Thursday, January 18, 2024

ರಾಮ ಮಂದಿರಕ್ಕೆ ಅಡ್ವಾಣಿಯವರ ʼಯೋಗದಾನʼದ ಮುಂದೆ ಉಳಿದವರದ್ದೆಲ್ಲಾ ಶೂನ್ಯ !

 

ಮಂತ್ರಾಕ್ಷತೆಯ ಭಾವನಾತ್ಮಕ ನಂಟಿನ ಎದುರು ಕಾಂಗ್ರೆಸ್ ಈಗ ಯಾತ್ರೆ ಆರಂಭಿಸಿದೆ…

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ʼಅಪೂರ್ಣ ದೇವಾಲಯʼ ಲೋಕಾರ್ಪಣೆಗೆ ಸಜ್ಜಾಗುತ್ತಿದೆ. ಲೋಕಸಭಾ ಚುನಾವಣೆಯೂ ಬರುವ ಮಾರ್ಚ್‌ ಅಥವಾ ಏಪ್ರಿಲ್‌ ನಲ್ಲೇ ಇರುವುದರಿಂದ ಬಿಜೆಪಿಗೆ  ಶ್ರೀರಾಮ ಮಂದಿರ ಲೋಕಸಭಾ ಚುನಾಣೆಗೆ ಪೂರಕವಾದ ನಾಂದಿ ಸಿಕ್ಕಂತಾಗಿದೆ. ಈ ಮೂಲಕ ಬಿಜೆಪಿ ಲೋಕಸಭಾ ಚುನಾವಣೆಗೆ ಒಂದು ಬಹುದೊಡ್ಡ ರಾಜ್ಯವನ್ನೇ (ಉತ್ತರ ಪ್ರದೇಶ) ಅನಾಯಾಸವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಂತಾಗಿದೆ. ರಾಮ, ರಾಮ ಮಂದಿರವನ್ನೇ ತಮ್ಮ ರಾಜಕಾರಣಕ್ಕಾಗಿಯೇ ಬಳಸಿಕೊಂಡ ಬಿಜೆಪಿಗೆ ಈ ಲೋಕಸಭಾ ಚುನಾವಣಾ ಸರಧಿಯಲ್ಲಿ ಮಹತ್ತರವಾದ ರಾಜಕೀಯ ಮೈಲೇಜ್‌ ದೊರಕುವುದಂತೂ ನಿಶ್ಚಿತ.

ರಾಮ ಮಂದಿರ ಲೋಕಾರ್ಪಣೆ ಸಜ್ಜಾಗುತ್ತಿರುವ ಹೊತ್ತಲ್ಲೇ ಹೊಸ ರೀತಿಯ ವಿವಾದಗಳು ತಲೆ ಎತ್ತುತ್ತಿವೆ. ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಬಹುತೇಕ ಅಂಗ ಪಕ್ಷಗಳು ರಾಮ ಮಂದಿರ ಲೋಕಾರ್ಪಣಾ ಕಾರ್ಯಕ್ರಮದಿಂದ ದೂರ ಸರಿದಿವೆ. ಇದು ಸಂಪೂರ್ಣ ರಾಜಕೀಯ ವಿಚಾರ. ಆದರೆ, ಧಾರ್ಮಿಕ ರಂಗದ ಕೆಲವರೂ ರಾಮ ಮಂದಿರ ಲೋಕಾರ್ಪಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದ ಎರಡು ಪ್ರಮುಖ ಶಂಕರಾಚಾರ್ಯ ಸ್ಥಾಪಿತ ಪೀಠದ ಮಠಾಧೀಶರು ರಾಮ ಮಂದಿರ ಲೋಕಾರ್ಪಣಾ ಕಾರ್ಯಕ್ರಮದ ವಿಧಿವಿಧಾನವನ್ನೇ ಪ್ರಶ್ನಿಸಿದ್ದಾರೆ.  

