Thursday, November 10, 2022

ಕನ್ನುಗೋಲು ವರ್ಸಸ್ ವಾರಾಹಿ ಅನಾಲಿಟಿಕ್ಸ್ ಪ್ರೈವೇಟ್ ಲಿಮಿಟೆಡ್

ಸಿದ್ದು ವಿರುದ್ಧ ಮೀಸಲಾತಿ ಅಸ್ತ್ರ | ‘ಪಾಲಿಟಿಕಲ್ ಸ್ಟ್ರ್ಯಾಟೆಜಿಸ್ಟ್’ ಟ್ರೆಂಡಿಂಗ್ ಫೀಲ್ಡ್..!

ರಾಜಕೀಯದ ಕಿತ್ತಾಟದಲ್ಲಿ ಇಂದು ಸಾಮಾಜಿಕ ವಲಯ ಅತ್ಯಂತ ಸುಸ್ತು ಹಾಗೂ ಒತ್ತಡಕ್ಕೆ ಒಳಗಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ರಾಜಕೀಯದ ವಿದ್ರೋಹದ ಕುತಂತ್ರಗಳು ಸಾಮಾಜಿಕ ಮನಸ್ಥಿತಿಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುವುದರ ಮೂಲಕ ಅಭಿವೃದ್ಧಿಯ ಹೆಸರಿನಲ್ಲಿ ಉಂಡು ತೇಗಿದ್ದು ಈ ಸಮಾಜಕ್ಕೆ ಗೊತ್ತಿರುವ ವಿಷಯ. ಪ್ರಜಾಸತ್ತತೆಯನ್ನು ಉಳಿಸಬೇಕಾಗಿರುವ ಜನರಿಂದಲೇ ಆಯ್ಕೆಯಾದ ರಾಜಕೀಯ ಪಕ್ಷಗಳು ಅಧಿಕಾರದ ಹೆಸರಿನಲ್ಲಿ ಸುಳ್ಳು, ವಂಚನೆಗಳಲ್ಲಿ ತೊಡಗಿಕೊಂಡು ಮತ್ತೆ ಮತ್ತೆ ಜನರಲ್ಲಿ ಓಟಿಗಾಗಿ ಅಂಗಲಾಚುವುದು ಈ ದೇಶ ಕಾಣುತ್ತಿರುವ ಅತ್ಯಂತ ಕೆಟ್ಟ ಸ್ಥಿತಿ. 

