ಈ ಭೂಮಿಯಲ್ಲಿ ಜೀವನದ ಅರ್ಥವನ್ನು ಕಂಡುಕೊಂಡವುಗಳು ತೀರಾತಿವಿರಳ ಎಂದೇ ಅಂದುಕೊಳ್ಳಬಹುದು. ಜೀವನ ಹಾಗೂ ಬದುಕು ಅರ್ಥವಿಲ್ಲದ ಅನುಭವವ ಅದು. ಬದುಕು ಎಂದರೇ ಇಂತದ್ದೇ ಅಥವಾ ಹೀಗೆ ಎಂದು ‘ಡೆಫಿನಿಶನ್’ ಕೊಟ್ಟು ವಿವರಿಸಲು ಎಂದಿಗೂ ಯಾರಿಗೂ ಸಾಧ್ಯವಿಲ್ಲ. ಬದುಕಿನ ಅರ್ಥದ ಬೆನನು ಹತ್ತಿದ ಎಷ್ಟೋ ಮಂದಿ ಉತ್ತರ ಸಿಗದೆ ತಲೆ ಕೆಡಿಸಿಕೊಂಡು ಜೀವನವನ್ನೇ ವ್ಯರ್ಥ ಮಾಡಿಕೊಂಡ ಉದಾಹಣೆ ತುಂಬಾ ಇವೆ.
ಮಾನಸಿಕ ತುಮಲಗಳ ಗೊಂದಲದೊಂದಿಗೆ ಇಡೀ ಜಗತ್ತಿಗೆ ಕಗ್ಗಗಳ ಮೂಲಕ ಜೀವನದ ಅರ್ಥವನ್ನು ಉಣಿಸಿದವರು ಇದ್ದರೇ, ಅದು ಒಬ್ಬರೇ. ಡಿ ವಿ ಜಿ.
ಏನು ಬದುಕಿನ ಅರ್ಥ ? ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಬದುಕನ್ನು ವೈರಾಗ್ಯದಿಂದ ಕಳೆಯುವವರಿಗೆ ಮಂಕುತಿಮ್ಮನ ಕಗ್ಗಗಳು ಎಂದಿಗೂ ಒಂದು ರೀತಿಯಲ್ಲಿ ಆಪ್ತ ಸಮಾಲೋಚನೆಯೇ. ಜೀವನದ ಆಳ ಹಾಗೂ ವಿಸ್ತಾರಗಳ ನಡುವೆ ‘ಬದುಕು ಏನಿಲ್ಲವೋ’ ಬಂದಂತೆ ಬದುಕಿ ಬಿಡು ಎನ್ನುವ ಅವರ ಅಷ್ಟೂ ಕಗ್ಗಗಳ ಸಾರ ಮಾತ್ರವೇ ಸಾಕು ಬದುಕನ್ನು ಅತ್ಯಂತ ಆಪ್ತವಾಗಿ ಕಳೆಯುವುದಕ್ಕೆ. ಮತ್ತದರ ಅನುಭವವನ್ನು ಅನುರಾಗದೊಂದಿಗೆ ಕಳೆಯುವುದಕ್ಕೆ.
ಮಂಕುತಿಮ್ಮನ ಕಗ್ಗ, ಇದು ಕನ್ನಡದ ಭಗವದ್ಗೀತೆ ಎಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಜೀವನದ ಮಜಲುಗಳು, ಆಯಾಮಗಳು, ಅವುಗಳನ್ನು ಸಾಧಿಸಿಕೊಳ್ಳುವ ರೀತಿ ನೀತಿಗಳನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಅಗಾಧವಾಗಿ ವಿಸ್ತರಿಸಿ ಮುಟ್ಟಿಸುವ ಧೈರ್ಯ ಹಾಗೂ ಜಾಣ್ಮೆ ಇದುವರೆಗೆ ಡಿ.ವಿ.ಜಿಯನ್ನು ಹೊರತಾಗಿ ಮತ್ತೆ ಯಾರಿಗೂ ಒದಗಿಲ್ಲ ಎನ್ನುವುದರಲ್ಲಿ ಅನುಮಾನ ಇಲ್ಲ.