ಬದರಿನಾಥ ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಹಾಗೂ ಪುರಿಯ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ರಾಮ ಮಂದಿರ ಲೋಕಾರ್ಪಣ ಕಾರ್ಯಕ್ರಮದ ವಿಧಿವಿಧಾನಗಳನ್ನು ಪ್ರಶ್ನಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಗರ್ಭ ಗುಡಿಯಲ್ಲಿ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದು ನಿಯಮಗಳಿಗೆ ವಿರುದ್ಧವಾದದ್ದುಎಂದು ಎರಡೂ ಮಠಗಳು ಹೇಳಿದ್ದು, ತಾವು ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಲು ಇದೇ ಕಾರಣ ಎಂದಿದ್ಧಾರೆ. ಧರ್ಮ ಪಾಲನೆ ಆಗುವಂತೆ ನೋಡಿಕೊಳ್ಳುವುದೇ ಶಂಕರಾಚಾರ್ಯರ ಕರ್ತವ್ಯ. ಆದರೆ, ಮಂದಿರ ಲೋಕಾರ್ಪಣೆ ವೇಳೆ ಸನಾತನ ಧರ್ಮದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ ನಾವು ಮೌನವಾಗಿ ಇರುವುದಕ್ಕೆ ಸಾಧ್ಯ ಆಗುತ್ತಿಲ್ಲ ಎಂದಿರುವ ಸ್ವಾಮೀಜಿಗಳು, ತಾವು ಮೋದಿ ವಿರೋಧಿ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ಧಾರೆ. ಇನ್ಯಾರೋ ಹೇಳಿರುವುದೋ, ಕಾಂಗ್ರೆಸ್‌ ಹೇಳಿರುವುದೋ ಅಥವಾ ವಿಪಕ್ಷಗಳು ʼಅಜೀರ್ಣ ದೇವಾಲಯದʼ ಬಗ್ಗೆ ಮಾತನಾಡಿರುವುದನ್ನು ಒಪ್ಪಿಕೊಳ್ಳುವುದು ಬಿಡಿ, ಹೇಳಿರುವುದು ಶಂಕರಾಚಾರ್ಯ ಸ್ಥಾಪಿತ ಪೀಠಗಳ ಸ್ವಾಮೀಜಿಗಳು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು ಎಂದು ಹೇಳಲಾಗುತ್ತದೆ. ಶಂಕರಾಚಾರ್ಯರು ಬದುಕುಳಿದಿದ್ದು ಕೇವಲ ಮೂವತ್ತೆರಡು ವರ್ಷಗಳು. ಬದುಕಿದ ಈ ಅಲ್ಪಾವಧಿ ಕಾಲದಲ್ಲೇ ದೇಶದ ಮೂಲೆ ಮೂಲೆಗಳಿಗೆ ಸಂಪರ್ಕಿಸಿ "ಅದ್ವೈತ" ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದವರು ಶಂಕರಾಚಾರ್ಯರು. ಆದಿಶಂಕರರು ಭಗವದ್ಗೀತೆ, ಉಪನಿಷತ್ ಮತ್ತು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರು ಶಂಕರಾಚಾರ್ಯರು  ಎಂಬೆಲ್ಲದರ ಬಗ್ಗೆ ಸುದೀರ್ಘವಾದ ಇತಿಹಾಸವಿದೆ. ಅಂತಹ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳ ಪೈಕಿ ಬದರಿನಾಥ ಜ್ಯೋತಿರ್ಮಠ ಹಾಗೂ ಪುರಿಯ ಗೋವರ್ಧನ ಪೀಠದ ಪೀಠಾಧ್ಯಕ್ಷರು ರಾಮನ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಸನಾತನ ಧರ್ಮದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ನೀಡಿರುವ ಹೇಳಿಕೆಗಳನ್ನು ನಿಧಾನವಾಗಿ ಮರೆಮಾಡುವಲ್ಲಿಯೂ ಬಿಜೆಪಿ ತನ್ನ ತೋಳಲ್ಲಾಡುವ ಮಾಧ್ಯಮಗಳ ಮೂಲಕ ಪರೋಕ್ಷವಾಗಿ ಪ್ರಯತ್ನಿಸಿರುವುದನ್ನು ಗಮನಿಸಿದರಷ್ಟೇ ಸಾಕು, ಬಿಜೆಪಿ ಎಷ್ಟರ ಮಟ್ಟಿಗೆ ʼಸನಾತನ ಧರ್ಮʼಕ್ಕೆ ಗೌರವಿಸುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ. ʼರಾಮ ಮಂದಿರ ಪೂರ್ಣಗೊಳ್ಳುವುದಕ್ಕೇ ಇನ್ನೂ ಎರಡು ಮೂರು ವರ್ಷಗಳು ಆಗಬಹುದುʼ ಎಂದು ಮೊದಲಿಗೆ ಹೇಳಿರುವುದು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ಎನ್ನುವುದು ಇಲ್ಲಿ ಉಲ್ಲೇಖಾರ್ಹ.

