Tuesday, November 1, 2022

ಗಂಧದಗುಡಿ ಎಂಬ ವಾವ್ಹ್..!


ಅಪ್ಪು ಸಿನೆಮಾ ರಂಗದ ಆಸ್ತಿ ಅಂತ ಯಾಕೆ ಜನ ಹೇಳ್ತಾರೆ, ಸಿನೆಮಾ ರ0ಗ ಕೊಂಡಾಡುತ್ತೆ ಎನ್ನುವುದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಬೇಕು ಅಂತಾದರೇ, "ಗಂಧದಗುಡಿ" ಎಂಬ ಡಾಕ್ಯುಫೀಚರ್ ನೋಡಲೇಬೇಕು. 

ಕಳೆದ ವರ್ಷ ಈ ಹೊತ್ತಿಗೆ ಬೆಂಗಳೂರಿನ ಹಾರೋಹಳ್ಳಿಯ ಸಿದ್ದಾಪುರ ಎನ್ನುವ ಚಿಕ್ಕ ಹಳ್ಳಿಯಲ್ಲಿನ ನನ್ನ ಮಾವನ ಮನೆಯಲ್ಲಿ ಇದ್ದಿದ್ದೆ. ಕನಸಿನ ಬೆನ್ನೇರಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಬದುಕು ಸವೆಸಿದ್ದೆ. ಏನೋ ಸಣ್ಣ ಪುಟ್ಟ ಆಸಕ್ತಿಯ ಕೆಲಸಗಳನ್ನು ಮಾಡಿಕೋಳ್ಳುತ್ತಾ ಮನೆಯಲ್ಲೇ ದಿನಪೂರ್ತಿ ನೋವಿನಲ್ಲೇ ಕಳೆಯುತ್ತಿದ್ದ ನನಗೆ ಮತ್ತಷ್ಟು ದುಃಖ ನೀಡಿದ್ದು ಪುನೀತ್ ರಾಜ್ ಕುಮಾರ್ ಅವರ ಸಾವು. ಆ ದಿನ ಲ್ಯಾಪ್ ಟಾಪ್ ನಲ್ಲಿ ಒಂದು ರಾಜಕೀಯ ವಿಮರ್ಶೆ ಬರೆಯುತ್ತಿದ್ದೆ. ಆ ಹೊತ್ತಿಗೆ ಪುನೀತ್ ಅಸ್ತಂಗತ ಎಂಬ ನಂಬಲು ಅಸಾಧ್ಯವಾದ ಸುದ್ದಿ ಕೇಳಿ ಬಂತು. ನಿಜಕ್ಕೂ ದುಃಖ ತಾಳುವುದಕ್ಕೆ ಸಾಧ್ಯವಾಗಿರಲಿಲ್ಲ. ಒಂದಿಷ್ಟು ದಿನಗಳ ಕಾಲ ಆ ಬೇಸರ ಕಡಿಮೆಯಾಗಿರಲೇ ಇಲ್ಲ. ಇಂದಿಗೂ ಕೂಡ. ಏನೇ ಇರಲಿ. ಅಪ್ಪು ಅವರ ಸಾವಿಗೂ ಒಂದಿಷ್ಟು ದಿನಗಳ ಮುಂಚೆ ಇಂತಹದ್ದೊಂದು ಕೆಲಸದಲ್ಲಿ ಅಪ್ಪು ತೊಡಗಿಕೊಂಡಿದ್ದಾರೆ ಎಂಬ ಸುದ್ದಿ ಇದ್ದಿತ್ತು, ಮೊದಲಿನಿಂದಲೂ ಕಲಾತ್ಮಕ ಸಿನೆಮಾ, ಇಂತಹ ಡಾಕ್ಯುಮೆಂಟರಿ ಸಿನೆಮಾ, ಡಾಕ್ಯುಫೀಚರ್ ಗಳ ಬಗ್ಗೆ ತುಸು ಹೆಚ್ಚೇ ಆಸಕ್ತನಾಗಿದ್ದ ನನಗೆ ಈ 'ಗಂಧದಗುಡಿ'ಯ ಬಗ್ಗೆ ಹೆಚ್ಚೇಕೆ ಆಸಕ್ತಿ ಇದ್ದಿದ್ದು ಕೇಳಿದರೇ ಅದೊಂದು ವೈಲ್ಡ್ ಡಾಕ್ಯುಫೀಚರ್ ಎಂಬ ಕಾರಣಕ್ಕೆ ಮತ್ತು ಅಪ್ಪು ಹಾಗೂ ಅಮೋಘವರ್ಷ ಇದ್ದಾರೆ ಎನ್ನುವುದಕ್ಕೆ‌. ಆದರೇ, ಆಗ ಮತ್ತು ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲಿ ಇದು ಹೀಗೆ ಅದ್ಭುತವಾಗಿ ಥೀಯೆಟರ್ ನಲ್ಲಿ ಒಂದು ಅಮೋಘವಾದ ದೃಶ್ಯಕಾವ್ಯದ ಅನುಭವ ನೀಡುತ್ತದೆ ಎಂದು ಅಂದುಕೊಂಡಿರಲಿಲ್ಲ‌. ಅಮೋಘ ವರ್ಷ ನಿರ್ದೇಶಿಸಿರುವ ಕಾರಣಕ್ಕೆ ಇದು ಮತ್ತೊಂದು 'ವೈಲ್ಡ್ ಕರ್ನಾಟಕ'( Wild Karnataka) ಆಗಿರಬಹುದು ಎಂದುಕೊಂಡಿದ್ದೆ. ಆದರೇ, ಹೀಗೆ ವೈಲ್ಡ್ ಕಲ್ಚರ್ ನೊಂದಿಗೆ, ಇಷ್ಟೊಂದು ಭಾವನೆಗಳೊಂದಿಗೆ, ಕಾಳಜಿಯೊಂದಿಗೆ, ಆಸ್ತೆಯೊಂದಿಗೆ, ಜವಾಬ್ದಾರಿಯೊಂದಿಗೆ, ಆ ವೈಲ್ಡ್ ಲೈಫ್ ನೊಂದಿಗೆ ಬೆಸೆದ ಕಾಣದ ಕಥೆಗಳೊಂದಿಗೆ ಮುದ ನೀಡುವ, ಜವಾಬ್ದಾರಿ  ಹೆಚ್ಚಿಸುವ ಕಂಟೆಂಟ್ ಆಗಿ ಬರುತ್ತದೆ ಎಂದುಕೊಂಡಿರಲಿಲ್ಲ. ಆದರೇ,  ನೋಡುವಾಗ, ನೋಡಿದಾಗ ಅನ್ನಿಸಿದೊಂದೇ "ವಾವ್ಹ್"...!