ಜನ ಹಾಗೂ ಸಮಾಜದ ಆಸ್ತೆಯುಳ್ಳ ರಾಜಕೀಯ ಪಕ್ಷಕ್ಕೆ ಜನರ ಮುಂದೆ ಬಂದು ಅಂಗಲಾಚುವ ಅಗತ್ಯ ಎಂದಿಗೂ ಎದುರಾಗಲಾಗದು. ಅಧಿಕಾರದ ಜೊತೆಯಲ್ಲಿ ಅಭಿವೃದ್ಧಿ ಇದ್ದರೇ ಎಂದಿಗೂ ಕಣ ಪರೀಕ್ಷೆ ಮಾಡುವ ಪರಿಸ್ಥಿತಿ ಎಂದಿಗೂ ಎದುರಾಗಲಾರದು ಎನ್ನುವುದು ಈ ದೇಶ ಕಂಡುಕೊಂಡು ಬಂದ ರಾಜಕೀಯದ ಪಾಠ. ರಾಜಕೀಯದ ಭವಿಷ್ಯದ ಬಗ್ಗೆ ಭಯ ಉಳ್ಳವ ಮಾತ್ರ ‘ಪಾಲಿಟಿಕಲ್ ಸ್ಟ್ರ್ಯಾಟೆಜಿ’ಯತ್ತ ತನ್ನ ಚಿತ್ತ ಹರಿಸುತ್ತಾನೆ, ಇದು ರಾಜಕೀಯದಲ್ಲಿ ಸಹಜ ಮತ್ತು ಸಾಮಾನ್ಯ. ರಾಜಕೀಯವನ್ನು ಮೊದಲೆಲ್ಲಾ ಅಭಿವೃದ್ಧಿ ಕಾರ್ಯಗಳು ಮುನ್ನಡೆಸುತ್ತಿದ್ದವು. ಆದರೇ, ಈಗ ಪಾಲಿಟಿಕಲ್ ಸ್ಟ್ರ್ಯಾಟಜಿಗಳು ನಡೆಸುತ್ತವೆ. ಆ ಪ್ರವೃತ್ತಿಗೆ ಇತ್ತೀಚೆಗಿನ ರಾಜಕೀಯದಲ್ಲಿ ರಾಜಕೀಯ ಪಕ್ಷದ ಹಣೆ ಬರಹ ತಿದ್ದುವುದಕ್ಕಾಗಿಯೇ ಸೋ ಕಾಲ್ಡ್ ರಾಜಕೀಯ ತಂತ್ರ ಹೂಡುವ ಸಂಸ್ಥೆಗಳು ಹುಟ್ಟಿಕೊಂಡಿವೆ. ಆ ಸಂಸ್ಥೆಗಳು ನಿಲ್ಲಿ ಎಂದಾಗ ನಿಲ್ಲುವುದು, ಕೂತುಕೊಳ್ಳಿ ಎಂದಾಗ ಕೂತುಕೊಳ್ಳುವುದು ಈಗಿನ ರಾಜಕೀಯ ನಾಯಕರ ಅಭ್ಯಾಸವಾಗಿ ಬಿಟ್ಟಿದೆ. 

ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಚಕ್ರಾಧಿಪತ್ಯದ ಆಗು ಹೋಗುಗಳ ಲೆಕ್ಕಾಚಾರದಲ್ಲಿ ತೊಡಗಿಕೊಂಡಿವೆ. ಈ ಬಾರಿ ರಾಜ್ಯದ ವಿಧಾನ ಸಭಾ ಚುನಾವಣೆ ಹಲವು ಕುತೂಹಲಕ್ಕೆ ಕಾರಣವಾಗುತ್ತಿದೆ. ಒಂದೆಡೆ ವಿವಾದದ ಸೋ ಕಾಲ್ಡ್ ಕಾಮನ್ ಮ್ಯಾನ್ ಬಸವರಾಜ್ ಬೊಮ್ಮಾಯಿ ನೇತೃತ್ವ ಒಂದಡೆಯಾದರೇ, ಬಿಜೆಪಿಗೆ ಮತ್ತೊಂದು ಬಲವಾಗಿರುವುದು ಚುನಾವಣಾ ಎಕ್ಸ್ಪರ್ಟ್ ಎಂದೇ ಕರೆಸಿಕೊಳ್ಳುವ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಬಿಜೆಪಿಯ ಸಂಸದೀಯ ಮಂಡಳಿಯ ಅಧಿಕಾರ ಹೊಂದಿದ್ದು ಮಾತ್ರವಲ್ಲದೇ, ವಿವಿಧ ಚುನಾವಣೆಗಳ ಟಿಕೆಟ್ ತಿರ್ಮಾನ ಮಾಡುವ ಸಮಿತಿಗೆ ಪ್ರಮೋಷನ್ ಹೊಂದಿರುವುದು ರಾಜ್ಯ ಬಿಜೆಪಿಯಲ್ಲಿ ಯಾವ ಬದಲಾವಣೆ ತರಲಿದೆ ಎನ್ನುವುದರ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ರಾಹುಲ್ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಮುಗಿಸಿ ರಾಜ್ಯದ ಒಂದಿಷ್ಟು ಭಾಗದಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ಪಡೆದಿರುವುದು ಕಾಂಗ್ರೆಸ್ ಪಾಳಯದಲ್ಲಿ ಹೊಸ ಹುರುಪು ಕಾಣಿಸುತ್ತಿದೆ. ಇನ್ನು, ಮತ್ತೆ ಸಿದ್ದರಾಮಯ್ಯ ಚುನಾವಣೆಯ ವಿಚಾರದಲ್ಲಿ ಪಿಕ್‌ಅಪ್ ಆಗಿದ್ದು, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತ, ಗಾಂಧಿಯೇತರ ಮಲ್ಲಿಕಾರ್ಜುನ್ ಖರ್ಗೆ ಅದು ಕೂಡ ಕರ್ನಾಟಕದಿಂದ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ಏರಿದ್ದು, ರಾಜ್ಯ ವಿಧಾನಸಭಾ ಚುನಾವಣಾ ವಿಚಾರಕ್ಕೆ ಸಂಬಂಧಿಸಿದಂತೆ ಖರ್ಗೆ ನಿಲುವು ಹೇಗಿರಲಿದೆ ಎನ್ನುವುದರ ಬಗ್ಗೆಯೂ ಹೆಚ್ಚು ಕುತೂಹಲವಿದೆ. ಈ ನಡುವೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್, ಹಳೆಯ ಮಿತ್ರರಿಗೆಲ್ಲಾ ವೈಯಕ್ತಿಕ ಆಹ್ವಾನ ನೀಡುತ್ತಿರುವುದು ಕಾಂಗ್ರೆಸ್ ಅಸಹಾಯಕೆತಯೋ ಅಥವಾ ಡಿಕೆಶಿ ಅಸಾಹಯಕತೆಯೋ ಎನ್ನುವುದು ಗೊತ್ತಾಗುತ್ತಿಲ್ಲ. 