ಒಂದು ʼಅಜೀರ್ಣ ದೇವಸ್ಥಾನʼದಲ್ಲಿ ದೇವರ ಪ್ರತಿಷ್ಠಾಪನೆ ಮಾಡುವಂತಿಲ್ಲ ಎನ್ನುವ ನಂಬಿಕೆ, ಸಂಪ್ರದಾಯ ಸನಾತನ ಹಿಂದೂ ಧರ್ಮದಲ್ಲಿದೆ. ಆದರೇ, ಬಿಜೆಪಿ ತನಗೆ ಲಾಭ ಮಾಡಿಕೊಳ್ಳುವ ದೃಷ್ಟಿಯಲ್ಲಿ ರಾಮ ಮಂದಿರದ ಲೋಕಾರ್ಪಣೆಗೆ ʼಅನುಕೂಲ ಶಾಸ್ತ್ರʼ ಅನುಸರಿಸುತ್ತಿರುವುದು ಸನಾತನ ಧರ್ಮಕ್ಕೆ ಮಾಡುತ್ತಿರುವ ಧಕ್ಕೆ, ದೇವಸ್ಥಾನದ ಕಾರ್ಯ ಪೂರ್ಣಗೊಳ್ಳದೆ ರಾಮನ ಪ್ರತಿಷ್ಠಾಪನೆ ಮಾಡುವ ಅಗತ್ಯ ಏನಿತ್ತು ಎಂದು ಬಿಜೆಪಿಯನ್ನು, ಮೋದಿ ಅವರನ್ನು ಪ್ರಶ್ನೆ ಮಾಡುವುದಕ್ಕೆ ʼಮಾತೆತ್ತಿದರೇ ಹಿಂದೂ ಧರ್ಮ, ಸನಾತನ ಸಂಸ್ಕೃತಿ ಪಾಲನೆ ಮಾಡಬೇಕುʼ ಎಂದೆಲ್ಲಾ ಭಾಷಣ ಬಿಗಿಯುವವರು ಒಬ್ಬರೇ ಒಬ್ಬರು ಇಲ್ಲದೇ ಇರುವುದು ಈ ದೇಶದ ದುರಂತಗಳಲ್ಲೊಂದು.  

1990ರ ದಶಕದಿಂದಲೂ  ರಾಮ ಮಂದಿರ ನಿರ್ಮಾಣವನ್ನು ಚುನಾವಣಾ ಪ್ರಚಾರ ಹಾಗೂ ಪ್ರಣಾಳಿಕೆಯ ಪ್ರಮುಖ ಅಸ್ತ್ರವಾಗಿಟ್ಟುಕೊಂಡು ಬಂದಿದ್ದ ಬಿಜೆಪಿಗೆ ರಾಮ ಮಂದಿರ ಪ್ರತಿಷ್ಠಾಪನೆ ಒಂದು ಮಹತ್ತರವಾದ ಮೈಲಿಗಲ್ಲು ಎನ್ನುವುದರಲ್ಲಿ ಸಂಶಯವಿಲ್ಲ. ಈ ಮೂಲಕ ವಿರೋಧಿ ಬಣವನ್ನು ಮತ್ತೊಂದು ಸುತ್ತಿನ ಲೋಕಸಭಾ ಚುನಾವಣೆಯಲ್ಲಿ ಮೂಲೆಗೆ ಸರಿಸುವ ಮಹಾ ಸಂಕಲ್ಪಕ್ಕೆ ಬಿಜೆಪಿ ಅನಾಯಾಸ ಮಾರ್ಗ ಸೃಷ್ಟಿಸಿಕೊಂಡಂತಾಗಿದೆ. ಭಾವನಾತ್ಮಕವಾಗಿ ರಾಜಕೀಯಕ್ಕೆ ಧುಮುಕಿದ ರಾಮ ಮಂದಿರದ ವಿಚಾರ ಈವರೆಗೂ ಬಿಜೆಪಿ ಪಕ್ಷದ ರಾಜಕೀಯ ಏಳ್ಗೆಗೆ ಮೂಲ ಕಾರಣವಾಗುತ್ತಾ ಬಂದಿದೆ. ಬಿಜೆಪಿ ಪಕ್ಷವೂ ಕೂಡ ʼರಾಮ ಮಂದಿರʼ ವಿಚಾರವನ್ನು ಚೆನ್ನಾಗಿಯೇ ಬಳಸಿಕೊಂಡಿದೆ.

