Thursday, November 3, 2022

ಸುಳ್ಳನ್ನು ಹರಡಿದವರೇ ಸುಳ್ಳಿಗೆ ಅಂಕುಶ ಅಗತ್ಯವೆನ್ನುವ ಹಾಸ್ಯ ಪ್ರಸಂಗ

ಅಧಿಕಾರದ ದಡ ತಲುಪಿಸಿದ ವೆಬ್‌ಸೈಟ್ ಬೋಟ್ಸ್ ಗಳು | ಸುಳ್ಳು ಸುದ್ದಿಗಳ ಪಾಪ್‌ಅಪ್ ಸ್ಟೋರಿ 

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ಗಳಿಗೆ ಇದ್ದ ನಿರ್ಬಂಧಗಳನ್ನು ಮತ್ತೆ ಕೇಂದ್ರ ಸರ್ಕಾರ ಬಿಗಿಗೊಳಿಸಿದ್ದು ನಿಜಕ್ಕೂ ಸ್ವಾಗತಾರ್ಹ. ಆದರೇ, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಷಪೂರಕ ಮಾಹಿತಿಗಳನ್ನು ಹಬ್ಬಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸಿದವರ ವಿರುದ್ಧ ಸರ್ಕಾರ ಎಂತಹ ಕಠಿಣ ಕ್ರಮ ತೆಗೆದುಕೊಂಡಿದೆ ಎನ್ನುವುದು ಇಲ್ಲಿ ಗಮನಾರ್ಹ.  

ಭಾರತದ ರಾಷ್ಟ್ರೀಯ ಜೀವನದ ವಿರುದ್ಧ ಸಾಮಾಜಿಕ ಜಾಲತಾಣಗಳು ಹಬ್ಬಿಸಿದ ಸುಳ್ಳು ಸುದ್ದಿಗಳು, ಆಕ್ಷೇಪಾರ್ಹ ಮಾಹಿತಿಗಳಿಂದಾಗಿ ಭಾರತದಂತಹ ದೇಶದ ‘ರಾಷ್ಟ್ರೀಯ ಜೀವನ ಎನ್ನುವುದು ಆ ಸುಳ್ಳು ಸುದ್ದಿಗಳಿಂದಲೇ ಉಸಿರಾಡುವ ರಾಷ್ಟ್ರೀಯ ಜೀವನ ಎಂಬಂತಾಗಿರುವುದು ಈ ದೇಶದ ದುರಂತ ಸ್ಥಿತಿ’. ಈ ಪ್ರಪಚಂದಾದ್ಯಂತ ಕೋಟ್ಯಾಂತರ ಮಂದಿಯ ಜೀವನದ ಒಳಗಣ-ಹೊರಗಣಗಳೆಲ್ಲವನ್ನೂ ಒಂದೆಡೆ ಮಾಹಿತಿ ಕೂಡಿಡುವ ಸಾಮಾಜಿಕ ಜಾಲತಾಣಗಳು ವಿಷ ಬೀಜ ಬಿತ್ತಿದ್ದು ಅಷ್ಟಿಷ್ಟಲ್ಲ. ವ್ಯಕ್ತಿಯೊಬ್ಬನ ಖಾಸಗಿ ಆಸಕ್ತಿಗಳ ಬಗ್ಗೆಯೂ ಮಾಹಿತಿ ಪಡೆದು ತನ್ನೊಳಗೆ ಕೂಡಿಟ್ಟುಕೊಂಡಿರುವ ಸಾಮಾಜಿಕ ಮಾಧ್ಯಮಗಳು ಅಲ್ಗೋರಿಥಂಗಳಿಂದ ವ್ಯವಸ್ಥಿತವಾಗಿ ಸೆಳೆದುಕೊಂಡು ಆತನನ್ನು ಸಾಮಾಜಿಕ ಪ್ರಭಾವಕ್ಕೆ ಒಳಪಡಿಸಿವೆ. ಬಳಕೆದಾರನನ್ನು ಅದರಿಂದ ಹೊರಗೆ ಬರುವುದಕ್ಕೆ ಸಾಧ್ಯವಾಗದೆ ಇರುವಂತೆ ಮಾಡಿದ್ದಲ್ಲದೇ, ಪೂರ್ವಾಗ್ರಹಗಳನ್ನು ಬಲವಂತವಾಗಿ ಬಳಕೆದಾರನೊಬ್ಬನ ಮಸ್ತಕಕ್ಕೆ ತುಂಬಿಸಿವೆ ಅಥವಾ ತುರುಕಿಸಿವೆ. ಅಷ್ಟೇಕೆ..? ಸಾಮಾಜಿಕ ಜಾಲತಾಣಗಳನ್ನು ಬಳಸುವವನೊಬ್ಬ ಎಂದೂ ಸತ್ಯ ಯಾವುದು, ಸುಳ್ಳು ಯಾವುದು ಎನ್ನುವ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇರುವಂತೆ ಮಾಡಿ ಆತನ ಸ್ವತಂತ್ರ ಬುದ್ಧಮತ್ತೆಯನ್ನು ತನ್ನ ಆಕರ್ಷಕ ಸೆಳೆತಗಳಿಗೆ ಒಳಪಡಿಸಿ ಕೆಲವು ದೇಶಗಳಲ್ಲಿ ಒಂದು ರಾಜಕೀಯ ಪಕ್ಷ ಅಧಿಕಾರದ ದಡ ತಲುಪುವರೆಗೆ ಈ ಸಾಮಾಜಿಕ ಜಾಲತಾಣಗಳು ಕೃಪಾ ಪೋಷಣೆ ಮಾಡಿವೆ ಎನ್ನುವುದು ನಮ್ಮ ಮುಂದಿರುವ ಗಂಭೀರ ಸತ್ಯ. ಅಂತಹ ದೇಶಗಳ ಪಟ್ಟಿಗೆ ನಮ್ಮ ಭಾರತವೂ ಸೇರಿದೆ. ಅದನ್ನು ಪ್ರತ್ಯೇಕಿಸಿ ಹೇಳಬೇಕೆಂದೇನೂ ಇಲ್ಲ. 

ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಅರಿವು ಇದ್ದೂ ಕೂಡ ಈ ದೇಶ ತನ್ನ ರಾಜಕೀಯ ಶಕ್ತಿಯ ಪಾರಮ್ಯದಡಿಯಲ್ಲಿ ಮುಂದುವರಿಯಬೇಕು ಎಂಬ ಮೂಲ ಉದ್ದೇಶದಿಂದಾಗಿಯೇ ಸಂವಿದಾನವನ್ನು, ನೀತಿ ನಿಯಮಗಳನ್ನು, ಕಾನೂನುಗಳನ್ನು ಅದಕ್ಕೆ ಅನುಕೂಲವಾಗುವ ಹಾಗೆ ರಚಿಸುವಲ್ಲಿಯೂ, ರಾಜಕೀಯ ಚಟುವಟಿಕೆಗಳಲ್ಲಿಯೂ ಈ ದೇಶದಲ್ಲಿ ಒಂದು ರಾಜಕೀಯ ಪಕ್ಷ ತನ್ನ ಬೆವರು ಸುರಿಸಿ ಕೆಲಸ ಮಾಡಿದೆ ಎನ್ನುವುದು ಈ ದೇಶದ ನಾಗರಿಕರು ಕಂಡಿದ್ದಾರೆ ಎನ್ನುವುದಕ್ಕೆ ಈ ದೇಶ ಕಂಡುಕೊಂಡು ಬಂದ ರಾಜಕೀಯ ಇತಿಹಾಸಗಳೇ ಸಾಕ್ಷಿ. ರಾಷ್ಟ್ರೀಯತೆಯ ಮುಖವಾಡದಲ್ಲಿ ತನ್ನ ಪಾರಮ್ಯವನ್ನು ರಕ್ಷಿಸಿ ಪೋಷಿಸುವ ಈ ‘ಸ್ಟ್ರ್ಯಾಟಜಿ ರಾಜಕಾರಣ’ ತನಗೆ ಬೇಕಾಗುವ ಹಾಗೆ ಈ ದೇಶದ ವ್ಯವಸ್ಥೆಗಳನ್ನು ತಿದ್ದಿಕೊಂಡು ಎನ್ನುವುದಕ್ಕೆ ಈ ದೇಶ ಕಂಡುಕೊಂಡು ಬಂದ ಮೂಲ ‘ರಾಷ್ಟ್ರೀಯ ಜೀವನವನ್ನು’ ಬಲವಾಗಿ ವಿರೋಧಿಸಿದ್ದು ಇದೇ ರಾಜಕೀಯ ಶಕ್ತಿ. 