ಅಪ್ಪು ಡಾ. ರಾಜ್ ಕುಮಾರ್ ಮಗ ಎಂಬ ಕಾರಣಕ್ಕೆ ಅಥವಾ ಸಿನೆಮಾ ನಟ ಆಗಿರುವುದಕ್ಕೆ ಅಷ್ಟೇ ಹೀರೋ ಆಗಿದ್ದಲ್ಲ. ಇಂತಹದ್ದೊಂದು ಕೌತುಕದ ಕಣ್ಣು, ತುಡಿತ ಇರುವ ಕಾರಣಕ್ಕೂ ಹೌದು. 

ಕರ್ನಾಟಕದ ಉದ್ದಕ್ಕೂ ಇರುವ ಸಮೃದ್ಧ ಸಂಪತ್ತನ್ನು ಪರಿಚಯಿಸುವ ಪ್ರಯತ್ನವಿದು.  ನಾಗರಹೊಳೆ, ಬಿ ಆರ್ ಟಿ ಟೈಗರ್‌ ರಿಸರ್ವ್‌, ಡೆಕ್ಕನ್‌, ಮಲೆನಾಡು, ನೇತ್ರಾಣಿ, ಶಿವನ ಸಮುದ್ರ, ಜೋಗ, ಕರಾವಳಿ, ಕಾಳಿ ನದಿ ಕಣಿವೆ, ಆಳ ಸಮುದ್ರ ಹೀಗೆ ಕರ್ನಾಟಕದ ಉದ್ದಕ್ಕೂ ಇರುವ ಜೀವ ವೈವಿಧ್ಯಗಳನ್ನು ಇಷ್ಟು ಅದ್ಭುತವಾಗಿ ತೋರಿಸುವುದಕ್ಕೆ ಸಾಧ್ಯವಾಗಿದ್ದು ಅಮೋಘ ವರ್ಷ ಎಂಬ ಅಸಮಾನ್ಯ ವೈಲ್ಡ್ ಲೈಫ್ ಫೋಟೋಗ್ರಾಫರ್, ಫಿಲ್ಮ ಮೇಕರ್ ಹಾಗೂ ಪಿ ಆರ್ ಕೆ  ಪ್ರೊಡಕ್ಷನ್ಸ್ ಇರುವ ಕಾರಣದಿಂದಾಗಿ ಎನ್ನುವುದರಲ್ಲಿ ಸಂಶಯವೇ ಇಲ್ಲ. 