ರಾಮ ಮಂದಿರಕ್ಕೆ ಅಡ್ವಾಣಿಯವರ ಯೋಗದಾನ !

1992ರ ಡಿಸೆಂಬರ್‌ 6 ರಂದು ಬಾಬರಿ ಮಸಿದಿ ಧ್ವಂಸ ಪ್ರಕರಣದ ನಂತರ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಕೊಂಚ ಹಿನ್ನೆಡೆಯಾಗಿತ್ತು. ರಾಮ ಮಂದಿರಕ್ಕಾಗಿ ರಥಯಾತ್ರೆಯ ನೇತೃತ್ವ ವಹಿಸಿಕೊಂಡ ಎಲ್‌. ಕೆ ಅಡ್ವಾಣಿ ಮುಂಚೂಣಿಗೆ ಬಂದರು. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಆಗುವವರೆಗೆ ಅಡ್ವಾಣಿ ಬೆಳೆದರು. ಆದರೇ, ರಾಮ ಮಂದಿರದ ಹೋರಾಟ, ರಥಯಾತ್ರೆ ಯಾವುದೂ ಅಡ್ವಾಣಿ ಅವರಿಗೆ  ಶ್ರೇಯ ತಂದುಕೊಟ್ಟಿಲ್ಲ. ಬಿಜೆಪಿಯ ಪ್ರಭಾವಿ ನಾಯಕ ಅಟಲ್‌ ಬಿಹಾರಿ ವಾಜಪೇಯಿ ನಿಧಾನಕ್ಕೆ ಮೂಲೆಗೆ ಸರಿದರು. 2004ರ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಹಾಗೂ ಮೈತ್ರಿಕೂಟದ ಎದುರು ಬಿಜೆಪಿ ಸೋಲನುಭವಿಸಿತ್ತು. ಸೋನಿಯಾ ವಿದೇಶದವರು ಎಂಬ ತೆಗಳಿಕೆಯನ್ನು ಬಿಜೆಪಿ ಬಲವಾಗಿ ಮಾಡಿತ್ತು. ಪ್ರಧಾನಿ ಆಗುವ ಎಲ್ಲಾ ಸಾಧ್ಯತೆಗಳಿದ್ದರೂ ಸೋನಿಯಾ ಪ್ರಧಾನಿ ಹುದ್ದೆಗೆ ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ ಅವರನ್ನು ಆಯ್ಕೆ ಮಾಡಿ ಸತತ ಎರಡು ಅವಧಿಯವರೆಗೆ ದೇಶ ಆಳಿದರು.