ಕೆಲವು ತಿಂಗಳುಗಳಿಂದ ಸತತವಾಗಿ ಹಿಂದುಳಿದ ವರ್ಗಗಳ ಓಲೈಕೆಯ ತಂತ್ರ ಹೂಡುತ್ತಿದ್ದ ಬಿಜೆಪಿ ಕೊನೆಗೂ ಮೀಸಲಾತಿ ಹೆಚ್ಚಿಸಲು ನಿರ್ಧರಿಸಿದೆ. ಸತತ ನಾಲ್ಕು ದಶಕಗಳಿಂದ ಕೇಳಿ ಬರುತ್ತಿದ್ದ ಮೀಸಲಾತಿ ಹೆಚ್ಚಳದ ಕೂಗಿಗೆ, ಇಲ್ಲಿಯವರೆಗೆ ರಾಜ್ಯವನ್ನು ಆಳಿದ ಯಾವ ರಾಜಕೀಯ ಪಕ್ಷಗಳು ಕೂಡ ಭರವಸೆ ಪೂರೈಸಿರಲಿಲ್ಲ. ಸದ್ಯ, ಆಡಳಿತ ಪಕ್ಷ ಬಿಜೆಪಿ, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಭರವಸೆ ಈಡೆರಿಸುವ ನಿಟ್ಟಿನಲ್ಲಿ ಯಥಾವತ್ತಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗದ ವರದಿಯನ್ನು ಮಂಡಿಸುವ ಮೂಲಕ ಕಾಂಗ್ರೆಸ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ. ಇಲ್ಲದ ಅಭಿವೃದ್ಧಿ, ನೇಮಕಾತಿ ಹಗರಣಗಳು, ೪೦ ಪರ್ಸಂಟೇಜ್ ಕಮಿಷನ್, ಪೆಸಿಎಂ ಭ್ರಷ್ಟಾಚಾರ ಇತ್ಯಾದಿ ವಿವಾದಗಳಿಂದ ಮುಳುಗಿದ್ದ ಬಿಜೆಪಿ, ಮೀಸಲಾತಿ ಹೆಚ್ಚಳದ ನಿರ್ಧಾರದಿಂದಾಗಿ ಶೋಷಿತ ವರ್ಗದವರ ಪರವಾಗಿದೆ ಎಂದು ಅನಾಯಾಸವಾಗಿ ಬಿಂಬಿಸಿಕೊಂಡಂತಾಗಿದೆ. ಭಾರತ್ ಜೋಡೋ ಯಾತ್ರೆಯ ಮೂಲಕ ಜನ ಬೆಂಬಲ ಗಳಿಸುತ್ತಿದ್ದ ಕಾಂಗ್ರೆಸ್‌ಗೆ ಬಿಜೆಪಿ ಬಿಟ್ಟ ಈ ಮೀಸಲಾತಿ ಅಸ್ತ್ರ ರಾಜಕೀಯದಲ್ಲಿ ಹೊಸ ತಿರುವು ಪಡೆದುಕೊಂಡಿರುವುದು ಸತ್ಯ. 