ಆದಿ ಮತ್ತು ಆರಂಭಗಳ ನಡುವೆ ಇರುವ ಜೀವನದ ವಿಶಿಷ್ಟ ಆಯಾಮಗಳನ್ನು, ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಕಗ್ಗ ಎಂದರೇ ಜೀವನ ಎನ್ನುವಷ್ಟರ ಮಟ್ಟಿಗೆ ‘ಬದುಕಂದರೇ ಹೀಗಯ್ಯ…ಹುಚ್ಚಪ್ಪಾ…’ ಕಲಿತು, ಕಲೆತು, ಕಲಿಸು ಕಲಿ, ನಲಿ ಎಂದು ತೋರಿಸಿಕೊಡುವ ಅವರ ಕಗ್ಗ ಸಾರಗಳು ನಮ್ಮ ಬದುಕಿನ ನಿಸ್ಪೃಹತೆಗಳಿಗೆ ಸೂಚಿತವಾಗಿ ನಿಲ್ಲುತ್ತದೆ. ವ್ಯಕ್ತಿ ಹಾಗೂ ವ್ಯಕ್ತಿತ್ವ ಹಾಗೂ ವ್ಯಕ್ತಿಯೊಳಗಿನ ನಿಜ ಮುಖ ಮನಸ್ಸಿಗೆ ಬದುಕಿನ ಅನುಸಂಧಾನಕ್ಕೆ ದಾರಿ ಮಾಡಿಕೊಡುವ ಪ್ರಯತ್ನವನ್ನು ಮಾಡುತ್ತವೆ.
ಯುದ್ಧ ಕಥನಗಳು ಮಹಾ ಕಾವ್ಯಗಳಾದ ಮಹಾಭಾರತ, ರಾಮಾಯಣಗಳಲ್ಲದೆ ಪ್ರಸಕ್ತ ಕಾಲದ ಘಟನೆಗಳನ್ನು ಉಲ್ಲೇಖಿಸಿ ಜೀವನದ ಮೌಲ್ಯಗಳನ್ನು ವಿವರಿಸಿದ ಗುಣ ಮೌಲ್ಯಗಳು ಬದುಕಿಗೆ ಪಥ ದರ್ಶಕವಾಗಿರಲಿದೆ.
ಕಗ್ಗ ಓದಿದರೇ, ಎಂಥಹ ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳಿಂದಲೂ ಹೊರ ಬರುವುದಕ್ಕೆ ಸಾಧ್ಯವಿದೆ. ಜೀವನದ ಅರ್ಥ ಅಂದರೇ ಏನು ಎಂದು ತಿಳಿಸುವ ವಿಸ್ತರಿಸುವ ಒಂದೆರಡು ಕಗ್ಗಗಳನ್ನು ಗಮನಿಸೋಣ.
ಏನು ಜೀವನದರ್ಥ..? ಏನು ಪ್ರಪಂಚಾರ್ಥ..?
ಏನು ಜೀವ ಪ್ರಪಂಚಗಳ ಸಂಬಂಧ..?||
ಕಾಣದಿಲ್ಲಿರ್ಪುದೇನಾನುಮುಂಟೆ..? ಅದೇನು..?||
ಜ್ಞಾನ ಪ್ರಮಾಣವೇಂ..?- ಮಂಕುತಿಮ್ಮ ||
ಜ್ಞಾನ ಶಕ್ತಿಗೆ ಮೀರಿದ್ದು ಏನಾದರೂ ಇದೆಯೇ ಎಂದು ಡಿವಿಜಿ ಇಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಂದರೇ, ನಮ್ಮ ಎಲ್ಲಾ ಸಮಸ್ಯೆಗಳನ್ನು ನಮ್ಮ ಒಳ ಮನಸ್ಸಿನ ಜ್ಞಾನದಿಂದ ಸರಿ ಪಡಿಸಿಕೊಳ್ಲಬಹುದು. ಆದರೇ, ನಾವೆಂದೂ ಹಾಗೆ ಮಾಡುವ ಪ್ರಯತ್ನವನ್ನೂ ಕೂಡ ಮಾಡುವುದಿಲ್ಲ.