ಶಬಾನೋ ಪ್ರಕರಣ, ರಾಜೀವ್‌ ಗಾಂಧಿ ನೇತೃತ್ವದ ಆಡಳಿತ, ರಾಜೀವ್‌ ನೇತೃತ್ವದ ಸರ್ಕಾರದಿಂದ ಮುಸ್ಲೀಂ ತುಷ್ಟೀಕರಣ ರಾಜಕಾರಣ ಎಂಬ ಆರೋಪ, ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ರಾಜೀವ್‌ ಗಾಂಧಿಗೆ ಹಿಂದೂ ಮತಗಳು ಬೇರೆಡೆ ವಾಲುತ್ತಿರುವುದು ಗೊತ್ತಾಗಿ ರಾಮ ಮಂದಿರದ ಬೀಗ ತೆಗೆಸಿ ಪೂಜೆಗೆ ಅವಕಾಶ, ರಾಜಕೀಯ ಲಾಭಕ್ಕಾಗಿ ಸದ್ಭಾವನಾ ಯಾತ್ರೆ ಇವೆಲ್ಲಾ ರಾಮ ಮಂದಿರ ವಿಚಾರದಲ್ಲಿ ನಡೆದ ಸುದೀರ್ಘ ರಾಜಕೀಯ. ಅಂದು ಲೋಕಸಭಾ ಪ್ರತಿಪಕ್ಷ ನಾಯಕರಾಗಿದ್ದ ಎಲ್‌. ಕೆ. ಅಡ್ವಾಣಿ ರಾಮ ಮಂದಿರದ ವಿಚಾರವನ್ನು ಬಡಿದೆಬ್ಬಿಸಿದರು.

1990ರಲ್ಲಿ, ರಾಮ ಜನ್ಮಭೂಮಿ ಆಂದೋಲನಕ್ಕೆ ಅಡ್ವಾಣಿ ʼರಾಮ ರಥ ಯಾತ್ರೆʼಯನ್ನು ಕೈಗೊಂಡರು. ಗುಜರಾತ್‌ನ ಸೋಮನಾಥದಿಂದ ಪ್ರಾರಂಭವಾದ ಯಾತ್ರೆ ಅಯೋಧ್ಯೆಗೆ ಮುಟ್ಟಿತು. 1991ರ ಸಾರ್ವತ್ರಿಕ ಚುನಾವಣೆಯಲ್ಲಿ, ಬಿಜೆಪಿಯು ಕಾಂಗ್ರೆಸ್ ನಂತರ ಎರಡನೇ ದೊಡ್ಡ ಪಕ್ಷವಾಗಿ ಬೆಳೆಯಿತು. ಅಡ್ವಾಣಿ ಗಾಂಧಿನಗರದಿಂದ ಎರಡನೇ ಬಾರಿಗೆ ಗೆದ್ದು ಮತ್ತೊಮ್ಮೆ ವಿರೋಧ ಪಕ್ಷದ ನಾಯಕರಾದರು. 1992ರಲ್ಲಿ, ಅಡ್ವಾಣಿಯವರು ಬಾಬರಿ ಮಸೀದಿ ಧ್ವಂಸಗೊಳಿಸುವುದಕ್ಕೆ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂಬ ಆರೋಪ ಹೇರಲಾಯಿತು. 30 ಸೆಪ್ಟೆಂಬರ್ 2020 ರಂದು ಸಿಬಿಐ ವಿಶೇಷ ನ್ಯಾಯಾಲಯ ಅಡ್ವಾಣಿ ಸೇರಿ ಎಲ್ಲಾ ಆರೋಪಿಗಳನ್ನು ನಿರ್ದೋಷಿಗಳೆಂದು  ಖುಲಾಸೆಗೊಳಿಸಲಾಯಿತು.  