ಆ ರಾಜಕೀಯ ಶಕ್ತಿಗೆ ಭಾರತದ ಅಧಿಕಾರದ ಗದ್ದುಗೆ ತನಗೆ ಸಿಗಬಹುದೆಂಬ ನಿರೀಕ್ಷೆಯನ್ನು ಹೆಚ್ಚಿಸಿದ್ದೇ ಈ ಸಾಮಾಜಿಕ ಜಾಲತಾಣಗಳು. ತನ್ನ ವಿರೋಧಿ ಬಣಗಳ ವಿರುದ್ಧ ಸುಳ್ಳು ಹಬ್ಬಿಸುವುದಕ್ಕೆ ಸಾಮಾಜಿಕ ಜಾಲತಾಣಗಳನ್ನೇ ‘ಪಾಲಿಟಿಕಲ್ ಟೂಲ್‌ಕಿಟ್’ಗಳಾಗಿ ಬಳಸಿಕೊಂಡಿತ್ತು. ಇಂದು ಏನಾಗುತ್ತಿದೆ..? ಸುಳ್ಳುಗಳು ಸಮಾಜವನ್ನು ಆಳುತ್ತಿವೆ. ಇದಕ್ಕೆ ಈ ದೇಶದ ರಾಜಕೀಯ ಪಕ್ಷಗಳು ಹಾಗೂ ಸಾಮಾಜಿಕ ಜಾಲತಾಣಗಳ ಕೊಡುಗೆ ಅಪಾರವಾಗಿದೆ. ಸುಳ್ಳುಗಳೇ ರಾಜಕೀಯ ಕ್ಷೇತ್ರದ ನಾಯಕರನ್ನು ಹೀರೋಗಳನ್ನಾಗಿ ಮಾಡುತ್ತಿವೆ. ಸ್ವಾಸ್ಥ್ಯ ಸಮಾಜ ನಿರ್ಮಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಏರುವ ಬಿಜೆಪಿ, ಕಾಂಗ್ರೆಸ್ ಹಾಗೂ ಇನ್ನಿತರ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳು ಬಿತ್ತುವ ದುರ್ಬೀಜವನ್ನೇ ನಂಬಿಕೊಂಡು ಅಧಿಕಾರ ನಡೆಸುತ್ತವೆ. ಸರ್ಕಾರದಿಂದ ನಿರ್ಬಂಧಕ್ಕೆ ಒಳಗಾಗುವ ಸಾಮಾಜಿಕ ಜಾಲತಾಣಗಳ ಅಕೌಂಟ್‌ಗಳು ಮರುದಿನ ಮತ್ತೆ ಅದೇ ಛಾಳಿ ಮುಂದುವರಿಸುತ್ತವೆ. ಕೇಂದ್ರದಲ್ಲಿರುವುದು ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್ ಅಲ್ಲ ಎಂದು ಹೇಳಿದ ರಾಜಕೀಯ ನಾಯಕರು ಕೂಡ ಈ ಸುಳ್ಳು ಬಿತ್ತುವ ಕೆಲಸದಲ್ಲಿ ಪಾಲುದಾರರಾದವರೇ. ಇನ್ನು, ಸುಳ್ಳು ಸುದ್ದಿಗಳನ್ನು ಹರಡಿಸುವ ಫೇಕ್ ವೆಬ್‌ಸೈಟ್‌ಗಳನ್ನು ತನ್ನ ಲಾಭಕ್ಕಾಗಿ ದುಡಿಸಿಕೊಂಡಿದ್ದ, ಸದಾ ಪೋಷಿಸುತ್ತಾ ಬಂದಿದ್ದ ಬಿಜೆಪಿ ಈಗ ಈ ಸೋ ಕಾಲ್ಡ್ ಕಾನೂನು ಬಿಗಿಕ್ರಮಕ್ಕೆ ಮುಂದಾಗಿರುವುದು ಅಪಹಾಸ್ಯಕ್ಕೆ ಈಡಾಗುತ್ತಿದೆ. ಸರ್ಕಾರದ ಪರವಾಗಿರುವ ಎಲ್ಲಾ ವಿಚಾರಗಳು (ಅದು ವಾಸ್ತವವಾಗಿ ಶುದ್ಧ ಸುಳ್ಳಾಗಿದ್ದರೂ ಕೂಡ) ಸತ್ಯವೆಂದು, ಸರ್ಕಾರದ ವಿರುದ್ಧವಾಗಿರುವ (ಅದು ವಾಸ್ತವವಾಗಿ ಶುದ್ಧ ಸತ್ಯವಾಗಿದ್ದರೂ ಕೂಡ) ಅದನ್ನು ಮಿಥ್ಯವೆಂದು ಬಿಂಬಿಸುವ ವಾತಾವರಣ ಈ ಸಾಮಾಜಿಕ ಜಾಲತಾಣಗಳ ಕಾರಣಗಳಿಂದಾಗಿಯೇ ಸೃಷ್ಟಿಯಾಗಿರುವುದು ವಿಪರ್ಯಾಸ. 