ಸಿದ್ದು ವಿರುದ್ಧ ಬಿಜೆಪಿ ಮೀಸಲಾತಿ ಅಸ್ತ್ರ ? :  ಬಿ. ಶ್ರೀಮಾಲು ಸೇರಿ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರು ಎಂದು ಗುರುತಿಸಿಕೊಂಡಿರುವ ಗೋವಿಂದ ಕಾರಜೋಳ ಅವರನ್ನು ಸೇರಿ ಒಟ್ಟು ಹನ್ನೊಂದು ಮಂದಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸಂಪುಟಕ್ಕೆ ಒಳಪಡಿಸಿಕೊಂಡಿದೆ. ಇಡೀ ರಾಜ್ಯದಾದ್ಯಂತ ಒಟ್ಟು ಹಿಂದುಳಿದ ವರ್ಗಗಳ ನಾಯಕ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರ ವಿರುದ್ಧವಾಗಿಯೇ ಈ ಮೀಸಲಾತಿ ಅಸ್ತ್ರ ಬಿಟ್ಟದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ.  ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಸೀಮಿತ ಮಾತ್ರವಲ್ಲದೇ ರಾಜಕೀಯದ ಮಾಸ್ ಲೀಡರ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಸಿದ್ದರಾಮಯ್ಯ ಅವರಿಗೆ ದೊರಕಿದ ಬೆಂಬಲಕ್ಕೆ ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಯಾಗಿರುವುದರಲ್ಲಿ ಸಂಶಯವೇ ಇಲ್ಲ. ಒಬ್ಬ ವಿರೋಧ ಪಕ್ಷದ ನಾಯಕನಿಗೂ ಇಂತಹದ್ದೊಂದು ಬೃಹತ್ ಜನ ಬೆಂಬಲ ದೊರಕಿರುವುದು ಬಿಜೆಪಿ ರಾಜಕೀಯದಲ್ಲಿ ಸಹಜ ಆತಂಕಕ್ಕೆ ಕಾರಣವಾಗಿದ್ದು, ಅದೇ ಕಾರಣಕ್ಕೆ ಬಿಜೆಪಿ ಸರಿಯಾದ ಸಮಯಕ್ಕೆ ಮೀಸಲಾತಿ ಅಸ್ತ್ರ ಉಪಯೋಗಿಸಿದೆ ಎಂದೇ ಕಾಣಿಸುತ್ತಿದೆ. ಇನ್ನು, ಹಿಂದುಳಿದ ವರ್ಗದಿಂದ ಯುವ ನಾಯಕರನ್ನು ಮುಂಚೂಣಿಗೆ ತಂದು ರಾಜಕೀಯ ಲೆಕ್ಕಾಚಾರದಲ್ಲಿ ಇರುವ ಬಿಜೆಪಿ ಸುನೀಲ್ ಕುಮಾರ್ ಅವರನ್ನು ಮುಂಪಕ್ತಿಗೆ ತರುವ ಪ್ರಯತ್ನದಲ್ಲಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೇ, ಈ ಸ್ಟ್ರ್ಯಾಟೆಜಿ ವರ್ಕೌಟ್ ಆಗಲಿದೆಯೇ ಎಂಬುವುದು ಯಕ್ಷ ಪ್ರಶ್ನೆ. 