ವಿರೋಧ ಪಕ್ಷದ ನಾಯಕರಾಗಿದ್ದ ಅಡ್ವಾಣಿ ಜೂನ್ 2005ರಲ್ಲಿ, ಕರಾಚಿಗೆ ಭೇಟಿ ನೀಡಿದಾಗ, ಮೊಹಮ್ಮದ್ ಅಲಿ ಜಿನ್ನಾ ಅವರನ್ನು "ಜಾತ್ಯತೀತ" ನಾಯಕ ಎಂದು ಬಣ್ಣಿಸಿದರು, ಇದು ಆರ್‌ಎಸ್‌ಎಸ್ ನಿಂದ ಟೀಕೆಗೆ ಕಾರಣವಾಯಿತು. ಅಡ್ವಾಣಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯ ಬಾರಿ ದೊಡ್ಡ ಮಟ್ಟದಲ್ಲಿ ಕೇಳಿಬಂತು. ಅಡ್ವಾಣಿ ಬಿಜೆಪಿ ಬಗ್ಗೆ ಮುನಿಸಿಕೊಂಡು ರಾಜೀನಾಮೆ ಕೊಟ್ಟರು. ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿರುವ ಬಿಜೆಪಿ 2014ರ ಲೋಕಸಭಾ ಚುನಾವಣೆಗೂ ಮುನ್ನಾ ಅಡ್ವಾಣಿ ಅವರನ್ನು ಮೂಲೆಗೆ ಸರಿಸಿತು. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಮಾಡಿತು. ಅಡ್ವಾಣಿ, ಮುರುಳಿ ಮನೋಹರ್‌ ಜೋಶಿ ಹಾಗೂ ಉಮಾಭಾರತಿ ಅಂತವರೆಲ್ಲಾ ಮುಂದಿದ್ದು ಹೋರಾಡಿದ್ದ ರಾಮ ಮಂದಿರದ ವಿಚಾರವನ್ನು ಮೋದಿ ಓವರ್‌ ಟೇಕ್ ಮಾಡಿಕೊಂಡರು. ತಮ್ಮ ರಾಜಕೀಯ ವರ್ಚಸ್ಸನ್ನು ಬೆಳೆಸಿಕೊಂಡರು. ರಾಮ ಮಂದಿರದ ಸಂಪೂರ್ಣ ‘ಶ್ರೇಯ’ ತನ್ನ ಹೆಸರಿಗೆ ಬರುವಲ್ಲಿಯವರೆಗೆ ರಾಮ ಮಂದಿರದ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡರು.

ಬಿಜೆಪಿ ಒಂದು ಹೆಮ್ಮರವಾಗಿ ಬೆಳೆಯುವುದಕ್ಕೆ ರಾಮ ಮಂದಿರವೇ ಮೂಲ ಕಾರಣ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 1984ರ ಲೋಕಸಭಾ ಚುನಾವಣೆಯಲ್ಲಿ ಕೇವಲ 2 ಕ್ಷೇತ್ರಗಳನ್ನಷ್ಟೇ ಗೆದ್ದಿದ್ದ ಬಿಜೆಪಿ, ರಾಮ ಮಂದಿರದ ವಿಷಯವನ್ನೇ ಮುಂದಿಟ್ಟುಕೊಂಡು 1989ರ ಲೋಕಸಭಾ ಚುನಾವಣೆಯಲ್ಲಿ 85 ಕ್ಷೇತ್ರಗಳಲ್ಲಿ ಗೆದ್ದು ಬೀಗಿತು. ರಾಮ ಮಂದಿರವನ್ನು ಬಿಜೆಪಿಗೆ ಒಂದು ಅಸ್ತ್ರವಾಗಿ ಕೊಟ್ಟವರೇ ಅಡ್ವಾಣಿ. ಅಡ್ವಾಣಿಯವರಿಂದ ರಾಮ ಮಂದಿರ, ರಾಮ ಮಂದಿರದಿಂದ ಬಿಜೆಪಿ. ಹೀಗೆ ರಾಮ, ರಾಮ ಮಂದಿರ ಬಿಜೆಪಿಯನ್ನು ಪೊರೆಯುತ್ತಲೇ ಬಂದಿದೆ. ನಿಜಕ್ಕೂ ರಾಮ ಮಂದಿರದ ಹೋರಾಟಕ್ಕೆ ಅಡ್ವಾಣಿ ಕೊಡುಗೆ ಅಪಾರವಾದದ್ದು. ಮೋದಿ, ಅಡ್ವಾಣಿಯವರ ಪ್ರತಿಮೆಯೊಂದನ್ನು ರಾಮ ಮಂದಿರದ ಆವರಣದಲ್ಲಿ ನಿಲ್ಲಿಸಿದರೂ ತಪ್ಪಿಲ್ಲ. ರಾಮ ಮಂದಿರ ನಿರ್ಮಾಣದ ʼಶ್ರೇಯʼ ಮೋದಿ ತೆಗೆದುಕೊಳ್ಳುವ ಬದಲು ಅಡ್ವಾಣಿಯವರಿಗೆ ಒಪ್ಪಿಸಲಿ. ರಾಮ ಮಂದಿರಕ್ಕೆ ಅಡ್ವಾಣಿಯವರ ʼಯೋಗದಾನʼದ ಮುಂದೆ ಉಳಿದವರದ್ದೆಲ್ಲಾ ಶೂನ್ಯ, ಮೋದಿಯವರದ್ದೂ. ಮೋದಿಗೆ ಎರಡೆರಡು ಬಾರಿ, ಈಗ ಮತ್ತೊಮ್ಮೆ ಪ್ರಧಾನಿ ಆಗುವ ತನಕ ʼರಾಮ ಮಂದಿರʼ ಸಹಕರಿಸಿದ ಹಾಗೆ ಅಡ್ವಾಣಿ ಅವರಿಗೆ ಸಹಕರಿಸಿಲ್ಲ. ಹೆಚ್ಚೆಂದರೇ ದೇಶದ ಉಪ ಪ್ರಧಾನಿ ಆಗುವವರೆಗೆ ಅಡ್ವಾಣಿ ಅವರಿಗೆ ಯಶಸ್ಸು ದೊರಕಿಸಿತು ಅಷ್ಟೆ.  