ಬೋಟ್ಸ್ ಹಾಗೂ ನಕಲಿ ಸುದ್ದಿಗಳು :  ಸಾಮಾಜಿಕ ಜಾಲತಾಣಗಳನ್ನು ಬಳಸುವ ಶತಕೋಟಿ ಬಳಕೇದಾರರ ನಡುವೇ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುವ ಮತ್ತು ಹೆಚ್ಚು ಜನರನ್ನು ತಲುಪುವ ಹಾಗೆ ಮಾಡುವ ರೋಬೋಟ್ ವೆಬ್‌ಸೈಟ್‌ಗಳು (ಬೋಟ್ಸ್) ಕೂಡ ಇವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.  ಇವು ಸಾಮಾಜಿಕ ಜಾಲತಾಣಗಳ ಮುಖೇನ ನಕಲಿ ಸುದ್ದಿಗಳು ಹಾಗೂ ಆಕ್ಷೇಪಾರ್ಹ ಸುದ್ದಿಗಳನ್ನು ಪಾಪ್‌ಅಪ್ ಮಾಡಿಸಿ ಅವು ಹೆಚ್ಚು ಜನರಿಗೆ ತಲುಪಿಸುವಂತೆ ಮಾಡುತ್ತವೆ. ಒಂದು ವಿದೇಶಿ ಸಂಸ್ಥೆ ಈ ವಿಚಾರವಾಗಿ ೨೦೧೭ರಲ್ಲಿ ಜಾಗತಿಕವಾಗಿ ನಡೆಸಿದ ಅಧ್ಯಯನದ ಪ್ರಕಾರ, ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಟ್ವೀಟರ್ ಇತ್ಯಾದಿ ಜಾಲತಾಣಗಲ್ಲಿ ಪ್ರತಿಶತ ೨೨.೨% (ಟ್ವೀಟರ್ ನಲ್ಲಿ ಸುಮಾರು ೮.೫%, ಫೇಸ್‌ಬುಕ್‌ನಲ್ಲಿ ೫.೫%, ಇನ್‌ಸ್ಟಾಗ್ರಾಮ್‌ನಲ್ಲಿ ೮.೨%) ರಷ್ಟು ಬೋಟ್ಸ್ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳು ದ್ವೇಷಕಾರುವ ಸುದ್ದಿಗಳನ್ನು ಹೆಚ್ಚು ಸಾಮಾಜಿಕ ಜಾಲತಾಣಗಳಲ್ಲಿ ಹರಡುವಂತೆ ಉತ್ತೇಜಿಸುತ್ತವಂತೆ. ಈ ಬೋಟ್ಸ್ಗಳು ಕಂಪ್ಯೂಟರ್ ಅಲ್ಗಾರಿಥಂ ಗಳಾಗಿವೆ. ಇವು ಸ್ವಾಯತ್ತವಾಗಿ ಹಾಗೂ ಪುನರಾವರ್ತಿತವಾಗಿ ಆನ್‌ಲೈನ್ ಸಾಮಾಜಿಕ ನೆಟ್‌ವರ್ಕ್ ಸೈಟ್‌ಗಳ ಮೂಲಕ ಕಾರ್ಯ ನಿರ್ವಹಿಸುತ್ತವೆ. ಕೃತಕ ಬುದ್ಧಿಮತ್ತೆಯ ಮೂಲಕ ಕಾರ್ಯನಿರ್ವಹಿಸುವ ಈ ಬೋಟ್ಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ವರ್ತನೆಯನ್ನು ಗಮನಿಸಿ, ಬಳಕೆದಾರರನ ಇಂಟ್ರೆಸ್ಟಿಂಗ್‌ಗಳನ್ನು ಗಮನಿಸಿ ಇಂತಹ ಆಕ್ಷೇಪಾರ್ಹ ಪೋಸ್ಟ್ಗಳೊಂದಿಗೆ ಸಂವಹನಕ್ಕೆ ಒಳಗಾಗುವ ಹಾಗೆ ಪಾಪ್‌ಅಪ್ ಸ್ಟೋರಿಗಳನ್ನು ಬಳಕೆದಾರರನಿಗೆ ಪೂರೈಸುದರ ಮುಖೆನ ಬಳಕೆದಾರರನನ್ನೂ ಕೂಡ ಕೃತಕ ಬುದ್ಧಿಮತ್ತನನ್ನಾಗಿ ಮಾಡುತ್ತವೆ. ಇವು ಸಂಪೂರ್ಣ ಕಂಪ್ಯೂಟರಿಂಗ್ ಪ್ರೋಗ್ರಾಂಗಳ ಮೂಲಕ ಕಾರ್ಯನಿರ್ವಹಿಸುವುದರಿಂದಾಗಿ ಒಬ್ಬ ಸಾಮಾನ್ಯ ಬಳಕೆದಾರನಿಗೆ ಇದರ ಬಗ್ಗೆ ಅರಿವೇ ಆಗುವುದಿಲ್ಲ. ಈ ಬೋಟ್ಸ್ ತಂತ್ರಜ್ಞಾನಗಳನ್ನು ಬಳಸಿಕೊಂಡೇ ಕೆಲವು ದೇಶಗಳಲ್ಲಿ ಕೆಲವು ಸರ್ಕಾರಗಳು ಅಧಿಕಾರ ಅನುಭವಿಸಿವೆಯೇ ಎನ್ನುವುದನ್ನು ಖಂಡಿತ ಅಲ್ಲಗಳೆಯುವಂತಿಲ್ಲ. ಇಂದಿಗೂ ಇಂತಹ ಅನೇಕ ಬೋಟ್ಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಯಕದಂತೆ ಕಾರ್ಯನಿರ್ವಹಿಸುತ್ತಿವೆ. ಅಂತಹ ಮಾಯಕ ಜಾಲಗಳನ್ನು ಮೊದಲು ಸರ್ಕಾರ ನಿರ್ಬಂಧಿಸಬೇಕಿದೆ.  

