ , ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 872 ಭಯೋತ್ಪಾದಕ ದಾಳಿಗಳು, ಈಶಾನ್ಯದಲ್ಲಿ 1366 ಭಯೋತ್ಪಾದನಾ ಕೃತ್ಯಗಳು ಮತ್ತು 3045 ಭಯೋತ್ಪಾದನಾ ಕೃತ್ಯಗಳು ನಕ್ಸಲೀಯರನ್ನು ಒಳಗೊಂಡಿವೆ ಎನ್ನುವುದನ್ನು ಹೇಳುತ್ತವೆ. ಗಮನಿಸಿ ಒಬ್ಬ ಸಾಮಾನ್ಯ ನಾಗರಿಕನಾಗಿ ಯೋಚಿಸಿ‌, ರಾಜಕೀಯ ಭಾಷಣಗಳಲ್ಲಿ ಎಷ್ಟು ಸುಳ್ಳುಗಳನ್ನು ಹರಡಲಾಗುತ್ತದೆ ಮತ್ತು ನೀವೆಷ್ಟು ಮೂರ್ಖರಾಗಿ ಅದನ್ನು ನಂಬುತ್ತೀರಿ ಎಂದು.  ವಾಸ್ತವವಾಗಿ, ಬಿಜೆಪಿ ಐಟಿ ಸೆಲ್ನಿಂದ ಅನೇಕ ಪೋಸ್ಟ್ಗಳು ಮತ್ತು ವೀಡಿಯೊಗಳಲ್ಲಿಯೂ ಇಂತಹ ಸುಳ್ಳಿನ ಸಾಲುಗಳನ್ನೇ ಹರಡಿ ದೇಶದ ನಾಗರಿಕರನ್ನು ತಮ್ಮ ರಾಜಕೀಯಕ್ಕಾಗಿ ಬುದ್ಧಿ ಹೀನರನ್ನಾಗಿ ಬಳಸಿಕೊಂಡಿದೆ. ಅಷ್ಟೇಕೆ, ಸುಳ್ಳುಗಳು ಮತ್ತು ಅರ್ಧ-ಸತ್ಯಗಳನ್ನು ಕಲ್ಪಿಸುವ ಮತ್ತು ಪ್ರಸಾರ ಮಾಡುವ ಇಂತಹ ರಾಷ್ಟ್ರೀಯ ಪಕ್ಷಗಳ ಐಟಿ ಸೆಲ್ ಗಳ ದುಷ್ಕ್ರತ್ಯಗಳನ್ನು ಅನೇಕ ತನಿಖಾ ವರದಿಗಳು ಬಯಲಿಗೆಳೆದಿದ್ದು ಕೂಡ ಇದೆ ಎನ್ನುವುದು ಇಲ್ಲಿ ಗಮನಾರ್ಹ.

ಮೋದಿ ಹೇಳಿದ ಸುಳ್ಳುಗಳ ಬಗ್ಗೆ ಮತ್ತಷ್ಟು ಉದಾಹರಣೆಗಳನ್ನು ಮತ್ತು ಮೋದಿ ಜನರಿಗೆ ವಂಚಿಸಿರುವ ಬಗ್ಗೆ ಮತ್ತಷ್ಟು ಹೇಳಬಹುದು ಆದರೇ, ಮತ್ತೆ ಮತ್ತೆ ಹೇಳಿದರೇ ಅದು ವಾಕರಿಕೆ ಬರುವಷ್ಟಾಗಬಹುದು. ಇಂತಹ ಒಬ್ಬ ಮಾಸ್ ಲೀಡರ್, ಗೌರವಾನ್ವಿತ ರಾಜಕೀಯ ವರ್ಚಸ್ಸನ್ನು ಹೊಂದಿರುವ ವ್ಯಕ್ತಿ ತನ್ನ ರಾಜಕೀಯಕ್ಕೋಸ್ಕರ ಇಷ್ಟೆಲ್ಲಾ ಸುಳ್ಳು ಹೇಳುವ ಅಗತ್ಯ ಏಕಿದೆ..? ರಾಷ್ಟ್ರೀಯವಾದಿ ಪುರುಷತ್ವದ ಸರ್ಟಿಫಿಕೇಟ್ ಪಡೆಯುವುದಕ್ಕೆ ಮೋದಿ ಹೇಳಿದ್ದೆಲ್ಲವನ್ನೂ ಮತ್ತು ಮಾಡಿದ್ದೆಲ್ಲವನ್ನು ಪರಮ ಸತ್ಯ ಎಂದು ಹೇಳುವ ದರ್ದೇನಿದೆ..?