ನಮ್ಮ ಜೀವನಕ್ಕೆ ಏನಾದರೂ ಅರ್ಥವಿದೆಯೇ..? ಈ ವಿಸ್ತಾರ ಜಗತ್ತಿಗೂ ಹಾಗೂ ಜೀವನಕ್ಕೆ ಏನಾದರೂ ಸಂಬಂಧ ಅಥವಾ ಬಂಧನ ಇದೆಯೇ..? ಕಾಣಿಸದೇ ಇರುವುದೇನಾರೂ ಇದೆಯೇ..? ಏನದು..? ನಮ್ಮ ಜ್ಞಾನಕ್ಕೆ ಮೀರಿ ಇರುವ ಶಕ್ತಿಯೋ ಎನ್ನುವ ಪುಂಖಾನುಪುಂಖ ಪ್ರಶ್ನೆಗಳನ್ನು ನಮ್ಮೊಳಗೆ ತುಂಬಿಸುವುದರ ಜೊತೆಗೆ ಮಾರ್ಮಿಕ ಸರಳ ಸತ್ಯವನ್ನು ಡಿವಿಜಿ ಅದರಲ್ಲಿ ಅವಿತಿಟ್ಟಿದ್ದಾರೆ ಎನ್ನವುದು ಸತ್ಯ.
ನಮ್ಮ ಪ್ರಶ್ನೆಗಳು ನಮ್ಮನ್ನೇ ಕೇಳಿಕೊಂಡು ಮುಂದೂಡುವಂತಿರಬೇಕು ಹೊರತಾಗಿ ಅದನ್ನೂ ಮೀರಿ ಇರಬಾರದು. ಬದುಕಿನ ಸತ್ಯದ ಬಗ್ಗೆ ಹೆಚ್ಚು ಯೋಚನೆ ಮಾಡುವುದನ್ನು ಹೋದರೇ, ಜೀವನದ ಅರ್ಥ ಸಿಗುವುದಿಲ್ಲ. ಅದು ಜ್ಞಾನ ವೈರಾಗ್ಯಕ್ಕೆ ಕಾರಣವಾಗುತ್ತದೆ ಹೊರತಾಗಿ ಮತ್ತೆ ಯಾವ ವಿಚಾರಕ್ಕೂ ಹತ್ತರಿವಾಗುವುದಿಲ್ಲ ಎನ್ನುವುದನ್ನು ನಾವು ಅರಿತುಕೊಂಡಿರಬೇಕು.
ನಮ್ಮ ಸಮಸ್ಯೆಗಳು ಯಾವುದು ಎನ್ನುವುದನ್ನು ಅರಿತುಕೊಳ್ಳಲಾರದಷ್ಟು ದಡ್ಡರು ನಾವಲ್ಲ. ಮನುಷ್ಯನಿಗೆ ಇರುವ ಸಾಮಾನ್ಯ ಜ್ಞಾನಕ್ಕೆ ಕಾಣಿಸದೇ ಇರುವುದು ಯಾವುದೂ ಇಲ್ಲ. ಅಂತಾದ ಮೇಲೆ ನಾವು ನಮ್ಮ ಬದುಕನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವುದಕ್ಕೆ ಯಾವ ಹಿಂದೆಟು ಹಾಕುವ ಅಗತ್ಯವಿಲ್ಲ. ನಮ್ಮ ಸಂತೋಷ, ದುಃಖ, ದುಮ್ಮಾನ, ಹಿತ, ಅಹಿತ ಎಲ್ಲಾ ಭಾವಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಜಗತ್ತಿನಲ್ಲಿ ಅತ್ಯಂತ ಅಗ್ಗದ ಆಪ್ತ ಸಮಾಲೋಚನೆ ಇದೆ. ಅದು ಹೆಚ್ಚಿನರಿಗೆ ಗೊತ್ತಿಲ್ಲದೇ ಇರುವುದೇ ದೊಡ್ಡ ದುರಂತ.
ನಮ್ಮ ಸಾಮಾನ್ಯವಾದ ಎಲ್ಲಾ ಭಾವನೆಗಳಿಗೆ ಸ್ಪಂದಿಸಿ ನಮ್ಮ ಮನಸ್ಸನ್ನು ನಾವು ಕೇಳುವ ಪ್ರಶ್ನೆಗಳು, ಅದರಿಂದ ದೊರಕುವ ಉತ್ತರವೇ ನಮ್ಮ ಜೀವನವನ್ನು ಸರಳೀಕರಿಸುತ್ತದೆ ಎನ್ನವುದಕ್ಕೆ ಅನುಮಾನ ಇಲ್ಲ.