ಈ ಬೋಟ್ಸ್ ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ? :  ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಕ್ಯೂರೆಟೆಡ್ ಅಲ್ಲದ ಮಾಹಿತಿಗಳನ್ನು ಸರ್ಚ್ ಮಾಡಿ ಹರಡಿಸುವ ಕೆಲಸವನ್ನು ಮಾಡುತ್ತವೆ. ಟ್ರೆಂಡಿಂಗ್ ಪೋಸ್ಟ್ಗಳನ್ನು ಹಾಗೂ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಕ್ಯೂರೆಟೆಡ್ ಅಲ್ಲದ ಮಾಹಿತಿಗಳನ್ನು ಬಳಕೆದಾರರಿಗೆ ತಲುಪಿಸಿ ಆ ನಕಲಿ ಮಾಹಿತಿಯ ಮೇಲೆ ಬಳಕೆದಾರನಲ್ಲಿ ಒಂದು ಅಭಿಪ್ರಾಯ ಮೂಡಿಸುವಂತೆ ಮಾಡುತ್ತವೆ. ಸರಾಸರಿ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಫೇಸ್‌ಬುಕ್‌ನಲ್ಲಿ, ಟ್ವೀಟರ್‌ನಲ್ಲಿ ರೀಟ್ವೀಟ್‌ಗಳು, ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳನ್ನು ಕುರುಡರಾಗಿ ಆಗಿ ನಂಬಿ ಅವುಗಳನ್ನು ಅನುಸರಿಸುತ್ತಾರೆ. ಹೆಚ್ಚಿನ ಸಂಖ್ಯೆಯ ಲೈಕ್ಸ್, ರೀಟ್ವೀಟ್, ಕಾಮೇಂಟ್ಸ್ ಗಳ ಮೂಲಕವೇ ಸುದ್ದಿಗಳನ್ನು ನಿರ್ಧರಿಸುವ ಮನೋಧೋರಣೆ ಈ ಸಾಮಾಜಿಕ ಜಾಲತಾಣಗಳ ಬಳಕೆದಾರರಲ್ಲಿ ಸಾಮಾನ್ಯವಾಗಿ ಇದೆ. ಆದರೇ, ಹೆಚ್ಚಿನ ನಕಲಿ ಸುದ್ದಿಗಳ ಹಿಂದೆ ಇಂತಹ ಮಾಯಕ ಬೋಟ್ಸ್ ಗಳ ಕಾರ್ಯ ಇವೆ ಎನ್ನುವುದು ಗೊತ್ತೇ ಇರುವುದಿಲ್ಲ. ಇಂತಹ ‘ನಂಬಲರ್ಹ ಮನಸ್ಥಿತಿ’ಯನ್ನು ಬಲವಂತವಾಗಿ ಸೃಷ್ಟಿಸುವುದು ಈ ಬೋಟ್ಸ್ ಗಳು ಎನ್ನುವುದು ಇಲ್ಲಿ ಗಮನಾರ್ಹ. ಮನುಷ್ಯ ಬುದ್ಧಿವಂತರಿದ್ದಾನೆ, ಆದರೇ ಅತಿಯಾದ ಕೃತಕ ಬುದ್ಧಿಜಾಲಗಳಿಗೆ ಮನುಷ್ಯ ಬಲಿಯಾಗಿರುವುದರಿಂದಾಗಿ ಮತ್ತು ಭಾವುಕ ಜೀವಿಯಾಗಿರುದರಿಂದ ಪ್ರಭಾವಕ್ಕೊಳಗಾಗಿ ಸ್ವಂತ ಬುದ್ಧಿಯನ್ನು ಬಳಸಿ ಪರಿಶೀಲಿಸಿದೇ ಇಂತಹ ನಕಲಿ ಸುದ್ದಿಗಳನ್ನು ಹರಡುವಲ್ಲಿ ಕೂಡ ಪ್ರಮುಖ ಪಾತ್ರ ವಹಿಸುತ್ತಾನೆ ಎನ್ನುವುದು ವಿಪರ್ಯಾಸದ ಸಂಗತಿ. 