ಸುಳ್ಳುಗಳನ್ನು ಹೇರಲು ರಾಜಕೀಯ ಪಕ್ಷಗಳು ಬಳಸಿಕೊಂಡ ಮಾಧ್ಯಮ ಸಾಮಾಜಿಕ ಜಾಲತಾಣ. ಇಲ್ಲಿ ವೈರಲ್ ಪಟ್ಟ ಧರಿಸಿದ ಎಲ್ಲವೂ ಶ್ರೇಷ್ಠ ಎಂದು ಬಿಂಬಿಸುವ ವಾತಾವರಣ ಸೃಷ್ಟಿಯಾಗಿದೆ. ಹ್ಯಾಶ್ಟ್ಯಾಗ್ಗಳು, ಮೀಮ್ಗಳು ಮತ್ತು ಭಾವನಾತ್ಮಕವಾಗಿ ಬಳಕೆದಾರರ ಬುದ್ದಿಗೆ ಕಂಪ್ಯೂಟ್ ಮಾಡಲು ಯೋಗ್ಯವಾಗುವಂತೆ ಸೃಷ್ಟಿ ಮಾಡಿದ ವೀಡಿಯೊಗಳು, ಪೋಸ್ಟ್ ಗಳು ಸಿದ್ಧವಾಗುತ್ತವೆ. ಘೋಷಣೆ ಮಾಡಿದ ಕ್ಷಣದಲ್ಲಿ, ಸಾಮಾಜಿಕ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳೆರಡೂ   ಅದನ್ನು ಬೆಂಬಲಿಸುವ ಸಂದೇಶಗಳೊಂದಿಗೆ ಮತದಾರ ಪ್ರಭುಗಳ ಮೇಲೆ ಬಾಂಬ್ ಹಾಕಲು ಪ್ರಾರಂಭಿಸುತ್ತವೆ. ಇನ್ನು,  ದೃಢೀಕರಣ ಪಕ್ಷಪಾತ, ಮಾಹಿತಿಯ ಮಿತಿಮೀರಿದ, ಭಾವನಾತ್ಮಕ ಬೆದರಿಕೆ, ವಿಶ್ವಾಸಾರ್ಹ ಸ್ನೇಹಿತರಿಂದ ಸಂದೇಶವನ್ನು ಹಂಚಿಕೊಂಡಾಗ ಅದನ್ನು ನಂಬುವ ಇಚ್ಛೆ, ಇತ್ಯಾದಿಗಳು ರೀತಿಯ ರಾಜಕೀಯದ ಪ್ರಚಾರದ ಪಡಸಾಲೆಯ ಟೂಲ್ ಕಿಟ್ ಗಳಾಗಿ ಸುಳ್ಳಿನ ಸಾಮ್ರಾಜ್ಯವನ್ನೇ ರಚಿಸಿದೆ.

ಈಗ ಮತ್ತೆ ಚುನಾವಣಾ ಬಿಸಿ. ಮತ್ತೆ ಸುಳ್ಳಿನ ಕಾರ್ಖಾನೆಗಳ ಕಾರ್ಯಾರಂಭವಾಗಲಿದೆ. ಅಲ್ಲಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಹೆಸರಿನಲ್ಲಿ ರಾಜಕೀಯ ಪ್ರಚಾರ ಸಭೆಗಳು ಆರಂಭವಾಗಿವೆ. ಸ್ವತಃ ಸುಳ್ಳಿನ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ, 'ಸುಳ್ಳು ಭರವಸೆ ನೀಡಿ ಅಧಿಕಾರ ಪಡೆದವರ ಮಾತು ಕೇಳಬೇಡಿ' ಎಂದು ಹೇಳುತ್ತಿರುವುದು ಮೋದಿ ವಿರಚಿತ ಮತ್ತೊಂದು ಹಾಸ್ಯ ಪ್ರಸಂಗ.

