Wednesday, June 12, 2024

ಬಿಎಸ್‌ವೈ ʼರಾಜಕೀಯ ಶಕೆʼಗೆ ಬಿಜೆಪಿ ಅಂತ್ಯ ಚುಕ್ಕಿ !

ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಹೊಸ ನಾಯಕನಿಗೆ ಬಿಜೆಪಿ ಹುಡುಕಾಟ ?

 ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 293 ಕ್ಷೇತ್ರಗಳನ್ನು ಗೆದ್ದು ಅಧಿಕಾರ ಚುಕ್ಕಾಣಿ ಹಿಡಿಯುವ ಅವಕಾಶ ಪಡೆದಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮೂರನೇ ಅವಧಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಂಪುಟದಲ್ಲಿ 81 ಜನರ ಸೇರ್ಪಡೆಗೆ ಅವಕಾಶಗಳಿದ್ದರೂ ಪ್ರಾಥಮಿಕ ಹಂತದಲ್ಲಿ 24 ರಾಜ್ಯಗಳ 72 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ನಮ್ಮದೇ ಪಕ್ಷದ ಸರ್ಕಾರ ಎನ್ನುವ ʼಅಹಂʼ ತೊರೆದು ಸರ್ಕಾರ ರಚಿಸಬೇಕಿರುವ ಕಾರಣದಿಂದ ಬಿಜೆಪಿ ಮೈತ್ರಿ ಸಮಾಧಾನ, ರಾಜ್ಯವಾರು, ಜಾತಿವಾರು, ಮುಂಬರುವ ವಿಧಾನಸಭಾ ಚುನಾವಣೆಗಳು, ಹೀಗೆ ಬೇರೆ ಬೇರೆ ಲೆಕ್ಕಚಾರಗಳ ಆಧಾರದ ಮೇಲೆ ಸರ್ಕಾರ ರಚನೆ ಮಾಡಿದೆ. ʼಮೋದಿ ಗ್ಯಾರಂಟಿʼ ದೇಶ ಕಲ್ಯಾಣದ ಆದರ್ಶ ಹೊತ್ತ ಮಾದರಿ ಎನ್ನುವ ಯಾವುದೇ ಮಾನ್ಯತೆ ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶದಿಂದ ದೊರಕಲಿಲ್ಲ. ಅಯೋಧ್ಯೆಯ ಶ್ರೀರಾಮ ಮಂದಿರವೂ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ವರದಾನವಾಗಿಲ್ಲ. ಬಿಜೆಪಿ ಈ ಎರಡೂ ವಿಷಯಗಳನ್ನು ʼಚುನಾವಣೆ ಗೆಲ್ಲಿಸುವ ಸಿದ್ಧ ಮಾದರಿʼ ಎಂದು ಬಿಂಬಿಸಿದ್ದು ಈ ಕಾಲದ ರಾಜಕೀಯಕ್ಕೆ ಹಿಡಿದ ಕನ್ನಡಿ.

ಎನ್‌ಡಿಎ ಸಂಪುಟದಲ್ಲಿ ರಾಜ್ಯಕ್ಕೆ 5 ಸ್ಥಾನ, ಬಿಎಸ್‌ವೈ ಸೈಡ್‌ಲೈನ್‌ :

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಸಂಪುಟದಲ್ಲಿ ಜಾತಿ ಹಾಗೂ ಮೈತ್ರಿ ಲೆಕ್ಕಚಾರದ ಆಧಾರದಲ್ಲಿ ಮಂತ್ರಿಗಿರಿ ದೊರಕಿದೆ. ರಾಜ್ಯದಲ್ಲಿ ಬ್ರಾಹ್ಮಣ ಕೋಟಾದಲ್ಲಿ ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಪ್ರಹ್ಲಾದ್‌ ಜೋಶಿ, ಲಿಂಗಾಯತ ಕೋಟಾದ  ಅಡಿಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ವಿ. ಸೋಮಣ್ಣ, ಒಕ್ಕಲಿಗ ಕೋಟಾದ ಅಡಿಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಮೈತ್ರಿ ಧರ್ಮಕ್ಕಾಗಿ ಮಂಡ್ಯದ ಸಂಸದ ಹೆಚ್. ಡಿ ಕುಮಾರಸ್ವಾಮಿ(ಒಕ್ಕಲಿಗ) ಹಾಗೂ ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗಿರುವ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್‌ಗೆ ಮಂತ್ರಿಗಿರಿ ಸಿಕ್ಕಿದೆ.