ಇನ್ನು, ಮೋದಿ ಎದುರಾಳಿ ಯಾರೂ ಇಲ್ಲವೇ ಇಲ್ಲ ಎಂಬ ಲೆಕ್ಕಕ್ಕೆ ಇಂದಿನ ರಾಜಕೀಯ ವಲಯ ನಿರ್ಧಾರಕ್ಕೆ ಬಂದು ಬಿಟ್ಟಿದೆ. ರಾಹುಲ್‌ ಈಗ ಮತ್ತೊಂದು ಸುತ್ತಿನ ಯಾತ್ರೆಯಲ್ಲಿದ್ದಾರೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯಕ್ಕಾಗಿ ಹೋರಾಟ ಎಂದು ಕಾಂಗ್ರೆಸ್‌ ಆ ಯಾತ್ರೆಯನ್ನು ಕರೆದಿದೆ. ಭಾವನಾತ್ಮಕವಾಗಿ ದೇಶದಾದ್ಯಂತ ಜನರನ್ನು ಬಿಜೆಪಿ ಸೆಳೆದುಕೊಂಡು ಬಿಟ್ಟಿದೆ. ಯಾವ ʼನ್ಯಾಯ ಯಾತ್ರೆʼಗೂ ಜನ ಮನಸ್ಸು ಬದಲಾಯಿಸದೇ ಇರುವಂತೆ ಬಿಜೆಪಿ ಮನೆ ಮನೆಗೆ ರಾಮ ಮಂದಿರದ ಹೆಸರಿನಲ್ಲಿ ʼಮಂತ್ರಾಕ್ಷತೆʼ ಹಂಚಿದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಹೆಸರಿನಲ್ಲಿ ಗ್ರಾಮ ಗ್ರಾಮಗಳನ್ನು ತಲುಪಿದೆ. ಒಂದೆಡೆ ಭಾವನಾತ್ಮಕ ನಂಟು, ಜೊತೆಗೆ ಯೋಜನೆಗಳನ್ನು ತಳಮಟ್ಟದವರೆಗೆ ತಲುಪಿಸುವ ಪ್ರಯತ್ನದ ಎದುರು ಕಾಂಗ್ರೆಸ್‌ ಈಗ ʼಯಾತ್ರೆʼ ಆರಂಭಿಸಿದೆ. ಮುಂದಿದ್ದು ನಿಮ್ಮ ಯೋಚನೆಗೆ ಮೀಸಲಿಟ್ಟಿದ್ದು.

-ಶ್ರೀರಾಜ್‌ ವಕ್ವಾಡಿ

No comments:

Post a Comment