ಅಷ್ಟೇಕೇ, ರಾಜಕೀಯ ಪಕ್ಷಗಳೇ ತನ್ನ ರಾಜಕೀಯ ಲಾಭಕ್ಕಾಗಿ ಐಟಿ ಸೆಲ್‌ಗಳನ್ನು ಸುಳ್ಳು ಮಾಹಿತಿ ಸೃಷ್ಟಿಸುವ ಖಾರ್ಕಾನೆಗಳಾಗಿ ಮಾಡಿಕೊಂಡಿರುವುದನ್ನು ಈ ದೇಶ ಕಂಡಿದೆ. ಇನ್ನು, ಬಿಜೆಪಿ ಡಿಜಿಟಲ್ ಮಾದ್ಯಮಗಳೊಂದಿಗೆ ಐಟಿ ಸೆಲ್‌ಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಂಡಿದೆ ಎಂದರೇ, ಅದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಟೆಕ್ ಫಾಗ್ ಎಂಬ್ ಅಪ್ಲಿಕೇಶನ್ ಬಳಸಿ ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ದ್ವೇಷವನ್ನು ಹರಡುವುದಕ್ಕೆ ಯತ್ನಿಸಿತ್ತು, ಮಾತ್ರವಲ್ಲದೇ ತನ್ನ ರಾಜಕೀಯ ವಿರೋಧಿಯನ್ನು ಮಣಿಸಲು ಬಳಸಿಕೊಂಡಿತ್ತು ಎಂಬ ತನಿಖಾ ವರದಿಯನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆ ‘ದಿ ವೈರ್ ಡಾಟ್ ಇನ್’ ಕೊಟ್ಟಿರುವುದು ಮುಂದೆ ಇರುವಾಗಲೇ ಬಿಜೆಪಿ ಈಗ ಸುಳ್ಳು ಸುದ್ದಿಗಳಿಗೆ ಅಂಕುಶ ಅಗತ್ಯ, ಒಂದು ಸಣ್ಣ ಸುಳ್ಳು ಸುದ್ದಿಯೂ ಕೂಡ ದೇಶದಲ್ಲಿ ಬಿರುಗಾಳಿಯನ್ನು ಸೃಷ್ಟಿಸಬಲ್ಲದು, ಹಾಗಾಗಿ ಏನನ್ನಾದರೂ ಫಾರ್ವರ್ಡ್ ಮಾಡುವ ಮೊದಲು ಯೋಚಿಸಲು ಹಾಗೂ ನಂಬುವ ಮೊದಲು ಪರಿಶೀಲಿಸಲು ಜನರಿಗೆ ಶಿಕ್ಷಣ ನೀಡಬೇಕೆನ್ನುತ್ತಿರುವುದು ಹಾಸ್ಯಾಸ್ಪದವಲ್ಲದೇ ಮತ್ತೇನು ? 

-ಶ್ರೀರಾಜ್ ವಕ್ವಾಡಿ  


No comments:

Post a Comment