ವಿರೋಧ ಪಕ್ಷಗಳು ಹೇಗೆ ಬಲಗೊಳ್ಳಬೇಕು ? : ದುರ್ಬಲ ವಿರೋಧವೇ ದೇಶದಲ್ಲಿ ಇಷ್ಟರ ಮಟ್ಟಿಗೆ ಸುಳ್ಳು ಹರಡುವುದಕ್ಕೆ ಸಾಧ್ಯ ಮಾಡಿಕೊಟ್ಟಿದ್ದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ನಿರ್ದಿಷ್ಟ ವಿಷಯದ ಕುರಿತು ಸುಳ್ಳು ಮಾಹಿತಿಯನ್ನು ಪ್ರಸ್ತುತಪಡಿಸುವಲ್ಲಿ ಸುಲಭ ಮಾರ್ಗವನ್ನು ತೋರಿಸಿ ಕೊಟ್ಟಿದ್ದೇ ದೇಶದ ಅಸಾಮರ್ಥ್ಯ ವಿರೋಧ ಪಕ್ಷಗಳು. ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ಸುಳ್ಳು ಮೊದಲ ಸ್ಥಾನವನ್ನು ಪಡೆದುಕೊಂಡಿತು. ವಿರೋಧ ಪಕ್ಷ ಸುಳ್ಳನ್ನು ಮಣಿಸುವುದಕ್ಕೆ ಸೋಮಾರಿತನ ತೋರಿಸಿದ್ದು ಕೂಡ ದೇಶದ ಸಾಮಾಜಿಕ ಸ್ವಾಸ್ಥ್ಯ ಹದಗೆಡುವುದಕ್ಕೆ ಒಂದು ಕಾರಣ ಎಂದರೇ ತಪ್ಪಿಲ್ಲ. ಸುಳ್ಳನ್ನೇ ಜಗತ್ತು ಸತ್ಯವೆಂದು ನಂಬಿರುವ ಕಾಲಘಟ್ಟದಲ್ಲಿ ಸತ್ಯ ಪರಿಶೀಲನೆ ಮಾಡುವುದೆಂದರೇ, ಕೋವಿಡ್ 19 ಗೆ ಪ್ಯಾರಸಿಟಮಲ್ ಗುಳಿಗೆ ತೆಗೆದುಕೊಂಡ ಹಾಗೆ. ಪ್ರಪಂಚದಾದ್ಯಂತ, ಸುಳ್ಳಿನ ಬೆಂಕಿ-ಹೊದಿಕೆಯು ಅಭಿವೃದ್ಧಿ ರಹಿತ ರಾಜಕಾರಣದ ಪ್ರಬಲ ಪ್ರಚಾರ ಸಾಧನವಾಗುತ್ತಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದಕ್ಕೆ ಮುಂದಾಗದಿದ್ದರೇ ದೇಶದ ಸ್ಥಿತಿ ಮುಂದೆ ಚಿಂತಾಜನಕವಿದೆ. ಕೇವಲ ಸತ್ಯ ಪರಿಶೀಲನೆಯಿಂದ ಆಟ ಗೆಲ್ಲುವುದಕ್ಕೆ ಸಾಧ್ಯವಿಲ್ಲ. ಇದು ಸುಳ್ಳು ಎಂದು ಸಾರ್ವಜನಿಕ ಅಭಿಪ್ರಾಯ ಮೂಡಿಸಬೇಕಿದೆ. ಸುಳ್ಳಿನ ಸಾಲುಗಳೆ ಸತ್ಯ ದಾಳಿ ಮಾಡಬೇಕಿದೆ. ವಿಷಯವನ್ನು ಪ್ರಸ್ತಾಪಿಸಲು, ಪ್ರಥಮ ಅಭಿಪ್ರಾಯ ಕೊನೆಯದ್ದಾಗುವುದಕ್ಕೆ ಬಿಡದಂತೆ ನೋಡಿಕೊಳ್ಳವ ತುರ್ತಿದೆ.

ಒಟ್ಟಿನಲ್ಲಿ, ರಾಜಕೀಯದ 'ಧ್ರುವೀಕರಣದ ಕಾನ್ಸೆಪ್ಟ್ ಗಳು' ದೇಶದ ಸಾಮಾಜಿಕ ಸ್ಥಿತಿಯನ್ನು ಹದಗೆಡಿಸಿವೆ. ಇಷ್ಟೆಲ್ಲಾ ಆದ ಮೇಲೂ ದೇಶ ಮತ್ತೆ ಸುಳ್ಳನ್ನು ಹೇಳಿದವರನ್ನೇ ಅಧಿಕಾರಕ್ಕೆ ಆರಿಸುತ್ತದೋ ಅಥವಾ ಬದಲಾವಣೆ ಬಯಸುತ್ತದೋ ಎನ್ನುವುದರ ಬಗ್ಗೆ ಅಚ್ಚರಿ ಇದೆ.

-ಶ್ರೀರಾಜ್ ವಕ್ವಾಡಿ

No comments:

Post a Comment