ಚುನಾವಣಾ ಫಲಿತಾಂಶದ ಬಳಿಕ ರಾಜ್ಯದಿಂದ ಬಿ. ಎಸ್‌. ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಬಸವರಾಜ್‌ ಬೊಮ್ಮಯಿ, ಗೋವಿಂದ ಕಾರಜೋಳ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾದ ಬಿಎಸ್‌ವೈ ಪುತ್ರ ಬಿ. ವೈ. ರಾಘವೇಂದ್ರ ಅವರಿಗೆ ಸಂಪುಟದಲ್ಲಿ ಮಂತ್ರಿಗಿರಿ ಸಿಗುವುದು ಬಹುತೇಕ ನಿಶ್ಚಿತ ಎಂಬ ಚರ್ಚೆ ರಾಜಕೀಯ ವಲಯದಲ್ಲಿತ್ತು. ಆದರೇ, ಯಡಿಯೂರಪ್ಪ ಅವರ ಮಾತು ಬಿಜೆಪಿ ಹೈಕಮಾಂಡ್‌ನಲ್ಲಿ ಈಗ ಗೌಣವಾದಂತೆ ಕಂಡಿದ್ದಷ್ಟಲ್ಲದೇ, ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಹೊಸ ನಾಯಕನ ಹುಡುಕಾಟಕ್ಕೆ ಮುಂದಾಗಿದೆ ಎಂಬಂತೆ ಕಾಣಿಸುತ್ತಿದೆ.

ಏನೇ ಆಗಲಿ, ಕರ್ನಾಟಕದ ಬಿಜೆಪಿ ಪಾಲಿಗೆ ಯಡಿಯೂರಪ್ಪ ಅವರ ರಾಜಕೀಯ ಪ್ರವೇಶ ಮಹತ್ವದ್ದು. ರಾಜ್ಯದ ಮಟ್ಟಿಗಿನ ರಾಜಕೀಯದ ಆಳ-ಅಗಲ ಯಡಿಯೂರಪ್ಪ ಅವರಿಗೆ ಕರತಲಾಮಲಕ. ಶಿಕಾರಿಪುರದಂತಹ ಪ್ರದೇಶದಲ್ಲಿಯೂ ಹಠಹಿಡಿದು ಸಂಘಟನೆ ಬೆಳೆಸಿದ ಬಿಎಸ್‌ವೈ ಪಾತ್ರ ಸಂಘ ಪರಿವಾರದ ಗಮನ ಸೆಳೆದಿತ್ತು. ಹಂತಹಂತವಾಗಿ ಬೆಳೆಯುತ್ತಾ ಬಂದ ಯಡಿಯೂರಪ್ಪ ಬಿಜೆಪಿಯಲ್ಲಿ ರಾಜ್ಯ ಮಟ್ಟದ ಪ್ರಭಾವಿ ನಾಯಕ ಎನ್ನಿಸಿಕೊಂಡರು. 2006ರ ಫೆ.3 ರನ್ನು ನಾವು ನೆನಪಿಸಿಕೊಳ್ಳಬೇಕು. ಅಂದು ರಾಜ್ಯದಲ್ಲಿ ನಡೆದ ರಾಜಕೀಯ ಕ್ರಾಂತಿ ದೇಶವೇ ಕರ್ನಾಟಕದತ್ತ ನೋಡುವ ಹಾಗೆ ಮಾಡಿತ್ತು. ಅಲ್ಲಿಯ ತನಕ ಹೋರಾಟದ ಹಿನ್ನೆಲೆಯಲ್ಲಿ ಯಡಿಯೂರಪ್ಪರನ್ನು ನೋಡಿದ ಬಿಜೆಪಿ, ಹೊಸದೊಂದು ಎತ್ತರದಲ್ಲಿ ಯಡಿಯೂರಪ್ಪ ಅವರನ್ನು ಇರಿಸಲು ಆರಂಭಿಸಿತ್ತು. ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಎಸ್‌ವೈ ಅವರನ್ನು ಬಿಜೆಪಿ ಅಟ್ಟಕ್ಕೇರಿಸಿತ್ತು.