ಕನ್ನುಗೋಲು ವರ್ಸಸ್ ವಾರಾಹಿ : ಈ ಹಿಂದೆ ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹಾಗೂ ಅಮಿತ್ ಶಾ ಜೊತೆಗಿದ್ದು ಬಿಜೆಪಿ ಪರವಾಗಿ ರಾಜಕೀಯ ತಂತ್ರಗಾರಿಕೆ ಹೆಣೆದಿದ್ದ ಆಂದ್ರಪ್ರದೇಶ ಮೂಲದ ಸುನಿಲ್ ಕನ್ನುಗೋಲು ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದರೇ, ಇತ್ತ ಬಿಜೆಪಿ ಪರವಾಗಿ ವಾರಾಹಿ ಅನಾಲಿಟಿಕ್ಸ್ ಪ್ರೆöÊವೇಟ್ ಲಿಮಿಟೆಡ್ ರಾಜಕೀಯ ವ್ಯೂಹ ರಚಿಸುವುದಕ್ಕೆ ಮುಂದಾಗಿದೆ. ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಪರವಾಗಿ ಹಲವಾರು ಕ್ಯಾಂಪೆನ್‌ಗಳಲ್ಲಿ ತನ್ನ ತಂತ್ರ ಹೂಡಿದ್ದ ವಾರಾಹಿ ಸಂಸ್ಥೆ ಕರ್ನಾಟಕ್ಕೆ ಕಾಲಿಟ್ಟಿದ್ದು ಈಗಷ್ಟೇ. ಹಾಗೆ ನೋಡುವುದಾದರೇ ಕಾಂಗ್ರೆಸ ಹೈಕಮಾಂಡ್ ಕಳೆದ ಮೇ ತಿಂಗಳಿನಲ್ಲೇ ಸುನೀಲ್ ಕನ್ನುಗೋಲು ಮತ್ತು ಅವರ ತಂಡದವರನ್ನು ರಾಜ್ಯಕ್ಕೆ ಕಳುಹಿಸಿತ್ತು.  ಆ ಲೆಕ್ಕದಲ್ಲಿ ನೋಡುವಿದಾದರೇ, ವಾರಾಹಿ ಸಂಸ್ಥೆಗಿಂತ ಹೆಚ್ಚಾಗಿ ಸುನೀಲ್ ತಂಡಕ್ಕೆ ರಾಜ್ಯದ ಬಗ್ಗೆ ಹೆಚ್ಚು ಅರಿವಿದೆ. ಸುನೀಲ್ ರಾಜ್ಯಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮೊದಲು ಕಾಂಗ್ರೆಸ್‌ಗೆ ಸೂಚನೆ ನೀಡಿದ್ದೇ ದಲಿತ ಹಾಗೂ ಮುಸ್ಲೀಂ ಮತಗಳು ವಿಮುಖವಾಗದಂತೆ ನೋಡಿಕೊಳ್ಳಿ ಎಂದು.  