ತನ್ನ ಜೀವನದ ಕೊನೆಯ ಕಾಲಘಟ್ಟದಲ್ಲಿ ಮತ್ತೆ ಮಗುವಾಗುತ್ತಾ ಹೋಗಿ ನಿಜ ಜೀವನದ ಬದುಕು ಕಲಿಸಿದ ಅಪ್ಪು ನಿಜಕ್ಕೂ ಈ 'ಗಂಧದಗುಡಿ'ಯಲ್ಲಿ ಹೃದಯವನ್ನು ಭಾರವಾಗಿಸಿ ಬಿಡುತ್ತಾರೆ. ಇನ್ನು, ಅಮೋಘವರ್ಷ ಎಂತಹ ಒಬ್ಬ ಪ್ರತಿಭೆ. ನಿಜಕ್ಕೂ ಗ್ರೇಟ್. ಅವರು ಒಬ್ಬ ಕೇವಲ ವೈಲ್ಡ್ ಲೈಫ್ ಫೋಟೋಗ್ರಾಫರ್ ಮಾತ್ರವಲ್ಲ ಅವರೊಬ್ಬ ಪರಿಸರವತಜ್ಞ ಎನ್ನುವುದನ್ನು ಈ ಮೂಲಕ ಸಾಬೀತು ಮಾಡಿದ್ದಾರೆ. 

ನಮ್ಮದೇ ಕಾಡಿದು, ನಮ್ಮದೇ ಪರಿಸರವಿದು ಅದರಲ್ಲಿನ ಮೌನವನ್ನು ಧ್ವನಿಸುವ ಪ್ರಯತ್ನವಿದು. ಅದರ ದಿವ್ಯ ಗರ್ಭವನ್ನು ದರ್ಶಿಸುವ ಕಾವ್ಯವಿದು.   ಮತ್ತೆ ಈ 'ಗಂಧದಗುಡಿ'ಯ ಮೂಲಕ ಅಪ್ಪು ಸಮಾಜಕ್ಕೆ ಕನ್ನಡಿ ಹಿಡಿದು ತೋರಿಸಿರುವಾಗ ನಮ್ಮೊಂದಿಗೆ ಅಪ್ಪು ಇಲ್ಲವಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳುವುದಕ್ಕೆ ನಿಜಕ್ಕೂ ಕಷ್ಟವಾಗುತ್ತೆ. 

ಅಪ್ಪಟ ಡಾ. ರಾಜ್ ಕುಮಾರ್ ಅವರ ಅಭಿಮಾನಿಯಾದ ನನಗೆ,  ಅಮೋಘ್ ಕಾಡಿನ ಬಗ್ಗೆ ಅಪ್ಪುಗೆ ತಿಳಿಹೇಳುವಾಗ ಪ್ರತಿಕ್ರಿಯೆಯಾಗಿ ಅಪ್ಪು ಪದೆ ಪದೆ ಹೇಳುತ್ತಿದ್ದ 'ಹಾಹ್ಹಾ...' ಮತ್ತು ಕಾಳಿ ನದಿಯ ದಡದಲ್ಲಿ  'ಥ್ಯಾಂಕ್ಸ್ ಟು ಕಾಳಿ' ಎಂದು ಹೇಳುವಾಗ ರಾಜ್ ಕುಮಾರ್ ನೆನಪಾಗಿದ್ದು ಸುಳ್ಳಲ್ಲ. ಮತ್ತು  ಈ 'ಕರ್ನಾಟಕ ರತ್ನ'ರು (ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್) ನಮ್ಮೂರಿಗೆ ಬಂದಾಗ ನಾನಿನ್ನೂ ಚಿಕ್ಕ ವಯಸ್ಸಲ್ಲಿದ್ದೆ ಆಗಲೇ ಇವರೀರ್ವನ್ನು ಕಣ್ಮ್ತುಂಬಿಕೊಂಡಿದ್ದೆ ಎನ್ನುವುದೇ ಒಂಥರಾ ಖುಷಿ. 

ಒಟ್ಟಿನಲ್ಲಿ ಈ 'ಗಂಧದಗುಡಿ' ಎಂಬ ದೃಶ್ಯಕಾವ್ಯದ ಮೂಲಕ ಅಪ್ಪು ಕಂಡ ಕನಸು ಈ ಸಮೃದ್ಧ ಕರ್ನಾಟಕದ, ಪರಿಸರದ ಸಂರಕ್ಷಣೆ.  ಅವರ ಎಲ್ಲಾ ಅಭಿಮಾನಿಗಳ ಬಯಕೆ ಇದೇ ಆಗಿರುವುದರಲ್ಲಿ ಸಂಶಯವಿಲ್ಲ‌. 'ಗಂಧದಗುಡಿ' ನೋಡಿ  ಕಡಿಮೆಯೆಂದ್ರೂ ಒಂದು ಹತ್ತು ಪುಸ್ತಕ ಓದಿದ ಅನುಭವ ಆಗದೆ ಇರದು. 

-ಶ್ರೀರಾಜ್ ವಕ್ವಾಡಿ

No comments:

Post a Comment