2012ರಲ್ಲಿ ಭ್ರಷ್ಟಾಚಾರ ಆರೋಪದಿಂದ ನೊಂದಿದ್ದ ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾಕ್ಕೆ ಬಂತು. ತಮ್ಮ ಅನುಪಸ್ಥಿತಿಯೇ ಬಿಜೆಪಿ ಸೋಲಿಗೆ ಕಾರಣ ಎನ್ನುವ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಿದರು. ಕೆಜೆಪಿ ಬಿಜೆಪಿಯೊಂದಿಗೆ ವಿಲೀನ, ಮತ್ತೆ ಬಿಜೆಪಿಗೆ ಯಡಿಯೂರಪ್ಪ ಸಾರಥ್ಯ, 2018ರ ವಿಧಾನಸಭಾ ಚುನಾವಣೆ, 2019ರ ಲೋಕಸಭಾ ಚುನಾವಣೆಗೆ ಬೇಕಾಗಿ ಹೈಕಮಾಂಡ್‌ ಬಿಎಸ್‌ವೈ ಅವರನ್ನು ಚೆನ್ನಾಗಿಯೇ ದುಡಿಸಿಕೊಂಡಿತ್ತು. 2018ರಲ್ಲಿ ಬಿಜೆಪಿ ಸಿಂಗಲ್‌ ಲಾರ್ಜೆಸ್ಟ್‌ ಪಕ್ಷವಾಗಿ ಹೊರಬಂದಿದ್ದರೂ ಸರ್ಕಾರ ರಚಿಸುವುದಕ್ಕೆ ಆಗದೇ ಹಿಂದುಳಿದು ಕೇವಲ ಒಂದೇ ವರ್ಷದಲ್ಲಿ ʼಆಪರೇಷನ್‌ ಕಮಲʼ ಮಾಡಿ ಮತ್ತೆ ಮುಖ್ಯಮಂತ್ರಿಯಾಗಿ ಬಿಎಸ್‌ವೈ ಅಧಿಕಾರ ಹಿಡಿದರು. ಸರಿಯಾಗಿ ಎರಡು ವರ್ಷಗಳ ಬಳಿಕ 2021 ಜುಲೈ 26ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಬಿಎಸ್‌ವೈ ಅಧಿಕಾರಕ್ಕೆ ರಾಜೀನಾಮೆ ನೀಡಿದರು. ʼಬಿಎಸ್‌ವೈ 75ʼ ಕಾರಣ ನೀಡಿ, ಬಲವಂತವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಸಿತ್ತು. ಯಡಿಯೂರಪ್ಪ ಲಿಂಗಾಯತ ಸ್ವಾಮಿಗಳ ಬೆಂಬಲದಿಂದ ತಾನೊಬ್ಬ ಲಿಂಗಾಯತ ಸಮುದಾಯದ ನಾಯಕ, ತನ್ನನ್ನು ನಿರಾಕರಿಸಿದರೇ, ಬಿಜೆಪಿಗೆ ಉಳಿಗಾಲವಿಲ್ಲ ಎಂಬ ಖಡಕ್‌ ಸಂದೇಶವನ್ನು ಹೈಕಮಾಂಡ್‌ಗೆ ತಿಳಿಸುವ ಪ್ರಯತ್ನ ಮಾಡಿದರು. ಹೈಕಮಾಂಡ್‌ಗೆ ಯಡಿಯೂರಪ್ಪ ಅವರ ಸಾಮರ್ಥ್ಯ ಅರಿವಾಯಿತು. ಬಿಎಸ್‌ವೈ ಶಿಫಾರಸ್ಸಿನ ಮೇಲೆಯೇ ಲಿಂಗಾಯತ ಸಮುದಾಯದ ಬಸವರಾಜ್‌ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿತ್ತು, ಬಿಎಸ್‌ವೈ ಅವರನ್ನು ಸಮಾಧಾನ ಪಡಿಸಲು ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ನೇಮಿಸಿಕೊಂಡಿತು. ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ವೈ ಶಿಫಾರಸ್ಸಿನ ಮೇಲೆಯೇ ಅಭ್ಯರ್ಥಿಗಳಿಗೆ ಹೈಕಮಾಂಡ್ ಮಣೆ ಹಾಕಿತ್ತು.

ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಂಡರೂ ವಿಧಾನಸಭಾ ಪ್ರತಿಪಕ್ಷದ ನಾಯಕ, ವಿಧಾನ ಪರಿಷತ್‌  ಪ್ರತಿಪಕ್ಷದ ನಾಯಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಗೆ ಬಿಎಸ್‌ವೈ ಶಿಫಾರಸ್ಸಿಗೆ ಹೈಕಮಾಂಡ್‌ ಅಸ್ತು ಎಂದಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಬಿಎಸ್‌ವೈ ಮಾತಿಗೆ ಮಾನ್ಯತೆ ದೊರಕಿತು. ಲೋಕಸಭಾ ಚುನಾವಣಾ ಪೂರ್ವದಲ್ಲೇ ಜೆಡಿಎಸ್‌ ಜೊತೆಗೆ ಬಿಜೆಪಿ ಮೈತ್ರಿಮಾಡಿಕೊಂಡರೂ ಏನೂ ಫಲಕೊಡಲಿಲ್ಲ. ಮೈತ್ರಿಯ ಕಾರಣದಿಂದ ಬಿಜೆಪಿ 28ಕ್ಕೆ 28 ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸುತ್ತದೆ ಎಂಬ ಬಿಜೆಪಿಯ ವಿಶ್ವಾಸ ಹುಸಿಯಾಯಿತು. ಲಿಂಗಾಯತ ಸಮುದಾಯದ ಮತ ಪ್ರಾಬಲ್ಯ ಹೆಚ್ಚಿರುವ ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ನಿರೀಕ್ಷೆಯ ಮತ ತಂದುಕೊಡದೆ ಇರುವುದು ಹಾಗೂ ಕಲ್ಯಾಣ ಕರ್ನಾಟಕದ ಐದಕ್ಕೆ ಐದೂ ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿರುವುದು ಲಿಂಗಾಯತರು ಬಿಜೆಪಿಯಿಂದ ದೂರವಾಗುತ್ತಿದ್ದಾರೆ ಎನ್ನುವ ಸೂಚನೆಯೇ ಎನ್ನುವ ಪ್ರಶ್ನೆ ಮುಂದಿರಿಸಿದೆ.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ನಡುವೆಯೂ ಬಿಜೆಪಿ 17 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದು, ಆ ಶ್ರೇಯ ತಮ್ಮದು ಎಂಬ ಸಂದೇಶ ರವಾನಿಸುವುದಕ್ಕೆ ಪ್ರಯತ್ನಿಸಿದ ಬಿಎಸ್‌ವೈ ಹಾಗೂ ವಿಜಯೇಂದ್ರ ಅವರಿಗೆ ಕೇಂದ್ರದ ಮಂತ್ರಿಗಿರಿ ಆಯ್ಕೆ ಮುಖಭಂಗ ಉಂಟುಮಾಡಿದೆ. ಮಂತ್ರಿಗಿರಿ ನೀಡುವ ವಿಚಾರದಲ್ಲಿ ಬಿಎಸ್‌ವೈ ಮಾತನ್ನು ಗಣನೆಗೂ ತೆಗೆದುಕೊಳ್ಳದೆ, ಬಿಎಸ್‌ವೈಗೆ ಬಿಜೆಪಿ ಉಪಕಾರ ಸ್ಮರಣೆ ತೀರಿಸಿ ಆಗಿದೆ ಎಂಬ ಧೋರಣೆಯಲ್ಲಿ ಹಿರಿಯ ಪ್ರಭಾವಿ ಲಿಂಗಾಯತ ನಾಯಕ ವಿ. ಸೋಮಣ್ಣ ಅವರಿಗೆ ಮಂತ್ರಿಗಿರಿ ನೀಡಿದ್ದು ಬಿಎಸ್‌ವೈ ವಿರೋಧ ಬಣಕ್ಕೆ ಪುಷ್ಟಿ ನೀಡಿದಂತಾಗಿದೆ. ಇದು, ಯಡಿಯೂರಪ್ಪರ ರಾಜಕೀಯ ಶಕೆಗೆ ಅಂತ್ಯ ಚುಕ್ಕಿ ಇಡುವುದಕ್ಕೆ ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದಂತಿದೆ.

-ಶ್ರೀರಾಜ್‌ ವಕ್ವಾಡಿ  

No comments:

Post a Comment