ಮುಸ್ಲೀಂ ಕೇಂದ್ರಿತ ಪ್ರದೇಶಗಳಲ್ಲಿ ಎಸ್‌ಡಿಪಿಐ ಅಂತಹ ಇತರೆ ಮುಸ್ಲೀಂ ಲೀಗ್‌ಗಳು ಕಾಂಗ್ರೆಸ್ ಪರವಾಗಿದ್ದ ಮತಗಳನ್ನು ಓಲೈಸುವ ಕಾರ್ಯತಂತ್ರದಲ್ಲಿದ್ದು, ಯಾವುದೇ ಕಾರಣಕ್ಕೂ ಮುಸ್ಲಿಂ ಮತಗಳು ಕಾಂಗ್ರೆಸ್‌ನಿಂದ ವಿಮುಖವಾಗದಂತೆ ನೋಡಿಕೊಳ್ಳಬೇಕಾಗಿರುವುದು ಹಾಗೂ ಕಾಂಗ್ರೆಸ್ ಮೇಲಿದ್ದ ವಿಶ್ವಾಸ ಕಳೆದುಕೊಳ್ಳುತ್ತಿರುವ ದಲಿತ ಕೆಲವು ಜಾತಿಗಳ ಮತಗಳು ಬಿಜೆಪಿಯತ್ತ ವಾಲದಂತೆ ನೋಡಿಕೊಳ್ಳಬೇಕಿರುವುದು ಅಗತ್ಯವೆಂದು ಹೇಳಿದ್ದರು. ಆದರೇ, ಬಿಜೆಪಿಯ ಮೀಸಲಾತಿಯ ಅಸ್ತç ಕಾಂಗ್ರೆಸ್‌ನ ಯೋಜನೆಯನ್ನು ಕಕ್ಕಾಬಿಕ್ಕಿಯಾಗಿಸಿರುವುದು ಸದ್ಯದ ಕುತೂಹಲದ ರಾಜಕೀಯ. ವಾರಾಹಿ ಸಂಸ್ಥೆ ಈಗಷ್ಟೇ ಪ್ರತ್ಯಕ್ಷವಾಗಿ ಬಿಜೆಪಿ ಪರವಾಗಿ ಕಾರ್ಯ ಆರಂಭಿಸಿದ್ದು, ಬಿಜೆಪಿಗೆ ಆಗಿರುವ ಡ್ಯಾಮೇಜ್ ಎಲ್ಲವನ್ನೂ ಸರಿಪಡಿಸುವಲ್ಲಿ ತಂತ್ರ ಹೆಣೆಯ ಬೇಕಾಗಿದೆ. ಇತ್ತ ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಚುನಾವಣಾ ಸಲುವಾಗಿ ವಾರ್ ರೂಂ ಸೃಷ್ಟಿ ಮಾಡಿಕೊಂಡಿದ್ದಾರೆ. ಇತ್ತ ಸಿದ್ದರಾಮಯ್ಯ ಕಣ ಲೆಕ್ಕಾಚ್ಚಾರಕ್ಕೆ ಇಳಿದಿದ್ದರೇ, ಕೆಪಿಸಿಸಿ ಅಧ್ಯಕ್ಷ ಡಿಸೈನ್ ಬಾಕ್ಸ್ ಎಂಬ ರಾಜಕೀಯ ತಂತ್ರಜ್ಙ ಪಡೆಯೊಂದಿಗೆ ವೈಯಕ್ತಿಕ ಇಮೆಜ್ ವೃದ್ಧಿಸಿಕೊಳ್ಳುತ್ತಿದ್ದಾರೆ. ಪ್ರಭಾವಿ ನಾಯಕರ ಚುನಾವಣೆಯ ಸ್ವ ತಯಾರಿ ಒಂದೆಡೆಯಾದರೇ, ಪಕ್ಷಕ್ಕಾಗಿ ದುಡಿಯುವ ತಂತ್ರಜ್ಞ ಪಡೆಗಳು ಇನ್ನೊಂದೆಡೆಯಂತಾಗಿದೆ. ಒಟ್ಟಾರೆಯಾಗಿ ‘ಪಾಲಿಟಿಕಲ್ ಸ್ಟ್ರ್ಯಾಟೆಜಿಸ್ಟ್’ ಟ್ರೆಂಡಿಂಗ್ ಫೀಲ್ಡ್ ನಂತಾಗಿ  ಚುನಾವಣೆ ಒಂದು ರೀತಿಯಲ್ಲಿ ದೊಡ್ಡ ಉದ್ಯಮವೇ ಆದಂತಿದೆ. 

-ಶ್ರೀರಾಜ್ ವಕ್ವಾಡಿ 

  


No comments:

Post a Comment