ನಮ್ಮ ಜ್ಞಾನ ಶಕ್ತಿಯನ್ನು ಮೀರಿ ಯಾವುದೂ ಇಲ್ಲ. ನಮಗೆ ಅರಿತುಕೊಳ್ಳುವುದಕ್ಕೆ ಸಾಧ್ಯವಾಗದೇ ಇರುವಂತದ್ದು, ಹಾಗೂ ನಮಗೆ ಸರದೂಗಿಸಿಕೊಳ್ಳಲಾಗದಂತದ್ದು ಯಾವದೂ ಇಲ್ಲ ಎನ್ನುವುದೇ ಈ ಮೇಲಿನ ಕಗ್ಗದ ತಾತ್ಪರ್ಯ.
ಜಗತ್ತಿನ ಸಂಬಂಧ ನಮಗೆಷ್ಟು ಆಪ್ತ ಎನ್ನುವ ಅರಿವು ನಮಗೆ ಎಳವೆಯಿಂದಲೇ ತಿಳಿದಿರುವಾಗ ಜೀವನದ ಅರ್ಥವನ್ನು ತುಂಬಾ ಯೋಚನೆ ಮಾಡುತ್ತಾ ಕೂರುವ ಅಗತ್ಯವಿಲ್ಲ.
ಒಗಟೇನಿ ಸೃಷ್ಟಿ..? ಬಾಳಿನರ್ಥವದೇನು..?
ಬಗೆದು ಬಿಡಿಸುವವರಾರು ಸೋಜಿಗವದನಿದನು..? ||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು?
ಬಗೆ ಬಗೆಯ ಜೀವಗತಿ – ಮಂಕುತಿಮ್ಮ
ಡಿಜಿಜಿ ಅವರು ಈ ಕಗ್ಗದಲ್ಲಿಯೂ ಈ ಹಿಂದಿನ ಕಗ್ಗದ ಭಾವಾರ್ಥವನ್ನೇ ಹೇಳುತ್ತಾರೆ. ಈ ಪ್ರಪಂಚವನ್ನು ಒಂದು ಕಾಣದ ಕೈ ನಿರಮಿಸಿದೆ ಎಂದು ಹೇಳುವುದಾದರೇ ಇಲ್ಲಿರುವ ವಿವಿಧ ರೀತಿಯ ಜೀವ ಗತಿಗಳು ಯಾಕೆ.. ? ಎನ್ನುವ ಪ್ರಶ್ನೆಯೊಳಗೆ ‘ಕಾಣದ ಕೈ’ ನಮ್ಮ ಮನಸ್ಸು ಎನ್ನುವ ಅರ್ಥವೂ ಅಡಗಿದೆ.
ನಮ್ಮ ಬದುಕಿನ ನಿರ್ದೇಶಕ ಹಾಗೂ ನಿರ್ಮಾಪಕ ನಾವೇ ಆಗಬೇಕು. ಮತ್ತದು ನಮಗೆ ಕಾಣಿಸಿದ ಕೈ ಅಂದರೇ ಮನಸ್ಸಿನ ಪ್ರೇರಣೆಯಿಂದಲೇ ಆಗಬೇಕು ಎನ್ನುವ ತಾತ್ಪರ್ಯದಲ್ಲಿ ಎಷ್ಟು ಸರಳ ತತ್ವ ಇದೆ ಎನ್ನುವುದನ್ನು ಗಮನಿಸುವ ಪ್ರಯತ್ನಕ್ಕೆ ಡಿವಿಜಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆ ಎಂದೆನ್ನಿಸಿ ಬಿಡುತ್ತದೆ.
ಒಟ್ಟಿನಲ್ಲಿ, ಒಟ್ಟು ಬದುಕಿನ ಸಾರವನ್ನು ಹೇಳುವ ಆಪ್ತ ಸ್ನೇಹಿತನಾಗಿ ಡಿವಿಜಿಯವರ ಕಗ್ಗಗಳು ಕಾಣಿಸುತ್ತವೆ.
-ಶ್ರೀರಾಜ್ ವಕ್ವಾಡಿ

No comments:
Post a Comment